Thursday, August 6, 2009

ಭಾರತದ ಪರಮವೀರರು: ನಾಯಕ್ ಜಾದೂನಾಥ್ ಸಿಂಗ್


೨೧ನೆ ನವೆಂಬರ್ ೧೯೧೬ ರಲ್ಲಿ ಉತ್ತರ ಪ್ರದೇಶದ ಷಹಜಹಾಂಪುರದಲ್ಲಿ ಜನನ. ೨೧ನೆ ನವೆಂಬರ್ ೧೯೪೧ ರಲ್ಲಿ ಸೈನ್ಯದಲ್ಲಿ ೧ನೆ ರಜಪೂತ್ ಗೆ ಸೇರ್ಪಡೆ.
೧೯೪೭ರ ಛಳಿಗಾಲದಲ್ಲಿ ನಡೆದ ಭಾರತದ ಮೇಲಿನ ಆಕ್ರಮಣದಲ್ಲಿ ನೌಷೇರವನ್ನು ಉಳಿಸಲು ಪ್ರಾಣ ತೆತ್ತ ವೀರ.

ಡಿಸೆಂಬರ್ ೨೪ರಂದು ಝಂಗಾರ್ ಪಾಕಿಸ್ತಾನಿ ದಾಳಿಕೋರರ ವಶವಾಯಿತು. ಇದು ಮುಂದಿನ ಆಕ್ರಮಣಕ್ಕೆ ಪಾಕಿಸ್ತಾನಿ ಸೈನಿಕರಿಗೆ ಆಯಕಟ್ಟಿನ ಜಾಗವಾಗಿ ಪರಿಣಮಿಸಿತು. ಮಿರ್ಪುರದಿಂದ ಪೂಂಛ್ ವರೆಗಿನ ಎಲ್ಲ ಸಂಪರ್ಕ ಕೇಂದ್ರಗಳು ಪಾಕಿಸ್ತಾನದ ವಶದಲ್ಲಿದ್ದದ್ದು ಅವರಿಗೆ ಇನ್ನಷ್ಟು ಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿತ್ತು. ಈ ಸದವಕಾಶವನ್ನು ಉಪಯೋಗಿಸಿಕೊಂಡು ನೌಷೇರವನ್ನು ಆಕ್ರಮಿಸುವ ಯೋಜನೆ ಪಾಕಿಸ್ತಾನಿಯರದ್ದಾಗಿತ್ತು. ಇದರ ಸುಳಿವು ದೊರೆತ ಭಾರತೀಯ ಸೈನ್ಯ ನೌಷೇರವನ್ನು ಉಳಿಸಿಕೊಳ್ಳುವ ಸಲುವಾಗಿ ಜನವರಿ ೧೯೪೮ರಲ್ಲಿ ಶತ್ರುವನ್ನು ತಡೆಯಲು ಮುಂದಾಗಿ ನೌಷೇರಾದ ವಾಯುವ್ಯಕ್ಕಿದ್ದ ಕೋಟ್ ಹಳ್ಳಿಯನ್ನು ವಶಪಡಿಸಿಕೊಂಡಿತು. ಯಾವುದೇ ತೆರನಾದ ದಾಳಿಯಿಂದ ನೌಷೇರವನ್ನು ರಕ್ಷಿಸಬೇಕಾಗಿತ್ತು.
ನೌಷೇರಾಕ್ಕೆ ಇರುವ ಎಲ್ಲ ಮಾರ್ಗಗಳಲ್ಲು ಆಯಕಟ್ಟಿನ ಜಾಗಗಳಲ್ಲಿ ಸಣ್ಣ ಸಣ್ಣ ಅಡಗುದಾಣಗಳನ್ನು ನಿರ್ಮಿಸಿ ಕಾವಲು ಹಾಕಲಾಯಿತು. ತೈನ್ಧಾರ್ ಮಾರ್ಗ ನೌಷೇರಾದ ಉತ್ತರಭಾಗಕ್ಕೆ ದಾರಿಯಾಗಿತ್ತು ಆದ್ದರಿಂದ ಇದನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿತ್ತು.

ನೀರಿಕ್ಷಿಸಿದಂತೆ ವೈರಿಗಳ ದಾಳಿ ಫೆಬ್ರವರಿ ೬ರಂದು ಮಂಜುಮುಸುಕಿದ ಮುಂಜಾನೆಯಲ್ಲಿ ತೈನ್ಧಾರ್ ಪ್ರದೇಶದಲ್ಲಿ ಪ್ರಾರಂಭವಾಗಿತ್ತು. ಮದ್ದು ಗುಂಡುಗಳು ಹಾರಾಡತೊಡಗಿದವು. ಶತ್ರು ಈ ಸಣ್ಣ ಅಡಗುದಾಣ ಮತ್ತು ತಡೆಯ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಲಾರಂಭಿಸಿದ. ಅದೆಷ್ಟು ಪ್ರಖರ ದಾಳಿಯೆಂದರೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಗುಂಡು ಮತ್ತು ಸಣ್ಣ ಫಿರಂಗಿಗಳ ಶಬ್ದದಿಂದ ಅನುರಣಿಸಿತು. ಇದರ ಮಧ್ಯದಲ್ಲಿಯೆ ತೈನ್ಧಾರ್ ನ ತುತ್ತ ತುದಿಯ ಮೇಲಿದ್ದ ಭಾರತೀಯ ಕಾವಲಿನ ಮೇಲೂ ದಾಳಿ ನಡೆಯಿತು. ಕತ್ತಲು ಕರಗಿ ಬೆಳಕು ಹರಿಯುವ ಸಮಯದಲ್ಲಿ ಶತ್ರು ಭಾರತೀಯ ಸೈನಿಕರ ಹತ್ತಿರಕ್ಕೆ ಬಂದು ನಿಂತಿದ್ದ. ಸೂರ್ಯನ ಬೆಳಕಿನ ಬದಲು ಭಾರತೀಯ ಸೈನಿಕರನ್ನು ಶತ್ರುವಿನ ಗುಂಡಿನ ಮೊರೆತ ಸ್ವಾಗತಿಸಿತು. ನೂರಾರು ಪಾಕಿ ಸೈನಿಕರು ನೌಷೇರಾವನ್ನು ಆಕ್ರಮಿಸುವ ಸಲುವಾಗಿ ಭಾರತೀಯ ಅಡಗುತಾಣಗಳ ಮೇಲೆ ಸತತವಾಗಿ ದಾಳಿಯಿಡುತ್ತಾ ಮುನ್ನುಗ್ಗುತ್ತಿದ್ದರು.
೨ನೆ ಅಡಗುತಾಣದಲ್ಲಿದ್ದ ನಾಯಕ್ ಜಾದೂನಾಥ್ ಸಿಂಗ್ ಅತ್ಯಂತ ಆಯಕಟ್ಟಿನ ತಾಣದ ಜವಾಬ್ದಾರಿ ಹೊತ್ತಿದ್ದರು ಈ ಅಡಗುತಾಣ ವಶವಾದರೆ ಶತ್ರು ಸುಲಭವಾಗಿ ನೌಷೇರಾಕ್ಕೆ ನಡೆದು ಬಿಡುತ್ತಿದ್ದ. ಈ ಅಪಾಯವನ್ನರಿತ ಜಾದೂನಾಥ್ ಸಿಂಗ್ ಅವರ ೯ ಜನರ ತಂಡ ಪಾಕಿಸ್ತಾನದ ನೂರಾರು ಸೈನಿಕರ ಸಂಖ್ಯೆಗೆ ಹೋಲಿಸಿದರೆ ಅತ್ಯಂತ ಪುಟ್ಟ ತಂಡ ಅದ್ಯಾವ ಪರಿ ಶತ್ರುಗಳ ಮೇಲೆ ಎಗರಿ ಬಿತ್ತೆಂದರೆ ತಮಗಿಂತ ಸಂಖ್ಯೆಯಲ್ಲಿ ೫-೬ ಪಟ್ಟು ಹೆಚ್ಚು ಜನರಿದ್ದ ಶತ್ರುಪಡೆ ಅನೀರಿಕ್ಷಿತ ಪ್ರತಿದಾಳಿಗೆ ಕಕ್ಕಾಬಿಕ್ಕಿಯಾಗಿ ದಿಕ್ಕಾ ಪಾಲಾಗಿ ಹೋಯಿತು. ಒಂದಾದ ಮೇಲೊಂದರಂತೆ ಅಲೆ ಅಲೆಯಾಗಿ ದಾಳಿ ಮಾಡುವ ಹೊಂಚು ಹಾಕಿದ್ದ ಪಾಕಿಸ್ತಾನಿ ಸೈನಿಕರು ೨ನೆ ದಾಳಿಗೆ ಸಿದ್ದರಾಗುತ್ತಿದ್ದರು. ಸಮರ್ಥ ನಾಯಕತ್ವ ಮತ್ತು ಮುಂಚೂಣಿಯಲ್ಲಿ ನಿಂತು ಕೆಚ್ಚೆದೆಯಿಂದ ಕಾದಾಡುವ ಜಾದೂನಾಥ್ ಸಿಂಗ್ ಧೈರ್ಯ ಸಾಹಸಗಳು ಶತ್ರುವಿನ ತಲೆ ಕೆಡಿಸಿತ್ತು.
ಮೊದಲನೆ ದಾಳಿಯಲ್ಲಿ ಗಾಯಾಳುವಾದ ೪ ಜನ ಸೈನಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿ, ಚದುರಿಹೋಗಿದ್ದ ತನ್ನವರನ್ನು ಒಟ್ಟು ಗೂಡಿಸಿ ಮತ್ತೊಂದು ದಾಳಿಯನ್ನು ತಡೆಯಲು ಸನ್ನದ್ದವಾಯಿತು ರಣಧೀರರ ಪಡೆ. ಈ ಬಾರಿಯಿದ್ದದ್ದು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ.
೨ನೆ ದಾಳಿ ಆರಂಭವಾಯಿತು. ಸಂಖ್ಯೆಯಲ್ಲಿ ಅತ್ಯಂತ ಚಿಕ್ಕ ಆದರೆ ಅಸಾಧಾರಣ ಧೈರ್ಯ ಕೆಚ್ಚೆದೆ ದೇಶಪ್ರೇಮವೆ ಸೊತ್ತಾಗಿದ್ದ ಚಿಕ್ಕ ತುಕಡಿ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಶತ್ರು ಶಿಬಿರದ ಬಾಗಿಲಲ್ಲೆ ಬಂದು ನಿಂತಿದ್ದ ಈ ಬಾರಿ ತಾನೂ ಸೇರಿದಂತೆ ಎಲ್ಲರೂ ಗಾಯಗೊಂಡರೂ ತನ್ನ ಸಹ ಸೈನಿಕರೊಬ್ಬರ ಕೆಳಗೆ ಬಿದ್ದಿದ್ದ ಬ್ರೆನ್ ಗನ್ನೆತ್ತಿಕೊಂಡು ತೆರೆದ ಮೈದಾನದಲ್ಲೆ ಶತ್ರುವನ್ನು ಎದುರಿಸುವುದು ಸಾಧ್ಯವಾಗುವುದು ಎಂಟೆದೆಯಿರುವವರಿಗೆ ಮಾತ್ರ. ಜಾದೂನಾಥ್ ಸಿಂಗ್ ಈ ಆಕ್ರಮಣ ಅವರ ಸಹೋದ್ಯೋಗಿಗಳಲ್ಲೂ ಹುರುಪು ತಂದಿತು. ಈ ಬಾರಿ ಜಯ ತನ್ನದೆ ಎಂದು ನಿಶ್ಚಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಕೊನೆಯ ಘಳಿಗೆಯಲ್ಲಿನ ಈ ಪರಾಕ್ರಮಿಯನ್ನು ಎದುರಿಸಲಾಗದೆ ಓಡಿಹೋಗಬೇಕಾಯಿತು.. ಹಾಗಾಗಿ ಇವರಿದ್ದ ನೌಷೇರದ ದಾರಿ ೨ನೆ ದಾಳಿಗೆ ಸಿಕ್ಕಿರೂ ಉಳಿದು ಕೊಂಡಿತು. ಯಾವುದು ವಿಜಯವಾಗಬೇಕಿತ್ತೋ ಅದು ಪರಾಜಯವಾಗಿ ಅವರನ್ನು ಹಿಂಬಾಲಿಸಿತ್ತು.

೩ ನೆ ದಾಳಿಯ ಹೊತ್ತಿಗೆ ಜಾದೂನಾಥ್ ಸಿಂಗ್ ತಂಡ ಸಂಪೂರ್ಣವಾಗಿ ಗಾಯಾಳುಗಳ ತಂಡವಾಗಿತ್ತು. ಉಳಿದಿದ್ದವರು ಮೂರು ಮತ್ತೊಂದು ಜನವಾಗಿದ್ದರು. ಈ ಬಾರಿ ಕಡೆಯದೆಂಬಂತೆ ಶತ್ರು ತನ್ನೆಲ್ಲ ಬಲವನ್ನು ಹೆಚ್ಚಿಸಿಕೊಂಡು ದಾಳಿಯಿಟ್ಟಿದ್ದ. ಜಾದೂನಾಥ್ ಒಬ್ಬನೆ ಈಗ ಉಳಿದಿದ್ದು. ತನ್ನ ಬಿಡಾರವನ್ನು ನೌಷೇರಾದ ದಾರಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಛಲದಿಂದ ಸ್ಟೆನ್ ಗನ್ ಕೈಗೆತ್ತಿಕೊಂಡರು. ಶತ್ರುವು ಬರುವ ಮೊದಲೆ ಅವರ ದಾರಿಗೆ ಅಡ್ಡಲಾಗಿ ನಿಂತು ಗಾಯಗೊಂಡಿದ್ದರೂ ಏಕಾಂಗಿಯಾಗಿ ತಾವೆ ಅವರನ್ನು ಅಡ್ಡಗಟ್ಟಿದರು..ಇವರ ಈ ದಾಳಿಯ ಪರಿಗೆ ಹತ್ತಾರು ಜನರಿದ್ದ ಶತ್ರು ಸೈನಿಕರು ತತ್ತರಿಸಿಹೋದರು. ಅಳಿದುಳಿದವರಿಂದ ಇಂತಹ ಪ್ರತಿದಾಳಿಯನ್ನು ನಿರೀಕ್ಷಿಸಿರದ ಮತ್ತು ಶತ್ರುವನ್ನು ಸರಿಯಾಗಿ ಅಂದಾಜಿಸದ ಪಾಕಿ ಸೈನಿಕರು ಈ ಬಾರಿಯು ಸಹ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗ ಬೇಕಾಯಿತು. ಈ ಅಂತಿಮ ನಿರ್ಣಾಯಕ ಹೋರಾಟದಲ್ಲಿ ಒಂದು ಗುಂಡು ಜಾದೂನಾಥ್ ಸಿಂಗ್ ರ ದೇಶಪ್ರೇಮವನ್ನು ಪರೀಕ್ಷಿಸಲು ಹೃದಯವನ್ನು ಹೊಕ್ಕರೆ ಇನ್ನೊಂದು ತಲೆ ಸೀಳಿತ್ತು.

ಆದರೆ ಜಾದೂನಾಥ್ ಸಿಂಗ್ ಅವರ ಬಂದೂಕಿನಿಂದ ಹಾರಿದ ಒಂದೊಂದು ಗುಂಡುಗಳು ಪಾಕಿಸೈನಿಕರನ್ನು ನೌಷೇರದಿಂದ ಒಂದೊಂದು ಮೈಲು ದೂರ ಕಳುಹಿಸಿತ್ತು.

ನಾಯಕ್ ಜಾದೂನಾಥರ ಈ ಅಪ್ರತಿಮ ಸಾಹಸಕ್ಕೆ ಪರಮ ವೀರಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.



ಆಧಾರ: ಸಂಗ್ರಹಿತ ಬರಹಗಳು
ಚಿತ್ರಕೃಪೆ: ಭಾರತೀಯ ಸೈನ್ಯದ ಅಂತರ್ಜಾಲ ಪುಟ