Friday, October 9, 2009

ಸ್ವರ್ಣವಲ್ಲಿಯವರೆಗೂ

ಪ್ರವಾಸ ಕಥನ ಬರೆಯಲಿಕ್ಕೆ ಯಾಕೋ ಮನಸ್ಸಿಲ್ಲ. ಆದ್ರೂ ಚಿತ್ರವನ್ನಾದ್ರೂ ಇಲ್ಲಿ ಲಗತ್ತಿಸೋಣ ಅನ್ನಿಸ್ತು ಅದಕ್ಕೆ ಹೀಗೆ.



ತುಂಗ ಭದ್ರೆಯರ ಸಂಗಮ ಕೂಡ್ಲಿ

ಶಾರದಾ ಪೀಠದ ಆವರಣದ ಬಳಿಯಿರುವ ದೇವಳ



ಕೂಡ್ಲಿಯಿಂದ ಹಿಂತಿರುಗುವಾಗ



ಗುಡವಿ ದಾರಿಯಲ್ಲಿ


ಗುಡವಿ ಪಕ್ಷಿಧಾಮದಲ್ಲಿ


ಹತ್ತಿಯ ಉಂಡೆಗಳಂತೆ ಹಕ್ಕಿಗಳು


ಮಧುಕೇಶ್ವರನ ದ್ವಾರಪಾಲಕ



ಮಳೆಯಲ್ಲಿ ತೋಯ್ದ ಮಧುಕೇಶ್ವರ ದೇವಳ


ಗೋಪುರ


ಬನವಾಸಿಯಲ್ಲಿರುವ ಅಪರೂಪದ ತ್ರೀಲೋಕ ಮಂಟಪ



ಮಳೆಯಲ್ಲಿ ಒದ್ದೆಯಾದ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ರಸ್ತೆಗಳು



ದಾರಿಯಲ್ಲಿ ಸಿಕ್ಕ ಪ್ರತಿಯೊಂದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದವು



ಸ್ವರ್ಣವಲ್ಲಿ ಮಠದ ಬಳಿಯಿರುವ ಶಾಲ್ಮಲೆ


ಉಂಚಳ್ಳಿ ಜಲಪಾತ, ೩ ನೇ ವೀಕ್ಷಣಾ ಗೋಪುರಕ್ಕೆ ಇಳಿಯಲು ಅಸಾಧ್ಯವಾದಂತ ಮಳೆಯಲ್ಲಿ


ಅಘನಾಶಿನಿಯ ಸೇತುವೆಯ ಮೇಲೆ ನಮ್ಮ ತಂಡ


ಶನಿವಾರ ಅಣೆಕಟ್ಟಿನಿಂದ ನೀರು ಬಿಟ್ಟಿದ್ದರ ಪರಿಣಾಮವಿರಬೇಕು, ಜೋಗಿನ ತುಂಬಾ ಬರೀ ಮಂಜು

ಉಕ್ಕಿ ಹರಿದ ಅಘನಾಶಿನಿ ಸೇತುವೆಯ ಮೇಲೆ ಹರಿಯುತ್ತಿದ್ದರಿಂದ ೧೦ ನಿಮಿಷ ನೀರಿನ ಮಟ್ಟ ಇಳಿದ ನಂತರವಷ್ಟೆ ಹೊರಟಿದ್ದು.



೩ ದಿನ ಮುಂಚೆ ಅನಿಲ್, ರಾಘು ಮತ್ತು ರಾಮಶೇಷನ್ ಜೊತೆ ಬಂದಾಗ ಇಲ್ಲಿ ಕುಳಿತಿದ್ದು ಈಗ ಸಹಾಯವಾಯ್ತು

ಕೋಗಾರು ಭಟ್ಕಳ ರಸ್ತೆಯಲ್ಲಿ ಸಿಕ್ಕ ಝರಿ, ಹಿಂದಿನ ದಿನ ಬಿದ್ದ ಮಳೆಯಿಂದಾಗಿ ಎಲ್ಲೆಲ್ಲೂ ಜಲಧಾರೆಗಳು ಮೈದುಂಬಿ ಹರಿಯುತ್ತಿದ್ದವು



ಚನ್ನೆಕಲ್ ಜಲಪಾತ


ಅರವಿಂದ್, ರಾಘವೇಂದ್ರ ಶರ್ಮ ಮತ್ತು ರಾಜೇಶ್ ನಾಯಕ್ ಅವರ ಬ್ಲಾಗ್ ಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಿಂದ ಈ ಜಲಪಾತಕ್ಕೆ ಹೋಗಿದ್ದು


ಭೀಮೇಶ್ವರ ದೇವಸ್ಥಾನದ ಬಳಿಯ ಜಲಪಾತ



ಭೀಮೇಶ್ವರದ ಬಳಿಯ ಹೊಳೆ


*****ಚಂಡೆಮನೆ ಜಲಪಾತ******

ಅಕ್ಟೋಬರ್ ೨, ೩ ಮತ್ತು ೪ ರಂದು ಇದ್ದ ರಜಾ ಸಮಯದಲ್ಲಿ ಮಾಡಿದ ಪ್ರವಾಸದ ಚಿತ್ರಗಳಿವು. ಸಾಗರದಲ್ಲಿ ಉಳಿದು ಅಲ್ಲಿಂದ ೩ ರಂದು ಗುಡವಿ, ಬನವಾಸಿ ಸ್ವರ್ಣವಲ್ಲಿ ಮತ್ತು ಉಂಚಳ್ಳಿ ಜೋಗ ನೋಡಿದ ನಂತರ ಸಾಗರಕ್ಕೆ ಹಿಂತಿರುಗಿ ಮರುದಿನ ಜೋಗ,ಕೋಗಾರು ಭಟ್ಕಳ ರಸ್ತೆಯಲ್ಲಿರುವ ಮಳೆಗಾಲದ ಜಲಪಾತಗಳಾದ ಚಂಡೆಮನೆ, ಚನ್ನೆಕಲ್ ನಂತರ ಭೀಮೇಶ್ವರಕ್ಕೆ ನಡೆದು ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಹಿಂತಿರುಗಿ ಬಂದು ಅಂದೆ ರಾತ್ರಿ ೯ ಘಂಟೆಗೆ ಬೆಂಗಳೂರು ತಲುಪಿದೆ.

ನನ್ನ ಸ್ನೇಹಿತ ರಘು, ಸ್ವರ್ಣವಲ್ಲಿಗೆ ಹೋಗಿದ್ದೆ ಅಂತ ಚಾಮರಾಜ ಪೇಟೆಯಿಂದ ಬಸವನಗುಡಿಗೆ ಹೋಗಿ ಬಂದಹಾಗೆ ಹೇಳ್ತಿಯಿದ್ದಲ್ಲೊ ಅಂತ ಒಳ್ಗೊಳ್ಗೆ ನಗ್ತಿದ್ದ. ಅದೇನು ವ್ಯಂಗ್ಯದ ನಗುವೊ? ಆಶ್ಚರ್ಯದ್ದೊ? ತಿಳಿಯಲಿಲ್ಲ ಅದಕ್ಕೆ ಈ ಬರಹ

Tuesday, September 1, 2009

ಮಲ್ಲಳ್ಳಿ ಮತ್ತು ಮೂಕನ ಮನೆ ಪ್ರವಾಸ

ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ ಬಂದಿದ್ದ ಅತಿಥಿ ಸಂಪದದ ಮೂಲಕ ಪರಿಚಯವಾದ ಹಾಸನದಲ್ಲಿ ನೆಲೆಸಿರುವ ಹರಿಹರಪುರ ಶ್ರೀಧರ್ ಅವರಿಂದ ಇನ್ನೂ ಹೆಚ್ಚು ಮಾಹಿತಿ ಕಲೆಹಾಕಲು ಯತ್ನಿಸಿದಾಗ ಅವರಿತ್ತದ್ದು ದಾಸೇಗೌಡರ ದೂರವಾಣಿ ಸಂಖ್ಯೆ.

ಚೆನ್ನಾಗಿದೆ ಸಾರ್ ಹೋಗ್ಬನ್ನಿ ಎನ್ನುವ ದಾಸೇಗೌಡ್ರು ಗೋಪಿಯ ದೂರವಾಣಿ ಸಂಖ್ಯೆಯನ್ನಿತ್ತರು. ಸಂಪರ್ಕಿಸಿದಾಗ ಗೋಪಿಯವ್ರು ಹೇಳಿದ್ದು ಬನ್ನಿ ಸಾರ್, ತುಂಬಾ ಚೆನ್ನಾಗಿದೆ ಮಳೆ ಚೆನ್ನಾಗಿ ಆಗಿರುವುದರಿಂದ ಜಲಪಾತಗಳು ಮೈದುಂಬಿವೆ ಎಂದರು. ನಮ್ಮೂರಿನಲ್ಲೆ ವಸತಿ ಗೃಹವಿದೆ ತಂಗಲು ಸಮಸ್ಯೆಯಿಲ್ಲ. ಇಲ್ಲಿಂದ ಕೇವಲ ೨೦ ಕಿ ಮೀ ದೂರದಲ್ಲಿದೆ ಮೂಕನ ಮನೆಯೆಂದಾಗ ನನಗೆ ಆಗಲೆ ಹೊರಟು ಬಿಡೋಣವೆನಿಸಿತ್ತು ಆದರೆ ಶನಿವಾರ ರಜೆಯಿರುವುದರಿಂದ ಸೂಕ್ತ ಎಂದು ನಿರ್ಧರಿಸಿದೆ.
ಸರಿ ಶುಕ್ರವಾರದವೆರೆಗೂ ಆ ಬಗ್ಗೆ ಯಾರಲ್ಲೂ ಚರ್ಚಿಸಿರಲಿಲ್ಲ ಪ್ರವಾಸ ಹೋಗಲೇ ಬೇಕೆಂಬ ಒತ್ತಡ ಒಂದೆ ಸಮ ಹೆಚ್ಚುತ್ತಿತ್ತು. ಕೆಲಸ, ಬೆಂಗಳೂರಿನ ವಾಹನ ದಟ್ಟಣೆ ಇದೇ ಆಗಿದೆ ಎನ್ನುವ ಪತ್ನಿಯ ಗೊಣಗಾಟಕ್ಕೆ ಆಗಾಗ ಮುಕ್ತಿ ಕೊಡಿಸಲು ಪ್ರವಾಸ ಎನ್ನುವ ಅದ್ಭುತ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಗಸ್ಟ್ ೧೫ ಶನಿವಾರ ಬೆಳಿಗ್ಗೆ ೬ ಗಂಟೆಗೆ ಹೊರಡೋಣ ಎಂದು ತಿಳಿಸಿ ಬೆಳಿಗ್ಗೆ ಎದ್ದಾಗ ಸಮಯ ೬.೩೦. ತಕ್ಷಣ ಗೋಪಿಯವರಿಗೆ ಕರೆ ಮಾಡಿದೆ. ಅವರ ಪತ್ನಿ ತುಂಬಾ ಮಳೆಯಿದೆ ಇಲ್ಲೆಲ್ಲ ನಿನ್ನೆ ಅಂತೂ ಸಿಕಾಪಟ್ಟೆ ಮಳೆ ಬಂತು ಎಂದು ಮಾಹಿತಿಯಿತ್ತರು. ಸರಿ ಮಳೆಯಿದ್ರೆ ಹೊಗೋದು ಬೇಡ ಎಂದವನಿಗೆ ಅಡುಗೆ ಮನೆಯಿಂದ ಮಿಸೈಲ್ಗಳು ಹಾರಿಬರುತ್ತವೆನೋ ಎಂದೆಣಿಸಿದ್ದವನಿಗೆ ಅಂತಾದ್ದೇನೂ ನಡೆಯಲಿಲ್ಲ ಎಂಬ ಸಮಾಧಾನ. ಮುಂದಿನವಾರ ಗೌರಿ ಗಣೇಶ ಹಬ್ಬ ಇನ್ನೆಲ್ಲಿ ಹೋಗಲಿಕ್ಕೆ ಆಗುತ್ತೆ ಎಂಬ ಅಸಮಾಧಾನದ ಮಾತು ಮಾತ್ರ ಬಂದಿದ್ದು.

ಆಗಸ್ಟ್ ೨೨ರ ಶನಿವಾರ ಹೊರಡೋಣ ಎಂದವನಿಗೆ ಪತ್ನಿಯಿಂದ ಬಂದ ಮರು ಪ್ರಶ್ನೆ ಈ ಸರ್ತಿನೂ ಅನಿಶ್ಚಿತತೆಯಿರಲ್ಲ ಅಲ್ವ? ಹರಿಹರಪುರ ಶ್ರೀಧರ್ ಅವರ ಮನೆಗೆ ಭೇಟಿಯಿತ್ತು ನಂತರ ಪ್ರವಾಸ ಮುಂದುವರೆಸುವ, ನಾವೂ ಬರ್ತೀವಿ ಎಂದು ವಾರ ಪೂರ್ತಿ ಆಶ್ವಾಸನೆ ಕೊಟ್ಟು ಕೊನೆ ಕ್ಷಣದಲ್ಲಿ ಕೈ ಎತ್ತಿದ ಸಂಪದಿಗಳು ರಾಕೇಶ್ ಮತ್ತು ವಿನಯ್. ನನ್ಗೆ ಯಾವುದೆ ಕೆಲಸದ ಒತ್ತಡ ಬರದಿದ್ದರೆ ಮಾತ್ರ ಬರ್ತೀನಿ ಎನ್ನುವ ಆಶ್ವಾಸನೆಯಿತ್ತಿದ್ದವರು ಅದರಂತೆ ಕೆಲ್ಸದ ಒತ್ತಡದಿಂದ ಬರಲಾಗುವುದಿಲ್ಲ ಎಂದು ತಿಳಿಸಿದವರು ಭಾಸ್ಕರ್. ಈ ಬಾರಿ ನನ್ನ ಸಹೋದ್ಯೋಗಿಗಳಿಗಾರಿಗೂ ಬೇಕೆಂದೆ ತಿಳಿಸಿರಲಿಲ್ಲ. ಮುಂದಿನ ಬಾರಿ ನಿನ್ಜೊತೆ ಪ್ರವಾಸಕ್ಕೆ ನಾವೂ ಬರ್ತೀವಿ ಎನ್ನುವ ನನ್ನ ಸಹೋದ್ಯೋಗಿ ಮಿತ್ರರು ಪ್ರವಾಸ ಹೊರಟಾಗ ಮಾತ್ರ ನೆಪ ಹೇಳಿ ತಪ್ಪಿಸಿಕೊಳ್ಳುವವರೇ ಆದ್ದರಿಂದ ಅವರ್ಯಾರಿಗೂ ತಿಳಿಸುವ ಗೋಜಿಗೆ ಹೋಗಲಿಲ್ಲ.

೨೯ರ ಶನಿವಾರ ಮಗನನ್ನು ೧೧ ಗಂಟೆಗೆ ಶಾಲೆಯಿಂದ ಕರೆತಂದು ಊಟ ಮಾಡಿ ಮನೆ ಬಿಟ್ಟಾಗ ಸಮಯ ೧.೩೦. ತುಮಕೂರು ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಬದಲಿ ರಸ್ತೆಗಳಲ್ಲಿ ಚಲಿಸಬೇಕಾಗುತ್ತದೆಯೆಂದೆಣಿಸಿ ಹೆಸರಘಟ್ಟ ಮಾರ್ಗ ಹಿಡಿದವನಿಗೆ ಹಳೆದಾರಿಯೇ ಸೂಕ್ತವೆನಿಸಿತ್ತು. ಕರಡಿಗುಚ್ಚಮ್ಮ ದೇವಸ್ತಾನದ ಆವರಣದ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಬಹುತೇಕ ರಸ್ತೆ ಅಗಲೀಕರಣಕ್ಕಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಮಧ್ಯೆ ಹಾಸನ ತಲುಪಿದಾಗ ೪ ಗಂಟೆ. ೨-೩ ಸುತ್ತು ಹೊಡೆದ ನಂತರ ಶ್ರೀಧರ್ ಅವರು ಬಂದು ಮನೆಗೆ ಕರೆದು ಕೊಂಡು ಹೋದರು.

ನನ್ನ ಯೋಜನೆಯಂತೆ ಅಂದೆ ನಾನು ನನ್ನ ಗಮ್ಯವಾದ ಗೋಪಿಯರ ತಿಳಿಸಿದ ವಸತಿ ಗೃಹ ತಲುಪಬೇಕಿತ್ತು. ಆದರೆ ಶ್ರೀಧರ್ ಅವರ ಆತ್ಮೀಯ ಒತ್ತಾಯಕ್ಕೆ ಮಣಿದು ಅವರ ಮನೆಯಲ್ಲಿಯೆ ಉಳಿಯ ಬೇಕಾಯಿತು. ಹಾಸನದ ವಾರಿಗೆಯ ಅಕ್ಕನ ಮನೆಗೆ ಮತ್ತು ಅಕ್ಕನ ಮಗಳ (ಭಾವ ಅನಂತ್ ಮತ್ತು ಆದಿಶೇಷ ಶ್ರೀಧರ್ ಅವರಿಗೂ ಪರಿಚಯವಿದ್ದರಿಂದ) ಮನೆಗೆ ಭೇಟಿಯಿತ್ತೆ. ಶ್ರೀಧರ್ ಅವರ ಮನೆಯ ತಿಳಿಸಾರು ಮಜ್ಜಿಗೆಹುಳಿಯ ಭರ್ಜರಿ ಭೋಜನ ಉದರ ತಣಿಸಿದರೆ, ಅವರ ನಾದಿನಿ ಹಾಡಿದ ಭಾವಗೀತೆಗಳು ಮನ ತಣಿಸಿದವು. ಅಂತಹ ಹೃದಯಸ್ಪರ್ಶಿ ಆತಿಥ್ಯಕ್ಕೆ ನಾವು ಚಿರಋಣಿ ಶ್ರೀಧರ್ ಸಾರ್.

ಬೆಳಗಿನ ಕಾರ್ಯಕ್ರಮದ ನಂತರ ಮಂಗಳ ದ್ರವ್ಯಗಳೊಡನೆ ನಮ್ಮನ್ನು ಬೀಳ್ಕೊಟ್ಟ ಶ್ರೀಧರ್ ಕುಟುಂಬಕ್ಕೆ ಮನದಲ್ಲೆ ವಂದಿಸುತ್ತಾ ಅಲ್ಲಿಂದ ಹೊರಟೆವು. ೨-೩ ಕಿ ಮೀ ನಡೆಯಬೇಕಾಗುತ್ತೆ ಎನ್ನುವ ಗೋಪಿಯವರ ಮಾತಿನಿಂದ ಶ್ರೀಧರ್ ಮತ್ತವರ ಕುಟುಂಬವನ್ನು ಪ್ರವಾಸಕ್ಕೆ ಬನ್ನಿ ಎಂದು ಆಹ್ವಾನಿಸದೆ ಅಲ್ಲಿಂದ ಹೊರಟೆ. ಕೆಟ್ಟು ನಿಂತಿರುವ ರಾಷ್ಟ್ರೀಯ ಹೆದ್ದಾರಿ ನಮ್ಮ ಪ್ರಯಾಣದ ವೇಗವನ್ನು ಮಿತಿಗೊಳಿಸುತ್ತಿತ್ತು. ೮.೩೦ರ ಸಮಯಕ್ಕೆ ಹೊಟ್ಟೆ ಹಸಿತಾಯಿದೆ ಅಪ್ಪ ಎನ್ನುವ ಮಗನ ಮಾತಿಗೆ ಹೌದು ನನಗೂ ಎಂದು ಹೆಂಡತಿ ಕೋರಸ್ ಆರಂಭಿಸಿದಾಗ ಇದ್ದ ಜಾಗದಲ್ಲಿ ವಿಚಾರಣೆ ೨-೩ ಕಿ ಮೀ ಹಿಂದಿರುವ ಸುರಭಿ ನೆಕ್ಸ್ಟ್ ಮಾತ್ರವೇ ಪರಿಹಾರವೆಂದು ಸೂಚಿಸಿತು. ಮತ್ತೆ ಹಿಂತಿರುಗಿ ಬಂದು ಸುರಭಿಯಲ್ಲಿ ತಿಂಡಿ ತಿಂದು ನಮ್ಮ ಪ್ರಯಾಣ ಗೋಪಿಯವರ ಮನೆಯತ್ತ. ದಾರಿಯುದ್ದಕ್ಕೂ ಸಿಗುವ ಹಸಿರು ಹುಲ್ಲುಗಾವಲುಗಳು ಅಲ್ಲಿ ಮೇಯುತ್ತಿರುವ ಹಸುಕರುಗಳ ಕೊರಳಿನ ಘಂಟೆಯ ನಿನಾದ ದೂರದಲ್ಲಿರುವ ಬೆಟ್ಟಗುಡ್ಡಗಳ ಹಸಿರು ಹಿನ್ನೆಲೆ ಮತ್ತೆ ಮತ್ತೆ ವಾಹನ ನಿಲ್ಲಿಸಿ ಅಲ್ಲಿನ ಸೌಂದರ್ಯ ಸವಿಯೋಣವೆನಿಸುತ್ತದೆ. ಹೀಗೆ ಮುಂದುವರೆದರೆ, ಇಂದೆ ಬೆಂಗಳೂರಿಗೆ ಹಿಂತಿರುಗುವ ನಮ್ಮ ಯೋಜನೆ ವಿಫಲವಾಗುತ್ತದೆ ಎಂಬ ಭಯ ಬೇರೆ. ರಸ್ತೆ ಬದಿಯುದ್ದಕ್ಕೂ ಹರಿಯುವ ಜುಳುಜುಳು ನೀರು ಅದನ್ನಾಧರಿಸಿ ಬೆಳೆದು ನಿಂತ ಹಸಿರು ಪೈರು ಸ್ವಚ್ಛಂದವಾಗಿ ಬೀಸುವ ಶುದ್ದ ಗಾಳಿ ಹಕ್ಕಿ ಪಕ್ಷಿಗಳ ಕಲರವ ಕಣ್ಣು ಹಾಯಿಸಿದಷ್ಟು ಕಾಣುವ ಹಸಿರು ಜನಗಳೆ ಓಡಾಡದ ರಸ್ತೆಗಳು ಎಂತಹವರನ್ನು ಕವಿಯನ್ನಾಗಿಸುತ್ತವೆಯೆನೋ?

ಸಮಯದ ಪರಿವೆಯೇ ಇಲ್ಲದೆ ಆ ಹಸಿರು ಸೌಂದರ್ಯವನ್ನು ಕಣ್ಣುಗಳಿಗೆ ತುಂಬಿಕೊಳ್ಳುತ್ತಾ ವಾಹನ ಚಲಾಯಿಸುವುದು ನನಗೆ ಅತ್ಯಂತ ಸಂತಸದ ವಿಚಾರ. ಗೋಪಿಯವರ ಮನೆ ವಿಚಾರಿಸಿದಾಗ ಅವ್ರ ಮಗ ಅವ್ರು ಹಾಸನಕ್ಕೆ ಹೋಗಿದ್ದಾರೆ ನಾನೇ ಹೇಳ್ತಿನಿ ಹೇಗೆ ಹೋಗ್ಬೇಕೂಂತ ಎಂದು ತಿಳಿಸಿದರು ಅವರ ಹೋಟೆಲ್ನಲ್ಲಿ ಟೀ ಕುಡಿದು ಅವರ ಮಾರ್ಗದರ್ಶನ ಮತ್ತು ಯೋಜನೆಯಂತೆ ಮಲ್ಲಳ್ಳಿ ಜಲಪಾತದ ಕಡೆಗೆ ವಾಹನ ತಿರುಗಿಸಿದೆ. ಅಲ್ಲಲಿ ಸಿಗುವ ರಸ್ತೆಯ ಕವಲುಗಳಲ್ಲಿ ಸರಿಯಾದ ದಾರಿ ತಿಳಿದುಕೊಳ್ಳಲು ಯಾರೂ ಸಿಗುತ್ತಿರಲಿಲ್ಲ ಆದರೂ ಎಲ್ಲಿಯೂ ದಾರಿ ತಪ್ಪದೇ ನಮ್ಮ ವಾಹನ ಓಡುತ್ತಿತ್ತು. ಹಿಂದೊಮ್ಮೆ ಈ ರಸ್ತೆಯಲ್ಲಿ ಪುಷ್ಪಗಿರಿಗೆ ಬಂದಿದ್ದರಿಂದ ಸ್ವಲ್ಪ ಪರಿಚಿತವೆನಿಸುತ್ತಿದ್ದದ್ದು ಇದಕ್ಕೆ ಸಹಾಯಕವಾಗಿತ್ತು.
ಕೊನೆಗೊಮ್ಮೆ ಘಟ್ಟದ ರಸ್ತೆಯಲ್ಲಿನ ಡಾಂಬರು ಮಾಯವಾಗಿ ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಾ ನಡೆಯಿತು ನಮ್ಮ ಪಯಣ. ಅಲ್ಲಲ್ಲಿ ಮಳೆ ನೀರು ನಿಂತು ಹಳ್ಳದಂತೆ ಕಾಣಿಸಿದ ಕಡೆ ವಾಹನದಿಂದಿಳಿದು ಕೋಲಿನಿಂದ ಅದರ ಆಳ ಪರೀಕ್ಷಿಸಿ ನಂತರ ಹೋಗುವುದು ಸುರಕ್ಷಿತವೆಂದು ತಿಳಿದು ಅದರಂತೆ ನಡೆದೆ. ಸುಮಾರು ೩ ಕಿ ಮೀ ನಂತರ ಇನ್ನು ವಾಹನ ಮುಂದೆ ಹೋಗುವುದು ಸಾಧ್ಯವಿಲ್ಲವೆಂದು ಅರಿತಾಗ ಅಲ್ಲಿಯೇ ವಾಹನ ನಿಲ್ಲಿಸಿ ನಡೆಯುತ್ತಾ ಹೊರಟೆವು. ಇಡೀ ಪ್ರದೇಶ ನಿರ್ಜನವಾಗಿತ್ತು. ಬರೀ ಕೀಟಗಳ ಝೇಂಕಾರ ಹಕ್ಕಿಗಳ ಚಿಲಿಪಿಲಿ ಮಾತ್ರವೇ ಕೇಳಿಸುತ್ತಿತ್ತು. ದಾರಿಯುದ್ದಕ್ಕೂ ಕಾಡುಹೂಗಳು ಹಸಿರು ಬಣ್ಣದ ಕಾಡಿಗೆ ಬಗೆಬಗೆಯ ಬಣ್ಣದ ಮೆರಗು ತಂದಿತ್ತಿದ್ದವು. ಹೂವಿನಲ್ಲಿರುವ ನಕ್ಷತ್ರ ಮನಸೆಳೆಯಿತು. ಜೀಪ್ ಹೋಗಬಹುದಾಗಿದ್ದ ದಾರಿಯಾದರಿಂದ ಎಲ್ಲಿಯೂ ದಾರಿತಪ್ಪುವ ಆತಂಕವಿರಲಿಲ್ಲ.

೧೫ ನಿಮಿಷದ ನಡಿಗೆ ನಮ್ಮನ್ನು ಹಸಿರಿನಿಂದ ಕೂಡಿದ ತೆರೆದ ಬಯಲಿಗೆ ಕರೆ ತಂದಿತ್ತು. ಕಲ್ಲಿನ ರಾಶಿಯ ಮೇಲೆ ಕೊಡೆ ಹಿಡಿದು ಕುಳಿತಿದ್ದ ವ್ಯಕ್ತಿಯಯೊಬ್ಬ ನಮ್ಮನ್ನು ನೋಡಿದೊಡನೆ ಎದ್ದು ಬಂದು ವಂದಿಸಿ ಪರಿಚಯ ಮಾಡಿಕೊಂಡರು. ಅಲ್ಲಿನ ಪ್ರದೇಶಗಳನ್ನೆಲ್ಲ ಸ್ಥೂಲವಾಗಿ ತಿಳಿಸಿದ ವಿಜಯ್ ಕುಮಾರ್ ನಮ್ಮೊಡನೆ ಜಲಪಾತದೆಡೆಗೆ ನಡೆದರು. ಮೊದಲ ನೋಟದಲ್ಲೆ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ ದೂರದಲ್ಲಿ ಧುಮ್ಮಿಕ್ಕುವ ಕುಮಾರಧಾರ. ಮೇಲಿನಿಂದ ಯಾರೋ ಹಾಲನ್ನು ಚೆಲ್ಲುತ್ತಿದ್ದಾರೆಂಬಂತೆ ಬೆಳ್ಳಗೆ ಬಂಡೆಗಳ ಮೇಲಿನಿಂದ ಹರಿಯುವ ಪರಿ ಸುಂದರ. ಎದುರಿಗೆ ನಿಸರ್ಗ ನಿರ್ಮಿತ ವೀಕ್ಷಣಾಗೋಪುರದಂತಿರುವ ಬಂಡೆಯ ಬದಿ ನಿಂತು ನೋಡುವುದೇ ಚೆಂದ. ಬಹುಶಃ ಸುತ್ತಲೂ ಇರುವ ಹಸಿರು ಮಧ್ಯದಲ್ಲಿ ಹಾಲ್ನೊರೆಯಂತೆ ಬೀಳುವ ಜಲಧಾರೆಗೆ ಮೆರುಗು ತಂದಿರಬೇಕು. ೬೦-೭೦ ಅಡಿಗಳಷ್ಟು ಕೆಳಗಿಳಿಯುತ್ತಾ ಹೋದಂತೆಲ್ಲ ಜಲಧಾರೆಯ ಸೌಂದರ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ. ಜಲಧಾರೆಯವರೆಗೂ ಹಸಿರು ಹಬ್ಬಿರುವುದು ಈ ಜಲಪಾತದ ವಿಶೇಷಗಳಲ್ಲೊಂದು ಆದ್ದರಿಂದಲೇ ಹಾಲಿನ ಬಣ್ಣದ ನೀರಿಗೆ ಹಸಿರು ಬಣ್ಣದ ಹಿನ್ನೆಲೆ ಇರುವುದರಿಂದ ಜಲಪಾತದ ಸೌಂದರ್ಯ ಇಮ್ಮಡಿಸಿದೆಯೆನಿಸುತ್ತದೆ.

ಹೆಚ್ಚೇನು ಜನ ಬರಲ್ಲ ಸಾರ್, ಎನ್ನುವ ವಿಜಯ್ ಕುಮಾರ್ ಮಾತಿನಲ್ಲಿ ಹೊಟ್ಟೆಪಾಡು ಎದ್ದು ಕಾಣುತ್ತದೆ. ಜನ್ಮತಃ ವಿಕಲಾಂಗತೆಯಿರುವ ವಿಜಯ್ ಬಗ್ಗೆ ಅನುಕಂಪ ಮೂಡುತ್ತದೆ. ಅದಕ್ಕಾಗಿ ನಾವೇನು ಆತನಿಗೆ ಹಣ ಕೊಡಬೇಕಾಗಿಲ್ಲ ಆತ ಅಲ್ಲಿನ ಪರಿಸರವನ್ನು ಶುಚಿಕೊಳಿಸಿದ್ದು ನೋಡಿ ಮನ ತುಂಬಿ ಬರುತ್ತದೆ. ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ವಸ್ತುಗಳೆಲ್ಲವನ್ನೂ ಒಂಡೆಡೆ ಗುಡ್ಡೆ ಹಾಕಿ ಅವನ್ನು ಸಾಗಿಸುವುದು ಅವರ ನಿತ್ಯ ಕಾಯಕಗಳಲ್ಲೊಂದು. ಸಾರ್, ಇಲ್ಲಿಂದ ಜಲಪಾತ ಧುಮುಕುವ ಜಾಗಕ್ಕೆ ದಾರಿಯಿದೆ ಹೋಗಿ ಸಾರ್ ಎನ್ನುವ ಮೃದುಭಾಷಿ ವಿಜಯ್ ಆತ್ಮೀಯನಂತೆ ವರ್ತಿಸುವುದು ಖುಷಿ ತರಿಸುತ್ತದೆ.

ಆತನ ಮಾತಿನಂತೆ ಕೆಳಗಿಳಿದು ಹೊರಟವರಿಗೆ ೫ ನಿಮಿಷದಲ್ಲಿ ಕುಮಾರಧಾರ ಸಿಕ್ಕಿತು. ಈಗಾಗಲೆ ಅಲ್ಲಿ ಇಬ್ಬರು ನದಿಯಲ್ಲಿ ಆಟವಾಡುತ್ತಿದ್ದರು. ಜಲಪಾತ ಉಂಟಾಗುವ ಎಷ್ಟೋ ಸ್ಥಳಗಳನ್ನು ನಾನು ನೋಡಿದ್ದೇನೆ ಆದರೆ ಈ ಸ್ಥಳದಷ್ಟು ಯಾವುದೂ ನನಗೆ ಇಷ್ಟೊಂದು ಅಪ್ಯಾಯವೆನಿಸಿರಲಿಲ್ಲ. ಧ್ಯಾನಕ್ಕೆ ಕುಳಿತವರಂತೆ ನಾವು ಮೂವರು ಆ ಸ್ಥಳದ ಸೌಂದರ್ಯವನ್ನು ಆಸ್ವಾದಿಸುತ್ತಾ ಕುಳಿತವರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಎಷ್ಟು ಬಾರಿ ಬೆಳಕಿನ ಬೋನನ್ನು ಮುಟುಕಿಸಿದರೂ ತೃಪ್ತಿಯಿರಲಿಲ್ಲ. ನೀರಿಗಿಳಿದು ೩ ಮುಳುಗು ಹಾಕಿ ಅಲ್ಲಿಂದ ಹೊರಟೆವು. ಹಿಂತಿರುಗಿ ಬರುವಾಗ ದಾರಿಯಲ್ಲಿ ಸಿಕ್ಕ ನಾಗರಿಕ ಮಾನವನ ಕುರುಹಾದ ಮದ್ಯದ ಶೀಷೆಗಳು ಬಿದ್ದದ್ದು ಗಮನಕ್ಕೆ ಬಂತು. ಬಹುಷಃ ವಿಜಯ್ ಇಲ್ಲಿವರೆಗು ನಡೆದು ಬರಲಾಗಿಲ್ಲವಾದ್ದರಿಂದ ಅವು ಇಲ್ಲಿ ಉಳಿದಿರಬಹುದು ಅದನ್ನು ಹೊರತು ಪಡಿಸಿ ಉಳಿದಂತೆ ಇನ್ನು ಸ್ವಚ್ಚತೆ ಕಾಪಾಡಿಕೊಂಡಿರುವುದು, ಬಹುಶಃ ಸ್ಥಳ ಇನ್ನೂ ಹೆಚ್ಚು ಪ್ರಸಿದ್ದಿಗೆ ಬರದಿರುವುದರಿಂದ ಕಾರಣವಿರಬೇಕು.
ನನಗೆ ಇದುವರೆವಿಗೂ ಅರ್ಥವಾಗದ ಸಂಗತಿಯೆಂದರೆ ಇಂತಹ ಸ್ಥಳಗಳಲ್ಲಿ ಬಂದು ಕುಡಿಯುವ ಅಗತ್ಯವೇನು ಎಂಬುದು. ನನ್ನ ಕೆಲವು ಸ್ನೇಹಿತರ ಸಮರ್ಥಿಸಿಕೊಳ್ಳುವುದು ಪ್ರಕೃತಿಯ ಮಡಿಲಿನಲ್ಲಿ ನಶೆ ಹೆಚ್ಚು ಏರುತ್ತದೆ ಎನ್ನುವುದು. ಹೇಗೆ ಸಾಧ್ಯ ಮದ್ಯದಲ್ಲಿಲ್ಲದ ನಶೆ ಪ್ರಕೃತಿಯದೆ? ಪ್ರಕೃತಿಯೇ ನಶೆ ಏರಿಸುವಷ್ಟು ಸುಂದರವಾಗಿದ್ದರೆ ಈ ಮದ್ಯದ ಅವಶ್ಯಕ್ಯಾತೆ ಏಕೆ? ಪ್ರಕೃತಿಯ ನಶೆ ಸಾಕಲ್ಲವೆ? ಊಹೂಂ ಇನೂ ಅರ್ಥವಾಗಿಲ್ಲ. ನಿಮಗೇನಾದ್ರೂ ಗೊತ್ತಿದ್ರೆ ತಿಳಿಸಿ.

ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆಯಲು ಆರಂಭಿಸಿದೆವು. ಪುಷ್ಪಗಿರಿ ದೇವಸ್ತಾನಕ್ಕೆ ಹೋಗಿ ಎಂದ ವಿಜಯ್ಗೆ ಈಗಾಗಲೆ ನೋಡಿದ್ದೇನೆ ಎಂದು ತಿಳಿಸಿದೆ. ಈಗ ದೇವಸ್ತಾನದವರೆಗೂ ರಸ್ತೆಯಿದೆ ತುಂಬಾ ಚೆನ್ನಾಗಿದೆ ಹೋಗ್ಬನ್ನಿ ಎಂದರು. ನಾವು ಇನ್ನೂ ಒಂದು ಜಲಪಾತ ವೀಕ್ಷಿಸ ಬೇಕಿರುವುದರಿಂದ ಆಗುವುದಿಲ್ಲವೆಂದು ತಿಳಿಸಿ ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆದು ವಾಹನ ಏರಿ ಮೂಕನ ಮನೆ ಜಲಪಾತದ ಕಡೆಗೆ ಹೊರಟೆವು. ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಕೆರೆ ಗಮನ ಸೆಳೆಯಿತು. ನೀರಿಗಿಳಿದು ಈಜುವ ಮನಸ್ಸಾದರೂ ಸಮಯದ ಅಭಾವದಿಂದ ಹಾಗೆ ಮಾಡಲಾಗಲಿಲ್ಲ. ೪ ವರ್ಷದ ಹಿಂದೆ ನೀರೆಂದರೆ ಭಯ ಬೀಳುತ್ತಿದ್ದ ಅಮಿತ್ ಈಗೆಲ್ಲ ನೀರು ಕಂಡರೆ ಸಾಕು ಅಪ್ಪಾ ಈಜೋಣ ಎನ್ನುವುದು ಮುಗುಳ್ನಗೆ ತರಿಸುತ್ತದೆ

ಅವರಿವರನ್ನು ಕೇಳಿಕೊಂಡು ನಾವು ಮೂಕನ ಮನೆ ಜಲಪಾತದ ಕಡೆ ತೆರಳುತ್ತಿದ್ದಾಗ ಅತ್ಯಂತ ಇಳಿಜಾರಿನಲ್ಲಿ ವಾಹನ ಇಳಿಸಬಾರದಿತ್ತು ಆದರೆ ಗಮನಿಸದೆ ಇಳಿಸಿದಾಗ ಅರಿವಾದದ್ದು ಆಗಿ ಹೋದ ತಪ್ಪು. ಸುಮಾರು ೧೦೦ ಮೀಟರ್ಗಳಿಗೂ ಹೆಚ್ಚು ಉದ್ದವಿರುವ ಒಂದೆ ದಿಬ್ಬವನ್ನು ಇಳಿಸಲು ಆರಂಭಿಸಿದ್ದೆ ಮಧ್ಯೆ ಕಾರು ಕೊರಕಲಿಗೆ ಇಳಿದಿತ್ತು. ಹೆಂಡತಿ ಮತ್ತು ಮಗನ ಮುಖದಲ್ಲಿ ಆತಂಕ ಮಡುಗಟ್ಟುತ್ತಿತ್ತು. ಗಾಭರಿಯಾಗಲಿಲ್ಲ ಘಟಿಸಿದ ಮೇಲೆ ಯೋಚ್ನೆ ಮಾಡಿ ಪ್ರಯೋಜನವಿಲ್ಲ. ಮುಂದೆ ಏನ್ಮಾಡ್ಬೇಕು ಎನ್ನುವುದನ್ನು ಯೋಚಿಸುತ್ತಾ ಕಾರಿನ ಜ್ಯಾಕ್ನಿಂದ ಚಕ್ರವನ್ನು ಮೇಲೆತ್ತಿ ಚಕ್ರದ ಕೆಳಗೆ ಕಲ್ಲಿಟ್ಟು ವಾಹನವನ್ನು ದಾರಿಗೆ ತಂದು ಕೆಳಗಿಳಿಸಿದೆ. ಏಕೆಂದರೆ ಮತ್ತೆ ಹಿಂತಿರುಗುವ ಹಾಗಿರಲಿಲ್ಲ. ಕೆಳಗೆ ವಾಹನ ನಿಲ್ಲಿಸಿ ಅಲ್ಲೆ ಹಿಂದಿನ ದಿನ ಕಳೆದು ಹೋಗಿದ್ದ ದನ ಹುಡುಕಿ ಕೊಂಡು ಹಿಂತಿರುಗುತ್ತಿದ್ದ ವ್ಯಕ್ತಿ ವಿಶ್ವನಾಥ್ ಜಲಪಾತದೆಡೆಗೆ ಹೋಗಲು ಸಹಾಯ ಕೇಳಿದಾಗ ಬನ್ನಿ ನಾನೇ ಕರ್ಕೊಂಡು ಹೋಗ್ತೀನಿ ಎಂದು ಸಿಕ್ಕಿದ್ದ ಎತ್ತನ್ನು ಮೇಯಲು ಬಿಟ್ಟು ನಮ್ಮೊಡನೆ ಹೆಜ್ಜೆ ಹಾಕಿದರು. ಮುಕ್ತಿಹೊಳೆಯ ದಂಡೆಯಲ್ಲೆ ಮಳೆಯಿಂದ ಒದ್ದೆಯಾಗಿ ಜಾರುತ್ತಿದ್ದ ಬಂಡೆಗಳ ಮೇಲೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಒಬ್ಬರಿಗೆ ಒಬ್ಬರು ಆಸರೆಯಾಗಿ ಜಲಪಾತದೆಡೆಗೆ ತೆರಳಿದೆವು. ಕಾಲಲ್ಲಿ ಜಿಗಣೆಗಳು ಹಿಡಿದರೂ ( ಅಭ್ಯಾಸವಾಗಿ ಹೋಗಿದೆ) ತಲೆ ಕೆಡಿಸಿಕೊಳ್ಳದೆ ೧೫ ಅಡಿಗಳಷ್ಟೆ ದೂರದಲ್ಲಿದ್ದ ಜಲಪಾತದ ಜಾಗಕ್ಕೆ ತಲುಪಿದೆವು. ೧೫-೨೦ ಅಡಿಯಿಂದ ಧುಮುಕುವ ಜಲಪಾತ ನದಿಪಾತ್ರದ ಉದ್ದಕ್ಕೂ ಹರಡಿದೆ. ನಿಜಕ್ಕೂ ನಾನು ಅಂತರ್ಜಾಲದಲ್ಲಿ ನೋಡಿ ಹೊರಟು ಬಂದಿದ್ದಕ್ಕೂ ಇದಕ್ಕೂ ಏನೂ ಸ್ವಾಮ್ಯವಿರಲಿಲ್ಲ. ಆದರೂ ಸಕ್ಕತ್ತಾಗಿರುವ ಜಲಪಾತ. ಬೇಸಿಗೆಯಲ್ಲಿ ಜಲಪಾತದಡಿಗೆ ಹೋಗಬಹುದು ಎಂದು ವಿಶ್ವನಾಥ್ ತಿಳಿಸಿದರು. ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಈ ಜಲಪಾತ ಮುಳುಗಡೆಯಾಗಲಿದೆ ಎಂಬ ವಿಷಯ ನೋವನ್ನುಂಟು ಮಾಡಿತು. ಅಭಿವೃದ್ಧಿಯೆಂಬ ಹೆಮ್ಮಾರಿಗೆ ಅದಿನ್ನೆಷ್ಟು ಪ್ರಕೃತಿ ಬಲಿಯಾಗಬೇಕಿದೆಯೋ?

ಪತ್ನಿ ಮತ್ತು ಪುತ್ರನನ್ನು ಜಲಪಾತವುಂಟಾಗುತ್ತಿದ್ದ ಸ್ಥಳದಲ್ಲೇ ಬಿಟ್ಟು, ನಾನು ಮತ್ತು ವಿಶ್ವನಾಥ್ ಇನ್ನೂ ಕೆಳಕ್ಕಿಳಿದು ಜಲಪಾತದ ಮುಂದೆ ನಿಂತೆವು. ಒಂದೆರಡು ಚಿತ್ರ ತೆಗೆಯುವಷ್ಟರಲ್ಲಿ ಕತ್ತಲಾಗುವಂತೆ ಮೋಡಗಳು ಮುಸುಕಿಕೊಳ್ಳಲಾರಂಭಿಸಿದವು. ಮಳೆ ಬರುವಷ್ಟರಲ್ಲಿ ವಾಹನ ಸೇರಿಕೊಳ್ಳುವ ಸಲುವಾಗಿ ಹಿಂತಿರಿಗುವಾಗ ೭-೮ ಜನ ಹುಡುಗರ ಗುಂಪು ಎದುರಾಯಿತು. ಉಭಯಕುಶಲೋಪರಿಯ ನಂತರ ಅವರಿಗೆ ನನ್ನ ಕಾರು ಮೇಲೆ ಹತ್ತದಿದ್ದರೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡು ಕಾರಿನತ್ತ ತೆರಳಿದೆ. ಈಗ ಇತ್ತು ಸರ್ಕಸ್. ಸುಮಾರು ೫೦ ಮೀಟರ್ ನಂತರ ಸಿಕ್ಕ ಆ ದಿಬ್ಬವನ್ನು ಹತ್ತಲಾರದೆ ನನ್ನ ವಾಹನ ಅಡ್ಡ ಸಿಕ್ಕಿ ಹಾಕಿ ಕೊಂಡಿತು. ಹಿಂಬದಿಯ ಚಕ್ರ ಕಲ್ಲುಗಳನ್ನಿಡುತ್ತಿದ್ದ ಅಮಿತ್ ಮತ್ತು ಚಿತ್ರ ಮುಖದಲ್ಲಿ ಗಾಭರಿ ಸ್ಪಷ್ಟವಾಗಿತ್ತು. ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿ ಮತ್ತೆ ಮತ್ತೆ ಪ್ರಯತ್ನಿಸಿದೆ. ಈಗಾಗಲೆ ಮಳೆ ಭೋರೆಂದು ಸುರಿಯುತ್ತಾ ನಮ್ಮ ಪ್ರಯತ್ನ ಮತ್ತಷ್ಟು ಕ್ಲಿಷ್ಟವಾಗಿಸಿತು.ಚಕ್ರ ನಿಂತಲ್ಲೆ ತಿರುಗುತ್ತಿತ್ತು. ಕೊನೆಗೊಮ್ಮೆ ಆ ಹುಡುಗರನ್ನು ಕರೆ ತರಲು ಚಿತ್ರ ನಡೆದಳು. ಅವರು ಬರುವಷ್ಟರಲ್ಲಿ ಮತ್ತಷ್ಟು ಪ್ರಯತ್ನಿಸಿದ್ದರಿಂದ ಕಾರಿನ ಬ್ರೇಕುಗಳು ಮತ್ತು ಕ್ಲಚ್ ವಾಸನೆ ಬರಲು ಆರಂಭಿಸಿತು. ಆ ಸಮಯಕ್ಕೆ ನಡೆದು ಬಂದ ಹುಡುಗರು ನೀವು ಕೆಳಕ್ಕಿಳಿಯಿರಿ ಎಂದು ತಿಳಿಸಿ ಅವರಲ್ಲೊಬ್ಬ ಚಾಲಕನಾಗಿ ಮಿಕ್ಕವರು ಹಿಂದಿನಿಂದ ತಳ್ಳಿ ಮೇಲಕ್ಕೆ ತಂದಿತ್ತರು. ಅವರ ಈ ಸಹಾಯ ಅವಿಸ್ಮರಣೀಯ. ಮೇಲೆ ತಳ್ಳುವ ಭರದಲ್ಲಿ ಆ ಹುಡುಗರಲ್ಲೊಬ್ಬರ ಚಪ್ಪಲಿ ಕಿತ್ತುಹೋಯಿತು. ಪಾಪ ಆತ ಬರಿಗಾಲಿನಲ್ಲಿ ಊರು ಸೇರಬೇಕಾದದ್ದು ಅದೂ ನನ್ನಿಂದ ತುಂಬಾ ಬೇಜಾರಿನ ಸಂಗತಿ.

ಮೇಲಕ್ಕೆ ಬಂದ ಮೇಲೆ ಚಾಲಕನ ಸ್ಥಾನದಲ್ಲಿದ್ದ ಆ ವ್ಯಕ್ತಿ ಸಾರ್, ಕ್ಲಚ್ ಮತ್ತು ಬ್ರೇಕ್ ಬಿಸಿಯಾಗಿ ತುಂಬಾ ವಾಸನೆ ಬರ್ತಾ ಇದೆ ಟೈರ್ಗಳಂತೂ ೫೦೦೦ ಕಿ ಮೀ ಓಡುವಷ್ಟು ಸವೆದಿವೆ ಎಲ್ಲಾದರೂ ಒಂದರ್ಧ ಗಂಟೆ ವಾಹನದ ಬಿಸಿ ಆರುವವರೆಗೆ ನಿಂತು ಹೋಗಿ ಎಂದು ಸಲಹೆಯಿತ್ತರು ಈಗಾಗಲೆ ಸಮಯ ೪ ಗಂಟೆಯಾಗಿತ್ತು. ನಾವು ಇಂದೆ ಬೆಂಗಳೂರು ತಲುಪ ಬೇಕಿತ್ತು. ಮಳೆ ಮಾತ್ರ ಭೋರೆಂದು ಸುರಿದೇ ಸುರಿಯುತ್ತಿತ್ತು. ಅಲ್ಲೊಂದು ಕೈಮರದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿ ತನ್ನನ್ನು ಕರೆದೊಯ್ಯುವಂತೆ ವಿನಂತಿಸಿ ಕೊಂಡವನನ್ನು ಕೂರಿಸಿಕೊಂಡು ಹೊರಟೆ. ಆತನ ೩೦ ಎಕರೆ ಏಲಕ್ಕಿ ತೋಟ ಮುಳುಗಡೆಯಾಗುತ್ತಿದೆ ಎಂದು ದುಃಖಿಸಿದರು. ನಾವು ಆದಷ್ಟು ಬೇಗ ಬೆಂಗಳೂರು ತಲುಪ ಬೇಕಿತ್ತು ಆದರೂ ಸಹಾಯ ಮಾಡಿದ ಆ ಚಾಲಕನ ಸಲಹೆಯಂತೆ ೧೦ ನಿಮಿಷಗಳ ವಿಶ್ರಾಂತಿಯ ನಂತರ ವಾಸನೆ ಸ್ವಲ್ಪ ಕಡಿಮೆಯಾದ ಮೇಲೆ ಸುರಿಯುವ ಮಳೆಯಲ್ಲೆ ಹೊರಟೆವು ಆತನ ಊರಿನಲ್ಲಿ ಆಗಂತುಕನನ್ನಿಳಿಸಿ ಸಕಲೇಶಪುರ ಸೇರಿ ಊಟಕ್ಕೆ ಕುಳಿತಾಗ ಸಮಯ ೫ ಗಂಟೆ.

ಊಟ ಮಾಡಿ ೫.೩೦ ಕ್ಕೆ ಸಕಲೇಶಪುರದಿಂದ ಹೊರಟು ಹಿರೀಸಾವೆ ಬರುವಷ್ಟರಲ್ಲಿ ಕತ್ತಲೆ ಆವರಿಸತೊಡಗಿತು. ಕತ್ತಲಾದ ನಂತರ ವಾಹನ ಚಲನೆ ಕಷ್ಠವಾಗತೊಡಗುತ್ತದೆ. ಎದುರಿಗೆ ಬರುತ್ತಿರುವ ವಾಹನಗಳ ದೀಪ ಅದೆಷ್ಟು ಪ್ರಖರವಾಗಿ ಕ್ರೂರವಾಗಿ ಕಣ್ಣು ಕುಕ್ಕುತ್ತದೆಯೆಂದರೆ, ಇಡೀ ದಿನ ಕಣ್ಣುಗಳ ಮೂಲಕ ಮನಸ್ಸಿಗೆ ತುಂಬಿಕೊಂಡ ಆ ಪ್ರಕೃತಿ ಸೌಂದರ್ಯ ಈ ದೀಪಗಳ ಪ್ರಖರತೆಯಿಂದ ಆ ಕಣ್ಣಿನ ಮೂಲಕವೆ ಪ್ರವೇಶಿಸಿ ಮೆದುಳಿನಲ್ಲಿರುವ ಆ ದೃಶ್ಯಗಳನ್ನು EPROM ಅಳಿಸಿದಂತೆ ಅಳಿಸಿಬಿಡುತ್ತದಯೇನೋ ಎನಿಸಿ ಬಿಡುತ್ತದೆ. ಬೆಳ್ಳೂರುಕ್ರಾಸ್, ಯಡಿಯೂರು ಕುಣಿಗಲ್ ಮಾರ್ಗವಾಗಿ ಬೆಂಗಳೂರು ಸೇರಿದಾಗ ರಾತ್ರಿ ೯.೩೦.

ಚಿತ್ರಗಳು

Thursday, August 6, 2009

ಭಾರತದ ಪರಮವೀರರು: ನಾಯಕ್ ಜಾದೂನಾಥ್ ಸಿಂಗ್


೨೧ನೆ ನವೆಂಬರ್ ೧೯೧೬ ರಲ್ಲಿ ಉತ್ತರ ಪ್ರದೇಶದ ಷಹಜಹಾಂಪುರದಲ್ಲಿ ಜನನ. ೨೧ನೆ ನವೆಂಬರ್ ೧೯೪೧ ರಲ್ಲಿ ಸೈನ್ಯದಲ್ಲಿ ೧ನೆ ರಜಪೂತ್ ಗೆ ಸೇರ್ಪಡೆ.
೧೯೪೭ರ ಛಳಿಗಾಲದಲ್ಲಿ ನಡೆದ ಭಾರತದ ಮೇಲಿನ ಆಕ್ರಮಣದಲ್ಲಿ ನೌಷೇರವನ್ನು ಉಳಿಸಲು ಪ್ರಾಣ ತೆತ್ತ ವೀರ.

ಡಿಸೆಂಬರ್ ೨೪ರಂದು ಝಂಗಾರ್ ಪಾಕಿಸ್ತಾನಿ ದಾಳಿಕೋರರ ವಶವಾಯಿತು. ಇದು ಮುಂದಿನ ಆಕ್ರಮಣಕ್ಕೆ ಪಾಕಿಸ್ತಾನಿ ಸೈನಿಕರಿಗೆ ಆಯಕಟ್ಟಿನ ಜಾಗವಾಗಿ ಪರಿಣಮಿಸಿತು. ಮಿರ್ಪುರದಿಂದ ಪೂಂಛ್ ವರೆಗಿನ ಎಲ್ಲ ಸಂಪರ್ಕ ಕೇಂದ್ರಗಳು ಪಾಕಿಸ್ತಾನದ ವಶದಲ್ಲಿದ್ದದ್ದು ಅವರಿಗೆ ಇನ್ನಷ್ಟು ಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿತ್ತು. ಈ ಸದವಕಾಶವನ್ನು ಉಪಯೋಗಿಸಿಕೊಂಡು ನೌಷೇರವನ್ನು ಆಕ್ರಮಿಸುವ ಯೋಜನೆ ಪಾಕಿಸ್ತಾನಿಯರದ್ದಾಗಿತ್ತು. ಇದರ ಸುಳಿವು ದೊರೆತ ಭಾರತೀಯ ಸೈನ್ಯ ನೌಷೇರವನ್ನು ಉಳಿಸಿಕೊಳ್ಳುವ ಸಲುವಾಗಿ ಜನವರಿ ೧೯೪೮ರಲ್ಲಿ ಶತ್ರುವನ್ನು ತಡೆಯಲು ಮುಂದಾಗಿ ನೌಷೇರಾದ ವಾಯುವ್ಯಕ್ಕಿದ್ದ ಕೋಟ್ ಹಳ್ಳಿಯನ್ನು ವಶಪಡಿಸಿಕೊಂಡಿತು. ಯಾವುದೇ ತೆರನಾದ ದಾಳಿಯಿಂದ ನೌಷೇರವನ್ನು ರಕ್ಷಿಸಬೇಕಾಗಿತ್ತು.
ನೌಷೇರಾಕ್ಕೆ ಇರುವ ಎಲ್ಲ ಮಾರ್ಗಗಳಲ್ಲು ಆಯಕಟ್ಟಿನ ಜಾಗಗಳಲ್ಲಿ ಸಣ್ಣ ಸಣ್ಣ ಅಡಗುದಾಣಗಳನ್ನು ನಿರ್ಮಿಸಿ ಕಾವಲು ಹಾಕಲಾಯಿತು. ತೈನ್ಧಾರ್ ಮಾರ್ಗ ನೌಷೇರಾದ ಉತ್ತರಭಾಗಕ್ಕೆ ದಾರಿಯಾಗಿತ್ತು ಆದ್ದರಿಂದ ಇದನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿತ್ತು.

ನೀರಿಕ್ಷಿಸಿದಂತೆ ವೈರಿಗಳ ದಾಳಿ ಫೆಬ್ರವರಿ ೬ರಂದು ಮಂಜುಮುಸುಕಿದ ಮುಂಜಾನೆಯಲ್ಲಿ ತೈನ್ಧಾರ್ ಪ್ರದೇಶದಲ್ಲಿ ಪ್ರಾರಂಭವಾಗಿತ್ತು. ಮದ್ದು ಗುಂಡುಗಳು ಹಾರಾಡತೊಡಗಿದವು. ಶತ್ರು ಈ ಸಣ್ಣ ಅಡಗುದಾಣ ಮತ್ತು ತಡೆಯ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಲಾರಂಭಿಸಿದ. ಅದೆಷ್ಟು ಪ್ರಖರ ದಾಳಿಯೆಂದರೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಗುಂಡು ಮತ್ತು ಸಣ್ಣ ಫಿರಂಗಿಗಳ ಶಬ್ದದಿಂದ ಅನುರಣಿಸಿತು. ಇದರ ಮಧ್ಯದಲ್ಲಿಯೆ ತೈನ್ಧಾರ್ ನ ತುತ್ತ ತುದಿಯ ಮೇಲಿದ್ದ ಭಾರತೀಯ ಕಾವಲಿನ ಮೇಲೂ ದಾಳಿ ನಡೆಯಿತು. ಕತ್ತಲು ಕರಗಿ ಬೆಳಕು ಹರಿಯುವ ಸಮಯದಲ್ಲಿ ಶತ್ರು ಭಾರತೀಯ ಸೈನಿಕರ ಹತ್ತಿರಕ್ಕೆ ಬಂದು ನಿಂತಿದ್ದ. ಸೂರ್ಯನ ಬೆಳಕಿನ ಬದಲು ಭಾರತೀಯ ಸೈನಿಕರನ್ನು ಶತ್ರುವಿನ ಗುಂಡಿನ ಮೊರೆತ ಸ್ವಾಗತಿಸಿತು. ನೂರಾರು ಪಾಕಿ ಸೈನಿಕರು ನೌಷೇರಾವನ್ನು ಆಕ್ರಮಿಸುವ ಸಲುವಾಗಿ ಭಾರತೀಯ ಅಡಗುತಾಣಗಳ ಮೇಲೆ ಸತತವಾಗಿ ದಾಳಿಯಿಡುತ್ತಾ ಮುನ್ನುಗ್ಗುತ್ತಿದ್ದರು.
೨ನೆ ಅಡಗುತಾಣದಲ್ಲಿದ್ದ ನಾಯಕ್ ಜಾದೂನಾಥ್ ಸಿಂಗ್ ಅತ್ಯಂತ ಆಯಕಟ್ಟಿನ ತಾಣದ ಜವಾಬ್ದಾರಿ ಹೊತ್ತಿದ್ದರು ಈ ಅಡಗುತಾಣ ವಶವಾದರೆ ಶತ್ರು ಸುಲಭವಾಗಿ ನೌಷೇರಾಕ್ಕೆ ನಡೆದು ಬಿಡುತ್ತಿದ್ದ. ಈ ಅಪಾಯವನ್ನರಿತ ಜಾದೂನಾಥ್ ಸಿಂಗ್ ಅವರ ೯ ಜನರ ತಂಡ ಪಾಕಿಸ್ತಾನದ ನೂರಾರು ಸೈನಿಕರ ಸಂಖ್ಯೆಗೆ ಹೋಲಿಸಿದರೆ ಅತ್ಯಂತ ಪುಟ್ಟ ತಂಡ ಅದ್ಯಾವ ಪರಿ ಶತ್ರುಗಳ ಮೇಲೆ ಎಗರಿ ಬಿತ್ತೆಂದರೆ ತಮಗಿಂತ ಸಂಖ್ಯೆಯಲ್ಲಿ ೫-೬ ಪಟ್ಟು ಹೆಚ್ಚು ಜನರಿದ್ದ ಶತ್ರುಪಡೆ ಅನೀರಿಕ್ಷಿತ ಪ್ರತಿದಾಳಿಗೆ ಕಕ್ಕಾಬಿಕ್ಕಿಯಾಗಿ ದಿಕ್ಕಾ ಪಾಲಾಗಿ ಹೋಯಿತು. ಒಂದಾದ ಮೇಲೊಂದರಂತೆ ಅಲೆ ಅಲೆಯಾಗಿ ದಾಳಿ ಮಾಡುವ ಹೊಂಚು ಹಾಕಿದ್ದ ಪಾಕಿಸ್ತಾನಿ ಸೈನಿಕರು ೨ನೆ ದಾಳಿಗೆ ಸಿದ್ದರಾಗುತ್ತಿದ್ದರು. ಸಮರ್ಥ ನಾಯಕತ್ವ ಮತ್ತು ಮುಂಚೂಣಿಯಲ್ಲಿ ನಿಂತು ಕೆಚ್ಚೆದೆಯಿಂದ ಕಾದಾಡುವ ಜಾದೂನಾಥ್ ಸಿಂಗ್ ಧೈರ್ಯ ಸಾಹಸಗಳು ಶತ್ರುವಿನ ತಲೆ ಕೆಡಿಸಿತ್ತು.
ಮೊದಲನೆ ದಾಳಿಯಲ್ಲಿ ಗಾಯಾಳುವಾದ ೪ ಜನ ಸೈನಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿ, ಚದುರಿಹೋಗಿದ್ದ ತನ್ನವರನ್ನು ಒಟ್ಟು ಗೂಡಿಸಿ ಮತ್ತೊಂದು ದಾಳಿಯನ್ನು ತಡೆಯಲು ಸನ್ನದ್ದವಾಯಿತು ರಣಧೀರರ ಪಡೆ. ಈ ಬಾರಿಯಿದ್ದದ್ದು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ.
೨ನೆ ದಾಳಿ ಆರಂಭವಾಯಿತು. ಸಂಖ್ಯೆಯಲ್ಲಿ ಅತ್ಯಂತ ಚಿಕ್ಕ ಆದರೆ ಅಸಾಧಾರಣ ಧೈರ್ಯ ಕೆಚ್ಚೆದೆ ದೇಶಪ್ರೇಮವೆ ಸೊತ್ತಾಗಿದ್ದ ಚಿಕ್ಕ ತುಕಡಿ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಶತ್ರು ಶಿಬಿರದ ಬಾಗಿಲಲ್ಲೆ ಬಂದು ನಿಂತಿದ್ದ ಈ ಬಾರಿ ತಾನೂ ಸೇರಿದಂತೆ ಎಲ್ಲರೂ ಗಾಯಗೊಂಡರೂ ತನ್ನ ಸಹ ಸೈನಿಕರೊಬ್ಬರ ಕೆಳಗೆ ಬಿದ್ದಿದ್ದ ಬ್ರೆನ್ ಗನ್ನೆತ್ತಿಕೊಂಡು ತೆರೆದ ಮೈದಾನದಲ್ಲೆ ಶತ್ರುವನ್ನು ಎದುರಿಸುವುದು ಸಾಧ್ಯವಾಗುವುದು ಎಂಟೆದೆಯಿರುವವರಿಗೆ ಮಾತ್ರ. ಜಾದೂನಾಥ್ ಸಿಂಗ್ ಈ ಆಕ್ರಮಣ ಅವರ ಸಹೋದ್ಯೋಗಿಗಳಲ್ಲೂ ಹುರುಪು ತಂದಿತು. ಈ ಬಾರಿ ಜಯ ತನ್ನದೆ ಎಂದು ನಿಶ್ಚಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಕೊನೆಯ ಘಳಿಗೆಯಲ್ಲಿನ ಈ ಪರಾಕ್ರಮಿಯನ್ನು ಎದುರಿಸಲಾಗದೆ ಓಡಿಹೋಗಬೇಕಾಯಿತು.. ಹಾಗಾಗಿ ಇವರಿದ್ದ ನೌಷೇರದ ದಾರಿ ೨ನೆ ದಾಳಿಗೆ ಸಿಕ್ಕಿರೂ ಉಳಿದು ಕೊಂಡಿತು. ಯಾವುದು ವಿಜಯವಾಗಬೇಕಿತ್ತೋ ಅದು ಪರಾಜಯವಾಗಿ ಅವರನ್ನು ಹಿಂಬಾಲಿಸಿತ್ತು.

೩ ನೆ ದಾಳಿಯ ಹೊತ್ತಿಗೆ ಜಾದೂನಾಥ್ ಸಿಂಗ್ ತಂಡ ಸಂಪೂರ್ಣವಾಗಿ ಗಾಯಾಳುಗಳ ತಂಡವಾಗಿತ್ತು. ಉಳಿದಿದ್ದವರು ಮೂರು ಮತ್ತೊಂದು ಜನವಾಗಿದ್ದರು. ಈ ಬಾರಿ ಕಡೆಯದೆಂಬಂತೆ ಶತ್ರು ತನ್ನೆಲ್ಲ ಬಲವನ್ನು ಹೆಚ್ಚಿಸಿಕೊಂಡು ದಾಳಿಯಿಟ್ಟಿದ್ದ. ಜಾದೂನಾಥ್ ಒಬ್ಬನೆ ಈಗ ಉಳಿದಿದ್ದು. ತನ್ನ ಬಿಡಾರವನ್ನು ನೌಷೇರಾದ ದಾರಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಛಲದಿಂದ ಸ್ಟೆನ್ ಗನ್ ಕೈಗೆತ್ತಿಕೊಂಡರು. ಶತ್ರುವು ಬರುವ ಮೊದಲೆ ಅವರ ದಾರಿಗೆ ಅಡ್ಡಲಾಗಿ ನಿಂತು ಗಾಯಗೊಂಡಿದ್ದರೂ ಏಕಾಂಗಿಯಾಗಿ ತಾವೆ ಅವರನ್ನು ಅಡ್ಡಗಟ್ಟಿದರು..ಇವರ ಈ ದಾಳಿಯ ಪರಿಗೆ ಹತ್ತಾರು ಜನರಿದ್ದ ಶತ್ರು ಸೈನಿಕರು ತತ್ತರಿಸಿಹೋದರು. ಅಳಿದುಳಿದವರಿಂದ ಇಂತಹ ಪ್ರತಿದಾಳಿಯನ್ನು ನಿರೀಕ್ಷಿಸಿರದ ಮತ್ತು ಶತ್ರುವನ್ನು ಸರಿಯಾಗಿ ಅಂದಾಜಿಸದ ಪಾಕಿ ಸೈನಿಕರು ಈ ಬಾರಿಯು ಸಹ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗ ಬೇಕಾಯಿತು. ಈ ಅಂತಿಮ ನಿರ್ಣಾಯಕ ಹೋರಾಟದಲ್ಲಿ ಒಂದು ಗುಂಡು ಜಾದೂನಾಥ್ ಸಿಂಗ್ ರ ದೇಶಪ್ರೇಮವನ್ನು ಪರೀಕ್ಷಿಸಲು ಹೃದಯವನ್ನು ಹೊಕ್ಕರೆ ಇನ್ನೊಂದು ತಲೆ ಸೀಳಿತ್ತು.

ಆದರೆ ಜಾದೂನಾಥ್ ಸಿಂಗ್ ಅವರ ಬಂದೂಕಿನಿಂದ ಹಾರಿದ ಒಂದೊಂದು ಗುಂಡುಗಳು ಪಾಕಿಸೈನಿಕರನ್ನು ನೌಷೇರದಿಂದ ಒಂದೊಂದು ಮೈಲು ದೂರ ಕಳುಹಿಸಿತ್ತು.

ನಾಯಕ್ ಜಾದೂನಾಥರ ಈ ಅಪ್ರತಿಮ ಸಾಹಸಕ್ಕೆ ಪರಮ ವೀರಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.



ಆಧಾರ: ಸಂಗ್ರಹಿತ ಬರಹಗಳು
ಚಿತ್ರಕೃಪೆ: ಭಾರತೀಯ ಸೈನ್ಯದ ಅಂತರ್ಜಾಲ ಪುಟ

Friday, July 31, 2009

೧ ದಿನದ ಜೋಗ್ ಪ್ರವಾಸ

ದಟ್ಸ್ ಕನ್ನಡ ದಲ್ಲಿ ಹೆಚ್ಚಾಗಿ ಬರೆಯುತ್ತಿದ್ದ ತಳವಾಟದ ಪತ್ರಕರ್ತ ರಾಘವೇಂದ್ರ ಶರ್ಮ ಅವರ ಪರಿಚಯವಾಗಿದ್ದಕ್ಕೆ ಅಂತರ್ಜಾಲಕ್ಕೊಂದು ಧನ್ಯವಾದ ಹೇಳಲೇಬೇಕು. ಅವರ ಜೋಗಕ್ಕೆ ಬನ್ನಿ ಎಂಬ ಲೇಖನ ಓದಿ ಸಂಪರ್ಕಿಸಿದವನಿಗೆ ಅವರ ಮಾತುಗಳು ಆತ್ಮೀಯತೆ ಉಂಟು ಮಾಡಿದ್ದವು. ಸಾರ್, ಲಿಂಗನಮಕ್ಕಿ ತುಂಬಿ ಅಣೆಕಟ್ಟಿನಿಂದ ನೀರು ಹೊರಬಿಟ್ಟ ತಕ್ಷಣ ನನಗೆ ತಿಳಿಸಿ ತಕ್ಷಣ ಹೊರಟು ಬರ್ತೇನೆ ಎಂದವನಿಗೆ ಶರ್ಮ ನಿರಾಶೆ ಮಾಡಲಿಲ್ಲ. ೧೯೮೮ರಲ್ಲಿ ಒಮ್ಮೆ ಕಾಲೇಜಿನಿಂದ ಹೀಗೆ ಅಣೆಕಟ್ಟಿನಿಂದ ನೀರು ಬಿಟ್ಟಾಗ ಜೋಗಿಗೆ ಹೋಗಿದ್ದರಿಂದ ಜೋಗದ ಆ ವೈಭವ ಕಣ್ಣಿನಿಂದ ಮರೆಯಾಗಿರಲಿಲ್ಲ.

೦೮/೦೮/೨೦೦೭ ರಂದು ಶರ್ಮರಿಂದ ರಾತ್ರಿ ೯ ಗಂಟೆಯ ಸಮಯಕ್ಕೆ ದೂರವಾಣಿ ಕರೆಬಂತು ಅಣೆಕಟ್ಟೆಯ ಬಾಗಿಲುಗಳು ತೆರೆಯುತ್ತಿವೆ ಹೊರಟು ಬನ್ನಿ ಎಂಬ ಸಂದೇಶ. ಸರಿ ರಾತ್ರಿಯಲ್ಲಿ ಕಾರು ಚಲಾಯಿಸಿಕೊಂಡು ಹೋಗುವುದು ಕಷ್ಟಕರ. ಬರುವ ಇಂಗಿತ ವ್ಯಕ್ತಪಡಿಸಿದ ಪತ್ನಿಗೆ ಸಾಧ್ಯವಿಲ್ಲವೆಂದು ತಿಳಿಸಿ, ಹೇಗೆ ಹೋಗೋದು ಎಂದು ಯೋಚಿಸುತ್ತಿದ್ದವನಿಗೆ ಸಹಾಯ ಮಾಡಿದ ಪತ್ನಿಗೊಂದು ಧನ್ಯ್ವಾದ ಅರ್ಪಿಸದಿದ್ದರೆ ಜೊತೆಯಲ್ಲಿ ಕರೆದೊಯ್ಯದಿದ್ದಕ್ಕೆ ಕೋಪಿಸಿಕೊಂಡಿದ್ದ ಪತ್ನಿಯ ಕೋಪಕ್ಕೆ ತುಪ್ಪ ಸುರಿದಂತೆಯೆ ಸೈ. ೧೧.೩೦ಕ್ಕೆ ಹೊರಡುವ ಶಿವಮೊಗ್ಗೆಯ ರೈಲಿಗೆ ಬಟ್ಟೆ ಚೀಲಕ್ಕೆ ತುಂಬಿಕೊಂಡವನು ಮನೆಯವರಿಗೆಲ್ಲ ಕೈಬೀಸಿ ಬಸ್ ನಿಲ್ದಾಣಕ್ಕೆ ನಡೆದೆ. ಬಿ.ಇ.ಎಲ್ ವೃತ್ತದಲ್ಲಿ ಬಸ್ಸಿನಿಂದಿಳಿದು ಗೊರಗುಂಟೆ ಪಾಳ್ಯದವರೆಗೆ ಖಾಸಗಿ ವಾಹನವೊಂದರಲ್ಲಿ ಬಂದಿಳಿದಾಗ ರಾತ್ರಿ ೧೦.೩೦. ಟಿಕೆಟ್ ಕಾದಿರಿಸುವುದು ಸಾಧ್ಯವಿಲ್ಲ ಎಂದು ತಿಳಿದು ಬಂತು. ಸರಿಯಾಗಿ ೧೧.೪೫ ಕ್ಕೆ ರೈಲು ನಿಲ್ದಾಣಕ್ಕೆ ಬಂತು. ಟಿಕೆಟ್ ಕಾದಿರಿಸಿರಲಿಲ್ಲವಾದ್ದರಿಂದ ಸಾಮಾನ್ಯ ಬೋಗಿಗೆ ನುಗ್ಗಿದೆ. ಎಲ್ಲ ಆಸನಗಳೂ ಭರ್ತಿಯಾಗಿದ್ದವು. ಟಿ.ಟಿ ಯನ್ನು ಹುಡುಕಿ ಮಲಗಲು ಜಾಗ ಸಿಕ್ಕಾಗ ರೈಲು ತುಮಕೂರು ತಲುಪಿತ್ತು. ಭದ್ರಾವತಿ ಬಳಿ ಬಂದಾಗ ಎಚ್ಚರಗೊಂಡೆ ಸಮಯ ೫ ಗಂಟೆಯಿರಬೇಕು.

ರೈಲಿನ ಹಳಿಯ ಪಕ್ಕದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳಗಳು ಬಿದ್ದಿದ್ದ ಮಳೆಯ ಪ್ರಮಾಣದ ಸಂಕೇತವಾಗಿದ್ದವು. ಶಿವಮೊಗ್ಗ ನಿಲ್ದಾಣ ತಲುಪಿದಾಗ ೬ ಗಂಟೆ. ನಿಲ್ದಾಣದಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸಿ ಹೊರಗೆ ನಿಂತಿದ್ದ ಬಸ್ ಹಿಡಿದೆ. ಸೀಟ್ ಸಿಗುವ ಲಕ್ಷಣವಿರಲಿ ಒಳಗೆ ಹೋಗಲೂ ಜಾಗವಿರದ ಬಸ್ಸಿನಲ್ಲಿ ಹೇಗೋ ತೂರಿಕೊಂಡು ಒಳಸೇರಿದೆ. ೮ ಗಂಟೆಗೆ ಸಾಗರ ತಲುಪಿಸಿದ ಪುಣ್ಯಾತ್ಮ. ನೇರವಾಗಿ ಅಕ್ಕನ ಮನೆಗೆ ನಡೆದೆ. ಸ್ನಾನ ಮಾಡಿ ಅಕ್ಕ ಕೊಟ್ಟ ತಿಂಡಿ ತಿಂದು. ಸೀದಾ ಬಸ್ ನಿಲ್ದಾಣಕ್ಕೆ ಬಂದು ತಳವಾಟದ ಕಡೆಯ ಬಸ್ ಹತ್ತಿದೆ. ೧೦ ನಿಮಿಷದಲ್ಲಿ ತಳವಾಟದಲ್ಲಿಳಿದಿದ್ದೆ. ಬೈಕಿನಲ್ಲಿ ಬಂದ ಶರ್ಮ ಪರಿಚಯದ ನಂತರ ಅವರ ಬೈಕಿನಲ್ಲಿ ಕುಳಿತವನಿಗೆ ಜೀವ ಬಾಯಿಗೆ ಬರುವುದೊಂದು ಬಾಕಿ ಅವರು ಆ ಜಾರುವ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಪರಿ ಆ ರೀತಿಯಿತ್ತು. ಇವರೇನಾದ್ರು ಮುಂಚೆ ಯಾವ್ದಾದ್ರೂ ಬೈಕ್ ರೇಸ್ಗೆ ಹೋಗಿದ್ರೇನಪ್ಪ ಅನ್ಸಿತ್ತು. ೨ ನಿಮಿಷದಲ್ಲಿ ಬೈಕ್ ಮನೆ ಮುಂದೆ ನಿಂತಿತ್ತು, ನನಗೆ ಹೋಗುತ್ತಿದ್ದ ಜೀವ ಮರಳಿ ಬಂದಿತ್ತು. ವಾವ್ ಎಂತಹ ಸುಂದರ ಪರಿಸರದ ಮನೆ ಅಂತೀರಿ. ಯಾರಾದ್ರು ಲೇಖಕರು ಬರೆಯಲಿಕ್ಕೆ ಕುಳಿತರೆ ಆ ಮನೆಯ ಬಗ್ಗೆ ಒಂದು ಪುಸ್ತಕ ಬರೆಯಬಹುದೇನೊ? ನನ್ನನ್ನು ಅತಿಯಾಗಿ ಸೆಳೆದದ್ದು ಕೊಟ್ಟಿಗೆಯಲ್ಲಿದ್ದ ಹಸುವಿನ ಕರು.

ಸ್ನಾನ ಸಂಧ್ಯಾವಂದನೆ ಮುಗಿಸಿದ ಶರ್ಮರೊಡನೆ ಮತ್ತೊಂದು ಸುತ್ತಿನ ತಿಂಡಿ. ಶರ್ಮ ಅವರ ಮಗ, ಶರ್ಮ ಅವರ ಅಣ್ಣನ ಮಗಳು ಮತ್ತು ನನ್ನನ್ನು ಹೊತ್ತ ಮಾರುತಿ ಓಮ್ನಿ ಜೋಗಿನ ದಾರಿ ಹಿಡಿಯಿತು. ಚೈನಾ ಗೇಟ್ ಬಳಿ ಇನ್ನೇನು ಸೇತುವೆ ಯ ಮೇಲ್ಭಾಗವನ್ನು ತಲುಪುವಂತೆ ಹರಿಯುತ್ತಿದ್ದ ಕೆಂಪು ಬಣ್ಣದ ಶರಾವತಿ ಭಯ ಹುಟ್ಟಿಸಿದಳು. ನನಗೋ ಬೇಗ ಜಲಪಾತ ತಲುಪುವ ಕಾತರ. ೧೦ ನಿಮಿಷಗಳಲ್ಲಿ ಜಲಪಾತದೆದುರಿಗೆ ನಿಂತಿದ್ದೆವು. ಅಣೆಕಟ್ಟೆಯ ೮ ಬಾಗಿಲುಗಳನ್ನು ತೆರೆಯಲಾಗಿತ್ತು. ೧೧ ಬಾಗಿಲುಗಳು ತೆರೆದರೆ ಜಲಪಾತದ ೪ ಕವಲುಗಳು ಕೂಡಿಕೊಳ್ಳುತ್ತವೆ ಎಂದು ಶರ್ಮ ಮಾಹಿತಿಯಿತ್ತರು. ನಾನು ಜಲಪಾತದ ಕಡೆ ಗಮನ ನೆಟ್ಟಿದ್ದರೆ ಇದು ಸಾಮಾನ್ಯ ದೃಶ್ಯವಾದ್ದರಿಂದ ಶರ್ಮರ ದೃಷ್ಠಿ ಬೇರೆ ಕಡೆಯಿದ್ದದ್ದು ನನ್ನ ಗಮನಕ್ಕೆ ಬರಲೇ ಇಲ್ಲ. ಹೌದು ಜೋಗದ ವೈಭವವನ್ನು ಅದು ತುಂಬಿ ಹರಿಯುವಾಗಲೇ ಸವಿಯಬೇಕು. ಆಗಾಗ ಮೋಡಗಳು ಜಲಪಾತವನ್ನು ಮರೆಮಾಚುತ್ತಿದ್ದವು ಸ್ವಲ್ಪ ಸಮಯಕ್ಕೆ ಮತ್ತೆ ಗೋಚರಿಸಿದಾಗ ನೆರೆದಿದ್ದ ಜನರಿಂದ ಉತ್ಸಾಹದ ಕೇಕೆ. ಸುಮಾರು ೧ ಗಂಟೆಯ ನಂತರ ಅಲ್ಲಿಂದ ಹೊರಟು ಪ್ರತಿಯೊಂದು ಕವಲುಗಳನ್ನು ನೋಡಲು ಎದುರಿಗೆ ಕಾಣುವ ಅತಿಥಿಗೃಹದ ಕಡೆ ಹೊರಟೆವು. ನಾನಿಲ್ಲೆ ಇರ್ತೀನಿ ನೀವು ನೋಡ್ಕೊಂಡು ಬನ್ನಿ ಎಂದರು ಶರ್ಮ.

ಜಲಪಾತ ಉಂಟಾಗುತ್ತಿದ್ದ ಬಳಿ ನಿಂತವನಿಗೆ ಕೆಲವರು ಗದರಿದರು. ಅಲ್ಲಿಂದ ಹೊರಟು ಬಂದು ನೇರವಾಗಿ ಶರ್ಮ ಅವರ ಮನೆಯಲ್ಲಿ ಹಲಸಿನ ಹಪ್ಪಳ ತಿಳಿಸಾರಿನ ಊಟ. ಲೊಟ್ಟೆ ಹೊಡ್ಕೊಂಡು ಊಟ ಮಾಡಿದ್ದು ಮತ್ತು ಉಪ್ಪಿನ ಕಾಯಿಯ ರುಚಿ ನನ್ನ ನಾಲಿಗೆಗೆ ಇನ್ನೂ ನೆನಪಿದೆ. ಆಗಾಗ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿತ್ತು. ಅವರು ಬರೆದ ಜೇನಿನ ಪುಸ್ತಕ ಸಾಕಿದ್ದ ಜೇನುಗಳು ಕೊಟ್ಟಿಗೆಯಲ್ಲಿದ್ದ ಲಕ್ಷಿಯ ಮಗಳು ಎಲ್ಲವನ್ನು ಕ್ಯಾಮೆರಾದಲ್ಲಿ ತುಂಬಿಕೊಂಡು ೨ ಗಂಟೆ ಸುಮಾರಿಗೆ ತಳವಾಟದ ಬಸ್ ನಿಲ್ದಾಣಕ್ಕೆ ಬಂದು ನಿಂತ ಸ್ವಲ್ಪ ಸಮಯಕ್ಕೆ ಸಾಗರದ ಬಸ್ ಬಂತು. ಭಾವ ಆ ಸಮಯಕ್ಕೆ ಬೆಂಗಳೂರಿಗೆ ರೈಲು ಟಿಕೆಟ್ ಕಾದಿರಿಸಿದ್ದರು. ಅವರಿಗೊಂದು ನಮಸ್ಕಾರ ತಿಳಿಸಿ. ಶಿವಮೊಗ್ಗದ ಬಸ್ ಹಿಡಿದೆ. ಭಾವನ ಸ್ನೇಹಿತರು ರೈಲಿನ ಟಿಕೆಟ್ ಕೊನೆಯ ಕ್ಷಣದಲ್ಲಿ ತಲುಪಿಸಿದರು. ಸಮಯಕ್ಕೆ ಸರಿಯಾಗಿ ಹೊರಟ ರೈಲು ಬೆಳಿಗ್ಗೆ ೫ ಗಂಟೆಗೂ ಮುನ್ನವೇ ಯಶವಂತಪುರ ತಲುಪಿತ್ತು. ಮುಂಚೆಯೇ ತಿಳಿಸಿದ್ದರಿಂದ ತಂದೆ ದ್ವಿಚಕ್ರದೊಡನೆ ಕಾಯುತ್ತಿದ್ದರು. ಮನೆಗೆ ಬಂದು ಸಣ್ಣದೊಂದು ನಿದ್ದೆ ತೆಗೆದು ೮ ಗಂಟೆಗೆ ಕಛೇರಿ ತಲುಪಿದೆ. ಒಂದೇ ದಿನದಲ್ಲಿ ಜೋಗಿಗೆ ಹೋಗಿಬಂದೆ ಎಂದವನ ಮಾತನ್ನು ನಂಬಲು ಯಾರೂ ಸಿದ್ದರಿರಲಿಲ್ಲ. ಇಂತಹ ಒಂದು ಪ್ರವಾಸ ಸಾಧ್ಯವಾಗಿದ್ದು ರಾಘವೇಂದ್ರ ಶರ್ಮ ಅವರ ಸಮಯೋಚಿತ ಸಹಾಯದಿಂದ. ಎಂತಹ ಅಪರಿಚಿತರಿಗಾದರೂ ಸಹಾಯ ಮಾಡುವ ಮಲೆನಾಡಿಗರ ಗುಣ ನನಗೆ ಅತ್ಯಂತ ಅಚ್ಚುಮೆಚ್ಚು. ಅದೆಷ್ಟೆ ಅಪರಿಚಿತರಾದರೂ ಊಟ ಮಾಡಿಕೊಂಡೇ ಹೋಗಬೇಕೆಂದು ಪಟ್ಟು ಹಿಡಿಯುವ ಅವರ ಗುಣಗಳು ಸಕ್ಕತ್. ಅದು ತಳವಾಟದ ರಾಘವೇಂದ್ರ ಶರ್ಮ ಅವರಿರಬಹುದು ಉಂಚಳ್ಳಿ ಜಲಪಾತದ ಬಳಿಯ ಹೆಗಡೆಯವರಿರಬಹುದು ಸಹಸ್ರಲಿಂಗದ ಬಳಿಯ ಶಿವಾನಂದ್ ಇರಬಹುದು ಅಥವಾ ಯಲ್ಲಾಪುರದ ಗೀತಾಭವನದ ಭಾಗವತರಿರಬಹುದು. ನಾನಂತು ಒಂದು ಗಾದೆಯನ್ನೆ ಹೀಗೆ ಪರಿವರ್ತಿಸಿದ್ದೇನೆ. "ಮಲೆನಾಡಿನ ನೋಟ ಚೆನ್ನ ಹವ್ಯಕರ ಮನೆ ಊಟ ಚೆನ್ನ". ೧ ದಿನ ೨ ರಾತ್ರಿಗಳಲ್ಲಿ ಜೋಗದ ಪ್ರವಾಸ ಮುಗಿಸಿ ಬಂದ ನನ್ನಿಂದ ಸ್ಪೂರ್ತಿಗೊಂಡ ಸುಮಾರು ಹತ್ತು ಜನ ಆ ವರ್ಷ ಜೋಗಿಗೆ ಭೇಟಿಯಿತ್ತರು.

ಪ್ರವಾಸಕ್ಕೆ ಬನ್ನಿ ಆದರೆ ಸ್ವಚ್ಚತೆ ಕಾಪಾಡಿ ಎಂಬ ಶೀರ್ಷಿಕೆಯಡಿ ಶರ್ಮ ಅವರು ಅಂದು ನಾವೆಲ್ಲ ಜಲಪಾತ ನೋಡುವುದರಲ್ಲಿ ಮೈಮರೆತಾಗ ತೆಗೆದ ಚಿತ್ರಗಳು ನಮಗೆಲ್ಲ ನಾಚಿಕೆ ತರಿಸುವಂತಿದ್ದವು.

ಹಾಂ! ೨ ವರ್ಷಗಳ ನಂತರ ಈಗೇಕೆ ಇದೆಲ್ಲ ಎಂದು ಅನುಮಾನ ನಿಮಗೆ ಬಂದಿರಬಹುದು. ಇಂದೂ ಕೂಡ ರಾಘವೇಂದ್ರ ಶರ್ಮ ದೂರವಾಣಿಯಲ್ಲಿ ಹೇಳಿದ್ದು ಲಿಂಗನಮಕ್ಕಿಯ ನೀರಿನ ಮಟ್ಟ ೧೮೦೭ ಅಡಿ ತಲುಪಿದೆ ೧೮೧೨ ಅಡಿ ತಲುಪಿದರೆ ಅಣೆಕಟ್ಟೆಯ ಬಾಗಿಲುಗಳು ತೆರೆಯುವ ಸಾಧ್ಯತೆಗಳಿವೆ ಬರ್ತೀರಾ ಎಂದು ಕೇಳಿದಾಗ ಹಳೆಯದೆಲ್ಲ ನೆನಪು ಬಂತು ಅದರ ಫಲವೇ ಈ ಕೊರೆತ. ನಾನಂತೂ ಅವರ ದೂರವಾಣಿಗೆ ಕಾಯ್ತಾ ಇದ್ದೇನೆ, ನೀವೂ ಜೊತೆಯಾಗಿ. ಅಂದಹಾಗೆ ನೆನಪಿರಲಿ ಬೆಂಗಳೂರಿನಿಂದ ಸುಮಾರು ೪೦೦ ಕಿ.ಮೀ ದೂರದಲ್ಲಿರುವ ವಿಶ್ವವಿಖ್ಯಾತ ಜೋಗ್ ಜಲಪಾತವನ್ನು ೨ ರಾತ್ರಿ ಮತ್ತು ಒಂದು ದಿನದ ಅವಧಿಯಲ್ಲಿ ಭೇಟಿ ಕೊಟ್ಟು ಹಿಂತಿರುಗಬಹುದು. ಜೋಗದ ಸನಿಹದಲ್ಲೆ ತಳವಾಟದ ಯುವಕರು ನಿರ್ಮಿಸಿ ನಿರ್ವಹಿಸುತ್ತಿರುವ ಉಳಿಮನೆ (ಹೋಂಸ್ಟೇ) ನಿಮಗೆ ಸಹಾಯವಾಗಬಲ್ಲುದು. ರಾಘವೇಂದ್ರ ಶರ್ಮರ ಬ್ಲಾಗ್ ವಿಳಾಸ ಪಕ್ಕದಲ್ಲಿದೆ. ನೀವೂ ಪ್ರಯತ್ನಿಸಿ.

Thursday, July 23, 2009

ಹಾಸ್ಯ ಪ್ರಸಂಗ


ನನ್ನ ಕಾಲೇಜು ದಿನಗಳಲ್ಲಿ ನಡೆದ ಹಾಸ್ಯ ಪ್ರಸಂಗ

ಕಾಲೇಜಿದ್ದಿದ್ದೇ ಪಟ್ಟಣದ ಮಧ್ಯ ಭಾಗದಲ್ಲಿ. ಸಹಪಾಠಿಗಳಾದ ನಟ ಮತ್ತು ಮಂಜು ಬಾಲ್ಯ ಸ್ನೇಹಿತರು. ನಟರಾಜನಿಗೆ ನಾವಿಟ್ಟ ಅಡ್ಡಹೆಸರು ನರ್ವಸ್ ನಟ ಅನ್ವರ್ಥವಾಗಿತ್ತು. ನಟ ಕಾಲೇಜಿಗೆ ಬರ್ಬೇಕಾದ್ರೆ ಸಂತೆಬೀದಿಯಲ್ಲೆ ಬರ್ಬೇಕಿತ್ತು. ನಮ್ ಕಾಲೆಜಿದ್ದಿದ್ದು ಬಿ ಹೆಚ್ ರಸ್ತೆಯ ಒಂದು ಕಲ್ಲಿನ ಕಟ್ಟಡದ ಮೊದಲನೆ ಮಹಡಿಯಲ್ಲಿ. ಕಲ್ಪತರು ಕಾಲೇಜಿಗೆ ಹೋಗುವ ಹುಡುಗಿಯರನ್ನೆಲ್ಲ ನೋಡ್ಕೊಂಡು ನಿಲ್ಲುವ ನಮ್ಗಂತೂ ಮೊದಲ ಮಹಡಿ ಅಚ್ಚುಮೆಚ್ಚಿನ ತಾಣ.

ಮಾಮೂಲಿನಂತೆ ಗಾಭರಿಗೊಂಡಿದ್ದ ಭಯ ಮಿಶ್ರಿತ ಕಣ್ಣುಗಳ ನಟ ಸ್ವಲ್ಪ ಓಡೋಡ್ಕೊಂಡೆ ಬಂದ. ಅವನ ಗಾಭರಿಯ ಪರಿಚಯವಿದ್ದ ನಮ್ಗ್ಯಾರಿಗೂ ಅದು ಅಸಹಜವೆನಿಸಲಿಲ್ಲ. ಮಂಜುವಿನ ಬಳಿಗೆ ಬಂದವನೆ, "ಮಂಜ ಸಂತೆಬೀದಿ ಸರ್ಕಲ್ನಲ್ಲಿ ಸೈಕಲ್ನಲ್ಲಿ ಬರ್ಬೇಕಾದ್ರೆ ದಾರಿಗೆ ಒಂದು ಮುದುಕಿ ಅಡ್ಡ ಬಂದ್ಬಿಟ್ಲು ಕಣೋ". "ಡ್ಯಾಶ್ ಹೊಡೆದ್ಬಿಡ್ತಾ ಇದ್ದೆ. ಹೊಡೆದಿದ್ರೆ ಅಷ್ಟೆ ಪೀಸ್ ಪೀಸ್ ಆಗೋಗ್ತಾ ಇದ್ಲು" ಎಂದು ಬೆವರೊರೆಸಿಕೊಂಡ. ಮಂಜು ತಲೆ ಮೇಲೆ ಐಸ್ ಇಟ್ಕೊಂಡವನ ಹಾಗೆ ಹೇಳಿದ

"ಒಳ್ಳೆದಾಗ್ತಿತ್ತಲ್ಲೊ ನಾವೆಲ್ರೂ ಒಂದೊಂದ್ ಪೀಸ್ ಗೆ ಲೈನ್ ಹೊಡಿಬಹುದಿತ್ತಲ್ಲೊ"
.
.
.
.
.
( ಹರೆಯದ ಹುಡುಗಿಯರನ್ನು "ಪೀಸ್" (ತುಂಡು) ಅಂತ ಹರೆಯದ ಹುಡುಗರು ಕರೆಯುತ್ತಿದ್ದದ್ದು ನಮ್ಮೂರ್ಕಡೆ ಚಾಲ್ತಿಯಲ್ಲಿತ್ತು)

Sunday, July 19, 2009

ಭಾರತದ ಪರಮವೀರರು: ಮೇಜರ್ ಸೋಮನಾಥಶರ್ಮ

ಸೈನಿಕನಾಗುವುದು ಮನೆತನದ ಸಂಪ್ರದಾಯವೆನಿಸುವಂತಿದ್ದ ಕುಟುಂಬವೊಂದರಲ್ಲಿ ಮೇಜರ್ ಜನರಲ್ ಅಮರನಾಥಶರ್ಮ ಅವರ ಸುಪುತ್ರ ಸೋಮನಾಥಶರ್ಮ ಹುಟ್ಟಿದ್ದು ೧೯೨೩ ರ ಜನವರಿ ೩೧ರಂದು ಹಿಮಾಚಲ ಪ್ರದೇಶದಲ್ಲಿ. ತಂದೆಯಂತೆ ಮಕ್ಕಳು ನೂಲಿನಂತೆ ಸೀರೆ ಎಂಬ ಗಾದೆಯಂತೆ ತಾನೂ ಸೈನ್ಯ ಸೇರಿದ್ದು ೨೨ ನೇ ಫೆಬ್ರವರಿ ೧೯೪೨ರಲ್ಲಿ. ಎರಡನೆ ವಿಶ್ವ ಮಹಾಯುದ್ದದಲ್ಲಿ ಪಾಲ್ಗೊಂಡು ಆರಾಕನ್ ಆಪರೇಶನ್ಸ್ ನಲ್ಲಿ ಶೌರ್ಯ ಮೆರೆದದ್ದು ಹೆಮ್ಮೆ.

೨೨ನೆ ಅಕ್ಟೋಬರ್ ೧೯೪೭ರಲ್ಲಿ ಪಾಪಿಸ್ತಾನದ ಆದಿವಾಸಿಗಳ ಸೋಗಿನಲ್ಲಿ ಭಾರತದ ಮೇಲೆರಗಿ ಶ್ರೀನಗರವನ್ನು ಆಕ್ರಮಿಸಲು ಮುಂದಾಗ ಎಚ್ಚೆತ್ತ ಸರ್ಕಾರ ಅಕ್ಟೋಬರ್ ೨೬ರಂದು ಜಮ್ಮು ಕಾಶ್ಮೀರ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಿ ಗಡಿಯಲ್ಲಿ ನುಸುಳಿದ್ದ ಪಾಕಿ ಸೈನಿಕರನ್ನು ತೆರವುಗೊಳಿಸಲು ಸೈನಿಕರನ್ನು ನಿಯೋಜಿಸಿತು. ಈ ಹೊತ್ತಿಗಾಗಲೆ ಶ್ರೀನಗರದ ಹತ್ತಿರ ಬಂದಿದ್ದ ಶತ್ರು ಸೈನಿಕರು ಆಯಕಟ್ಟಿನ ಜಾಗಗಳಲ್ಲಿ ತಳವೂರಿದ್ದರು. ಶ್ರೀನಗರವನ್ನು ಸುತ್ತುವರೆದಿದ್ದ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತೀಯ ಸೈನಿಕರ ಮೊದಲ ದಂಡು ಶ್ರೀನಗರಕ್ಕೆ ಬಂದಿಳಿದದ್ದು ಅಕ್ಟೋಬರ್ ೨೭ರಂದು.

ಹಾಕಿಯಾಟವಾಡುತ್ತಿದ್ದಾಗ ಆದ ಕೈಮುರಿತಕ್ಕಾಗಿ ಕೈಗೆ ಪಟ್ಟಿ ಸುತ್ತಿಸಿಕೊಂಡಿದ್ದ ಸ್ಥಿತಿಯಲ್ಲಿ ಯುದ್ದ ಭೂಮಿಗೆ ಹೋಗಲು ಸಾಧ್ಯವಿಲ್ಲವೆಂದು ತಿಳಿಸಿದರೂ ಮೇಜರ್ ಸೋಮನಾಥಶರ್ಮ ತನ್ನ ದಂಡಿಗೆ ತಾನೆ ನಾಯಕರಾಗಿ ಹೊರಟರು. ಅಕ್ಟೋಬರ್ ೩೧ರಂದು ಮೇಜರ್ ಸೋಮನಾಥಶರ್ಮರ ಸೈನಿಕರನ್ನು ವಿಮಾನದ ಮೂಲಕ ಶ್ರೀನಗರದಲ್ಲಿಳಿಸಲಾಯಿತು.ಈ ಹೊತ್ತಿಗಾಗಲೆ ಭಾರತೀಯ ಸೈನಿಕ ಪ್ರತಿದಾಳಿಗೆ ತತ್ತರಿಸಿದ್ದ ಪಾಕಿಸ್ತಾನಿ ಸೈನಿಕರು ಗೆರಿಲ್ಲಾ ಮಾದರಿ ಯುದ್ದಕ್ಕೆ ಶರಣಾಗಿ ಶ್ರೀನಗರವನ್ನು ಆಕ್ರಮಿಸುವ ಹುನ್ನಾರದಲ್ಲಿದ್ದರು. ಶ್ರೀನಗರದ ಉತ್ತರದಿಂದ ಉಂಟಾಗುವ ಆಕ್ರಮಣವನ್ನು ತಡೆಯಲು ೩ ದಂಡುಗಳನ್ನು ನವೆಂಬರ್ ೩ರಂದು ಬಡಗಾಂ ಹಳ್ಳಿಯ ಬಳಿ ನಿಯೋಜಿಸಲಾಯಿತು. ತಕ್ಷಣವೆ ಅಲ್ಲೊಂದು ಸೈನಿಕ ನೆಲೆಯನ್ನು ಸ್ಥಾಪಿಸಿ ಸೈನಿಕರು ತಮ್ಮ ಕಾರ್ಯಾಚರಣೆಗಿಳಿದರು.

ಮೇಜರ್ ಸೋಮನಾಥಶರ್ಮರ ತಂಡ ಬಡಗಾಂನ ದಕ್ಷಿಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮಧ್ಯಾಹ್ನ ೨.೩೫ರವರೆಗೂ ಶತ್ರುಗಳ ಯಾವುದೇ ಸುಳಿವು ದೊರೆಯಲಿಲ್ಲ. ಆದರೂ ಸೋಮನಾಥರಿಗೆ ೩ ಗಂಟೆಯವರೆಗೆ ಅಲ್ಲೆ ಮುಂದುವರೆಯಲು ಸೂಚನೆ ಬಂತು.ಆಗ ಬಂತು ನೋಡಿ ಸಣ್ಣ ಹಳ್ಳವೊಂದರ ಮರೆಯಿಂದ ಇರುವೆಗಳು ಬಂದಂತೆ ಶಸ್ತ್ರಾಸ್ತ್ರ ಮದ್ದು ಗುಂಡು ಸ್ವಯಂಚಾಲಿತ ಬಂದೂಕುಗಳನ್ನೊಳಗೊಂಡ ೭೦೦ ಶತ್ರು ಸೈನಿಕರ ದಂಡು ಮೇಜರ್ ಶರ್ಮರವರ ಪಶ್ಚಿಮ ದಿಕ್ಕಿನಿಂದ ಆಕ್ರಮಿಸಿತು. ಸಂಖ್ಯೆಯಲ್ಲಿ ತನಗಿಂತ ೨-೪ ಪಟ್ಟು ಹೆಚ್ಚಿದ್ದ ಶತ್ರುವನ್ನು ತಡೆಹಿಡಿಯುವುದು ಕಷ್ಟವಾಗತೊಡಗಿತು. ತಮ್ಮ ಕಡೆಯ ಮದ್ದುಗುಂಡುಗಳು ಕಡಿಮೆಯಾಗುತ್ತಿತ್ತು ಶತ್ರುಗಳು ಹತ್ತಿರ ಬರಲಾರಂಭಿಸಿದ್ದು ಸ್ಪಷ್ಟವಾಗತೊಡಗಿತು. ಕೈಯಲ್ಲಿ ಬ್ಯಾಂಡೇಜ್ ಕಟ್ಟಿದ್ದರೂ ಸೈನಿಕರ ಬಂದೂಕುಗಳಿಗೆ ಗುಂಡು ತುಂಬಿಸುತ್ತಾ ಅವನ್ನು ತನ್ನ ಹುಡುಗರಿಗೆ ತೆರೆದ ಮೈದಾನದಲ್ಲಿ ಶತ್ರುಗಳ ನೇರ ದಾಳಿಗೆ ಗುರಿಯಾಗುವ ಅಪಾಯವಿದ್ದರೂ ರವಾನಿಸುತ್ತಾ ಮೇಜರ್ ಶರ್ಮ ತನ್ನ ತಂಡವನ್ನು ರಕ್ಷಿಸುತ್ತಾ ಶತ್ರು ಸೈನ್ಯ ಮುಂದೆ ಬರದಂತೆ ತಡೆಯುವಲ್ಲಿ ಯಶಸಸ್ವಿಯಾದರೂ ಅದು ಹೆಚ್ಚು ಸಮಯ ಸಾಧ್ಯವಿಲ್ಲವೆಂದು ಅವರಿಗೆ ಅರಿವಾಗಿತ್ತು. ಈ ಮಧ್ಯೆ ಶತ್ರುಗಳು ಸಫಲರಾದರೆ ಇಡೀ ಶ್ರೀನಗರ ಮತ್ತು ಶ್ರೀನಗರದ ವಿಮಾನ ನಿಲ್ದಾಣ ಶತ್ರುಗಳ ಪಾಲಾಗುವುದು ನಿಶ್ಚಿತವೆಂದರಿತ ಮೇಜರ್ ಶರ್ಮ ಭಾರತೀಯ ವಿಮಾನಗಳು ಶತ್ರುಗಳ ಗುರಿಗೆ ಸಿಗದಂತೆ ತಡೆಯನ್ನು ನಿರ್ಮಿಸಿದರು. ಈಗಾಗಲೆ ಶತ್ರುವು ತನ್ನ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಭಾರತೀಯರ ಕಡೆ ಹೆಚ್ಚು ನಷ್ಟವುಂಟಾಗತೊಡಗಿತು. ಶಸ್ತ್ರಾಸ್ತ್ರಗಳು ಖಾಲಿಯಾಗತೊಡಗಿದವು. ಮೇಜರ್ ಶರ್ಮ ಪಕ್ಕದಲ್ಲೆ ಇದ ಶತ್ರಾಸ್ತ್ರ ಸಂಗ್ರಹಕ್ಕೆ ಕೈಬಾಂಬೊಂದನ್ನು ಬಂದು ಬಿತ್ತು.

ಆದರೆ ಭಾರತೀಯ ಕೆಚ್ಚೆದೆಯ ಯೋಧರು ಪಾಕಿಸ್ತಾನಿ ಸೈನಿಕರು ಮುಂದೆ ಬರದಂತೆ ೬ ಗಂಟೆಗಳ ಕಾಲ ತಡೆಹಿಡಿದರು ಅಷ್ಟು ಸಮಯ ಸಾಕಾಗಿತ್ತು ಭಾರತೀಯರ ಇತರ ದಂಡುಗಳು ಬಂದು ಸೇರಿಕೊಳ್ಳಲು ಮುಂದಿನದ್ದೆಲ್ಲ ಇತಿಹಾಸ. ಮೇಜರ್ ಶರ್ಮ ಸೇರಿದಂತೆ ಇನ್ನೂ ೨೧ ಜನ ಸೈನಿಕರನ್ನು ಪಾಕಿಸ್ತಾನದ ಸೈನ್ಯ ಬಲಿ ತೆಗೆದುಕೊಂಡಿತ್ತು.

೧೯೪೮ರಲ್ಲಿ ಪ್ರಪ್ರಥಮ ಬಾರಿಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಅಪ್ರತಿಮ ಸಾಹಸ ಮೆರೆದ ಮೇಜರ್ ಸೋಮನಾಥಶರ್ಮರಿಗೆ ಪರಮವೀರ ಚಕ್ರ (ಮರಣೋತ್ತರ) ಪ್ರಶಸ್ತಿ ಪ್ರಧಾನ ಮಾಡಲಾಯಿತು. ೧೯೮೮ ರಿಂದ ೧೯೯೦ ರವರೆಗೆ ಈ ಮೇಜರ್ ಸೋಮನಾಥಶರ್ಮ ಅವರ ಸಹೋದರ ಜನರಲ್ ವಿ.ಎನ್ ಶರ್ಮ ಭಾರತೀಯ ಸೈನ್ಯದ ಅತ್ಯುನ್ನತ ಹುದ್ದೆ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದರು ಎಂಬುದು ಗಮನಾರ್ಹ.

ಮೇಜರ್ ಸೋಮನಾಥರಿಂದ ಬಂದ ಕೊನೆಯ ಸಂದೇಶ.

ಶತ್ರು ನಮ್ಮಿಂದ ಕೇವಲ ೫೦ ಯಾರ್ಡಗಳಷ್ಟು ದೂರದಲ್ಲಿದ್ದಾನೆ. ನಾವು ಅವರಿಗಿಂತ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದೇವೆ. ನಾವು ಅತ್ಯಂತ ತೀವ್ರತರ ಗುಂಡಿನ ದಾಳಿಯನ್ನು ಎದುರಿಸುತ್ತಿದ್ದೇವೆ. ಆದರೂ ನಾವು ನಮ್ಮಲ್ಲಿ ಕಡೆಯ ಗುಂಡು ಕಡೆಯ ಪ್ರಾಣವಿರುವವರೆಗೆ ಇಲ್ಲಿಂದ ಒಂದಿಂಚೂ ಶತ್ರುವನ್ನು ಒಳಬಿಡುವುದಿಲ್ಲ.

ಕಾರ್ಗಿಲ್ ಯುದ್ದ ನಡೆದಿದ್ದು ಬಿಜೇಪಿಗಾಗಿ ಎಂದು ಸೈನ್ಯದ ಆತ್ಮ ಸ್ಥೈರ್ಯ ಕುಸಿಯುವಂತಹ ಮಾತನಾಡುವ ನಮ್ಮ ಸಂಸದರಿರುವವರೆಗೆ, ಇಂತಹ ದೇಶಭಕ್ತ ಸೈನಿಕರ ಸಾಹಸ ತ್ಯಾಗ ಬಲಿದಾನಗಳು ನಮ್ಮ ಪಠ್ಯಗಳಲ್ಲಿ ಅಳವಡಿಕೆಯಾಗುವುದಿಲ್ಲ.

Saturday, July 11, 2009

ಉಗ್ರವಾದ, ಪಾಕಿಸ್ತಾನ ಮತ್ತು ಬುದ್ದಿಜೀವಿಗಳು

Add Image
ಉಗ್ರರನ್ನು ಬೆಳೆಸಿದ್ದೇ ನಾವು: ಮೊದಲ ಬಾರಿಗೆ ಪಾಕ್ ಒಪ್ಪಿಗೆ

೦೯/೦೭/೨೦೦೯ ರಂದು ಎಲ್ಲ ಪತ್ರಿಕೆಗಳಲ್ಲೂ ಮುಖ ಪುಟದಲ್ಲಿರಬೇಕಾದ ಸುದ್ದಿಯೊಂದು ಕೊನೆಯ ಪುಟಗಳಿಗೆ ಹೋಗಿರುವುದು ವಿಷಾದನೀಯ. ಇರಲಿಬಿಡಿ ನನ್ನಂತಹವರಿಗೆ ಇಂತಹ ಸುದ್ದಿಗಳೆ ಗಮನ ಸೆಳೆಯುವುದು. ಭಯೋತ್ಪಾದನೆಯನ್ನು ಅಲ್ಪಾವಧಿ ಗುರಿಸಾಧನೆಗಾಗಿ ನಾವೇ ರಾಷ್ಟ್ರೀಯ ನೀತಿಯಂತೆ ಬೆಳೆಸಿದ್ದೇವೆ ಎಂದು ಆ ದೇಶದ ಅಧ್ಯಕ್ಷನೇ ಹೇಳಿರುವುದು ಗಮನಾರ್ಹ ಮತ್ತು ಅದರಲ್ಲಿ ಆಶ್ಚರ್ಯ ಪಡುವಂತದ್ದೇನು ಇಲ್ಲ. ಇಡಿ ಜಗತ್ತಿಗೆ ಗೊತ್ತಿದ್ದ ಸತ್ಯ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ.

ಆದರೆ ಕನ್ನಡಿ ಬೇಕಾಗಿರುವುದು ನಮ್ಮಲ್ಲಿನ ಡೋಂಗಿ ಬುದ್ದಿಜೀವಿಗಳಿಗೆ.

ಬುದ್ದಿಜೀವಿಗಳೆ ಈಗೇನು ಹೇಳುತ್ತೀರಿ?

ಏನಪ್ಪ ಇವನು ದೇಶದ ಹಿತಚಿಂತಕರನ್ನೆ ಪ್ರಶ್ನಿಸುತ್ತಿದ್ದಾನಲ್ಲ ಎಂದು ಗಾಬರಿಯಾಗಬೇಡಿ. ಅದಕ್ಕೂ ಕಾರಣವಿದೆ. ಹಿಂದೊಮ್ಮೆ ಸಂಪದ ದಲ್ಲಿ ನಡೆದ ಒಂದು ಸುಧೀರ್ಘ ಚರ್ಚೆಯಲ್ಲಿ ಸ್ವಘೋಷಿತ ಬುದ್ದಿಜೀವಿಯೊಬ್ಬರು (ಇವರ ಹಿಂದೂಗಳ ವಿರುದ್ದ ದ್ವೇಷಪೂರಿತ ಲೇಖನಗಳು ತಲೆಕೆಟ್ಟಾಗೊಮ್ಮೆ ಪ್ರಕಟವಾಗುವ ಪತ್ರಿಕೆ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟವಾಗುತ್ತವೆಯೆಂದು ಇವರ ಹೆಮ್ಮೆ) ತಮ್ಮ ಲೇಖನದಲ್ಲಿ ಹೀಗೆ ಉಧ್ದರಿಸಿದ್ದರು.

"ಪಾಕಿಸ್ತಾನ ಸರ್ಕಾರ ಕೂಡ ನಮ್ಮ ಸರ್ಕಾರದಂತೆಯೇ ಮತೀಯ ಮೂಲಭೂತವಾದಿ ಗುಂಪುಗಳ ಭಯೋತ್ಪಾದನೆಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ ಮತ್ತು ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವಿರುತ್ತದೆ ಎಂದು ನಂಬುವುದೂ ತಪ್ಪಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು" (ಇದರ ಪ್ರತಿಯನ್ನು ಲಗತ್ತಿಸಿದ್ದೇನೆ. ಸಂಪದದ ಕೊಂಡಿಯನ್ನು ಕೊಡಬಹುದಿತ್ತು ಆದರೆ ಪ್ರತಿಯೇ ಹೆಚ್ಚು ಸೂಕ್ತವೆಂದು ನನ್ನ ಅನಿಸಿಕೆ)

ಇದಕ್ಕೆ ನನ್ನ ಉತ್ತರ ಹೀಗಿತ್ತು

"ಹೌದು ಹೇಳಿ ನಿಮ್ಮಂತ ಸಮಾಜವಾದಿಗಳಿಗೆ ಪಾಕಿಸ್ಥಾನದ ಅಧ್ಯಕ್ಷನೆ ಸ್ವತಃ ಅದನ್ನು ಧೃಡಪಡಿಸಿದರೂ ನಂಬಿಕೆ ಬರುವುದಿಲ್ಲ ಬಿಡಿ. ಇಷ್ಟಕ್ಕೂ ನಿಮ್ಮನ್ನು ನಂಬಿ ಎಂದು ಯಾರು ಅಂಗಲಾಚಿದ್ದಾರೆ? ನೀವು ನಂಬಿದರೆಷ್ಟು ಬಿಟ್ಟರೆಷ್ಟು, ಇಡೀ ಜಗತ್ತಿಗೆ ಗೊತ್ತಿದೆ ಸತ್ಯ."

ಇದಕ್ಕೆ ಈ ಮಹನೀಯ ಲೇಖಕರ ಉತ್ತರ

"ಪಾಕಿಸ್ಥಾನ ಹಲವು ನೆಲೆಗಳಲ್ಲಿ ಒಡೆದು ಹೋಗಿರುವ ದೇಶ. ಅಲ್ಲಿ ನಿಜವಾಗಿ ಒಂದು ಪ್ರಾತಿನಿಧಿಕ ಪ್ರಭುತ್ವವೆಂಬುದಿಲ್ಲ. ಅಲ್ಲೀಗ ಬಹು ವರ್ಷಗಳ ನಂತರ ಪ್ರಜಾಪ್ರಭುತ್ವದ ಸರ್ಕಾರ ಬಂದಿದೆ. ಆದರೆ ಅದಿನ್ನೂ ರಾಷ್ಟ್ರದ ಮೇಲೆ ಸಂಪೂರ್ಣ ಹತೋಟಿ ಸಾಧಿಸಿಲ್ಲ. ಹಾಗಾಗಿ ಸರ್ಕಾರದ ಅರಿವಿಲ್ಲದೇ ಅಲ್ಲಿ ಮತಾಂಧ ಷಕ್ತಿಗಳಿಂದ ಅನೇಕ ದುಷ್ಟ ಚಟುವಟಿಕೆಗೆಗಳು ನಡೆದಿರುವ ಸಾಧ್ಯತೆ ಇದೆ."

ಇದನ್ನೆಲ್ಲ ಏಕೆ ವಿಷದಪಡಿಸುತ್ತಿದ್ದೇನೆಂದರೆ, ಈ ಎಲ್ಲ ಸಾಲುಗಳು ಅರಿವಿಲ್ಲದೆ ಬಂದವಲ್ಲ. ಆದರೆ ಮುಂದಾಲೋಚನೆಯಿಲ್ಲದೆ ವಿರೋಧಿಸುವುದೆ ಪರಮ ಧ್ಯೇಯವೆಂದು ಪರಿಗಣಿಸಿದ್ದರಿಂದಾದ ಅನಾಹುತ.

ಆದರೆ ನನ್ನ ಆ ಮಾತು ಸರಿಯಾಗಿ ೭ ತಿಂಗಳಿಗೆ ಸಾಕ್ಷಿ ಸಮೇತ ನಿಜವಾಗುತ್ತದೆಯೆಂದು ನಾನು ಖಂಡಿತ ಭಾವಿಸಿರಲಿಲ್ಲ.

ಈ ಬುದ್ದಿಜೀವಿಗಳಿಗೇನಾಗಿದೆ? ನನ್ನಂತಹ ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅರ್ಥವಾಗುವ ಸತ್ಯ ಮತ್ತು ವಾಸ್ತವ ಇವರಿಗೇಕೆ ಅರ್ಥವಾಗುವುದಿಲ್ಲ? ಯಾರನ್ನೋ ಟೀಕಿಸುವ, ತೇಜೋವಧೆ ಮಾಡುವ ಭರದಲ್ಲಿ ಸ್ವದೇಶವನ್ನೆ ಮತ್ತದರ ಹಿತಾಸಕ್ತಿಯನ್ನೆ ಬಲಿಗೊಡಲು ನಿಂತಿದ್ದಾರಲ್ಲ ಇವರೇಕೆ ಹೀಗೆ?

ಸ'ಮಜಾ'ವಾದಿ ಬುದ್ದಿಜೀವಿಗಳೆ ಈಗ ಹೇಳಿ ನೀವು ದೇಶದ್ರೋಹಿಗಳಲ್ಲವೆ? ಅಂದು ಪಾಕಿಸ್ತಾನ ನಿರ್ದೋಷಿ ಎಂದು ಪರಿಪರಿಯಾಗಿ ಅಂಗಲಾಚಿದ ತಾವು ಇಂದು ಪಾಕಿಸ್ತಾನದ ಸ್ವತಃ ಅಧ್ಯಕ್ಷನೆ ನಿಮ್ಮ ಬೆಂಬಲಕ್ಕೆ ನಿಲ್ಲದ ಕಾಲದಲ್ಲಿ ತಮ್ಮ ಸಮರ್ಥನೆಗೆ ಏನನ್ನು ಬಳಸುತ್ತೀರಿ? (ಪಾಕಿಸ್ತಾನದ ಚರಿತ್ರೆಯೆ ಅಂತಹದು ಅದು ಯಾರ ನಂಬಿಕೆಗೂ ಅರ್ಹವಲ್ಲ ಎಂಬುದು ಇಡಿ ವಿಶ್ವಕ್ಕೆ ಗೊತ್ತಿದೆ) ರಾಷ್ಟ್ರೀಯತೆ, ಬಿಜೆಪಿ, ಆರ್ಎಸ್ ಎಸ್ ಮತ್ತು ಹಿಂದೂಗಳನ್ನು ವಿರೋಧಿಸಿ ತಮ್ಮ ತೆವಲು ತೀರಿಸಿಕೊಳ್ಳುವ ಭರದಲ್ಲಿ ಶತ್ರುವಿನ ಶತ್ರು ಮಿತ್ರ ಎನ್ನುವ ಸಮಯೋಚಿತ ಸೂತ್ರಕ್ಕೆ ಶರಣಾಗಿ ಅಂದು ಪಾಕಿಸ್ತಾನವನ್ನು ಸಮರ್ಥಿಸಲು ನಿಂತವರನ್ನು ದೇಶದ್ರೋಹಿಗಳೆನ್ನಲು ಬಹುಷಃ ಇದಕ್ಕಿಂತ ಹೆಚ್ಚಿನ ಸಾಕ್ಷ್ಯದ ಅವಶ್ಯಕತೆಯಿದೆಯೆ?

ಸ್ವತಃ ಪಾಕೀಸ್ತಾನದ ಅಧ್ಯಕ್ಷನೆ ಉಗ್ರರನ್ನು ಬೆಳೆಸಿರುವುದು ನಾವೇ ಎಂದು ಒಪ್ಪಿಕೊಂಡರೂ ನೀವು ಅದನ್ನು ಒಪ್ಪಲಾರಿರಿ ಅಲ್ಲವೆ? ಅಥವಾ ನಾನು ಹೇಳಿದ್ದು ಹಾಗಲ್ಲ ಹೀಗೆ ಎಂದು ತಿಪ್ಪೆ ಸಾರಿಸಲು ಮುಂದಾಗುತ್ತೀರಿ.ಈಗಲೂ ಪಾಕಿಸ್ತಾನ ಸರ್ಕಾರಕ್ಕೂ ಭಯೋತ್ಪಾದಕರಿಗೂ ಸಂಬಂಧವಿಲ್ಲ ನಾನು ಹೇಳಿದ್ದೇ ಬೇರೆ ಅದನ್ನು ತಿರುಚಲಾಗಿದೆ ಎಂಬ ನಿಮ್ಮ ಸಮಯಸಾಧಕತನದ ಮಾತನ್ನು ಇಲ್ಲಿ ಉದ್ಗರಿಸಿ ಮತ್ತೊಮ್ಮೆ ನಗೆಪಾಟಲಿಗೀಡಾಗಬೇಡಿ.

ಬೆಂಕಿಯನ್ನು ಮಡಿಲಲ್ಲಿಟ್ಟುಕೊಂಡು ಸಾಕಿದ ಪಾಕಿಗಳಿಗೆ,ಬಿಸಿ ತಟ್ಟಿ ಅವರೇ ಒಪ್ಪಿಕೊಂಡಿದ್ದಾರೆ, Succes dosen't happen in Isolation ಅನ್ನುವ ಸತ್ಯದ ಅರಿವು ಬಹುಶಃ ಪಾಕಿಗಳಿಗೆ ಅರ್ಥವಾಗಬಹುದಾದರೆ ನಿಮಗೆಂದು ಜ್ಙಾನೋದಯವಾಗುತ್ತದೆ? ಹಸಿ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ನಿಮ್ಮಂತ ಬುದ್ದಿವಂತರಿಗೆ ಈ ವರದಿಗಳು ಅರ್ಥವಾಗುವುದಿಲ್ಲವೇ? ಅಥವಾ ಧೃತರಾಷ್ಟ್ರ ಪ್ರೇಮವೆ?

ಬುದ್ದಿಜೀವಿಗಳೆಂದು ಸ್ವಯಂ ಹಣೆಪಟ್ಟಿ (ಕ್ಷಮಿಸಿ, ಹಣೆಪಟ್ಟಿಯಲ್ಲ ಕಣ್ಕಾಪು) ಕಟ್ಟಿಕೊಂಡು ನಂಬಿಕೆಗೆ ಅರ್ಹವಲ್ಲದವರನ್ನು ಸಮರ್ಥಿಸಿ ಓದುಗರ ದಿಕ್ಕು ತಪ್ಪಿಸುವ ಕೆಲಸವನ್ನು ಇನ್ನೂ ಎಷ್ಟು ದಿನ ಮಾಡುತ್ತೀರಿ? ಭಯೋತ್ಪಾದಕರು ಹೊರಗಿನ ಶತ್ರುಗಳಾದರೆ ಅವರನ್ನು ಎದುರಿಸಬಹುದು ಆದರೆ ಇಂತಹ ಅಕ್ಷರ ಭಯೋತ್ಪಾದಕರು ಒಳಗಿನಿಂದಲೆ ಗೆದ್ದಲು ಹಿಡಿಸಿ ದೇಶವನ್ನೆ ಕೃಶವಾಗಿಸುವ ಕ್ಯಾನ್ಸರ್ ಮಾರಿಯಾಗುವ ನೀವುಗಳು ಇದೆಲ್ಲದರ ಬದಲಾಗಿ ಬದಲು ಕಟು ಸತ್ಯವನ್ನೇಕೆ ನುಡಿಯಬಾರದು? ನಿಮ್ಮ ಸುಳ್ಳಿನ ಬುನಾದಿಯನ್ನು ನಂಬಿಕೊಂಡು ಭಾರತವೂ, ಮತಾಂಧತೆಯಿಂದಲೆ ಜನಿಸಿದ ನಿಮ್ಮ ಪ್ರೇಮಿ ರಾಷ್ಟ್ರದಂತೆ ಮತ್ತೊಂದು ವಿಫಲ ರಾಷ್ಟ್ರವಾಗುವುದು ಬೇಡ. ನಿಮಗೆ ಸಮಾಜವನ್ನು ಸುಧಾರಿಸುವ ಕಳಕಳಿಯಿದ್ದರೆ ವಾಸ್ತವ ಮತ್ತು ಸತ್ಯವನ್ನಾಧರಿಸಿದ ಲೇಖನಗಳ ಮೂಲಕ ಅದನ್ನು ಸಾಕಾರಗೊಳಿಸಿ. ಹಿಂದೂ ಮೂಲಭೂತವಾದಿಗಳನ್ನು ವಿರೋಧಿಸುವ ಭರದಲ್ಲಿ ದೇಶದ್ರೋಹಿ ಸಂಘಟನೆಗಳಿಗೆ, ದೇಶದ ಶತ್ರುಗಳಿಗೆ, ದರೋಡೆಗಿಳಿದಿರುವ ನಕ್ಸಲರಿಗೆ, ಜೀವ ತೆಗೆಯುವ ಭಯೋತ್ಪಾದಕರಿಗೆ ನಿಮ್ಮ ಬೆಂಬಲವನ್ನು ಸೀಮಿತಗೊಳಿಸದೆ ನೈಜ ರಾಷ್ಟ್ರಪ್ರೇಮಿಗಳಿಗೆ ಮೀಸಲಿಡಿ ಅವರು ಬಿಜೇಪಿಯವರಾಗಲಿ ಕಾಂಗ್ರೆಸ್ಸಿನವರಾಗಲಿ. ಇಲ್ಲದಿದ್ದರೆ ಹೀಗೆ ನಿರಂತರವಾಗಿ ಓದುಗರ ಮುಂದೆ ನಿಮ್ಮ ಅಸಲು ಬಣ್ಣ ಬಯಲಾಗುತ್ತಾ ಹೋಗುತ್ತದೆ.

ಮತಾಂಧತೆಯನ್ನು ವಿರೋಧಿಸುವ ಬುದ್ದಿಜೀವಿಗಳು ಮತಾಂಧತೆಯಿಂದಲೆ ಜನ್ಮ ತಳೆದ, ಮತಾಂಧತೆಯಿಂದಲೆ ಬದುಕಿರುವ, ಮತಾಂಧತೆಯಿಂದಲೆ ಭಾರತದ ಮೇಲೆ ಆಕ್ರಮಣ ನಡೆಸುವ, ಕೊನೆಗೆ ಅದರಲ್ಲೆ ನಶಿಸಿಹೋಗುವ ದೇಶವೊಂದರ ಬೆಂಬಲಕ್ಕೆ ನಿಲ್ಲುವುದು ಸರ್ವತಾ ಸಮ್ಮತವಲ್ಲ.

ಬುದ್ದಿ ಜೀವಿಗಳೇ, ನಿಮ್ಮಿಂದ ಸಮಾಜ ಮಾರ್ಗದರ್ಶನ ಖಂಡಿತ ಬಯಸುತ್ತದೆ ಆದರೆ ಅದು ದೇಶಕ್ಕೆ ಮಾರಕವಾಗದಿರಲಿ. ಲೇಖಕರಿಗಿರಬೇಕಾದ ಮುಂದಾಲೋಚನೆಯನ್ನು ಮೈಗೂಡಿಸಿಕೊಳ್ಳಿ. ಬಿಜೇಪಿಯನ್ನು ವಿರೋಧಿಸುವ ಒಂದಂಶದ ಕಾರ್ಯಕ್ರಮಕ್ಕೆ ತಕ್ಕಂತೆ ಲೇಖನಗಳನ್ನು ಬರೆದು ದೇಶದ್ರೋಹಿಗಳನ್ನು ಬೆಂಬಲಿಸಿ ತನ್ಮೂಲಕ ದೇಶದ್ರೋಹಿಗಳಾಗಬೇಡಿ ಎಂದು ನನ್ನ ಕಳಕಳಿಯ ಮನವಿ.

ನಿಜಕ್ಕೂ ಸ್ವವಿಮರ್ಶೆಗೆ ತನ್ನನ್ನು ತಾನು ಒಪ್ಪಿಕೊಳ್ಳುವ ಆ ಮೂಲಕ ತನ್ನನ್ನು ತಿದ್ದಿಕೊಳ್ಳುವ ಹಂತಕ್ಕೆ ಆ ದೇಶ ಬಂದು ನಿಂತಿದ್ದರೆ ಭಾರತವೇ ಕುಸಿಯುತ್ತಿರುವ ಆ ದೇಶಕ್ಕೆ ಆಸರೆಯಾಗಿ ನಿಂತು ಮೇಲೆತ್ತಲಿ. ಇಷ್ಟಕ್ಕೂ "ಸರ್ವೆ ಜನ ಸುಖಿನೋ ಭವಂತು" "ವಸುಧೈವ ಕುಟುಂಬಕಂ" "ದಯೆಯೆ ಧರ್ಮದ ಮೂಲ" ಎಂದು ಜಗತ್ತಿಗೆ ಸಾರಿದ್ದೆ ಭಾರತ. "ಕ್ಷಮಾಯಾ ಧರಿತ್ರಿ" ನೀತಿಯನ್ನು ಅಕ್ಷರಸಹ ಪಾಲಿಸಿ ನಮ್ಮ ಶತ್ರು ರಾಷ್ಟ್ರವಾಗಿದ್ದರೂ ಮನಃಪರಿವರ್ತನೆ ನಮಗೆ ಕಾಣಿಸಿದರೆ ನಮ್ಮೊಡನೆ ಕರೆದೊಯ್ಯೊಣ.
ಹಾಂ!!! ಬುದ್ದಿಜೀವಿಗಳು ನಮಗೆ ಅವಕಾಶ ಕೊಟ್ಟರೆ ಮಾತ್ರ!

ಬುದ್ದಿಜೀವಿಗಳೆ ಇನ್ನಾದರೂ ಎಚ್ಚೆತ್ತುಕೊಳ್ಳಿ. ನಂಬಿಕೆಗೆ ಅನರ್ಹವಾದ ದೇಶವೊಂದನ್ನು ಬೆಂಬಲಿಸಿ ಹೀಗೆಯೆ ಆಗೊಮ್ಮೆ ಈಗೊಮ್ಮೆ ಅದರ ಬಟ್ಟೆ ಕಳಚಿ ಬಿದ್ದಾಗ ಎಲ್ಲರೆದುರಿಗೆ ಬೆತ್ತಲಾಗಬೇಡಿ.