Monday, December 29, 2008

ನಿಮ್ಮದು ಸ್ನೇಹವೋ? ಸಂಭಂದವೊ?

ಹೌದಲ್ಲ! ಮನುಷ್ಯನಿಗೆ ಒಂಟಿಯಾಗಿ ಬದುಕೋದಿಕ್ಕೆ ಸಾಧ್ಯವೇ ಇಲ್ಲ. ಸಹಜವಾಗಿಯೇ ಆತ ಇನ್ನೊಂದು ಜೀವಿಯೊಂದಿಗೆ ಸ್ನೇಹ ಹಸ್ತವನ್ನು ಚಾಚುತ್ತಾನೆ. ಕೆಲವೊಮ್ಮೆ ವ್ಯಾವಹಾರಿಕವಾಗಿಯೇ ಶುರುವಾಗುವ ಸಂವಹನ ನಂತರದ ದಿನಗಳಲ್ಲಿ ಪರಿಚಯ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಆತ್ಮೀಯತೆಯ ಬಳ್ಳಿಯೊಂದು ಟಿಸಿಲೊಡೆದು ಇಬ್ಬರ ನಡುವೆ ಹಬ್ಬಲು ಪ್ರಾರಂಭಿಸುತ್ತದೆ.
ಆರಂಭದಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಸ್ನೇಹ ಕ್ರಮೇಣ ಮನದ ಭಾವನೆಗಳನ್ನು ಕೇಳುವ ಸಂಗಾತಿಯೊಬ್ಬನಿಗಾಗಿ ಅಥವಾ ಒಲುಮೆಯನ್ನು ಹಂಚಿಕೊಳ್ಳುವ ಆಪ್ತ ಮನಸ್ಸಿಗಾಗಿ ಚಡಪಡಿಸತೊಡಗಿತ್ತದೆ. ಅದೆಲ್ಲಿಂದಲೋ ಭಾವನೆಗಳು ಉಕ್ಕಿ ಉಕ್ಕಿ ಬರಲು ಪ್ರಾರಂಭಿಸಿ ಅವನ್ನೆಲ್ಲಾ ಹೇಳಿಕೊಳ್ಳುತ್ತಾ ತನ್ನೊಡಲ ಸಂತಸ ದುಗುಡ-ದುಮ್ಮಾನಗಳನ್ನು ಬರಿದು ಮಾಡಿಕೊಳ್ಳುತ್ತಾನೆ. ಎದುರಿನ ವ್ಯಕ್ತಿಗೂ ಸ್ಪಂದಿಸುವ ಮನಸ್ಥಿತಿ ಇದ್ದರೆ ಸ್ನೇಹದ ಬಳ್ಳಿಗೆ ಆಗ ವಸಂತಕಾಲ.
ನಾವು ಸಾಕಷ್ಟು ಕಾಲ ಇನ್ನೊಬ್ಬ ವ್ಯಕ್ತಿಯೆಡೆಗೆ ಆಕರ್ಷಿತರಾಗುತ್ತೇವೆ. ಪರಸ್ಪರರು ಭಾವನೆಗಳನ್ನು ಹಂಚಿಕೊಳ್ಳುವುದು. ಒಟ್ಟಿಗೆ ಅಡ್ಡಾಡುವುದು, ಕೆಲ ಸಮಯ ಕಾಣದಿದ್ದರೆ ಜೀವ ಚಡಪಡಿಕೆಯಿಂದ ತಲ್ಲಣಿಸಿ ಹೋಗುವುದು. ಇಬ್ಬರ ಉಡುಗೊರೆ ವಿನಿಮಯ ಇವೆಲ್ಲಾ ನಡೆಯುತ್ತ ಸ್ನೇಹದ ಬಳ್ಳಿಯಲ್ಲಿ ಆತ್ಮೀಯತೆ, ಪ್ರೀತಿಯ ಕಾಯಿ ಬಿಟ್ಟು ತನ್ನಷ್ಟಕ್ಕೆ ಬಲಿಯತೊಡಗುತ್ತದೆ.
ಸ್ನೇಹವೆನ್ನುವುದು ಸಮಾನ ಮನಸ್ಕರ ನಡುವೆ ಕುಡಿಯೊಡೆಯುವ ಸಂದರ್ಭದಲ್ಲಿಯೇ ಅಲ್ಲಿ ಲಿಂಗಭೇದ ಮೆಲ್ಲನೆ ತಲೆ ಹಾಕುತ್ತದೆ. ಈ ಸ್ನೇಹ ವಿಶ್ವಾಸಗಳು ಗಂಡು ಹೆಣ್ಣಿನ ನಡುವೆ ಮುಂದುವರಿಯುತ್ತಿದ್ದಂತೆ ಅದೆಲ್ಲಿಂದಲೋ ಸ್ನೇಹದ ನಡುವೆ ಧುತ್ತನೆ ಆಗಮನವಾಗಿ ಬಿಡುವ ಒಂದು "ಭಾವನೆ"ಯಿದೆಯಲ್ಲ ಅದು ಸ್ನೇಹವನ್ನು ಉಳಿಸಲೂ ಬಹುದು ಇಲ್ಲವೆ ಇಬ್ಬರ ನಡುವೆ ದುರಭಿಪ್ರಾಯಗಳು ಬಂದಂತಾಗಿ ಸ್ನೇಹದ ಬಳ್ಳಿ ಸೊರಗಲೂ ಬಹುದು. ಕೆಲವು ಸಂದರ್ಭಗಳಲ್ಲಿ ಗಂಡು ಹೆಣ್ಣಿನ ಆತ್ಮೀಯತೆ ನಡುವೆ ಕಾಣಿಸಿಕೊಳ್ಳುವ ಈ ಒಂದು ಮನಸ್ಥಿತಿಗೆ ಗೆಳೆತನ ಸಿಲುಕಿಕೊಂಡಾಗ ಆ ಸ್ನೇಹ ಮುರಿದು ಬಿಡುವುದುಂಟು.
ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಸುಮತಿಯ ಪ್ರಕಾರ, "ಗಂಡು ಹೆಣ್ಣಿನ ನಡುವೆ ಬರೀ ಸ್ನೇಹ ನಿರಂತರವಾಗಿರಲು ಸಾಧ್ಯವೇ ಇಲ್ಲ. ಅಲ್ಲಿ ಕಾಲಕ್ರಮದಲ್ಲಿ 'ಸಂಬಂಧ' ಮೈದಳೆಯಲೇ ಬೇಕು." ಇದು ಸುಮತಿಯೊಬ್ಬಳ ಅನಿಸಿಕೆಯಲ್ಲ. ಹಲವರ ಅಭಿಪ್ರಾಯವೂ ಇದೇ ಆಗಿದೆ. ಯಾಕೆಂದರೆ ಪರಸ್ಪರ ವಿರುದ್ಧ ಲಿಂಗಿಗಳ ಆಕರ್ಷಣೆ ನಿನ್ನೆ ಮೊನ್ನೆಯದಲ್ಲ. ಈ ಭೂಮಿಯ ಮೇಲೆ ಜೀವ ಸಂಕುಲ ಆರಂಭವಾದಂದಿನಿಂದಲೇ ಅದರ ವಾಸನೆಯಿದೆ.
ಒಂದು ಒಳ್ಳೆಯ ಪರಿಚಯದಿಂದ ಚಿಗುರುವ ಸ್ನೇಹ, ಪ್ರೇಮ ತದನಂತರದಲ್ಲಿ ದೈಹಿಕ ಸಂಪರ್ಕವನ್ನು ಬಯಸುವ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚು. "ಅದರಲ್ಲಿ ಮುಜುಗರ ಪಡುವಂಥದ್ದೇನಿಲ್ಲ" ಎನ್ನುವುದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ದಿನೇಶ್ ಅಭಿಪ್ರಾಯ. ಸ್ನೇಹದ ನಡುವೆ ಪ್ರೀತಿಯು ಮೊಳಕೆಯೊಡೆದು ಅದು ಪ್ರೀತಿಯಾಗಿ-ಕಾಮವಾಗಿ ಪರಿವರ್ತನೆಯಾಗುವುದು ಸೃಷ್ಟಿಯ ಸಹಜ ಕ್ರಿಯೆ ಎನ್ನುತ್ತಾರೆ ಅವರು.
"ಪ್ರೀತಿಯ ನಡುವೆ ಸ್ನೇಹವಿರಲೇ ಬೇಕು, ಆದರೆ ಸ್ನೇಹದ ನಡುವೆ ಪ್ರೀತಿ ಇದ್ದೇ ಇರುತ್ತದೆನ್ನುವ ಸಂಭವ ತೀರಾ ಕಡಿಮೆ" ಎಂಬುದು ಹಲವರ ಅನಿಸಿಕೆ. ಸಹಜವಾಗಿ ಸಹೋದ್ಯೋಗಿಗಳ ನಡುವೆ ಪರಿಚಯ, ಸ್ನೇಹ ಉಂಟಾಗುತ್ತದೆ. ಸ್ನೇಹ ಸಲುಗೆಯತ್ತ ವಾಲುತ್ತದೆ. ಇಬ್ಬರ ಮನಸ್ಥಿತಿ ಒಂದೆ ಹದ ದಲ್ಲಿದ್ದರೆ (ಅಥವಾ ಆ ಹಂತಕ್ಕೆ ಬರುತ್ತದೆ) ಅಲ್ಲಿ ಪ್ರೀತಿ ಬರಲು ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ.
ಮನಃಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅನಘಾ ಹೇಳುವ ಪ್ರಕಾರ, "ನನಗೆ ಮಹಿಳೆಯರೊಂದಿಗೆ ಸ್ನೇಹ ಬೆಳೆಸುವುದಕ್ಕಿಂತ ಪುರುಷರೊಂದಿಗೆ ಗೆಳೆತನ ಮಾಡುವುದು ಅತ್ಯಂತ ಸಹಜವಾಗಿ ಖುಷಿ ಅನ್ನಿಸುತ್ತದೆ. ಯಾಕೆಂದರೆ ಪುರುಷ ಹೆಚ್ಚು ವಾದ ಮಾಡದೇ ನಾವು ಹೇಗಿರುತ್ತೇವೆಯೋ ಹಾಗೇ ಒಪ್ಪಿಕೊಳ್ಳುತ್ತಾನೆ ಎನ್ನುವುದು ನನ್ನ ಅನುಭವ." ಅನ್ನುತ್ತಾರೆ.
ನಿತೀಶ್ ಹೇಳುವುದು ಹೀಗೆ: "ಪುರುಷ ಮತ್ತು ಸ್ತ್ರೀ ಕೇವಲ 'ಬೇಸಿಕ್ ಇನ್ಸ್ಟಿಂಕ್ಟ್'ಗೋಸ್ಕರವೇ ಸ್ನೇಹಿತರಾಗುತ್ತಾರೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಹಾಗಂತ ನನಗೆ ಮಹಿಳೆಯರೇ ಪುರುಷ ಸ್ನೇಹಿತರಿಗಿಂತ ಹೆಚ್ಚು ಕ್ಲೋಸ್ ಆಗಿರೋದು. ಪುರುಷನೊಬ್ಬ ತನ್ನ ಸ್ನೇಹಿತನೊಂದಿಗೆ ಹಂಚಿಕೊಳ್ಳಲಾಗದ ಭಾವನೆಗಳನ್ನು ತನ್ನ ಗೆಳತಿಯೊಂದಿಗೆ ಇನ್ನೂ ಚೆನ್ನಾಗಿ ಹಂಚಿಕೊಳ್ಳಬಲ್ಲ."
ದೆಹಲಿ ವಿಶ್ವವಿದ್ಯಾಲಯದ ಮನಃಶಾಸ್ತ್ರದ ಪ್ರೊಪೆಸರೊಬ್ಬರ ಪ್ರಕಾರ, "ಗಂಡು ಹೆಣ್ಣಿನ ನಡುವಿನ ಸ್ನೇಹ ಸಹಜವಾದದ್ದು. ನೀವು ಒಬ್ಬರನ್ನು ಇಷ್ಟಪಡುತ್ತೀರಿ. ಅದರಿಂದಾಗಿ ಅವರೊಂದಿಗೆ ನಿಮ್ಮ ಮನದ ಭಾವನೆಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತೀರಿ. ಇದು ಕೊನೆಗೆ ಇಬರ ನಡುವೆ ಮದುವೆ ಹಂತಕ್ಕೆ ಬಂದರೆ ಸರಿ. ಆದರೆ ಪರಸ್ಪರರ ಉತ್ತಮ ಸ್ನೇಹದ ನಡುವೆ ಹುಟ್ಟಿಕೊಳ್ಳುವ 'ಪ್ರೀತಿ'-'ಸಂಬಂಧವಾಗಿ ಮಾರ್ಪಟ್ಟರೆ ಸಮಾಜದಲ್ಲಿ ಒಂದು ಸಮಸ್ಯೆಯನ್ನೆ ತಂದಿಡಬಲ್ಲುದು. ಆಗ ಇಬ್ಬರೂ ಸಾಕಷ್ಟು ದ್ವಂದ್ವದಲ್ಲಿ ಸಿಲುಕಿ ಗೊಂದಲಕ್ಕೆ ಬೀಳುತ್ತಾರೆ. ಆಗ ಸ್ನೇಹ ಮುರಿದು ಬೀಳುತ್ತದೆ. ಜೀವನದ ಉದ್ದೇಶಗಳೇ ವ್ಯರ್ಥವಾಗುತ್ತವೆ" ಎನ್ನುತ್ತಾರೆ.
ಸ್ನೇಹ ಎನ್ನುವುದು ಇಬ್ಬರ ನಡುವಿನ ಹೇಳಲಾಗದ ಒಂದು ಕೆಮಿಸ್ಟ್ರಿಯೇ ಸೈ!
ಇದು ದಿನಕಳೆದಂತೆ ಮೊದಲಿನ ಚಾರ್ಮ್ ಕಳೆದುಕೊಳ್ಳುತ್ತ ಅಥವಾ ಸ್ನೇಹ ಹಳಸಲಾಗುತ್ತ ಸಾಗುವುದೂ ಸಾಕಷ್ಟು ಸಲ. ಹಾಗೇ ಸ್ನೇಹ 'ಸಂಬಂಧ'ದ ರೂಪು ಪಡೆದು 'ಕಾಮನಬಿಲ್ಲಾಗುವ' ಸಾಧ್ಯತೆಯೂ ಇದೆ. ಇದಕ್ಕೆ ವ್ಯಕ್ತಿಗಳು ಸಾಕಷ್ಟು ಪಕ್ವ ಹಾಗೂ ಜವಾಬ್ದಾರಿಯುತವಾದರೆ, ಸ್ನೇಹವೊಂದು 'ಸಂಬಂಧ'ವಾಗ ಬೇಕೆ ಅಥವಾ ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ನಡುವೆ ಒಂದು ಗೆರೆ ಎಳೆದುಕೊಳ್ಳಬೇಕೆ ಎಂಬುದನ್ನು ಅವರವರೇ ನಿರ್ಧರಿಸಬಹುದು.
ಲೇಖಕ: ರಾಮಕೃಷ್ಣ.
ಕನ್ನಡದ ಮಾಸಿಕ ಅಕ್ಟೋಬರ್ ಮಯೂರದಲ್ಲಿ ಪ್ರಕಟಗೊಂಡ ಲೇಖನವಿದು.

Monday, November 17, 2008

ಕಾಡುವ ಆಕೆಯ ಕಂಗಳ ನೆನಪು

ನನಗಿನ್ನೂ ಚೆನ್ನಾಗಿ ನೆನೆಪಿದೆ ಆ ದಿನ. ಬಹುಶಃ ಆ ಮುಖ ನಾನು ಮರೆತಿರಬಹುದು. ಆದರೆ ಘಟನೆಯನ್ನಲ್ಲ. ಆಗಿನ್ನೂ  ತರಭೇತಿ ಮುಗಿಸಿ ಅಲ್ಲಿಯೇ ಕೆಲಸಕ್ಕೆ ಸೇರಿ ಸ್ವಲ್ಪ ದಿನಗಳಾಗಿತ್ತು. ಜೊತೆಯಲ್ಲಿದ್ದ ಅಕ್ಕನ ಮದುವೆಯಿಂದ ಉಂಟಾದ ಶೂನ್ಯದ ಖಿನ್ನತೆ ಇನ್ನೂ ಕಾಡುತ್ತಿತ್ತು. ಅದರಿಂದ ಹೊರ ಬರಲು ಅರ್ಧ ದಿನ ರಜೆ ಹಾಕಿ ವೃತ್ತದಲ್ಲಿ ಬಸ್ ಗಾಗಿ ಕಾಯುತ್ತ ನಿಂತಿದ್ದೆ. ಆಗಿನ್ನೂ ವರ್ತುಲ ರಸ್ತೆಯಾಗಿರಲಿಲ್ಲ. ಹಾಗಾಗಿ ಎರಡೂ ಕಡೆಯ ಬಸ್ ಗಳನ್ನು ನಿರೀಕ್ಷಿಸುತ್ತ ನನ್ನಂತೆ ಇನ್ನೂ ೮-೧೦ ಜನರಿದ್ದರು. ೧ ಘಂಟೆಯ ಸಮಯವಿರ ಬೇಕು ಏಕೆಂದರೆ ಈಗಿನ್ನೂ ಊಟ ಮುಗಿಸಿ ಹೊರ ಬಂದಿದ್ದೆ. ಹಳ್ಳಿಯ ಕಡೆಯಿಂದ ಬಂದ ಬಸ್ಸೊಂದರಿಂದ ಒಬ್ಬ ಯುವತಿಯನ್ನು ಒಬ್ಬ ಹೆಂಗಸು ಕೆಳಗೆಳೆದು ತಂದರು. ಸ್ವಲ್ಪ ದೂರದಲ್ಲಿದ್ದರಿಂದ ಅವರ ಸಂವಾದಗಳು ಅಲ್ಲಿದ್ದವರಿಗೆ ಕೇಳಿಸುತ್ತಿರಲಿಲ್ಲ, ಆದರೂ ಅದು ಅಸಹಜವಾಗಿದ್ದದ್ದು ಎಲ್ಲರಿಗೂ ತಿಳಿಯುವಂತಿತ್ತು. ಅವರಿಬ್ಬರನ್ನು ಆಟೋದಲ್ಲಿ ಬಂದ ಮಧ್ಯ ವಯಸ್ಕನೊಬ್ಬ ಕೂಡಿಕೊಂಡಾಗ ಆ ಯುವತಿ ಜೋರಾಗಿ ಕಿರಿಚಾಡಲು ಪ್ರಾರಂಭಿಸಿದಳು. ಅವರ ಸಂಭಾಷಣೆ ಈಗ ಎಲ್ಲರಿಗೂ ಕೇಳಿಸುತ್ತಿತ್ತು. ಮಧ್ಯಾನ್ಹವಾದ್ದರಿಂದ ಹೆಚ್ಚೇನು ಜನರಿರಲಿಲ್ಲ. ಆಕೆಯ ಮಾತುಗಳಿಂದ ನಮಗನ್ನಿಸಿದ್ದು ಆ ಯುವತಿ ಮನೆಗೆ ಹಿಂದಿರುಗಲು ನಿರಾಕರಿಸುತ್ತಿದ್ದಾಳೆ ಆಕೆಯ ತಾಯಿ ಅವಳನ್ನು ಕರೆದೊಯ್ಯುವ ವಿಫಲ ಯತ್ನ ಮಾಡುತ್ತಿದ್ದಾರೆ ಎಂಬುದು.
ಸ್ವಲ್ಪ ಸಮಯ ವಾಗ್ವಾದವನ್ನು ನಾವೆಲ್ಲ (ಅಲ್ಲಿದ್ದ ಜನರು) ಗಮನಿಸುತ್ತಿದ್ದೇವೆಂದು ಆಕೆಯ ತಾಯಿ (ನಮ್ಮ ಊಹೆ) ನೋಡಮ್ಮ ನಾನು ನಿನ್ನ ತಾಯಿ ಹಾಗೆಲ್ಲ ಹಠ ಮಾಡ್ಬಾರ್ದು ಅಂತ ಹೇಳಿದಾಕ್ಷಣ ಆ ಯುವತಿ ನೀನ್ಯಾವ ಸೀಮೆ ತಾಯಿನೆ? ಎಂದು ಅಬ್ಬರಿಸಿದಳು. ಮೆಲ್ಲಗೆ ಜನರ ಗುಂಪು ಅವರ ಸುತ್ತ ನೆರೆಯಿತು. ಒಬ್ಬೊಬರೂ ಒಂದೊಂದು ವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಯಾಕೊ ಆ ಯುವತಿ ಕಂಗಾಲಾಗಿದ್ದಾಳೆಂದು ನನಗನಿಸುತ್ತಿತ್ತು. ಆಕೆಯ ಕಣ್ಣಿನಲ್ಲಿದ್ದ ಭಯ ಆತಂಕ ನನಗಿನ್ನೂ ನೆನಪಿದೆ. ಈಗ ಸುತ್ತಲಿದ್ದ ಜನ ಸಂಧಾನಕ್ಕಿಳಿದರು ಯಾಕಮ್ಮಾ ಹೀಗ್ಮಾಡ್ತಿಯ? ಹೋಗು ಮನೆಗೆ ಎಂದು ಬುದ್ದಿವಾದ ಹೇಳಿದವರಿಗೆ ನನ್ ಮನೆಗೆ ಹೋಗ್ತಿನಿ ಬಿಡಿ ಅಂತ ಹೇಳಿ ಎಂದು ಆಕೆ ದಬಾಯಿಸಿದಳು. ಅದಕ್ಕೆ ಆಕೆಯ ತಾಯಿ ಎಂದು ಕರೆದು ಕೊಂಡ ಹೆಂಗಸು ನೋಡೀ ಸಾರ್ ಬಿಟ್ರೆ ಮನೆ ಬಿಟ್ಟು ಓಡಿ ಹೋಗ್ತಳೆ ಮದುವೆ ನಿಶ್ಚಯ ಆಗಿದೆ ಎಂದು ಗೋಗರೆದಳು. ಅಲ್ಲಿ ನೆರೆದವರಿಗೆಲ್ಲಾ ಪೀಕಲಾಟ ಯಾರು ಸರಿ ಯಾರು ತಪ್ಪು ಎಂಬ ಜಿಜ್ಞಾಸೆ. ಆಕೆ ಕೊನೆಗೊಮ್ಮೆ ನೀವು ನನ್ನ ಏನ್ಮಾಡ್ತೀರ ಅಂತ ಗೊತ್ತು ನನ್ನ ಬಿಡಿ ನಾನು ಮನೆಗೆ ಹೋಗ್ತಿನಿ ಎಂದು ಕೊಸರಿಕೊಂಡು ಆಟೋದ ಬಳಿಗೆ ಓಡಿದವಳನ್ನು ಆಕೆಯ ಜೊತೆಯಲ್ಲಿದ್ದವನ ಜೊತೆ ಇನ್ನಿಬ್ಬರು ದಾರಿ ಹೋಕರು ಮತ್ತೆ ಹಿಡಿದಿಟ್ಟುಕೊಂಡರು. ನನಗೆ ಫೋನ್ ಮಾಡಕ್ಕಾದ್ರು ಅವಕಾಶ ಕೊಡೀ ಅಂತ ಆಕೆ ಗೋಗರೆದಳು.
ನನ್ನ ಪೋಲೀಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಎಂದಾಗ ತಾಯಿಯೆಂದು ಹೇಳಿಕೊಳ್ಳುತ್ತಿದ್ದವಳ ಮುಖ ಕಪ್ಪಿಟ್ಟಿತು. ಸಾರ್ ಪೋಲಿಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಸಾರ್ ಎಂದು ನಾನು ಮತ್ತು ಇನ್ನಿಬ್ಬರು ಹೇಳೀದಾಗ ಸುಮ್ನೆ ಕೂತ್ಕೊಳ್ರೀ ನೀವಿನ್ನು ಪಡ್ಡೆ ಹುಡುಗರು ನಿಮ್ಗೇನ್ ಗೊತ್ತು ಪ್ರಪಂಚ ಎಂದು ದಬಾಯಿಸಿದರು ನಾವೂ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟೆವು. ಕೊನೆಗೊಮ್ಮೆ ಅಲ್ಲಿದ್ದ ಜನಗಳಲ್ಲ ಸೇರಿ ಚಾಲಕನ ಜೊತೆಯಲ್ಲಿ ಆಕೆಯನ್ನು ಒಂದು ಆಟೋದಲ್ಲಿ ಕೂರಿಸಿಕೊಂಡರು ಆಗ ಆಕೆ ಅಯ್ಯೊ ಬಿಡ್ರೀ ನನ್ನ ಇವ್ರೆಲ್ಲ ಸೇರ್ಕೊಂದು ನನ್ನ ಮಾರಿ ಬಿಡ್ತರೆ ಸೂ..... ಮಾಡ್ತಾರೆ ಎಂದು ಜೋರಾಗಿ ಅಳುತ್ತಲೆ ಆಟೋದೊಳಗೆ ಬಲವಂತವಾಗಿ ಕುಳಿತಳು. ಅಲ್ಲಿದ್ದವರೆಲ್ಲ ನಿಸ್ಸಹಾಯಕಾರಾಗಿ ಆ ದೃಶ್ಯವನ್ನೆ ನೋಡುತ್ತಿದ್ದರು. ಆಟೋ ಮುಂದೋಡಿದಂತೆ ಆಕೆಯ ಅಳು ಜೋರಾಗಿ ಮತ್ತೆ ಆಟೋ ಶಬ್ಧದಲ್ಲಿ ಕರಗಿಹೋಯಿತು.
ಈ ಘಟನೆ ನಡೆದು ಸುಮಾರು ೧೫ ವರ್ಷಗಳಾದರೂ ನಾನು ಪ್ರತಿ ಬಾರಿ ಆ ಜಾಗಕ್ಕೆ ಬಂದಾಗಲೆಲ್ಲ ಭಯ ಮಿಶ್ರಿತ ಕಂಗಾಲಾಗಿದ್ದ ಆಕೆಯ ಮುಖ ಕಣ್ಣೆದುರಿಗೆ ಬರುತ್ತದೆ. ಆಕೆ ನಿಜಕ್ಕೂ ವೇಶ್ಯಾವಾಟಿಕೆ ಸೇರಿದಳೆ ಅಥವ ತಂದೆ ತಾಯಿಯ ಮನೆ ಸೇರಿದಳೆ ಗೊತ್ತಿಲ್ಲ. ಒಂದು ಹೆಣ್ಣಿಗಾಗುತ್ತಿದ್ದ ಅನ್ಯಾಯವನ್ನು ಸ್ವಲ್ಪ ಸಮಯಪ್ರಜ್ಙೆ ಮೆರೆದಿದ್ದರೆ ತಪ್ಪಿಸ ಬಹುದಿತ್ತಲ್ಲ ಆದರೂ ನಾವು ಅಸಹಾಯಕರಾಗಿ ನಿಂತೆವಲ್ಲ ಎನ್ನುವ ನೋವು ಇನ್ನೂ ಕಾಡುತ್ತದೆ. ಈ ಘಟನೆ ನೆನಪಾದಗಲೆಲ್ಲ ಖಿನ್ನತೆ ಆವರಿಸಿ ಬಿಡುತ್ತದೆ.

Monday, October 27, 2008

ಸೀತಾನದಿ

ಪ್ರವಾಸ, ಹವ್ಯಾಸವಾದ ಮೇಲೆ ರಜ ಸಿಕ್ಕಾಗಲೆಲ್ಲ ಕಾರಿಗೆ ಪೆಟ್ರೋಲ್ ತುಂಬಿಸಿ ಹೊರಡುವುದೇ ಕಾಯಕವಾಗಿ ಬಿಟ್ಟಿದೆ. ಮಗನ ಶಾಲೆಯ ರಜಾದಿನಗಳಿಗೆ ಸರಿಯಾಗಿ ನಮಗೂ ಅಕ್ಟೋಬರ್ ನಲ್ಲಿ ರಜೆಯ ಸಾಲು ಆರಂಭವಾಗುತ್ತದೆ. ಉತ್ತರ ಕರ್ನಾಟಕದ ಯಲ್ಲಾಪುರದ ಸುತ್ತಮುತ್ತ್ತ ಪ್ರವಾಸ ಹೋಗೋಣವೆಂದು ವರಾತ ಹಚ್ಚಿದ ಸ್ನೇಹಿತರಿಗೆ ತಾರಮ್ಮಯ್ಯ ಆಡಿಸಿ, ಚಾರ್ಮಾಡಿ ಘಟ್ಟದಲ್ಲಿರುವ ಮಲಯಮಾರುತ ಅತಿಥಿ ಗೃಹದಿಂದ ನನ್ನ ಪ್ರವಾಸವನ್ನು ಆರಂಭಿಸುವ ಇರಾದೆಯಿಂದ ಚಿಕ್ಕಮಗಳೂರಿನ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದವನಿಗೆ ೧ ತಿಂಗಳಾದ ಮೇಲೆ ಕರೆ ಮಾಡಿ ಎನ್ನುವ ಸಿದ್ದ ಉತ್ತರ ಎದುರಾಯ್ತು. ಸರಿ ಸೆಪ್ಟೆಂಬರ್ ತಿಂಗಳ ಮೊದಲವಾರವೇ ಮತ್ತೆ ಪ್ರಯತ್ನಿಸಿದವನಿಗೆ ಮಲಯಮಾರುತ ಅತಿಥಿ ಗೃಹ
ದುರಸ್ಥಿಯಲ್ಲಿರುವುದರಿಂದ ಇನ್ನು ಯಾರಿಗೂ ಕೊಡುವುದಕ್ಕಾಗುವುದಿಲ್ಲ ಎಂಬ ಮಾರುತ್ತರ. ಅಕ್ಟೋಬರ್ ೧ ರಿಂದ ೯ ರವರೆಗೆ ಸುಧೀರ್ಘ ಪ್ರವಾಸದ ಯೋಜನೆಯಲ್ಲಿದ್ದವನಿಗೆ ಇದೇಕೋ ಕಸಿವಿಸಿ. ಈ ಮಧ್ಯೆ ನಿನ್ನೊಡನೆ ನನಗೂ ಪ್ರವಾಸ ಬರುವ ಇಚ್ಚೆ ಇದೆ ಆದರೆ ಮಕ್ಕಳ ಶಾಲೆಗೆ ರಜೆ ೮ ರಿಂದ ಪ್ರಾರಂಭವಾಗುತ್ತದೆ ನಂತರ ಹೋಗೋಣವೆಂದ ಸ್ನೇಹಿತ ಶ್ರೀಕಾಂತನಿಗೆ ಸ್ಪಂದಿಸಿ ಅದರಂತೆ ಅಕ್ಟೋಬರ್ ೮ ರಂದು ಪ್ರವಾಸ ಹೊರಡುವುದೆಂದು ನಿರ್ಧರಿಸಿದೆವು. ಸ್ಥಳಗಳು ಮತ್ತು ಅಲ್ಲಿನ ವಸತಿಗಳಿಗಾಗಿ ಹುಡುಕಾಟ ತಡಕಾಟ ಆರಂಭವಾಯಿತು. ಕೊನೆಗೆ ಸೀತಾನದಿ ಪ್ರಕೃತಿಶಿಬಿರ ಮತ್ತು ಕುದುರೆಮುಖದ ಭಗವತಿ ಪ್ರಕೃತಿ ಶಿಬಿರದಲ್ಲಿ ತಂಗೋಣವೆಂದು ಶ್ರೀಕಾಂತನಿಗೆ ತಿಳಿಸಿ ಅದರಂತೆ ೯ ಮತ್ತು ೧೦ ರ ರಾತ್ರಿ ಸೀತಾನದಿ ಪ್ರಕೃತಿ ಶಿಬಿರದಲ್ಲೂ ೧೧ ಮತ್ತು ೧೨ ರ ರಾತ್ರಿ ಭಗವತಿಯಲ್ಲೂ ಕಾರ್ಕಳ ಅರಣ್ಯ ಇಲಾಖೆಯಲ್ಲಿನ ಜಯನಾರಾಯಣರನ್ನು ಸಂಪರ್ಕಿಸಿ ಸ್ಥಳಗಳನ್ನು ಕಾದಿರಿಸಿದೆ. ಈ ಮಧ್ಯೆ ಪಾಂಡಿಚೆರಿಗೆ ಹೊರಡುವುದಾಗಿ ತಿಳಿಸಿದ್ದ ಶ್ರೀಧರ ತನಗೂ ನಾವು ಹೋಗುವ ಜಾಗಗಳಲ್ಲಿ ವಸತಿ ಬಗ್ಗೆ ವಿಚಾರಿಸಿದವನಿಗೆ ಜಯನಾರಾಯಣ ಸಂಪರ್ಕ ಸಂಖ್ಯೆಯನ್ನಿತ್ತೆ.
ಆಯುಧ ಪೂಜೆ ಮುಗಿಸಿ ೮ ರಂದು ಬೆಳಿಗ್ಗೆ ೮ ಗಂಟೆಗೆ ನಮ್ಮ ವಾಹನ ನೆಲಮಂಗಲದ ದಾರಿಯಲ್ಲಿತ್ತು. ವಾಹನದಟ್ಟಣೆಯೂ ಹೆಚ್ಚಿರಲಿಲ್ಲ. ಕುಣಿಗಲ್ ದಾರಿಯಲ್ಲಿ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಅದೇ ಆವರಣದಲ್ಲಿ ತಿಂಡಿ ಮೆಲ್ಲುತ್ತಿದ್ದ ಶ್ರೀಧರನಿಗೊಂದು ನಗೆಬೀರಿ ನಮ್ಮ
ಪ್ರಯಾಣ ಮುಂದುವರೆಯಿತು. ಹಾಸನದಲೊಮ್ಮೆ ಚಹಾ ವಿರಾಮ ಚಿಕ್ಕಮಗಳೂರಿನಲ್ಲಿ ಊಟದ ನಂತರ ನಾವು ನೇರವಾಗಿ ಶೃಂಗೇರಿಯ ಬಳಿಯಿರುವ ಹರಿಹರಪುರ ತಲುಪಿದೆವು.ತುಂಗೆಯ ದಂಡೆಯ ಮೇಲಿರುವ ಸುಂದರ ಪುಟ್ಟ ಊರು ಹರಿಹರಪುರ. ಶಂಕರಮಠದ ಆವರಣದಲ್ಲಿರುವ ಶಾರಾದಾಂಬೆಯ ದರ್ಶನ ನಂತರ ಸ್ವಾಮೀಜಿಗಳ ಸಂದರ್ಶನ ಮುಗಿಸಿ, ಹೊಸದಾಗಿ ನಿರ್ಮಿಸಿರುವ ದೇವಸ್ಥಾನಗಳ ದರ್ಶನಕ್ಕಾಗಿ ಶಕಟಪುರದತ್ತ. ಭವ್ಯವಾಗಿ ನಿರ್ಮಿಸಿರುವ ನಿರ್ಜನ ದೇವಸ್ಥಾನದಲ್ಲೊಂದು ಸುತ್ತು ಹಾಕಿ ಅಲ್ಲಿಂದ ನೇರವಾಗಿ ಶೃಂಗೇರಿ ತಲುಪಿದಾಗ ಅರಿವಿಗೆ ಬಂದಿದ್ದು ಇಡೀ ಕರ್ನಾಟಕವೇ ಅಲ್ಲಿದೆಯೇನೋ ಎಂಬಂತ ಜನಜಂಗುಳಿ. ವಸತಿ ಸಿಗುವುದಂತೂ ಕನಸಿನ ಮಾತು. ಈಗಾಗಲೇ ನಿರ್ಧರಿಸಿದಂತೆ ಸ್ನೇಹಿತ ಸಹೋದ್ಯೋಗಿ ಶೃಂಗೇರಿಯವರೇ ಆದ ವಸಂತರ ಮಗಳ ಮನೆಯಲ್ಲಿ ನಮ್ಮ ವಸತಿ. ಮಠದಲ್ಲಿ ಊಟ ಮುಗಿಸಿ ಮೆಣಸೆಯ ಬಳಿಯಿರುವ ಸುಚೇಂದ್ರರ ಮನೆಗೆ ಬಂದು ಮಲಗಿದಾಗ ರಾತ್ರಿ ೧೦ ಗಂಟೆ. ಸುಚೇಂದ್ರ ಮತ್ತು ಅವರ ಮನೆಯವರ ಆತ್ಮೀಯತೆ ಸ್ಮರಣೀಯ. ಬೆಳಿಗ್ಗೆ ಎದ್ದು ನೇರವಾಗಿ ಕಿಗ್ಗದಲ್ಲಿರುವ ಋಷ್ಯಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ೧೫ ಕಿ.ಮಿ ದೂರದಲ್ಲಿರುವ ಉತ್ತಮವಾಗಿದ್ದರೂ ಕಡಿದಾದ ರಸ್ತೆಯಲ್ಲಿ ಸಿರಿಮನೆ ಜಲಪಾತಕ್ಕೆ ಬಂದಿಳಿದೆವು. ೫-೬ ವರ್ಷಗಳ ಹಿಂದೆ ಆಕಸ್ಮಿಕವಾಗಿ ಈ ಜಲಪಾತಕ್ಕೆ ಬಂದಾಗ ಇದ್ದದ್ದಕ್ಕೂ ಈಗಲೂ ತುಂಬವೇ ವ್ಯತ್ಯಾಸ ಕಂಡು ಬಂತು. ಜಲಪಾತಕ್ಕೆ ಇಳಿಯಲು ಮೆಟ್ಟಿಲುಗಳು ನಾಗರೀಕತೆಯ ಕುರುಹಾದ ಪ್ಲಾಸ್ಟಿಕ್ ಗುಟ್ಕಾ ಮದ್ಯದ ಪಳೆಯುಳಿಕೆಗಳು ಚಹಾ ಅಂಗಡಿ ಕೂಡಾ ಆಶ್ಚರ್ಯ ತರಿಸಿತು. ಹಿಂದೊಮ್ಮೆ ಜಲಪಾತಕ್ಕೆ ಬಂದಾಗ ಶೃಂಗೇರಿಯಲ್ಲಿ ಕಾರಿನ ಕೆಳಗೆ ಚಪ್ಪಲಿ ಬಿಟ್ಟು ಜಲಪಾತದ ಹತ್ತಿರ ಕಾರು ನಿಂತಾಗ ಕಾರಿನ ಕೆಳಗೆ ಇಣುಕಿ ಚಪ್ಪಲಿ ಹುಡುಕುತ್ತಿದ್ದ ಸುರೇಶನ ಮುಖ ನೆನಪಾಗಿ ಸಣ್ಣ ನಗೆಯೊಂದು ಹಾಯ್ದು ಹೋಯ್ತು.
ಅರಣ್ಯ ಇಲಾಖೆ ಪ್ರವೇಶ ಶುಲ್ಕ ಭರಿಸುವಶ್ಟರಲ್ಲಿ ಜಲಪಾತದ ಬಳಿ ಇದ್ದವರ ಉಲ್ಲಾಸದ ಕೇಕೆಗಳು ಮೊದಲ ಬಾರಿ ಬಂದಿದ್ದಾಗ ಇದ್ದ ನೀರವತೆಯ ಮೌನವನ್ನು ಅಣಕಿಸುತ್ತಿತ್ತು. ಅದರೂ ಶೃಂಗೇರಿಯ ಜನಜಂಗುಳಿಯೆಲ್ಲ ಇಲ್ಲೆ ಇದೆಯೆಂದು ಭಾವಿಸಿದ್ದವನಿಗೆ ಅದು ಸುಳ್ಳೆಂದು ತಕ್ಷಣವೆ ಅರಿವಾಯಿತು. ನಿರಾಯಾಸವಾಗಿ ನೀರಿಗಿಳಿದು ಜಲಪಾತದ ಕೆಳಗೆ ಕುಳಿತೆವು. ಮಕ್ಕಳಂತೂ ಅತ್ಯಂತ ಆನಂದದಿಂದ ನೀರಿನಲ್ಲಿ ಕಳೆದು ಹೋಗಿದ್ದರು.
ದಬದಬನೆ ಸುರಿಯುವ ನೀರಿಗೆ ಬೆನ್ನೊಡ್ಡಿದರೆ ಪುಗಸಟ್ಟೆ ಮಸಾಜ್. ಜಡ ಹಿಡಿದ ಬೆಂಗಳೂರಿನ ಮೈ ಮನಸ್ಸಿಗೆ ಆಹ್ಲಾದಕರ ಅನುಭವ ಇದಕ್ಕಾಗಿಯೆ ಪ್ರವಾಸಗಳೆಂದರೆ ನನಗೆ ಅಚ್ಚುಮೆಚ್ಚು. ೧ ಗಂಟೆಗೂ ಹೆಚ್ಚು ನೀರಿನಲ್ಲೆ ಕೆಳೆದು ಹಿಂತಿರುಗಿ ಚಹಾ ಅಂಗಡಿಯಲ್ಲಿ ಚಹಾ ಸೇವಿಸಿ ಶೃಂಗೇರಿಯ ಮಠದಲ್ಲಿ ಊಟ ಮುಗಿಸಿ ನಮ್ಮ ಪ್ರಯಾಣ ಸೀತಾನದಿ ಪ್ರಕೃತಿ ಶಿಬಿರದೆಡೆಗೆ. ಆಗುಂಬೆಯ ಘಟ್ಟ ಇಳಿದ ತಕ್ಷಣವೆ ಸಿಗುವ ಊರು ಸೋಮೇಶ್ವರದಲ್ಲಿ ಚಹಾ ಸೇವಿಸಿ ಹೆಬ್ರಿ ಕಡೆಗೆ ನಮ್ಮ ಪ್ರಯಾಣ. ಒಂದೇ ವಾಹನ ಚಲಿಸುವಷ್ಟು ಚಿಕ್ಕ ರಸ್ತೆಯಲ್ಲಿ ಎಚ್ಚರಿಕೆಯಿಂದ ಚಲಿಸುತ್ತಾ ಎದುರಿಗೆ ಬರುತ್ತಿರುವ ವಾಹನಗಳಿಗೆ ದಾರಿ ಬಿಡುತ್ತಾ (ಇದೇ ಸ್ಥಳಕ್ಕೆ ಕಳೆದ ಬಾರಿ ಬಂದಾಗ ಆದ ಕೆಟ್ಟ ಅನುಭವ ಕಲಿಸಿದ ಪಾಠ) ಸೀತಾನದಿ ಪ್ರಕೃತಿಶಿಬಿರ ತಲುಪಿದಾಗ ಕುಡಿದು ಕಿರುಚಾಡುತ್ತಿದ್ದ ಗುಂಪಿನ ಕೇಕೆಗಳು ನಮ್ಮನ್ನು ಸ್ವಾಗತಿಸಿದವು. ಮದ್ಯಪಾನ ಧೂಮಪಾನ ನಿಷೇಧಿಸಲಾಗಿದೆ ಎಂಬ ಫಲಕ ನಮ್ಮನ್ನು ಅಣಕಿಸುತ್ತಿತ್ತು.
ದಟ್ಟ ಕಾಡಿನ ಮಧ್ಯೆ ಆನೆಝರಿ ಪ್ರಕೃತಿ ಶಿಬಿರವನ್ನು ಹೋಲುವ ಸೀತಾನದಿಯ ದಡದಲ್ಲಿ ನಿರ್ಮಿಸಿರುವ ಢೇರೆಗಳು, ಅಡುಗೆಮನೆ, ಕುಠೀರ ನಿರ್ವಹಣೆಯಲ್ಲಿ ಹಿಂದೆ ಬಿದ್ದಿವೆ. ಅಲ್ಲಿನ ನೌಕರ ಪ್ರಕಾಶನನ್ನು ಸಂಪರ್ಕಿಸಿ
ಸ್ವಲ್ಪ ಹೆಚ್ಚೆನಿಸುವಷ್ಟೆ ಹಣವನ್ನು ನಮ್ಮಿಂದ ಪೀಕಿದ ನಂತರವೆ ಆತ ನಮಗೆ ಢೇರೆಗಳನ್ನು ಅನುವು ಮಾಡಿಕೊಟ್ಟದ್ದು. ನಮ್ಮ ಹೊರೆಗಳನ್ನೆಲ್ಲಾ ಅಲ್ಲಿಗೆ ವರ್ಗಾಯಿಸಿ ನದಿ ದಡಕ್ಕೆ ಹೋಗೋಣವೆಂದವನಿಗೆ ನೀರಿಗಿಳಿಯ ಬೇಡಿ ಅಪಾಯವಿದೆ ಎಂದ ಪ್ರಕಾಶ. ಸಸ್ಯಾಹಾರವಾದರೆ ಹೆಬ್ರಿಗೆ ಹೋಗಿ ಬಿಡಿ ಸಾರ್ ಎಂದು ಅಲವತ್ತು ಕೊಂಡವನಿಗೆ ಚಹಾವನ್ನಾದರೂ ಕಳುಹಿಸು ಮಹರಾಯ ಎಂದು ಹೇಳಿ ನದಿ ಕಡೆ ನಡೆದೆವು. ದಂಡೆಯಲ್ಲೆಲ್ಲಾ ಮರಳು ಆವರಿಸಿ ನೀರಿಗಿಳಿಯುವುದು ಪ್ರಕಾಶ ಹೇಳಿದಂತೆ ಅಪಾಯವೇ ಸರಿಯೆನಿಸಿತು. ವೀಕ್ಷಣ ಸ್ಥಳವಿದೆ ಹೋಗಿ ಬನ್ನಿ ಎಂದವನ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನದಿಯ ದಂಡೆಯಲ್ಲೆ ಅಲ್ಲಿನ ಪ್ರಶಾಂತತೆ (ಕುಡುಕರ ಗುಂಪು ತಮ್ಮ ಆಟಾಟೋಪವನ್ನು ನಿಲ್ಲಿಸಿದ್ದರಿಂದ) ಆಸ್ವಾದಿಸುತ್ತ ನಿಂತೆವು. ಮಳೆಗಾಲದಲ್ಲಿ ನಡೆಯುವ ರಾಪ್ಟಿಂಗ್ ಗೆ ಇಲ್ಲಿ ಸುಗ್ಗಿ. ಆದರೂ ನೀರಿಗಿಳಿಯಲು ಆಗದಿದ್ದುದು ಬೇಸರ ತರಿಸಿತ್ತು ಮಕ್ಕಳಿಗಂತೂ ಮೃಷ್ಟಾನ್ನ ಭೋಜನ ಮುಂದಿಟ್ಟು ಕೈಕಟ್ಟಿ ಕೂರಲು ಹೇಳಿದಂತೆ ಭಾಸವಾಗಿದ್ದಿರಬೇಕು. ಅವರ ಆಸೆಗಳನ್ನು ಹತ್ತಿಕ್ಕುತ್ತಾ ನಾಳೆ ನೀರಿಗಿಳಿಯುವಂತಹ ಸ್ಥಳಗಳಿಗೆ ಕರೆದು ಕೊಂಡು ಹೋಗುವುದಾಗಿ ಹೇಳಿ ಬಲವಂತವಾಗಿ ಅವರನ್ನು ದಂಡೆಯಿಂದ ಕರೆತಂದಿದ್ದಾಯ್ತು. ಆಗಾಗ ಸುರಿದ ಮಳೆಯಿಂದಾಗಿ ಜಿಗಣೆಗಳು ಈಗಾಗಲೆ ಸುಪ್ರಿಯಳ ರಕ್ತದ ರುಚಿ ನೋಡಿದ್ದವು. ಢೇರೆಯಿಂದ ನಾಲ್ಕೈದು ಹೆಜ್ಜೆ ಮುಂದಿಟ್ಟರೆ ಜಿಗಣೆಗಳು ಧಾಂಗುಡಿಯಿಡುತ್ತಿದ್ದವು. ಒಂದು ಜಿಗಣೆ ಹಿಡಿದು ಅದರ ಮೇಲೆ ಪುಡಿ ಉಪ್ಪನ್ನು ಉದುರಿಸಿ ಅದರಿಂದಾಗುವ ಪರಿಣಾಮವನ್ನು ಅಳೆಯಲು ಕುಳಿತೆವು. ನಿಜಕ್ಕೂ ಉಪ್ಪು ಜಿಗಣೆಗಳಿಗೆ ಪರಿಣಾಮಕಾರಿ ತಗುಲಿದ ತಕ್ಷಣವೆ ಅಲ್ಲಿಂದ ಉದುರಿ ಹೋಗಿ ಮುರುಟಿಕೊಳ್ಳುವ ಪರಿ ಮಾತ್ರ ಪ್ರಾಣಿ ಹಿಂಸೆಯೇನೊ ಎಂಬ ಭಾವನೆ.
ಪ್ರಕಾಶ ಕೊಟ್ಟ ಚಹಾ ಹೀರಿ ಹೆಬ್ರಿ ಕಡೆಗೆ ಹೊರೆಟೆವು. ಪುಟ್ಟ ಊರಾದರೂ ಶುಭ್ರವಾಗಿರುವ ಸ್ಥಳ ಹೆಬ್ರಿ. ರಾತ್ರಿ ವಿದ್ಯುತ್ ಇಲ್ಲದ ಪರಿಸ್ಥಿತಿಗೆ ಮೇಣದ ಬತ್ತಿಗಳನ್ನು ಖರೀದಿಸಿ. ಬಡ್ಕಿಲ್ಲಾಯ (ಭೋಜನಾಲಯ) ದಲ್ಲಿ ಊಟ ಮುಗಿಸಿ ಶಿಬಿರಕ್ಕೆ ಹಿಂದಿರುಗಿದಾಗ ಸ್ನೇಹಿತ, ಸಹೋದ್ಯೋಗಿ ಶ್ರೀಧರ ಪ್ರತ್ಯಕ್ಷನಾಗಿದ್ದ. ಅಬ್ಬ!! ವಿದ್ಯುತ್ ದೀಪಗಳು ಬೆಳಗಲು ಆರಂಭಿಸಿದ್ದವು. ಮೊಬೈಲ್ಗಳನ್ನು ಛಾರ್ಜ್ ಮಾಡಲು ಹಚ್ಚಿ ಮಲಗೋಣವೆಂದು ಹೇಳಿದ ಸ್ವಲ್ಪ ಸಮಯಕ್ಕೆ ಮಳೆ ಧೋ ಎಂದು ಸುರಿಯಲು ಆರಂಭಿಸಿತು. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಬೇಸಿಗೆಯಂತಿದ್ದ ಶೆಕೆ ಮಾತ್ರ ತಣ್ಣಗಾಗಿರಲಿಲ್ಲ. ಅದ್ಯಾವಾಗ ನಿದ್ರಾದೇವಿ ಆವರಿಸಿದಳೊ ಗೊತ್ತಿಲ್ಲ.
ಬೆಂಗಳೂರಿಂತೆ ಯಾವುದೆ ಆತುರವಿಲ್ಲದ್ದರಿಂದ ೭.೩೦ ಗೆ ಹಾಸಿಗೆಯಿಂದೆದ್ದು ಬೆಳಗಿನ ಮೌನವನ್ನು ಅಸ್ವಾದಿಸುತ್ತ ನದಿಯ ದಂಡೆಯಲ್ಲೊಮ್ಮೆ ನಿಂತು ಢೇರೆಯ ಪಕ್ಕದಲ್ಲೆ ಇದ್ದ ಕಾಡಿನ ದಾರಿಯಲ್ಲಿ ಸ್ವಲ್ಪ ದೂರ ನಡೆದು ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಮಕ್ಕಳಾಗಲೆ ತಮ್ಮ ಆಟಕ್ಕೆ ಶುರುವಿಟ್ಟುಕೊಂಡಿದ್ದರು. ಶ್ರೀಕಾಂತ ಮನವಿಯಂತೆ ಪ್ರಕಾಶ ಕಳಿಸಿದ ಚಹಾ ಸೇವನೆಯ ನಂತರ ಸ್ನಾನಾದಿಗಳನ್ನು ಮುಗಿಸಿ ಹೆಬ್ರಿಯಲ್ಲಿ ಮಲೆನಾಡು ಮತ್ತೆ ಕರಾವಳಿಯ ತಿನಿಸುಗಳಾದ ಕೊಟ್ಟೆ ಕಡುಬು, ಬನ್ಸ್, ಶ್ಯಾವಿಗೆ ಎಲ್ಲವುದರಗಳ ರುಚಿ ನೋಡಿ, ಬೇರೆ ಯಾವುದೇ ಕಾರ್ಯಕ್ರಮವಿಲ್ಲದ್ದರಿಂದ ಯಾವುದಾದರೂ ನೀರಿಗಿಳಿಯುವ ಸ್ಥಳ ಸಿಗಬಹುದೆಂಬ ನೀರೀಕ್ಷೆಯಲ್ಲಿ ವಾಹನವನ್ನು ನಿಧಾನವಾಗಿ ಓಡಿಸತೊಡಗಿದ ಶ್ರೀಕಾಂತ. ಹಿಂದಿನ ದಿನವೆ ಕ್ರಮಿಸಿದ್ದ ದಾರಿಯಾದ್ದರಿಂದ ನಿನ್ನೆ ಗಮನಿಸಿದ್ದ ಕೆಲವು ಜಾಗಗಳು ೪-೫ ಕಿ.ಮೀ ನಂತರ ಸಿಕ್ಕವು ದೇವಸ್ಥಾನದ ಪಕ್ಕದಲ್ಲಿದ್ದ ಸ್ಥಳ ಪ್ರಶಸ್ಥವಾಗಿದ್ದರೂ ಈಗಾಗಲೆ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಇನ್ನು ಸ್ವಲ್ಪ ಮುಂದೆ ಸಿಕ್ಕ ಚಿಕ್ಕ ಊರಿನಲ್ಲಿ ನಮ್ಮ ನೀರೀಕ್ಷಣೆ ಮತ್ತು ಅಪೇಕ್ಷೆಗೆ ತಕ್ಕುದಾದ ಒಂದು ಸ್ಥಳ ದೊರಕಿದ ತಕ್ಷಣ ಅದೇ ಹಳ್ಳಿಯ ಜನಗಳಿಂದ ಅಪಾಯವಿಲ್ಲವೆಂದು ಖಾತರಿಪಡಿಸಿಕೊಂಡು ಸ್ವಚ್ಚವಾಗಿ ಸ್ವಚ್ಚಂದವಾಗಿ ಹರಿಯುತ್ತಿದ್ದ ನೀರಿಗೆ ಮಕ್ಕಳು ದಡದಡನೆ ಇಳಿದೇ ಬಿಟ್ಟರು.
ಮನದಣಿಯೆ ಈಜಿ, ಪರಸ್ಪರ ನೀರೆರೆಚಿಕೊಳ್ಳುತ್ತಾ, ದಣಿವಾರಿಸಿಕೊಳ್ಳುತ್ತಾ ನೀರನ್ನು ಮೊದಲಬಾರಿಗೆ ನೋಡಿದವರಂತೆ ನಾವೆಲ್ಲಾ ಆಡಿಯೇ ಆಡಿದೆವು. ಮೇಲೆ ಸೂರ್ಯ ತನ್ನ ಪ್ರತಾಪವನ್ನು ತೋರಿಸುತ್ತಿದ್ದರೂ ತಣ್ಣಗಿನ ನೀರಿನಲ್ಲಿ ನಮಗದು ಅರಿವಿಗೆ ಬರುತ್ತಿರಲಿಲ್ಲ. ನೀರಿನಿಂದ ಹೊರ ಬಂದ ತಕ್ಷಣ ಬಟ್ಟೆಯಿಲ್ಲದ ಮೈ ಚುರುಗುಟ್ಟಿದಾಗ ಮತ್ತೆ ನೀರಿಗೆ ಜಿಗಿಯುವುದೆ ಮಜಾ.
ನಮಗೂ ಸ್ವಲ್ಪ ಜಾಗ ಬಿಡಿ ಎಂಬಂತೆ ಬಂದ ಬಹುಶಃ ನಮ್ಮಂತೆ ಪ್ರವಾಸಿಗರ ೫-೬ ಹುಡುಗರ ಗುಂಪೊಂದು ನಮ್ಮನ್ನು ನೋಡಿ ದೂರದಲ್ಲೆ ಕುಳಿತಿತು. ಬಹುಶಃ ಸಭ್ಯತೆಗಾಗಿ ದೂರದಲ್ಲೆ ಕುಳಿತು ನಾವು ಜಾಗ ಖಾಲಿ ಮಾಡುವವರೆಗೆ ಕಾಯುತ್ತಿದ್ದದ್ದು ನಮ್ಮ ಅರಿವಿಗೆ ಬಂದಾಗ ಸಮಯ ಮಧ್ಯಾನ್ಹ ೧ ಗಂಟೆಯಿರಬೇಕು.
ಮನದಣಿಯೆ ನೀರಾಟದಿಂದ ದಣಿದಿದ್ದ ಮನಗಳಿಗೆ ರಸ್ತೆಯ ಪಕ್ಕದಲ್ಲಿ ಸಿಕ್ಕ ಚಹಾ ಅತ್ಯಂತ ರುಚಿಕರವೆನಿಸಿದ್ದು ಸಹಜವೆ. ನೇರವಾಗಿ ಹೆಬ್ರಿಗೆ ಬಂದು ಊಟಮುಗಿಸಿ ಸುಡುತ್ತಿದ್ದ ಬಿಸಿಲಿನಲ್ಲಿ ಬಂದು ಢೇರೆಯೊಳಗೆ ಬಿದ್ದೆವು. ಸಣ್ಣದೊಂದು ನಿದ್ದೆ ತೆಗೆದು ಕಾರು ಹತ್ತಿ ಕೋಡ್ಲುತೀರ್ಥಕ್ಕೆ ಹೋಗುವ ದಾರಿಯಲ್ಲಿ ಸಿಗುವ ನದಿಯಲ್ಲಿ ಇಳಿಯುವ ಮನಸ್ಸಿನಿಂದ ಆ ದಾರಿಯಲ್ಲಿ ಹೊರಟೆ, ಹೆಬ್ರಿಯಿಂದ ಸೋಮೇಶ್ವರಕ್ಕೆ ಹೋಗುವ ರಸ್ತೆಯಲ್ಲಿ ಬಲಭಾಗದಲ್ಲಿ ಸಿಗುವ ಕಮಾನಿನಲ್ಲಿ ಬಲಗಡೆಗೆ ತಿರುಗಿ ಅಲ್ಲಿಂದ ಮುಂದೆ ಸುಮಾರು ೨೦ ನಿಮಿಷ ಕ್ರಮಿಸಿದ ನಂತರ ಸೇತುವೆಯೊಂದನ್ನು ದಾಟುವಾಗ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯೊಂದು ನನ್ನ ಗಮನ ಸೆಳೆಯಿತು. ಅಲ್ಲೆ ವಾಹನವನ್ನು ನಿಲ್ಲಿಸಿ ೨ ಹೊಳೆಗಳು
ಸೇರುವ ಜಾಗ ನೀರಿಗಿಳಿಯುವಂತೆ ನನ್ನ ಪ್ರೆರೇಪಿಸಿದರೂ ಆಗುಂಬೆಯ ಸೂರ್ಯಾಸ್ತಮಾನ ವೀಕ್ಷಿಸಲು ಹೋಗಲು ಸಮಯದ ಅಭಾವವಿದ್ದುದರಿಂದ ಆ ಯೋಜನೆಯನ್ನು ಅಲ್ಲೆ ಕೈಬಿಟ್ಟು ಕೋಡ್ಲು ತೀರ್ಥದ ಕಡೆ ವಾಹನ ಚಲಾಯಿಸಿದೆ. ಕೋಡ್ಲುತೀರ್ಥ ನನ್ನ ಗುರಿಯಲ್ಲವಾದರೂ ದಾರಿಯಲ್ಲಿ ಸಿಗುವ ಹೊಳೆ ನಾಳಿನ ಯೋಜನೆಗೆ ನನ್ನ ಗಮನದಲ್ಲಿತ್ತು. ಈ ರಸ್ತೆ ಮಳೆಯಿಂದ ಹಾಳಾಗಿತ್ತು. ಸುಮಾರು ಅರ್ಧಗಂಟೆಯ ನಂತರ ಸಿಕ್ಕ ನದಿ ಎಲ್ಲರಿಗೂ ಇಷ್ಟವಾಯಿತು.
ಅಲ್ಲಿಂದ ನೇರವಾಗಿ ಆಗುಂಬೆ ಕಡೆ ಹೊರೆಟೆವು. ಕರಾವಳಿ ಮುಗಿದು ಘಟ್ಟ ಪ್ರದೇಶ ಆರಂಭವಾಗುವ ಕುರುಹಾಗಿರುವ ಆಗುಂಬೆ ಘಟ್ಟ ಅತ್ಯಂತ ಕಡಿದಾದ ಬೆಟ್ಟಗಳ ತಿರು ತಿರುವಿನ ರಸ್ತೆಯಲ್ಲಿ ವಾಹನ ಚಲಾಯಿಸುವುದು ಒಂದು ಸಾಹಸ. ಸೂರ್ಯಾಸ್ತಮಾನ ವೀಕ್ಷಿಸಿ ಮತ್ತೆ ಘಟ್ಟವನ್ನಿಳಿದು ಹೆಬ್ರಿಯ ಬಡ್ಕಿಲ್ಲಾಯದಲ್ಲಿ ಊಟ ಮುಗಿಸಿ ಶಿಬಿರಕ್ಕೆ ಬಂದು ಮಲಗಿದೆವು.
ಬೆಳಿಗ್ಗೆ ಬೇಗನೆದ್ದು ಬಡ್ಕಿಲ್ಲಾಯದಲ್ಲಿ ಉಪಹಾರ ಮುಗಿಸಿ ನಿನ್ನೆ ಸಿಕ್ಕಿದ್ದ ಸಂಗಮದಲ್ಲಿ ಬಂದಿಳಿದೆವು ಒಂದು ಕಡೆಯಿಂದ ಬೆಟ್ಟದಿಂದ ಇಳಿದು ರಭಸವಾಗಿ ಹರಿಯುವ ಹೊಳೆ ಇನ್ನೊಂದು ಕಡೆಯಿಂದ ಪ್ರಶಾಂತವಾಗಿ ನಿಂತ ನೀರಿನಂತೆ ಭಾಸವಾಗುವ ಹೊಳೆಗಳ ಸಂಗಮ ಮನಸ್ಸಿಗೆ ಮುದ ನೀಡುವುದು ಖಚಿತ ಇದೆಲ್ಲಕ್ಕೆ ಹೆಚ್ಚಾಗಿ ಅಲ್ಲಿನ ನಿರ್ಜನತೆ, ನೀರವ ಮೌನ, ಹಕ್ಕಿಗಳ ಕಲರವ ಬಂಡೆ ಮತ್ತು ಕಲ್ಲುಗಳ ಮೇಲೆ ಹರಿದು ಬರುವ ಶುಭ್ರವಾದ ನೀರಿನ ಜುಳು ಜುಳು ಶಬ್ಧ ಬಿಟ್ಟರೆ ಬೇರೇನೂ ಕೇಳಿಸುವುದಿಲ್ಲ. ರಸ್ತೆಯಿಂದ ೨೫ ಅಡಿಗಳ ಅಂತರದಲ್ಲಿ ಇರುವ ಈ ಜಾಗ ತಲುಪುವಷ್ತರಲ್ಲಿ ೩-೪ ಜಿಗಣೆಗಳು ಕಾಲಿಗಂಟಿದ್ದವು. ಉಪ್ಪಿನ ಸಹಾಯದಿಂದ ಜಿಗಣೆಗಳನ್ನು ಬಿಡಿಸಿ ನೀರಿಗಿಳಿಯಲು ಸಿದ್ದ. ಯಾವುದೇ ಅಪಾಯದ ಜಾಗವಲ್ಲವೆಂದು ಎಲ್ಲೂ ಹೆಚ್ಚು ಆಳವಾಗಲಿ ನೀರಿನ ಸೆಳೆತವಾಗಲಿ ಇಲ್ಲವೆಂದು ಖಾತರಿಪಡಿಸಿಕೊಂಡು ನೀರಿಗಿಳಿದೆವು. ಮತ್ತದೆ ಕಾರ್ಯಕ್ರಮ ನೀರಿನ ಬರ ಮುಗಿದುಹೋಗುವಂತೆ ದೇಶಕಾಲಗಳನ್ನು ಮರೆತು ಹೋಗುವಂತೆ ಆಡುತ್ತಿದ್ದವರನ್ನು ಎಚ್ಚರಿಸಿದ್ದು ೩ ಲಲನೆಯೊರಡನೆ ದಡದಡನೆ ಇಳಿದು ಬಂದ ಯುವಕ. ನಮ್ಮಿರುವನ್ನು ಗಮನಿಸದೆ ನಾವಿದ್ದ ಜಾಗದ ಪಕ್ಕದಲ್ಲಿ ಕಾಡಿನೊಳಗೆ ನಡೆದು ಹೋದ ಆ ಗುಂಪು ನಮ್ಮನ್ನು ಎಚ್ಚರಿಸಿ ಸಮಯ ಓಡುತ್ತಿರುವುದನ್ನು ಗಮನಿಸುವಂತೆ ಮಾಡಿತು. ಅದೇ ಗುಂಪಿನ ಕೆಲವರು ಅವರನ್ನು ಹುಡುಕುತ್ತ ಬರುವುದೊರಳಗೆ ನಾವು ವಾಹನವನ್ನೇರಲು ಅನುವಾಗುತ್ತಿದ್ದೆವು.
ನೇರವಾಗಿ ಮುದ್ರಾಡಿಯ ಮುಖೇನ ಕಾರ್ಕಳ ತಲುಪಬೇಕಿತ್ತು. ಮುದ್ರಾಡಿಯಲ್ಲಿ ಚಹಾ ಸೇವಿಸಿ ಕಾರ್ಕಳದಲ್ಲಿ ಜಯನಾರಾಯಣರ ಸಲಹೆಯಂತೆ ಸಾಗರ್ ನಲ್ಲಿ ಊಟ ಮುಗಿಸಿ ಬಿಸಿಲಿನ ಝಳವನ್ನು ಶಪಿಸುತ್ತಾ ಕುದುರೆಮುಖದ ಕಡೆ ಹೊರೆಟೆವು. ದಾರಿಯುದ್ದಕ್ಕೂ ಸಿಗುವ ವಾಹನಗಳಿಗೆ ದಾರಿಬಿಡುತ್ತಾ ಘಟ್ಟವನ್ನು ಹತ್ತುತ್ತಾ ಯಾವುದಾದರೂ ಪ್ರಾಣಿಗಳು ಕಾಣಸಿಗಬಹುದೆಂಬ ಕುತೂಹಲದಿಂದ ಇಣುಕಿನೋಡುತ್ತಾ ಮಾಲಿನ್ಯರಹಿತ ಗಾಳಿಯನ್ನು ಸೇವಿಸುತ್ತಾ ದಾರಿ ಕಳೆದೆವು. ಪ್ಲಾಸ್ತಿಕ್ ವಸ್ತುಗಳನ್ನು ಎಸೆಯಬೇಡಿ ಎಂಬ ಅರಣ್ಯ ಇಲಾಖೆಯವರ ಮನವಿ ಫಲಕಗಳು ಯಾರ ಮೇಲೂ ಪರಿಣಾಮ ಬೀರಿದಂತೆ ಗೋಚರಿಸಲಿಲ್ಲ. ದಾರಿಯಲ್ಲಿ ಸಿಗುವ ಕಣಿವೆ ಪ್ರದೇಶಗಳಲ್ಲಿ ನಿಂತು ಛಾಯಾಚಿತ್ರ ತೆಗೆಯುತ್ತಾ ಸೂತನಬ್ಬಿ ಜಲಪಾತಕ್ಕೆ ಬಂದಿಳಿದೆವು. ಸುಸಜ್ಜಿತ ಮೆಟ್ಟಿಲುಗಳಿರುವ ಜಲಪಾತ ಹತ್ತುವಾಗ ಕಷ್ಟವೆನಿಸಿದರೂ ಸರಿ ಶೃಂಗೇರಿಯಿಂದ ಹೊರನಾಡಿಗೆ ಬರುವ ಎಲ್ಲ ಯಾತ್ರಿಗಳು ನೋಡದೆ ಹೋಗಲಾರರು. ಅಲ್ಲಿ ನಮ್ಮ ಕ್ಯಾಮೆರ ಕಣ್ಣು ಹೊಡೆಸಿ ನೇರವಾಗಿ ಭಗವತಿಗೆ ಬಂದಿಳಿದೆವು. ಬಾಗಿಲಲ್ಲೆ ಚಿನ್ನಯ್ಯ ತನ್ನ ಎಂದಿನ ನಗುಮೊಗದೊಂದಿಗೆ ಭೇಟಿಯಾದ. ಬೆಳಕಿಲ್ಲದ ಢೇರೆಗಳನ್ನು ನಮಗೆ ಕೊಡ ಮಾಡಿದ ರಾಜಣ್ಣನನ್ನು ಶಪಿಸಿಕೊಂಡು ನಮ್ಮ ಹೊರೆಗಳನ್ನೆಲ್ಲಾ ಇಳಿಸಿ ಸ್ಪಟಿಕದಷ್ಟು ತಿಳಿಯಾದ ಶುಭ್ರವಾದ ಭದ್ರಾ ಹೊಳೆಯತ್ತ ಓಡಿದ ಅಮಿತ್ ನನ್ನು ಸುಶ್ಮಿತ ಮತ್ತು ಸುಪ್ರಿಯ ಹಿಂಬಾಲಿಸಿದರು. ಶ್ರೀಕಾಂತನಿಗಂತೂ ಅತ್ಯಂತ ತಿಳಿಯಾದ ನೀರು ಸಂತಸ ತಂದಿರುವುದು ಅವನ ಮುಖದ ಚಹರೆಯೆ ಹೇಳುತ್ತಿತ್ತು. ಆದರೂ ಸೌರ ದೀಪಗಳನ್ನು ನಿರ್ವಹಣೆಯಿಲ್ಲದೆ ಹಾಳುಗೆಡವಿದ್ದು ನಮ್ಮ ವ್ಯವಸ್ಥೆಯ ಅವಸ್ಥೆಗೆ ಧ್ಯೋತಕ. ನಮ್ಮ ಹೊರೆಗಳನ್ನೆಲ್ಲಾ ಢೇರೆಗಳಿಗೆ ಒಗೆದು ಭದ್ರಾ ಹೊಳೆಯಲ್ಲಿ ಇಳಿದೆವು ಕಾರ್ಕಳದ ಬಿಸಿಲಿಗೆ ಬೆವರಿದ್ದ ಮೈಮನ ತಣ್ಣಗಿನ ಹೊಳೆಯ ನೀರಿಗೆ ಮೈಜುಮ್ಮೆನಿಸುವಂತಿತ್ತು.
ಈ ಬಾರಿ ಕುದುರೆಮುಖದ ಪೀಕ್ ಚಾರಣ ಹೋಗಬೇಕೆಂದಿದ್ದ ನನ್ನ ಉತ್ಸಾಹಕ್ಕೆ ರಾಜಣ್ಣ ಮತ್ತು ಚಿನ್ನಯ್ಯ ತಡೆಹಿಡಿದರು. ರಾಜಣ್ಣನೊಡಗೂಡಿ ಮಲ್ಲೇಶ್ವರದಲ್ಲಿ ಅಡುಗೆ ಪದಾರ್ಥಗಳನ್ನು ಖರೀದಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿತ್ತು. ಯಾವುದಾದರೂ ಕಾಡುಪ್ರಾಣಿಗಳು ಕಾಣ ಸಿಗಬಹುದೇನೊ ಎಂಬ ಆಸೆಯೊಡನೆ ಮುಖ್ಯ ರಸ್ತೆಯವರೆಗೂ ಕತ್ತಲಿನಲ್ಲಿಯೇ ನಡೆದು ಬಂದವರಿಗೆ ಏನೂ ಸಿಗದಿದ್ದು ನಿರಾಸೆ ತಂದಿತು. ರಾತ್ರಿ ಕತ್ತಲಿನಲ್ಲಿಯೆ ಊಟದಮನೆಯಲ್ಲಿ ಮೇಣದದೀಪದ ಬೆಳಕಿನಲ್ಲಿ ಊಟ ಮುಗಿಸಿ ಅಗ್ನಿದೇವನ ಮುಂದೆ ಕೂತವರಿಗೆ ಜಿಗಣೆಗಳು ದರ್ಶನವಿತ್ತವು. ೧೦.೩೦ ಯ ಸಮಯಕ್ಕೆ ನಿದ್ರಾದೇವಿ ಕೈಹಿಡಿದು ಎಳೆಯತೊಡಗಿದಳು.
೬ ಗಂಟೆಗೆ ಎದ್ದು ಶ್ರೀಕಾಂತನೊಡನೆ ಶಿಬಿರವನ್ನೆಲ್ಲಾ ಕಾಡು ಪ್ರಾಣಿ ಹುಡುಕಲು ಒಂದು ಸುತ್ತು ಹಾಕಿ ನಿರಾಶರಾಗಿ ಹಿಂತಿರುಗಿ ಬಂದು ಮತ್ತೊಂದು ಸುತ್ತು ನಿದ್ದೆ ತೆಗೆದು, ೮ ಗಂಟೆಗೆಲ್ಲ ತಿಂಡಿ ತಿಂದು ಮತ್ತೊಂದು ಸುತ್ತು ಮುಖ್ಯರಸ್ತೆಯವರೆಗೂ ನಡೆದು ಹೋದೆವು ಈ ಬಾರಿ ಸಂಸಾರ ಸಮೇತ. ಶುದ್ದ ಸ್ಪಟಿಕದಂತ ಭದ್ರಾ ಹೊಳೆಯಲ್ಲಿ ಮತ್ತೊಮ್ಮೆ ಮನದಣಿಯೆ ಈಜಿದೆವು. ಇಲ್ಲಿನ ನೀರು ಅದೆಷ್ಟು ತಿಳಿಯಾಗಿದೆಯೆಂದರೆ ೫-೬ ಅಡಿ ತಳದಲ್ಲಿರುವ ಕಲ್ಲುಗಳು ಕಾಣಿಸುತ್ತಿರುತ್ತವೆ ನೀವೆನಾದರೂ ಆಳವನ್ನು ತಿಳಿಯದೆ ನೀರಿಗಿಳಿದರೆ ಹುಂಬರಾಗುವುದು ಖಚಿತ.
ಮಧ್ಯಾನ್ಹ ರಾಜಣ್ಣ ಕೊಟ್ಟ ಊಟಮಾಡಿ ಗಂಗಡಿಕಲ್ಲು ಶಿಖರದ ಕಡೆ ಚಾರಣ ಹೊರೆಟೆವು ಈಗಾಗಲೆ ಮಳೆ ಸುರಿಯುವ ಲಕ್ಷಣಗಳು ಗೋಚರಿಸುತ್ತಿದ್ದವು. ೨-೩ ಕಿ.ಮೀ ಕಾರಿನಲ್ಲಿ ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಕಬ್ಬಿಣದ ಗೇಟ್ ದಾಟಿ ಶೋಲಾ ಕಾಡನ್ನು ದಾಟುತ್ತಿದ್ದಾಗ ಜಿಗಣೆಗಳ ದಂಡು ದಾಳಿಯಿಡುತ್ತಿದ್ದದ್ದು ನನ್ನ ಗಮನಕ್ಕೆ ಬಂದರೂ ಮಕ್ಕಳು ಗಾಭರಿಯಾಗುತ್ತಾರೆಂದು ತಿಳಿಸದೆ ಮುಂದೆ ನಡೆದೆ. ಶ್ರೀಕಾಂತ ಮತ್ತು ಶ್ರೀಮತಿಯವರು ಹಿಂದೆಯೇ ಉಳಿದರು. ಸುಮಾರು ೧ ಕಿ.ಮೀ ನಡೆದ ನಂತರ ಮಳೆ ಬರುವ ಲಕ್ಷಣಗಳು ದಟ್ಟವಾಗತೊಡಗಿದವು ಅದಕ್ಕೆ ಪೂರಕವಾಗಿ ಜಿಗಣೆಗಳು ಎಲ್ಲರ ಕಾಲಿಗೂ ಮೆತ್ತಿಕೊಳ್ಳತೊಡಗಿದವು. ಮತ್ತೊಮ್ಮೆ ಉಪ್ಪಿನ ಸಹಾಯದಿಂದ ಎಲ್ಲವನ್ನು ತೊಡೆದುಕೊಂಡು ಎದುರಿಗೆ ಕಾಣುತ್ತಿದ್ದ ಕಣಿವೆಯ ದೃಶ್ಯಗಳನ್ನೆ ಕಣ್ಣು ಕ್ಯಾಮೆರದಲ್ಲಿ ತುಂಬಿಕೊಂದು ಹಿಂತಿರುಗಿ ಮಲ್ಲೇಶ್ವರಕ್ಕೆ ಬರುವ ದಾರಿಯಲ್ಲಿ ಲಕ್ಯಾ ಅಣೆಕಟ್ಟಿಗೆ ಭೇಟಿ ಕೊಟ್ಟು ಮಲ್ಲೇಶ್ವರಕ್ಕೆ ಬಂದು ಮಾರುಕಟ್ಟೆಯಲ್ಲಿ ರಾತ್ರಿ ಊಟಕ್ಕೆ ಬೇಕಾದ ಕೆಲವು ಪದಾರ್ಥಗಳನ್ನು ಖರೀದಿಸಿ ಶಿಬಿರಕ್ಕೆ ಹಿಂತಿರುಗಿದೆವು. ನಾಳೆ ಅಂದರೆ ೧೩ ರಂದು ನಾವು ಬೆಂಗಳೂರಿಗೆ ಹಿಂತಿರುಗಬೇಕಿತ್ತು. ೪-೫ ದಿನಗಳು ಹೇಗೆ ಕಳೆದವೆಂಬುದು ತಿಳಿಯುವ ಮುನ್ನವೆ ೧೩ ಓಡಿ ಬಂದಿತ್ತು. ಈ ಬಾರಿ ಕೋಡ್ಲು ತೀರ್ಥದ ಹಾದಿಯಲ್ಲಿ ಸಿಕ್ಕ ೨ ನವಿಲು ಮತ್ತು ಮುಂಗುಸಿ ಬಿಟ್ಟರೆ ಯಾವುದೇ ಪ್ರಾಣಿಗಳು ಕಾಣಸಿಗಲಿಲ್ಲ. ಊಟಕ್ಕೆ ಕುಳಿತವರಿಗೆ ರಾಜಣ್ಣ ಕಾಡೆಮ್ಮೆಗಳ ಬಗ್ಗೆ ಭಾಷಣ ಬಿಗಿದ. ಕಾಡುಕೋಣ ಮತ್ತು ಎಮ್ಮೆಗಳು ಶಿಬಿರದೊಳಗೆ ಸಂಜೆ ೬ ಗಂಟೆಗೆಲ್ಲ ಬಂದು ಬಿಡತ್ವೆ ಸಾರ್ ಜನ ಜಾಸ್ತಿ ಇದ್ರೆ ಬರಲ್ಲ ಸಾರ್ ಎಂದವನಿಗೆ, ಏನ್ ರಾಜಣ್ಣ ನನಗಂತು ಒಂದು ಕಾಣಿಸಲಿಲ್ವಲ್ಲ ಎಂದವನ್ನು ನೋಡಿ ಪೆಕರನಂತೆ ನಗುತ್ತಾ ಹೋದ. ಕಳೆದ ಬಾರಿ ಕೆಲವು ಕಡವೆ ಜಿಂಕೆಗಳಾದರೂ ಗೋಚರಿಸಿದ್ದವು. ಸಾರ್ ಬೆಳಗ್ಗೆನೆ ಮುಖ್ಯರಸ್ತೆಯ ಬದಿಯ ಗೇಟ್ ಹತ್ತಿರ ಹೋಗಿ ಖಂಡಿತ ಸಿಗುತ್ತೆ ಎಂದವನ ಮಾತು ಕೇಳಿ ರಾತ್ರಿ ಮತ್ತು ಬೆಳಿಗ್ಗೆ ಹೋದವನಿಗೆ ಯಾವುದೆ ಪ್ರಾಣಿ ಗೋಚರಿಸಲಿಲ್ಲ.
ಸರಿಯಪ್ಪ ಊಟ ಕೊಡು ಮಹರಾಯ ಎಂದು ಕೇಳಿ ಹರಟೆ ಹೊಡೆಯುತ್ತ ಊಟ ಮಾಡಿ ಮಲಗಿದವನಿಗೆ ಗಾಢ ನಿದ್ರೆ ಆವರಿಸತೊಡಗಿತು. ಕಾಡಿನ ಪ್ರಾಣಿಯೊಂದು ಓಡಿಸಿಕೊಂಡು ಬರುತ್ತಿದ್ದ ಕನಸಿಗೆ ತಟನೆ ಎಚ್ಚರವಾಗಿ ಅಬ್ಬ! ಎನ್ನುವ ನಿಟ್ಟುಸಿರು ಸಧ್ಯ ಕನಸು ಎಂಬ ನಿರಾಳ ಭಾವ ಎಂತ ಸುಖ ಎಂದು ಕೊಳ್ಳುತ್ತಿದ್ದವನಿಗೆ ಜೋರಾಗಿ ಉಸಿರಾಡುವ ಶಬ್ಧ ಅಸ್ಪಷ್ಟವಾಗಿ ಕೇಳಿಸತೊಡಗಿತು. ಹಿಂದಿನ ರಾತ್ರಿ ಪಕ್ಕದ ಢೇರೆಯಲ್ಲಿದ್ದ ಮಹಾನುಭಾವನ ಗೊರಕೆ ಶಬ್ಧವು ಹೀಗೆ ಕೇಳಿಸುತ್ತಿತ್ತು ಆದರೆ ಇದು ಗೊರಕೆ ಶಬ್ಧದ ರೀತಿಯಿರಲಿಲ್ಲ. ಆ ಶಬ್ಧ ಬರುತ್ತಾ ಬರುತ್ತಾ ಹತ್ತಿರದಲ್ಲೆ ಕೇಳಿಸತೊಡಗಿತು. ಈ ಶಬ್ಧದ ಪರಿಚಯ ನನಗಿದೆ. ಆದರೆ ನೆನಪಾಗುತ್ತಿಲ್ಲ. ಹೊರಗೆ ಹೋಗೋಣವೆಂದರೆ ದೀಪವಿಲ್ಲದೆ ಏನೂ ಕಾಣಿಸದಂತ ಕಾರ್ಗತ್ತಲು. ಮನಸ್ಸಿನಲ್ಲಿ ಭಯ ಕುತೂಹಲ. ಗಡಿಯಾರ ಸಮಯ ೩.೩೦ ತೋರಿಸುತ್ತಿತ್ತು. ಸುಮಾರು ಅರ್ಧ ಗಂಟೆ ಆ ಶಬ್ಧವನ್ನೆ ಆಲಿಸುತ್ತಾ ಹಾಗೆ ಮಲಗಿದ್ದವನಿಗೆ ಆ ಜೋರಾಗಿ ಉಸಿರಾಡುವ ಶಬ್ಧ ನಿಚ್ಚಳವಾಗಿ ಅತೀ ಹತ್ತಿರದಲ್ಲೆ ಕೇಳಿಸಲಾರಂಭಿಸಿತು. ಈಗ ನನಗೆ ಆ ಶಬ್ಧ ಸ್ಪಷ್ಟವಾಗಿ ನೆನಪಾಗತೊಡಗಿತು. ಹಳ್ಳಿಯಲ್ಲಿ ನಮ್ಮ ಮನೆಯ ಎಮ್ಮೆ ಕಾಯುತ್ತಿದ್ದ ಶಾಮ್ಲಿಯೊಡನೆ ಹೋದಾಗ ಎಮ್ಮೆಗಳು ಮತ್ತು ಹಸುಗಳು ಹುಲ್ಲು ಮೇಯುವಾಗ ಮೂಸುತ್ತಿದ್ದ ಶಬ್ಧವದು. ತಕ್ಶಣವೆ ಮೈ ರೊಮಾಂಚನ ಗೊಂಡು ಸ್ವಲ್ಪ ಭಯವೂ ಆಯಿತು. ಏಕೆಂದರೆ ಆ ಶಬ್ಧ ಈಗ ಸ್ಪಷ್ಟವಾಗಿ ನಾವಿದ್ದ ಢೇರೆಯ ಪಕ್ಕದಲ್ಲೆ ಅತ್ಯಂತ ಸನಿಹದಲ್ಲೆ ಕೇಳಿಸುತ್ತಿತ್ತು. ಈಗ ನನಗೆ ಸ್ಪಷ್ಟವಾಗಿ ತಿಳಿದು ಹೋಯಿತು ಒಂದೋ ಕಡವೆ ಅಥವಾ ಕಾಡೆಮ್ಮೆ ನಮ್ಮ ಢೇರೆಯ ಪಕ್ಕದಲ್ಲಿದೆ ಆದರೆ ನೋಡುವುದು ಹೇಗೆ? ಕತ್ತಲೆಯಲ್ಲಿಯೆ ಎದ್ದು ನೋಡೇಬಿಡೋಣವೆಂದು ತೀರ್ಮಾನಿಸಿದೆ. ಆದರೆ ರೆಪ್ಪೆ ಪಟ ಪಟ ಬಡಿದರೂ ಏನೂ ಕಾಣದಂತ ಕಾರ್ಗತ್ತಲು ಸಮಯ ಈಗಾಗಲೆ ೪ ದಾಟಿದ್ದಿರಬೇಕು. ಢೇರೆಯ ಝಿಪ್ ತೆರೆದರೆ ಆ ಶಬ್ಧಕೆ ಅದು ಓಡಿಹೋಗುವುದು ಖಚಿತ. ಈ ಸಮಯಕ್ಕೆ ನಾವಿದ್ದ ಢೇರೆಯನ್ನು ನಿಲ್ಲಿಸಲು ನೆಟ್ಟಿದ್ದ ಕಬ್ಬಿಣದ ಕಂಭಕ್ಕೆ ಒಮ್ಮೆ ಆ ಪ್ರಾಣಿಯ ಬಾಲ ತಗುಲಿ ಠಣ್ ಎಂಬ ಶಬ್ಧವಾಯಿತು ಇದರಿಂದ ಆ ಪ್ರಾಣಿ ಎಲ್ಲಿದೆಯೆಂಬ ಸರಿಯಾಗಿ ಊಹೆ ಮಾಡಲು ನೆರವಾಯಿತು. ಸರಿ ಬಾಗಿಲಿನ ತೆರದಲ್ಲಿರುವ ಝಿಪ್ ಕೆಳಭಾಗದಲ್ಲಿ ಹರಿದುಹೋಗಿದ್ದ ಢೇರೆ ನೆನಪಾಯಿತು. ಸ್ವಲ್ಪವೂ ಶಬ್ಧ ಮಾಡದೆ ಮಂಚದಿಂದ ಕೆಳಗಿಳಿದು ತೆವಳಿಕೊಂಡೆ ತಲೆಯನ್ನು ಹೊರಹಾಕಿದವನಿಗೆ ಕಂಡದ್ದು ಬರೀ ಕಾರ್ಗತ್ತಲು ಆದರೆ ಅದೆ ಶಬ್ಧ ಸುಮಾರು ೨-೩
ಅಡಿಗಳ ದೂರದಲ್ಲಿ ಕೇಳಿಸುತ್ತಿದೆ. ಪಕ್ಕಕ್ಕೆ ತಿರುಗಿದವನಿಗೆ ಕಂಡದ್ದು ಶ್ರೀಕಾಂತನ ಢೇರೆಯ ದೀಪ. ಹತ್ತಾರು ಕ್ಷಣಗಳ ನಂತರ ನನ್ನ ಕಣ್ಣು ಆ ಬೆಳಕಿಗೆ ಹೊಂದಿ ಕೊಂಡ ಮೇಲೆ ಪಕ್ಕದಲ್ಲೆ ನಿಂತಿದ್ದ ಕಾಡೆಮ್ಮೆ ನಿರಾತಂಕವಾಗಿ ಮೇಯುತ್ತಿದೆ. ತಕ್ಷಣವೆ ಹೊಳೆದದ್ದು ಫೋಟೊ ತೆಗೆಯಬೇಕೆಂದು. ಮೆಲ್ಲನೆ ತೆವಳಿಕೊಂಡು ಹಿಂತಿರುಗಿ ತಡಕಾಡಿ ಕ್ಯಾಮೆರ ಮತ್ತು ಟಾರ್ಚನ್ನು ಹಿಡಿದು ಸ್ವಲ್ಪವೂ ಶಬ್ಧವಾಗದಂತೆ ಢೇರೆಯಿಂದ ಆಚೆ ತಲೆ ಹಾಕಿ ಕ್ಯಾಮೆರ ಸಜ್ಜುಗೊಳಿಸಿದವನಿಗೆ ಕ್ಯಾಮೆರದ ಬೆಳಕಿನಿಂದ ಕತ್ತಲು ಕವಿದಂತಾಗಿ ಏನೂ ಕಾಣಿಸದಂತಾಯ್ತು. ನನಗೂ ಮತ್ತು ಪ್ರಾಣಿಗೂ ಮಧ್ಯೆ ಒಣಗಿ ಹಾಕಿದ್ದ ನಮ್ಮ ಬಟ್ಟೆಗಳು ಅಡ್ಡ ಇದ್ದವು. ಎದ್ದು ನಿಂತು ಆ ಬಟ್ಟೆಗಳನ್ನು ಪಕ್ಕಕ್ಕೆ ಸರಿಸಲು ಭಯ ಮತ್ತು ಆ ಶಬ್ಧಕ್ಕೆ ಓಡಿ ಹೋದರೆ ಅಥವ ನನ್ನನ್ನು ಆಕ್ರಮಿಸಿದರೆ ಎಂಬ ಆತಂಕ. ಮತ್ತೊಮ್ಮೆ ಸಾವರಿಸಿಕೊಂಡು ಬಾಲ ಅಳ್ಳಾಡಿಸಿಕೊಂಡು ಮೇಯುತಿದ್ದ ಪ್ರಾಣಿಯ ಫೋಟೊ ಹೊಡೆದೇ ಬಿಟ್ಟೆ. ನನ್ನ ಚರ್ಯೆಯನ್ನು ಅದು ಗಮನಿಸದಂತೆ ಕಾಣಿಸಲಿಲ್ಲ. ವಿಡಿಯೊ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಸಾಹಸಕ್ಕೆ ಬೆಳಕು ಸಹಕರಿಸಲಿಲ್ಲ. ಈಗ ಪ್ರಪಂಚದ ಪರಿವೆಯೇ ಇಲ್ಲದೆ ಬೆಂಗಳೂರಿನ ಜಂಜಾಟಗಳಿಂದ ಮುಕ್ತಿ ಪಡೆದಂತೆ ನಿದ್ದೆ ಮಾಡುತ್ತಿದ್ದ ಹೆಂಡತಿಯನ್ನು ಮೆಲ್ಲನೆ ಎಚ್ಚರಗೊಳಿಸಿ ಕಾಡೆಮ್ಮೆಯ ಬಗ್ಗೆ ತಿಳಿಸಿ, ಆಕೆಯೂ ನನ್ನಂತೆ ತೆವಳಿಕೊಂಡು ಹೊರಗೆ ತಲೆ ಚಾಚಿ ನೋಡುವಂತೆ ಹೇಳಿದೆ. ಈ ಹೊತ್ತಿಗಾಗಲೆ ಅದು ೫-೬ ಅಡಿಗಳಷ್ಟು ದೂರ ಹೋಗಿತ್ತು. ಹೆಂಡತಿಗಂತೂ ಖುಷಿಯೋ ಖುಷಿ. ಎಲ್ಲೆಲ್ಲೋ ಹುಡುಕಿದ್ವಿ ಪಕ್ಕದಲ್ಲೆ ಬಂದು ನಿಂತಿದ್ಯಲ್ಲ? ಎನ್ನುತ್ತಾ ಮತ್ತೆ ನಿದ್ದೆಗೆ ಜಾರಿದಳು. ಈಗ ಹ್ಯಾಂಡಿಕ್ಯಾಂ ಸಜ್ಜುಗೊಳಿಸಿ ಅದರ ದೀಪವನ್ನು ಹಾಕಿಕೊಂಡು ಹೊರಬಂದವನಿಗೆ ಕಾಡೆಮ್ಮೆ ನಮ್ಮ ಢೇರೆಯ ಬಳಿಯಲ್ಲಿ ಕಾಣಿಸಲಿಲ್ಲ ಅದೇ ದೀಪದ ಬೆಳಕಿನಲ್ಲಿ ಹುಡುಕುತ್ತಿದ್ದವನಿಗೆ ಹೊಳೆಯುವ ಎರಡು ಬೆಳಕಿನುಂಡೆಗಳು ಕಂಡದ್ದು ಢೇರೆ ಮುಂಭಾಗದಲ್ಲಿ ಸುಮಾರು ೧೫-೨೦ ಅಡಿಗಳ ದೂರದಲ್ಲಿ. ಆದರೆ ಅದನ್ನು ದೃಶ್ಯೀಕರಿಸುವ ನನ್ನ ಪ್ರಯತ್ನ ಈಗಲೂ ಕೈಗೂಡಲಿಲ್ಲ. ಈಗ ಶ್ರೀಕಾಂತನನ್ನು ಎಚ್ಚರಿಸಲು ೨-೩ ಬಾರಿ ಕರೆದರೂ ಅವನಿಂದ ಯಾವ ಪ್ರತಿಕ್ರಿಯೆ ಬಾರದಿದ್ದಾಗ ಸುಮ್ಮನಾದೆ. ಬಹುಶಃ ನಾನು ಶ್ರೀಕಾಂತನನ್ನು ಕರೆದ ಸದ್ದಿಗೆ ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಸಮ್ಯ ಬೆಳಗಿನ ೪.೩೦ ತೋರಿಸುತ್ತಿತ್ತು.
೫ ಗಂಟೆ ಸುಮಾರಿಗೆ ಶ್ರೀಕಾಂತನನ್ನು ಎಚ್ಚರಗೊಳಿಸಿ ಶಿಬಿರವನ್ನು ಸುತ್ತು ಹಾಕಿದರೂ ಕಾಡೆಮ್ಮೆ ಕಾಣಿಸಲಿಲ್ಲ. ಮತ್ತೊಮ್ಮೆ ಮುಖ್ಯರಸ್ತೆಯ ಬಳಿಗೆ ನಡೆದು ಹೊರಟವನಿಗೂ ಮತ್ತದೆ ನಿರಾಶೆ. ಕಾಡೆಮ್ಮೆಯ ಹೆಜ್ಜೆ ಗುರುತುಗಳು ಮತ್ತು ಅದು ನಡೆದು ಬಂದ ದಾರಿಯಲ್ಲಿ ಹುಲ್ಲು ಅಸ್ತವ್ಯಸ್ತವಾಗಿದ್ದ ಜಾಗಗಳು ನಾವಿದ್ದ ಢೇರೆಗೆ ಅದೆಷ್ಟು ಸಮೀಪವಿತ್ತೆಂದು ಗೊತ್ತಾದಾಗ ಭಯಮಿಶ್ರಿತ ಸಂತೋಷ.
೮ ಗಂಟೆಗೆ ಸರಿಯಾಗಿ ಅಡುಗೆ ಮನೆಗೆ ಬಂದು ರಾಜಣ್ಣ ಕೊಟ್ಟ ಪೂರಿ ಪಲ್ಯ ಮೆದ್ದು ೯ ಗಂಟೆಗೆ ಅಲ್ಲಿಂದ ಹೊರಟು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನಂಗೈದು ನೇರವಾಗಿ ಹೊಂಡಗಳಿಂದಲೇ ಆವೃತವಾದ ಘಟ್ಟದ ರಸ್ತೆಯಲ್ಲಿ ಮೆಲ್ಲನೆ ವಾಹನ ಚಲಾಯಿಸುತ್ತಾ ಕೊಟ್ಟಿಗೆಹಾರದಲ್ಲಿ ಎಳನೀರು ಕುಡಿದು ಬಾಣಾವರದಲ್ಲಿ ಶ್ರೀಕಾಂತನ ಸಂಬಂಧಿಕರ ಮನೆಯಲ್ಲಿ ಊಟಮಾಡಿ ಅರಸೀಕೆರೆ, ತಿಪಟೂರು, ನಿಟ್ಟೂರು ಗುಬ್ಬಿ ತುಮಕೂರು ಮಾರ್ಗವಾಗಿ ಬೆಂಗಳೂರನ್ನು ತಲುಪಿದೆವು.

ದುರಾದೃಷ್ಠದ ಪ್ರವಾಸ


ಆಗಸ್ಟ್ ೧೫-೧೭ ರವರೆಗೆ ಸಿಗುವ ರಜವನ್ನು ಉಪಯೋಗಿಸಿಕೊಂಡು ಪ್ರವಾಸ ಕಾರ್ಯಕ್ರಮ ಹೋಗುವ ಸಲುವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುತ್ತೋಡಿಯಲ್ಲಿ ಸ್ಥಳ ಕಾದಿರಿಸಲು ಜೂನ್ ೧೫ರಂದು ದೂರವಾಣಿ ಕರೆಮಾಡಿದವನಿಗೆ ೧ ತಿಂಗಳ ನಂತರ ಕರೆ ಮಾಡಿ ಎನ್ನುವ ಉತ್ತರ. ಜುಲೈ ೧೪ರಂದು ಮತ್ತೆ ಕರೆ ಮಾಡಿದವನಿಗೆ ಈ ಬಾರಿ ಧನಾತ್ಮಕ ಉತ್ತರ ಸಿಕ್ಕಿತು. ಕಳೆದ ೩ ವರ್ಷದಿಂದ ಪ್ರಯತ್ನಿಸುತ್ತಿದ್ದವನಿಗೆ ಕೊನೆಗೂ ಯಶಸ್ಸು ಸಿಕ್ಕಿತ್ತು. ಈ ಪ್ರವಾಸದಲ್ಲಿ ಚಾರಣ ಕಾರ್ಯಕ್ರಮವಿರುವುದಿಲ್ಲ ಎಂದು ನಾನೇ ನಿರ್ಧರಿಸಿದ್ದೆ.
ಈಗಾಗಲೆ ನನ್ನ ಪ್ರವಾಸ ಕಾರ್ಯಕ್ರಮಗಳಿಗೆ ಜೊತೆಯಾಗುವ ಹವ್ಯಾಸ ಬೆಳೆಸಿಕೊಂಡ ಸಹೋದ್ಯೋಗಿ ಶ್ರೀಧರ ತಾನೂ ಬರುವುದಾಗಿ ತಿಳಿಸಿದ. ಆದರೆ ಆತ ತಡಮಾಡಿದ್ದು ಕೇವಲ ಘಂಟೆಯ ಕಾಲ ಅದರಿಂದಾಗಿ ಅಲ್ಲಿನ ಕುಟೀರವನ್ನು ಕಾದಿರಿಸುವುದು ಸಾಧ್ಯವಾಗಲಿಲ್ಲ. ಈ ಪ್ರವಾಸದ ಅನುಭವ ಶ್ರೀಧರ ಬರದಿದ್ದುದ್ದು ಒಳ್ಳೆಯದಾಯಿತೆಂದೆ ಭಾವಿಸಬೇಕು. ಹೌದು ಇದೊಂದು ದುರದೃಷ್ಟಕರ ಪ್ರವಾಸ. ಮನೆಯಲ್ಲಿ ಹೇಳದೆ ಕೇಳದೆ ಸ್ಥಳ ಕಾದಿರಿಸಿದ್ದು ತಪ್ಪಾಯಿತೆನೋ ಎಂದು ಕೊನೆ ಕೊನೆಗೆ ನನಗೇ ಸಂಶಯ ಹುಟ್ಟತೊಡಗಿತು. ನಾವು ಹೊರಡಬೇಕಾದ ದಿನವೇ ವರಮಹಾಲಕ್ಷ್ಮಿ ಹಬ್ಬ. ಮಾರನೇ ದಿನ ಉಪಾಕರ್ಮ. ಇದೆಲ್ಲದರ ಮಧ್ಯೆ ಅಂದೇ ರಾತ್ರಿ ಚಂದ್ರಗ್ರಹಣ. ಹೀಗಿದ್ದೂ ಹಬ್ಬಕ್ಕಾದ್ರು ಮನೆಲಿರ್ಬಾರ್ದ? ಎಂದು ಅಮ್ಮ ಗೊಣಗಬಹುದು ಎಂದು ಊಹಿಸಿದ್ದವನಿಗೆ ಅಂತದ್ದೇನು ನಡೆಯದಿದ್ದದ್ದು ಸಮಾಧಾನ ತಂದಿತು. ೧೨ರ ಮಂಗಳವಾರ ಅತ್ತೆ ಸೊಸೆಯ ಬಳಿ ಹೇಳುತ್ತಿದ್ದದ್ದು ಕಿವಿಗೆ ಬಿತ್ತು ಶನಿವಾರ ಗ್ರಹಣ ನನ್ನ ಮಗ ಅಮಿತ್ ರಾಶಿಗೆ ಹಿಡಿಯುತ್ತೆ ತುಂಬಾ ಕ್ರೂರವಾಗಿ ಬೇರೆ ಇದೆಯಂತೆ ತುಂಬಾ ಹುಶಾರಾಗಿ ನೋಡ್ಕೊಳಿ ಮಗೂನ ಎನ್ನುವ ಕಟ್ಟೆಚ್ಛರದ ಮಾತುಗಳು ನನ್ನ ಕಿವಿಗೆ ಬಿದ್ದವು. ಏನೋ ಮನಸ್ಸಿಗೊಂತರ ಕಸಿವಿಸಿ. ಕೊನೆ ಕ್ಷಣದಲ್ಲಿ ಹೋಗುವುದು ಬೇಡ ಎಂದು ಬಿಡೋಣವೆನಿಸುತ್ತಿತ್ತು. ಆದರೂ ಮುತ್ತೋಡಿಗೆ ಹೋಗುವ ಅವಕಾಶಕ್ಕಾಗಿ ೩-೪ ವರ್ಷದಿಂದ ಕಾದಿದ್ದು ನೆನಪಾಗಿ ಏನಾದರಾಗಲಿ ಹೋಗೇ ಬಿಡುವ ಎಂದು ತೀರ್ಮಾನಿಸಿ ಹೊರಟೆ ಬಿಟ್ಟೆ. ಹಿಂದಿನ ದಿನವೆ ಅಮ್ಮ ಗ್ರಹಣ ದೋಷ ಪರಿಹಾರಕ್ಕಾಗಿ ಪಠಿಸುವ ಸ್ತೋತ್ರಗಳನ್ನೆಲ್ಲ ಬರೆದು ಕೊಂಡು ಹೋಗುವಂತೆ ತಾಕೀತು ಮಾಡಿದ್ದರು. ೧೫ರಂದು ಮಗನನ್ನು ೧೦ ಘಂಟೆಗೆ ಶಾಲೆಯಿಂದ ಕರೆತಂದು ಮನೆಯಿಂದ ಹೊರಟಾಗ ಬೆಳಿಗ್ಗೆ ೧೦.೩೦
ನನ್ನ ನೀರೀಕ್ಷೆ ಸುಳ್ಳಾಗಿಸುವಂತೆ ನೆಲಮಂಗಲ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿರಲಿಲ್ಲ. ಸರಾಗವಾಗಿ ವಾಹನ ಓಡಿಸಿಕೊಂಡು ಪ್ರತಿ ಪ್ರವಾಸದ ಹವ್ಯಾಸದಂತೆ ಕರಡಿಗುಚ್ಚಮ್ಮ ದೇವಸ್ಥಾನದ ಆವರಣದ ತ್ರಿಮುಖ ಗಣಪನಿಗೊಂದು ಸಾಷ್ಟಾಂಗ ನಮಸ್ಕಾರ ಹಾಕಿ, ಇನ್ನೇನು ಹಾಸನ ತಲುಪಲು ೧೫ ಕಿ.ಮೀ ದೂರವಿರಬೇಕಾದರೆ ಮುಂದೆ ಹೋಗುತ್ತಿದ್ದ ಬಸ್ಸನ್ನು ಹಿಂದೆ ಹಾಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಬಸ್ ಹತ್ತಿರ ಬಂದೇ ಬಿಟ್ಟಿತು. ವಾಹನವನ್ನು ನಿಧಾನಗೊಳಿಸಿ ಹಿಂದೆ ಉಳಿಯಲು ಈಗಾಗಲೆ ತುಂಬಾ ಮುಂದೆ ಬಂದು ಬಿಟ್ಟಿದ್ದೆ. ಎಡಗಡೆ ಬಸ್ಸಿದೆ. ಎದುರಿಗೆ ಮೃತ್ಯುವಿನಂತೆ ನುಗ್ಗಿ ಬರುತ್ತಿರುವ ಬಸ್. ಆತ ತನ್ನ ವೇಗವನ್ನು ಕಡಿಮೆ ಮಾಡುತ್ತಾನೆಂದು ನಿರೀಕ್ಷಿಸಿದವನಿಗೆ ಅದರ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಪಕ್ಕದಲ್ಲಿದ್ದ ಪತ್ನಿಗೆ ನಾವಿರುವ ಪರಿಸ್ಥಿತಿ ಅರ್ಥವಾಗಿ ಗಾಭರಿಗೊಂಡದ್ದು ಗೋಚರವಾಗುತ್ತಿತ್ತು, ನಮ್ಮೆಲ್ಲರ ಕಥೆ ಮುಗಿಯಿತು ಇವತ್ತಿಗೆ ಎನಿಸಿತು. ಎದುರಿಗೆ ಬಸ್ ಯಮನಂತೆ ನುಗ್ಗಿ ಬರುತ್ತಿತ್ತು . ಸರಿ ಏನಾದರಾಗಲಿ ಎಂದು ಬಲಗಡೆಗೆ ಗಮನಿಸಿದೆ, ತಕ್ಷಣವೇ ನನ್ನ ಕಾರನ್ನು ಬಲಭಾಗಕ್ಕೆ ಎಳೆದೆ, ಅಷ್ಟೆ ರಸ್ತೆ ಪಕ್ಕಕ್ಕೆ ಕಾರು ಧಡಾರನೆ ಇಳಿಯಿತು. ಎದುರಿಗೆ ಬರುತ್ತಿದ್ದ ಬಸ್ ನನ್ನ ಕಾರಿನ ಹಿಂದೆ ರೊಯ್ಯನೆ ನುಗ್ಗಿ ಹೋಯಿತು. ಇಷ್ಟೆಲ್ಲವೂ ಕ್ಷಣ ಮಾತ್ರದಲ್ಲಿ ನಡೆದು ಹೋಯಿತು.
ಏನಾಗುತ್ತಿದೆಯೆಂದು ಅರಿವಿಗೆ ಬರುವಷ್ಟರಲ್ಲಿ ಇಡೀ ಘಟನೆ ನಡೆದು ಹೋಗಿತ್ತು. ಹಳ್ಳಕ್ಕೆ ಇಳಿದ ತಕ್ಷಣ ಕಾರು ನಿಯಂತ್ರಣಕ್ಕೆ ಬರಲಿಲ್ಲ. ಹುಲ್ಲಿನ ಮೇಲೆ ಮಳೆ ನೀರು ನಿಂತಿದ್ದರಿಂದ ಸ್ವಲ್ಪ ಹೆಣಗಾಡಿ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಂಡೆ. ನಗುತ್ತ ಸ್ಟಿಯರಿಂಗ್ ಚಕ್ರವನ್ನು ಹಿಡಿದು ಕೂತಿದ್ದವನಿಗೆ ಕಂಡದ್ದು ಭಯದಿಂದ ಹಣ್ಣಾಗಿದ್ದ ಪತ್ನಿ ಮತ್ತು ಪುತ್ರ. ಯಾರ ಪ್ರಾರ್ಥನೆ ನಮ್ಮನ್ನು ಕಾಪಾಡಿತ್ತೋ? ಗೊತ್ತಿಲ್ಲ. ನಗುತ್ತಿದ್ದವನನ್ನು ಗದರಿದಾಗಲೇ ನನಗೂ ಪರಿಸ್ಥಿತಿಯ ಗಂಭೀರತೆಯ ಅರಿವಾದದ್ದು. ರಸ್ತೆಯಿಂದ ೫-೬ ಅಡಿ ಕೆಳಗೆ ನಿಂತಿತ್ತು ನನ್ನ ವಾಹನ. ವಾಹನಕ್ಕಾಗಲೀ ನಮಗಾಗಲೀ ಯಾವುದೆ ಅಪಾಯವಿರಲಿ ಸಣ್ಣದೊಂದು ತರಚು ಗಾಯವೂ ಆಗಿರಲಿಲ್ಲ. ಆ ಹಳ್ಳಕ್ಕೆ ಇಳಿಯುವಾಗ ಮಾತ್ರ ಕಾರು ನಿಯಂತ್ರಣಕ್ಕೆ ಸಿಗದೆ ಸ್ವಲ್ಪ ಗಾಭರಿಯಾಗಿತ್ತು. ಓಹ್ ಅದನ್ನು ಈಗ ನೆನೆಸಿಕೊಂಡರೆ ಭಯವಾಗುತ್ತದೆ. ಮೃತ್ಯುವನ್ನು ಇಷ್ಟು ಹತ್ತಿರದಿಂದ ನೋಡಿದ ಅನುಭವ ಮೈ ಜುಂ ಎನಿಸುತ್ತದೆ. ಮುಖಾಮುಖಿ ಡಿಕ್ಕಿ ಸ್ವಲ್ಪದರಲ್ಲೆ ತಪ್ಪಿ ಹೋಯಿತು. ಪಕ್ಕದಲ್ಲೆ ಇದ್ದ ಡಾಬಾದಲ್ಲಿನ ಮಂದಿ ಆ ಘಟನೆಯನ್ನೆ ಎವೆಯಿಕ್ಕದೆ ನೋಡುತ್ತಿದ್ದದ್ದು ನನ್ನ ಗಮನಕ್ಕೂ ಬಂತು ಕೆಲವರು ಈ ಕಡೆಗೆ ನಡೆದು ಬರುವಷ್ಟರಲ್ಲಿ ನಾನು ಕಾರನ್ನು ಮತ್ತೆ ರಸ್ತೆಗೆ ತಂದು ಹೊರಟೇ ಬಿಟ್ಟೆ. ಈ ಪ್ರವಾಸದ ಕೆಟ್ಟ ಅನುಭವಗಳು ಇಲ್ಲಿಗೆ ನಿಲ್ಲಲಿಲ್ಲ. ಆ ಕ್ಷಣದಲ್ಲಿ ನನಗೆ ಭಯವಾಗದಿದ್ದರೂ ಈಗ ನೆನಪಿಸ್ಕೊಂಡಾಗ ಎದೆ ನಡುಗುತ್ತದೆ. ಛೇ ಅಲ್ಲಿ ನಿಂತಿದ್ದ ಕಾರಿನ ಫೋಟೋವೊಂದನ್ನು ತೆಗೆಯಬೇಕಿತ್ತು.
ಹಾಸನದಲ್ಲಿ ಊಟ ಮುಗಿಸಿ ಬೇಲೂರು ರಸ್ತೆಯಲ್ಲಿ ಚಿಕ್ಕಮಗಳೂರಿಗೆ ಹೋಗುವಾಗ ಹಳ್ಳಿಯೊಂದರ ಬಳಿ ಜನಗಳನ್ನು ಇಳಿಸಲು ನಿಂತಿದ್ದ ಎದುರಿನಿಂದ ಬಂದ ವಾಹನದಿಂದ ಇಳಿದು ಬಂದ ಹರೆಯದ ಹಳದಿ ಸೀರೆಯುಟ್ಟ ಹೆಣ್ಣೊಬ್ಬಳು ಕತ್ತು ಬಗ್ಗಿಸಿ ಅದ್ಯಾವುದೋ ಕನಸು ಕಾಣುತ್ತಾ ನನ್ನ ವಾಹನದ ಹಾರ್ನ್ ಶಬ್ಧವನ್ನು ಗಮನಿಸದೆ ನಿಂತಿದ್ದ ವಾಹನದ ಹಿಂಭಾಗದಿಂದ ನಡೆದು ಬರುತ್ತಿರಬೇಕಾದರೆ ಇನ್ನೇನು ಕಾರಿಗೆ ಡಿಕ್ಕಿ ಹೊಡೆಯಬೇಕೆನ್ನುವ ಕೊನೆಯ ಕ್ಷಣದಲ್ಲಿ ಏಯ್ ಎನ್ನುವ ನನ್ನ ಉದ್ಗಾರಕ್ಕೆ ಮತ್ತು ಆಕೆಯ ಪಕ್ಕದಲ್ಲಿದ್ದ್ದ ಮತ್ತೊಂದು ಹೆಂಗಸಿನ ಅಯ್ಯೊ ಎನ್ನುವ ಉದ್ಗಾರಕ್ಕೆ ಬೆಚ್ಚಿದ ಆಕೆ ಇಹಲೋಕಕ್ಕೆ ಹಿಂತಿರುಗಿದಾಗ ನನ್ನ ಕಾರು ಸ್ವಲ್ಪದರಲ್ಲಿ ಮುಂದೆ ಹೋಗಿತ್ತು. ಕೊನೆಕ್ಷಣದಲ್ಲಿ ಆಗುತ್ತಿದ್ದ ಅಪಘಾತದಿಂದ ಆಕೆ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಳು. ಆದರೆ ಇದನ್ನು ನಿರೀಕ್ಷಿಸಿದ್ದ ನನಗೆ ಅಷ್ಟೇನೂ ಗಾಭರಿಯಾಗಲಿಲ್ಲ. ಸ್ವಲ್ಪ ದೂರ ಪಯಣಿಸುವಷ್ಟರಲ್ಲಿ ಛಕ್ಕನೆ ಹಾರಿ ಬಂದ ಗುಬ್ಬಚ್ಚಿಯಂತಹ ಪುಟ್ಟಹಕ್ಕಿಯೊಂದು ಕಾರಿಗೆ ಬಡಿಯುವಂತೆ ಹಾರಿ ಬಂತು. ಹಕ್ಕಿಗಳು ಸಾಮಾನ್ಯವಾಗಿ ಕಾರಿಗೆ ಬಡಿಯುವ ಅವಕಾಶವಿರುವುದಿಲ್ಲವೆಂದು ಮುಂದೆ ಬಂದೆವು. ಯಗಚಿ ಜಲಾಶಯಕ್ಕೊಂದು ಭೇಟಿ ನೀಡೋಣವೆಂದು ವಾಹನ ನಿಲ್ಲಿಸಿ ಜಲಾಶಯದ ಬಳಿ ಒಂದೆರಡು ಛಾಯಾಚಿತ್ರ ಕ್ಲಿಕ್ಕಿಸಿದೆವು. ಅದೇಕೊ ಈ ಪ್ರವಾಸದ ತುಂಬಾ ಅಪಶಕುನಗಳು ಗೊಚರಿಸಿದ್ದವು. ವಯಕ್ತಿಕವಾಗಿ ಶಕುನಗಳಲ್ಲಿ ನಂಬಿಕೆಯಿರದ ನನಗೂ ಈ ಘಟನೆಗಳು ಧೃತಿಗೆಡುವಂತೆ ಮಾಡಿದ್ದವು. ಕಾರು ಹತ್ತುವ ಮುನ್ನ ಅದೇಕೊ ಮನಸ್ಸು ತಡೆಯದೆ ಹಳ್ಳಕ್ಕಿಳಿದಾಗ ಕಾರಿನ ಮುಂಭಾಗಕ್ಕೇನಾದರೂ ಹಾನಿಯಾಗಿದೆಯೆಂದು ಪರೀಕ್ಷಿಸಲು ನೋಡಿದವನಿಗೆ ಸಿಕ್ಕದ್ದು ಸತ್ತು ಕಾರಿಗೆ ಸಿಕ್ಕಿ ಹಾಕಿಕೊಂಡಿದ್ದ ಆ ಪುಟ್ಟ ಪಕ್ಷಿ. ಸಾಮಾನ್ಯವಾಗಿ ಹಾರುತ್ತಿರುವ ಯಾವ ಹಕ್ಕಿಗಳೂ ವಾಹನಕ್ಕೆ ಸಿಲುಕುವುದಿಲ್ಲ. ಮನ್ನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಯಾವ ಪುಟ್ಟ ಮರಿಗಳ ತಾಯಿಯೋ? ನನ್ನ ಕಾರಿಗೆ ಸಿಕ್ಕಿ ಜೀವ ಕಳೆದುಕೊಂಡಿತ್ತು. ಆ ಪುಟ್ಟ ಮರಿಗಳು ತಾಯಿಯ ಆಗಮನಕ್ಕಾಗಿ ಎದುರು ನೋಡುತ್ತಿರುವ ದೃಶ್ಯ ನನ್ನ ಕಣ್ಣೆದುರಿಗೆ ಒಮ್ಮೆ ಸುಳಿದು ಹೋಯಿತು. ನನ್ನ ಮನಸ್ಸು ಘಾಸಿ ಗೊಂಡಿತ್ತು. ಸತ್ತು ಹೋಗಿದ್ದ ಪಕ್ಷಿಯನ್ನು ತೆಗೆದು ಬಿಸುಡಿ ಮುಂದೆ ಹೊರಟೆ. ಮನೆಗೆ ಹಿಂತಿರುಗಿ ಹೋಗುವ ಮನಸ್ಸಾದರೂ ಅದೇಕೊ ಪ್ರಯಾಣ ಮುಂದುವರೆಸಿದೆ. ಸಂಜೆ ೬ ಘಂಟೆಯ ಸಮಯಕ್ಕೆ ಮುತ್ತೋಡಿ ತಲುಪಿದ್ದೆ.
ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ವಲ್ಪದರಲ್ಲೆ ಬರುವುದಾಗಿ ಅಲ್ಲಿನವರೆಗೂ ಕಾಯುವಂತೆ ತಿಳಿಸಿದರು ಅಲ್ಲಿದ್ದ ಕೆಲವು ಅರಣ್ಯ ಇಲಾಖಾ ನೌಕರರು. ನಿಮ್ಮ ಯಾವುದೆ ವಿನಂತಿ ಪತ್ರ ನಮಗೆ ತಲುಪಿಲ್ಲ ಎಂದು ಆತ ನನಗೆ ಮತ್ತೊಂದು ಆಘಾತ ಕೊಡಲು ಪ್ರಯತ್ನಿಸಿದ. ೧೦ ನಿಮಿಷ ತಡಕಾಡಿದ ನಂತರ ಪರ್ವಾಗಿಲ್ಲ ಬಿಡಿ ಎಂದು ನಮಗೆ ಕುಟೀರದ ದಾರಿ ತೋರಿಸಿದರು. ರಭಸದಿಂದ ಹರಿಯುತ್ತಿರುವ ಸೋಮವಾಹಿನಿಯ ದಡದಲ್ಲಿ ನಿರ್ಮಿಸಿರುವ ಸ್ವಚ್ಚತೆಯಿಲ್ಲದ ಕುಟೀರಗಳು. ಪರಿಸರ ಸುಂದರ, ಕುಟೀರಗಳು ಮಾತ್ರ ಸ್ವಚ್ಚತೆ ಕಾಣದೆ ಸೊರಗಿವೆ. ಇತ್ತೀಚೆಗೆ ಬೆಳಕಿನ ಹೆಂಚನ್ನು ಜೋಡಿಸಿದ್ದರಿಂದ ಮಳೆಯಲ್ಲಿ ನೀರು ಸೋರಿದ್ದ ಕುರುಹಾಗಿ ಅಲ್ಲಲ್ಲಿ ನೀರು ನಿಂತಿತ್ತು.
ಯಾವುದೆ ತೆರನಾದ ವಿದ್ಯುತ್ ದೀಪಗಳಿಲ್ಲದ ಕುಟೀರಗಳು. ಇಡೀ ಪ್ರದೇಶಕ್ಕೆ ಸೌರ ವಿದ್ಯುತಾಗಲಿ, ಸಾಮಾನ್ಯ ವಿದ್ಯುತಾಗಲಿ ಅಳವಡಿಸದಂತೆ ನ್ಯಾಯಾಲಯ ಸೂಚಿಸಿದೆಯೆಂದು ಅಲ್ಲಿನ ಅಧಿಕಾರಿ ರಾಘವೇಂದ್ರ ಮಾಹಿತಿಯಿತ್ತರು. ಸೀಮೆಯೆಣ್ಣೆಯಿಂದ ಉರಿಯುವ ಲಾಟೀನು ಅಥವ ನಾವು ತೆಗೆದುಕೊಂಡು ಹೋಗಿದ್ದ ಮೇಣದಬತ್ತಿಗಳೆ ನಮಗೆ ಬೆಳಕಿನ ಆಧಾರ. ದಟ್ಟ ಕಾಡಿನ ಆರಂಭದಲ್ಲಿ ನಿರ್ಮಿಸಿರುವ ಪ್ರದೇಶ. ಅರಣ್ಯ ಇಲಾಖಾ ಕಛೇರಿಗಳು ನೌಕರರ ವಸತಿ ಗೃಹಗಳು, ೨ ಕುಟೀರ, ಅಡುಗೆ ಭಟ್ಟರ ಮನೆಯಷ್ಟೆ ಇಲ್ಲಿರುವ ವ್ಯವಸ್ಥೆ. ಹಿಂದೆ ಇದ್ದ ಢೇರೆಗಳನ್ನು ಕಿತ್ತು ಹಾಕಲಾಗಿದೆ. ಮುತ್ತೋಡಿ ಹುಲಿ ಅಭಯಾರಣ್ಯ ಇದರ ಹೆಸರು. ಸುಮಾರು ೩೦ ಹುಲಿಗಳು ವಾಸವಾಗಿದೆಯೆಂದು ಉಲ್ಲಾಸ್ ಕಾರಂತ ಹುಲಿಗಣತಿ ವರದಿಯ ಆಧಾರಿತ ಎನ್ನುವುದು ಅವರ ಅಂಬೋಣ. ಹುಲಿ, ಚಿರತೆ, ಆನೆ, ಜಿಂಕೆ ಕಡೆವೆ ಕಾಡೆಮ್ಮೆ ಇಲ್ಲಿ ಕಾಣಸಿಗುವ ಮುಖ್ಯ ಪ್ರಾಣಿಗಳು (ಅದೃಷ್ಠವಿದ್ದರೆ ಮಾತ್ರ, ನಮಗಂತೂ ಕೆಂದಳಿಲು ಬಿಟ್ಟರೆ ಬೇರೆ ಯಾವ ಪ್ರಾಣಿಗಳೂ ಕಾಣಿಸಿಕೊಳ್ಳಲಿಲ್ಲ) ಏಷ್ಯಾದಲ್ಲೆ ಏಕೈಕ ಜನವಸತಿಯಿರದ ಸುಮಾರು ೪ ಲಕ್ಷ ಹೆಕ್ಟೇರ್ ವಿಸ್ತೀರ್ಣದ ಅತ್ಯಂತ ದಟ್ಟ ಕಾಡಿದು. ಅದಕ್ಕಾಗಿ ಸುಮಾರು ೧೬ ಹಳ್ಳಿಗಳನ್ನು ಈ ವನ್ಯ ಪ್ರದೇಶದಿಂದ ಸ್ಥಳಾಂತರಿಸಿದ್ದಾರೆ ಎನ್ನುವುದು ಅವರು ಕೊಟ್ಟ ಮತ್ತೊಂದು ಮಾಹಿತಿ. ಇಲ್ಲಿಂದ ಮೇಲೆ ೩ ಕಿ.ಮೀ ದೂರದಲ್ಲಿ ಅರಣ್ಯ ಇಲಾಖೆಯ ಶೀಗೆಕಾನ್ ಅತಿಥಿಗೃಹವಿದೆ. ಅದರಲ್ಲಿ ತಂಗಲು ಮಣಿಪಾಲದಿಂದ ಬಂದಿದ್ದ ಸಂಸಾರವೊಂದು ರಾಘವೇಂದ್ರರಿಗೆ ಮಾಹಿತಿಯಿತ್ತು ಅತಿಥಿಗೃಹದ ಕಡೆ
ವಾಹನ ತಿರುಗಿಸಿತು. ಈಗಾಗಲೆ ಅಲ್ಲಿಗೆ ತನ್ನ ಮಾರುತಿ ವಿಟಾರದಲ್ಲಿ ತೆರಳಿದ್ದ ಆ ಸಂಸಾರದ ನಾವಿಕನನ್ನು ಅಲ್ಲಿನ್ ಅಬಗ್ಗೆ ವಿಚಾರಿಸಿದೆ. ನಿಮ್ಮ ವಾಹನ ಅಲ್ಲಿಯವರೆಗೆ ಬರುವುದು ಅನುಮಾನ ಎಂಬ ಶಂಕೆ ವ್ಯಕ್ತಪಡಿಸಿದರು. ಶುದ್ದ ಬೆಂಗಳೂರು ಕನ್ನಡಿಗರ ಸ್ವಭಾವದಂತೆ ಮೊದಲು ಆಂಗ್ಲ ಭಾಷೆಯಲ್ಲಿ ಸಂಭಾಷಿಸಲು ಅವರು ಪ್ರಾರಂಭಿಸುತ್ತಿದ್ದಂತೆ ನಾನು ಕನ್ನಡದಲ್ಲೆ ಮಾತನಾಡಲು ಆರಂಭಿಸಿದೆ. ಅಚ್ಚ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದರೂ ಆಂಗ್ಲ ಭಾಷೆಯೇ ಹೆಮ್ಮೆಯ ಸಂಗತಿ ಅಥವ ತಮ್ಮ ಆಂಗ್ಲ ಭಾಷೆಯೆ ಜ್ಙಾನದ ಸಂಕೇತ ಎಂದು ಕನ್ನಡಿಗರು ಅದೇಕೆ ಭಾವಿಸಿದ್ದಾರೆಯೋ ನಾನರಿಯೆ? ಅಲ್ಲಿಗೆ ಹೋಗಲು ನಡೆದೇ ಹೋಗಬೇಕು ಇಲ್ಲವೆ ಜೀಪ್ ನಂತಹ ಸ್ವಲ್ಪ ಎತ್ತರವಿರುವ ವಾಹನವಾದರೂ ಆಗಲೇ ಬೇಕೆಂಬುದು ಅವರ ಅಭಿಮತ. ನಡೆದು ಹೋಗಲು ಆನೆಗಳ ಹಾವಳಿ!! ಏನಿದ್ರು ನಾಳೆಯ ಕಾರ್ಯಕ್ರಮಕ್ಕೆ ಈಗಲೇ ತಲೆಕೆಡಿಸಿಕೊಳ್ಳುವುದು ಬೇಡವೆಂದು ತೀರ್ಮಾನಿಸಿದೆ.
ನಮ್ಮ ವಿನಂತಿಯಂತೆ ಬೆಳ್ಳುಳ್ಳಿ ಇರದ ಮಾಡಿದ ಅಡುಗೆ ಹಸಿದಿದ್ದ ಹೊಟ್ಟೆಗೆ ರುಚಿಯೆನಿಸಿತು. ರಾತ್ರಿ ೮.೩೦ಕ್ಕೆಲ್ಲಾ ಪ್ರಯಾಣದ ದಣಿವು ನಮ್ಮನ್ನು ಮಲಗುವಂತೆ ಪ್ರೇರೆಪಿಸಿತ್ತು. ದೀಪದ ವ್ಯವಸ್ಥೆಯಿಲ್ಲದ್ದು ಇದಕ್ಕೆ ಪೂರಕ. ಬೆಳಗ್ಗೆ ೬ ಘಂಟೆಗೆ ಸಫಾರಿಗೆ ಹೋಗಲು ಸಿದ್ದರಾಗಿ ಬರ್ತೇವೆ ಎಂದವರಿಗೆ, ಕ್ಷಮಿಸಿ ಮೊನ್ನೆ ಬಿದ್ದ ಮಳೆಗೆ ಸೇತುವೆ ಮುರಿದು ಹೋಗಿ ಸಫಾರಿಗೆ ಹೋಗಲು ಸಾಧ್ಯವಿಲ್ಲವೆಂದು ತಿಳಿಸಿದರು. ಅಲ್ಲಿಗೆ ನಮ್ಮ ಈ ಪ್ರವಾಸ ಪೂರ್ತಿ ವ್ಯರ್ಥವಾಯಿತೆಂದೆ ಭಾವಿಸಿ, ಕುಟೀರದ ಕಡೆ ಲಾಟೀನು ಹಿಡಿದು ಹೊರಟೆವು. ಗವ್ವೆನ್ನುವ ಕತ್ತಲೆಯನ್ನು ಓಡಿಸಲು ಕೈಲ್ಲಿ ಹಿಡಿದಿದ್ದ ಲಾಟೀನಿಗೆ ಸಾಧ್ಯವಾಗುತ್ತಿರಲಿಲ್ಲ. ನಿಧಾನವಾಗಿ ನಡೆದು ಕುಟೀರ ಸೇರಿಕೊಂಡು ನಿದ್ದೆಗೆ ಜಾರಿದೆವು.
ಬೆಳಿಗ್ಗೆ ೭ ಘಂಟೆಗೆ ಎದ್ದು ಸ್ನಾನಾದಿಗಳನ್ನು ಮುಗಿಸಿ, ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟನ್ನು ಒಲ್ಲದ ಮನಸ್ಸಿನಿಂದ ಮುಕ್ಕಿ, ರಾಘವೇಂದ್ರರನ್ನು ನಮ್ಮನ್ನು ಶೀಗೇಕಾನ್ ಅತಿಥಿಗೃಹದ ಬಳಿ (ಅರಣ್ಯ ಇಲಾಖೆಯ ವಾಹನದಲ್ಲಿ) ಕರೆದು ಕೊಂಡು ಹೋಗುವಂತೆ ವಿನಂತಿಸಿದೆ. ಆತ ಅದರಿಂದ ತಪ್ಪಿಸಿಕೊಳ್ಳಲು, ನಾವು ಮುರಿದು ಬಿದ್ದಿರುವ ಸೇತುವೆಯ ಬಳಿ ಹೋಗಬೇಕಿದೆ ಎಂದು ಹೇಳಿ ತಪ್ಪಿಸಿಕೊಳ್ಳಲು ನೋಡಿದರು. ಇಂತದೊಂದು ಉತ್ತರವನ್ನು ಮೊದಲೇ ನಿರೀಕ್ಷಿಸಿದ್ದ ನಾನು ತಕ್ಷಣವೆ ನಮ್ಮನ್ನೂ ಅಲ್ಲಿಯವರೆಗೆ ಕರೆದು ಕೊಂಡು ಹೋಗಿ ಎಂದು ದುಂಬಾಲು ಬಿದ್ದೆ. ಈಗ ಆತ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿಬಿದ್ದರು. ಆಯ್ತು ಜೀಪ್ ಚಾಲಕ ಬರುವುದು ಅರ್ಧ ಘಂಟೆ ಆಗುತ್ತೆ ಅಲ್ಲಿಯವರೆಗೆ ಕಾಯುವುದಕ್ಕೆ ತಿಳಿಸಿ ಒಳಗೆ ಸೇರಿಬಿಟ್ಟರು. ಅರ್ಧ ಘಂಟೆಯ ನಂತರ ಜೀಪ್ ದುರಸ್ತಿಗಾಗಿ ಮಲ್ಲಂದೂರಿಗೆ ಹೋಗಬೇಕಿದೆ ಎಂದು ಮತ್ತೆ ತಪ್ಪಿಸಿಕೊಂಡರು. ಅವರ ನಿರ್ದೇಶನದಂತೆ ನನ್ನ ವಾಹನದಲ್ಲೆ ಶೀಗೆಕಾನ್ ಕಡೆ ಹೊರಟೆ. ಮುತ್ತೋಡಿಯಿಂದ ಚಿಕ್ಕಮಗಳೂರಿನ ದಾರಿಯಲ್ಲಿ ೧ ಕಿಮೀ ನಂತರ ಇರುವ ಫಲಕದ ಮಾಹಿತಿಯನ್ನು ಆಧರಿಸಿ ಕಚ್ಚಾರಸ್ತೆಯಲ್ಲಿ ವಾಹನವನ್ನು ನಿಧಾನವಾಗಿ ಚಲಿಸಿ ಅತಿಥಿಗೃಹ ತಲುಪಿದೆ, ದಾರಿಯುದ್ದಕ್ಕೂ ಆನೆಗಳ ಲದ್ದಿ ಅಲ್ಲಲ್ಲಿ ಕಾಣಿಸುತ್ತಿತ್ತು.
ಅತಿಥಿಗೃಹದ ಪಕ್ಕದಲ್ಲಿ ಕಾಲುದಾರಿಯೊಂದು ಕಾಣಿಸಿತು. ಕುತೂಹಲ ತಡೆಯಲಾರದೆ ಅಲ್ಲಿದ್ದ ನೌಕರರನ್ನು ಅದೇನೆಂದು ಕೇಳಿದೆ ಬೆಟ್ಟದ ಮೇಲ್ಗಡೆದೆ ಹೋಗುವ ದಾರಿ ಸಾರ್ ಎಂದ. ಹೋಗ್ಬಹುದಾ? ಎಂದು ನನ್ನ ಮುಂದಿನ ಪ್ರಶ್ನೆ. ಹೋಗಿ ಆದ್ರೆ ಆನೆಗಳ ಕಾಟ ಎನ್ನುವುದು ಅವನ ಎಚ್ಚರಿಕೆ. ನೀವು ಬನ್ನಿ ನಮ್ಮ ಜೊತೆಗೆ ಎಂದವನಿಗೆ ಮೇಲೆ ನೀರಿನ ಕೊಳವೆ ಒಡೆದು ಹೋಗಿದೆ ಅದನ್ನು ದುರಸ್ಥಿ ಮಾಡಲಿಕ್ಕೆ ಹೋಗುವುದಿದೆ. ಕೆಳಗಿಂದ ನಮ್ಮ ಜೊತೆಯವರು ಬರುತ್ತಾರೆ ಅವರು ಬಂದ ಮೇಲೆ ಹೋಗುವ ಎಂದ ಆತ. ಸರಿ ಅಷ್ಟು ಸಮಯ ಅತಿಥಿಗೃಹದ ಮೇಲ್ಭಾಗದಲ್ಲಿ ಕಳೆಯೋಣವೆಂದು ಅಲ್ಲಿಗೆ ನಡೆದೆವು. ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಇಲ್ಲಿಂದ ಅದ್ಭುತವಾಗಿ ಗೋಚರಿಸುತ್ತದೆ ಮತ್ತು ಹೆಬ್ಬೆ ಜಲಪಾತ ಸಣ್ಣದೊಂದು ಗೆರೆಯಂತೆ ಕಾಣುತ್ತದೆ ಅದೂ ಮಂಜಿಲ್ಲದ ಸಮಯದಲ್ಲಿ ಮಾತ್ರ. ಆಗಾಗ ಮುಸುಕುತ್ತಿದ್ದ ಮಂಜು, ಸುರಿಯುತ್ತಿದ್ದ ಮಳೆ ಚುಮುಚುಮು ಚಳಿ, ಹಚ್ಚ ಹಸಿರಿನ ದಟ್ಟ ಕಾಡು. ಇವೆಲ್ಲದರ ಮಧ್ಯೆ ಉತ್ತಮ ಸೌಲಭ್ಯಗಳನ್ನು ಹೊಂದಿದ ಅತಿಥಿಗೃಹ. ನಿಜಕ್ಕೂ ಸುಂದರ ಪರಿಸರ. ಛೇ! ಶೀಗೇಕಾನ್ ಅತಿಥಿಗೃಹ ಖಾಲಿಯಿದೆ ಕಾದಿರಿಸಲೇ? ಎಂದು ಕೇಳಿದವರಿಗೆ ಬೇಡವೆಂದು ಹೇಳಿ ತಪ್ಪು ಮಾಡಿದೆನೆಂದು ಈಗ ತಿಳಿಯಿತು. ಹುಡುಕಿದರೆ ಎಂತೆಂಥ ಜಾಗಗಳಿವೆ ಕರ್ನಾಟಕದಲ್ಲಿ ಎಂದು ಅರಿವಿಗೆ ಬರುತ್ತದೆ. ಮತ್ತೊಮ್ಮೆ ಇಲ್ಲಿಗೆ ಬಂದೇ ಬರುತ್ತೇನೆಂದು ಮನಸ್ಸಿನಲ್ಲೆ ತೀರ್ಮಾನಿಸಿದೆ.
ಮಾತಿನಂತೆ ಅರ್ಧ ಘಂಟೆಯ ನಂತರ ಆತ ಬಂದು ಹೋಗೋಣವೆಂದು ತಿಳಿಸಿದ. ಮೇಲೇನಿದೆ ಎಂದು ಕೇಳಿದವನಿಗೆ ಸಿಕ್ಕ ಉತ್ತರ ಏನಿಲ್ಲ ಇಲ್ಲಿಗೆ ನೀರು ಸರಬಾರಜು ಮಾಡುವ ಜಾಗವಷ್ತೆ. ಎಂದು ಅರ್ಧ ದಾರಿಗೆ ಬಂದ ಮೇಲೆ ಆತ ಈ ಉತ್ತರವನ್ನಿತ್ತ. ಈ ಹೊತ್ತಿಗಾಗಲೆ ನಮ್ಮ ಕಾಲುಗಳಿಗೆ ಅಂಟಿದ್ದ ಜಿಗಣೆ/ಇಂಬಳ/ಉಂಬಳ ಗಾಭರಿ ಬರಿಸುವಷ್ಟು ಸಂಖ್ಯೆಯಲ್ಲಿದ್ದವು. ಆದರೂ ನಡೆದೇ ನಡೆದೆವು. ಒಂದು ಅಡಿಗೂ ಕಡಿಮೆ ಅಗಲವಿರುವ ದಾರಿಯಲ್ಲಿ ಹೊಸ ಕೊಳವೆ ಅಳವಡಿಸಲು ಹಳ್ಳ ತೋಡಿದ್ದರಿಂದ ಅರ್ಧ ಆಡಿಯಷ್ಟೆ ಜಾಗದಲ್ಲಷ್ಟೆ ನಡೆಯಬೇಕಿತ್ತು. ಅಲ್ಲಲ್ಲಿ ಜಾರಿ ಬಿದ್ದು ಮೈಕೈಯೆಲ್ಲ ಕೆಸರು. ಬಟ್ಟೆಯೆಲ್ಲ ಕೆಸರುಮಯವಾಗಿತ್ತು. ಹಿಂದಿನ ದಿನ ರಾತ್ರಿ ಮತ್ತು ಈಗಲೂ
ಬೀಳುತ್ತಿದ್ದ ಮಳೆ ಮಣ್ಣನ್ನು ಸಡಿಲಗೊಳಿಸಿತ್ತು. ಕಾಲಿಟ್ಟರೆ ಅಡಿಗಳಷ್ಟು ಕೆಳಗೆ ಹೋಗುತ್ತಿತ್ತು. ನಾವು ೩ ಜನ ನಡೆಯಲು ಒದ್ದಾಡುತ್ತಿದ್ದರೆ ಅವರೀರ್ವರೂ ಚಕಚಕನೆ ಹತ್ತಿ ಹೋಗುತ್ತಿದ್ದರು. ಬಿದಿರಿನ ಕಾಡು ಪ್ರಾರಂಭವಾದೊಡನೆ ಅವರಲ್ಲೊಬ ನಮ್ಮನ್ನು ಅಲ್ಲೇ ನಿಲ್ಲಲು ಹೇಳಿ ಆನೆ ಎಲ್ಲಾದರು ಇದೆಯೆ ಎಂದು ಪರೀಕ್ಷಿಸಿ ಮುಂದೆ ಹೋಗುತ್ತಿದ್ದ. ಕಾಲುಗಳಿಗಂತು ಜಿಗಣೆಯೆಂಬ ರಕ್ತಬೀಜಾಸುರರು ದಾಳಿ ನಡೆಸುತ್ತಲೆ ಇದ್ದರು. ಈ ಮಧ್ಯೆ ಮತ್ತೆ ಮಳೆ ಬೀಳಲು ಪ್ರಾರಂಭಿಸಿ ನಮ್ಮ ಪರಿಸ್ಥಿತಿ ಗಂಭೀರವಾಗುತ್ತ ಹೋಯಿತು. ಕಾಲಿಟ್ಟೆಡೆಯೆಲ್ಲ ಜಿಗಣೆಗಳು. ಮಗನಂತು ಅಳಲು ಪ್ರಾರಂಭಿಸಿದ. ನಿಂತಲ್ಲೆ ಕುಣಿದಾಡಲು ಪ್ರಾರಂಭಿಸಿದ. ಅವನ ಕಾಲಿಗೆ ಹತ್ತಿದ್ದ ಜಿಗಣೆಗಳು ಕಿರಿಬೆರಳಿನ ಗಾತ್ರಕ್ಕೆ ಉಬ್ಬಿಕೊಂಡಿದ್ದವು. ಕಿತ್ತ್ತಾಕ್ಷಣ ರಕ್ತ ಸುರಿದು ಅವನ ಚಪ್ಪಲಿಯೆಲ್ಲ ಕೆಂಪು ಬಣ್ಣಕ್ಕೆ ತಿರುಗಿತು. ಇದಕ್ಕೆಲ್ಲಾ ಕಾರಣ ನಾವು ಚಾರಣ ಹೋಗಲು ಸಿದ್ದರಾಗದೆ ಬಂದಿದ್ದೆವು. ನನ್ನ ಚಪ್ಪಲಿ ದಾರಿಯಲ್ಲೆ ಕಿತ್ತು ಹೋಯಿತು. ಜಿಗಣೆಗಳಮ್ಟು ನಮ್ಮ ರಕ್ತ ಸಂಭಂಧಿಯಾಗಿ ಬಿಟ್ಟವು. ನನ್ನ ಪತ್ನಿ ೧ ಕಿ.ಮೀ ಮುಂಚೆಯೆ ಚಪ್ಪಲಿಯನ್ನು ದಾರಿಯಲ್ಲಿ ಬಿಟ್ಟು ಬರಿಗಾಲಿನಲ್ಲಿ ನಡೆಯುತ್ತಿದ್ದದ್ದು ನನ್ನ ಗಮನಕ್ಕೆ ಬಂತು. ಸಣ್ಣ ಕಲ್ಲುಗಳು ಕಾಲಿಗೆ ಚುಚ್ಚಿ ಹಿಂಸೆಯಾಗುತ್ತಿತ್ತು. ಆದರೂ ನಡೆಯದೆ ವಿಧಿಯಿರಲಿಲ್ಲ. ಈ ಸಮಯಕ್ಕೆ ನಮ್ಮೊಡನೆ ಬಂದ ಅವರಿಬ್ಬರು ಬಹುದೂರ ಹೋಗಿದ್ದರು. ಮಳೆ ಬಿರುಸಾಗತೊಡಗಿತು ಜಿಗಣೆಗಳು ತಡೆಯಲಾರದಷ್ಟು ವಿಪರೀತವಾಗ ತೊಡಗಿದಾದ ಇನ್ನು ಮುಂದೆ ಹೋಗುವುದು ಸರಿಯಲ್ಲವೆಂದು ಹಿಂತಿರುಗ ತೊಡಗಿದೆವು. ಜಿಗಣೆಗಳು ಅವುಗಳಿಗೆ ಬೇಕಾದಷ್ಟು ರಕ್ತ ಹೀರಿ ಹಣ್ಣಾಗಿ ಅವಾಗಿಯೇ ಬಿದ್ದು ಹೋಗುತ್ತಿದ್ದವು. ಕಾಲಿನಲ್ಲಿ ರಕ್ತ ಜಿನುಗುತ್ತಿದ್ದದ್ದು ಮಾತ್ರ ಕಾಣುತ್ತಿತ್ತು. ಅಕ್ಕ ಪಕ್ಕದ ಮರಗಳ ಮೇಲಿದ್ದ ಜಿಗಣೆಗಳು ಮೈಮೇಲೆ ಅಂಟಿಕೊಳ್ಳುತ್ತಿದ್ದವು. ಈ ಪರಿಯ ಜಿಗಣೆಗಳ ಕಾಟ ಅನುಭವಿಸಿದ್ದು ಇದೇ ಮೊದಲು. ವೇಗವಾಗಿ ಇಳಿಯಲು ದಾರಿ ಸರಿಯಿರಲಿಲ್ಲ. ಜಿಗಣೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಇಳಿದೇ ಇಳಿದೆವು. ಅರ್ಧ ದಾರಿಗೆ ಬರುವಷ್ಟರಲ್ಲಿ ನೀರಿನ ಕೊಳವೆಯನ್ನು ಸರಿಪಡಿಸಿದ ಹುಡುಗರಿಬ್ಬರು ಹಿಂತಿರುಗಿ ನಮ್ಮನ್ನು ದಾಟಿಕೊಂಡು ಮುನ್ನಡೆಯತೊಡಗಿದರು. ನೀರು ಕೊಳವೆಯಲ್ಲಿ ಹರಿಯುವಾಗ ಉದ್ಭವಿಸುತ್ತಿದ್ದ ಶಬ್ಧ ಯಾವುದೋ ಪ್ರಾಣಿಯ ಅಥವಾ ಸರೀಸೃಪವೋ ಹರಿದಾಡಿದ ಸದ್ದನ್ಥೋ ಹೋಲುತಿದ್ದದ್ದು ನಮಗೆ ಗಾಭರಿ ತರಿಸುತ್ತಿತ್ತು. ಕೊನೆಗೊಮ್ಮೆ ನಮ್ಮ ಗುರಿ ಅತಿಥಿಗೃಹ ಕಾಣಿಸಿ ನಿಟ್ಟುಸಿರು ಬಿಟ್ಟು ಕಾಲಿಗೆ ಅಂಟಿದ್ದ ಜಿಗಣೆಗಳನ್ನೆಲ್ಲ ಕಿತ್ತು ಹಾಕಿ, ಅಡುಗೆ ಮನೆಯ ಹಿಂಭಾಗದ ನಳದಲ್ಲಿ ಕಾಲಿಗೆ ಮೆತ್ತಿದ್ದ ಕೆಸರನ್ನೆಲ್ಲ ತೊಳೆದು ಅವರು ಕೊಟ್ಟ ಕಪ್ಪು ಚಹಾವನ್ನು ಚಪ್ಪರಿಸಿದೆವು.
ಕಾರನ್ನು ಹತ್ತಿ ೩೦ ಮೀಟರ್ ಸಹಾ ಮುಂದೆ ಹೋಗುವ ಮುನ್ನವೆ ಸರಿಯಾಗಿ ಅತಿಥಿಗೃಹದ ಎದುರಿಗೆ ಹಳ್ಳವನ್ನು ತಪ್ಪಿಸುವ ಭರದಲ್ಲಿ ನೀರು ಹರಿಯಲು ಮಾಡಿದ್ದ ಕಾಲುವೆಗೆ ಕಾರಿನ ಮುಂಭಾಗದ ಚಕ್ರ ಇಳಿದು ಸಿಕ್ಕಿ ಹಾಕಿಕೊಂಡಿತು. ಅತಿಥಿಗೃಹದ ಗೋಡೆಗೂ ನನ್ನ ಕಾರಿಗೂ ಕೇವಲ ೩ ಇಂಚಿನ ವ್ಯತ್ಯಾಸವಿತ್ತು. ೨-೩ ಪ್ರಯತ್ನಗಳ ನಂತರ ನಿಧಾನವಾಗಿ ಕಾರನ್ನು ಹಿಂದಕ್ಕೆ ತೆಗೆದು ಕೊಂಡೆ. ಈಗ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸುತ್ತಿದ್ದೆ. ಅಲ್ಲಲ್ಲಿ ಬಿದ್ದಿದ್ದ ಹೊಂಡಗಳಲ್ಲಿ ವಾಹನ ಇಳಿದಾಗ ಕಾರಿನ ತಳಭಾಗಕ್ಕೆ ಕೆಲವೊಮ್ಮೆ ತಗಲುವ ಶಬ್ದ ನನಗೆ ಕಸಿವಿಸಿ ಉಂಟು ಮಾಡುತ್ತಿತ್ತು. ಹಳ್ಳವೊಂದನ್ನು ತಪ್ಪಿಸುವ ಭರದಲ್ಲಿ ಮತ್ತೊಮ್ಮೆ ಕಾರು ಪಕ್ಕಕ್ಕೆ ಸರಿದಾಗ ಉಸುಕಿನಲ್ಲಿ ಸಿಕ್ಕಿಹಾಕಿ ಕೊಂಡಿತ್ತು. ಈ ಬಾರಿ ಪರಿಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿತ್ತು. ಕಾರಿನ ಚಕ್ರ ಕೆಸರಿನಲ್ಲಿ ಸಂಪೂರ್ಣ ಹೂತುಹೋಗಿತ್ತು. ಪ್ರಯತ್ನ ಪಟ್ಟಷ್ಟು ಕಾರಿನ ಚಕ್ರ ಒಳಗಿಳಿಯುತ್ತಿತ್ತು. ಮುತ್ತೋಡಿಯ ನೌಕರರ ಸಾರ್ ಅಲ್ಲಿ ಆನೆಗಳ ಕಾಟ ಹುಷಾರು ಎಂಬ ಎಚ್ಚರಿಕೆಯ ಮಾತು ಕಿವಿಯೊಳಗೆ ರಿಂಗಣಿಸುತ್ತಿತ್ತು. ಕಾರಿನಿಂದಿಳಿದು ಮೇಲೆತ್ತಲು ಪ್ರಯತ್ನಿಸಿದರೆ ಉಹೂಂ ಕಾರು ಅಲ್ಲಾಡಿಸಲೂ ಆಗುತ್ತಿಲ್ಲ ಸುಮಾರು ೧೦ ಅಡಿಗಳಷ್ಟು ದೂರ ಇದೇ ರೀತಿಯ ಉಸುಕಿನಿಂದ ತುಂಬಿದ ಕೆಸರಿತ್ತು. ಮುತ್ತೋಡಿಯಿಂದ ಅರಣ್ಯ ಇಲಾಖೆಯ ಜೀಪ್ ತಂದು ಎಳೆಸುವ ಪ್ರಯತ್ನ ಮಾಡೋಣವೆಂದು ಹೆಂಡತಿ ಮಗನನ್ನು ಪ್ರಯತ್ನಿಸಿ ಎಂದು ಅವರನ್ನು ಕಳುಹಿಸಿದೆ. ಆದರೆ ಅವರನ್ನು ಯಾವುದಾದರು ಕಾಡುಪ್ರಾಣಿಗಳು ಆಕ್ರಮಿಸಿದರೆ ಎನ್ನುವ ಭಯ ಪ್ರಾರಂಭವಾಯಿತು. ಮತ್ತೊಮ್ಮೆ ಪ್ರಯತ್ನ ಮಾಡುವ ಎಂದು ತೀರ್ಮಾನಿಸಿ ಕಾರು ಹತ್ತಿ ಕುಳಿತ್ತು ಸ್ಟಿಯರಿಂಗನ್ನು ಎರಡೂ ಬದಿಗೂ ಬಲವಂತದಿಮ್ದ ತಿರುಗಿಸಿ ಜಾಗ ಮಾಡಿಕೊಂಡೆ ಹಿಂದಕ್ಕೂ ಮುಂದಕ್ಕೂ ಚಕ್ರವನ್ನು ಗುಂಜಿಸಿ ಕಾರನ್ನು ಓಡಿಸುವ ನನ್ನ ಪ್ರಯತ್ನಕ್ಕೆ ೪-೫ ಸಲ ಪ್ರಯತ್ನಿಸಿದ ನಂತರ ಯಶ ಸಿಕ್ಕಿತು. ಬದುಕಿದೆಯಾ ಬಡಜೀವವೆ ಎಂದು ಕೊಳ್ಳುತ್ತಾ ಜೋರಾಗಿ ಹಾರ್ನ್ ಮಾಡಿ ಹೆಂಡತಿ ಮಗನಿಗೆ ಸುದ್ದಿ ಮುಟ್ಟಿಸಿದೆ. ಅವರು ಖುಷಿಯಿಂದ ನನ್ನ ಬರುವಿಕೆಯನ್ನು ಕಾಯುತ್ತಿದ್ದರು. ನೇರವಾಗಿ ಶಿಬಿರಕ್ಕೆ ಹಿಂತಿರುಗಿ ಮುಳ್ಳಯನಗಿರಿ ರಸ್ತೆಯಲ್ಲಿ ಒಂದಷ್ಟು ದೂರ ಕಾರಿನಲ್ಲಿ ಹೋಗಿ ಅಲ್ಲಿನ ಕಾಡನ್ನೆ ಆಸ್ವಾದಿಸುತ್ತ ಓಡಾಡಿದೆವು. ಕತ್ತಲಾಗುತ್ತಿದ್ದಂತೆ ಹಿಂತಿರುಗಿದೆವು. ಸಫಾರಿಗೆ ಹೋಗಬೇಕೆನ್ನುವ ಆಸೆ ಹಾಗೆಯೇ ಉಳಿಯಿತು. ರಾತ್ರಿ ಊಟ ಮಾಡಿ ಚಂದ್ರಗ್ರಹಣದ ರಾತ್ರಿ ಮುಗಿಸಿ ಬೆಳಿಗ್ಗೆ ಮಗನಿಗಾಗಿ ಬಿಸಿನೀರನ್ನು ತಂದು ಸ್ನಾನ ಮಾಡಿಸಿ ಚಿಕ್ಕಮಗಳೂರಿಗೆ ಬಂದು ಬೋಳ ರಾಮೇಶ್ವರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಹೋಟೆಲ್ ಒಂದರಲ್ಲಿ ಉಪಹಾರ ಮುಗಿಸಿ ಕಳಸಾಪುರದ ನಮ್ಮ ತಂದೆಯ ಸೋದರತ್ತೆಯ ಮನೆಯಲ್ಲಿ ಊಟ ಮಾಡಿ ಹಾಸನಕ್ಕೆ ಬಂದಾಗ ೨.೦೦ ಘಂಟೆ. ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಮನೆಗೆ ತಲುಪಿದಾಗ ಸಮಯ ೫.೧೦. ಈ ಪ್ರವಾಸದ ತುಂಬ
ದುರಾದೃಷ್ಠ ನನ್ನ ಬೆನ್ನು ಹತ್ತಿತ್ತೇನೊ ಎನ್ನುವ ಭಾವನೆ ಈಗಲೂ ನನ್ನನ್ನು ಕಾಡುತ್ತಿದೆ.

Wednesday, August 6, 2008

ಪ್ರಪಥಮ ಚಾರಣದ ಅನುಭವ

೧೯೯೪ ರ ಒಂದು ದಿನ ಆಗಿನ್ನೂ ಈ ಉದ್ಯೋಗಕ್ಕೆ ಸೇರಿ ೧-೨ ವರ್ಷಗಳಾಗಿತ್ತು. ಕಾಫಿ ಮತ್ತು ಚಹಾ ಸಮಯದಲ್ಲಿ ಒಟ್ಟಿಗೆ ಸೇರುತ್ತಿದ್ದ ಸಹೋದ್ಯೋಗಿಗಳ ಮಾತಿನ ನಡುವೆ ಪ್ರವಾಸ ಕಾರ್ಯಕ್ರಮದ ಮಾತಿಗೆ ಸಹೋದ್ಯೋಗಿ ಸತೀಶ್ ಚಾರಣದ ಬಗ್ಗೆ ಪ್ರಸ್ಥಾಪಿಸಿದ. ಜೀವನದಲ್ಲಿ ಇದೇ ಮೊದಲ ಬಾರಿಗೆ ಚಾರಣದ ಬಗ್ಗೆ ಗಂಭೀರವಾಗಿ ಯೋಚಿಸಿದ್ದು. ವಿಧ್ಯಾಭ್ಯಾಸದ ಸಮಯದಲ್ಲಿ ಹಣಕಾಸಿನ ತೊಂದರೆ ಮತ್ತು ಸಮಯದ ಅಭಾವದಿಂದ ಚಾರಣ ಪ್ರವಾಸ ಅತ್ಯಂತ ಪ್ರಯಾಸ. ಕಾಡಿನಲ್ಲಿ ನಡೆಯುವುದಕ್ಕೆ ಹೋಗ್ತಿನಿ ಕಾಸು ಕೊಡು ಎಂದು ಕೇಳಿದ್ರೆ ಕಾಲಿದ್ರೆ ತಾನೆ ನೀನು ನಡೆಯೋದು? ದುಡ್ಡು ಕೇಳಿದ್ರೆ ಕಾಲೆ ಇಲ್ದಿದ್ದ ಹಾಗೆ ಮಾಡ್ತಿನಿ ನೋಡು ಅಂತಿದ್ರು ನಮ್ಮಪ್ಪ. ೧೯೮೯ರಲ್ಲಿ ಕೆಮ್ಮಣುಗುಂಡಿಗೆ ಕಾಲೇಜಿನಿಂದ ಪ್ರವಾಸ ಹೋಗಿದ್ದಾಗ ಅಧ್ಯಾಪಕರ ಎಚ್ಚರಿಕೆಯ ಮಾತನ್ನು ಲೆಕ್ಕಿಸದೆ ಕೆಮ್ಮಣ್ಣುಗುಂಡಿ ಶಿಖರಗಳಲ್ಲೆಲ್ಲಾ ಬೆಳೆದಿದ್ದ ಆಳೆತ್ತರದ ಹುಲ್ಲಿನಲ್ಲಿ ಓಡಾಡಿ ಒಂದು ಶಿಖರದಿಂದ ಮತ್ತೊಂದು ಶಿಖರಕ್ಕೆ ನಡೆದು ಹೋಗಿದ್ದ ನೆನಪು. ವಾಪಸ್ಸಾದ ಮೇಲೆ ಅರಣ್ಯ ಇಲಾಖೆಯವರು ಅಲ್ಲೆಲ್ಲ ತುಂಬಾ ಹಾವುಗಳಿವೆ ಮತ್ತು ಚಿರತೆಗಳು ಹುಲ್ಲಿನಲ್ಲಿ ಅಡಗಿ ಕುಳಿತಿರುತ್ತವೆ ಯಾಕೆ ಹೋಗಿದ್ರಿ ಎಂದು ಸಿಕ್ಕಾಪಟ್ಟೆ ಕೂಗಾಡಿದ್ದ ನೆನಪು ಇನ್ನೂ ಹಸಿಯಾಗಿದೆ. ಹಿಂತಿರುಗಿ ಬರುವಾಗ ರಾತ್ರಿ ನಮ್ಮ ಸಹಪಾಠಿಗಳಿದ್ದ ವಾಹನಕ್ಕೆ ಆಗ ತಾನೆ ಹಸುವೊಂದನ್ನು ರಸ್ತೆಯಲ್ಲೆ ಸಾಯಿಸಿ ತಿನ್ನಲು ಹವಣಿಸುತ್ತಿದ್ದ ಹುಲಿ ಅಡ್ಡ ನಿಂತಿತ್ತು. ಆ ವಾಹನದ ಚಾಲಕನಿಗೆ ಹೃದಯಾಘಾತವಾಗುವುದೊಂದು ಬಾಕಿಯಿತ್ತು. ವಾಹನದ ಬೆಳಕಿಗೆ ಅಂಜಿ ಪಕ್ಕಕ್ಕೆ ಸರಿದು ಹೋದ ಹುಲಿ ನಮ್ಮ ವಾಹನ ಬರುವಷ್ಟರಲ್ಲಿ ತನ್ನ ಭೇಟೆಯನ್ನು ಎತ್ತಿಕೊಂಡು ಹೋಗಿತ್ತು. ಓಹ್ ಕ್ಷಮಿಸಿ ಚಾರಣದ ಬಗ್ಗೆ ಬರೆಯಲು ಹೊರಟವನು ಕಾಲೇಜಿನ ದಿನಗಳ ನೆನಪಿಗೆ ಜಾರಿದ್ದೆ. ಅದೆ ನನ್ನ ಚಾರಣದ ಮೊದಲ ಅನುಭವ.
ಅದಾದ ಮೇಲೆ ಅಲ್ಲಿ ಇಲ್ಲಿ ಅಲೆದಾಡಿ ಸಾರ್ವಜನಿಕ ಉದ್ದಿಮೆಯಲ್ಲಿ ನನ್ನನ್ನು ನಾನೆ ಸ್ಥಾಪಿಸಿಕೊಂಡ ಮೇಲೆ ಚಾರಣದ ನನ್ನ ಕನಸುಗಳು ಮತ್ತೆ ಗರಿಗೆದರ ತೊಡಗಿದವು. ಅದಕ್ಕೆ ಪೂರಕವಾಗಿ ಸಿಕ್ಕ ಒಬ್ಬ ಸಹೋದ್ಯೋಗಿ ಸತೀಶ ಮತ್ತು ನಮ್ಮೊಡನೆ ಶಿಕ್ಷಣಾರ್ಥಿಗಳಾಗಿದ್ದ ೭-೮ ಜನರ ಗುಂಪು ಚಾರಣಕ್ಕೆ ಸಿದ್ದತೆ ನಡೆಸತೊಡಗಿತು.
ಬೆಟ್ಟ ಹತ್ತಕ್ಕೆಲ್ಲ ಆಗಲ್ಲ, ಬೇಕಾದ್ರೆ ಸಮತಟ್ಟಾದ ಪ್ರದೇಶದಲ್ಲಿ ನಡೆದುಕೊಂಡು ಹೋಗುವುದಾದ್ರೆ ಬರ್ತೀವಿ! ಎನ್ನುವ ಕೆಲವರ ಸಲಹೆಗೆ ಸರಿ ಎಂದು ತಿಳಿಸಿ ಸಕಲೇಶಪುರ ಸುಬ್ರಹ್ಮಣ್ಯ ನಡುವಿನ ರೈಲು ದಾರಿಯಲ್ಲಿ ಚಾರಣ ಹೋಗೋಣವೆಂದು ಸತೀಶ ಸೂಚಿಸಿದ.
ಚಾರಣ ಎಂದರೆ ಏನೂ ಗೊತ್ತಿಲ್ಲ ಯಾವುದೇ ಅನುಭವವಿಲ್ಲದ ಯಾವುದೆ ಸಿದ್ದತೆಗಳಿಲ್ಲದೆ ಅದರ ಬಗ್ಗೆಯೂ ಏನೂ ಯೋಜನೆಗಳಿಲ್ಲದೆ ನಾವೆಲ್ಲ ಸಾಮಾನ್ಯ ಪ್ರವಾಸ ಹೊರಡುವವರಂತೆ ಹೊರಡಲು ಅಣಿಯಾಗುತ್ತಿದ್ದೆವು. ಆ ದಾರಿಯ ಬಗ್ಗೆ ತಿಳಿಯಲು ಈಗಿನ ಹಾಗೆ ಅಂತರ್ಜಾಲ ಇನ್ನೂ ಆಗ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿರಲಿಲ್ಲವೋ ಅಥವಾ ನಮಗೆ ಆದರ ಮಾಹಿತಿಯಿರಲಿಲ್ಲವೋ ಗೊತ್ತಿಲ್ಲ ಅಥವಾ ನಮ್ಮ ಕೈಗೆಟಕುವ ಸ್ಥಿತಿಯಲ್ಲಿರಲಿಲ್ಲ. ಸತೀಶನ ಕೆಲವು ಸ್ನೇಹಿತರು ಈ ಮುಂಚೆ ಅದೆ ಮಾರ್ಗದಲ್ಲಿ ಚಾರಣಕ್ಕೆ ಹೋಗಿ ಬಂದಿದ್ದವರಿಂದ ನಾವು ಎಲ್ಲಿ ಮತ್ತು ಹೇಗೆ ಹೋಗಬೇಕೆಂಬ ಮಾಹಿತಿ ಮಾತ್ರ ಸತೀಶ ಕಲೆ ಹಾಕಿದ್ದ. ಅದರಂತೆ ಶುಕ್ರವಾರ ಸಂಜೆ ಹೊರಡುವುದೆಂದು ನಮ್ಮ ತಂಡದ ನಾಯಕ ಸತೀಶ ತಿಳಿಸಿದ.
ಒಂದು ಶುಕ್ರವಾರ (ಯಾವ ತಿಂಗಳು ದಿನಾಂಕ ನೆನಪಿನಲ್ಲಿಲ್ಲ) ಸಂಜೆ ಮೆಜೆಸ್ಟಿಕ್ ವಾಹನ ನಿಲ್ದಾಣದಲ್ಲಿ ನಾವೆಲ್ಲಾ ಒಟ್ಟಿಗೆ ಸೇರಿ ಹಾಸನಕ್ಕೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಬೆಳಗಿನ ಜಾವ ದೋಣಿಗಲ್ ತಲುಪಿ ಚಾರಣ ಆರಂಭಿಸುವುದು ನಮ್ಮ ಯೋಜನೆ. ನಾಯಕ ಸತೀಶ ಮತ್ತು ನಾನು ಇಡೀ ಕಪಿ ಸೈನ್ಯವನ್ನು ನಿಯಂತ್ರಿಸಬೇಕಿತ್ತು. ಅಕ್ಕನನ್ನು ಪೀಡಿಸಿ ೫೦-೬೦ ಚಪಾತಿ ಅದಕ್ಕಾಗುವಷ್ಟು ಟೊಮಟೋ-ಈರುಳ್ಳಿ ಪಲ್ಯ ತುಂಬಿದ್ದ ಭಾರದ ಹೊರೆ ನನ್ನ ಬೆನ್ನ ಮೇಲಿತ್ತು. ನೆನಪಿನಲ್ಲಿರುವ ನಮ್ಮ ತಂಡದ ಕೆಲವರ ಹೆಸರನ್ನು ಇಲ್ಲಿ ಹೇಳಲು ಪ್ರಯತ್ನಿಸುತ್ತೇನೆ. ಸತೀಶ (ತಂಡದ ನಾಯಕ), ನಾನು, ಪ್ರಸನ್ನ(ಲಂಬೂ), ನಾಗರಾಜ, ರೇವಣಸಿದ್ದಪ್ಪ(ಸಿದ್ದು), ಪ್ರಸನ್ನದೇಶಪಾಂಡೆ, ದಯಾನಂದ್ (ಮತ್ತವನ ಸ್ನೇಹಿತ ಹೆಸರು ನೆನಪಿಲ್ಲ), ಜಗಧೀಶ (ಜಗ್ಗ, ಈತ ಬೆಂಗಳೂರಿನಲ್ಲಿ ನನಗೆ ಉದ್ಯೋಗ ಮಾಡುವ ಮನಸ್ಸಿಲ್ಲ, ನನ್ನ ಕುಲ ಕಸುಬಾದ ಶಿಲ್ಪಿಯಾಗುವುದಾಗಿ ಬೆಂಗಳೂರಿನಿಂದ ಹೋದವನ ಸಂಪರ್ಕ ಮತ್ತೆ ಸಾಧ್ಯವಾಗಿಲ್ಲ), ಮರೆತಿದ್ದೆ ಶ್ರೀನಿವಾಸರಾಜು (ತನ್ನ ಮುಗ್ಧ ಮಾತುಗಳಿಂದ ನಮಗೆಲ್ಲ ಹೆಚ್ಚು ಮಜಾ ಕೊಟ್ಟವ) ಇನ್ನೊಬ್ಬ ಕುಳ್ಳ, ಎಂದು ಕರೆಯುತ್ತಿದ್ದ ಅಡ್ಡ ಹೆಸರು ನೆನಪಿದೆಯಷ್ಟೆ . ಈಗಷ್ಟೆ ಇವನ ಹೆಸರನ್ನು ರವೀಂದ್ರ ಎಂದು ನೆನಪಿಸಿದ ನಾಗರಾಜ ಇವರೆಲ್ಲರ ಜೊತೆಗೆ ಸಹೋದ್ಯೋಗಿ ಸತೀಶ್ಚಂದ್ರ ಅವರ ತಂಗಿಯ ಮಗ ಜತಿನ್ ಆತನ ಸ್ನೇಹಿತ.
ಅದೇನು ಖುಷಿ ಅದೇನು ಉತ್ಸಾಹ ಅದೇನು ತವಕ ಓಹ್. ಹೊರಡುವ ದಿನ ಬರುವವರೆಗೂ ಎಲ್ಲರದ್ದು ಅದೆ ಮಾತು. ಕಾಲ ಕಳೆದದ್ದೆ ಗೊತ್ತಾಗುತ್ತಿರಲಿಲ್ಲ. ಕೊನೆಗೂ ನಾವೆಲ್ಲ ಕುತೂಹಲದಿಂದ ನೀರೀಕ್ಷಿಸುತ್ತಿದ್ದ ಆ ದಿನ ಬಂದೇ ಬಿಟ್ಟಿತು. ಒಬ್ಬೊಬ್ಬರೆ ನಿಧಾನವಾಗಿ ಬಂದಿಳಿದು ನಾವು ರಾಜ್ಯ ಸಾರಿಗೆ ಸಂಸ್ಥೆಯ ವಾಹನವೇರಿದಾಗ ಕತ್ತಲಾವರಿಸಿದ್ದ ನೆನಪು. ಹಾಸನದಲ್ಲಿಳಿದಾಗ ರಾತ್ರಿ ೧೧ ಗಂಟೆಯಿರಬೇಕು ಅರಸೀಕೆರೆಯಿಂದ ಬಂದ ರೈಲನ್ನು ಏರಿದೆವು. ೨ ಅಥವ ೩ ನಿಲ್ದಾಣಗಳ ನಂತರ ಯಾರೋ ಕಿರುಚಿದರು. ಇದೇ ದೋಣಿಗಲ್ ಎಂದು ನಾವೆಲ್ಲ ಹಿಂದೆ ಮುಂದೆ ನೋಡದೆ ರೈಲಿನಿಂದ ಧುಮುಕಿದೆವು. ಬಹುಶಃ ಆಗ ಸಮಯ ರಾತ್ರಿ ೧೧.೩೦. ನಮ್ಮ ಯೋಜನೆ ಈಗಾಗಲೆ ಕೈಕೊಟ್ಟಿತ್ತು. ಇಡೀ ರಾತ್ರಿ ೫-೬ ಜನ ಮಲಗಬಹುದಾದ ಸಣ್ಣ ನಿಲ್ದಾಣದಲ್ಲಿ ನಾವೆಲ್ಲ ಮಲಗಬೇಕಿತ್ತು ಅದೂ ಕೊರೆಯುವ ಚಳಿಯಲ್ಲಿ ಗಾರೆಯ ನೆಲದ ಮೇಲೆ. ನಿಲ್ದಾಣವೋ ಸ್ಮಶಾನ ಸದೃಶವಾಗಿ ಕಂಡು ಬರುತ್ತಿತ್ತು. ಹತ್ತಿರದಲ್ಲಿ ಯಾವ ಮನೆಗಳೂ ಕಾಣದ ಜನಗಳೂ ಇರದ ಕೊನೆಗೆ ದೀಪವೂ ಇರದ ನಿಲ್ಡಾಣ. ಏನೇ ಆದರೂ ನಮ್ಮ ರಾತ್ರಿಯನ್ನು ಇಲ್ಲಿ ಕಳೆಯಲೇಬೇಕಿತ್ತು. ಸರಿ ಒಬ್ಬೊರ ಮೇಲೊಬ್ಬರು ಬಿದ್ದು ಕೊಂಡಿದ್ದಾಯ್ತು. ನಿದ್ದೆ!! ಅದು ಯಾವಗಲೋ ಹಾರಿಹೋಗಿತ್ತು. ಸಿದ್ದು(ರೇವಣ ಸಿದ್ದಪ್ಪ)ವಿನ ಹಾಸ್ಯ ಚಟಾಕಿಗಳು ನಮ್ಮನ್ನು ನಿದ್ದೆ ಮಾಡಲು ಬಿಡಲಿಲ್ಲ. ಬಿಜಾಪುರದ ಶೈಲಿಯ ಮಾತಿನಲ್ಲಿ ತನ್ನ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ನಮ್ಮೆಲ್ಲರ ನಿದ್ದೆ ಕದ್ದ ಸಿದ್ದ. ಸತೀಶ ಮಾತ್ರ ತನ್ನ ಎಂದಿನ ಶೈಲಿಯಲ್ಲಿ ನಿದ್ದೆಗೆ ಜಾರಿದ್ದ. ಯಾವಾಗ ನಿದ್ದೆ ಹತ್ತಿತೊ ಗೊತ್ತಿಲ್ಲ. ಎಲ್ಲೋ ರೈಲೊಂದು ಶಿಳ್ಳೆ ಹಾಕಿದ ಶಬ್ಧ ಬಹುಶಃ ಕನಸಿರಬೇಕೆಂದು ಕೊಂಡವನಿಗೆ ಕೆಲವರು ಮಾತನಾಡುವ ಶಬ್ಧ ಕಿವಿಗೆ ಬಿತ್ತು. ಕಣ್ಣುಜ್ಜಿಕೊಂಡು ಎದ್ದು ಕುಳಿತವನ ಮುಂದೆ ರೈಲು ನಿಂತಿದೆ. ಅವರೂ ನಮ್ಮಂತೆಯೆ ಚಾರಣಕ್ಕೆ ಬಂದವರಿರಬೇಕು. ದಡದಡನೆ ನಾಲ್ಕೈದು ಜೋಡಿಗಳು ಮತ್ತು ಕೆಲವು ಹುಡುಗರ ತಂಡವೊಂದು ನಮ್ಮಂತೆಯೆ ಆತುರಾತುರವಾಗಿ ಧುಮುಕಿದರು. ಆದರೆ ಅವರೆಲ್ಲ ಹವ್ಯಾಸಿ ಚಾರಣಿಗರಿರಬೇಕೆಂದು ಅವರ ಬೆನ್ನ ಮೇಲಿನ ಹೊರೆಯನ್ನು ನೋಡಿ ಊಹಿಸಿದೆ. ನಿದ್ದೆ ಹೊಡೆಯುತ್ತಿದ್ದ ನಮ್ಮಲ್ಲಿ ಕೆಲವರನ್ನು ಎಚ್ಚರಿಸಿದೆ. ರೈಲು ಮುಂದೆ ಹೋದಂತೆ ಅದರ ಹಿಂದೆಯೆ ಆ ಚಾರಣಿಗರ ಗುಂಪು ಚಾರಕ್ಕೆ ಹೊರಟೇ ಬಿಟ್ಟಿತು ಅದು ಆ ಕಾರ್ಗತ್ತಲಿನಲ್ಲಿ ಹುಹ್. ನಿಲ್ದಾಣದಿಂದ ರಸ್ತೆಗೆ ಸಂಪರ್ಕವಿರಲೇಬೇಕೆಂದು ಊಹಿಸುತ್ತಾ ನಿಲ್ದಾಣದಿಂದ ಹೊರ ಬಂದು ನೋಡಿದವರಿಗೆ ಆ ಕತ್ತಲೆಯಲ್ಲು ಗೋಚರಿಸಿದ್ದು ಸಣ್ಣ ಕಾಲುದಾರಿ ೨-೩ ನಿಮಿಷಗಳ ಅದರಲ್ಲೆ ನಡೆದು ಬಂದವರಿಗೆ ಸಿಕ್ಕದ್ದು ರಾ.ಹೆ. ೪೮ ರ ದೋಣಿಗಲ್ ಚಹಾ ಅಂಗಡಿ. ಆಗ ಅನ್ನಿಸಿದ್ದು ಆರಾಮವಾಗಿ ತಡರಾತ್ರಿ ಹೊರಟ ಮಂಗಳೂರಿನ ಬಸ್ಸುಗಳಲ್ಲಿ ಬಂದು ನಿರ್ವಾಹಕನನ್ನು ವಿನಂತಿಸಿದ್ದರೆ ಇದೇ ಜಾಗದಲ್ಲಿ ಇಳಿಯಬಹುದಿತ್ತು. ರಾತ್ರಿ ರೈಲು ನಿಲ್ದಾಣದಲ್ಲಿ ನಿದ್ದೆಗೆಡುವ ಪ್ರಮೇಯವಿರುತ್ತಿರಲಿಲ್ಲ.
ಸರಿ ಅಲ್ಲೆ ಇದ್ದ ಚಹಾ ಅಂಗಡಿಯವನನ್ನು ಎಚ್ಚರಿಸಿ ಚಹಾ ಕುಡಿದು ಮತ್ತೆ ನಿಲ್ದಾಣಕ್ಕೆ ಬಂದು ಮಲಗಿದ್ದವರನ್ನು ಎಚ್ಚರಿಸಿ ಅವರೆಲ್ಲ ಸಿದ್ದರಾಗಿ ಹೊರಟಾಗ ಇನ್ನು ಬೆಳಕು ಹರಿದಿರಲಿಲ್ಲ. ಕತ್ತಲೆಯಲ್ಲಿಯೇ ಹಳಿಗಳ ಮೇಲೆ ಹೆಜ್ಜೆ ಹಾಕಲು ಪ್ರಾರಂಭಿಸಿದೆವು. ನನ್ನ ಜೀವನದ ಮೊತ್ತ ಮೊದಲ ಪೂರ್ಣ ಪ್ರಮಾಣದ ಚಾರಣ ಪ್ರಾರಂಭವಾಗಿತ್ತು. ಹೊತ್ತ ಹೊರೆ ಭಾರವೆನಿಸಿದರೂ ಮನಸ್ಸಿನಲ್ಲಿದ್ದ ಹುಮ್ಮಸ್ಸು ಭಾರದ ಕಡೆಗೆ ಗಮನ ಹರಿಸಲಿಲ್ಲ. ಕತ್ತಲಿನಲ್ಲಿಯೆ ಹಳಿಗಳ ಮೇಲೆ ಒಬ್ಬೊಬ್ಬರಾಗಿ ನಡೆಯುತ್ತಿದ್ದೆವು. ಯಾರೂ ತುಂಬ ಹಿಂದೆ ಉಳಿಯದಂತೆ ಎಚ್ಚರವಹಿಸುತ್ತಾ ನಡೆಯುತ್ತಿದ್ದರೆ ಕೆಲವರಿಗೆ ಯಾಕಾದ್ರು ಬಂದೆವೊ ಎಂಬ ಚಿಂತೆ ಕಾಡತೊಡಗಿತು. ಹೊರಡಬೇಕಾದರೆ ಇದ್ದ ಅತ್ಯುತ್ಸಾಹ ಅಲ್ಲಿ ಹಳಿಗಳ ಮಧ್ಯೆ ಜೋಡಿಸಿದ್ದ ಮರದ ದಿಮ್ಮಿಗಳ ಮೇಲೆ ಕಾಲಿಟ್ಟು ನಡೆಯಬೇಕಾದರೆ ಉಂಟಾಗುವ ನೋವು ಅವರಲ್ಲಿದ್ದ ಉತ್ಸಾಹವನ್ನು ನುಂಗಿ ಹಾಕಿತ್ತು. ಆದರೆ ಮುಂದುವರೆಯದೆ ಬೇರೆ ವಿಧಿಯಿರಲಿಲ್ಲ. ಸುಮಾರು ಒಂದು ಗಂಟೆಯ ನಡಿಗೆಯ ನಂತರ ಬೆಳಕು ಹರಿಯಲು ಪ್ರಾರಂಭಿಸಿದಾಗ ಕಂಡ ದೃಶ್ಯ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಸೂರ್ಯನ ಹೊನ್ನಿನ ಕಿರಣಗಳು ನಿಧಾನವಾಗಿ ಬೆಟ್ಟ ಗುಡ್ಡಗಳ ಕಣಿವೆಗಳನ್ನು ತೆರೆದಿಡುತ್ತಿತ್ತು. ರಮಣೀಯ. ನಮ್ಮ ಪ್ರಾತಃವಿಧಿಗಳಿಗೆ ಸೂಕ್ತವಾದ ಜಾಗ ಪಕ್ಕದಲ್ಲೆ ಹರಿಯುತ್ತಿದ್ದ ದೊಡ್ಡದೊಂದು ಹೊಳೆ. ಹೂಂ ನೇರವಾಗಿ ಹೊಳೆಯ ಕಡೆ ನಡೆದೆವು. ಕೊರೆಯುತ್ತಿರುವ ನೀರಿನಲ್ಲಿ ಬೆಳಗಿನ ಸ್ನಾನಾದಿ ಕಾರ್ಯಕ್ರಮಗಳು ಮುಗಿದು ಚಪಾತಿ ಬುತ್ತಿ ತೆಗೆದು ಕುಳಿತವರು ತಿಂಡಿ ಮುಗಿಸಿ ಎದ್ದಾಗ ಎಳೆ ಬಿಸಿಲು ಸ್ವಾಗತಿಸುತ್ತಿತ್ತು. ನೀರಿನಲ್ಲೆ ಇದ್ದು ಬಿಡುವ ಲೆಕ್ಕದಲ್ಲಿದ್ದ ಕೆಲವರನ್ನು ಗದರಿಸಿ ಹೊರಡಿಸಿದೆವು. ಈಗ ಮತ್ತೊಮ್ಮೆ ನಮ್ಮ ನಡಿಗೆ back on track.
ತಂದಿದ್ದ ಕ್ಯಾಮೆರಾಗಳೆಲ್ಲಾ ಇಲ್ಲಿ ಒಮ್ಮೆ ಕಣ್ಣು ಮಿಟುಕಿಸದವು. ೨ ದಿನಕ್ಕೆಂದು ತಂದಿದ್ದ ಚಪಾತಿಯಲ್ಲಿ ಅರ್ಧ ಖಾಲಿಯಾಗಿದ್ದು ನನ್ನ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತ್ತು. ಅಲ್ಲಲ್ಲಿ ಬೆಟ್ಟದ ಮೇಲಿನಿಂದ ಹಳಿಗಳ ಮೇಲೆ ಬೀಳುತ್ತಿದ್ದ ನೀರನ್ನು ಹೀರುತ್ತಾ ಸಮಯದ ಪರಿವೆ ಇಲ್ಲದೆ ನಿಧಾನವಾಗಿ ನಡೆದೆವು. ನಮ್ಮ ಗುರಿ ಏನು ಎಲ್ಲಿ ನಾವು ರಾತ್ರಿ ಕಳೆಯಬೇಕು ಮತ್ತು ಅದಕ್ಕೆಲ್ಲ ಯೋಜನೆಗಳನ್ನು ರೂಪಿಸಿಕೊಂಡು ಅದಕ್ಕೆ ತಕ್ಕಂತೆ ನಡೆಯಬೇಕು ಎಂಬ ಅರಿವು ನಮಗೆಲ್ಲಿತ್ತು.
ಸ್ವಲ್ಪ ಸಮಯದ ನಡಿಗೆಯ ನಂತರ ನಮಗೆ ಮೊದಲ ಸೇತುವೆ ಎದುರಾಯಿತು. ಊಊಊಹ್ ಎದೆ ಝಿಲ್ಲೆನಿಸುವ ನೋಟ. ಕಣಿವೆಯನ್ನು ದಾಟಲು ಮತ್ತು ಬೆಟ್ಟವನ್ನು ಹಾಯ್ದು ಹೋಗಲು ಸುರಂಗಗಳಿವೆ ಅದರಲ್ಲಿಯೆ ನಮ್ಮ ಚಾರಣ ಎನ್ನುವುದರ ಅರಿವಿತ್ತು. ಆದರೆ ಅದರ ಅನುಭವವಿರಲಿಲ್ಲ ಊಹೆಯು ಇರಲಿಲ್ಲ. ಊಹ್ ಸಂಪೂರ್ಣವಾಗಿ ಭೂಮಿಯಿಂದ ಹೊರಗೆ ಚಾಚಿ ಹೋಗಿದ್ದ ಸೇತುವೆಗಳಿಗೆ ಪಕ್ಕದ ತಡೆಗೋಡೆಗಳಿರಲಿಲ್ಲ. ಗಾರೆಯಿಂದ ನಿರ್ಮಿಸಿದ ಕಂಭಗಳ ಮೇಲೆ ಕಭ್ಭಿಣದಿಂದ ಕಟ್ಟಲಪಟ್ಟ ಸೇತುವೆಗಳ ತಳಭಾಗ ಸಂಪೂರ್ಣವಾಗಿ ಗೋಚರಿಸುತ್ತದೆ. ನೀವೆನಾದರು ಕೆಳಗೆ ಇಣುಕಿ ನೋಡುವ ಸಾಹಸಕ್ಕೆ ಕೈ ಹಾಕಿದರೆ ಭಯ ಆವರಿಸಿ ನಡೆಯುವುದನ್ನೆ ನಿಲ್ಲಿಸಿ ಹಿಂತಿರುಗಿ ಓಡಿಹೋಗೋಣವೆನಿಸುತ್ತದೆ. ಸಂಪೂರ್ಣವಾಗಿ ನಾವು ಗಾಳಿಯಲ್ಲಿ ನಡೆಯುತ್ತಿದ್ದೇವೆಂದೆನಿಸುತ್ತದೆ. ಸಂಪೂರ್ಣವಾಗಿ ತೆರೆದ ಸೇತುವೆಗಳ ಮೇಲೆ ಹಳಿ ಹಾಯ್ದು ಹೋಗುತ್ತದೆ. ಅದರ ಮಧ್ಯೆ ಚಾರಣಿಗರಿಗಾಗಿ ತಗಡಿನ ದಾರಿ ಮಾಡಲಾಗಿತ್ತು. ಅದರ ಮೇಲೆ ನಡೆದು ಸೇತುವೆಯನ್ನು ದಾಟ ಬೇಕಿತ್ತು. ಎರಡು ಬೆಟ್ಟಗಳ ನಡುವಿನ ಕಣಿವೆಯನ್ನು ದಾಟಲು ನಿರ್ಮಿಸಿರುವ ಸೇತುವೆ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ಗಾಭರಿ ಆಶ್ಚರ್ಯ ಸಂತೋಷ ಒಬ್ಬರಿಗೊಂದೊಂದು ತರಹದ ಅನುಭವ. ಮೊದಲನೆ ಸೇತುವೆ ದಾಟಲು ಎಲ್ಲರೂ ಹೆದರಿಕೊಂಡು ಹಿಂದೆ ಸರಿಯಲು ನೋಡುತ್ತಿದ್ದರು. ಕೊನೆಗೆ ಯಾರು ಆ ಸಾಹಸಕ್ಕೆ ಕೈಹಾಕಿದರೊ ನೆನಪಿಲ್ಲ. ಅಂತು ಇಂತು ಭಯದಿಂದ ನಡುಗುತ್ತಾ ಒಬ್ಬರ ಕೈ ಇನ್ನೊಬ್ಬರು ಹಿಡಿದು ಕೊಂಡು ನಿಧಾನವಾಗಿ ದಾಟಿದೆವು. ಗಾಳಿ ಬೀಸಿದರಂತೂ ತೂರಾಡುವ ಅನುಭವ. ಸೇತುವೆ ದಾಟುವಾಗ ರೈಲು ಬಂದರೆ!!! ದೇವರೆ ಗತಿ!! ಮೊದಲನೆ ಸೇತುವೆ ದಾಟಿ ಸ್ವಲ್ಪ ಸಮಯದ ನಡಿಗೆಯ ನಂತರ ಸುರಂಗ ಎದುರಾಯಿತಾದರೂ ಅತ್ಯಂತ ಚಿಕ್ಕದಾದ್ದರಿಂದ ಎಲ್ಲರೂ ಓಡುತ್ತಾ ಅದರೊಳಗೆ ಸಾಗಿದೆವು. ಹೀಗೆ ಸೇತುವೆ ನಂತರ ಸುರಂಗ ಎದುರಾಗುತ್ತಲೆ ಹೋಯಿತು.
೨ ನೆ ಸೇತುವೆಯಲ್ಲಿ ದಾಟಿ ಇನ್ನೊಂದು ಬದಿಯಲ್ಲಿ ನಿಂತವರಿಗೆ ಕಂಡದ್ದು ಸೇತುವೆ ದಾಟದೆ ನಿಂತಿದ್ದ ಲಂಬೂ. ಅತ್ಯಂತ ಹೆದರಿ ಬಿಟ್ಟಿದ್ದ ಪ್ರಸನ್ನ(ಲಂಬೂ) ತಾನು ಬರುವುದಿಲ್ಲ ಎಂದು ಹಠ ಹಿಡಿದುಬಿಟ್ಟ. ಹಿಂದಿರುಗಿ ಹೋಗಿ ಅವನನ್ನು ಕೈಹಿಡಿದು ಮೆಲ್ಲನೆ ಸೇತುವೆ ದಾಟಿಸುವ ಸಾಹಸ ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಸೇತುವೆ ನಂತರ ಸುರಂಗ ನಂತರ ಸೇತುವೆ ಒಂದಾದ ಮೇಲೊಂದರಂತೆ ಎದುರಾಗತೊಡಗಿದವು ಸೇತುವೆಯ ಬಳಿಯಂತೂ ಕಣಿವೆಯ ದೃಶ್ಯ ಅಬ್ಬ!! ಪ್ರಕೃತಿಯೆ ಏನು ನಿನ್ನ ಚೆಂದ ಅನ್ನುವಂತಿತ್ತು. ಮೊದಲ ಬಾರಿ ಇಂತಹ ಹಚ್ಚ ಹಸಿರಿನ ದಟ್ಟ ಕಾಡನ್ನು ನನ್ನ ಜೀವನದಲ್ಲಿ ನಾನು ನೋಡಿದ್ದು. ಅದೂ ಕಾಡಿನ ಪಕ್ಷಿನೋಟ ಎಲ್ಲ ಕಡೆಯು ಸಿಗುವುದಿಲ್ಲ. ಕಾಡಿನ ಮೇಲೆ ನಿಂತು ನೋಡುವುದು ಒಂದು ಹೊಸ ರೀತಿಯ ಅನುಭವ. ಎರಡು ಬೆಟ್ಟಗಳನ್ನು ಸಂಪರ್ಕಿಸುವಾಗ ಅವು ಅರ್ಧ ವೃತ್ತಾಕಾರದಲ್ಲಿರುವುದರಿಂದ ಬೆಟ್ಟದಿಂದ ಸಂಪೂರ್ಣವಾಗಿ ಹೊರ ಚಾಚಿಕೊಂಡಿರುತ್ತವೆ. ಅತ್ಯಂತ ಆಳದ ಕಣಿವೆಗಳ ಮೇಲೆ ನಿರ್ಮಿಸಿರುವ ಕೆಲವು ಸೇತುವೆಗಳು ಭೀಕರವಾಗಿ ಕಾಣಿಸುತ್ತವೆ. ನಾವು ಈ ಚಾರಣದಲ್ಲಿ ದಾಟಿದ ಒಂದು ಸೇತುವೆಯ ಉದ್ದ ೫೩೦ ಮೀಟರ್ ಎನ್ನುವ ನೆನಪು ಮಸುಕಾಗಿದೆ. ಇದಕ್ಕೆ ೫ ವಿಶ್ರಾಂತಿ ಜಾಗಗಳಿವೆ. ಹಾಗೆಯೇ ಸುರಂಗದ ಉದ್ದ ೭೩೫ ಮೀಟರ್ ಇರಬೇಕು. ಸಂಪೂರ್ಣ ಕತ್ತಲಾಗುವ ಸುರಂಗ ದಾಟಲು ಬೆಳಕಿನ ಅವಶ್ಯಕತೆಗಾಗಿ ವಿದ್ಯುತ್ ಪಂಜುಗಳೆ ನಮಗೆ ದಾರಿದೀಪ.
ಇವುಗಳ ಮದ್ಯೆ ಬಾವಲಿಗಳ ಕಾಟ ಬೇರೆ. ಒಮ್ಮೆಯಂತೂ ಕೆಲವರು ಸುರಂಗದಲ್ಲಿರಬೇಕಾದರೆ ರೈಲಿನ ಶಿಳ್ಳೆ ಕೇಳಿಸಿ ಬದುಕಿದರೆ ಸಾಕು ಎಂದು ಓಡಿ ಬಂದದ್ದು ಇದೆ. ಉದ್ದ ಸೇತುವೆಗಳಾದರೆ ೨-೩ ನಿಲ್ಲಲ್ಲು ಸ್ಥಳಗಳನ್ನು ಸೇತುವೆಯಲ್ಲಿ ನಿರ್ಮಿಸಿರುತ್ತಾರೆ. ೩ ನೆ ಸೇತುವೆ ದಾಟುವಷ್ಟರಲ್ಲಿ ಲಂಬೂ ತೆವಳಲು ಆರಂಭಿಸಿದ ಅವನ ಎತ್ತರವೆ ಅವನಿಗೆ ಶತ್ರುವಾಗಿ ಕಾಡಲಾರಂಭಿಸಿತು. ಅವನಿಗೆ ನಾವು ಧೈರ್ಯ ಹೇಳುವುದು ಬಿಟ್ಟರೆ ಬೇರೆ ಯಾವ ರೀತಿಯಲ್ಲೂ ಸಹಾಯ ಮಾಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಅಂಬೆಗಾಲಿಟ್ಟು ಸೇತುವೆ ದಾಟುವ ಅವನ ಪರಿಸ್ಥಿತಿ ಅಯ್ಯೋ ಎನ್ನುವಂತಿತ್ತು. ಆದರೆ ಇವೆಲ್ಲದರ ನಡುವೆ ಪ್ರಕೃತಿಯಂತೂ ತನ್ನ ಸೌಂದರ್ಯವನ್ನು ಇಲ್ಲೆ ಬಿಟ್ಟು ಹೋಗಿದೆಯೇನೋ ಎನ್ನುವಂತಿದೆ. ಬಹುಶಃ ಇದು ನಮ್ಮ ಮೊದಲ ಚಾರಣವಾದ್ದರಿಂದ ನಮಗೆ ಈ ಭಾವನೆಗಳಿರಬೇಕು.
ಹಳಿಗಳ ಮದ್ಯೆ ಇದ್ದ ದಿಮ್ಮಿಗಳ ಮೇಲಷ್ಟೆ ನಡೆಯಬೇಕಿತ್ತು. ಎರಡು ದಿಮ್ಮಿಗಳ ಮಧ್ಯೆ ಕಲ್ಲು ರಾಶಿಯಲ್ಲಿ ನಡೆಯುವುದು ಸಾಧ್ಯವಿರಲಿಲ್ಲ. ಕೆಲವು ಕಡೆ ಚಾರಣಿಗರಿಗಾಗಿಯೆ ತಗಡಿನ ದಾರಿಯನ್ನು ಹಳಿಗಳ ಮದ್ಯೆ ನಿರ್ಮಿಸಲಾಗಿತ್ತು. ದಿಮ್ಮಿಗಳ ಮೇಲೆ ನಡೆಯುವಾಗ ಬೇಗ ಬೇಗನೆ ನಡೆಯಲು ಜೋರಾಗಿ ದಿಮ್ಮಿಗಳ ಮೇಲೆ ಒಂದೆ ಸಮನೆ ಕಾಲಿಡುತ್ತಿದ್ದಾಗ ಮೊಣಕಾಲಿನ ಮೀನಖಂಡ ವಿಪರೀತ ನೋಯಲು ಪ್ರಾರಂಭಿಸಿತು.
ಅಲ್ಲಲ್ಲಿ ಸಿಗುವ ನೀರಿನ ಝರಿಗಳು ಬೆಟ್ಟದಿಂದ ಇಳಿದು ಓಡಿ ಹೋಗುತ್ತಿರುತ್ತವೆ. ಅದೆಷ್ಟು ಝರಿಗಳಿವೆಯೋ ಎಣಿಸಿದವರು ಯಾರು? ೧೦ ಗಂಟೆಯ ಸಮಯಕ್ಕೆ ಸಿಕ್ಕ ಒಂದು ಜಲಪಾತದ ಬಳಿ ಮತ್ತೊಮ್ಮೆ ನೀರಿಗಿಳಿದು ಸ್ನಾನ ಮಾಡಿದೆವು. ೨-೩ ಹಂತದಲ್ಲಿ ಬೀಳುತ್ತಿದ್ದ ಜಲಪಾತದಲ್ಲಿ ಕೆಲವರು ಮೊದಲ ಹಂತಕ್ಕೇರಿದರೆ ಇನ್ನು ಕೆಲವರು ಹಳಿಗಳಿಂದ ಸ್ವಲ್ಪವೇ ದೂರದಲ್ಲಿ ಸ್ನಾನ ಮಾಡಿ ಬಿಸಿಲಿನ ಝಳವನ್ನು ಕಳೆದರು. ದಯಾನಂದ್ ಇಳಿಯುವ ಭರದಲ್ಲಿ ಮೊದಲ ಹಂತದ ಜಲಪಾತದಲ್ಲಿ ಕಾಲು ಜಾರಿ ೧೦ ಅಡಿಗಳಷ್ಟು ಆಳಕ್ಕೆ ಬಿದ್ದು ಬಿಟ್ಟ ಅದೃಷ್ಠವಶಾತ್ ಸೊಂಟಕ್ಕೆ ಮಾತ್ರ ನೋವಾಯಿತಾದರೂ ನಡೆಯಲು ಆತನಿಗೆ ತುಂಬ ಕಷ್ಟವಾಯಿತು.
ರೈಲು ಬಂದಾಗ ಸೇತುವೆಯಲ್ಲಿ ಚಾರಣಿಗರಿಗಾಗಿಯೇ ನಿಲ್ಲಲ್ಲು ಮಾಡಿರುವ ಜಾಗದಲ್ಲಿರುವಾಗಲೆ ಒಮ್ಮೆ ರೈಲು ಬಂದಿದ್ದು ನಮಗೆ ಭಯಮಿಶ್ರಿತ ರೊಮಾಂಚನದ ಅನುಭವ ನೀಡಿತು. ಮತ್ತೊಮ್ಮೆ ರೈಲು ಸುರಂಗದಿಂದ ಹೊರಬರುವಾಗ ಸುರಂಗದ ಮುಂದೆ ನಿಂತು ಸಮಯಕ್ಕೆ ಸರಿಯಾಗಿ ಫೋಟೊ ತೆಗೆದದ್ದೂ ಇದೆ. ಬೆಳಿಗ್ಗೆ ಚಳಿಯಿಂದ ನಡುಗಿದ್ದ ನಮಗೆ ಮಧ್ಯಾಹ್ನದ ಸಮಯಕ್ಕೆ ಸೂರ್ಯ ನೆತ್ತಿ ಸುಡಲು ಪ್ರಾರಂಭಿಸಿದ್ದೂ ಆಯಿತು ಒಮ್ಮೆ ಮಳೆಯೂ ಸುರಿಯಿತು. ಆದರೆ ಬಿಸಿಲೆ ಹೆಚ್ಚು ಕಷ್ಟ ಕೊಟ್ಟದ್ದು. ೨ ಗಂಟೆಯ ಹೊತ್ತಿನಲ್ಲಿ ಮಧ್ಯಾಹ್ನದ ಊಟ ಮುಗಿಸಿದಾಗ ನನ್ನ ಹೊರೆ ಪೂರ್ಣವಾಗಿ ಖಾಲಿಯಾಗಿತ್ತು.
ಮತ್ತೊಮ್ಮೆ ನೀರು ಸಿಕ್ಕಾಗ ಸ್ನಾನ ಮಾಡಿ ನಡೆದೆ ನಡದೆವು ಆದರೂ ನಮಗೆ ಎಡಕುಮೇರಿ ಸಿಗಲಿಲ್ಲ. ಕೆಲವರಂತು ನಡೆಯಲು ಸಾಧ್ಯವಿಲ್ಲ ಎನ್ನುತ್ತಾ ಕುಳಿತು ಬಿಡುತ್ತಿದ್ದರು. ಅತ್ಯಂತ ಉದ್ದದ ಸುರಂಗವನ್ನು ಕಿರಿಚಾಡುತ್ತಾ ಅದರ ಪ್ರತಿದ್ವನಿಯನ್ನು ಚಿಕ್ಕ ಮಕ್ಕಳಂತೆ ಆಸ್ವಾದಿಸುತ್ತಾ ದಾಟಿದೆವು. ೫೩೦ ಮೀಟರ್ ಉದ್ದದ ಸೇತುವೆಯಂತೂ ಮರೆಯಲಾಗದ ಅನುಭವವಾದರೂ ಮರೆತು ಹೋಗುತ್ತಿರುವುದು ವಿಷಾದನೀಯ. ಕೊನೆಗೊಮ್ಮೆ ಬೆಟ್ಟವನ್ನು ತಿರುಗು ತೆಗೆದು ಕೊಳ್ಳುವಾಗ ರೈಲಿನ ಹಳಿಗಳು ಕವಲೊಡೆಯುವ ಲಕ್ಷಣಗಳು ನಮಗೆ ಮುಂದೆ ಇರುವ ನಿಲ್ದಾಣದ ಕುರುಹು ನೀಡಿದವು. ಅಬ್ಬ ಎಲ್ಲರೂ ಸುಸ್ತಾಗಿ ಎದುಸಿರು ಬಿಡುತ್ತಿದವರಿಗೆ ಏನೋ ಗೆದ್ದಷ್ಟು ಸಂಭ್ರಮ. ಹೌದು ನಾವು ಎಡಕುಮೇರಿಯ ಬಳಿ ಬಂದಿದ್ದೆವು. ನಮ್ಮ ಯೋಜನೆಯಿದ್ದದ್ದು ಶಿರವಾಗಿಲುವರೆಗೆ ನಡೆದು ಹೋಗುವುದು. ಆದರೆ ನಾವು ಕ್ರಮಿಸಿದ್ದು ಇಡೀ ದಿನ ಕೇವಲ ೧೬ ಕಿ.ಮೀ ದೂರವಿರುವ ಎಡಕುಮೇರಿಯನ್ನು.
ಹೊರ ಪ್ರಪಂಚಕ್ಕೆ ಬರೀ ರೈಲಿನಲ್ಲಷ್ಟೆ ಸಂಪರ್ಕವಿರುವ ಮತ್ತು ಇಲಾಖೆಯ ಸಿಬ್ಬಂದಿಗಳಷ್ಟೆ ಇರುವ ಸೌರವಿದ್ಯುತ್ ನಿಂದ ಬೆಳಗುವ ಚಿಕ್ಕ ನಿಲ್ದಾಣಕ್ಕಾಗಿರುವ ಊರು ಎಡಕುಮೇರಿ. ಇಲ್ಲಿಂದ ನೇರವಾಗಿ ಸುಬ್ರಹ್ಮಣ್ಯಕ್ಕೆ ತಲುಪುವ ಯಾವುದಾದರು ದಾರಿಯಿದೆಯೆಂದು ವಿಚಾರಿಸಲು ಪ್ರಯ್ತತ್ನಿಸಿದರಿಗೆ ಅದು ಸಾದ್ಯವಿಲ್ಲವೆಂಬ ಉತ್ತರ ಬಂತು. ದಾರಿಯಿದ್ದರೂ ತುಂಬಿ ಹರಿಯುತ್ತಿರುವ ಹೊಳೆ ದಾಟುವುದು ಸಾಧ್ಯವಿಲ್ಲವೆಂದು ಬಿಟ್ಟ. ಮತ್ತೆ ದಾರಿಯಲ್ಲಿ ಆನೆಗಳ ಕಾಟವೂ ಇದೆ ಎಂದು ನಮ್ಮನ್ನು ಹೆದರಿಸಿ ಬಿಟ್ಟರು. ನಮಗಿಂತ ಮುಂಚೆ ಹೊರಟಿದ್ದ ಹವ್ಯಾಸಿ ಚಾರಣಿಗರ ಗುಂಪೊಂದು ಅಲ್ಲೆ ಒಂದು ಸಣ್ಣ ಪಾಳು ಬಿದ್ದ ಮನೆಯಲ್ಲಿ ಬಿಡಾರ ಹೂಡಿರುವುದು ನಮ್ಮ ಗಮನಕ್ಕೆ ಬಂತು. ಕಾಕ ಹೋಟೆಲ್ ನವ ನಮ್ಮನ್ನೆಲ್ಲ ನೋಡಿ ರಾತ್ರಿ ಊಟಕ್ಕೆ ಏರ್ಪಾಡು ಮಾಡುವುದಾಗಿ ಹೇಳಿದ. ರಾತ್ರಿ ೧೦ ಗಂಟೆಗೆ ಬರುವ ರೈಲು ಹೋದನಂತರ ಹೋಟೆಲ್ ಮುಚ್ಚಿ ಹೋಗುವ ಈತ ನಮಗೆ ಅವನ ಹೋಟೆಲ್ ನಲ್ಲಿ ಮಲಗಲು ಹೇಳಿದ. ಊಟವಾದ ನಂತರ ಬಂದ ರೈಲಿನಲ್ಲಿ ತನ್ನ ಚಹಾದ ವ್ಯಾಪಾರವಾದ ನಂತರ ನಮಗೆಲ್ಲ ಟಾಟಾ ಹೇಳಿ ಹೋಗಿಯೇ ಬಿಟ್ಟ.
ನಾವು ರಾತ್ರಿ ಬೆಂಕಿ ಉರಿಸಿ ಚಳಿ ಓಡಿಸುವ ನಮ್ಮ ಪ್ರಯತ್ನಕ್ಕೆ ಕೈ ಹಾಕುವ ಪ್ರಯತ್ನಕ್ಕೆ ಅಲ್ಲಿರುವ ಕೆಲವರು ತಡೆ ಒಡ್ಡಿ ಇಲ್ಲಿ ಬೆಂಕಿ ಹಾಕಬೇಡಿರೆಂದು ತಾಕೀತು ಮಾಡಿದರು. ಬೆಳಿಗ್ಗೆ ೪ ಗಂಟೆಗೆ ಬರುವ ರೈಲಿನಲ್ಲಿ ನಾವು ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪ ಬೇಕಿತ್ತು. ನಡೆದು ಬಂದಿದ್ದ ಆಯಾಸಕ್ಕೆ ನಿದ್ರೆ ತಡೆಯಲಾರದಷ್ಟು ಸೆಳೆಯಲಿಟ್ಟಿತು. ಸರಿ ಊಟವಾದ ಮೇಲೆ ೧ ಅಡಿ ಅಗಲದ ಮರದ ಹಲಗೆಯಿಂದ ತಯಾರಿಸಿದ ಊಟದ ಮೇಜನ್ನೆ ನಮ್ಮ ಪಲ್ಲಂಗವನ್ನಾಗಿ ಮಾಡಿಕೊಂಡು ಮಲಗಿದೆವು. ಬೆಳಿಗ್ಗೆ ಯಾರೊ ರೈಲು ಬಂತು ಎಂದು ಕೂಗಿದಾಗ ತಡಬಡಾಯಿಸಿ ಎದ್ದು ಕೈಗೆ ಸಿಕ್ಕ ನಮ್ಮ ಚೀಲವನ್ನು ಹೊತ್ತು ರೈಲನ್ನೇರಿ ಸುಬ್ರಹ್ಮಣ್ಯ ರೋಡಿಗೆ ಬಂದಿಳಿದೆವು. ಅಲ್ಲಿಂದ ಜೀಪಿನಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ದೇವಸ್ಥಾನದ ವಸತಿಗೃಹವೊಂದನ್ನು ಪಡೆದು ನಮ್ಮ ಹೊರೆಗಳನ್ನೆಲ್ಲಾ ಇಳಿಸಿದೆವು. ಕುಮಾರಧಾರದಲ್ಲಿ ಮನದಣಿಯೇ ಈಜಿ ತಿರುಗಿ ಬಂದು ಸುಬ್ರಹ್ಮಣ್ಯನ ದರ್ಶನ ಮಾಡಿ ಕಾಮತ್ ಉಪಹಾರಗೃಹದಲ್ಲಿ ತಿಂಡಿ ತಿಂದವರಿಗೆ ಕುಮಾರ ಪರ್ವತ ಹತ್ತೋಣವೆಂದು ಸೂಚಿಸಿದೆ. ನೀನು ಬೇಕಂದ್ರೆ ಹೋಗು ಮಹರಾಯ ಎಂದವರೆ ಧರ್ಮಸ್ಥಳಕ್ಕೆ ಹೊರಟರು ನಾನೂ ಅವರನ್ನು ಹಿಂಬಾಲಿಸಬೇಕಾಯಿತು. ಮಂಜುನಾಥನ ದರ್ಶನದ ನಂತರ ಉಡುಪಿಯಲ್ಲಿ ಮಲ್ಪೆ ಸಮುದ್ರತೀರದಲ್ಲಿ ಕುಣಿದಾಡಿ, ಕಟೀಲನ್ನು ಸಂದರ್ಶಿಸಿ ಮಂಗಳೂರಿನಲ್ಲಿ ಮತ್ತೆ ಸಮುದ್ರ ತೀರದಲ್ಲಿ ಹೊರಳಾಡಿ ಬೆಂಗಳೂರಿನ ಬಸ್ ಹತ್ತಿದೆವು. ನಮ್ಮ ಮೊದಲ ಚಾರಣ ಯಶಸ್ವಿಯಾಗಿ ಮುಕ್ತಾಯವಾಯಿತು.
ಸ್ವಲ್ಪ ಜಾಸ್ತಿಯೆನ್ನುವಂತೆ ಬಣ್ಣಿಸಿದ್ದೇನೆ ವೈಭವೀಕರಿಸಿದ್ದೇನೆ ಎಂದು ನಿಮಗನ್ನಿಸಬಹುದು, ಆದರೆ ಹೊರ ಪ್ರಪಂಚದ ಸಂಪರ್ಕವೇ ಇರದಂತಿರುವ ಜಾಗಗಳು ಭೂಮಿಯಿಂದ ಹೊರಚಾಚಿ ನಿಂತಿರುವ ಸೇತುವೆ ಮೇಲೆ ನಡೆದು ಹೋಗುವುದು ಅತ್ಯಂತ ರೋಮಾಂಚಕ. ಕೆಳಗೆ ತಳವೇ ಕಾಣದಷ್ಟು ಆಳದ ಪ್ರಪಾತ. ಸ್ವಲ್ಪ ಜಾರಿದರೂ ಸೇತುವೆಯ ಕಭ್ಭಿಣದ ಕಂಬಿಗಳ ಮದ್ಯೆ ಸಿಕ್ಕಿಹಾಕಿಕೊಳ್ಳುವ ಭಯ, ಅನುಭವಿಸಿದರೆ ನಿಮಗೂ ನಾನು ಹೇಳಿದ್ದು ಸರಿಯೆನಿಸಬಹುದು.
;-) ಒಮ್ಮೆ ಪ್ರಯತ್ನ ಮಾಡಿ ನೋಡಿ. ನೀವು ಹೋಗ್ಬೇಕಾದ್ರೆ ನನಗೂ ಹೇಳಿ ನಿಮ್ಮ ಜೊತೆಗಾರನಾಗಿ ಬರ್ತೇನೆ.

ಮಂಜು ಮುಸುಕಿದ ಹಾದಿಯಲ್ಲಿ

ಪ್ರವಾಸ ಮುಗಿದ ೩ ವರ್ಷಗಳ ನಂತರ ನೆನಪಿನಲ್ಲಳಿದುಳಿದ ಸಂಗತಿಗಳನ್ನು ಹೆಕ್ಕಿ ತೆಗೆದು ಒಂದು ಲೇಖನ ಬರೆಯುವುದು ಕ್ಲಿಷ್ಟಕರ ಕೆಲಸ. ಅದೂ ಪ್ರವಾಸ ಮುಗಿದ ನಂತರ ಎಷ್ಟೋ ಘಟನೆಗಳು ಮರೆತು ಹೋಗಿರುತ್ತವೆ. ಆಗ ಬರೆಯುವ ಮತ್ತು ಬ್ಲಾಗಿಸುವ ಹವ್ಯಾಸ ಇರಲಿಲ್ಲ ಅದಕ್ಕಾಗಿ ಬರೆದಿರಲಿಲ್ಲ. ಈಗ ಬ್ಲಾಗ್ ಗೆ ಬರೆಯುವುದೆಂದರೆ ಏನೋ ಒಂತರಾ! ಅದಲ್ಲದೆ ಯಾರೂ ನೋಡದ ಬ್ಲಾಗ್ ಗೆ ಒಂದು ಲೇಖನ ತುರುಕಬಹುದಲ್ಲ ಎನ್ನುವ ಸಣ್ಣದೊಂದು ನೆಮ್ಮದಿ. ದಟ್ಸ್ ಕನ್ನಡ.ಕಾಂ ನಲ್ಲಿ ನನ್ನ ಕೆಲವು ಪ್ರವಾಸ ಕಥನಗಳು ಪ್ರಕಟಗೊಂಡ ಮೇಲಂತೂ ಬರೆಯುವ ಹುಮ್ಮಸ್ಸು ಇಮ್ಮಡಿಸಿದೆ. ಅದಕ್ಕಾಗಿ ದಟ್ಸ್ ಕನ್ನಡ ತಂಡಕ್ಕೆ ಅಭಿನಂದನೆಗಳು. ನಾನೂ ಬರೆಯಬಹುದು ಅದನ್ನು ಓದುವವರು ಕೆಲವರಿದ್ದಾರೆ ಎಂದು ನನಗೆ ತೋರಿಸಿಕೊಟ್ಟಿದ್ದೆ ದಟ್ಸ್ ಕನ್ನಡ.ಕಾಂ.
೨೦೦೫ರ ಅಕ್ಟೋಬರ್ ತಿಂಗಳಿರಬೇಕು ದಸರೆಯ ರಜಾದಿನಗಳಲ್ಲಿ ವಾಡಿಕೆಯಂತೆ ಪ್ರವಾಸ ಹೋಗುವ ಕಾರ್ಯಕ್ರಮ. ಅದಕ್ಕಾಗಿ ಆಯ್ದು ಕೊಂಡ ಪ್ರದೇಶಗಳ ಪರಿಚಯವಿದ್ದ ನನ್ನ ಸ್ನೇಹಿತ, ಮಂಜೇಗೌಡ ತನ್ನಲ್ಲಿರುವ ಎಲ್ಲ ಮಾಹಿತಿಗಳನ್ನು ಅಚ್ಚುಕಟ್ಟಾಗಿ ನನಗೆ ವಿವರಿಸಿ ಆ ಪ್ರದೇಶಗಳಿಗೆ ತಲುಪುವುದಕ್ಕಾಗಿ ರಸ್ತೆಯ ಸ್ಥೂಲ ನಕ್ಷೆಯೊಂದನ್ನು ಸಿದ್ಧ ಮಾಡಿ ಕೊಟ್ಟದ್ದು ಹೆಚ್ಚು ಅನುಕೂಲವಾಯಿತು. ಸರಿ ಚಾರ್ಮಡಿ ಘಟ್ಟ ಪ್ರದೇಶಗಳಲ್ಲಿ ಒಂದು ಸುತ್ತು ಹಾಕಿ ಬರುವುದೆಂದು (ವಾಹನದಲ್ಲಿ ಮಾತ್ರ) ನಿರ್ಧರಿಸಿದೆವು. ಪ್ರತಿ ಸಲದಂತೆ ಶುಕ್ರವಾರದಂದು ನಮ್ಮ ಪ್ರಯಾಣ ನನ್ನ ಅಚ್ಚುಮೆಚ್ಚಿನ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ, ಕರಡಿಗುಚ್ಚಮ್ಮ ದೇವಸ್ಥಾನದ ಆವರಣದಲ್ಲಿನ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಹಾಸನದ ಕಡೆ ಹೊರಟೆವು. ಹಾಸನದಲ್ಲಿ ಊಟ ಮುಗಿಸಿ ಬೇಲೂರಿನ ಹತ್ತಿರ ಬಂದಾಗ ಈ ಬಾರಿ ಬೇಲೂರಿನಲ್ಲಿರುವ ನನ್ನ ಗೆಳತಿಯನ್ನು ಭೇಟಿ ಮಾಡೋಣ ಎಂದು ತಿಳಿಸಿದವನಿಗೆ ಎದುರಾದದ್ದು ಹೆಂಡತಿಯ ಕೆಂಗಣ್ಣ ನೋಟ. ಅದಕ್ಕುತ್ತರವಾಗಿ ಕಿರುನಗೆಯೊಂದನ್ನು ಬೀರಿ ವಾಹನವನ್ನು ಎಡಗಡೆಗೆ ತಿರುಗಿಸಿದೆ. ನೇರವಾಗಿ ಚೆನ್ನಕೇಶವನ ದೇವಸ್ಥಾನಕ್ಕೆ ನಡೆದೆವು. ಗೆಳತಿ ಮನೆ ಅಂತ ಹೇಳಿ ದೇವಸ್ಥಾನಕ್ಕೆ ಕರ್ಕೊಂಡು ಬಂದ್ರಲ್ಲ ಎನ್ನುವ ಕಳವಳ ತುಂಬಿದ ಪ್ರಶ್ನೆಗೆ ನಗೆಯ ಉತ್ತರವನ್ನಷ್ಟೆ ಕೊಟ್ಟು ಮುಂದೆ ನಡೆದೆ. ಎಲ್ಲ ಕವಿಗಳಿಂದ ಹಾಡಿ ಹೊಗಳಿಸಿಕೊಂಡಿರುವ ವಿಶ್ವವಿಖ್ಯಾತ ಬೇಲೂರಿನ ಶಿಲ್ಪಕಲೆಯನ್ನು ಬಣ್ಣಿಸಲು ಖಂಡಿತ ನಾನು ಅರ್ಹನಲ್ಲ. ಅದು ನನ್ನಿಂದ ಸಾಧ್ಯವೂ ಇಲ್ಲ. ದೇವಸ್ಥಾನದ ಒಳ ಹೊಕ್ಕು ಚೆನ್ನಕೇಶವನಿಗೊಂದು ನಮಸ್ಕಾರ ಹಾಕಿ, ದೇವಸ್ಥಾನದ ಛಾವಣಿಯಲ್ಲಿ ಕನ್ನಡಿ ಹಿಡಿದು ನಿಂತಿದ್ದ ನನ್ನ ಗೆಳತಿಯನ್ನು ;-) ನನ್ನ ಪತ್ನಿಗೆ ಪರಿಚಯಿಸಿದೆ. ನನ್ನ ಈ ಕ್ರೂರ ಹಾಸ್ಯಕ್ಕೆ ತಲೆ ಚಚ್ಚಿಕೊಂಡು ನಕ್ಕು ಸುಮ್ಮನಾದರೂ ಸಣ್ಣದೊಂದು ನಿಟ್ಟುಸಿರು ನನ್ನ ಗಮನಕ್ಕೆ ಬಾರದೆ ಹೋಗಲಿಲ್ಲ. ದೇವಸ್ಥಾನವನ್ನು ಸಂಪೂರ್ಣವಾಗಿ ವೀಕ್ಷಿಸಿ ಹೊರ ಬರುವ ಸಮಯಕ್ಕಾಗಲೆ ಸಂಜೆಯಾಗಿತ್ತು. ಈಗ ರಾತ್ರಿ ಉಳಿದುಕೊಳ್ಳುವ ಸ್ಥಳವನ್ನು ನಿರ್ಧರಿಸ ಬೇಕಿತ್ತು. ಚಿಕ್ಕಮಗಳೂರಿಗೆ ಹೋಗುವ ಮನಸ್ಸಾದರೂ ನಾವು ಕ್ರಮಿಸಬೇಕಾದ ದಾರಿಯಿಂದ (ಮುಡಿಗೆರೆ ಮತ್ತು ಚಾರ್ಮಡಿ) ಬೇರೊಂದು ದಿಕ್ಕಿನಲ್ಲಿ ದೂರ ಹೋಗಬೇಕಿತ್ತು. ಇದ್ಯಾವುದರ ಗೊಡವೆಯೆ ಬೇಡವೆಂದು ನಮ್ಮ ತಂದೆಯ ತಂಗಿ(ನನ್ನ ಅತ್ತೆ) ಮನೆಯಲ್ಲಿ ತಂಗಿದೆವು.
ಶನಿವಾರ ಬೆಳಿಗೆ ೬ ಗಂಟೆಗೆ ಹಾವಿನಂತೆ ಮಲಗಿರುವ ಮಳೆನಾಡಿನ ರಸ್ತೆಯಲ್ಲಿ ಮುಡಿಗೆರೆ ಕಡೆಗೆ ನಮ್ಮ ವಾಹನದ ಓಟ. ಮುಡಿಗೆರೆಗೆ ಹೋಗುವ ಅವಶ್ಯಕತೆಯಿಲ್ಲದಿದ್ದರೂ, ಉಪಹಾರಕ್ಕಾಗಿ ಹೋಗಲೇಬೇಕಾಯಿತು. ಉಪಹಾರ ಮುಗಿಸಿ ಕಾರಿಗೂ ಹೊಟ್ಟೆ ತುಂಬಿಸಿ ಚಾರ್ಮಡಿಯ ಕಡೆ ಪ್ರಯಾಣ ಮುಂದುವರೆಯಿತು. ಮಂಜು ಮುಸುಕಿದ್ದ ಹಾದಿಯಲ್ಲಿ ಹಿತಮಿತವಾದ ಚಳಿಯಲ್ಲಿ ವಾಹನ ಮುಂದೋಡುತ್ತಿದ್ದರೆ ದಾರಿ ಸವೆದ ಅನುಭವವೇ ಆಗುವುದಿಲ್ಲ. ಸ್ವಲ್ಪ ಸಮಯದ ನಂತರ ಘಟ್ಟ ಪ್ರದೇಶ ಒಮ್ಮೆಲೆ ತೆರೆದು ಕೊಳ್ಳಲಾರಂಭಿಸಿತು. ಸುಮಾರು ೫-೬ ಕಿ.ಮೀ ಕ್ರಮಿಸಿದ ನಂತರ ರಸ್ತೆಯ ಪಕ್ಕದಲ್ಲಿ ಸಣ್ಣ ಮೆಟ್ಟಿಲುಗಳಂತಿದ್ದ ಬಂಡೆಯ ಮೇಲಿಂದ ಹರಿಯುತ್ತಿದ್ದ ಸ್ವಲ್ಪ ದೊಡ್ಡದಾದ ಝರಿ ನನ್ನನ್ನು ವಾಹನ ನಿಲ್ಲಿಸುವಂತೆ ಪ್ರೇರೇಪಿಸಿತು. ಅದಕ್ಕಾಗಿಯೇ ಅಲ್ಲವೆ ನಾವು ಬೆಂಗಳೂರಿಗರು ವಾರಾಂತ್ಯದಲ್ಲಿ ಮನೆ ಬಿಟ್ಟು ಓಡುವುದು. ಹೆಚ್ಚೇನು ಯೋಚಿಸದೆ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ ನೇರವಾಗಿ ಆ ಜಲಪಾತದ ಕಡೆಗೆ ನಡೆದೆವು. ಹೆಚ್ಚೇನು ಕಡಿದಾಗಿಲ್ಲದ ಬಂಡೆಯ ಮೇಲೆ ಹರಿಯುವ ನೀರು ಜಲಪಾತದಂತೆ ಭಾಸವಾಗುತ್ತದೆ. ಆದರೆ ನಿರಾಸೆ ಉಂಟು ಮಾಡದೆ ಮನಸ್ಸಿಗೆ ಮುದ ನೀಡುವುದು ಖಚಿತ. ಇದೇ ದಾರಿಯಲ್ಲಿ ಬಂದ ಸ್ಥಳೀಯರ ಗುಂಪು, ಇದಕ್ಕೆ ಆಲೇಖಾನ್ ಜಲಪಾತವೆಂದು ತಿಳಿಸಿತು. ಮಗನಿಗಂತೂ ಖುಷಿಯೋ ಖುಷಿ. ಸುಮಾರು ಅರ್ಧ ಗಂಟೆಯ ನಂತರ ಅಲ್ಲಿಂದ ಹೊರಟೆವು.
ಕಣಿವೆ ಇಳಿಯಲು ಆರಂಭಿಸುತ್ತಿದ್ದಂತೆ ಕಾಣಸಿಗುವ ಬಂಗಲೆಯೊಂದು ಗಮನ ಸೆಳೆಯಿತು. ಅದೇನು ಎಂದು ಒಮ್ಮೆ ನೋಡಿ ಬಿಡುವ ಎಂದು ತೆರಳಿದವರಿಗೆ ಸಿಕ್ಕದ್ದು ಒಂದು ಅತಿಥಿಗೃಹ. ರಸ್ತೆಯ ಬದಿಯಲ್ಲಿ ನಿರ್ಜನ ಕಾಡಿನ ನಡುವೆ ಏಕಾಂಗಿಯಾಗಿ ನಿಂತಿರುವ ಬಂಗಲೆ. ಮೌನ ಕಣಿವೆಯ ನಿಶ್ಯಬ್ಧತೆಯಲ್ಲಿ ಏಕಾಂಗಿತನವನ್ನು ಆಸ್ವಾದಿಸುವವರಿಗೆ ಹೇಳಿ ಮಾಡಿಸಿದಂತಹ ಜಾಗ. ಅದರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನಕ್ಕೆ ಅಲ್ಲಿದ್ದ ಜನ ಸ್ಪಂಧಿಸಲಿಲ್ಲ ಅದೇನು ದೊಡ್ಡ ವಿಷಯವಲ್ಲವೆಂಬಂತೆ ಅಲ್ಲಿಂದ ಹೊರಟು ಬಂದೆ. ಆದರೆ ಹಸಿರು ಕಣಿವೆಯ ಮಧ್ಯೆ ನಿಂತಿರುವ ಮಲಯ ಮಾರುತ ಅತಿಥಿಗೃಹದಲ್ಲಿ ಒಮ್ಮೆ ಉಳಿದು ಅಲ್ಲಿನ ಸೌಂದರ್ಯವನ್ನು ಸವಿಯಬೇಕೆನ್ನುವ ನನ್ನ ಆಸೆ ಇನ್ನೂ ಹಾಗೆಯೆ ಉಳಿದಿದೆ.
ಅಲ್ಲಿಂದ ಮುಂದೆ ಚಾರ್ಮಡಿ ಘಟ್ಟಗಳ ನಡುವೆ ಬಂದು ನಿಂತಿತು ನನ್ನ ವಾಹನ. ಅಬ್ಬ!! ಮಂಜು ಮುಸುಕಿದ ಸುಂದರ ಹಸಿರು ಕಣಿವೆಗಳು ಬೆಟ್ಟಕ್ಕೆ ಬೆಣ್ಣೆ ಬಳಿದಂತಿರುವ ಚಿತ್ರ ಬರೆದಿರುವ ಮೋಡಗಳು. ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಲ್ಲಿನ ಸೌಂದರ್ಯವನ್ನೆ ಆಸ್ವಾದಿಸುತ್ತಾ ಅಲ್ಲೆ ಉಳಿದುಬಿಡೋಣವೆನ್ನುತ್ತದೆ ಮನಸ್ಸು. ಆದರೆ ವಾಸ್ತವ ನಮ್ಮನ್ನು ಎಚ್ಚರಿಸಿ ಮುಂದೆ ಹೋಗಲು ಸೂಚನೆ ಕೊಡುತ್ತದೆ.
ಅಲ್ಲಲ್ಲಿ ಸಿಗುವ ನೀರಿನ ಝರಿಗಳು ರಸ್ತೆಯನ್ನು ತೇವಗೊಳಿಸಿ ಕಣಿವೆಗೆ ಇಳಿದು ಹೋಗುತ್ತವೆ. ಮಳೆಗಾಲ ಈಗಿನ್ನು ಮುಗಿದಿದ್ದರಿಂದ ಸಣ್ಣ ಝರಿಗಳಿಗೇನು ಕೊರತೆಯಿರಲಿಲ್ಲ. ಎಲ್ಲ ಝರಿಗಳ ಬಳಿ ನಿಂತು ಹೊರಡುವುದಾದರೆ ಬಹುಶಃ ನಮ್ಮ ಗುರಿಯಾದ ಧರ್ಮಸ್ಥಳವನ್ನು ತಲುಪಲು ೫-೬ ಗಂಟೆಯೇ ಬೇಕಾಗಬಹುದು. ರಸ್ತೆ ಕಿರಿದಾದರೂ ಉತ್ತಮವಾಗಿದ್ದರಿಂದ ತೊಂದರೆಯಿರಲಿಲ್ಲ. ಉತ್ತರ ಕರ್ನಾಟಕದಿಂದ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದಾರಿಯಿದಾಗಿದೆ. ದಾರಿಯುದ್ದಕ್ಕೂ ಸಿಗುವ ವಿವಿಧ ರೀತಿಯ ಸಣ್ಣ ಪ್ರಾಣಿ ಪಕ್ಷಿ ಕಾಡುಕೋಳಿಗಳನ್ನು ಅಲ್ಲಿನ ಸೌಂದರ್ಯವನ್ನು ತನ್ನ ಬೆರಗುಗಣ್ಣಿನಿಂದ ನೋಡುತ್ತಿದ್ದ ಅಮಿತ್ ಅದೃಷ್ಠವಂತನಲ್ಲವೆ?
ಕೊನೆಗೊಮ್ಮೆ ಘಟ್ಟವನ್ನು ಇಳಿದಾಗ ಎದುರಾದದ್ದು ಕೆಟ್ಟು ನಿಂತ ರಸ್ತೆ. ಅಬ್ಬ ಇದೇನು ರಸ್ತೆಯೆ? ಅಥವಾ ಇಲ್ಲೊಂದು ರಸ್ತೆಯಿತ್ತೆ? ಎನ್ನುವಷ್ಟು ಹಾಳಾಗಿ ಹೋಗಿತ್ತು. ಎದುರಿಗೆ ಬರುವ ರಾಕ್ಷಸಾಕಾರದ ಲಾರಿಗಳಿಗೆ ದಾರಿ ಬಿಡಲೂ ಆಗದ ಕೆಟ್ಟ ರಸ್ತೆಯಲ್ಲಿ ಅದು ಹೇಗೆ ವಾಹನ ಚಲಾಯಿಸಿದೆನೋ ನನಗೇ ಗೊತ್ತಿಲ್ಲ. ಅಲ್ಲಿನ ಮನಮೋಹಕ ಸುಂದರ ಪರಿಸರಕ್ಕೆ ದೃಷ್ಠಿ ಬೊಟ್ಟಿನಂತಿತ್ತು ಆ ರಸ್ತೆ. ರಸ್ತೆಯ ಪಕ್ಕದಲ್ಲಿ ಹರಿಯುತ್ತಿದ್ದ ತೊರೆಯೊಂದರಲ್ಲಿ ಲಾರಿ ಚಾಲಕರುಗಳು ತಮ್ಮ ವಾಹನವನ್ನು ತೊಳೆಯುತ್ತಾ ಪರಿಸರ ಮಾಲಿನ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ಅಲ್ಲಿ ದಯಪಾಲಿಸುತ್ತಿದ್ದರು.
ಕೊಟ್ಟಿಗೆಹಾರ ಉಜಿರೆ ಮುಖೇನ ಧರ್ಮಸ್ಥಳವನ್ನು ತಲುಪಿ ಮಂಜುನಾಥನ ದರ್ಶನ ಮಾಡಿ ಗುಂಡ್ಯ ಮುಖಾಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿ ಅಲ್ಲಿ ದೇವರ ದರ್ಶನದ ನಂತರ ಶೃಂಗೇರಿ ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ ದೇವಸ್ಥಾನದ ವಸತಿಗೃಹವೊಂದನ್ನು ಪಡೆದು ನಿದ್ದೆಗೆ ಶರಣು. ರಾತ್ರಿ ದೇವಸ್ಥಾನದ ಭೋಜನಾಲಯದಲ್ಲಿ ಊಟ ಮುಗಿಸಿದೆವು. ಪಕ್ಕದಲ್ಲಿದ್ದ ಅಂಗಡಿಯಲ್ಲಿ ಕುಮಾರ ಪರ್ವತದ ಭಟ್ಟರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡೆ. ಮಳೆ ಬರುವ ಸೂಚನೆಗಳು ದಟ್ಟವಾಗತೊಡಗಿದ್ದರಿಂದ ವಸತಿಗೃಹ ಸೇರಿಕೊಂಡು ನಿದ್ದೆಗೆ ಶರಣು.
ಭಾನುವಾರ ಬೆಳಿಗ್ಗೆ ಕುಮಾರಧಾರಕ್ಕೆ ಸ್ನಾನಕ್ಕೆ ಹೋಗುವ ಮನಸ್ಸಾದರೂ ನೀರಿನ ಹರಿವು ಹೆಚ್ಚಿದ್ದರಿಂದ ಮತ್ತು ನಾವು ಬೇಗನೆ ಹೊರಡಬೇಕಿದ್ದರಿಂದ ಆ ಯೋಜನೆಯನ್ನು ಬಿಟ್ಟು ಬೆಳಿಗ್ಗೆ ೬ ಗಂಟೆಗೆ ವಸತಿಗೃಹದಿಂದ ಬೆಂಗಳೂರಿನ ಕಡೆಗೆ ಹೊರಟೆವು.
ನೇರವಾಗಿ ಗುಂಡ್ಯದ ಮುಖಾಂತರ ರಾ.ಹೆ. ೪೮ ರಲ್ಲಿ ಪಯಣಿಸದೆ ಮತ್ತೊಂದು ಹಸಿರು ತುಂಬಿದ ಚಿಕ್ಕ ರಸ್ತೆಯಲ್ಲಿ ಕ್ರಮಿಸುವುದು ನನ್ನ ಯೋಜನೆ. ಅದೆ ಬಿಸ್ಲೆ ಘಟ್ಟದ ರಸ್ತೆ ಸುಬ್ರಹ್ಮಣ್ಯದಿಂದ ಸ್ವಲ್ಪ ದೂರ ಕ್ರಮಿಸಿದ ಮೇಲೆ ಸಿಗುವ ಕೈಮರದ ಬಳಿ ಎಡಗಡೆಗೆ ತಿರುಗದೆ ಬಲಕ್ಕೆ ತಿರುಗಿದರೆ ಆ ರಸ್ತೆ ನಮ್ಮನ್ನು ಬಿಸ್ಲೆ ಘಟ್ಟದ ಮುಖೇನ ಸಕಲೇಶಲೇಶಪುರ ಕ್ಕೆ ತಲುಪಿಸುತ್ತದೆ. ಇದರ ಬಗ್ಗೆ ಮಾಹಿತಿಯಿತ್ತಿದ್ದಕ್ಕೆ ವಂದನೆಗಳು ಮಂಜೇಗೌಡ. ಕೈಮರದ ಬಳಿ ಬಂದಾಗ ನಮ್ಮ ದಾರಿ ಸರಿಯಿದೆಯೆಂದು ನಿಶ್ಚಯಿಸಿಕೊಳ್ಳಲು ಯಾರನ್ನಾದರೂ ವಿಚಾರಿಸೋಣವೆಂದು ಅರ್ಧ ಗಂಟೆ ಕಾಯ್ದರೂ ಯಾರೂ ಸಿಗುವ ಲಕ್ಷಣಗಳು ಗೋಚರಿಸಲಿಲ್ಲ. ಏನಾದರಾಗಲಿ ಎಂದು ಅಲ್ಲಿ ಬಲಕ್ಕೆ ತಿರುಗಿ ೨-೩ ಕಿ.ಮೀ ನಂತರ ಎದುರಿಗೆ ಸಿಕ್ಕ ವ್ಯಕ್ತಿಯಿಂದ ನಮ್ಮ ದಾರಿಯಿದೆಯೆಂದು ತಿಳಿದುಕೊಂಡೆವು. ಆತನ ಪ್ರಕಾರ ಈ ದಾರಿಯಲ್ಲಿ ಹೋಗುವುದು ಸೂಕ್ತವಲ್ಲ ಕಾರಣ ಹಿಂದಿನ ರಾತ್ರಿ ಸುರಿದ ಮಳೆಯಿಂದ ಭೂಕುಸಿತ ಉಂಟಾಗಿರುವ ಸಂಭವ ಹೆಚ್ಚು ಮತ್ತು ನಾವು ಪಯಣಿಸುವಾಗಲೂ ಭೂಕುಸಿತ ಉಂಟಾಗುವ ಸಂಭವವಿರುವುದರಿಂದ ಮತ್ತು ಹಾಗೇನಾದರೂ ಆದರೆ ನೀವು ಮುಂದೆ ಹೋಗಲೂ ಆಗದೆ ಹಿಂದಿರುಗಲೂ ಆಗದೆ ಮಧ್ಯದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಂದರ್ಭ ಎದುರಾಗುತ್ತದೆಂದು ವಿವರಿಸಿ ತನ್ನ ಪಾಡಿಗೆ ತಾನು ಹೋಗಿಬಿಟ್ಟ. ಮತ್ತೊಮ್ಮೆ ನನ್ನ ಭಂಡ (ಭಯಕ್ಕಿಂತ ಭಂಡ ಧೈರ್ಯ ಮೇಲು J ಎಂದು ಎಲ್ಲೋ ಓದಿದ ನೆನಪು) ಧೈರ್ಯವನ್ನು ಮುಂದೆ ಮಾಡಿಕೊಂಡು ಅದೇ ದಾರಿಯಲ್ಲಿ ಮುಂದುವರೆದಾಗ ಪತ್ನಿ ಪುತ್ರರ ಮುಖದಲ್ಲಿ ಆತಂಕದ ಛಾಯೆ ಇಣುಕುತ್ತಿತ್ತು. ೧-೨ ಕಿ.ಮೀ ನಂತರ ಕಾಣಸಿಗಲು ಆರಂಭಿಸಿದ ಆ ಸುಂದರ ದೃಶ್ಯಗಳು ನನ್ನ ಭಂಡ ಧೈರ್ಯಕ್ಕೆ ಸಂದ ಬೆಲೆ ಎಂಬುದರಲ್ಲಿ ಅನುಮಾನವಿರಲಿಲ್ಲ. ಆ ಸುಂದರ ಪರಿಸರ ಅವರಿಬ್ಬರ ಮುಖದಲ್ಲಿದ್ದ ಆತಂಕವನ್ನು ದೂರ ಮಾಡಿತ್ತು.
ಓಹ್!! ಕಣ್ಣಿಗೆ ರಾಚುವಷ್ಟು ಹಚ್ಚ ಹಸಿರು ದಟ್ಟಕಾಡು. ಅದರ ಮಧ್ಯೆ ಹದಗೆಟ್ಟು ಹೋಗಿದ್ದ ರಸ್ತೆ ಎಲ್ಲೋ ರಭಸದಿಂದ ಬೀಳುತ್ತಿದ್ದ ನೀರಿನ ಶಬ್ಧ. ೧೦-೧೫ ಅಡಿಗಳಷ್ಟು ದೂರವೂ ಕಾಣಿಸಿದಂತೆ ಮುಸುಕಿರುವ ದಟ್ಟ ಮಂಜು. ವರ್ಣಿಸಲು ಹೊರಟರೆ ಓದುಗನಿಗೆ ಈರ್ಷ್ಯೆ ಉಂಟಾಗುವಷ್ಟು ಸುಂದರ ಪರಿಸರ. ಬಹುಶಃ ನಾನು ಇಲ್ಲಿ ಏನೇ ವರ್ಣಿಸಿದರೂ ಅಲ್ಲಿ ಭೇಟಿ ನೀಡಿದರೆ ಸಿಗುವ ಆನಂದದ ಕನಿಷ್ಠ ಹತ್ತಿರವೂ ಬರುವುದಿಲ್ಲ. ಛಾಯಾಚಿತ್ರಗಳಾಗಲಿ ಚಿತ್ರೀಕರಿಸಿದ ದೃಶ್ಯಗಳಾಗಲಿ ಅಲ್ಲಿನ ಸೌಂದರ್ಯವನ್ನು ಪ್ರತಿಶತ ೧೦ ರಷ್ಟನ್ನು ತಲುಪಿಸುವಲ್ಲಿ ಯಶಸ್ವಿಯಾಗಲಾರವು. ಅದರ ಮಧ್ಯ ಅಲ್ಲಲ್ಲಿ ೨ ಅಡಿಗಳಿಗೂ ಮೀರಿ ದೊಡ್ಡದಾದ ಹಳ್ಳ ತುಂಬಿದ ಚಿಕ್ಕ ರಸ್ತೆಯಾದರೂ ಹೆಚ್ಚು ಬಳಕೆಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿತ್ತು.. ಆ ದಾರಿಹೋಕ ಹೇಳಿದಂತೆ ಭೂಕುಸಿತ ಉಂಟಾದ ಲಕ್ಷಣಗಳಿದ್ದರೂ ನಮ ಪ್ರಯಾಣಕ್ಕೆ ತೊಂದರೆಯಾಗುವಂತೆ ಎಲ್ಲೂ ರಸ್ತೆ ಮುಚ್ಚಿಹೋಗಿರಲಿಲ್ಲ. ದಾರಿಯುದ್ದಕ್ಕೂ ಸಿಗುವ ಸಣ್ಣ ಝರಿಗಳಲ್ಲಿ ನಿಂತು ದೃಶ್ಯಗಳನ್ನು ಸೆರೆ ಹಿಡಿಯುತ್ತಾ ನಮ್ಮ ಪ್ರಯಾಣ ಮುಂದುವರೆದು ಸೇತುವೆಯಂದೊರ ಮೇಲೆ ಬಂದು ನಿಂತಿತು. ಹಾಲಿನ ಬೆಳ್ನೊರೆಯಂತೆ ಕಾಣುವ ಜಲಧಾರೆ. ರಭಸವಾಗಿ ಬೆಟ್ಟದಿಂದ ಇಳಿದು ಬರುತ್ತಿರುವ ದೃಶ್ಯ ನೀರಿನ ಭೋರ್ಗರೆತ ಏನೆಂದು ಹೇಳುವುದು? ಅಲ್ಲಿ ನಿಂತೆ ಅದನ್ನು ಸವಿಯಬೇಕಷ್ಟೆ. ನೀರಿಗಿಳಿಯುವ ಮನಸ್ಸಾದರೂ ಸಮಯದ ಅಭಾವದಿಂದ ಮತ್ತು ನೀರಿನ ಭೋರ್ಗರೆತ ಅದಕ್ಕೆ ಆಸ್ಪದವೀಯಲಿಲ್ಲ. ಹೆಜ್ಜೆ ಹೆಜ್ಜೆಗೂ ಸಿಗುವ ಕಣಿವೆಯ ದೃಶ್ಯ ಮತ್ತು ಕಣಿವೆಯ ತಳಭಾಗವನ್ನು ಮುಟ್ಟುವಂತಿರುವ ಮೋಡಗಳು ತುಂಬಾ ಕಾಲ ನೆನಪಿನಲ್ಲಿರುತ್ತವೆ. ಮಂಜು ಮುಸುಕಿದ ದಾರಿಯಲ್ಲಿ ವಾಹನ ಚಾಲನೆ ಮುದ ನೀಡುತ್ತದೆ. ಸ್ವಲ್ಪ ಸಮಯದ ನಂತರ ಒಲ್ಲದ ಮನಸ್ಸಿನಿಂದ ಹೊರಟು ಬಿಸ್ಲೆ ಸುಂದರ ಸ್ಥಳಕ್ಕೆ ಬಂದೆವು ಹೆಸರಿಗೆ ತಕ್ಕಂತೆ ಇತ್ತು ಆ ಸ್ಥಳ.
ಅರಣ್ಯ ಇಲಾಖೆ ನಿರ್ಮಿಸಿರುವ ವೀಕ್ಷಣಾ ಗೋಪುರಕ್ಕೆ ನಡೆದು ಹೋಗಿ ಗೋಪುರದಿಂದ ಕಾಣೂವ ಕುಮಾರ ಪರ್ವತ ಮತ್ತು ಪುಷ್ಪಗಿರಿ ಶ್ರೇಣಿಯ ಕಣಿವೆ ದೃಶ್ಯವನ್ನು ಕಣ್ಣಲ್ಲಿ ತುಂಬಿಕೊಂಡು ನಮ್ಮ ಪ್ರಯಾಣ ಮುಂದುವರೆದು ಕೂಡ್ರಸ್ತೆ ಮುಖಾಂತರ ಪುಷ್ಪಗಿರಿಯ ತಳದಲ್ಲಿ ಅಪೂರ್ಣ ಸೇತುವೆಯ ಬಳಿ ಬಂದು ನಿಂತೆವು. ಮಲ್ಲಳ್ಳ್ಳಿ ಜಲಪಾತ ಇಲ್ಲಿಂದ ಹತ್ತಿರವಿತ್ತು, ಇನ್ನು ಮುಂದೆ ಮೇಲಕ್ಕೆ ಕಾಲ್ನಡಿಗೆಯಲ್ಲಿ ೨-೩ ಕಿ.ಮೀ ಕ್ರಮಿಸಬೇಕಿತ್ತು. ಬೇಸಿಗೆಯಲ್ಲಿ ಇನ್ನೂ ೧ ಕಿ.ಮೀಗಳಷ್ಟು ವಾಹನದಲ್ಲಿ ಕ್ರಮಿಸಬಹುದು. ನೀರಿನ ಹರಿವು ಹೆಚ್ಚಿದ್ದರಿಂದ ನನಗೆ ಅದು ಸಾಧ್ಯವಾಗಲಿಲ್ಲ. ಇಲ್ಲಿ ಮೇಲಿರುವ ಶಿವ ದೇವಾಲಯಕ್ಕೆ ಬರುವವರಿದ್ದರಿಂದ ದಾರಿ ತಪ್ಪುವ ಆತಂಕವಿರಲಿಲ್ಲ. ನಿರ್ಮಾಣ ಹಂತದಲ್ಲಿದ್ದ ರಸ್ತೆಯಲ್ಲಿ ನಡೆಯಲು ಆರಂಭಿಸುತ್ತಿದ್ದಂತೆ ವರುಣ ತನ್ನ ವರಸೆ ತೋರಿಸಲು ಪ್ರಾರಂಭಿಸಿದ. ಮಳೆನಾಡಿನ ಮಳೆಯ ಅನುಭವ ಈಗಾಗಲೆ ಇದ್ದುದರಿಂದ ಸ್ವಲ್ಪ ದೂರದಲ್ಲಿ ಕಾಣಿಸಿದ ಬಾಗಿಲು ಮುಚ್ಚಿದ ಮನೆಯ ಮುಂದೆ ನಿಂತು ಬಿರು ಮಳೆಯನ್ನೆ ನೋಡುತ್ತಾ ನಿಂತು ಕಾಲ ತಳ್ಳಿದೆವು. ಒಂದು ಗಂಟೆಗೂ ಹೆಚ್ಚು ಕಾಲ ಎಡಬಿಡದೆ ಭೋರೆಂದು ಸುರಿದ ಮಳೆ ನಮ್ಮ ಸಮಯವನ್ನು ನುಂಗಿ ಹಾಕಿತ್ತಲ್ಲದೆ, ರಸ್ತೆ ನಿರ್ಮಾಣಕ್ಕೆಂದು ಹರಡಿದ್ದ ಕಲ್ಲುಗಳ ಮಧ್ಯೆ ನಡೆದು ಹೋಗುವುದನ್ನು ದುಸ್ತರಗೊಳಿಸಿತ್ತು. ಅಲ್ಲಲ್ಲಿ ಜಾರುತ್ತ ಕೊನೆಗೊಮ್ಮೆ ದೇವಸ್ಥಾನವನ್ನು ತಲುಪಿದೆವು. ಪುಷ್ಪಗಿರಿಯನ್ನು ಪೂರ್ಣವಾಗಿ ಚಾರಣ ಮಾಡುವ ಉದ್ದೇಶದಿಂದ ಬಂದಿದ್ದ ಬೆಂಗಳೂರಿನ ತಂಡವೊಂದರ ಅನುಭವಗಳನ್ನು ಕೇಳುತ್ತ ಜಿಗಣೆ ಆನೆಗಳ ಕಥೆ ರಾತ್ರಿಯೆಲ್ಲ ಕತ್ತಲಲ್ಲಿ ಮೇಣದಬತ್ತಿಯೂ ಇಲ್ಲದೆ ರಾತ್ರಿ ಕಳೆದ ಅವರ ಕರುಣಾಜನಕ ಕಥೆ ಕುತೂಹಲ. ಜಿಗಣೆಗಳು ಅವರೆಲ್ಲರ ಕಾಲಿನಲ್ಲಿ ಬಿಟ್ಟಿದ್ದ ರಕ್ತದ ಕಲೆಗಳು ಅವರ ರೋಚಕ ಕಥೆಗೆ ಸಾಕ್ಷಿಗಳಾಗಿದ್ದವು. ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಅಷ್ಟರಲ್ಲಾಗಲೆ ವರುಣ ಮತ್ತೊಂದು ಸುತ್ತು ಆರ್ಭಟಿಸಿದ. ಶಿವ ದೇವಾಲಯಕ್ಕೊಂದು ಪ್ರದಕ್ಷಿಣೆ ಹಾಕಿ ಚಾರಣ ತಂಡಕ್ಕೆ ವಂದಿಸಿ ನನ್ನ ವಾಹನವಿದ್ದ ಜಾಗಕ್ಕೆ ಹಿಂದಿರುಗಿದಾಗ ನನಗೊಂದು ಆಘಾತ ಕಾದಿತ್ತು. ಪುಷ್ಪಗಿರಿ ಸೇರುವ ತವಕದಲ್ಲಿ ಅತ್ಯಂತ ಕಡಿದಾದ ರಸ್ತೆಯ ಭಾಗವನ್ನು ಇಳಿದು ಬಂದಿದ್ದೆ. ಆದರೆ ಈಗ ಅದನ್ನು ಹತ್ತಲು ಸಾಧ್ಯವಾಗಲಿಲ್ಲ. ಅಲ್ಲಿರುವ ೩-೪ ಜನ ತಮ್ಮೆಲ್ಲ ಶಕ್ತಿ ಬಿಟ್ಟು ತಳ್ಳಿದರೂ ಅರ್ಧ ದಾರಿ ಕ್ರಮಿಸಿ ನನ್ನ ವಾಹನ ನಿಂತು ಹೋಗುತ್ತಿತ್ತು. ಸಮಯ ಓಡಿ ಹೋಗುತ್ತಿತ್ತು. ಇದೆಲ್ಲದರ ನಡುವೆ ಮತ್ತೆ ಮಳೆ ಸುರಿಯಲಾರಂಭಿಸಿತು. ಈಗಾಗಲೆ ಸುರಿದ ಮಳೆಯಿಂದ ನನ್ನ ವಾಹನ ಮೇಲೇರಲಾರದೆ ನಿರ್ಮಾಣ ಹಂತದಲ್ಲಿ ಹರಡಿದ್ದ ಕಲ್ಲುದುಂಡಿಗಳನ್ನು ಹತ್ತಲಾರದೆ ವಾಹನದ ಚಕ್ರ ನಿಂತಲ್ಲೆ ತಿರುಗುತ್ತಿತ್ತು. ಮಳೆಯಿಂದ ಒದ್ದೆಯಾಗಿ ಸಡಿಲಗೊಂಡಿದ್ದ ಮಣ್ಣು ಜಾರಿ ಚಕ್ರ ಸಿಕ್ಕಿಕೊಳ್ಳುತ್ತಿತ್ತು. ಎಷ್ಟೆ ಪ್ರಯತ್ನ ಪಟ್ಟರೂ ಅರ್ಧಕ್ಕೆ ಏರುತ್ತಿದ್ದ ಕಾರು ಅಲ್ಲೆ ನಿಂತು ಬಿಡುತ್ತಿತ್ತು. ಅಲ್ಲಿದ್ದ ಜನ ಹತ್ತಿರದ ಎಸ್ಟೇಟ್ ನಲ್ಲಿರುವ ಜೀಪನ್ನು ತಂದು ಎಳೆಸುವಂತೆ ಸಲಹೆಯಿತ್ತರು. ಅದಕ್ಕಾದರೂ ೫-೬ ಕಿ.ಮೀ ನಡೆದು ಹೋಗಬೇಕಿತ್ತು.
ಆ ಸಮಯಕ್ಕೆ ಚಾರಣಕ್ಕೆಂದು ಬಂದಿದ್ದ ತಂಡ ಅಲ್ಲಿದ್ದ ಹೊಳೆಯಲ್ಲಿ ನೀರಾಟವಾಡುತ್ತಿದ್ದರು. ಅವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿ ಸಹಾಯಕ್ಕಾಗಿ ವಿನಂತಿಸಿದೆ. ನನ್ನ ಕರೆಗೆ ಸ್ಪಂದಿಸಿದ ಆ ೭-೮ ಜನ ತಮ್ಮ ಸ್ನಾನಾದಿಗಳನ್ನು ಮುಗಿಸಿ ಬಂದು ೩-೪ ಪ್ರಯತ್ನಗಳ ನಂತರ ನನ್ನ ವಾಹನವನ್ನು ಮೇಲೆ ತಂದು ನಿಲ್ಲಿಸಿಸಲು ಯಶಸ್ವಿಯಾದರು. ಅವರೆಲ್ಲರ ಸಹಾಯಕ್ಕೆ ಇಲ್ಲಿ ಧನ್ಯವಾದ ತಿಳಿಸುತ್ತ ಸ್ಮರಿಸಿಕೊಳ್ಳುವುದು ನನ್ನ ಕರ್ತವ್ಯ. ಅವರನ್ನೆಲ್ಲಾ (ಸುಮಾರು ೧೦ ಜನ) ತುಂಬಿಕೊಂಡು ಸಕಲೇಶಪುರದ ಕಡೆಗೆ ಹೊರಟೆ. ಈಗ ಹೊಟ್ಟೆಯ ಹಸಿವು ನನ್ನ ಗಮನಕ್ಕೆ ಬಂತು. ನಾವು ಇಂದು ಮಧ್ಯಾಹ್ನ ಊಟವೆ ಮಾಡಿಲ್ಲದ್ದು ಅರಿವಿಗೆ ಬಂತು. ನನ್ನ ಮಗನಂತು ಹಸಿವಿನಿಂದ ಬಳಲಿದ್ದ. ಚಾರಣ ತಂಡದವ್ರು ಕೊಟ್ಟ ಕುರುಕಲು ತಿಂಡಿಗಳು ಅವನಿಗೆ ಸ್ವಲ್ಪ ಸಮಾಧಾನ ತಂದಿತು. ಹಳಿಯೊಂದರ ಗೂಡಂಗಡಿಯಲ್ಲಿ ಸಿಕ್ಕ ಬಿಸ್ಖೆಟ್ ಗಳನ್ನೆ ಮುಕ್ಕಿ ಸಕಲೇಶಪುರದಲ್ಲಿ ಆ ಚಾರಣಿಗರನ್ನೆಲ ಇಳಿಸಿ ಮತ್ತೊಮ್ಮೆ ಅವರಿಗೆ ಅವರ ಸಹಾಯಕ್ಕೆ ವಂದಿಸಿ ಹೆದ್ದಾರಿಯ ಪಕ್ಕದಲ್ಲಿದ್ದ ಭೋಜನಗೃಹಕ್ಕೆ ದಾಳಿಯಿಟ್ಟಾಗ ಸಂಜೆ ೫.೦೦ ಗಂಟೆ. ಊಟ ಮುಗಿಸಿ ಹಾಸನದಲ್ಲೊಮ್ಮೆ ಚಹಾ ಸೇವಿಸಿ ಚೆನ್ನರಾಯಪಟ್ಟಣ, ಹಿರಿಸಾವೆ ಬೆಳ್ಳೂರು ಮತ್ತು ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಿದಾಗ ರಾತ್ರಿ೧೦.೩೦
ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯಗಳನ್ನು ನೋಡುತ್ತಿದ್ದಾಗ ಅರೆರೆ ಹೌದಲ್ಲ ಖಾಲಿಯಿರುವ ನನ್ನ ಬ್ಲಾಗಿಗೆ ತುರುಕಿ ಅದರ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡಬಹುದಿತ್ತಲ್ಲ ಎನ್ನುವುದು ಹೊಳೆದ ತಕ್ಷಣವೆ ಗಣಕ ಯಂತ್ರದ ಕೀಲಿಮಣೆ ಹಿಡಿದು ಕುಳಿತೆ ಅದರ ಪ್ರತಿಫಲವೇ ಈ ಲೇಖನ.
ನಿಮ್ಮ ಅನಿಸಿಕೆಗಳನ್ನು ತಿಳಿಸಿ

Thursday, June 19, 2008

ನುಗ್ಗೆಹಳ್ಳಿಯ ಲಕ್ಷ್ಮಿನರಸಿಂಹ ದೇವಾಲಯ

ನುಗ್ಗೆಹಳ್ಳಿಯಲ್ಲಿರುವ ಲಕ್ಷ್ಮಿನರಸಿಂಹ ದೇವಾಲಯದ ದೃಶ್ಯದ ತುಣುಕು.

Wednesday, June 18, 2008

ಗೊತ್ತುಗುರಿಯಿಲ್ಲದ ಪ್ರವಾಸ

ಶೀರ್ಷಿಕೆ ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ, ೫ ಜನ ಬಿ. ಇ. ಎಲ್ ಸಹೋದ್ಯೋಗಿಗಳು ಪ್ರವಾಸ ಹೊರಡುವುದು, ಅದು ಎಲ್ಲಿಗೆ, ನಮ್ಮ ಗುರಿ ಯಾವುದು ಎಂಬ ಯಾವ ಮಾಹಿತಿ ಇಲ್ಲದೆ. ಕಪ್ಪೆ ತಕ್ಕಡಿಗೆ ಹಾಕಿದಂತ ನನ್ನ ಸಹೋದ್ಯೋಗಿಗಳನ್ನು ಹೊರಡಿಸಿಕೊಂಡು ಹೊರಡುವುದು ಮತ್ತೊಂದು ಸಾಹಸದ ಕೆಲಸವೇ ಸೈ.
೨೪/೦೬/೨೦೦೪ ರಂದು ಪ್ರವಾಸ ಹೋಗೋಣವೆಂದು ಸುಮಾರು ಒಂದು ತಿಂಗಳಿನಿಂದ ವರಾತ ಹಚ್ಚಿದವನಿಗೆ ಫಲ ದೊರೆತದ್ದು ೨೩/೦೬/೨೦೦೪ ರಂದು. ನಾನು ಮೊದಲೆ ಹೇಳಿದಂತೆ ಕಪ್ಪೆ ಬುದ್ದಿಯ ಸುರೇಶ ಮತ್ತು ಮಧುಸೂಧನರನ್ನು ಹೊರಡಿಸುವಷ್ಟರಲ್ಲಿ ಇನ್ನುಳಿದ ನಾನು, ಶ್ರೀಧರ ಮತ್ತು ಶಂಕರ ನಮಗೆ ಗೊತ್ತಿರುವ ಎಲ್ಲ ವಿದ್ಯೆಯನ್ನು ಖರ್ಚು ಮಾಡಬೇಕಾಯಿತು. ಯಾವುದೆ ಸ್ಥಳ, ಕೋಣೆ ಕಾದಿರಿಸುವ ಗೋಜಿಲ್ಲದಿರುವುದು ಮದುವೆಯಾಗಿರುವ ಬ್ರಹ್ಮಚಾರಿಗಳು ಪ್ರವಾಸ ಹೊರಟಾಗ ಮಾತ್ರ. ನಾವೆಲ್ಲ ಕೈಗೆ ಸಿಕ್ಕಿದ ಬಟ್ಟೆ ಬರೆಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಹೊರಡುವುದಕ್ಕೆ ಸಿದ್ದವಾಗಬೇಕಿತ್ತು. ಹೆಂಡತಿಯ ಅರೆ ಮುನಿಸು, ಅರೆ ಕೋಪದ ನೋಟ ಮತ್ತು ಚೂರಿಯಂತೆ ಇರಿಯುವ ಮಾತುಗಳು ನಮ್ಮನ್ನು ಅಧೀರರನ್ನಾಗಿಸಿದರೂ ಛಲದಂಕ ಮಲ್ಲರಂತೆ [ಅವರೆದುರಿಗೆ ಬಿಟ್ಟರೆ ನಮ್ಮ ಆಟ ಇನ್ನೆಲ್ಲು ನಡೆಯುವುದಿಲ್ಲ ;-)) ಎಂಬ ಕಟು ಸತ್ಯದ ಅರಿವು ನಮಗಿದೆ] ಸಿದ್ದರಾದೆವು. ಎಷ್ಟು ಜನ ಮನೆಗೆ ತಿಳಿಸದೆ ಬಂದಿದ್ದರೋ ;-)) ಗೊತ್ತಿಲ್ಲ!!! ಕೊನೆಗೂ ನಮ್ಮ ಪ್ರವಾಸ ಗಜಪ್ರಸವದಂತೆ ಕೈಗೂಡಿದ್ದು ೨೪ ರಂದು.
ಮಧ್ಯಾನ್ಹ ೧.೩೦ ಕ್ಕೆ ಹೊರಡುವುದಾಗಿ ತಿಳಿಸಿದ್ದರೂ ಕಾರ್ಖಾನೆಯ ಕೆಲಸಕ್ಕಷ್ಟೆ ಪ್ರವಾಸ ಹೋಗಿ ಅನುಭವವಿದ್ದ ಸುರೇಶ ಬೆಳಗಿನಿಂದಲೂ ಕಾಣದಿದ್ದಾಗ ನಮ್ಮೆಲ್ಲರ ಮುಖದಲ್ಲಿ ಆತಂಕ ಇವನು ಕೈಕೊಟ್ಟ ಎಂದು ಮನದಲ್ಲೆ ನಿಂದಿಸುತ್ತಿದವರಿಗೆ ಸರಿಯಾಗಿ ಸಾಮಾನ್ಯ ಪಾಳಿಯ ಅರ್ಧ ದಿನಕ್ಕೆ ಕಾರ್ಖಾನೆಯ ಸಮವಸ್ತ್ರ ಧರಿಸಿದ ಸುರೇಶ ಹಾಜರಾದಾಗ ನಮಗೆಲ್ಲ ಆತಂಕ ಮತ್ತು ಆಶ್ಚರ್ಯ. ಏನೋ ಪ್ರವಾಸ ಹೊರಟಿದ್ದೆವೆಲ್ಲ ಎಂದು ಕೇಳಿದವರಿಗೆ, ಹೋಗ್ಲೇಬೇಕಾ? ಎಂದು ಮರು ಪ್ರಶ್ನಿಸಿದ ಸುರೇಶನನ್ನು ಕಂಡು ತಲೆ ಚಚ್ಚಿಕೊಳ್ಳಬೇಕೆನಿಸುತ್ತಿತ್ತು. ಅವನನ್ನು ಮತ್ತೆ ಮನೆಗೆ ಓಡಿಸಿ ಬಟ್ಟೆ ಬರೆಗಳನ್ನು ತರುವಂತೆ ತಿಳಿಸಿ, ಸುರೇಶ ಬರದಿದ್ದರೆ ಬೇಡ ನಾವು ನಾಲ್ಕೆ ಜನವಾದರೂ ಸೈ ಹೊರಡುವ ಎಂದು ಉಳಿದವರನ್ನು ಹುರಿದುಂಬಿಸಿ, ತುಂಬಾ ದಿನ ಚಾಲೂ ಮಾಡದೆ ನಿಂತಿದ್ದ ನನ್ನ ಮಾರುತಿ ಓಮ್ನಿಯನ್ನು ಸಜ್ಜುಗೊಳಿಸಲು ಮನೆ ಕಡೆ ನಡೆದಾಗಲೂ ನನಗೆ ನಾವು ಪ್ರವಾಸ ಹೊರಡುವ ನಂಬಿಕೆಯಿರಲಿಲ್ಲ.
ಓಡಿಸದೆ ನಿಲ್ಲಿಸಿ ಹೆಚ್ಚು ದಿನಗಳಾಗಿದ್ದರಿಂದ ಜಪ್ಪಯ್ಯ ಎಂದರೂ ನನ್ನ ಕಾರು ಆರಂಭಗೊಳ್ಳಲೇ ಇಲ್ಲ. ಕೊನೆಗೆ ತಂತ್ರಙ್ಞನನ್ನೆ ಕರೆಸಿ ಆರಂಭಿಸಿದಾಗ ಸಮಯ ೪ ಘಂಟೆ. ಕೈಗೆ ಸಿಕ್ಕಿದ ಬಟ್ಟೆಗಳನ್ನು ತುಂಬಿಕೊಂಡು ಹೊರಡುವಷ್ಟರಲ್ಲಿ ಸುರೇಶ ತನ್ನ ದ್ವಿಚಕ್ರಧರನಾಗಿ ಕಾಣಿಸಿಕೊಂಡ. ನಮ್ಮ ಮನೆಯಲ್ಲಿ ಅವನ ವಾಹನವನ್ನು ನಿಲ್ಲಿಸಿ ದಾರಿಯಲ್ಲಿ ಶಂಕರ ಮತ್ತು ಮಧುಸೂಧನನ್ನು ಕಾರಿಗೆ ಹತ್ತಿಸಿಕೊಂಡು ಕಾರ್ಖಾನೆ ಬಳಿ ಬಂದು ಶ್ರೀಧರನನ್ನು ಕೂಡಿಸಿಕೊಂಡು ಬಿ.ಇ.ಎಲ್. ವೃತ್ತದಲ್ಲಿ ಬಂದು ನಿಂತಾಗ ಸಮಯ ಸರಿಯಾಗಿ ೫ ಘಂಟೆ.

ಗೊರಗುಂಟೆ ಪಾಳ್ಯವನ್ನು ದಾಟಿ ನೆಲಮಂಗಲದ ಹಾದಿ ಹಿಡಿದಾಗ ನಾವು ಜೋಗದ ಜಲಪಾತದೆಡೆ ಪ್ರಯಾಣಿಸುವುದೆಂದು ನಿರ್ಧರಿಸಿದೆವು. ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು ದಾಟಿದಾಗ ಸುರೇಶ ಮತ್ತು ಶಂಕರನ ಹಾಸ್ಯ ಚಟಾಕಿಗಳನ್ನು ಮತ್ತು ಕ್ರೈಂ ಸ್ಟೋರಿಯ ಕಾಕತ್ಕರ್ ಅವರ ಧಾಟಿಯಲ್ಲಿ ಅಣಕಿಸುವುದನ್ನು ಆನಂದಿಸುತ್ತಾ ವಾಹನ ಚಾಲನೆ ಮಾಡುತ್ತಿದ್ದ ನಾನು ಮುಂದೆ ಹೋಗುತ್ತಿದ್ದ ಮಾರುತಿ ಓಮ್ನಿಯನ್ನು ಗಮನಿಸಿರಲಿಲ್ಲ. ನನ್ನ ವೇಗಕ್ಕೆ ಸರಿಹೊಂದುವ ವಾಹನವೊಂದು ಮುಂದೆ ಹೋಗುತ್ತಿದ್ದರೆ ಅದನ್ನು ಸುರಕ್ಷಿತ ಅಂತರದಲ್ಲಿ ಹಿಂಬಾಲಿಸಿಕೊಂಡು ಹೋಗುವುದು ನನ್ನ ಅಭ್ಯಾಸಗಳಲ್ಲೊಂದು ಯಾವುದೆ ಒತ್ತಡವಿಲ್ಲದೆ ಹೆದ್ದಾರಿಗಳಲ್ಲಿ ಸುಲಭವಾಗಿ ವಾಹನ ಓಡಿಸುವುದಕ್ಕೆ ಒಂದು ಅನೂಕೂಲಕರ ಮಾರ್ಗವೆಂದು ನನ್ನ ನಂಬಿಕೆ. ನಮ್ಮ ಮುಂದಿನ ವಾಹನದ ಹಿಂದಿನ ಆಸನಗಳಲ್ಲಿ ಕುಳಿತಿದ್ದ ಲಲನೆಯರು ನಾವು ಅವರನ್ನು ಹಿಂಬಾಲಿಸುತ್ತಿದ್ದೇವೆಂದು ತಪ್ಪಾಗಿ ಅರ್ಥೈಸಿಕೊಂಡು ಪರದಾಡುತ್ತಿದ್ದದ್ದು ನಮ್ಮ ಗಮನಕ್ಕೆ ಬಂತು!! ಅವರ ಸಂಕಟ ನೋಡಲಾರದೆ, ಅವರನ್ನು ಮುಂದೆ ಹೋಗಲು ಬಿಟ್ಟ ನಾವು ಹಿಂದೆಯೆ ಉಳಿಯುವುದಕ್ಕಾಗಿ ವಾಹನ ನಿಲ್ಲಿಸಿ ಕೆಳಗಿಳಿದರೆ ಆಗಲೆ ಸಂಜೆಯ ರವಿ ಪಡುವಣದಲ್ಲಿ ಮನೆ ಸೇರುವ ತವಕದಲ್ಲಿ ವೇಗವಾಗಿ ಧಾವಿಸುತ್ತಿದ್ದ. ಕತ್ತಲಾದಾಗ ಶ್ರೀಧರನ ಉದ್ಗಾರ "ಅಯ್ಯೊ ಬೆಂಗಳೂರಿನಲ್ಲಿ ಇಷ್ಟೋಂದು ನಕ್ಷತ್ರಗಳೆ ಇರಲ್ಲ" ಇಲ್ಲಿ ಮಾತ್ರ ಹೇಗಿದೆ ಎನ್ನುವ ಅವನ ಪ್ರಶ್ನೆಗೆ ನಕ್ಕು ವಾಹನವೇರಿ ಶಿವಮೊಗ್ಗ ತಲುಪಿದಾಗ ಸರಿಯಾಗಿ ರಾತ್ರಿ ೧೦ ಘಂಟೆ.
ಶಿವಮೊಗ್ಗದ ಪ್ರಾರಂಭದಲ್ಲೆ ತುಂಗೆಗೆ ಅಡ್ಡಲಾಗಿರುವ ಸೇತುವೆಯ ನಂತರ ಇರುವ ವಸತಿಗೃಹವೊಂದರಲ್ಲಿ ಕೋಣೆಯಂದನ್ನು ಪಡೆದು ಪಕ್ಕದಲ್ಲಿದ್ದ ಉಪಹಾರಗೃಹದಲ್ಲಿ ಊಟ ಮುಗಿಸಿ ವಾಹನ ಚಾಲನೆಯಿಂದ ಆಯಾಸಗೊಂಡಿದ್ದ ನಾನು ಮಲಗಲು ಹೊರಟೆ. ಉಳಿದವರು ಅದ್ಯಾವಾಗ ಮಲಗಿದರೊ? ನಾನರಿಯೆ.
25 ರಂದು ಬೆಳಿಗ್ಗೆ ಎಚ್ಚರವಾದಾಗಲೆ ನನ್ನ ಅರಿವಿಗೆ ಬಂದದ್ದು ಇವರೆಲ್ಲ ರಾತ್ರಿ ತುಂಬ ತಡವಾಗಿ ಮಲಗಿದ್ದರು ಎಂಬ ಸಂಗತಿ. ಪಕ್ಕದ ಉಪಹಾರಗೃಹದಲ್ಲಿ ಉಪಹಾರ ಮುಗಿಸಿ ನಮ್ಮ ಪ್ರಯಾಣ ತುಂಗ ಮತ್ತು ಭದ್ರೆಯರ ಸಂಗಮದ ಕಡೆಗೆ. ಶಿವಮೊಗ್ಗದಿಂದ ಸುಮಾರು ೧೫ ಕಿ,ಮೀ ದೂರದಲ್ಲಿರುವ ಪುಟ್ಟ ಊರು ಕೂಡಲಿ(ಕೂಡ್ಲಿ). ಇಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯ ಸ್ಥಾಪಿತ ಶಾರದಾ ಪೀಠವಿದೆ. ಮಳೆಗಾಲವಾದ್ದರಿಂದ ತುಂಬಿ ಹರಿಯುತ್ತಿರುವ ಎರಡೂ ನದಿಗಳ ಸಂಗಮಕ್ಕೆ ಬೆಟ್ಟದ ಹಿನ್ನೆಲೆಯಲ್ಲಿರುವ ತೆಂಗಿನ ತೋಟಗಳು ಹಚ್ಚ ಹಸಿರಿನ ಹೊಲಗದ್ದೆಗಳು ಮೆರಗನ್ನು ನೀಡುತ್ತವೆ. ಭದ್ರಾವತಿಯ ಕೈಗಾರಿಕೆಗಳಿಂದ ಭದ್ರಾ ಹೊಳೆ ಹೆಚ್ಚು ಮಲಿನಗೊಂಡಿದ್ದರೂ, ಮಳೆಗಾಲದ ಉತ್ತಮ ಮಳೆಯಿಂದ ಎಲ್ಲವೂ ಕೊಚ್ಚಿ ಹೋಗಿದ್ದರಿಂದ
ಸ್ವಲ್ಪ ನೀರಿನ ಮಲಿನತೆ ಕಡಿಮೆಯಾಗಿತ್ತು. ಮಲೆನಾಡಿನ ತಪ್ಪಲಿನ ಬಯಲು ಸೀಮೆಯ ಹಳ್ಳಿಯ ವಾತಾವರಣ, ಬೆಳಗಿನ ಪ್ರಶಾಂತತೆ ಮತ್ತು ಚುಮುಗುಡಿಸುವ ಎಳೆಯ ಬಿಸಿಲನ್ನು ಆಸ್ವಾದಿಸುತ್ತ ಕುಳಿತವರಿಗೆ ಸಮಯ ಸರಿದದ್ದೆ ಅರಿವಿಲ್ಲ. ಶಿವಮೊಗ್ಗಕ್ಕೆ ಹಿಂತಿರುಗಿ ಸಾಗರದ ಕಡೆ ನಮ್ಮ ಪಯಣ. ದಾರಿಯಲ್ಲಿ ಸಿಕ್ಕ ತ್ಯಾವರೆಕೊಪ್ಪ ಹುಲಿ/ಸಿಂಹಧಾಮಕ್ಕೊಂದು ಭೇಟಿ. ಇಡೀ ಪ್ರವಾಸಕ್ಕೆ ನಮಗೆಲ್ಲ ಮಧುಸೂಧನ ಮಹಾಶಯನ ಸಂಚಾರಿ ದೂರವಾಣಿಯೊಂದೆ (ಮೊಬೈಲ್) ನಮಗೆ ಸಂಪರ್ಕ ಸೇತುವೆ. ಘಳಿಗೆಗೊಮ್ಮೆ ಅದರಲ್ಲಿ ಸಿಗ್ನಲ್ ಇದೆಯೊ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದ ಅವನನ್ನು ನಾವೆಲ್ಲ ಕಾಡಿದರೂ ಅವನ ದೂರವಾಣಿಯಿಂದ ನಮಗಾದ ಉಪಕಾರ ಅಷ್ಟಿಷ್ಟಲ್ಲ.
ಇಲ್ಲಿಂದ ಜೋಗದ ದಾರಿಗಿಳಿಯಿತು ನನ್ನ ವಾಹನ ಆಯನೂರು, ಆನಂದಪುರ ಮುಖೇನ ಸಾಗರ ತಲುಪಿ ಅಲ್ಲಿನ ಉಡುಪಿ ಹೋಟೆಲ್ಲೊಂದರಲ್ಲಿ ಬಾಳೆ ಎಲೆಯ ಊಟ ಮಾಡಿ ನೇರವಾಗಿ ಜೋಗದ ಕಡೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗದ್ದೆಗಳು ಕಣ್ಣಿಗೆ ತಂಪನ್ನೆರೆಯುವುದರಲ್ಲಿ ಯಾವುದೆ ಅನುಮಾನವಿಲ್ಲ. ಸಿಕ್ಕ ಕಡೆಯಲ್ಲೆಲ್ಲ ಫೋಟೊ ಕ್ಲಿಕ್ಕಿಸುತ್ತ ಜೋಗ ತಲುಪಿದಾಗ ಸಮಯ ೨ ಘಂಟೆಯಿರಬಹುದು. ಜಿಟಿ ಜಿಟಿ ಜಿನುಗುತಿದ್ದ ಮಳೆರಾಯ. ಜಲಪಾತದ ವೀಕ್ಷಣೆಗೆ ಅಡ್ಡಿಯುಂಟುಮಾಡುತ್ತಿದ್ದ. ಜಲಪಾತ ತಳಭಾಗಕ್ಕೆ ಇಳಿಯಲು ಇರುವ ದಾರಿ ಬಿಟ್ಟು ಬೇರೊಂದು ದಾರಿಯಲ್ಲಿ ಹೋಗಿ ಎಂದು ತೋರಿಸಿದ ಕುಡುಕನ ಮಾತಿಗೆ ಬೆಲೆ ಕೊಡದೆ ಮೆಟ್ಟಿಲುಗಳನ್ನು ಇಳಿಯಲು ಆರಂಭಿಸಿದೆವು. ಇಲ್ಲಿ ಮಧು ತಾನು ಕೆಳಗೆ ಬರುವುದಿಲ್ಲವೆಂದು ತರಲೆ ಆರಂಭಿಸಿದ. ಅವನನ್ನು ಬಿಟ್ಟು ಇಳಿಯಲು ನಾವೆಲ್ಲರೂ ಹೊರಟಾಗ ಕೆಳಗಿನಿಂದ ಬಂದ ಹೆಂಗಳೆಯರ ಗುಂಪನ್ನು ನೋಡಿದ ಮಧು ಅದೇಕೊ ತಾನು ಬರುವುದಾಗಿ ಪ್ರಕಟಿಸಿ ಇಳಿಯಲು ಸಹಾಯಕ್ಕಾಗಿ ಕೋಲೊಂದನ್ನು ಹಿಡಿದು ಹೊರಟೆ ಬಿಟ್ಟ. ತಲೆ ಹರಟೆ ಹರಟುತ್ತಾ ಇಳಿದೇ ಇಳಿದೆವು ಅಲ್ಲಲ್ಲಿ ಸಿಗುವ ಸಣ್ಣ ಅಂಗಡಿಗಳಲ್ಲಿ ನಿಂಬೆ ಪಾನಕ ಕುಡಿಯುತ್ತ ಕೊನೆಯ ಅಂಗಡಿ ತಲುಪಿ ಅಲ್ಲೆ ನಮ್ಮ ಕೆಲವು ಹೊರೆಗಳನ್ನು ಇಳಿಸಿ ಜಲಪಾತ ಸೃಷ್ಟಿಸಿರುವ ಹೊಂಡದಲ್ಲಿ ಈಜಲು ಇಳಿಯಲು ನಾನು ಹೊರಟಾಗ, ನಮ್ಮ ಮಧು ತನ್ನ ಕ್ಯಾಮೆರವನ್ನು ಅನಾಮತ್ತಾಗಿ ನೀರಿನಲ್ಲಿ ಬೀಳಿಸಿ ಬಿಟ್ಟ ಯಾಕೊ ಕ್ಯಾಮೆರ ನೀರಿಗೆ ಹಾಕಿದೆ ಎನ್ನುವ ಎಲ್ಲರ ಪ್ರಶ್ನೆಗೆ ಸ್ಟುಡಿಯೋದಲ್ಲಿ ತೊಳೆಸುವ ಬದಲು ಇಲ್ಲೆ ತೊಳೆದು ಬಿಟ್ಟೆ ಎಂದ ಮುಗ್ದನಂತೆ.

ಜಿನುಗುತ್ತಿದ್ದ ಮಳೆಯಲ್ಲಿ ಕೊರೆಯುವ ಛಳಿಯಲ್ಲಿ ಮಂಜಿನಂತೆ ಕೊರೆಯುವ ನೀರಿನಲ್ಲಿ ಈಜುತ್ತಿದ್ದರೆ, ನಮಗರಿವಿಲ್ಲದಂತೆ ನಮ್ಮ ಹಲ್ಲುಗಳು ಕಟ ಕಟ ಶಬ್ಧ ಮಾಡುತ್ತಿದ್ದವು. ಒಂದು ಘಂಟೆಯ ನೀರಾಟದ ನಂತರ ಮೇಲೆ ಹತ್ತಲು ಪ್ರಾರಂಭಿಸಿದೆವು. ಕಡಿದಾದ ಬೆಟ್ಟವನ್ನು ಹತ್ತಿ ಅಭ್ಯಾಸವಿಲ್ಲದ ಎಲ್ಲರೂ ಮತ್ತು ದೇಹ ದಣಿಯೆ ಈಜಿದ್ದ ನಾನು ಮತ್ತು ಮಧು ಹೆಜ್ಜೆಗೊಮ್ಮೆ ಕುಳಿತು ದಣಿವಾರಿಸಿಕೊಳ್ಳಬೇಕಾದ ಪರಿಸ್ಥಿತಿ. ದಾರಿಯುದ್ದಕ್ಕೂ ತಮ್ಮ ಹಾಸ್ಯ ಚಟಾಕಿಗಳಿಂದ ಚಾರಣವನ್ನು ಅವಿಸ್ಮರಣೀಯಗೊಳಿಸಿದ ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳು. ದಣಿವಿನ ಮಹಿಮೆಯೋ ಅಥವ ಅತ್ಯಂತ ಉಲ್ಲಸಿತ ಮನಸ್ಸಿನ ಪ್ರಭಾವವೋ ದಾರಿಯಲ್ಲಿ ಸಿಗುವ ಪ್ರತಿ ಗೂಡಂಗಡಿಯಲ್ಲು ಸಿಗುವ ಅನಾನಸ್ ಮತ್ತು ನಿಂಬೆ ಪಾನಕ ಅಮೃತದಂತೆ ಭಾಸವಾಗುತ್ತಿತ್ತು. ಬಹುಶಃ ನಾನು ಆಸ್ವಾದಿಸಿದ ಅತ್ಯಂತ ರುಚಿಕರ ಅನಾನಸ್ ಇವೆಂದು ಹೇಳುವುದು ಖಂಡಿತ ಉತ್ಪ್ರೇಕ್ಷೆಯಲ್ಲ.
ಮನಸ್ಸಿಗೆ ಬಂದಾಗೊಮ್ಮೆ ಹೆಜ್ಜೆ ಹಾಕುತ್ತ ಯಾವುದೆ ಸಮಯದ ಪರಿವೆಯಿರದೆ ನಡೆದವರು ಕೊನೆಗೊಮ್ಮೆ ಮೇಲೇರಿ ಬಂದು ಜೋಗದಿಂದ ಕಾಣುವ ಅತಿಥಿಗೃಹಕ್ಕೆ ಹೋರಟೆವು. ಇಲ್ಲಿಂದ ಜೋಗ ಜಲಪಾತ ವಿಭಿನ್ನವಾಗಿ ಕಾಣಿಸುತ್ತದೆ. ಇದೆ ಈಗ ಮುಂಗಾರು ಮಳೆ ಸ್ಪಾಟ್ ಎಂದು ಹೆಸರುವಾಸಿಯಾಗಿದೆ. ಅಲ್ಲಿ ಮುಂಗಾರು ಮಳೆ ಚಿತ್ರೀಕರಣಗೊಳ್ಳುವುದಕ್ಕೆ ೨ ವರ್ಷ ಮುನ್ನವೆ ಆ ಜಾಗಗಳಲ್ಲಿ ಜಲಪಾತವನ್ನು, ಅದು ಬೀಳುವ ಜಾಗದಲ್ಲಿ ನಿಂತು ಇಣುಕಿ ನೋಡುವ ಸಾಹಸ ಮಾಡಿದ್ದ ಯಲ್ಲಾಪುರದ ಕಮಲಾಕ್ಷಿಯಿಂದ ಕೇಳಿ ತಿಳಿದಿದ್ದ ನಾನು ಕೂಡ ಅದನ್ನು ನೋಡೆಬಿಡುವ ಎಂದು ಬಂದು ಬಿಟ್ಟೆ. ಜಿಟಿಗುಟ್ಟುತ್ತಿರುವ ಮಳೆ ಬಂಡೆಗಳಲ್ಲಿ ಪಾಚಿ ಕಟ್ಟಿ ಜಾರುವಂತೆ ಮಾಡಿದ್ದರೂ ಜಲಪಾತ ತುದಿಗೆ ಹೊರಟಾಗ ಹಿಂದೆ ನಿಂತು ಗಾಭರಿಯಿಂದ ಬೇಡಾ ಪ್ಲೀಸ್ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ ಸುರೇಶ. ಅವನ ಚೀತ್ಕಾರ ಹೇಗಿತ್ತೆಂದರೆ ಚಲನ ಚೀತ್ರಗಳಲ್ಲಿನ ಬಲಾತ್ಕಾರ ದೃಶ್ಯಗಳಲ್ಲಿ ಕೇಳಿಬರುವ ಚೀತ್ಕಾರದಂತಿತ್ತು. ಏನಾಯಿತು ಎಂದು ಅವನಲ್ಲಿಗೆ ಬಂದು ಕೇಳಿದವರಿಗೆ ನಾವು ಅಲ್ಲಿಗೆ ಹೋಗುವುದೆ ಬೇಡವೆಂದು ಪರಿಪರಿಯಾಗಿ ನಮಗೆ ಬೇಡುತ್ತಿದ್ದ. ನೀನು ಇಲ್ಲೆ ಇರು ಬರಬೇಡವೆಂದು ಅವನನ್ನು ಸಮಾಧಾನಿಸಿ ನಿಧಾನವಾಗಿ ಜಲಪಾತ ಉಂಟಾಗುತ್ತಿದ್ದ ಜಾಗಕ್ಕೆ ಬಂದು ಕೆಳಗೆ ಬಗ್ಗಿ ನೋಡಿದವರಿಗೆ ಹೃದಯದ ಬಡಿತ ಒಮ್ಮೆಲೆ ನಿಂತು ಹೋಗುವ ಅನುಭವ. ಅಬ್ಬ ರುದ್ರರಮಣೀಯ ಕೆಳಗೆ ನಾವು ಈಜಿದ ಹೊಂಡ ಅತ್ಯಂತ ಚಿಕ್ಕದಾಗಿ ಕಾಣಿಸುತ್ತಿತ್ತು. ಅಲ್ಲಿರುವ ಜನಗಳು ಲಿಲ್ಲಿಪುಟ್ ಗಳಂತೆ ತೋರುತ್ತಿದ್ದರು. ಹೆಚ್ಚು ಹೊತ್ತು ನಿಂತರೆ ತಲೆ ದಿಮ್ಮೆಂದು ತಿರುಗುವ ಅನುಭವವಾಗುತ್ತದೆ. ಕೆಲವರು ಅಂಗಾತ ಬಂಡೆಗಳ ಮೇಲೆ ಮಲಗಿ ತಮ್ಮ ಶಿರವನ್ನು ಮಾತ್ರ ಹೊರಚಾಚಿ ಅಲ್ಲಿನ ದೃಶ್ಯವನ್ನು ವೀಕ್ಷಿಸಲು ಪ್ರಯತ್ನಿಸಿ ಸಫಲರೂ ಆದರು. ನಮ್ಮ ಸುರೇಶನ ಚೀತ್ಕಾರ ಮಾತ್ರ ಇನ್ನು ನಿಂತಿರಲಿಲ್ಲ ಅವನು ಅಳುವುದೊಂದೆ ಬಾಕಿ ಉಳಿದದ್ದು. ಅತಿಥಿ ಗೃಹದ ಕಡೆಯಿಂದ ಹೊರಟರೆ ಸಿಗುವ ಮೊದಲೆರಡು ಜಲಪಾತಗಳಲ್ಲು ಇದೆ ಅನುಭವವನ್ನು ಹೊತ್ತು ಹಿಂತಿರುಗಿ ಬಂದು ಕಾರಿನಲ್ಲಿ ಸಾಗರಕ್ಕೆ ಬಂದು ವರದಶ್ರೀ ವಸತಿಗೃಹದಲ್ಲಿ ೪ ಹಾಸಿಗೆಯ ಕೋಣೆಯೊಂದನ್ನು ಹಿಡಿದು ಹಾಸಿಗೆಗೆ ಬಿದ್ದಾಗ ಉಸ್ಸಪ್ಪ ಎನ್ನುವ ಸಾರ್ಥಕ್ಯ ನಿಟ್ಟುಸಿರು.
ನನಗೆ ಅವಶ್ಯವಾಗಿ ಬೇಕಿದ್ದ (ಏಕೆಂದರೆ ಇಡೀ ತಂಡದಲ್ಲಿ ವಾಹನ ಚಾಲನೆ ಗೊತ್ತಿದ್ದವನು ನಾನೊಬ್ಬನೆ) ಒಂದೆರಡು ಘಂಟೆಯ ವಿಶ್ರಾಂತಿಯ ನಂತರ ಸಂಜೆಯ ಫಲಹಾರಕ್ಕಾಗಿ ವರದಶ್ರೀಯ ಉಪಹಾರ ಗೃಹಕ್ಕೆ ಬಂದಾಗಲೆ ನಮಗೆ ಅರಿವಾದದ್ದು ವಸತಿಗೃಹದ ಸೌಂದರ್ಯ. ಬೆಂಗಳೂರು ಹೊನ್ನಾವರ ರಾಜ್ಯ ಹೆದ್ದಾರಿಗೆ ಅಂಟಿಕೊಂಡಂತೆ ಇರುವ ಸಾಗರದ ಕೆರೆಯ ಪಕ್ಕದಲ್ಲಿ ನಿರ್ಮಿತವಾಗಿರುವ ವಸತಿಗೃಹ ಯಾವ ಪಂಚತಾರ ವಸತಿಗೃಹಕ್ಕೂ ಕಡಿಮೆಯಿಲ್ಲ. ಉಪಹಾರಗೃಹದಿಂದ ಕಾಣುವ ಸರೋವರವಂತೂ ಮನಮೋಹಕ. ಬೆಳ್ಳಕ್ಕಿ ನೀರಕ್ಕಿಗಳ ಚೆಲ್ಲಾಟ, ನೈದಿಲೆಯ ಹೂವುಗಳು ಆ ಬದಿಯಲ್ಲಿರುವ ತೆಂಗಿನ ತೋಟ ಸರೋವರದ ಅಂದವನ್ನು ಹೆಚ್ಚಿಸಿವೆ. ಬೆಂಗಳೂರಿನಲ್ಲಿದ್ದರೆ ಇದೆ ಒಂದು ಪ್ರವಾಸಿ ತಾಣವಾಗುತ್ತಿದ್ದಿರಬಹುದು.
ರುಚಿ ಶುಚಿ ಉಪಹಾರದ ನಂತರ ನಮ್ಮ ಮುಂದಿನ ಕಾರ್ಯಕ್ರಮಕ್ಕೊಂದು ರೂಪ ಕೊಡಬೇಕಿತ್ತು ಅದಕ್ಕಾಗಿ ಸಾಗರದಲ್ಲಿರುವ ನನ್ನ ಭಾವ ಫ್ರೌಡಶಾಲೆಯ ಶಿಕ್ಷಕರಾದ ಪ್ರಸನ್ನರನ್ನು ಭೇಟಿಯಾಗಿ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಾಗರದಲ್ಲೆ ಒಂದು ಸುತ್ತು ಹೊಡೆದು ಬಂದು ಮಧುವಿನ ಮೊಬೈಲ್ ಬ್ಯಾಟರಿಯನ್ನು ಜೀವ ನೀಡಲು ಹರಸಾಹಸ ಮಾಡಿ ಕೊನೆಗೆ ಅದಕ್ಕೆ ಹೊಂದುವ ಅಡಾಪ್ಟರ್ ಸಿಗದಿದ್ದಾಗ ನೇರವಾಗಿ ಫ್ಯಾನ್ ಗಾಗಿ ಬಿಟ್ಟಿದ್ದ ವೈರನ್ನೆ ಕತ್ತರಿಸಿ ಇದಕ್ಕೆ ಸುತ್ತಿ ಅವನ ಮೊಬೈಲ್ ಬ್ಯಾಟರಿಗೆ ಜೀವ ತುಂಬಿದೆವು ಏಕೆಂದರೆ ಅವನೊಬ್ಬನ ಬಳಿಯಷ್ಟೆ ಆಗ ಮೊಬೈಲ್ ಇದ್ದದ್ದು. ಇದಕ್ಕೆಲ್ಲ ತನ್ನ ತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿದ ಸುರೇಶ ಅಭಿನಂದನಾರ್ಹ.
ರಾತ್ರಿಯ ಊಟಕ್ಕಾಗಿ ಉಪಹಾರಗೃಹದತ್ತ ನಡೆದವರಿಗೆ ಸುರೇಶ ಬಾಂಬೊಂದನ್ನು ಸಿಡಿಸಿದ. ತಾನು ತುರ್ತಾಗಿ ಬೆಂಗಳೂರಿಗೆ ಹಿಂದಿರುಗಬೇಕೆಂದು ಎಲ್ಲರನ್ನೂ ಹೌಹಾರಿಸಿಬಿಟ್ಟ. ತಾನು ಮನೆಯಲ್ಲಿ ಹೇಳಿದ್ದು ಒಂದು ದಿನದ ಪ್ರವಾಸವೆಂದೂ ಅದ್ದರಿಂದ ಮನೆಯವರೆಲ್ಲ ಗಾಭರಿಯಾಗುತ್ತಾರೆ ನಾನು ಹಿಂದಿರುಗಲೇಬೇಕೆಂದು ಹಠಹಿಡಿದು ಚಿಕ್ಕ ಮಗುವಿನಂತೆ ಕುಳಿತು ಬಿಟ್ಟ. ಸರಿ ಮಹರಾಯ ನಿಮ್ಮ ಮನೆಯವರಿಗೆ ಫೋನಾಯಿಸಿ ತಿಳಿಸುವ ಎಂದು ಸಮಾಧಾನಿಸಿದವರಿಗೆ ಇನ್ನೊಂದು ಬಾಂಬಿಟ್ಟ. ತಾನು ಉಡುಪುಗಳನ್ನು ತಂದಿಲ್ಲ ಒಂದು ದಿನಕ್ಕಾಗುವಷ್ಟು ಮಾತ್ರ ತಂದಿದ್ದೇನೆಂದು. ಸರಿ ಮತ್ತೆ ಸಾಗರದ ಮಾರುಕಟ್ಟೆಗೆ ಹೋಗಿ ಅವನಿಗೆ ಮಧು ಹೊಸ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟ. ಸುರೇಶನ ಶ್ರೀಮತಿಯನ್ನು ದೂರವಾಣಿ ಮುಖೇನ ಸಂಪರ್ಕಿಸಿ ಇನ್ನು ಎರಡು ದಿನಗಳ ನಂತರ ಬರುವುದಾಗಿ ತಿಳಿಸಿದರೆ ಅಯ್ಯೊ ಒಂದು ವಾರ ಆದಮೇಲೆ ಬನ್ನಿ ಎನ್ನುವ ಅವರ ಉತ್ತರಕ್ಕೆ ಪೆಚ್ಚು ಪೆಚ್ಚಾಗಿ ಸುರೇಶನ ಕಡೆ ನೋಡುತ್ತ ಊಟಕ್ಕೆ ಹೆಜ್ಜೆ ಹಾಕಿದೆವು.
ಬೆಳಿಗ್ಗೆ ಎದ್ದು ಬೆಳಗಿನ ಕರ್ಮಗಳನ್ನು ಮುಗಿಸಿ ವರದಶ್ರೀಯಲ್ಲೆ ಉಪಹಾರ ಮುಗಿಸಿ ವರದಹಳ್ಳಿಯ ಕಡೆ ಪ್ರಯಾಣ ಬೆಳೆಸಿದೆವು ಸಾಗರದ ನಂತರ ಒಂದು ಕಿ.ಮೀ ಮುನ್ನ ನಾವು ಎಡಭಾಗದ ರಸ್ತೆಗೆ ತಿರುಗಬೇಕಿತ್ತು. ಆದರೆ ನಾವು ಆ ದಾರಿಯನ್ನು ಬಿಟ್ಟು ಮುಂದೆ ಹೋದೆವು ಸುಮಾರು ೨-೩ ಕಿ.ಮಿ ಕ್ರಮಿಸಿದ ನಂತರ ಅನುಮಾನಗೊಂಡು ದಾರಿಹೋಕರನ್ನು ಕೇಳಿ ವಾಹನವನ್ನು ಹಿಂತಿರುಗಿಸಿದೆವು. ಮತ್ತೊಮ್ಮೆ ನಾವು ಹೋಗುವ ಸರಿಯಾದ ದಾರಿ ಸಿಗದಿದ್ದಾಗ ಪಕ್ಕದಲ್ಲಿದ್ದ ಚಹಾ ಅಂಗಡಿಯೊಂದಕ್ಕೆ ದಾರಿ ವಿಚಾರಿಸಲು ಹೋದ ಶಂಕರ ಎಷ್ಟು ಸಮಯವಾದರೂ ಬರದಿದ್ದಾಗ ನಾನೆ ವಿಚಾರಿಸಲು ತೆರಳಿದವನಿಗೆ ಕಂಡದ್ದು ಆ ಅಂಗಡಿಯಲ್ಲಿರುವ ಹಳ್ಳಿಯ ಸ್ನಿಗ್ಧ ಸೌಂದರ್ಯದ ಹುಡುಗಿಯೊಬ್ಬಳ ಸೌಂದರ್ಯಕ್ಕೆ ಮಾರುಹೋಗಿ ಅವರೊಡನೆ ಹರಟುತ್ತ ನಿಂತಿದ್ದ ಶಂಕರ. ಅವನನ್ನು ಬಲವಂತವಾಗಿ ತಾಯಿಯಿಂದ ಎಳೆಯ ಕರುವನ್ನು ಒತ್ತಾಯವಾಗಿ ಎಳೆದುಕೊಂಡು ಬರುವಂತೆ ಎಳೆದು ತಂದು ಕಾರಿನಲ್ಲಿ ಕುಳ್ಳಿರಿಸಿ ನಮ್ಮ ಪ್ರಯಾಣ ಮುಂದುವರೆಸಿದೆವು. ಈ ಬಾರಿ ಯಾವುದೆ ಅಡೆ ತಡೆಯಿಲ್ಲದೆ ಶ್ರೀಧರಾಶ್ರಮಕ್ಕೆ ಬಂದು ತಲುಪಿದೆವು. ವಾವ್!! ಎಂತಹ ಹಸಿರು ಗಿರಿಗಳ ನಡುವೆ ಇರುವ ಪ್ರಶಾಂತ ಸುಂದರ ಆಶ್ರಮ ಯಾವುದೇ ಮಠಗಳ ಆಡಳಿತಕ್ಕೂ ಒಳಪಡದೆ ಸ್ವತಂತ್ರವಾಗಿರುವ ಈ ಆಶ್ರಮ ನನ್ನನ್ನು ಬಹುವಾಗಿ ಸೆಳೆಯಿತು. ಶ್ರೀಧರ ಸ್ವಾಮಿಗಳ ತಪೋಭೂಮಿಯ ಜಾಗದಲ್ಲೆ ನಿರ್ಮಿತವಾದ ಆಶ್ರಮ ತನ್ನ ಪ್ರಶಾಂತತೆಯಿಂದ ಎಂತಹವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಅಲ್ಲೆ ಇರುವ ಚಿಕ್ಕಗುಡ್ಡವೊಂದರಲ್ಲಿ ಉಕ್ಕಿಹರಿಯುವ ನೀರಿನ ಚಿಲುಮೆ ಶ್ರೀಧರ ತೀರ್ಥ. ಬೆಟ್ಟ ಹತ್ತಿ ಸಾಗಿದರೆ ಕುರುಚಲು ಕಾಡಿನಂತಹ ಜಾಗದಲ್ಲಿ ಸ್ಥಾಪಿಸಲಾಗಿರುವ ಧ್ವಜವಿದೆ. ಅಲ್ಲಿಂದ ಕಾಣುವ ಸುಂದರ ಮಲೆನಾಡಿನ ಪರಿಸರ ಎತ್ತ ನೋಡಿದರೂ ದೃಷ್ಟಿಹರಿಯುವಷ್ಟೂ ಹಸಿರೆ ಹಸಿರು. ಅಲ್ಲಿನ ನೀರವತೆಯಂತೂ ಓಹ್! ವರ್ಣಿಸಲಸದಳ. ಅದೆ ಕಾಡಿನ ದಾರಿಯಲ್ಲಿ ನಮ್ಮೊಳಗಿನ ಹಾಡುಗಾರ ಸುರೇಶ ಹಾಡಿದ "ನೀ ಮಾಯೆಯೊಳಗೋ" ಹಾಡು ನಮ್ಮನ್ನು ಭಕ್ತಿ ಪರವಶರಾಗುವಂತೆ ಮಾಡಿತು. ಸ್ವಲ್ಪ ಸಮಯ ಅಲ್ಲಿನ ದಿವ್ಯ ಮೌನವನ್ನು ಆಸ್ವಾದಿಸುತ್ತ ಕುಳಿತೆವು. ನಂತರ ಏನಾದರೂ ಹೊಸದನ್ನು ಹುಡುಕುವ ನನ್ಗೆ ಪಕ್ಕದಲ್ಲೆ ಇದ್ದ ಕಾಡಿನೊಳಗೆ ಪ್ರವೇಶಿಸಿ ನೋಡುವ ಬಯಕೆಗೆ ಮೊದಲು ಬೇಡವೆಂದರೂ ನಂತರ
ತಾವಾಗಿಯೆ ನನ್ನನು ಹಿಂಬಾಲಿಸಿ ಬರದೆ ಬೇರೆ ವಿಧಿಯಿರಲಿಲ್ಲ ನನ್ನ ಸಹವರ್ತಿಗಳಿಗೆ. ಆರಂಭದಲ್ಲಿ ಸ್ಪಷ್ಟವಾಗಿರುವ ಕಾಲುದಾರಿ ಕ್ರಮೇಣ ಸಣ್ಣದಾಗಿ ಮಾಯವಾಗುತ್ತ ಹೋಗುತ್ತಿತ್ತು. ೧೦ ನಿಮಿಷಗಳ ನಡಿಗೆಯ ನಂತರ ನಮ್ಮನ್ನು ಹಿಂಬಾಲಿಸದೆ ಉಳಿದ ಮಧುವನ್ನು ಮತ್ತಷ್ಟು ಗಾಭರಿಗೊಳಿಸುವ ಸಲುವಾಗಿ ಕಾಡಿನೊಳಗೆ ಅವಿತು ಅವನನ್ನು ಸ್ವಲ್ಪ ಸಮಯ ಕಾಡಿಸಿ ಕೊನೆಗೆ ಭಯಮಿಶ್ರಿತ ಎಚ್ಚರಿಕೆಯ ಮಾತುಗಳಿಗೆ ಸೋತು ಹಿಂತಿರುಗಬೇಕಾಯಿತು. ಕಾಡಿನೊಳಗೆ ಮರದ ಮೇಲೆ ಕುಳಿತಿದ್ದ ಹಾರ್ನ್ಬಿಲ್ ಹಕ್ಕಿಯನ್ನು ಹರ ಸಾಹಸ ಪಟ್ಟು ಚಿತ್ರೀಕರಿಸಿಕೊಂಡು . ಕಣ್ಣಿಗೆ ಮಾತ್ರ ಕಾಣಿಸುತ್ತ ಕ್ಯಾಮೆರದಲ್ಲಿ ಹಿಡಿಯಲು ಹೋದರೆ ಮರೆಯಾಗುತ್ತಿದ್ದ ಮಲಬಾರ್ ಅಳಿಲನ್ನು ಚಿತ್ರೀಕರಿಸಲಾಗದೆ ನಿರಾಶೆಗೊಂಡು ಹಿಂತಿರುಗಿದೆವು. ಈ ಹೊತ್ತಿಗಾಗಲೆ ನಾವು ಕಾಡಿನಲ್ಲಿ ಸುಮಾರು ೧ ಘಂಟೆಗೂ ಹೆಚ್ಚು ಕಾಲ ಕಳೆದಿದ್ದೆವು. ಧ್ವಜಸ್ಥಂಭವನ್ನು ಬಳಸಿ ಆಶ್ರಮಕ್ಕೆ ಹಿಂತಿರುಗಿ ಅಲ್ಲಿಂದ ನೇರವಾಗಿ ಸಾಗರಕ್ಕೆ ಬಂದು ಇಕ್ಕೇರಿಯ ಕಡೆ ಹೊರಟೆವು.
ಸಾಗರದಿಂದ ೪-೫ ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿ ಇಕ್ಕೇರಿ ಇಲ್ಲಿರುವ ಅಘೋರೇಶ್ವ್ರರ ದೇವಸ್ಥಾನ ಮನ ಸೆಳೆಯುತ್ತದೆ. ಭೃಹದಾಕಾರದ ನಂದಿಯ ವಿಗ್ರಹ, ಮುಸ್ಲಿಂ ದಾಳಿಕೋರರಿಗೆ ಆಹಾರವಾದ ಅಘೋರೇಶ್ವರ ವಿಗ್ರಹದ ಪಳೆಯುಳಿಕೆಗಳು ಗಮನ ಸೆಳೆಯುತ್ತವೆ. ಕಂಬಗಳಲ್ಲಿರುವ ಕೆತ್ತನೆ ಆಕರ್ಷಣೀಯ. ಅಲ್ಲಿಂದ ನಮ್ಮ ಪ್ರಯಾಣ ಸಿಗಂದೂರು ಬಾರ್ಜ್ ನತ್ತ. ಶರಾವತಿಯ ಹಿನ್ನೀರಿನಲ್ಲಿ ರಸ್ತೆ ಮುಳುಗಿದ್ದರಿಂದ ಹಡಗಿನಂತ ಯಂತ್ರವೊಂದು ವಾಹನಗಳನ್ನು ಹಿನ್ನೀರಿನ ಆಚೆ ಬದಿಯಲ್ಲಿರುವ ರಸ್ತೆಯಲ್ಲಿ ನಮ್ಮನ್ನು ವಾಹನ ಸಮೇತ ಹೊತ್ತು ಹಾಕುತ್ತದೆ. ಇದಕ್ಕಾಗಿ ಸುಮಾರು ೨-೩ ಘಂಟೆಗಳವರೆಗೆ ಕಾಯ್ದು ಆ ದಾರಿಯಲ್ಲಿ ಬರುವ ೨ ಬಸ್ ಮತ್ತು ೫-೬ ಕಾರುಗಳನ್ನು ತುಂಬಿಕೊಂಡ ನಂತರವಷ್ಟೆ ನಮ್ಮ ಬಾರ್ಜ್ ಪಯಣಕ್ಕೆ ಮುಕ್ತಿ ಸಿಕ್ಕದ್ದು. ಸಿಗಂಧೂರಿನಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿಯಿತ್ತು ನಮ್ಮ ಪಯಣ ಮುಂದುವರೆಸಿದೆವು. ಈ ಹೊತ್ತಿಗಾಗಲೆ ಒಬ್ಬನೆ ವಾಹನ ಚಲಾಯಿಸಿದ್ದ ಆಯಾಸಕ್ಕಾಗಿ ಜ್ವರ ಬಂದಂತೆ ನನಗೆ ಭಾಸವಾಗುತ್ತಿತ್ತು. ಆದರೂ ಬೇರೆ ವಿಧಿಯಿರಲಿಲ್ಲ ನಾನು ಈಗಾಗಲೆ ತಿಳಿಸಿದಂತೆ ನನ್ನ ಸ್ನೇಹಿತರಿಗೆ ಯಾರಿಗೂ ವಾಹನ ಚಾಲನೆ ಬರುತ್ತಿರಲಿಲ್ಲ. ಸುತ್ತಲಿದ್ದ ಹಸಿರು ಗಿರಿಕಣಿವೆಗಳ ಮಧ್ಯೆ ಉತ್ತಮವಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರೆ ಕಾಡುತ್ತಿದ್ದ ಜ್ವರದ ಅರಿವಿಗೆ ಬರುತ್ತಿರಲಿಲ್ಲ. ಅಂತಹ ಪ್ರಕೃತಿಯ ಮಧ್ಯೆ ವಾಹನ ಚಲಾಯಿಸುವುದೆಂದರೆ ನನಗೆ ಅತೀವ ಸಂತೋಷ.
ಈ ಹೊತ್ತಿಗಾಗಲೆ ನಮ್ಮೆಲ್ಲರ ಹೊಟ್ಟೆಗಳು ತಾಳಹಾಕಲು ಆರಂಭಿಸಿದ್ದರೂ ಕಾಡಿನ ನಟ್ಟನಡುವೆ ನಮಗೆ ಯಾವುದೆ ಕುಗ್ರಾಮವೂ ಸಿಗಲಿಲ್ಲ. ನಮ್ಮ ಹಸಿವೆ ತಣಿಸುವ ಮಾರ್ಗವೂ ಸಿಗಲಿಲ್ಲ. ಮಾರ್ಗ ಮಧ್ಯದಲ್ಲಿ ಸಿಗುತ್ತಿದ್ದ ಎಲ್ಲ ಸುಂದರ ಸ್ಥಳಗಳಲ್ಲೂ ನಿಲ್ಲಿಸಿ ಅದನ್ನು ಚಿತ್ರೀಕರಿಸುತ್ತಿದ್ದವನನ್ನು ನೋಡಿ ಮಧು ಗೊಣಗಲು ಪ್ರಾರಂಭಿಸಿದ. ಅದೆನು ಬೆಟ್ಟ ಗುಡ್ಡ ಇಲ್ಲ ಕಣಿವೆ ಕಂಡಾಕ್ಷಣ ಇಳಿದು ಹೋಗ್ತಿಯೋ ಮಹರಾಯ ಎಂಬ ಅವನ ಗೊಣಗಾಟಕ್ಕೆ ಮುಗುಳ್ನಗೆಯೊಂದೆ ನನ್ನ ಉತ್ತರವಾಗುತ್ತಿತ್ತು. ಪಾಪ!! ಅವನ ಗೊಣಗಾಟ ಸಹಜವಾದದ್ದೆ ಬೆಳಗ್ಗೆ ತಿಂದಿದ್ದ ದೋಸೆ ಎಂದೋ ಕರಗಿ ಹೋಗಿತ್ತು ಏನಾದರೂ ತಿನ್ನಲು ಸಿಕ್ಕರೆ ಸಾಕು ಎನ್ನುವ ಹತಾಶೆ ಅವನಾದಗಿತ್ತು.
ಸುಮಾರು ಅರ್ಧ ಘಂಟೆಯ ನಂತರ ಮಣ್ಣಿನ ರಸ್ತೆ ಮುಗಿದು ಡಾಂಬರು ರಸ್ತೆ ಪ್ರಾರಂಭವಾದಾಗ ಯಾವುದಾದರೂ ಹೋಟೆಲ್ ಸಿಗಬಹುದೆಂಬ ನಮ್ಮ ಅನಿಸಿಕೆ ಸುಳ್ಳೆ ಆಯಿತು. ಬಾರ್ಜ್ನಲ್ಲಿ ಕುಳಿತು ಇದ್ದ ಬದ್ದ ಬಿಸ್ಕತ್ ಗಳನ್ನೆಲ್ಲ ಮೆದ್ದಿದ್ದ ನನಗೆ ಹೆಚ್ಚು ಹಸಿವೆ ಕಾಡುತ್ತಿರಲಿಲ್ಲವಾದರೂ ಜ್ವರ ಮಾತ್ರ ಏರುಗತಿಯಲ್ಲೆ ಇತ್ತು. ಇಲ್ಲಿ ನಾವು ಎಲ್ಲಿಗೆ ಹೋಗಬೇಕು ಎನ್ನುವ ಅರಿವಿರಲಿಲ್ಲ. ದಾರಿಯಲ್ಲಿ ಸಿಗುವವರನ್ನು ಕೇಳಿ ಮುಂದೆ ಸಿಗುವ ಊರಿನ ಹೆಸರನ್ನು ತಿಳಿದುಕೊಂಡು ಮುಂದೆ ಹೋಗುವುದಷ್ಟೆ ನಮ್ಮ ಕೆಲಸ. ನಮ್ಮ ಗುರಿ ಯಾವುದು ಎಂದು ನಮಗೆ ಸ್ಪಷ್ಟವಿರಲಿಲ್ಲ. ಕೊನೆಗೊಮ್ಮೆ ಮುಖ್ಯ ರಸ್ತೆಯೊಂದು ಎದುರಾಯಿತು. ಯಾವುದೋ ಹೆದ್ದಾರಿಯಿರಬೇಕೆಂದು ಊಹಿಸುತ್ತಿದ್ದವರಿಗೆ ಎದುರಾದದ್ದು "ಕೊಡಚಾದ್ರಿ"ಗೆ ದಾರಿ ಎನ್ನುವ ತುಕ್ಕು ಹಿಡಿದ ಫಲಕ. ಹಿಂದೆ ಮುಂದೆ ನೋಡದೆ ಆ ದಾರಿಯಲ್ಲಿ ವಾಹನ ತಿರುಗಿಸಿದವನನ್ನು ಎಲ್ಲರೂ ಆಶ್ಚರ್ಯದಿಂದ ನೋಡಿದರು. ಅವರಿಗೆ ಅಲ್ಲಿನ ಸೌಂದರ್ಯದ ಬಗ್ಗೆ ತಿಳಿಸಿ ಅದೆ ದಾರಿಯಲ್ಲಿ ಮುಂದುವರೆದಾಗ ಕಣ್ಣಿಗೆ ರಾಚುವಂತಿದ್ದ ಅಲ್ಲಿನ ಹಸಿರು, ಬಣ್ಣ ಬಳಿದಂತೆ ಕಾಣುತ್ತಿದ್ದ ಹುಲ್ಲುಗಾವಲು ಮತ್ತು ಕಾಡಿನ ಸೊಬಗಿಗೆ ಅವಾರಾಗಲೆ ಮನಸೋತು ಈ ರಸ್ತೆಯ ಕೊನೆಯವರೆಗೂ ಹೋಗೋಣವೆಂದು ಅಪ್ಪಣೆಯಿತ್ತರು. ಡಾಂಬರು ರಸ್ತೆಯ ಕೊನೆಯವರೆಗೂ ಬಂದ ನಮಗೆ ಮುಂದೆ ಹೋಗಲು ದಾರಿಯಿದ್ದರೂ ನನ್ನ ವಾಹನಕ್ಕೆ ಯೋಗ್ಯವಲ್ಲದ ದಾರಿಯೆಂದು ಅರಿವಾಯಿತು. ಅಲ್ಲೆ ಹರಿಯುತ್ತಿದ್ದ ಝರಿಯೊಂದರಲ್ಲಿ ನಮ್ಮ ದಾಹ ತೀರಿಸಲು ಇಳಿದೆವು. ನೇರವಾಗಿ ನೀರಿಗಿಳಿದ ಸುರೇಶನನ್ನು ಕಾರಿನೊಳಗಿಂದಲೆ ಹೆದರಿಸಿದವನು ಶಂಕರ. ಆರಾಮವಾಗಿ ನೀರು ಕುಡಿಯುತ್ತಿದ್ದವನಿಗೆ
ಏ ಸುರೇಶ ಮೊಸಳೆ ಕಣೋ ಎನ್ನುವ ಚೀತ್ಕಾರಕ್ಕೆ ಹೆದರಿ ದಡಕ್ಕೆ ಓಡಿ ಬಂದ ಪರಿ ಇಂದಿಗೂ ನನ್ನ ಕಣ್ಣು ಕಟ್ಟಿದಂತಿದೆ. ಅವನ ಆ ಚರ್ಯೆಗೆ ನಗುತ್ತ ನಿಂತಿದ್ದ ನಮಗೆ ಅವನಿಂದ ನಮಗೆಲ್ಲ ನಿಂದನೆಯ ಪೂಜೆ. ಇಲ್ಲ ಪುಟ್ಟ!! ಇಂತಹ ಜಾಗದಲ್ಲಿ ಮೊಸಳೆಗಳು ಬರವುದಿಲ್ಲವೆಂದು ಮನದಟ್ಟು ಮಾಡಿಕೊಟ್ಟರೂ ಅವನು ಮತ್ತೆ ನೀರಿಗಿಳಿದಿದ್ದರೆ ಕೇಳಿ! ರಸ್ತೆಯಲ್ಲೆ ಮಲಗಿ ಇಲ್ಲೆ ಇದ್ದು ಬಿಡೋಣವೆಂದು ಪುಸಲಾಯಿಸಲು ತೊಡಗಿದವ ಇದೆ ಸುರೇಶನೇನ? ಬೆಂಗಳೂರಿಗೆ ಹಿಂದಿರುಗಲು ವರಾತ ಹಚ್ಚಿದವನು ಎಂದು ನೆನಪಿಸಿಕೊಂಡರೆ ನಗು ಬರುತ್ತದೆ. ಕೊನೆಗೊಮ್ಮೆ ಖಾಲಿಯಾಗಿದ್ದ ನೀರಿನ ಶೀಷೆಗಳನ್ನೆಲ್ಲ ತುಂಬಿಕೊಂಡು ಮನಸ್ಸಿಲ್ಲದ ಮನಸ್ಸಿನಿಂದ ಹಿಂತಿರುಗಲು ಆರಂಭಿಸಿದವರಿಗೆ ಎದುರಾದದ್ದು ಮಳೆನಾಡಿನ ಮಳೆಯ ಆರ್ಭಟ. ಅಬ್ಬ ನಿನ್ನ ಪರಿಯೆ ಎಡಬಿಡದೆ ಬೋರೆಂದು ಸುರಿಯುವ ವರ್ಷಧಾರೆ ಬಯಲುಸೀಮೆಯವರಾದ ನಮಗೆ ಬಲು ಅಪರೂಪ. ಮಳೆಹನಿಯ ಜೊತೆ ಸ್ಪರ್ಧೆಗಿಳಿದ ಕಾರಿನ ವೈಪರ್ ಸೋತುಹೋಗುವುದರಲ್ಲಿ ಸಂಶಯವಿಲ್ಲ. ಈ ಹೊತ್ತಿಗಾಗಲೆ ಜ್ವರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಮುಖ್ಯ ರಸ್ತೆಗೆ ಹಿಂತಿರುಗಿ ಬಲಭಾಗಕ್ಕೆ ತಿರುಗಿ ರಸ್ತೆಯಲ್ಲಿ ಸಾಗತೊಡಗಿದೆವು. ಸ್ವಲ್ಪ ಹೊತ್ತಿನಲ್ಲೆ ನಿಟ್ಟೂರು ಎದುರಾಯಿತು ಆದರೆ ಅಲ್ಲಿ ಯಾವುದೆ ಹೋಟೇಲ್ ಸಿಗಲಿಲ್ಲ ಈ ಹೊತ್ತಿಗಾಗಲೆ ಮಧು ತನ್ನ ಅಸಹನೆ ಪ್ರದರ್ಶಿಸಲಾರಂಭಿಸಿದ. ಅರ್ಧ ಮುಕ್ಕಾಲು ಘಂಟೆ ರಸ್ತೆ ಸವೆಸಿದ ನಂತರ ಸಿಕ್ಕದ್ದು ನಗರ. ಅಬ್ಬ ಇಲ್ಲಿ ಸಿಕ್ಕ ಹೊಟೆಲ್ ಒಂದಕ್ಕೆ ದಾಳಿಯಿಟ್ಟೆವು, ದಾಂಗುಡಿಯಿಟ್ಟೆವು. ಆಕ್ರಮಿಸಿದೆವು ಎಂದೆ ಹೇಳಬೇಕು. ಬಿಸಿಯಾಗಿ ಏನಿದೆ ಎಂದು ಕೇಳಿದವರಿಗೆ ಅವನು ತಂದಿಟ್ಟದ್ದು ಖಾಲಿದೋಸೆ. ಎಷ್ಟು ಖಾಲಿ ಮಾಡಿದೆವು ಅರಿವಿಲ್ಲ. ಆಗ ಸಮಯ ಸುಮಾರು ೪ ಘಂಟೆಯಿರಬೇಕು. ಎಲ್ಲರ ಹೊಟ್ಟೆಯ ಬೆಂಕಿ ಆರಿ ತಣ್ಣಗಾಗಿತ್ತು. ಈಗ ನನ್ನ ಜ್ವರದ ಕಡೆಗೆ ಗಮನ ಹರಿಯಿತು. ಅಲ್ಲೆ ಇದ್ದ ಔಷಧದ ಅಂಗಡಿಯೊಂದರಲ್ಲಿ ಮಾತ್ರೆಯನ್ನು ತಂದು ಕೊಟ್ಟ ಶಂಕರನಿಗೊಂದು ಧನ್ಯವಾದ. ಈ ಹೊತ್ತಿಗೆ ನನ್ನ ಕಾರಿನ ಮುಖ್ಯ ದೀಪವನ್ನು ಬದಲಾಯಿಸಿದ್ದೆ. ಈಗಾಗಲೆ ಕತ್ತಲು ಆವರಿಸುವುದಕ್ಕೆ ಮುಂದಾಗಿತ್ತು. ಈಗ ನಮ್ಮ ಗುರಿ ತೀರ್ಥಹಳ್ಳಿಯೆಂದು ಅಲ್ಲಿಂದ ಮುಂದೆ ಶೃಂಗೇರಿಯನ್ನು ತಲುಪುವುದೆಂದು ತೀರ್ಮಾನಿಸಿ ನಮ್ಮ ಪಯಣ ಶುರು. ಸ್ವಲ್ಪ ದೂರ ಸಾಗಿ ಪುಟ್ಟ ಹಳ್ಳಿಯ ಪ್ರವೇಶಕ್ಕೆ ಮುನ್ನವೆ ತಟ್ಟನೆ ನಾನು ವಾಹನವನ್ನು ಗಕ್ಕನೆ ನಿಲ್ಲಿಸಿದಾಗ ಎಲ್ಲರಿಗೂ ಅಚ್ಚರಿ. ಯಾವುದೆ ಬೆಟ್ಟಗುಡ್ಡ ಇಲ್ಲದಿದ್ದರೂ ಯಾಕೆ ನಿಲ್ಲಿಸಿದೆಯೊ ಎಂದು ಕೇಳುತ್ತಿದ್ದವರಿಗೆ ನಾನು ಮುಂದೆ ರಸ್ತೆಯನ್ನು ನೋಡಲು ಸೂಚಿಸಿದಾಗ ಅವರ ಮುಖದಲ್ಲಿ ಆತಂಕಕ್ಕೆ ಕಾರಣವಾದದ್ದು ರಸ್ತೆಯಲ್ಲಿ ಸರಿದು ಹೋಗುತ್ತಿದ್ದ ದೊಡ್ಡದಾದ ಒಂದು ಹಾವು!! ಅದೆ ಸಮಯಕ್ಕೆ ಬಂದ ಹಳ್ಳಿ ಹುಡುಗರಿಬ್ಬರು ನಿಮಗೆ ಒಳ್ಳೆಯ ಶಕುನ ಆದರೆ ಇನ್ನು ಸ್ವಲ್ಪ ಹೊತ್ತು ನಿಂತು ಹೋಗಿ ಎನ್ನುವ ಅವರ ಅಪ್ಪಣೆಯನ್ನು ಶಿರಸಾವಹಿಸಿ ವಾಹನ ನಿಂತಿದ್ದರೂ ಯಾರು ವಾಹನದಿಂದ ಇಳಿಯಲಿಲ್ಲ.ಕಾರಣ ಹಾವಿನ ಭಯ. ಇಲ್ಲಿಂದ ಮುಂದೆ ತೀರ್ಥಹಳ್ಳಿಯವರೆಗೂ ತಮ್ಮ ನೈಸರ್ಗಿಕ ಕರೆಗೂ ಓಗೊಡದೆ ಕಾರಿನಿಂದ ಇಳಿಯದೆ ಕುಳಿತಿದ್ದರು ಎಂದರೆ ಅವರು ಹಾವಿಗೆ ಹೆದರಿದ್ದ ಪರಿ ನಿಮಗೆ ಆಶ್ಚರ್ಯ ತರಿಸಬಹುದು;-)).
ಸಮಯ ಸರಿದು ಹೋಗುತ್ತಿತ್ತು. ಕತ್ತಲು ಆವರಿಸುತ್ತಿತ್ತು. ಕಾರ್ಗತ್ತಲಿನಲ್ಲಿ ಹಾವಿನಂತ ಅಂಕುಡೊಂಕು ಘಟ್ಟದ ರಸ್ತೆಯಲ್ಲಿ ವಾಹನ ಛಲಾಯಿಸುವುದು ಮಜಾ ಕೊಡುತ್ತದೆ. ಗವ್ವೆನ್ನುವ ಕಡು ಕತ್ತಲೆಗೆ ಎಲ್ಲರು ಮಾತನಾಡುವುದನ್ನೂ ಕೂಡ ನಿಲ್ಲಿಸಿದ್ದರು. ಪಕ್ಕದಲ್ಲಿ ಕುಳಿತಿದ್ದ ಮಧುವಿಗೆ ನನ್ನ ವಾಹನಕ್ಕೂ ದಾರಿಕೊಡದೆ ತಾನೂ ಮುಂದೆ ಹೋಗದೆ ಇದ್ದ ಜೀಪಿನ ಸಂಖ್ಯೆಯನ್ನು ಬರೆದುಕೊಳ್ಳುವಂತೆ ಸೂಚಿಸಿದೆ. ಅದು ಒಂದು ಎಚ್ಚರಿಕೆಯ ಮತ್ತು ನನ್ನ ಪ್ರತಿ ಪ್ರಯಾಣದ ಅಭ್ಯಾಸ. ಮತ್ತೆ ಗಾಭರಿಯಾದ ಮಧುವಿಗೆ ಹೆದರುವ ಅಗತ್ಯವಿಲ್ಲ ಅದೊಂದು ಎಚ್ಚರಿಕೆಯ ಹೆಜ್ಜೆ ಅಷ್ಟೆ ಎಂದು ತಿಳಿಸಿದಾಗಲೆ ಅವನ ಮುಖದಲ್ಲಿದ್ದ ಆತಂಕದ ಗೆರೆಗಳು ಕಡಿಮೆಯಾದದ್ದು. ಜೀಪನ್ನು ಹಿಂದೆ ಹಾಕಿ ನಾವು ಮುಂದೆ ಹೋದಾಗಲೆ ನನ್ನ ಸ್ನೇಹಿತರ ಮುಖದಲ್ಲಿ ಒತ್ತಡದ ಚಿನ್ಹೆಗಳು ಬದಲಾದದ್ದು. ತೀರ್ಥಹಳ್ಳಿ ತಲುಪಿ ಶೃಂಗೇರಿಗೆ ಹೋಗುವ ರಸ್ತೆ ವಿಚಾರಿಸುತ್ತಿದ್ದವರಿಗೆ ಕೇಳಿಬಂದದ್ದು ಎಚ್ಚರಿಕೆಯ ಮಾತು. ನಕ್ಸಲೈಟ್ಗಳ ಹಾವಳಿಯಿರುವುದರಿಂದ ಇಲ್ಲೆ ಉಳಿದು ಬೆಳಿಗ್ಗೆ ಹೋಗಿ ಎಂಬ ಸಲಹೆ. ಅದು ನನಗೂ ಸರಿಯೆನಿಸಿತು ಜ್ವರದಿಂದ ಬಳಲಿದ್ದವ್ನಿಗೆ ರಾತ್ರಿ ಪ್ರಯಾಣ ಹೆಚ್ಚು ಪ್ರಯಾಸಕರ. ಸರಿ ತೀರ್ಥಹಳ್ಳಿಯಲ್ಲಿ ಜಗ್ಗೇಶನ ಚಿತ್ರೀಕರಣವಿದ್ದುದರಿಂದ ಯಾವುದೆ ವಸತಿಗೃಹವೂ ಸಿಗಲಿಲ್ಲ. ಕೊನೆಗೆ ಅಲ್ಲೆ ಇದ್ದ ಸರ್ಕಾರಿ ವಸತಿ ಗೃಹವೊಂದರಲ್ಲಿ ಕೋಣೆಗಳು ಸಿಕ್ಕಾಗ ರಾತ್ರಿ ೧೦ ಘಂಟೆ. ಇದ್ದುದರಲ್ಲೆ ಉತ್ತಮವಾದ ಉಪಹಾರಗೃಹವೊಂದರಲ್ಲಿ ಊಟಮುಗಿಸಿ ನಾಳೆ ಬೆಂಗಳೂರಿಗೆ ಹಿಂತಿರುಗಬೇಕಾಗಿರುವುದರಿಂದ ಮುಂಜಾನೆ ಬೇಗನೆ ಸಿದ್ದವಾಗಲು ಎಲ್ಲರಿಗೂ ಸೂಚಿಸಿ ನಿದ್ದೆಗೆ ಜಾರಿದವನಿಗೆ ಸಮಯದ ನೆನಪಿಲ್ಲ.
೫ ಘಂಟೆಗೆ ಎದ್ದು ಸುಖನಿದ್ದೆ ಸವಿಯುತ್ತಿದ್ದವರನ್ನು ಹೊಡೆದು ಎಚ್ಚರಗೊಳಿಸಿ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ ಶೃಂಗೇರಿಯ ದಾರಿ ಹಿಡಿದೆವು.ಜ್ವರ ಹೇಳದಂತೆ ಮಾಯವಾಗಿತ್ತು. ೩೦ ನಿಮಿಷದ ನಂತರ ಸಿಗುವ ಕುವೆಂಪು ಕವಿ ಶೈಲಕ್ಕೆ ಭೇಟಿಕೊಡುವ ಮನಸ್ಸಿದ್ದರೂ ಇನ್ನೂ ಬೆಳಕು ಹರಿಯದ್ದರಿಂದ ಅದು ಸಾಧ್ಯವಾಗಲಿಲ್ಲ ಎನ್ನುವ ಬೇಸರ ಇನ್ನು ನನ್ನನ್ನು ಕಾಡುತ್ತಿದೆ. ಆಗುಂಬೆಯ ಮುಖೇನ ಶೃಂಗೇರಿ ತಲುಪಿ ನದಿ ದಂಡೆಯಲ್ಲಿ ವಾಹನ ನಿಲ್ಲಿಸಿ ನೇರವಾಗಿ ನದಿಗೆ ಸ್ನಾನ ಮಾಡಲು ನಾನು ಮತ್ತು ಮಧು ತೆರಳಿದೆವು. ತನ್ನ ವಿಚಿತ್ರ ನಡತೆಯಿಂದ ಎಲ್ಲರನ್ನು ನಗಿಸುವ ಒಮ್ಮೊಮ್ಮೆ ಗಾಭರಿಗೊಳಿಸುವ ಸುರೇಶ ನದಿಗೆ ಬರದೆ ಅಲ್ಲೆ ಇದ್ದ ಸ್ನಾನಗೃಹವೊಂದರಲ್ಲಿ ಬಕೆಟ್ಟಿಗೇ ಶಾಂಪೂ ಸುರಿದು ಅದೆ ನೀರನ್ನು ಮೈಮೇಲೆ ಸುರಿದು ಕೊಂಡು ಹೊರಗೆ ಬಂದ ಪರಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯ. ಅವನ ನಂತರ ಸ್ನಾನ ಮಾಡಲು ಹೋದ ವ್ಯಕ್ತಿ ಕೋಣೆಯ ತುಂಬಾ ತುಂಬಿದ್ದ ನೊರೆಯನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದ. ಮನಸ್ಸಿಗೆ ಮುದ ನೀಡದ ಸ್ನಾನ ಸುರೇಶನನ್ನು ನದಿಗೆ ಕರೆತಂದಿತ್ತು. ತುಂಗಾ ನದಿಯಲ್ಲಿ ಈಜಿ ಹೊರಬಂದಾಗ ಸುರೇಶ ತನ್ನ ಒದ್ದೆಯಾದ ಉಡುಪನ್ನು ನನ್ನ ಕಾರಿನ ಮೇಲ್ಭಾಗದಲ್ಲಿ ಒಣಗಿಹಾಕಿದ. ನಂತರ ಶಾರದೆಯ ದರ್ಶನ ಪಡೆದು ಋಷ್ಯಶೃಂಗಗಿರಿಗೆ (ಕಿಗ್ಗ) ಹೊರಟು ದೇವಸ್ಥಾನಕ್ಕೆ ಭೇಟಿ ಕೊಟ್ಟು. ಅಲ್ಲಿಂದ ಸುಮಾರು ೧೦-೧೫ ಕಿ.ಮೀ ದೂರದಲ್ಲಿರುವ ಸಿರಿಮನೆ ಜಲಪಾತಕ್ಕೆ ತೆರಳಿದೆವು. ಮಳೆ ಬಂದದ್ದರಿಂದ ಮಣ್ಣಿನ ದಾರಿ ನನ್ನ ವಾಹನವನ್ನು ಕಣಿವೆಯ ಕಡೆಗೆ ಎಳೆಯುತ್ತಿದ್ದರೆ ಎಲ್ಲರ ಮುಖದಲ್ಲೂ ಆತಂಕದ ಛಾಯೆ. ಸಾವಕಾಶವಾಗಿ ಕಡಿದಾದ ಕಣಿವೆಗಳಲ್ಲಿ ಇಳಿದು ಬೆಟ್ಟವನ್ನು ಹತ್ತಿ ಜಲಪಾತದ ಹತ್ತಿರ ವಾಹನ ನಿಂತ ತಕ್ಷಣವೆ ಇಳಿದ ಸುರೇಶ ಕಾರಿನ ಕೆಳಗೂ ಮತ್ತು ಮೇಲೂ ಹುಡುಕತೊಡಗಿದಾಗ ನಮಗೆಲ್ಲ ಆಶ್ಚರ್ಯ. ಎನೋ ಹಾವಿನ ಭಯವೆ ಎನ್ನುವ ನಮ್ಮ ಪ್ರಶ್ನೆಗೆ ತಲೆಯಲ್ಲಾಡಿಸುತ್ತ. ಇಲ್ಲ ಮೇಲ್ಗಡೆ ನನ್ನ ಒದ್ದೆ ಬಟ್ಟೆ ಮತ್ತು ಕೆಳಗೆ ನನ್ನ ಚಪ್ಪಲಿ ಕಾಣಿಸುತ್ತಿಲ್ಲ ಎಂದು ಅಲವತ್ತುಕೊಂಡ. ಶೃಂಗೇರಿಯಲ್ಲಿ ಕಾರಿನ ಮೇಲೆ ಒಣಗಿಹಾಕಿದ್ದ ಮತ್ತು ಕಾರಿನ ಕೆಳಗೆ ಬಿಟ್ಟಿದ್ದ ಚಪ್ಪಲಿಯನ್ನು ನಮ್ಮ ಮಹಾಶಯ ೨೦ ಕಿ.ಮೀ ಬಂದ ನಂತರ ಹುಡುಕುತ್ತಿದ್ದನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಜಲಪಾತದೆಡೆಗೆ ತೆರಳಿದೆವು. ಹೆಸರೇ ಹೇಳುವಂತೆ ಸುಂದರ ಸಿರಿಮನೆ ಜಲಪಾತದಲ್ಲಿ ಮೊದಲು ನೀರಿಗಿಳಿಯಲು ಹೆದರಿದವರಿಗೆ ದಡದಲ್ಲಿ ಅಂಟಿದ ಜಿಗಣೆಗಳು ಸ್ವಾಗತಿಸಿದವು. ನೇರವಾಗಿ ಜಲಪಾತದ ಕೆಳಗೆ ನಿಂತು ನೈಸರ್ಗಿಕವಾಗಿ ದೇಹವನ್ನು ಮಸಾಜ್ ಮಾಡಿಸಿಕೊಳ್ಳುತ್ತಿದ್ದವನನ್ನು ನೋಡಿ ಒಬ್ಬೊಬ್ಬರೆ ನೀರಿಗಿಳಿಯಲು ಆರಂಭಿಸಿದರು. ಇಲ್ಲಿಂದಲೆ ಶೃಂಗೇರಿ ಮಠಕ್ಕೆ ಸ್ವಲ್ಪ ಪ್ರಮಾಣದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲಪಾತದಲ್ಲೆ ಸುಮಾರು ೨ ಘಂಟೆಗಳನ್ನು ಕಳೆದು ಅಲ್ಲಿಂದ ನೇರವಾಗಿ ಬಾಳೆಹೊನ್ನೂರಿಗೆ ಬಂದು ಊಟಕ್ಕಾಗಿ ಹತ್ತಿರದಲ್ಲಿದ್ದ ಊಟದ ಮೆಸ್ ಒಂದನ್ನು ಹುಡುಕಿ ಚಪಾತಿ ತಯಾರಿಸಲು ಅರ್ಧ ಘಂಟೆಯ ಸಮಯ ಕೇಳಿದವನಿಗೆ ಮನಸ್ಸಿನಲ್ಲೆ ವಂದಿಸಿ ಕಾರಿನಲ್ಲೆ ಮಲಗಿದವನಿಗೆ ಎಚ್ಚರವಾದದ್ದು ಶಂಕರ ಕರೆದಾಗಲೆ. ಚಪಾತಿಯಷ್ಟೆ ನನಗೆ ರುಚಿಸಿದ್ದು. ಚಿಕ್ಕಮಗಳೂರು, ಬೇಲೂರು, ಹಾಸನ ಕುಣಿಗಲ್ ಮುಖಾಂತರ ಬೆಂಗಳೂರಿಗೆ ಬಂದು ತಲುಪಿದಾಗ ರಾತ್ರಿಯಾಗಿತ್ತು.
೪ ವರ್ಷಗಳ ತರುವಾಯ ಎಲ್ಲ ಘಟನೆಗಳನ್ನು ನೆನಪಿಸಿಕೊಂಡು ಬರಹದಲ್ಲಿ ಹಿಡಿದಿಡುವುದು ಕಷ್ಟಕರ ನೆನಪಿಗೆ ಬಂದಷ್ಟು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಪ್ರವಾಸ ಹೋಗಿಬಂದು ೪ ವರ್ಷಗಳ ನಂತರ ಪ್ರವಾಸ ಕಥನ ಬರೆಯಲು ಕುಳಿತಾಗ ನನ್ನ ಕಣ್ಣ ಮುಂದೆ ಹಾದು ಹೋದ ಪ್ರವಾಸದ ಪ್ರತಿಯೊಂದು ದೃಶ್ಯಗಳು ಮತ್ತು ಬಿಡುವಿನ ಸಮಯದಲ್ಲಿ ನಾವೆಲ್ಲಾ ಮೆಲುಕು ಹಾಕುವ ಆ ಕ್ಷಣಗಳು ನೆನಪಿನ ಕಚಗುಳಿಯಿಡುತ್ತವೆ. ನಾನು ಹೆಚ್ಚು ಸಂತೋಷ ಪಟ್ಟ ಪ್ರವಾಸಗಳಲ್ಲಿ ಇದು ಮೊದಲನೆಯದಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲ.