Thursday, November 26, 2009

ಕಸಬ್ ತಂದೆಯ ಸಂದರ್ಶನ!!!

ರವಿ ಬೆಳಗೆರೆಯವರ ಮುಸ್ಲಿಂ ಪುಸ್ತಕ ಓದಿದ ಮೇಲೆ ನನಗ್ಯಾಕೊ ಒಮ್ಮೆ ಯಾರಾದ್ರೂ ಭಯೋತ್ಪಾದಕನನ್ನು ಸಂದರ್ಶಿಸಲೇಬೇಕೆಂಬ ಆಸೆ ಒಳಗೆ ಕೊರೆಯುತ್ತಿತ್ತು. ಕೊನೆಗೂ ಮನೆಯವರ್ಯಾರಿಗೂ ಹೇಳದೆ ಹೊರಟೇ ಬಿಟ್ಟೆ. ಎಲ್ಲಿಗ್ ಹೋಗೋದು ಎನ್ನುವುದು ಒಂದು ಕ್ಷಣ ಕಾಡಿದರೂ, ಭಯೋತ್ಪಾದಕರು ಅಂದ್ರೆ ಸಿಗೋದೆ ಪಾಕಿಸ್ಥಾನದಲ್ಲಿ. ಹೌದಲ್ವ? ನೇರ manufacturing unit ಗೆ ಹೋದ್ರೆ ಒಳ್ಳೆ ಮಾಲು ಸಿಗೋದು ಖಚಿತೆವೆಂದೆನಿಸಿ ಸರಿ ಅಲ್ಲಿಗೆ ಹೋಗೋಣ ಎಂದು ತೀರ್ಮಾನಿಸಿ ಹೊರಟೇಬಿಟ್ಟೆ.

ಹೋಗೋದ್ ಹೇಗೆ? ಕಳೆದ ಏಪ್ರಿಲ್ ನಲ್ಲಿ ವಾಘಾ ಗಡಿ ಸಂದರ್ಶಿಸಿದ್ದರಿಂದ ಆ ಮೂಲಕವೇ ಯಾವ್ದಾದ್ರೂ ಈರುಳ್ಳಿ ಲಾರಿ ಒಳ್ಗೆ ಸೇರ್ಕೊಂಡು ಹೋದ್ರಾಯ್ತು ಅನ್ಕೊಂಡೆ. ಭಾರತದಿಂದ ಪಾಕಿಸ್ತಾನಕ್ಕೆ ಹೋಗ್ಬೇಕೂಂದ್ರೆ ವೀಸಾ ಬೇಕು, ಹುಹ್ ಏನ್ಮಾಡೋದು ಅದೆ ಅಲ್ಲಿಂದ ಇಲ್ಲಿಗ್ ಬರ್ಲಿಕ್ಕೆ ಒಂದು ಕ್ರಿಕೆಟ್ ಮ್ಯಾಚ್ ಇದ್ರೆ ಸಾಕು. ಇಲ್ವ ಒಂದು ಗನ್ ಸಾಕು ನೋಡಿ.
***
ಪಾಕಿಸ್ತಾನ ಏನೋ ಸೇರ್ಕೊಂಡಿದ್ದಾಯ್ತು ಇನ್ನು ಯಾರನ್ನು ಸಂದರ್ಶನ ಮಾಡೋದು ಅಂತ ಯೋಚ್ನೆ. ಹೌದು ಮುಂಬೈ ದಾಳಿಯಲ್ಲಿನ ಕಸಬ್ ತಂದೆನ ಸಂದರ್ಶಿಸಿದರೆ ಹೇಗೆ? ಅದೆ ಸರಿ. ಪಾಕಿಸ್ತಾನದಲ್ಲಿನ ಕಾಶ್ಮೀರ ಉಗ್ರರ ಸ್ವರ್ಗವಾದ್ರೂ ಅಲ್ಲಿಗ್ ಬಿಡಲ್ಲ ಯಾಕೇಂದ್ರೆ? ಸ್ವತಃ ಪಾಕಿಸ್ತಾನದ ಸರ್ಕಾರವೇ ಅಲ್ಲಿಗೆ ಬೇರೆಯವ್ರು ಹೋಗದಹಾಗೆ ಸ್ವತಃ ಕಟ್ಟೆಚ್ಚರ ವಹಿಸಿದೆ. ಯಾರಿಗೂ ಹೋಗ್ಲಿಕ್ಕೆ ಬಿಡಲ್ಲ ಅದ್ರಲ್ಲೂ ಭಾರತದ ಬುದ್ದಿಜೀವಿಗಳನ್ನಂತೂ ಸುತರಾಂ ಬಿಡೋದೆ ಇಲ್ಲ. ಸರ್ಕಾರನೇ ಐಎಸೈ ಮೂಲಕ ತರಭೇತಿ ಕೊಡ್ತಾ ಇರೋ ವಿಷ್ಯ ಪ್ರಪಂಚದಲ್ಲಿ ಎಲ್ರಿಗೂ ಗೊತ್ತಿದ್ರೂ ಈ ಭಾರತೀಯ ಬುದ್ದಿಜೀವಿಗಳು ನಮ್ಮ ಬೆಂಬಲಕ್ಕೆ ನಿಂತಿದರೆ ಅನ್ನೊ ವಿಷ್ಯ ಪಾಕಿಸ್ತಾನದ ಸರ್ಕಾರಕ್ಕೆ ಗೊತ್ತಿರೊದ್ರಿಂದ ಅವ್ರಾದ್ರೂ ನಮ್ಮ ಬೆಂಬಲಕ್ಕಿರ್ಲಿ ಅನ್ನುವ ಮುಂದಾಲೋಚನೆ, ಇರ್ಲಿ ಬಿಡಿ.

ಅಲ್ಲಿಗ್ ಬಿಡದೇ ಇದ್ದದ್ದು ಒಳ್ಳೆದಾಯ್ತು ಇಷ್ಟಕ್ಕೂ ಭಯೋತ್ಪಾದಕರ ಉತ್ಪಾದಕನನ್ನು ಸಂದರ್ಶಿಸುವ ಅವಕಾಶ ಒಳ್ಳೆಯದಲ್ವೆ?
ಹಾಗೂ ಹೀಗೂ ಮಾಡಿ ಕಸಬ್ ತಂದೆ ನಂಗೆ ಸಂದರ್ಶನ ಕೊಡ್ಲಿಕ್ಕೆ ಒಪ್ಪಿದ ಅದೂ ೨೫೦೦೦ ಕೊಡ್ತೀನಿ ಅಂದ್ಮೇಲೆ

ಮೊದಲನೇ ಪ್ರಶ್ನೆ: ಸಾರ್ ಯಾವ ಕಾರಣಕ್ಕೆ ನೀವು ನಿಮ್ಮ ಮಗನನ್ನ ಭಯೋತ್ಪಾದಕನಾಗಿ ಮಾಡೋದಿಕ್ಕೆ ಒಪ್ಪಿದ್ರಿ?
ಕಸಬ್ ತಂದೆ: ಬಡತನ, ಈಗ ನೋಡಿ ಇವತ್ತಿನ ಸಂಪಾದನೆ ೨೫೦೦೦. ಒಂದು ಗಂಟೆಗೆ. ಬೇಗ ಮುಗ್ಸಿ ಇನ್ನೂ ಡಾಲರ್ ಕೊಡೋವ್ರು ಕಾಯ್ತಿರ್ತರೆ.

ಪ್ರಶ್ನೆ: ನಿಮ್ಗೆ ಅದು ಸರಿ ಅನ್ಸುತ್ತ? ನಿಮ್ಮ ಮಗ ಬೇರೆ ದೇಶದಲ್ಲಿ ಹೋಗಿ ಸಿಕ್ಕಿಹಾಕಿಕೊಂಡು ನಿಮ್ಮ ದೇಶಕ್ಕೆ ಕೆಟ್ಟ ಹೆಸ್ರು ತರ್ತನಲ್ಲ?
ಉತ್ತರ: ನಮ್ಗೆ ದೇಶಕ್ಕಿಂತ ಧರ್ಮ ಮುಖ್ಯ. ನಂಗೆ ಅವ್ನೊಬ್ನೆ ಮಗ ಅಲ್ಲ ಇನ್ನೂ ಇದರೆ. ಇಷ್ಟಕ್ಕೂ ಅವ್ನೇನು ಸತ್ತೇನು ಹೋಗಿಲ್ವಲ್ಲ. ಮೊಂದೊಂದು ದಿನ ಬಂದೇ ಬರ್ತನೆ ಅನ್ನೊ ನಂಬಿಕೆ ಇದೆ ನಂಗೆ.

ಪ್ರಶ್ನೆ: ಅದು ಹೇಗೆ ಸಾರ್ ಅಷ್ಟೊಂದು ವಿಶ್ವಾಸ?
ಉತ್ತರ: ನಿಮ್ಮ ಸರ್ಕಾರದ ಮೇಲೆ ನನಗೆ ವಿಶ್ವಾಸವಿದೆ. ಭಾರತೀಯರು ಕರುಣಾಮಯಿಗಳು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅಲ್ಲಿ ನಮ್ಮ ಬೆಂಬಲಿಗರು ಸಹಾಯ ಮಾಡೇ ಮಾಡ್ತರೆ.

ಪ್ರಶ್ನೆ: ಯಾರು ಸಾರ್ ನಿಮ್ಮ ಬೆಂಬಲಿಗರು? ಮಾನವ ಹಕ್ಕುಗಳ ಆಯೋಗನ?
ಉತ್ತರ: ಇಲ್ಲ, ಅಲ್ಲಿನ ಬುದ್ದಿಜೀವಿಗಳು. ಯಾವುದೇ ಕಾರಣಕ್ಕೂ ಅವನನ್ನು ನೇಣಿಗೇರಿಸಲು ಅವ್ರು ಬಿಡಲ್ಲ, ಅಲ್ಲಿನ ಸರ್ಕಾರಕ್ಕೂ ನಮ್ಮವ್ರ ಓಟ್ ಬೇಕಾಗಿರೋವರ್ಗೂ ನನ್ ಮಗ ಸೇಫ್.

ಇದ್ದಕ್ಕಿದ್ದಂತೆ ಮನೆ ಮುಂದೆ ಜನಗಳು ಸೇರ್ಲಿಕ್ಕೆ ಶುರು ಆಯ್ತು ನಂಗೆ ಭಯ. ಭಯ ಪಟ್ಕೋಬೇಡಿ ಅವ್ರು ನಿಮ್ಗೆ ಏನೂ ಮಾಡ್ಲಿಕ್ಕೆ ಬಂದಿಲ್ಲ, ಬೇಗ ನಿಮ್ ಕೊನೆ ಪ್ರಶ್ನೆ ಕೇಳಿ ನಾನು ಹೊರ್ಡಬೇಕು.

ಎಲ್ಲಿಗ್ ಹೋಗ್ತಿದೀರ ಸಾರ್? ಇಷ್ಟೊಂದು ಜನ ಇಲ್ಲಿ ಯಾಕೆ ಸೇರ್ತಿದರೆ?

ನಾವೆಲ್ಲ ಸೇರಿ ಲಷ್ಕರ್ ಎ ತೋಯ್ಬ ಆಫೀಸ್ಗೆ ಹೋಗ್ತಾ ಇದೀವಿ ಅದಕ್ಕೆ.

ಯಾಕೆ ಸಾರ್?

ನಮ್ಮ ಮಕ್ಕಳನ್ನೆಲ್ಲ ಅವರ ಕ್ಯಾಂಪಿಗೆ ಸೇರಿಸ್ಕೊಳಿ ಅಂತ ಹೇಳಲಿಕ್ಕೆ.
ಓಹ್ ಎಲ್ರನ್ನೂ ಭಯೋತ್ಪಾದಕರನ್ನ ಮಾಡ್ಕೊಳಿ ಅಂತ ಕೇಳ್ತಿದೀರಾ?

ಹೌದು! ಆದ್ರೆ ಒಂದು ಕಂಡೀಶನ್ ಹಾಕ್ದಿವಿ.
ಏನು ಸಾರ್ ಕಂಡಿಶನ್ ನಮ್ ಮಕ್ಕಳನ್ನೆಲ್ಲ ಬರೀ ಭಾರತದ ಮೇಲೆ ಮಾತ್ರ ಭಯೋತ್ಪಾದಕರಾಗಿ ಕಳಿಸ್ಬೇಕು ಬೇರೆಲ್ಲೂ ಕಳಿಸ್ಬಾರ್ದು ಅಂತ.

ಓಹ್ ಯಾಕೆ ಸಾರ್ ನಿಮ್ಗೆ ಭಾರತದ ಮೇಲಿಷ್ಟು ದ್ವೇಷ?
ದ್ವೇಷನೂ ಇಲ್ಲ ಮಣ್ಣೂ ಇಲ್ಲಯ್ಯ. ಅಲ್ಲಿಗ್ ಹೋಗಿ ಸಿಕ್ಕಾಕೊಂಡ್ರೆ ನಮ್ಮ ಮಕ್ಳಿಗೆ ರಾಜಾತಿಥ್ಯ ಸಿಗುತ್ತೆ. ತಿಂಗಳಿಗೆ ಕೊಟ್ಯಾಂತರ ಖರ್ಚು ಮಾಡಿ ಸಾಕ್ಕೊಳ್ತರೆ. ಶಿಕ್ಷೆ ಅಂತೂ ಆಗೋದೆ ಇಲ್ಲ. ವಿಚಾರಣೆ ನೆಪದಲ್ಲಿ ಅವನ ಜೀವನ ಪೂರ್ತಿ ಅಲ್ಲೆ ಇದ್ದು ಕೊನೆಗೊಂದು ದಿನ ಅಲ್ಲಿಯ ಪೌರತ್ವವೂ ಸಿಗುತ್ತೆ ಮುಂದೊಂದು ದಿನ ಮಂತ್ರಿ ಆದ್ರೂ ಆಗ್ಬಹುದು!!! ಇಲ್ಲಿದ್ರೆ ಏನ್ ಸಿಗುತ್ತೆ?

Friday, November 13, 2009

ಏನಾಗಿದೆ ಈ TV9ಗೆ?

ಇಂದು ಈ ವಾಹಿನಿಯು ಸರಿ ಸುಮಾರು ೧೧ ಗಂಟೆಯಿಂದ ಪ್ರಿಯಾಂಕ ಮತ್ತು ಆನಂದ್ ಸಂಭಂದದ ಕತೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿತ್ತು. ನಾನು ಮಧ್ಯಾನ್ಹ ೧೨ ಗಂಟೆಗೆ ಊಟಕ್ಕೆ ಬಂದಾಗ ಪರಿತ್ಯಕ್ತ ಪ್ರೇಮಿ ಆಕೆಯ ಅಕ್ಕಂದಿರೊಡನೆ ಸ್ಟುಡಿಯೋಗೆ ಬಂದಾಗ ಕಾರ್ಯಕ್ರಮ ನೋಡಿದ್ದೆ. ಮತ್ತೆ ಸಂಜೆ ಬಂದಾಗ ಈ ವಾಹಿನಿ ಒಂದು ದೃಶ್ಯದ ತುಣುಕನ್ನು ತೋರಿಸುತ್ತಿತ್ತು. ಆಕೆ ಗರ್ಭಿಣಿಯೆನ್ನುವ ಕಾರಣಕ್ಕೆ ಅಳುತ್ತಾ ಕುಳಿತಿದ್ದ ಆ ಹೆಣ್ಣಿನ ಹೊಟ್ಟೆಯನ್ನು ಫೋಕಸ್ ಮಾಡಿ ತೋರಿಸ್ತಾ ಇದ್ದ ಆ ದೃಶ್ಯ ಇವರ ಕೀಳು ಅಭಿರುಚಿಯ ದ್ಯೋತಕವೋ? ಅಥವಾ ಗರ್ಭಿಣಿ ಎಂದಾಕ್ಷಣ ಮುಂದೆ ಬಂದಿರುವ ಹೊಟ್ಟೆಯ ಸಾಕ್ಷ್ಯ ತೋರಿಸಲು ಆ ಕ್ಯಾಮೆರಾದವ ಪ್ರಯತ್ನಿಸುತ್ತಿದ್ನಾ ತಿಳಿಯಲಿಲ್ಲ. ಆಲ್ಲ ಗರ್ಭಿಣಿ ಅಂದಾಕ್ಷಣ ಆ ಹೆಣ್ಣಿನ ಹೊಟ್ಟೆ ತೋರಿಸುವುದು ಅಸಭ್ಯತನ ಎಂದು ಅನ್ನಿಸ್ಲಿಲ್ವ? ನಾನಿಲ್ಲಿ ಮಡಿವಂತಿಕೆಯ ಬಗ್ಗೆ ಯೋಚಿಸ್ತಾ ಇಲ್ಲ. ಆದ್ರೆ ಹೊಟ್ಟೆ ತೋರ್ಸಿ ಆತ ಏನು ದೃಢ ಪಡಿಸ್ಲಿಕ್ಕೆ ಪ್ರಯತ್ನ ಮಾಡ್ತಾ ಇದ್ದ ಅಂತ? ಇಷ್ಟಕ್ಕೂ ೨-೩ ತಿಂಗಳ ಗರ್ಭಿಣಿಯ ಹೊಟ್ಟೆಲಿ ಇವನಿಗೆ ಏನು ಸಾಕ್ಷ್ಯ ಸಿಗುತ್ತೆ ಅನ್ನುವಷ್ಟು ಕಾಮ್ನ್ ಸೆನ್ಸ್ ಇಲ್ವ ಈ ವರದಿಗಾರರಿಗೆ? ಇದ್ದ ೧-೨ ನಿಮಿಷದ ದೃಶ್ಯದ ತುಣುಕನ್ನು ಇಡೀ ದಿನ ತೋರಿಸುವ ಇವರ ಚಾಳಿ ಇಲ್ಲೂ ಮುಂದುವರೆದು ಪದೆ ಪದೇ ಇದೇ ದೃಶ್ಯ ತೋರಿಸ್ತಿದ್ದದ್ದು ಆ ವಾರ್ತಾ ವಾಚಕನಿಗೂ , ಅಲ್ಲೆ ಬಂದು ಕುಳಿತಿದ್ದ ಪ್ರಮೀಳಾ ನೇಸರ್ಗಿಗೂ ಏನೂ ಅನ್ನಿಸ್ದೇ ಇದ್ದದ್ದು ಆಶ್ಚರ್ಯ! ನನಗೆ ಈಗ್ಲೂ ಅರ್ಥ ಆಗ್ತಿಲ್ಲ ಗರ್ಭಿಣಿ ಅಂದಾಕ್ಷಣ ಆ ಹೆಣ್ಣಿನ ಹೊಟ್ಟೆ ಮೇಲೆ ಈತನ ಕಣ್ಣೇಕೆ ಬಿತ್ತು ಅಂತ.

Friday, October 9, 2009

ಸ್ವರ್ಣವಲ್ಲಿಯವರೆಗೂ

ಪ್ರವಾಸ ಕಥನ ಬರೆಯಲಿಕ್ಕೆ ಯಾಕೋ ಮನಸ್ಸಿಲ್ಲ. ಆದ್ರೂ ಚಿತ್ರವನ್ನಾದ್ರೂ ಇಲ್ಲಿ ಲಗತ್ತಿಸೋಣ ಅನ್ನಿಸ್ತು ಅದಕ್ಕೆ ಹೀಗೆ.



ತುಂಗ ಭದ್ರೆಯರ ಸಂಗಮ ಕೂಡ್ಲಿ

ಶಾರದಾ ಪೀಠದ ಆವರಣದ ಬಳಿಯಿರುವ ದೇವಳ



ಕೂಡ್ಲಿಯಿಂದ ಹಿಂತಿರುಗುವಾಗ



ಗುಡವಿ ದಾರಿಯಲ್ಲಿ


ಗುಡವಿ ಪಕ್ಷಿಧಾಮದಲ್ಲಿ


ಹತ್ತಿಯ ಉಂಡೆಗಳಂತೆ ಹಕ್ಕಿಗಳು


ಮಧುಕೇಶ್ವರನ ದ್ವಾರಪಾಲಕ



ಮಳೆಯಲ್ಲಿ ತೋಯ್ದ ಮಧುಕೇಶ್ವರ ದೇವಳ


ಗೋಪುರ


ಬನವಾಸಿಯಲ್ಲಿರುವ ಅಪರೂಪದ ತ್ರೀಲೋಕ ಮಂಟಪ



ಮಳೆಯಲ್ಲಿ ಒದ್ದೆಯಾದ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ರಸ್ತೆಗಳು



ದಾರಿಯಲ್ಲಿ ಸಿಕ್ಕ ಪ್ರತಿಯೊಂದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದವು



ಸ್ವರ್ಣವಲ್ಲಿ ಮಠದ ಬಳಿಯಿರುವ ಶಾಲ್ಮಲೆ


ಉಂಚಳ್ಳಿ ಜಲಪಾತ, ೩ ನೇ ವೀಕ್ಷಣಾ ಗೋಪುರಕ್ಕೆ ಇಳಿಯಲು ಅಸಾಧ್ಯವಾದಂತ ಮಳೆಯಲ್ಲಿ


ಅಘನಾಶಿನಿಯ ಸೇತುವೆಯ ಮೇಲೆ ನಮ್ಮ ತಂಡ


ಶನಿವಾರ ಅಣೆಕಟ್ಟಿನಿಂದ ನೀರು ಬಿಟ್ಟಿದ್ದರ ಪರಿಣಾಮವಿರಬೇಕು, ಜೋಗಿನ ತುಂಬಾ ಬರೀ ಮಂಜು

ಉಕ್ಕಿ ಹರಿದ ಅಘನಾಶಿನಿ ಸೇತುವೆಯ ಮೇಲೆ ಹರಿಯುತ್ತಿದ್ದರಿಂದ ೧೦ ನಿಮಿಷ ನೀರಿನ ಮಟ್ಟ ಇಳಿದ ನಂತರವಷ್ಟೆ ಹೊರಟಿದ್ದು.



೩ ದಿನ ಮುಂಚೆ ಅನಿಲ್, ರಾಘು ಮತ್ತು ರಾಮಶೇಷನ್ ಜೊತೆ ಬಂದಾಗ ಇಲ್ಲಿ ಕುಳಿತಿದ್ದು ಈಗ ಸಹಾಯವಾಯ್ತು

ಕೋಗಾರು ಭಟ್ಕಳ ರಸ್ತೆಯಲ್ಲಿ ಸಿಕ್ಕ ಝರಿ, ಹಿಂದಿನ ದಿನ ಬಿದ್ದ ಮಳೆಯಿಂದಾಗಿ ಎಲ್ಲೆಲ್ಲೂ ಜಲಧಾರೆಗಳು ಮೈದುಂಬಿ ಹರಿಯುತ್ತಿದ್ದವು



ಚನ್ನೆಕಲ್ ಜಲಪಾತ


ಅರವಿಂದ್, ರಾಘವೇಂದ್ರ ಶರ್ಮ ಮತ್ತು ರಾಜೇಶ್ ನಾಯಕ್ ಅವರ ಬ್ಲಾಗ್ ಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಿಂದ ಈ ಜಲಪಾತಕ್ಕೆ ಹೋಗಿದ್ದು


ಭೀಮೇಶ್ವರ ದೇವಸ್ಥಾನದ ಬಳಿಯ ಜಲಪಾತ



ಭೀಮೇಶ್ವರದ ಬಳಿಯ ಹೊಳೆ


*****ಚಂಡೆಮನೆ ಜಲಪಾತ******

ಅಕ್ಟೋಬರ್ ೨, ೩ ಮತ್ತು ೪ ರಂದು ಇದ್ದ ರಜಾ ಸಮಯದಲ್ಲಿ ಮಾಡಿದ ಪ್ರವಾಸದ ಚಿತ್ರಗಳಿವು. ಸಾಗರದಲ್ಲಿ ಉಳಿದು ಅಲ್ಲಿಂದ ೩ ರಂದು ಗುಡವಿ, ಬನವಾಸಿ ಸ್ವರ್ಣವಲ್ಲಿ ಮತ್ತು ಉಂಚಳ್ಳಿ ಜೋಗ ನೋಡಿದ ನಂತರ ಸಾಗರಕ್ಕೆ ಹಿಂತಿರುಗಿ ಮರುದಿನ ಜೋಗ,ಕೋಗಾರು ಭಟ್ಕಳ ರಸ್ತೆಯಲ್ಲಿರುವ ಮಳೆಗಾಲದ ಜಲಪಾತಗಳಾದ ಚಂಡೆಮನೆ, ಚನ್ನೆಕಲ್ ನಂತರ ಭೀಮೇಶ್ವರಕ್ಕೆ ನಡೆದು ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಹಿಂತಿರುಗಿ ಬಂದು ಅಂದೆ ರಾತ್ರಿ ೯ ಘಂಟೆಗೆ ಬೆಂಗಳೂರು ತಲುಪಿದೆ.

ನನ್ನ ಸ್ನೇಹಿತ ರಘು, ಸ್ವರ್ಣವಲ್ಲಿಗೆ ಹೋಗಿದ್ದೆ ಅಂತ ಚಾಮರಾಜ ಪೇಟೆಯಿಂದ ಬಸವನಗುಡಿಗೆ ಹೋಗಿ ಬಂದಹಾಗೆ ಹೇಳ್ತಿಯಿದ್ದಲ್ಲೊ ಅಂತ ಒಳ್ಗೊಳ್ಗೆ ನಗ್ತಿದ್ದ. ಅದೇನು ವ್ಯಂಗ್ಯದ ನಗುವೊ? ಆಶ್ಚರ್ಯದ್ದೊ? ತಿಳಿಯಲಿಲ್ಲ ಅದಕ್ಕೆ ಈ ಬರಹ

Tuesday, September 1, 2009

ಮಲ್ಲಳ್ಳಿ ಮತ್ತು ಮೂಕನ ಮನೆ ಪ್ರವಾಸ

ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ ಬಂದಿದ್ದ ಅತಿಥಿ ಸಂಪದದ ಮೂಲಕ ಪರಿಚಯವಾದ ಹಾಸನದಲ್ಲಿ ನೆಲೆಸಿರುವ ಹರಿಹರಪುರ ಶ್ರೀಧರ್ ಅವರಿಂದ ಇನ್ನೂ ಹೆಚ್ಚು ಮಾಹಿತಿ ಕಲೆಹಾಕಲು ಯತ್ನಿಸಿದಾಗ ಅವರಿತ್ತದ್ದು ದಾಸೇಗೌಡರ ದೂರವಾಣಿ ಸಂಖ್ಯೆ.

ಚೆನ್ನಾಗಿದೆ ಸಾರ್ ಹೋಗ್ಬನ್ನಿ ಎನ್ನುವ ದಾಸೇಗೌಡ್ರು ಗೋಪಿಯ ದೂರವಾಣಿ ಸಂಖ್ಯೆಯನ್ನಿತ್ತರು. ಸಂಪರ್ಕಿಸಿದಾಗ ಗೋಪಿಯವ್ರು ಹೇಳಿದ್ದು ಬನ್ನಿ ಸಾರ್, ತುಂಬಾ ಚೆನ್ನಾಗಿದೆ ಮಳೆ ಚೆನ್ನಾಗಿ ಆಗಿರುವುದರಿಂದ ಜಲಪಾತಗಳು ಮೈದುಂಬಿವೆ ಎಂದರು. ನಮ್ಮೂರಿನಲ್ಲೆ ವಸತಿ ಗೃಹವಿದೆ ತಂಗಲು ಸಮಸ್ಯೆಯಿಲ್ಲ. ಇಲ್ಲಿಂದ ಕೇವಲ ೨೦ ಕಿ ಮೀ ದೂರದಲ್ಲಿದೆ ಮೂಕನ ಮನೆಯೆಂದಾಗ ನನಗೆ ಆಗಲೆ ಹೊರಟು ಬಿಡೋಣವೆನಿಸಿತ್ತು ಆದರೆ ಶನಿವಾರ ರಜೆಯಿರುವುದರಿಂದ ಸೂಕ್ತ ಎಂದು ನಿರ್ಧರಿಸಿದೆ.
ಸರಿ ಶುಕ್ರವಾರದವೆರೆಗೂ ಆ ಬಗ್ಗೆ ಯಾರಲ್ಲೂ ಚರ್ಚಿಸಿರಲಿಲ್ಲ ಪ್ರವಾಸ ಹೋಗಲೇ ಬೇಕೆಂಬ ಒತ್ತಡ ಒಂದೆ ಸಮ ಹೆಚ್ಚುತ್ತಿತ್ತು. ಕೆಲಸ, ಬೆಂಗಳೂರಿನ ವಾಹನ ದಟ್ಟಣೆ ಇದೇ ಆಗಿದೆ ಎನ್ನುವ ಪತ್ನಿಯ ಗೊಣಗಾಟಕ್ಕೆ ಆಗಾಗ ಮುಕ್ತಿ ಕೊಡಿಸಲು ಪ್ರವಾಸ ಎನ್ನುವ ಅದ್ಭುತ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಗಸ್ಟ್ ೧೫ ಶನಿವಾರ ಬೆಳಿಗ್ಗೆ ೬ ಗಂಟೆಗೆ ಹೊರಡೋಣ ಎಂದು ತಿಳಿಸಿ ಬೆಳಿಗ್ಗೆ ಎದ್ದಾಗ ಸಮಯ ೬.೩೦. ತಕ್ಷಣ ಗೋಪಿಯವರಿಗೆ ಕರೆ ಮಾಡಿದೆ. ಅವರ ಪತ್ನಿ ತುಂಬಾ ಮಳೆಯಿದೆ ಇಲ್ಲೆಲ್ಲ ನಿನ್ನೆ ಅಂತೂ ಸಿಕಾಪಟ್ಟೆ ಮಳೆ ಬಂತು ಎಂದು ಮಾಹಿತಿಯಿತ್ತರು. ಸರಿ ಮಳೆಯಿದ್ರೆ ಹೊಗೋದು ಬೇಡ ಎಂದವನಿಗೆ ಅಡುಗೆ ಮನೆಯಿಂದ ಮಿಸೈಲ್ಗಳು ಹಾರಿಬರುತ್ತವೆನೋ ಎಂದೆಣಿಸಿದ್ದವನಿಗೆ ಅಂತಾದ್ದೇನೂ ನಡೆಯಲಿಲ್ಲ ಎಂಬ ಸಮಾಧಾನ. ಮುಂದಿನವಾರ ಗೌರಿ ಗಣೇಶ ಹಬ್ಬ ಇನ್ನೆಲ್ಲಿ ಹೋಗಲಿಕ್ಕೆ ಆಗುತ್ತೆ ಎಂಬ ಅಸಮಾಧಾನದ ಮಾತು ಮಾತ್ರ ಬಂದಿದ್ದು.

ಆಗಸ್ಟ್ ೨೨ರ ಶನಿವಾರ ಹೊರಡೋಣ ಎಂದವನಿಗೆ ಪತ್ನಿಯಿಂದ ಬಂದ ಮರು ಪ್ರಶ್ನೆ ಈ ಸರ್ತಿನೂ ಅನಿಶ್ಚಿತತೆಯಿರಲ್ಲ ಅಲ್ವ? ಹರಿಹರಪುರ ಶ್ರೀಧರ್ ಅವರ ಮನೆಗೆ ಭೇಟಿಯಿತ್ತು ನಂತರ ಪ್ರವಾಸ ಮುಂದುವರೆಸುವ, ನಾವೂ ಬರ್ತೀವಿ ಎಂದು ವಾರ ಪೂರ್ತಿ ಆಶ್ವಾಸನೆ ಕೊಟ್ಟು ಕೊನೆ ಕ್ಷಣದಲ್ಲಿ ಕೈ ಎತ್ತಿದ ಸಂಪದಿಗಳು ರಾಕೇಶ್ ಮತ್ತು ವಿನಯ್. ನನ್ಗೆ ಯಾವುದೆ ಕೆಲಸದ ಒತ್ತಡ ಬರದಿದ್ದರೆ ಮಾತ್ರ ಬರ್ತೀನಿ ಎನ್ನುವ ಆಶ್ವಾಸನೆಯಿತ್ತಿದ್ದವರು ಅದರಂತೆ ಕೆಲ್ಸದ ಒತ್ತಡದಿಂದ ಬರಲಾಗುವುದಿಲ್ಲ ಎಂದು ತಿಳಿಸಿದವರು ಭಾಸ್ಕರ್. ಈ ಬಾರಿ ನನ್ನ ಸಹೋದ್ಯೋಗಿಗಳಿಗಾರಿಗೂ ಬೇಕೆಂದೆ ತಿಳಿಸಿರಲಿಲ್ಲ. ಮುಂದಿನ ಬಾರಿ ನಿನ್ಜೊತೆ ಪ್ರವಾಸಕ್ಕೆ ನಾವೂ ಬರ್ತೀವಿ ಎನ್ನುವ ನನ್ನ ಸಹೋದ್ಯೋಗಿ ಮಿತ್ರರು ಪ್ರವಾಸ ಹೊರಟಾಗ ಮಾತ್ರ ನೆಪ ಹೇಳಿ ತಪ್ಪಿಸಿಕೊಳ್ಳುವವರೇ ಆದ್ದರಿಂದ ಅವರ್ಯಾರಿಗೂ ತಿಳಿಸುವ ಗೋಜಿಗೆ ಹೋಗಲಿಲ್ಲ.

೨೯ರ ಶನಿವಾರ ಮಗನನ್ನು ೧೧ ಗಂಟೆಗೆ ಶಾಲೆಯಿಂದ ಕರೆತಂದು ಊಟ ಮಾಡಿ ಮನೆ ಬಿಟ್ಟಾಗ ಸಮಯ ೧.೩೦. ತುಮಕೂರು ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಬದಲಿ ರಸ್ತೆಗಳಲ್ಲಿ ಚಲಿಸಬೇಕಾಗುತ್ತದೆಯೆಂದೆಣಿಸಿ ಹೆಸರಘಟ್ಟ ಮಾರ್ಗ ಹಿಡಿದವನಿಗೆ ಹಳೆದಾರಿಯೇ ಸೂಕ್ತವೆನಿಸಿತ್ತು. ಕರಡಿಗುಚ್ಚಮ್ಮ ದೇವಸ್ತಾನದ ಆವರಣದ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಬಹುತೇಕ ರಸ್ತೆ ಅಗಲೀಕರಣಕ್ಕಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಮಧ್ಯೆ ಹಾಸನ ತಲುಪಿದಾಗ ೪ ಗಂಟೆ. ೨-೩ ಸುತ್ತು ಹೊಡೆದ ನಂತರ ಶ್ರೀಧರ್ ಅವರು ಬಂದು ಮನೆಗೆ ಕರೆದು ಕೊಂಡು ಹೋದರು.

ನನ್ನ ಯೋಜನೆಯಂತೆ ಅಂದೆ ನಾನು ನನ್ನ ಗಮ್ಯವಾದ ಗೋಪಿಯರ ತಿಳಿಸಿದ ವಸತಿ ಗೃಹ ತಲುಪಬೇಕಿತ್ತು. ಆದರೆ ಶ್ರೀಧರ್ ಅವರ ಆತ್ಮೀಯ ಒತ್ತಾಯಕ್ಕೆ ಮಣಿದು ಅವರ ಮನೆಯಲ್ಲಿಯೆ ಉಳಿಯ ಬೇಕಾಯಿತು. ಹಾಸನದ ವಾರಿಗೆಯ ಅಕ್ಕನ ಮನೆಗೆ ಮತ್ತು ಅಕ್ಕನ ಮಗಳ (ಭಾವ ಅನಂತ್ ಮತ್ತು ಆದಿಶೇಷ ಶ್ರೀಧರ್ ಅವರಿಗೂ ಪರಿಚಯವಿದ್ದರಿಂದ) ಮನೆಗೆ ಭೇಟಿಯಿತ್ತೆ. ಶ್ರೀಧರ್ ಅವರ ಮನೆಯ ತಿಳಿಸಾರು ಮಜ್ಜಿಗೆಹುಳಿಯ ಭರ್ಜರಿ ಭೋಜನ ಉದರ ತಣಿಸಿದರೆ, ಅವರ ನಾದಿನಿ ಹಾಡಿದ ಭಾವಗೀತೆಗಳು ಮನ ತಣಿಸಿದವು. ಅಂತಹ ಹೃದಯಸ್ಪರ್ಶಿ ಆತಿಥ್ಯಕ್ಕೆ ನಾವು ಚಿರಋಣಿ ಶ್ರೀಧರ್ ಸಾರ್.

ಬೆಳಗಿನ ಕಾರ್ಯಕ್ರಮದ ನಂತರ ಮಂಗಳ ದ್ರವ್ಯಗಳೊಡನೆ ನಮ್ಮನ್ನು ಬೀಳ್ಕೊಟ್ಟ ಶ್ರೀಧರ್ ಕುಟುಂಬಕ್ಕೆ ಮನದಲ್ಲೆ ವಂದಿಸುತ್ತಾ ಅಲ್ಲಿಂದ ಹೊರಟೆವು. ೨-೩ ಕಿ ಮೀ ನಡೆಯಬೇಕಾಗುತ್ತೆ ಎನ್ನುವ ಗೋಪಿಯವರ ಮಾತಿನಿಂದ ಶ್ರೀಧರ್ ಮತ್ತವರ ಕುಟುಂಬವನ್ನು ಪ್ರವಾಸಕ್ಕೆ ಬನ್ನಿ ಎಂದು ಆಹ್ವಾನಿಸದೆ ಅಲ್ಲಿಂದ ಹೊರಟೆ. ಕೆಟ್ಟು ನಿಂತಿರುವ ರಾಷ್ಟ್ರೀಯ ಹೆದ್ದಾರಿ ನಮ್ಮ ಪ್ರಯಾಣದ ವೇಗವನ್ನು ಮಿತಿಗೊಳಿಸುತ್ತಿತ್ತು. ೮.೩೦ರ ಸಮಯಕ್ಕೆ ಹೊಟ್ಟೆ ಹಸಿತಾಯಿದೆ ಅಪ್ಪ ಎನ್ನುವ ಮಗನ ಮಾತಿಗೆ ಹೌದು ನನಗೂ ಎಂದು ಹೆಂಡತಿ ಕೋರಸ್ ಆರಂಭಿಸಿದಾಗ ಇದ್ದ ಜಾಗದಲ್ಲಿ ವಿಚಾರಣೆ ೨-೩ ಕಿ ಮೀ ಹಿಂದಿರುವ ಸುರಭಿ ನೆಕ್ಸ್ಟ್ ಮಾತ್ರವೇ ಪರಿಹಾರವೆಂದು ಸೂಚಿಸಿತು. ಮತ್ತೆ ಹಿಂತಿರುಗಿ ಬಂದು ಸುರಭಿಯಲ್ಲಿ ತಿಂಡಿ ತಿಂದು ನಮ್ಮ ಪ್ರಯಾಣ ಗೋಪಿಯವರ ಮನೆಯತ್ತ. ದಾರಿಯುದ್ದಕ್ಕೂ ಸಿಗುವ ಹಸಿರು ಹುಲ್ಲುಗಾವಲುಗಳು ಅಲ್ಲಿ ಮೇಯುತ್ತಿರುವ ಹಸುಕರುಗಳ ಕೊರಳಿನ ಘಂಟೆಯ ನಿನಾದ ದೂರದಲ್ಲಿರುವ ಬೆಟ್ಟಗುಡ್ಡಗಳ ಹಸಿರು ಹಿನ್ನೆಲೆ ಮತ್ತೆ ಮತ್ತೆ ವಾಹನ ನಿಲ್ಲಿಸಿ ಅಲ್ಲಿನ ಸೌಂದರ್ಯ ಸವಿಯೋಣವೆನಿಸುತ್ತದೆ. ಹೀಗೆ ಮುಂದುವರೆದರೆ, ಇಂದೆ ಬೆಂಗಳೂರಿಗೆ ಹಿಂತಿರುಗುವ ನಮ್ಮ ಯೋಜನೆ ವಿಫಲವಾಗುತ್ತದೆ ಎಂಬ ಭಯ ಬೇರೆ. ರಸ್ತೆ ಬದಿಯುದ್ದಕ್ಕೂ ಹರಿಯುವ ಜುಳುಜುಳು ನೀರು ಅದನ್ನಾಧರಿಸಿ ಬೆಳೆದು ನಿಂತ ಹಸಿರು ಪೈರು ಸ್ವಚ್ಛಂದವಾಗಿ ಬೀಸುವ ಶುದ್ದ ಗಾಳಿ ಹಕ್ಕಿ ಪಕ್ಷಿಗಳ ಕಲರವ ಕಣ್ಣು ಹಾಯಿಸಿದಷ್ಟು ಕಾಣುವ ಹಸಿರು ಜನಗಳೆ ಓಡಾಡದ ರಸ್ತೆಗಳು ಎಂತಹವರನ್ನು ಕವಿಯನ್ನಾಗಿಸುತ್ತವೆಯೆನೋ?

ಸಮಯದ ಪರಿವೆಯೇ ಇಲ್ಲದೆ ಆ ಹಸಿರು ಸೌಂದರ್ಯವನ್ನು ಕಣ್ಣುಗಳಿಗೆ ತುಂಬಿಕೊಳ್ಳುತ್ತಾ ವಾಹನ ಚಲಾಯಿಸುವುದು ನನಗೆ ಅತ್ಯಂತ ಸಂತಸದ ವಿಚಾರ. ಗೋಪಿಯವರ ಮನೆ ವಿಚಾರಿಸಿದಾಗ ಅವ್ರ ಮಗ ಅವ್ರು ಹಾಸನಕ್ಕೆ ಹೋಗಿದ್ದಾರೆ ನಾನೇ ಹೇಳ್ತಿನಿ ಹೇಗೆ ಹೋಗ್ಬೇಕೂಂತ ಎಂದು ತಿಳಿಸಿದರು ಅವರ ಹೋಟೆಲ್ನಲ್ಲಿ ಟೀ ಕುಡಿದು ಅವರ ಮಾರ್ಗದರ್ಶನ ಮತ್ತು ಯೋಜನೆಯಂತೆ ಮಲ್ಲಳ್ಳಿ ಜಲಪಾತದ ಕಡೆಗೆ ವಾಹನ ತಿರುಗಿಸಿದೆ. ಅಲ್ಲಲಿ ಸಿಗುವ ರಸ್ತೆಯ ಕವಲುಗಳಲ್ಲಿ ಸರಿಯಾದ ದಾರಿ ತಿಳಿದುಕೊಳ್ಳಲು ಯಾರೂ ಸಿಗುತ್ತಿರಲಿಲ್ಲ ಆದರೂ ಎಲ್ಲಿಯೂ ದಾರಿ ತಪ್ಪದೇ ನಮ್ಮ ವಾಹನ ಓಡುತ್ತಿತ್ತು. ಹಿಂದೊಮ್ಮೆ ಈ ರಸ್ತೆಯಲ್ಲಿ ಪುಷ್ಪಗಿರಿಗೆ ಬಂದಿದ್ದರಿಂದ ಸ್ವಲ್ಪ ಪರಿಚಿತವೆನಿಸುತ್ತಿದ್ದದ್ದು ಇದಕ್ಕೆ ಸಹಾಯಕವಾಗಿತ್ತು.
ಕೊನೆಗೊಮ್ಮೆ ಘಟ್ಟದ ರಸ್ತೆಯಲ್ಲಿನ ಡಾಂಬರು ಮಾಯವಾಗಿ ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಾ ನಡೆಯಿತು ನಮ್ಮ ಪಯಣ. ಅಲ್ಲಲ್ಲಿ ಮಳೆ ನೀರು ನಿಂತು ಹಳ್ಳದಂತೆ ಕಾಣಿಸಿದ ಕಡೆ ವಾಹನದಿಂದಿಳಿದು ಕೋಲಿನಿಂದ ಅದರ ಆಳ ಪರೀಕ್ಷಿಸಿ ನಂತರ ಹೋಗುವುದು ಸುರಕ್ಷಿತವೆಂದು ತಿಳಿದು ಅದರಂತೆ ನಡೆದೆ. ಸುಮಾರು ೩ ಕಿ ಮೀ ನಂತರ ಇನ್ನು ವಾಹನ ಮುಂದೆ ಹೋಗುವುದು ಸಾಧ್ಯವಿಲ್ಲವೆಂದು ಅರಿತಾಗ ಅಲ್ಲಿಯೇ ವಾಹನ ನಿಲ್ಲಿಸಿ ನಡೆಯುತ್ತಾ ಹೊರಟೆವು. ಇಡೀ ಪ್ರದೇಶ ನಿರ್ಜನವಾಗಿತ್ತು. ಬರೀ ಕೀಟಗಳ ಝೇಂಕಾರ ಹಕ್ಕಿಗಳ ಚಿಲಿಪಿಲಿ ಮಾತ್ರವೇ ಕೇಳಿಸುತ್ತಿತ್ತು. ದಾರಿಯುದ್ದಕ್ಕೂ ಕಾಡುಹೂಗಳು ಹಸಿರು ಬಣ್ಣದ ಕಾಡಿಗೆ ಬಗೆಬಗೆಯ ಬಣ್ಣದ ಮೆರಗು ತಂದಿತ್ತಿದ್ದವು. ಹೂವಿನಲ್ಲಿರುವ ನಕ್ಷತ್ರ ಮನಸೆಳೆಯಿತು. ಜೀಪ್ ಹೋಗಬಹುದಾಗಿದ್ದ ದಾರಿಯಾದರಿಂದ ಎಲ್ಲಿಯೂ ದಾರಿತಪ್ಪುವ ಆತಂಕವಿರಲಿಲ್ಲ.

೧೫ ನಿಮಿಷದ ನಡಿಗೆ ನಮ್ಮನ್ನು ಹಸಿರಿನಿಂದ ಕೂಡಿದ ತೆರೆದ ಬಯಲಿಗೆ ಕರೆ ತಂದಿತ್ತು. ಕಲ್ಲಿನ ರಾಶಿಯ ಮೇಲೆ ಕೊಡೆ ಹಿಡಿದು ಕುಳಿತಿದ್ದ ವ್ಯಕ್ತಿಯಯೊಬ್ಬ ನಮ್ಮನ್ನು ನೋಡಿದೊಡನೆ ಎದ್ದು ಬಂದು ವಂದಿಸಿ ಪರಿಚಯ ಮಾಡಿಕೊಂಡರು. ಅಲ್ಲಿನ ಪ್ರದೇಶಗಳನ್ನೆಲ್ಲ ಸ್ಥೂಲವಾಗಿ ತಿಳಿಸಿದ ವಿಜಯ್ ಕುಮಾರ್ ನಮ್ಮೊಡನೆ ಜಲಪಾತದೆಡೆಗೆ ನಡೆದರು. ಮೊದಲ ನೋಟದಲ್ಲೆ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ ದೂರದಲ್ಲಿ ಧುಮ್ಮಿಕ್ಕುವ ಕುಮಾರಧಾರ. ಮೇಲಿನಿಂದ ಯಾರೋ ಹಾಲನ್ನು ಚೆಲ್ಲುತ್ತಿದ್ದಾರೆಂಬಂತೆ ಬೆಳ್ಳಗೆ ಬಂಡೆಗಳ ಮೇಲಿನಿಂದ ಹರಿಯುವ ಪರಿ ಸುಂದರ. ಎದುರಿಗೆ ನಿಸರ್ಗ ನಿರ್ಮಿತ ವೀಕ್ಷಣಾಗೋಪುರದಂತಿರುವ ಬಂಡೆಯ ಬದಿ ನಿಂತು ನೋಡುವುದೇ ಚೆಂದ. ಬಹುಶಃ ಸುತ್ತಲೂ ಇರುವ ಹಸಿರು ಮಧ್ಯದಲ್ಲಿ ಹಾಲ್ನೊರೆಯಂತೆ ಬೀಳುವ ಜಲಧಾರೆಗೆ ಮೆರುಗು ತಂದಿರಬೇಕು. ೬೦-೭೦ ಅಡಿಗಳಷ್ಟು ಕೆಳಗಿಳಿಯುತ್ತಾ ಹೋದಂತೆಲ್ಲ ಜಲಧಾರೆಯ ಸೌಂದರ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ. ಜಲಧಾರೆಯವರೆಗೂ ಹಸಿರು ಹಬ್ಬಿರುವುದು ಈ ಜಲಪಾತದ ವಿಶೇಷಗಳಲ್ಲೊಂದು ಆದ್ದರಿಂದಲೇ ಹಾಲಿನ ಬಣ್ಣದ ನೀರಿಗೆ ಹಸಿರು ಬಣ್ಣದ ಹಿನ್ನೆಲೆ ಇರುವುದರಿಂದ ಜಲಪಾತದ ಸೌಂದರ್ಯ ಇಮ್ಮಡಿಸಿದೆಯೆನಿಸುತ್ತದೆ.

ಹೆಚ್ಚೇನು ಜನ ಬರಲ್ಲ ಸಾರ್, ಎನ್ನುವ ವಿಜಯ್ ಕುಮಾರ್ ಮಾತಿನಲ್ಲಿ ಹೊಟ್ಟೆಪಾಡು ಎದ್ದು ಕಾಣುತ್ತದೆ. ಜನ್ಮತಃ ವಿಕಲಾಂಗತೆಯಿರುವ ವಿಜಯ್ ಬಗ್ಗೆ ಅನುಕಂಪ ಮೂಡುತ್ತದೆ. ಅದಕ್ಕಾಗಿ ನಾವೇನು ಆತನಿಗೆ ಹಣ ಕೊಡಬೇಕಾಗಿಲ್ಲ ಆತ ಅಲ್ಲಿನ ಪರಿಸರವನ್ನು ಶುಚಿಕೊಳಿಸಿದ್ದು ನೋಡಿ ಮನ ತುಂಬಿ ಬರುತ್ತದೆ. ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ವಸ್ತುಗಳೆಲ್ಲವನ್ನೂ ಒಂಡೆಡೆ ಗುಡ್ಡೆ ಹಾಕಿ ಅವನ್ನು ಸಾಗಿಸುವುದು ಅವರ ನಿತ್ಯ ಕಾಯಕಗಳಲ್ಲೊಂದು. ಸಾರ್, ಇಲ್ಲಿಂದ ಜಲಪಾತ ಧುಮುಕುವ ಜಾಗಕ್ಕೆ ದಾರಿಯಿದೆ ಹೋಗಿ ಸಾರ್ ಎನ್ನುವ ಮೃದುಭಾಷಿ ವಿಜಯ್ ಆತ್ಮೀಯನಂತೆ ವರ್ತಿಸುವುದು ಖುಷಿ ತರಿಸುತ್ತದೆ.

ಆತನ ಮಾತಿನಂತೆ ಕೆಳಗಿಳಿದು ಹೊರಟವರಿಗೆ ೫ ನಿಮಿಷದಲ್ಲಿ ಕುಮಾರಧಾರ ಸಿಕ್ಕಿತು. ಈಗಾಗಲೆ ಅಲ್ಲಿ ಇಬ್ಬರು ನದಿಯಲ್ಲಿ ಆಟವಾಡುತ್ತಿದ್ದರು. ಜಲಪಾತ ಉಂಟಾಗುವ ಎಷ್ಟೋ ಸ್ಥಳಗಳನ್ನು ನಾನು ನೋಡಿದ್ದೇನೆ ಆದರೆ ಈ ಸ್ಥಳದಷ್ಟು ಯಾವುದೂ ನನಗೆ ಇಷ್ಟೊಂದು ಅಪ್ಯಾಯವೆನಿಸಿರಲಿಲ್ಲ. ಧ್ಯಾನಕ್ಕೆ ಕುಳಿತವರಂತೆ ನಾವು ಮೂವರು ಆ ಸ್ಥಳದ ಸೌಂದರ್ಯವನ್ನು ಆಸ್ವಾದಿಸುತ್ತಾ ಕುಳಿತವರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಎಷ್ಟು ಬಾರಿ ಬೆಳಕಿನ ಬೋನನ್ನು ಮುಟುಕಿಸಿದರೂ ತೃಪ್ತಿಯಿರಲಿಲ್ಲ. ನೀರಿಗಿಳಿದು ೩ ಮುಳುಗು ಹಾಕಿ ಅಲ್ಲಿಂದ ಹೊರಟೆವು. ಹಿಂತಿರುಗಿ ಬರುವಾಗ ದಾರಿಯಲ್ಲಿ ಸಿಕ್ಕ ನಾಗರಿಕ ಮಾನವನ ಕುರುಹಾದ ಮದ್ಯದ ಶೀಷೆಗಳು ಬಿದ್ದದ್ದು ಗಮನಕ್ಕೆ ಬಂತು. ಬಹುಷಃ ವಿಜಯ್ ಇಲ್ಲಿವರೆಗು ನಡೆದು ಬರಲಾಗಿಲ್ಲವಾದ್ದರಿಂದ ಅವು ಇಲ್ಲಿ ಉಳಿದಿರಬಹುದು ಅದನ್ನು ಹೊರತು ಪಡಿಸಿ ಉಳಿದಂತೆ ಇನ್ನು ಸ್ವಚ್ಚತೆ ಕಾಪಾಡಿಕೊಂಡಿರುವುದು, ಬಹುಶಃ ಸ್ಥಳ ಇನ್ನೂ ಹೆಚ್ಚು ಪ್ರಸಿದ್ದಿಗೆ ಬರದಿರುವುದರಿಂದ ಕಾರಣವಿರಬೇಕು.
ನನಗೆ ಇದುವರೆವಿಗೂ ಅರ್ಥವಾಗದ ಸಂಗತಿಯೆಂದರೆ ಇಂತಹ ಸ್ಥಳಗಳಲ್ಲಿ ಬಂದು ಕುಡಿಯುವ ಅಗತ್ಯವೇನು ಎಂಬುದು. ನನ್ನ ಕೆಲವು ಸ್ನೇಹಿತರ ಸಮರ್ಥಿಸಿಕೊಳ್ಳುವುದು ಪ್ರಕೃತಿಯ ಮಡಿಲಿನಲ್ಲಿ ನಶೆ ಹೆಚ್ಚು ಏರುತ್ತದೆ ಎನ್ನುವುದು. ಹೇಗೆ ಸಾಧ್ಯ ಮದ್ಯದಲ್ಲಿಲ್ಲದ ನಶೆ ಪ್ರಕೃತಿಯದೆ? ಪ್ರಕೃತಿಯೇ ನಶೆ ಏರಿಸುವಷ್ಟು ಸುಂದರವಾಗಿದ್ದರೆ ಈ ಮದ್ಯದ ಅವಶ್ಯಕ್ಯಾತೆ ಏಕೆ? ಪ್ರಕೃತಿಯ ನಶೆ ಸಾಕಲ್ಲವೆ? ಊಹೂಂ ಇನೂ ಅರ್ಥವಾಗಿಲ್ಲ. ನಿಮಗೇನಾದ್ರೂ ಗೊತ್ತಿದ್ರೆ ತಿಳಿಸಿ.

ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆಯಲು ಆರಂಭಿಸಿದೆವು. ಪುಷ್ಪಗಿರಿ ದೇವಸ್ತಾನಕ್ಕೆ ಹೋಗಿ ಎಂದ ವಿಜಯ್ಗೆ ಈಗಾಗಲೆ ನೋಡಿದ್ದೇನೆ ಎಂದು ತಿಳಿಸಿದೆ. ಈಗ ದೇವಸ್ತಾನದವರೆಗೂ ರಸ್ತೆಯಿದೆ ತುಂಬಾ ಚೆನ್ನಾಗಿದೆ ಹೋಗ್ಬನ್ನಿ ಎಂದರು. ನಾವು ಇನ್ನೂ ಒಂದು ಜಲಪಾತ ವೀಕ್ಷಿಸ ಬೇಕಿರುವುದರಿಂದ ಆಗುವುದಿಲ್ಲವೆಂದು ತಿಳಿಸಿ ವಿಜಯ್ಗೊಂದು ಧನ್ಯವಾದ ತಿಳಿಸಿ ಹಿಂತಿರುಗಿ ನಡೆದು ವಾಹನ ಏರಿ ಮೂಕನ ಮನೆ ಜಲಪಾತದ ಕಡೆಗೆ ಹೊರಟೆವು. ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಕೆರೆ ಗಮನ ಸೆಳೆಯಿತು. ನೀರಿಗಿಳಿದು ಈಜುವ ಮನಸ್ಸಾದರೂ ಸಮಯದ ಅಭಾವದಿಂದ ಹಾಗೆ ಮಾಡಲಾಗಲಿಲ್ಲ. ೪ ವರ್ಷದ ಹಿಂದೆ ನೀರೆಂದರೆ ಭಯ ಬೀಳುತ್ತಿದ್ದ ಅಮಿತ್ ಈಗೆಲ್ಲ ನೀರು ಕಂಡರೆ ಸಾಕು ಅಪ್ಪಾ ಈಜೋಣ ಎನ್ನುವುದು ಮುಗುಳ್ನಗೆ ತರಿಸುತ್ತದೆ

ಅವರಿವರನ್ನು ಕೇಳಿಕೊಂಡು ನಾವು ಮೂಕನ ಮನೆ ಜಲಪಾತದ ಕಡೆ ತೆರಳುತ್ತಿದ್ದಾಗ ಅತ್ಯಂತ ಇಳಿಜಾರಿನಲ್ಲಿ ವಾಹನ ಇಳಿಸಬಾರದಿತ್ತು ಆದರೆ ಗಮನಿಸದೆ ಇಳಿಸಿದಾಗ ಅರಿವಾದದ್ದು ಆಗಿ ಹೋದ ತಪ್ಪು. ಸುಮಾರು ೧೦೦ ಮೀಟರ್ಗಳಿಗೂ ಹೆಚ್ಚು ಉದ್ದವಿರುವ ಒಂದೆ ದಿಬ್ಬವನ್ನು ಇಳಿಸಲು ಆರಂಭಿಸಿದ್ದೆ ಮಧ್ಯೆ ಕಾರು ಕೊರಕಲಿಗೆ ಇಳಿದಿತ್ತು. ಹೆಂಡತಿ ಮತ್ತು ಮಗನ ಮುಖದಲ್ಲಿ ಆತಂಕ ಮಡುಗಟ್ಟುತ್ತಿತ್ತು. ಗಾಭರಿಯಾಗಲಿಲ್ಲ ಘಟಿಸಿದ ಮೇಲೆ ಯೋಚ್ನೆ ಮಾಡಿ ಪ್ರಯೋಜನವಿಲ್ಲ. ಮುಂದೆ ಏನ್ಮಾಡ್ಬೇಕು ಎನ್ನುವುದನ್ನು ಯೋಚಿಸುತ್ತಾ ಕಾರಿನ ಜ್ಯಾಕ್ನಿಂದ ಚಕ್ರವನ್ನು ಮೇಲೆತ್ತಿ ಚಕ್ರದ ಕೆಳಗೆ ಕಲ್ಲಿಟ್ಟು ವಾಹನವನ್ನು ದಾರಿಗೆ ತಂದು ಕೆಳಗಿಳಿಸಿದೆ. ಏಕೆಂದರೆ ಮತ್ತೆ ಹಿಂತಿರುಗುವ ಹಾಗಿರಲಿಲ್ಲ. ಕೆಳಗೆ ವಾಹನ ನಿಲ್ಲಿಸಿ ಅಲ್ಲೆ ಹಿಂದಿನ ದಿನ ಕಳೆದು ಹೋಗಿದ್ದ ದನ ಹುಡುಕಿ ಕೊಂಡು ಹಿಂತಿರುಗುತ್ತಿದ್ದ ವ್ಯಕ್ತಿ ವಿಶ್ವನಾಥ್ ಜಲಪಾತದೆಡೆಗೆ ಹೋಗಲು ಸಹಾಯ ಕೇಳಿದಾಗ ಬನ್ನಿ ನಾನೇ ಕರ್ಕೊಂಡು ಹೋಗ್ತೀನಿ ಎಂದು ಸಿಕ್ಕಿದ್ದ ಎತ್ತನ್ನು ಮೇಯಲು ಬಿಟ್ಟು ನಮ್ಮೊಡನೆ ಹೆಜ್ಜೆ ಹಾಕಿದರು. ಮುಕ್ತಿಹೊಳೆಯ ದಂಡೆಯಲ್ಲೆ ಮಳೆಯಿಂದ ಒದ್ದೆಯಾಗಿ ಜಾರುತ್ತಿದ್ದ ಬಂಡೆಗಳ ಮೇಲೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಒಬ್ಬರಿಗೆ ಒಬ್ಬರು ಆಸರೆಯಾಗಿ ಜಲಪಾತದೆಡೆಗೆ ತೆರಳಿದೆವು. ಕಾಲಲ್ಲಿ ಜಿಗಣೆಗಳು ಹಿಡಿದರೂ ( ಅಭ್ಯಾಸವಾಗಿ ಹೋಗಿದೆ) ತಲೆ ಕೆಡಿಸಿಕೊಳ್ಳದೆ ೧೫ ಅಡಿಗಳಷ್ಟೆ ದೂರದಲ್ಲಿದ್ದ ಜಲಪಾತದ ಜಾಗಕ್ಕೆ ತಲುಪಿದೆವು. ೧೫-೨೦ ಅಡಿಯಿಂದ ಧುಮುಕುವ ಜಲಪಾತ ನದಿಪಾತ್ರದ ಉದ್ದಕ್ಕೂ ಹರಡಿದೆ. ನಿಜಕ್ಕೂ ನಾನು ಅಂತರ್ಜಾಲದಲ್ಲಿ ನೋಡಿ ಹೊರಟು ಬಂದಿದ್ದಕ್ಕೂ ಇದಕ್ಕೂ ಏನೂ ಸ್ವಾಮ್ಯವಿರಲಿಲ್ಲ. ಆದರೂ ಸಕ್ಕತ್ತಾಗಿರುವ ಜಲಪಾತ. ಬೇಸಿಗೆಯಲ್ಲಿ ಜಲಪಾತದಡಿಗೆ ಹೋಗಬಹುದು ಎಂದು ವಿಶ್ವನಾಥ್ ತಿಳಿಸಿದರು. ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಈ ಜಲಪಾತ ಮುಳುಗಡೆಯಾಗಲಿದೆ ಎಂಬ ವಿಷಯ ನೋವನ್ನುಂಟು ಮಾಡಿತು. ಅಭಿವೃದ್ಧಿಯೆಂಬ ಹೆಮ್ಮಾರಿಗೆ ಅದಿನ್ನೆಷ್ಟು ಪ್ರಕೃತಿ ಬಲಿಯಾಗಬೇಕಿದೆಯೋ?

ಪತ್ನಿ ಮತ್ತು ಪುತ್ರನನ್ನು ಜಲಪಾತವುಂಟಾಗುತ್ತಿದ್ದ ಸ್ಥಳದಲ್ಲೇ ಬಿಟ್ಟು, ನಾನು ಮತ್ತು ವಿಶ್ವನಾಥ್ ಇನ್ನೂ ಕೆಳಕ್ಕಿಳಿದು ಜಲಪಾತದ ಮುಂದೆ ನಿಂತೆವು. ಒಂದೆರಡು ಚಿತ್ರ ತೆಗೆಯುವಷ್ಟರಲ್ಲಿ ಕತ್ತಲಾಗುವಂತೆ ಮೋಡಗಳು ಮುಸುಕಿಕೊಳ್ಳಲಾರಂಭಿಸಿದವು. ಮಳೆ ಬರುವಷ್ಟರಲ್ಲಿ ವಾಹನ ಸೇರಿಕೊಳ್ಳುವ ಸಲುವಾಗಿ ಹಿಂತಿರಿಗುವಾಗ ೭-೮ ಜನ ಹುಡುಗರ ಗುಂಪು ಎದುರಾಯಿತು. ಉಭಯಕುಶಲೋಪರಿಯ ನಂತರ ಅವರಿಗೆ ನನ್ನ ಕಾರು ಮೇಲೆ ಹತ್ತದಿದ್ದರೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡು ಕಾರಿನತ್ತ ತೆರಳಿದೆ. ಈಗ ಇತ್ತು ಸರ್ಕಸ್. ಸುಮಾರು ೫೦ ಮೀಟರ್ ನಂತರ ಸಿಕ್ಕ ಆ ದಿಬ್ಬವನ್ನು ಹತ್ತಲಾರದೆ ನನ್ನ ವಾಹನ ಅಡ್ಡ ಸಿಕ್ಕಿ ಹಾಕಿ ಕೊಂಡಿತು. ಹಿಂಬದಿಯ ಚಕ್ರ ಕಲ್ಲುಗಳನ್ನಿಡುತ್ತಿದ್ದ ಅಮಿತ್ ಮತ್ತು ಚಿತ್ರ ಮುಖದಲ್ಲಿ ಗಾಭರಿ ಸ್ಪಷ್ಟವಾಗಿತ್ತು. ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿ ಮತ್ತೆ ಮತ್ತೆ ಪ್ರಯತ್ನಿಸಿದೆ. ಈಗಾಗಲೆ ಮಳೆ ಭೋರೆಂದು ಸುರಿಯುತ್ತಾ ನಮ್ಮ ಪ್ರಯತ್ನ ಮತ್ತಷ್ಟು ಕ್ಲಿಷ್ಟವಾಗಿಸಿತು.ಚಕ್ರ ನಿಂತಲ್ಲೆ ತಿರುಗುತ್ತಿತ್ತು. ಕೊನೆಗೊಮ್ಮೆ ಆ ಹುಡುಗರನ್ನು ಕರೆ ತರಲು ಚಿತ್ರ ನಡೆದಳು. ಅವರು ಬರುವಷ್ಟರಲ್ಲಿ ಮತ್ತಷ್ಟು ಪ್ರಯತ್ನಿಸಿದ್ದರಿಂದ ಕಾರಿನ ಬ್ರೇಕುಗಳು ಮತ್ತು ಕ್ಲಚ್ ವಾಸನೆ ಬರಲು ಆರಂಭಿಸಿತು. ಆ ಸಮಯಕ್ಕೆ ನಡೆದು ಬಂದ ಹುಡುಗರು ನೀವು ಕೆಳಕ್ಕಿಳಿಯಿರಿ ಎಂದು ತಿಳಿಸಿ ಅವರಲ್ಲೊಬ್ಬ ಚಾಲಕನಾಗಿ ಮಿಕ್ಕವರು ಹಿಂದಿನಿಂದ ತಳ್ಳಿ ಮೇಲಕ್ಕೆ ತಂದಿತ್ತರು. ಅವರ ಈ ಸಹಾಯ ಅವಿಸ್ಮರಣೀಯ. ಮೇಲೆ ತಳ್ಳುವ ಭರದಲ್ಲಿ ಆ ಹುಡುಗರಲ್ಲೊಬ್ಬರ ಚಪ್ಪಲಿ ಕಿತ್ತುಹೋಯಿತು. ಪಾಪ ಆತ ಬರಿಗಾಲಿನಲ್ಲಿ ಊರು ಸೇರಬೇಕಾದದ್ದು ಅದೂ ನನ್ನಿಂದ ತುಂಬಾ ಬೇಜಾರಿನ ಸಂಗತಿ.

ಮೇಲಕ್ಕೆ ಬಂದ ಮೇಲೆ ಚಾಲಕನ ಸ್ಥಾನದಲ್ಲಿದ್ದ ಆ ವ್ಯಕ್ತಿ ಸಾರ್, ಕ್ಲಚ್ ಮತ್ತು ಬ್ರೇಕ್ ಬಿಸಿಯಾಗಿ ತುಂಬಾ ವಾಸನೆ ಬರ್ತಾ ಇದೆ ಟೈರ್ಗಳಂತೂ ೫೦೦೦ ಕಿ ಮೀ ಓಡುವಷ್ಟು ಸವೆದಿವೆ ಎಲ್ಲಾದರೂ ಒಂದರ್ಧ ಗಂಟೆ ವಾಹನದ ಬಿಸಿ ಆರುವವರೆಗೆ ನಿಂತು ಹೋಗಿ ಎಂದು ಸಲಹೆಯಿತ್ತರು ಈಗಾಗಲೆ ಸಮಯ ೪ ಗಂಟೆಯಾಗಿತ್ತು. ನಾವು ಇಂದೆ ಬೆಂಗಳೂರು ತಲುಪ ಬೇಕಿತ್ತು. ಮಳೆ ಮಾತ್ರ ಭೋರೆಂದು ಸುರಿದೇ ಸುರಿಯುತ್ತಿತ್ತು. ಅಲ್ಲೊಂದು ಕೈಮರದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿ ತನ್ನನ್ನು ಕರೆದೊಯ್ಯುವಂತೆ ವಿನಂತಿಸಿ ಕೊಂಡವನನ್ನು ಕೂರಿಸಿಕೊಂಡು ಹೊರಟೆ. ಆತನ ೩೦ ಎಕರೆ ಏಲಕ್ಕಿ ತೋಟ ಮುಳುಗಡೆಯಾಗುತ್ತಿದೆ ಎಂದು ದುಃಖಿಸಿದರು. ನಾವು ಆದಷ್ಟು ಬೇಗ ಬೆಂಗಳೂರು ತಲುಪ ಬೇಕಿತ್ತು ಆದರೂ ಸಹಾಯ ಮಾಡಿದ ಆ ಚಾಲಕನ ಸಲಹೆಯಂತೆ ೧೦ ನಿಮಿಷಗಳ ವಿಶ್ರಾಂತಿಯ ನಂತರ ವಾಸನೆ ಸ್ವಲ್ಪ ಕಡಿಮೆಯಾದ ಮೇಲೆ ಸುರಿಯುವ ಮಳೆಯಲ್ಲೆ ಹೊರಟೆವು ಆತನ ಊರಿನಲ್ಲಿ ಆಗಂತುಕನನ್ನಿಳಿಸಿ ಸಕಲೇಶಪುರ ಸೇರಿ ಊಟಕ್ಕೆ ಕುಳಿತಾಗ ಸಮಯ ೫ ಗಂಟೆ.

ಊಟ ಮಾಡಿ ೫.೩೦ ಕ್ಕೆ ಸಕಲೇಶಪುರದಿಂದ ಹೊರಟು ಹಿರೀಸಾವೆ ಬರುವಷ್ಟರಲ್ಲಿ ಕತ್ತಲೆ ಆವರಿಸತೊಡಗಿತು. ಕತ್ತಲಾದ ನಂತರ ವಾಹನ ಚಲನೆ ಕಷ್ಠವಾಗತೊಡಗುತ್ತದೆ. ಎದುರಿಗೆ ಬರುತ್ತಿರುವ ವಾಹನಗಳ ದೀಪ ಅದೆಷ್ಟು ಪ್ರಖರವಾಗಿ ಕ್ರೂರವಾಗಿ ಕಣ್ಣು ಕುಕ್ಕುತ್ತದೆಯೆಂದರೆ, ಇಡೀ ದಿನ ಕಣ್ಣುಗಳ ಮೂಲಕ ಮನಸ್ಸಿಗೆ ತುಂಬಿಕೊಂಡ ಆ ಪ್ರಕೃತಿ ಸೌಂದರ್ಯ ಈ ದೀಪಗಳ ಪ್ರಖರತೆಯಿಂದ ಆ ಕಣ್ಣಿನ ಮೂಲಕವೆ ಪ್ರವೇಶಿಸಿ ಮೆದುಳಿನಲ್ಲಿರುವ ಆ ದೃಶ್ಯಗಳನ್ನು EPROM ಅಳಿಸಿದಂತೆ ಅಳಿಸಿಬಿಡುತ್ತದಯೇನೋ ಎನಿಸಿ ಬಿಡುತ್ತದೆ. ಬೆಳ್ಳೂರುಕ್ರಾಸ್, ಯಡಿಯೂರು ಕುಣಿಗಲ್ ಮಾರ್ಗವಾಗಿ ಬೆಂಗಳೂರು ಸೇರಿದಾಗ ರಾತ್ರಿ ೯.೩೦.

ಚಿತ್ರಗಳು

Thursday, August 6, 2009

ಭಾರತದ ಪರಮವೀರರು: ನಾಯಕ್ ಜಾದೂನಾಥ್ ಸಿಂಗ್


೨೧ನೆ ನವೆಂಬರ್ ೧೯೧೬ ರಲ್ಲಿ ಉತ್ತರ ಪ್ರದೇಶದ ಷಹಜಹಾಂಪುರದಲ್ಲಿ ಜನನ. ೨೧ನೆ ನವೆಂಬರ್ ೧೯೪೧ ರಲ್ಲಿ ಸೈನ್ಯದಲ್ಲಿ ೧ನೆ ರಜಪೂತ್ ಗೆ ಸೇರ್ಪಡೆ.
೧೯೪೭ರ ಛಳಿಗಾಲದಲ್ಲಿ ನಡೆದ ಭಾರತದ ಮೇಲಿನ ಆಕ್ರಮಣದಲ್ಲಿ ನೌಷೇರವನ್ನು ಉಳಿಸಲು ಪ್ರಾಣ ತೆತ್ತ ವೀರ.

ಡಿಸೆಂಬರ್ ೨೪ರಂದು ಝಂಗಾರ್ ಪಾಕಿಸ್ತಾನಿ ದಾಳಿಕೋರರ ವಶವಾಯಿತು. ಇದು ಮುಂದಿನ ಆಕ್ರಮಣಕ್ಕೆ ಪಾಕಿಸ್ತಾನಿ ಸೈನಿಕರಿಗೆ ಆಯಕಟ್ಟಿನ ಜಾಗವಾಗಿ ಪರಿಣಮಿಸಿತು. ಮಿರ್ಪುರದಿಂದ ಪೂಂಛ್ ವರೆಗಿನ ಎಲ್ಲ ಸಂಪರ್ಕ ಕೇಂದ್ರಗಳು ಪಾಕಿಸ್ತಾನದ ವಶದಲ್ಲಿದ್ದದ್ದು ಅವರಿಗೆ ಇನ್ನಷ್ಟು ಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿತ್ತು. ಈ ಸದವಕಾಶವನ್ನು ಉಪಯೋಗಿಸಿಕೊಂಡು ನೌಷೇರವನ್ನು ಆಕ್ರಮಿಸುವ ಯೋಜನೆ ಪಾಕಿಸ್ತಾನಿಯರದ್ದಾಗಿತ್ತು. ಇದರ ಸುಳಿವು ದೊರೆತ ಭಾರತೀಯ ಸೈನ್ಯ ನೌಷೇರವನ್ನು ಉಳಿಸಿಕೊಳ್ಳುವ ಸಲುವಾಗಿ ಜನವರಿ ೧೯೪೮ರಲ್ಲಿ ಶತ್ರುವನ್ನು ತಡೆಯಲು ಮುಂದಾಗಿ ನೌಷೇರಾದ ವಾಯುವ್ಯಕ್ಕಿದ್ದ ಕೋಟ್ ಹಳ್ಳಿಯನ್ನು ವಶಪಡಿಸಿಕೊಂಡಿತು. ಯಾವುದೇ ತೆರನಾದ ದಾಳಿಯಿಂದ ನೌಷೇರವನ್ನು ರಕ್ಷಿಸಬೇಕಾಗಿತ್ತು.
ನೌಷೇರಾಕ್ಕೆ ಇರುವ ಎಲ್ಲ ಮಾರ್ಗಗಳಲ್ಲು ಆಯಕಟ್ಟಿನ ಜಾಗಗಳಲ್ಲಿ ಸಣ್ಣ ಸಣ್ಣ ಅಡಗುದಾಣಗಳನ್ನು ನಿರ್ಮಿಸಿ ಕಾವಲು ಹಾಕಲಾಯಿತು. ತೈನ್ಧಾರ್ ಮಾರ್ಗ ನೌಷೇರಾದ ಉತ್ತರಭಾಗಕ್ಕೆ ದಾರಿಯಾಗಿತ್ತು ಆದ್ದರಿಂದ ಇದನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿತ್ತು.

ನೀರಿಕ್ಷಿಸಿದಂತೆ ವೈರಿಗಳ ದಾಳಿ ಫೆಬ್ರವರಿ ೬ರಂದು ಮಂಜುಮುಸುಕಿದ ಮುಂಜಾನೆಯಲ್ಲಿ ತೈನ್ಧಾರ್ ಪ್ರದೇಶದಲ್ಲಿ ಪ್ರಾರಂಭವಾಗಿತ್ತು. ಮದ್ದು ಗುಂಡುಗಳು ಹಾರಾಡತೊಡಗಿದವು. ಶತ್ರು ಈ ಸಣ್ಣ ಅಡಗುದಾಣ ಮತ್ತು ತಡೆಯ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಲಾರಂಭಿಸಿದ. ಅದೆಷ್ಟು ಪ್ರಖರ ದಾಳಿಯೆಂದರೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಗುಂಡು ಮತ್ತು ಸಣ್ಣ ಫಿರಂಗಿಗಳ ಶಬ್ದದಿಂದ ಅನುರಣಿಸಿತು. ಇದರ ಮಧ್ಯದಲ್ಲಿಯೆ ತೈನ್ಧಾರ್ ನ ತುತ್ತ ತುದಿಯ ಮೇಲಿದ್ದ ಭಾರತೀಯ ಕಾವಲಿನ ಮೇಲೂ ದಾಳಿ ನಡೆಯಿತು. ಕತ್ತಲು ಕರಗಿ ಬೆಳಕು ಹರಿಯುವ ಸಮಯದಲ್ಲಿ ಶತ್ರು ಭಾರತೀಯ ಸೈನಿಕರ ಹತ್ತಿರಕ್ಕೆ ಬಂದು ನಿಂತಿದ್ದ. ಸೂರ್ಯನ ಬೆಳಕಿನ ಬದಲು ಭಾರತೀಯ ಸೈನಿಕರನ್ನು ಶತ್ರುವಿನ ಗುಂಡಿನ ಮೊರೆತ ಸ್ವಾಗತಿಸಿತು. ನೂರಾರು ಪಾಕಿ ಸೈನಿಕರು ನೌಷೇರಾವನ್ನು ಆಕ್ರಮಿಸುವ ಸಲುವಾಗಿ ಭಾರತೀಯ ಅಡಗುತಾಣಗಳ ಮೇಲೆ ಸತತವಾಗಿ ದಾಳಿಯಿಡುತ್ತಾ ಮುನ್ನುಗ್ಗುತ್ತಿದ್ದರು.
೨ನೆ ಅಡಗುತಾಣದಲ್ಲಿದ್ದ ನಾಯಕ್ ಜಾದೂನಾಥ್ ಸಿಂಗ್ ಅತ್ಯಂತ ಆಯಕಟ್ಟಿನ ತಾಣದ ಜವಾಬ್ದಾರಿ ಹೊತ್ತಿದ್ದರು ಈ ಅಡಗುತಾಣ ವಶವಾದರೆ ಶತ್ರು ಸುಲಭವಾಗಿ ನೌಷೇರಾಕ್ಕೆ ನಡೆದು ಬಿಡುತ್ತಿದ್ದ. ಈ ಅಪಾಯವನ್ನರಿತ ಜಾದೂನಾಥ್ ಸಿಂಗ್ ಅವರ ೯ ಜನರ ತಂಡ ಪಾಕಿಸ್ತಾನದ ನೂರಾರು ಸೈನಿಕರ ಸಂಖ್ಯೆಗೆ ಹೋಲಿಸಿದರೆ ಅತ್ಯಂತ ಪುಟ್ಟ ತಂಡ ಅದ್ಯಾವ ಪರಿ ಶತ್ರುಗಳ ಮೇಲೆ ಎಗರಿ ಬಿತ್ತೆಂದರೆ ತಮಗಿಂತ ಸಂಖ್ಯೆಯಲ್ಲಿ ೫-೬ ಪಟ್ಟು ಹೆಚ್ಚು ಜನರಿದ್ದ ಶತ್ರುಪಡೆ ಅನೀರಿಕ್ಷಿತ ಪ್ರತಿದಾಳಿಗೆ ಕಕ್ಕಾಬಿಕ್ಕಿಯಾಗಿ ದಿಕ್ಕಾ ಪಾಲಾಗಿ ಹೋಯಿತು. ಒಂದಾದ ಮೇಲೊಂದರಂತೆ ಅಲೆ ಅಲೆಯಾಗಿ ದಾಳಿ ಮಾಡುವ ಹೊಂಚು ಹಾಕಿದ್ದ ಪಾಕಿಸ್ತಾನಿ ಸೈನಿಕರು ೨ನೆ ದಾಳಿಗೆ ಸಿದ್ದರಾಗುತ್ತಿದ್ದರು. ಸಮರ್ಥ ನಾಯಕತ್ವ ಮತ್ತು ಮುಂಚೂಣಿಯಲ್ಲಿ ನಿಂತು ಕೆಚ್ಚೆದೆಯಿಂದ ಕಾದಾಡುವ ಜಾದೂನಾಥ್ ಸಿಂಗ್ ಧೈರ್ಯ ಸಾಹಸಗಳು ಶತ್ರುವಿನ ತಲೆ ಕೆಡಿಸಿತ್ತು.
ಮೊದಲನೆ ದಾಳಿಯಲ್ಲಿ ಗಾಯಾಳುವಾದ ೪ ಜನ ಸೈನಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಿ, ಚದುರಿಹೋಗಿದ್ದ ತನ್ನವರನ್ನು ಒಟ್ಟು ಗೂಡಿಸಿ ಮತ್ತೊಂದು ದಾಳಿಯನ್ನು ತಡೆಯಲು ಸನ್ನದ್ದವಾಯಿತು ರಣಧೀರರ ಪಡೆ. ಈ ಬಾರಿಯಿದ್ದದ್ದು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ.
೨ನೆ ದಾಳಿ ಆರಂಭವಾಯಿತು. ಸಂಖ್ಯೆಯಲ್ಲಿ ಅತ್ಯಂತ ಚಿಕ್ಕ ಆದರೆ ಅಸಾಧಾರಣ ಧೈರ್ಯ ಕೆಚ್ಚೆದೆ ದೇಶಪ್ರೇಮವೆ ಸೊತ್ತಾಗಿದ್ದ ಚಿಕ್ಕ ತುಕಡಿ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಶತ್ರು ಶಿಬಿರದ ಬಾಗಿಲಲ್ಲೆ ಬಂದು ನಿಂತಿದ್ದ ಈ ಬಾರಿ ತಾನೂ ಸೇರಿದಂತೆ ಎಲ್ಲರೂ ಗಾಯಗೊಂಡರೂ ತನ್ನ ಸಹ ಸೈನಿಕರೊಬ್ಬರ ಕೆಳಗೆ ಬಿದ್ದಿದ್ದ ಬ್ರೆನ್ ಗನ್ನೆತ್ತಿಕೊಂಡು ತೆರೆದ ಮೈದಾನದಲ್ಲೆ ಶತ್ರುವನ್ನು ಎದುರಿಸುವುದು ಸಾಧ್ಯವಾಗುವುದು ಎಂಟೆದೆಯಿರುವವರಿಗೆ ಮಾತ್ರ. ಜಾದೂನಾಥ್ ಸಿಂಗ್ ಈ ಆಕ್ರಮಣ ಅವರ ಸಹೋದ್ಯೋಗಿಗಳಲ್ಲೂ ಹುರುಪು ತಂದಿತು. ಈ ಬಾರಿ ಜಯ ತನ್ನದೆ ಎಂದು ನಿಶ್ಚಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಕೊನೆಯ ಘಳಿಗೆಯಲ್ಲಿನ ಈ ಪರಾಕ್ರಮಿಯನ್ನು ಎದುರಿಸಲಾಗದೆ ಓಡಿಹೋಗಬೇಕಾಯಿತು.. ಹಾಗಾಗಿ ಇವರಿದ್ದ ನೌಷೇರದ ದಾರಿ ೨ನೆ ದಾಳಿಗೆ ಸಿಕ್ಕಿರೂ ಉಳಿದು ಕೊಂಡಿತು. ಯಾವುದು ವಿಜಯವಾಗಬೇಕಿತ್ತೋ ಅದು ಪರಾಜಯವಾಗಿ ಅವರನ್ನು ಹಿಂಬಾಲಿಸಿತ್ತು.

೩ ನೆ ದಾಳಿಯ ಹೊತ್ತಿಗೆ ಜಾದೂನಾಥ್ ಸಿಂಗ್ ತಂಡ ಸಂಪೂರ್ಣವಾಗಿ ಗಾಯಾಳುಗಳ ತಂಡವಾಗಿತ್ತು. ಉಳಿದಿದ್ದವರು ಮೂರು ಮತ್ತೊಂದು ಜನವಾಗಿದ್ದರು. ಈ ಬಾರಿ ಕಡೆಯದೆಂಬಂತೆ ಶತ್ರು ತನ್ನೆಲ್ಲ ಬಲವನ್ನು ಹೆಚ್ಚಿಸಿಕೊಂಡು ದಾಳಿಯಿಟ್ಟಿದ್ದ. ಜಾದೂನಾಥ್ ಒಬ್ಬನೆ ಈಗ ಉಳಿದಿದ್ದು. ತನ್ನ ಬಿಡಾರವನ್ನು ನೌಷೇರಾದ ದಾರಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಛಲದಿಂದ ಸ್ಟೆನ್ ಗನ್ ಕೈಗೆತ್ತಿಕೊಂಡರು. ಶತ್ರುವು ಬರುವ ಮೊದಲೆ ಅವರ ದಾರಿಗೆ ಅಡ್ಡಲಾಗಿ ನಿಂತು ಗಾಯಗೊಂಡಿದ್ದರೂ ಏಕಾಂಗಿಯಾಗಿ ತಾವೆ ಅವರನ್ನು ಅಡ್ಡಗಟ್ಟಿದರು..ಇವರ ಈ ದಾಳಿಯ ಪರಿಗೆ ಹತ್ತಾರು ಜನರಿದ್ದ ಶತ್ರು ಸೈನಿಕರು ತತ್ತರಿಸಿಹೋದರು. ಅಳಿದುಳಿದವರಿಂದ ಇಂತಹ ಪ್ರತಿದಾಳಿಯನ್ನು ನಿರೀಕ್ಷಿಸಿರದ ಮತ್ತು ಶತ್ರುವನ್ನು ಸರಿಯಾಗಿ ಅಂದಾಜಿಸದ ಪಾಕಿ ಸೈನಿಕರು ಈ ಬಾರಿಯು ಸಹ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗ ಬೇಕಾಯಿತು. ಈ ಅಂತಿಮ ನಿರ್ಣಾಯಕ ಹೋರಾಟದಲ್ಲಿ ಒಂದು ಗುಂಡು ಜಾದೂನಾಥ್ ಸಿಂಗ್ ರ ದೇಶಪ್ರೇಮವನ್ನು ಪರೀಕ್ಷಿಸಲು ಹೃದಯವನ್ನು ಹೊಕ್ಕರೆ ಇನ್ನೊಂದು ತಲೆ ಸೀಳಿತ್ತು.

ಆದರೆ ಜಾದೂನಾಥ್ ಸಿಂಗ್ ಅವರ ಬಂದೂಕಿನಿಂದ ಹಾರಿದ ಒಂದೊಂದು ಗುಂಡುಗಳು ಪಾಕಿಸೈನಿಕರನ್ನು ನೌಷೇರದಿಂದ ಒಂದೊಂದು ಮೈಲು ದೂರ ಕಳುಹಿಸಿತ್ತು.

ನಾಯಕ್ ಜಾದೂನಾಥರ ಈ ಅಪ್ರತಿಮ ಸಾಹಸಕ್ಕೆ ಪರಮ ವೀರಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು.



ಆಧಾರ: ಸಂಗ್ರಹಿತ ಬರಹಗಳು
ಚಿತ್ರಕೃಪೆ: ಭಾರತೀಯ ಸೈನ್ಯದ ಅಂತರ್ಜಾಲ ಪುಟ

Friday, July 31, 2009

೧ ದಿನದ ಜೋಗ್ ಪ್ರವಾಸ

ದಟ್ಸ್ ಕನ್ನಡ ದಲ್ಲಿ ಹೆಚ್ಚಾಗಿ ಬರೆಯುತ್ತಿದ್ದ ತಳವಾಟದ ಪತ್ರಕರ್ತ ರಾಘವೇಂದ್ರ ಶರ್ಮ ಅವರ ಪರಿಚಯವಾಗಿದ್ದಕ್ಕೆ ಅಂತರ್ಜಾಲಕ್ಕೊಂದು ಧನ್ಯವಾದ ಹೇಳಲೇಬೇಕು. ಅವರ ಜೋಗಕ್ಕೆ ಬನ್ನಿ ಎಂಬ ಲೇಖನ ಓದಿ ಸಂಪರ್ಕಿಸಿದವನಿಗೆ ಅವರ ಮಾತುಗಳು ಆತ್ಮೀಯತೆ ಉಂಟು ಮಾಡಿದ್ದವು. ಸಾರ್, ಲಿಂಗನಮಕ್ಕಿ ತುಂಬಿ ಅಣೆಕಟ್ಟಿನಿಂದ ನೀರು ಹೊರಬಿಟ್ಟ ತಕ್ಷಣ ನನಗೆ ತಿಳಿಸಿ ತಕ್ಷಣ ಹೊರಟು ಬರ್ತೇನೆ ಎಂದವನಿಗೆ ಶರ್ಮ ನಿರಾಶೆ ಮಾಡಲಿಲ್ಲ. ೧೯೮೮ರಲ್ಲಿ ಒಮ್ಮೆ ಕಾಲೇಜಿನಿಂದ ಹೀಗೆ ಅಣೆಕಟ್ಟಿನಿಂದ ನೀರು ಬಿಟ್ಟಾಗ ಜೋಗಿಗೆ ಹೋಗಿದ್ದರಿಂದ ಜೋಗದ ಆ ವೈಭವ ಕಣ್ಣಿನಿಂದ ಮರೆಯಾಗಿರಲಿಲ್ಲ.

೦೮/೦೮/೨೦೦೭ ರಂದು ಶರ್ಮರಿಂದ ರಾತ್ರಿ ೯ ಗಂಟೆಯ ಸಮಯಕ್ಕೆ ದೂರವಾಣಿ ಕರೆಬಂತು ಅಣೆಕಟ್ಟೆಯ ಬಾಗಿಲುಗಳು ತೆರೆಯುತ್ತಿವೆ ಹೊರಟು ಬನ್ನಿ ಎಂಬ ಸಂದೇಶ. ಸರಿ ರಾತ್ರಿಯಲ್ಲಿ ಕಾರು ಚಲಾಯಿಸಿಕೊಂಡು ಹೋಗುವುದು ಕಷ್ಟಕರ. ಬರುವ ಇಂಗಿತ ವ್ಯಕ್ತಪಡಿಸಿದ ಪತ್ನಿಗೆ ಸಾಧ್ಯವಿಲ್ಲವೆಂದು ತಿಳಿಸಿ, ಹೇಗೆ ಹೋಗೋದು ಎಂದು ಯೋಚಿಸುತ್ತಿದ್ದವನಿಗೆ ಸಹಾಯ ಮಾಡಿದ ಪತ್ನಿಗೊಂದು ಧನ್ಯ್ವಾದ ಅರ್ಪಿಸದಿದ್ದರೆ ಜೊತೆಯಲ್ಲಿ ಕರೆದೊಯ್ಯದಿದ್ದಕ್ಕೆ ಕೋಪಿಸಿಕೊಂಡಿದ್ದ ಪತ್ನಿಯ ಕೋಪಕ್ಕೆ ತುಪ್ಪ ಸುರಿದಂತೆಯೆ ಸೈ. ೧೧.೩೦ಕ್ಕೆ ಹೊರಡುವ ಶಿವಮೊಗ್ಗೆಯ ರೈಲಿಗೆ ಬಟ್ಟೆ ಚೀಲಕ್ಕೆ ತುಂಬಿಕೊಂಡವನು ಮನೆಯವರಿಗೆಲ್ಲ ಕೈಬೀಸಿ ಬಸ್ ನಿಲ್ದಾಣಕ್ಕೆ ನಡೆದೆ. ಬಿ.ಇ.ಎಲ್ ವೃತ್ತದಲ್ಲಿ ಬಸ್ಸಿನಿಂದಿಳಿದು ಗೊರಗುಂಟೆ ಪಾಳ್ಯದವರೆಗೆ ಖಾಸಗಿ ವಾಹನವೊಂದರಲ್ಲಿ ಬಂದಿಳಿದಾಗ ರಾತ್ರಿ ೧೦.೩೦. ಟಿಕೆಟ್ ಕಾದಿರಿಸುವುದು ಸಾಧ್ಯವಿಲ್ಲ ಎಂದು ತಿಳಿದು ಬಂತು. ಸರಿಯಾಗಿ ೧೧.೪೫ ಕ್ಕೆ ರೈಲು ನಿಲ್ದಾಣಕ್ಕೆ ಬಂತು. ಟಿಕೆಟ್ ಕಾದಿರಿಸಿರಲಿಲ್ಲವಾದ್ದರಿಂದ ಸಾಮಾನ್ಯ ಬೋಗಿಗೆ ನುಗ್ಗಿದೆ. ಎಲ್ಲ ಆಸನಗಳೂ ಭರ್ತಿಯಾಗಿದ್ದವು. ಟಿ.ಟಿ ಯನ್ನು ಹುಡುಕಿ ಮಲಗಲು ಜಾಗ ಸಿಕ್ಕಾಗ ರೈಲು ತುಮಕೂರು ತಲುಪಿತ್ತು. ಭದ್ರಾವತಿ ಬಳಿ ಬಂದಾಗ ಎಚ್ಚರಗೊಂಡೆ ಸಮಯ ೫ ಗಂಟೆಯಿರಬೇಕು.

ರೈಲಿನ ಹಳಿಯ ಪಕ್ಕದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳಗಳು ಬಿದ್ದಿದ್ದ ಮಳೆಯ ಪ್ರಮಾಣದ ಸಂಕೇತವಾಗಿದ್ದವು. ಶಿವಮೊಗ್ಗ ನಿಲ್ದಾಣ ತಲುಪಿದಾಗ ೬ ಗಂಟೆ. ನಿಲ್ದಾಣದಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸಿ ಹೊರಗೆ ನಿಂತಿದ್ದ ಬಸ್ ಹಿಡಿದೆ. ಸೀಟ್ ಸಿಗುವ ಲಕ್ಷಣವಿರಲಿ ಒಳಗೆ ಹೋಗಲೂ ಜಾಗವಿರದ ಬಸ್ಸಿನಲ್ಲಿ ಹೇಗೋ ತೂರಿಕೊಂಡು ಒಳಸೇರಿದೆ. ೮ ಗಂಟೆಗೆ ಸಾಗರ ತಲುಪಿಸಿದ ಪುಣ್ಯಾತ್ಮ. ನೇರವಾಗಿ ಅಕ್ಕನ ಮನೆಗೆ ನಡೆದೆ. ಸ್ನಾನ ಮಾಡಿ ಅಕ್ಕ ಕೊಟ್ಟ ತಿಂಡಿ ತಿಂದು. ಸೀದಾ ಬಸ್ ನಿಲ್ದಾಣಕ್ಕೆ ಬಂದು ತಳವಾಟದ ಕಡೆಯ ಬಸ್ ಹತ್ತಿದೆ. ೧೦ ನಿಮಿಷದಲ್ಲಿ ತಳವಾಟದಲ್ಲಿಳಿದಿದ್ದೆ. ಬೈಕಿನಲ್ಲಿ ಬಂದ ಶರ್ಮ ಪರಿಚಯದ ನಂತರ ಅವರ ಬೈಕಿನಲ್ಲಿ ಕುಳಿತವನಿಗೆ ಜೀವ ಬಾಯಿಗೆ ಬರುವುದೊಂದು ಬಾಕಿ ಅವರು ಆ ಜಾರುವ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಪರಿ ಆ ರೀತಿಯಿತ್ತು. ಇವರೇನಾದ್ರು ಮುಂಚೆ ಯಾವ್ದಾದ್ರೂ ಬೈಕ್ ರೇಸ್ಗೆ ಹೋಗಿದ್ರೇನಪ್ಪ ಅನ್ಸಿತ್ತು. ೨ ನಿಮಿಷದಲ್ಲಿ ಬೈಕ್ ಮನೆ ಮುಂದೆ ನಿಂತಿತ್ತು, ನನಗೆ ಹೋಗುತ್ತಿದ್ದ ಜೀವ ಮರಳಿ ಬಂದಿತ್ತು. ವಾವ್ ಎಂತಹ ಸುಂದರ ಪರಿಸರದ ಮನೆ ಅಂತೀರಿ. ಯಾರಾದ್ರು ಲೇಖಕರು ಬರೆಯಲಿಕ್ಕೆ ಕುಳಿತರೆ ಆ ಮನೆಯ ಬಗ್ಗೆ ಒಂದು ಪುಸ್ತಕ ಬರೆಯಬಹುದೇನೊ? ನನ್ನನ್ನು ಅತಿಯಾಗಿ ಸೆಳೆದದ್ದು ಕೊಟ್ಟಿಗೆಯಲ್ಲಿದ್ದ ಹಸುವಿನ ಕರು.

ಸ್ನಾನ ಸಂಧ್ಯಾವಂದನೆ ಮುಗಿಸಿದ ಶರ್ಮರೊಡನೆ ಮತ್ತೊಂದು ಸುತ್ತಿನ ತಿಂಡಿ. ಶರ್ಮ ಅವರ ಮಗ, ಶರ್ಮ ಅವರ ಅಣ್ಣನ ಮಗಳು ಮತ್ತು ನನ್ನನ್ನು ಹೊತ್ತ ಮಾರುತಿ ಓಮ್ನಿ ಜೋಗಿನ ದಾರಿ ಹಿಡಿಯಿತು. ಚೈನಾ ಗೇಟ್ ಬಳಿ ಇನ್ನೇನು ಸೇತುವೆ ಯ ಮೇಲ್ಭಾಗವನ್ನು ತಲುಪುವಂತೆ ಹರಿಯುತ್ತಿದ್ದ ಕೆಂಪು ಬಣ್ಣದ ಶರಾವತಿ ಭಯ ಹುಟ್ಟಿಸಿದಳು. ನನಗೋ ಬೇಗ ಜಲಪಾತ ತಲುಪುವ ಕಾತರ. ೧೦ ನಿಮಿಷಗಳಲ್ಲಿ ಜಲಪಾತದೆದುರಿಗೆ ನಿಂತಿದ್ದೆವು. ಅಣೆಕಟ್ಟೆಯ ೮ ಬಾಗಿಲುಗಳನ್ನು ತೆರೆಯಲಾಗಿತ್ತು. ೧೧ ಬಾಗಿಲುಗಳು ತೆರೆದರೆ ಜಲಪಾತದ ೪ ಕವಲುಗಳು ಕೂಡಿಕೊಳ್ಳುತ್ತವೆ ಎಂದು ಶರ್ಮ ಮಾಹಿತಿಯಿತ್ತರು. ನಾನು ಜಲಪಾತದ ಕಡೆ ಗಮನ ನೆಟ್ಟಿದ್ದರೆ ಇದು ಸಾಮಾನ್ಯ ದೃಶ್ಯವಾದ್ದರಿಂದ ಶರ್ಮರ ದೃಷ್ಠಿ ಬೇರೆ ಕಡೆಯಿದ್ದದ್ದು ನನ್ನ ಗಮನಕ್ಕೆ ಬರಲೇ ಇಲ್ಲ. ಹೌದು ಜೋಗದ ವೈಭವವನ್ನು ಅದು ತುಂಬಿ ಹರಿಯುವಾಗಲೇ ಸವಿಯಬೇಕು. ಆಗಾಗ ಮೋಡಗಳು ಜಲಪಾತವನ್ನು ಮರೆಮಾಚುತ್ತಿದ್ದವು ಸ್ವಲ್ಪ ಸಮಯಕ್ಕೆ ಮತ್ತೆ ಗೋಚರಿಸಿದಾಗ ನೆರೆದಿದ್ದ ಜನರಿಂದ ಉತ್ಸಾಹದ ಕೇಕೆ. ಸುಮಾರು ೧ ಗಂಟೆಯ ನಂತರ ಅಲ್ಲಿಂದ ಹೊರಟು ಪ್ರತಿಯೊಂದು ಕವಲುಗಳನ್ನು ನೋಡಲು ಎದುರಿಗೆ ಕಾಣುವ ಅತಿಥಿಗೃಹದ ಕಡೆ ಹೊರಟೆವು. ನಾನಿಲ್ಲೆ ಇರ್ತೀನಿ ನೀವು ನೋಡ್ಕೊಂಡು ಬನ್ನಿ ಎಂದರು ಶರ್ಮ.

ಜಲಪಾತ ಉಂಟಾಗುತ್ತಿದ್ದ ಬಳಿ ನಿಂತವನಿಗೆ ಕೆಲವರು ಗದರಿದರು. ಅಲ್ಲಿಂದ ಹೊರಟು ಬಂದು ನೇರವಾಗಿ ಶರ್ಮ ಅವರ ಮನೆಯಲ್ಲಿ ಹಲಸಿನ ಹಪ್ಪಳ ತಿಳಿಸಾರಿನ ಊಟ. ಲೊಟ್ಟೆ ಹೊಡ್ಕೊಂಡು ಊಟ ಮಾಡಿದ್ದು ಮತ್ತು ಉಪ್ಪಿನ ಕಾಯಿಯ ರುಚಿ ನನ್ನ ನಾಲಿಗೆಗೆ ಇನ್ನೂ ನೆನಪಿದೆ. ಆಗಾಗ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿತ್ತು. ಅವರು ಬರೆದ ಜೇನಿನ ಪುಸ್ತಕ ಸಾಕಿದ್ದ ಜೇನುಗಳು ಕೊಟ್ಟಿಗೆಯಲ್ಲಿದ್ದ ಲಕ್ಷಿಯ ಮಗಳು ಎಲ್ಲವನ್ನು ಕ್ಯಾಮೆರಾದಲ್ಲಿ ತುಂಬಿಕೊಂಡು ೨ ಗಂಟೆ ಸುಮಾರಿಗೆ ತಳವಾಟದ ಬಸ್ ನಿಲ್ದಾಣಕ್ಕೆ ಬಂದು ನಿಂತ ಸ್ವಲ್ಪ ಸಮಯಕ್ಕೆ ಸಾಗರದ ಬಸ್ ಬಂತು. ಭಾವ ಆ ಸಮಯಕ್ಕೆ ಬೆಂಗಳೂರಿಗೆ ರೈಲು ಟಿಕೆಟ್ ಕಾದಿರಿಸಿದ್ದರು. ಅವರಿಗೊಂದು ನಮಸ್ಕಾರ ತಿಳಿಸಿ. ಶಿವಮೊಗ್ಗದ ಬಸ್ ಹಿಡಿದೆ. ಭಾವನ ಸ್ನೇಹಿತರು ರೈಲಿನ ಟಿಕೆಟ್ ಕೊನೆಯ ಕ್ಷಣದಲ್ಲಿ ತಲುಪಿಸಿದರು. ಸಮಯಕ್ಕೆ ಸರಿಯಾಗಿ ಹೊರಟ ರೈಲು ಬೆಳಿಗ್ಗೆ ೫ ಗಂಟೆಗೂ ಮುನ್ನವೇ ಯಶವಂತಪುರ ತಲುಪಿತ್ತು. ಮುಂಚೆಯೇ ತಿಳಿಸಿದ್ದರಿಂದ ತಂದೆ ದ್ವಿಚಕ್ರದೊಡನೆ ಕಾಯುತ್ತಿದ್ದರು. ಮನೆಗೆ ಬಂದು ಸಣ್ಣದೊಂದು ನಿದ್ದೆ ತೆಗೆದು ೮ ಗಂಟೆಗೆ ಕಛೇರಿ ತಲುಪಿದೆ. ಒಂದೇ ದಿನದಲ್ಲಿ ಜೋಗಿಗೆ ಹೋಗಿಬಂದೆ ಎಂದವನ ಮಾತನ್ನು ನಂಬಲು ಯಾರೂ ಸಿದ್ದರಿರಲಿಲ್ಲ. ಇಂತಹ ಒಂದು ಪ್ರವಾಸ ಸಾಧ್ಯವಾಗಿದ್ದು ರಾಘವೇಂದ್ರ ಶರ್ಮ ಅವರ ಸಮಯೋಚಿತ ಸಹಾಯದಿಂದ. ಎಂತಹ ಅಪರಿಚಿತರಿಗಾದರೂ ಸಹಾಯ ಮಾಡುವ ಮಲೆನಾಡಿಗರ ಗುಣ ನನಗೆ ಅತ್ಯಂತ ಅಚ್ಚುಮೆಚ್ಚು. ಅದೆಷ್ಟೆ ಅಪರಿಚಿತರಾದರೂ ಊಟ ಮಾಡಿಕೊಂಡೇ ಹೋಗಬೇಕೆಂದು ಪಟ್ಟು ಹಿಡಿಯುವ ಅವರ ಗುಣಗಳು ಸಕ್ಕತ್. ಅದು ತಳವಾಟದ ರಾಘವೇಂದ್ರ ಶರ್ಮ ಅವರಿರಬಹುದು ಉಂಚಳ್ಳಿ ಜಲಪಾತದ ಬಳಿಯ ಹೆಗಡೆಯವರಿರಬಹುದು ಸಹಸ್ರಲಿಂಗದ ಬಳಿಯ ಶಿವಾನಂದ್ ಇರಬಹುದು ಅಥವಾ ಯಲ್ಲಾಪುರದ ಗೀತಾಭವನದ ಭಾಗವತರಿರಬಹುದು. ನಾನಂತು ಒಂದು ಗಾದೆಯನ್ನೆ ಹೀಗೆ ಪರಿವರ್ತಿಸಿದ್ದೇನೆ. "ಮಲೆನಾಡಿನ ನೋಟ ಚೆನ್ನ ಹವ್ಯಕರ ಮನೆ ಊಟ ಚೆನ್ನ". ೧ ದಿನ ೨ ರಾತ್ರಿಗಳಲ್ಲಿ ಜೋಗದ ಪ್ರವಾಸ ಮುಗಿಸಿ ಬಂದ ನನ್ನಿಂದ ಸ್ಪೂರ್ತಿಗೊಂಡ ಸುಮಾರು ಹತ್ತು ಜನ ಆ ವರ್ಷ ಜೋಗಿಗೆ ಭೇಟಿಯಿತ್ತರು.

ಪ್ರವಾಸಕ್ಕೆ ಬನ್ನಿ ಆದರೆ ಸ್ವಚ್ಚತೆ ಕಾಪಾಡಿ ಎಂಬ ಶೀರ್ಷಿಕೆಯಡಿ ಶರ್ಮ ಅವರು ಅಂದು ನಾವೆಲ್ಲ ಜಲಪಾತ ನೋಡುವುದರಲ್ಲಿ ಮೈಮರೆತಾಗ ತೆಗೆದ ಚಿತ್ರಗಳು ನಮಗೆಲ್ಲ ನಾಚಿಕೆ ತರಿಸುವಂತಿದ್ದವು.

ಹಾಂ! ೨ ವರ್ಷಗಳ ನಂತರ ಈಗೇಕೆ ಇದೆಲ್ಲ ಎಂದು ಅನುಮಾನ ನಿಮಗೆ ಬಂದಿರಬಹುದು. ಇಂದೂ ಕೂಡ ರಾಘವೇಂದ್ರ ಶರ್ಮ ದೂರವಾಣಿಯಲ್ಲಿ ಹೇಳಿದ್ದು ಲಿಂಗನಮಕ್ಕಿಯ ನೀರಿನ ಮಟ್ಟ ೧೮೦೭ ಅಡಿ ತಲುಪಿದೆ ೧೮೧೨ ಅಡಿ ತಲುಪಿದರೆ ಅಣೆಕಟ್ಟೆಯ ಬಾಗಿಲುಗಳು ತೆರೆಯುವ ಸಾಧ್ಯತೆಗಳಿವೆ ಬರ್ತೀರಾ ಎಂದು ಕೇಳಿದಾಗ ಹಳೆಯದೆಲ್ಲ ನೆನಪು ಬಂತು ಅದರ ಫಲವೇ ಈ ಕೊರೆತ. ನಾನಂತೂ ಅವರ ದೂರವಾಣಿಗೆ ಕಾಯ್ತಾ ಇದ್ದೇನೆ, ನೀವೂ ಜೊತೆಯಾಗಿ. ಅಂದಹಾಗೆ ನೆನಪಿರಲಿ ಬೆಂಗಳೂರಿನಿಂದ ಸುಮಾರು ೪೦೦ ಕಿ.ಮೀ ದೂರದಲ್ಲಿರುವ ವಿಶ್ವವಿಖ್ಯಾತ ಜೋಗ್ ಜಲಪಾತವನ್ನು ೨ ರಾತ್ರಿ ಮತ್ತು ಒಂದು ದಿನದ ಅವಧಿಯಲ್ಲಿ ಭೇಟಿ ಕೊಟ್ಟು ಹಿಂತಿರುಗಬಹುದು. ಜೋಗದ ಸನಿಹದಲ್ಲೆ ತಳವಾಟದ ಯುವಕರು ನಿರ್ಮಿಸಿ ನಿರ್ವಹಿಸುತ್ತಿರುವ ಉಳಿಮನೆ (ಹೋಂಸ್ಟೇ) ನಿಮಗೆ ಸಹಾಯವಾಗಬಲ್ಲುದು. ರಾಘವೇಂದ್ರ ಶರ್ಮರ ಬ್ಲಾಗ್ ವಿಳಾಸ ಪಕ್ಕದಲ್ಲಿದೆ. ನೀವೂ ಪ್ರಯತ್ನಿಸಿ.

Thursday, July 23, 2009

ಹಾಸ್ಯ ಪ್ರಸಂಗ


ನನ್ನ ಕಾಲೇಜು ದಿನಗಳಲ್ಲಿ ನಡೆದ ಹಾಸ್ಯ ಪ್ರಸಂಗ

ಕಾಲೇಜಿದ್ದಿದ್ದೇ ಪಟ್ಟಣದ ಮಧ್ಯ ಭಾಗದಲ್ಲಿ. ಸಹಪಾಠಿಗಳಾದ ನಟ ಮತ್ತು ಮಂಜು ಬಾಲ್ಯ ಸ್ನೇಹಿತರು. ನಟರಾಜನಿಗೆ ನಾವಿಟ್ಟ ಅಡ್ಡಹೆಸರು ನರ್ವಸ್ ನಟ ಅನ್ವರ್ಥವಾಗಿತ್ತು. ನಟ ಕಾಲೇಜಿಗೆ ಬರ್ಬೇಕಾದ್ರೆ ಸಂತೆಬೀದಿಯಲ್ಲೆ ಬರ್ಬೇಕಿತ್ತು. ನಮ್ ಕಾಲೆಜಿದ್ದಿದ್ದು ಬಿ ಹೆಚ್ ರಸ್ತೆಯ ಒಂದು ಕಲ್ಲಿನ ಕಟ್ಟಡದ ಮೊದಲನೆ ಮಹಡಿಯಲ್ಲಿ. ಕಲ್ಪತರು ಕಾಲೇಜಿಗೆ ಹೋಗುವ ಹುಡುಗಿಯರನ್ನೆಲ್ಲ ನೋಡ್ಕೊಂಡು ನಿಲ್ಲುವ ನಮ್ಗಂತೂ ಮೊದಲ ಮಹಡಿ ಅಚ್ಚುಮೆಚ್ಚಿನ ತಾಣ.

ಮಾಮೂಲಿನಂತೆ ಗಾಭರಿಗೊಂಡಿದ್ದ ಭಯ ಮಿಶ್ರಿತ ಕಣ್ಣುಗಳ ನಟ ಸ್ವಲ್ಪ ಓಡೋಡ್ಕೊಂಡೆ ಬಂದ. ಅವನ ಗಾಭರಿಯ ಪರಿಚಯವಿದ್ದ ನಮ್ಗ್ಯಾರಿಗೂ ಅದು ಅಸಹಜವೆನಿಸಲಿಲ್ಲ. ಮಂಜುವಿನ ಬಳಿಗೆ ಬಂದವನೆ, "ಮಂಜ ಸಂತೆಬೀದಿ ಸರ್ಕಲ್ನಲ್ಲಿ ಸೈಕಲ್ನಲ್ಲಿ ಬರ್ಬೇಕಾದ್ರೆ ದಾರಿಗೆ ಒಂದು ಮುದುಕಿ ಅಡ್ಡ ಬಂದ್ಬಿಟ್ಲು ಕಣೋ". "ಡ್ಯಾಶ್ ಹೊಡೆದ್ಬಿಡ್ತಾ ಇದ್ದೆ. ಹೊಡೆದಿದ್ರೆ ಅಷ್ಟೆ ಪೀಸ್ ಪೀಸ್ ಆಗೋಗ್ತಾ ಇದ್ಲು" ಎಂದು ಬೆವರೊರೆಸಿಕೊಂಡ. ಮಂಜು ತಲೆ ಮೇಲೆ ಐಸ್ ಇಟ್ಕೊಂಡವನ ಹಾಗೆ ಹೇಳಿದ

"ಒಳ್ಳೆದಾಗ್ತಿತ್ತಲ್ಲೊ ನಾವೆಲ್ರೂ ಒಂದೊಂದ್ ಪೀಸ್ ಗೆ ಲೈನ್ ಹೊಡಿಬಹುದಿತ್ತಲ್ಲೊ"
.
.
.
.
.
( ಹರೆಯದ ಹುಡುಗಿಯರನ್ನು "ಪೀಸ್" (ತುಂಡು) ಅಂತ ಹರೆಯದ ಹುಡುಗರು ಕರೆಯುತ್ತಿದ್ದದ್ದು ನಮ್ಮೂರ್ಕಡೆ ಚಾಲ್ತಿಯಲ್ಲಿತ್ತು)

Sunday, July 19, 2009

ಭಾರತದ ಪರಮವೀರರು: ಮೇಜರ್ ಸೋಮನಾಥಶರ್ಮ

ಸೈನಿಕನಾಗುವುದು ಮನೆತನದ ಸಂಪ್ರದಾಯವೆನಿಸುವಂತಿದ್ದ ಕುಟುಂಬವೊಂದರಲ್ಲಿ ಮೇಜರ್ ಜನರಲ್ ಅಮರನಾಥಶರ್ಮ ಅವರ ಸುಪುತ್ರ ಸೋಮನಾಥಶರ್ಮ ಹುಟ್ಟಿದ್ದು ೧೯೨೩ ರ ಜನವರಿ ೩೧ರಂದು ಹಿಮಾಚಲ ಪ್ರದೇಶದಲ್ಲಿ. ತಂದೆಯಂತೆ ಮಕ್ಕಳು ನೂಲಿನಂತೆ ಸೀರೆ ಎಂಬ ಗಾದೆಯಂತೆ ತಾನೂ ಸೈನ್ಯ ಸೇರಿದ್ದು ೨೨ ನೇ ಫೆಬ್ರವರಿ ೧೯೪೨ರಲ್ಲಿ. ಎರಡನೆ ವಿಶ್ವ ಮಹಾಯುದ್ದದಲ್ಲಿ ಪಾಲ್ಗೊಂಡು ಆರಾಕನ್ ಆಪರೇಶನ್ಸ್ ನಲ್ಲಿ ಶೌರ್ಯ ಮೆರೆದದ್ದು ಹೆಮ್ಮೆ.

೨೨ನೆ ಅಕ್ಟೋಬರ್ ೧೯೪೭ರಲ್ಲಿ ಪಾಪಿಸ್ತಾನದ ಆದಿವಾಸಿಗಳ ಸೋಗಿನಲ್ಲಿ ಭಾರತದ ಮೇಲೆರಗಿ ಶ್ರೀನಗರವನ್ನು ಆಕ್ರಮಿಸಲು ಮುಂದಾಗ ಎಚ್ಚೆತ್ತ ಸರ್ಕಾರ ಅಕ್ಟೋಬರ್ ೨೬ರಂದು ಜಮ್ಮು ಕಾಶ್ಮೀರ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಿ ಗಡಿಯಲ್ಲಿ ನುಸುಳಿದ್ದ ಪಾಕಿ ಸೈನಿಕರನ್ನು ತೆರವುಗೊಳಿಸಲು ಸೈನಿಕರನ್ನು ನಿಯೋಜಿಸಿತು. ಈ ಹೊತ್ತಿಗಾಗಲೆ ಶ್ರೀನಗರದ ಹತ್ತಿರ ಬಂದಿದ್ದ ಶತ್ರು ಸೈನಿಕರು ಆಯಕಟ್ಟಿನ ಜಾಗಗಳಲ್ಲಿ ತಳವೂರಿದ್ದರು. ಶ್ರೀನಗರವನ್ನು ಸುತ್ತುವರೆದಿದ್ದ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತೀಯ ಸೈನಿಕರ ಮೊದಲ ದಂಡು ಶ್ರೀನಗರಕ್ಕೆ ಬಂದಿಳಿದದ್ದು ಅಕ್ಟೋಬರ್ ೨೭ರಂದು.

ಹಾಕಿಯಾಟವಾಡುತ್ತಿದ್ದಾಗ ಆದ ಕೈಮುರಿತಕ್ಕಾಗಿ ಕೈಗೆ ಪಟ್ಟಿ ಸುತ್ತಿಸಿಕೊಂಡಿದ್ದ ಸ್ಥಿತಿಯಲ್ಲಿ ಯುದ್ದ ಭೂಮಿಗೆ ಹೋಗಲು ಸಾಧ್ಯವಿಲ್ಲವೆಂದು ತಿಳಿಸಿದರೂ ಮೇಜರ್ ಸೋಮನಾಥಶರ್ಮ ತನ್ನ ದಂಡಿಗೆ ತಾನೆ ನಾಯಕರಾಗಿ ಹೊರಟರು. ಅಕ್ಟೋಬರ್ ೩೧ರಂದು ಮೇಜರ್ ಸೋಮನಾಥಶರ್ಮರ ಸೈನಿಕರನ್ನು ವಿಮಾನದ ಮೂಲಕ ಶ್ರೀನಗರದಲ್ಲಿಳಿಸಲಾಯಿತು.ಈ ಹೊತ್ತಿಗಾಗಲೆ ಭಾರತೀಯ ಸೈನಿಕ ಪ್ರತಿದಾಳಿಗೆ ತತ್ತರಿಸಿದ್ದ ಪಾಕಿಸ್ತಾನಿ ಸೈನಿಕರು ಗೆರಿಲ್ಲಾ ಮಾದರಿ ಯುದ್ದಕ್ಕೆ ಶರಣಾಗಿ ಶ್ರೀನಗರವನ್ನು ಆಕ್ರಮಿಸುವ ಹುನ್ನಾರದಲ್ಲಿದ್ದರು. ಶ್ರೀನಗರದ ಉತ್ತರದಿಂದ ಉಂಟಾಗುವ ಆಕ್ರಮಣವನ್ನು ತಡೆಯಲು ೩ ದಂಡುಗಳನ್ನು ನವೆಂಬರ್ ೩ರಂದು ಬಡಗಾಂ ಹಳ್ಳಿಯ ಬಳಿ ನಿಯೋಜಿಸಲಾಯಿತು. ತಕ್ಷಣವೆ ಅಲ್ಲೊಂದು ಸೈನಿಕ ನೆಲೆಯನ್ನು ಸ್ಥಾಪಿಸಿ ಸೈನಿಕರು ತಮ್ಮ ಕಾರ್ಯಾಚರಣೆಗಿಳಿದರು.

ಮೇಜರ್ ಸೋಮನಾಥಶರ್ಮರ ತಂಡ ಬಡಗಾಂನ ದಕ್ಷಿಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮಧ್ಯಾಹ್ನ ೨.೩೫ರವರೆಗೂ ಶತ್ರುಗಳ ಯಾವುದೇ ಸುಳಿವು ದೊರೆಯಲಿಲ್ಲ. ಆದರೂ ಸೋಮನಾಥರಿಗೆ ೩ ಗಂಟೆಯವರೆಗೆ ಅಲ್ಲೆ ಮುಂದುವರೆಯಲು ಸೂಚನೆ ಬಂತು.ಆಗ ಬಂತು ನೋಡಿ ಸಣ್ಣ ಹಳ್ಳವೊಂದರ ಮರೆಯಿಂದ ಇರುವೆಗಳು ಬಂದಂತೆ ಶಸ್ತ್ರಾಸ್ತ್ರ ಮದ್ದು ಗುಂಡು ಸ್ವಯಂಚಾಲಿತ ಬಂದೂಕುಗಳನ್ನೊಳಗೊಂಡ ೭೦೦ ಶತ್ರು ಸೈನಿಕರ ದಂಡು ಮೇಜರ್ ಶರ್ಮರವರ ಪಶ್ಚಿಮ ದಿಕ್ಕಿನಿಂದ ಆಕ್ರಮಿಸಿತು. ಸಂಖ್ಯೆಯಲ್ಲಿ ತನಗಿಂತ ೨-೪ ಪಟ್ಟು ಹೆಚ್ಚಿದ್ದ ಶತ್ರುವನ್ನು ತಡೆಹಿಡಿಯುವುದು ಕಷ್ಟವಾಗತೊಡಗಿತು. ತಮ್ಮ ಕಡೆಯ ಮದ್ದುಗುಂಡುಗಳು ಕಡಿಮೆಯಾಗುತ್ತಿತ್ತು ಶತ್ರುಗಳು ಹತ್ತಿರ ಬರಲಾರಂಭಿಸಿದ್ದು ಸ್ಪಷ್ಟವಾಗತೊಡಗಿತು. ಕೈಯಲ್ಲಿ ಬ್ಯಾಂಡೇಜ್ ಕಟ್ಟಿದ್ದರೂ ಸೈನಿಕರ ಬಂದೂಕುಗಳಿಗೆ ಗುಂಡು ತುಂಬಿಸುತ್ತಾ ಅವನ್ನು ತನ್ನ ಹುಡುಗರಿಗೆ ತೆರೆದ ಮೈದಾನದಲ್ಲಿ ಶತ್ರುಗಳ ನೇರ ದಾಳಿಗೆ ಗುರಿಯಾಗುವ ಅಪಾಯವಿದ್ದರೂ ರವಾನಿಸುತ್ತಾ ಮೇಜರ್ ಶರ್ಮ ತನ್ನ ತಂಡವನ್ನು ರಕ್ಷಿಸುತ್ತಾ ಶತ್ರು ಸೈನ್ಯ ಮುಂದೆ ಬರದಂತೆ ತಡೆಯುವಲ್ಲಿ ಯಶಸಸ್ವಿಯಾದರೂ ಅದು ಹೆಚ್ಚು ಸಮಯ ಸಾಧ್ಯವಿಲ್ಲವೆಂದು ಅವರಿಗೆ ಅರಿವಾಗಿತ್ತು. ಈ ಮಧ್ಯೆ ಶತ್ರುಗಳು ಸಫಲರಾದರೆ ಇಡೀ ಶ್ರೀನಗರ ಮತ್ತು ಶ್ರೀನಗರದ ವಿಮಾನ ನಿಲ್ದಾಣ ಶತ್ರುಗಳ ಪಾಲಾಗುವುದು ನಿಶ್ಚಿತವೆಂದರಿತ ಮೇಜರ್ ಶರ್ಮ ಭಾರತೀಯ ವಿಮಾನಗಳು ಶತ್ರುಗಳ ಗುರಿಗೆ ಸಿಗದಂತೆ ತಡೆಯನ್ನು ನಿರ್ಮಿಸಿದರು. ಈಗಾಗಲೆ ಶತ್ರುವು ತನ್ನ ದಾಳಿಯನ್ನು ತೀವ್ರಗೊಳಿಸಿದ್ದರಿಂದ ಭಾರತೀಯರ ಕಡೆ ಹೆಚ್ಚು ನಷ್ಟವುಂಟಾಗತೊಡಗಿತು. ಶಸ್ತ್ರಾಸ್ತ್ರಗಳು ಖಾಲಿಯಾಗತೊಡಗಿದವು. ಮೇಜರ್ ಶರ್ಮ ಪಕ್ಕದಲ್ಲೆ ಇದ ಶತ್ರಾಸ್ತ್ರ ಸಂಗ್ರಹಕ್ಕೆ ಕೈಬಾಂಬೊಂದನ್ನು ಬಂದು ಬಿತ್ತು.

ಆದರೆ ಭಾರತೀಯ ಕೆಚ್ಚೆದೆಯ ಯೋಧರು ಪಾಕಿಸ್ತಾನಿ ಸೈನಿಕರು ಮುಂದೆ ಬರದಂತೆ ೬ ಗಂಟೆಗಳ ಕಾಲ ತಡೆಹಿಡಿದರು ಅಷ್ಟು ಸಮಯ ಸಾಕಾಗಿತ್ತು ಭಾರತೀಯರ ಇತರ ದಂಡುಗಳು ಬಂದು ಸೇರಿಕೊಳ್ಳಲು ಮುಂದಿನದ್ದೆಲ್ಲ ಇತಿಹಾಸ. ಮೇಜರ್ ಶರ್ಮ ಸೇರಿದಂತೆ ಇನ್ನೂ ೨೧ ಜನ ಸೈನಿಕರನ್ನು ಪಾಕಿಸ್ತಾನದ ಸೈನ್ಯ ಬಲಿ ತೆಗೆದುಕೊಂಡಿತ್ತು.

೧೯೪೮ರಲ್ಲಿ ಪ್ರಪ್ರಥಮ ಬಾರಿಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಅಪ್ರತಿಮ ಸಾಹಸ ಮೆರೆದ ಮೇಜರ್ ಸೋಮನಾಥಶರ್ಮರಿಗೆ ಪರಮವೀರ ಚಕ್ರ (ಮರಣೋತ್ತರ) ಪ್ರಶಸ್ತಿ ಪ್ರಧಾನ ಮಾಡಲಾಯಿತು. ೧೯೮೮ ರಿಂದ ೧೯೯೦ ರವರೆಗೆ ಈ ಮೇಜರ್ ಸೋಮನಾಥಶರ್ಮ ಅವರ ಸಹೋದರ ಜನರಲ್ ವಿ.ಎನ್ ಶರ್ಮ ಭಾರತೀಯ ಸೈನ್ಯದ ಅತ್ಯುನ್ನತ ಹುದ್ದೆ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದರು ಎಂಬುದು ಗಮನಾರ್ಹ.

ಮೇಜರ್ ಸೋಮನಾಥರಿಂದ ಬಂದ ಕೊನೆಯ ಸಂದೇಶ.

ಶತ್ರು ನಮ್ಮಿಂದ ಕೇವಲ ೫೦ ಯಾರ್ಡಗಳಷ್ಟು ದೂರದಲ್ಲಿದ್ದಾನೆ. ನಾವು ಅವರಿಗಿಂತ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದೇವೆ. ನಾವು ಅತ್ಯಂತ ತೀವ್ರತರ ಗುಂಡಿನ ದಾಳಿಯನ್ನು ಎದುರಿಸುತ್ತಿದ್ದೇವೆ. ಆದರೂ ನಾವು ನಮ್ಮಲ್ಲಿ ಕಡೆಯ ಗುಂಡು ಕಡೆಯ ಪ್ರಾಣವಿರುವವರೆಗೆ ಇಲ್ಲಿಂದ ಒಂದಿಂಚೂ ಶತ್ರುವನ್ನು ಒಳಬಿಡುವುದಿಲ್ಲ.

ಕಾರ್ಗಿಲ್ ಯುದ್ದ ನಡೆದಿದ್ದು ಬಿಜೇಪಿಗಾಗಿ ಎಂದು ಸೈನ್ಯದ ಆತ್ಮ ಸ್ಥೈರ್ಯ ಕುಸಿಯುವಂತಹ ಮಾತನಾಡುವ ನಮ್ಮ ಸಂಸದರಿರುವವರೆಗೆ, ಇಂತಹ ದೇಶಭಕ್ತ ಸೈನಿಕರ ಸಾಹಸ ತ್ಯಾಗ ಬಲಿದಾನಗಳು ನಮ್ಮ ಪಠ್ಯಗಳಲ್ಲಿ ಅಳವಡಿಕೆಯಾಗುವುದಿಲ್ಲ.

Saturday, July 11, 2009

ಉಗ್ರವಾದ, ಪಾಕಿಸ್ತಾನ ಮತ್ತು ಬುದ್ದಿಜೀವಿಗಳು

Add Image
ಉಗ್ರರನ್ನು ಬೆಳೆಸಿದ್ದೇ ನಾವು: ಮೊದಲ ಬಾರಿಗೆ ಪಾಕ್ ಒಪ್ಪಿಗೆ

೦೯/೦೭/೨೦೦೯ ರಂದು ಎಲ್ಲ ಪತ್ರಿಕೆಗಳಲ್ಲೂ ಮುಖ ಪುಟದಲ್ಲಿರಬೇಕಾದ ಸುದ್ದಿಯೊಂದು ಕೊನೆಯ ಪುಟಗಳಿಗೆ ಹೋಗಿರುವುದು ವಿಷಾದನೀಯ. ಇರಲಿಬಿಡಿ ನನ್ನಂತಹವರಿಗೆ ಇಂತಹ ಸುದ್ದಿಗಳೆ ಗಮನ ಸೆಳೆಯುವುದು. ಭಯೋತ್ಪಾದನೆಯನ್ನು ಅಲ್ಪಾವಧಿ ಗುರಿಸಾಧನೆಗಾಗಿ ನಾವೇ ರಾಷ್ಟ್ರೀಯ ನೀತಿಯಂತೆ ಬೆಳೆಸಿದ್ದೇವೆ ಎಂದು ಆ ದೇಶದ ಅಧ್ಯಕ್ಷನೇ ಹೇಳಿರುವುದು ಗಮನಾರ್ಹ ಮತ್ತು ಅದರಲ್ಲಿ ಆಶ್ಚರ್ಯ ಪಡುವಂತದ್ದೇನು ಇಲ್ಲ. ಇಡಿ ಜಗತ್ತಿಗೆ ಗೊತ್ತಿದ್ದ ಸತ್ಯ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ.

ಆದರೆ ಕನ್ನಡಿ ಬೇಕಾಗಿರುವುದು ನಮ್ಮಲ್ಲಿನ ಡೋಂಗಿ ಬುದ್ದಿಜೀವಿಗಳಿಗೆ.

ಬುದ್ದಿಜೀವಿಗಳೆ ಈಗೇನು ಹೇಳುತ್ತೀರಿ?

ಏನಪ್ಪ ಇವನು ದೇಶದ ಹಿತಚಿಂತಕರನ್ನೆ ಪ್ರಶ್ನಿಸುತ್ತಿದ್ದಾನಲ್ಲ ಎಂದು ಗಾಬರಿಯಾಗಬೇಡಿ. ಅದಕ್ಕೂ ಕಾರಣವಿದೆ. ಹಿಂದೊಮ್ಮೆ ಸಂಪದ ದಲ್ಲಿ ನಡೆದ ಒಂದು ಸುಧೀರ್ಘ ಚರ್ಚೆಯಲ್ಲಿ ಸ್ವಘೋಷಿತ ಬುದ್ದಿಜೀವಿಯೊಬ್ಬರು (ಇವರ ಹಿಂದೂಗಳ ವಿರುದ್ದ ದ್ವೇಷಪೂರಿತ ಲೇಖನಗಳು ತಲೆಕೆಟ್ಟಾಗೊಮ್ಮೆ ಪ್ರಕಟವಾಗುವ ಪತ್ರಿಕೆ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟವಾಗುತ್ತವೆಯೆಂದು ಇವರ ಹೆಮ್ಮೆ) ತಮ್ಮ ಲೇಖನದಲ್ಲಿ ಹೀಗೆ ಉಧ್ದರಿಸಿದ್ದರು.

"ಪಾಕಿಸ್ತಾನ ಸರ್ಕಾರ ಕೂಡ ನಮ್ಮ ಸರ್ಕಾರದಂತೆಯೇ ಮತೀಯ ಮೂಲಭೂತವಾದಿ ಗುಂಪುಗಳ ಭಯೋತ್ಪಾದನೆಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ ಮತ್ತು ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವಿರುತ್ತದೆ ಎಂದು ನಂಬುವುದೂ ತಪ್ಪಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು" (ಇದರ ಪ್ರತಿಯನ್ನು ಲಗತ್ತಿಸಿದ್ದೇನೆ. ಸಂಪದದ ಕೊಂಡಿಯನ್ನು ಕೊಡಬಹುದಿತ್ತು ಆದರೆ ಪ್ರತಿಯೇ ಹೆಚ್ಚು ಸೂಕ್ತವೆಂದು ನನ್ನ ಅನಿಸಿಕೆ)

ಇದಕ್ಕೆ ನನ್ನ ಉತ್ತರ ಹೀಗಿತ್ತು

"ಹೌದು ಹೇಳಿ ನಿಮ್ಮಂತ ಸಮಾಜವಾದಿಗಳಿಗೆ ಪಾಕಿಸ್ಥಾನದ ಅಧ್ಯಕ್ಷನೆ ಸ್ವತಃ ಅದನ್ನು ಧೃಡಪಡಿಸಿದರೂ ನಂಬಿಕೆ ಬರುವುದಿಲ್ಲ ಬಿಡಿ. ಇಷ್ಟಕ್ಕೂ ನಿಮ್ಮನ್ನು ನಂಬಿ ಎಂದು ಯಾರು ಅಂಗಲಾಚಿದ್ದಾರೆ? ನೀವು ನಂಬಿದರೆಷ್ಟು ಬಿಟ್ಟರೆಷ್ಟು, ಇಡೀ ಜಗತ್ತಿಗೆ ಗೊತ್ತಿದೆ ಸತ್ಯ."

ಇದಕ್ಕೆ ಈ ಮಹನೀಯ ಲೇಖಕರ ಉತ್ತರ

"ಪಾಕಿಸ್ಥಾನ ಹಲವು ನೆಲೆಗಳಲ್ಲಿ ಒಡೆದು ಹೋಗಿರುವ ದೇಶ. ಅಲ್ಲಿ ನಿಜವಾಗಿ ಒಂದು ಪ್ರಾತಿನಿಧಿಕ ಪ್ರಭುತ್ವವೆಂಬುದಿಲ್ಲ. ಅಲ್ಲೀಗ ಬಹು ವರ್ಷಗಳ ನಂತರ ಪ್ರಜಾಪ್ರಭುತ್ವದ ಸರ್ಕಾರ ಬಂದಿದೆ. ಆದರೆ ಅದಿನ್ನೂ ರಾಷ್ಟ್ರದ ಮೇಲೆ ಸಂಪೂರ್ಣ ಹತೋಟಿ ಸಾಧಿಸಿಲ್ಲ. ಹಾಗಾಗಿ ಸರ್ಕಾರದ ಅರಿವಿಲ್ಲದೇ ಅಲ್ಲಿ ಮತಾಂಧ ಷಕ್ತಿಗಳಿಂದ ಅನೇಕ ದುಷ್ಟ ಚಟುವಟಿಕೆಗೆಗಳು ನಡೆದಿರುವ ಸಾಧ್ಯತೆ ಇದೆ."

ಇದನ್ನೆಲ್ಲ ಏಕೆ ವಿಷದಪಡಿಸುತ್ತಿದ್ದೇನೆಂದರೆ, ಈ ಎಲ್ಲ ಸಾಲುಗಳು ಅರಿವಿಲ್ಲದೆ ಬಂದವಲ್ಲ. ಆದರೆ ಮುಂದಾಲೋಚನೆಯಿಲ್ಲದೆ ವಿರೋಧಿಸುವುದೆ ಪರಮ ಧ್ಯೇಯವೆಂದು ಪರಿಗಣಿಸಿದ್ದರಿಂದಾದ ಅನಾಹುತ.

ಆದರೆ ನನ್ನ ಆ ಮಾತು ಸರಿಯಾಗಿ ೭ ತಿಂಗಳಿಗೆ ಸಾಕ್ಷಿ ಸಮೇತ ನಿಜವಾಗುತ್ತದೆಯೆಂದು ನಾನು ಖಂಡಿತ ಭಾವಿಸಿರಲಿಲ್ಲ.

ಈ ಬುದ್ದಿಜೀವಿಗಳಿಗೇನಾಗಿದೆ? ನನ್ನಂತಹ ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅರ್ಥವಾಗುವ ಸತ್ಯ ಮತ್ತು ವಾಸ್ತವ ಇವರಿಗೇಕೆ ಅರ್ಥವಾಗುವುದಿಲ್ಲ? ಯಾರನ್ನೋ ಟೀಕಿಸುವ, ತೇಜೋವಧೆ ಮಾಡುವ ಭರದಲ್ಲಿ ಸ್ವದೇಶವನ್ನೆ ಮತ್ತದರ ಹಿತಾಸಕ್ತಿಯನ್ನೆ ಬಲಿಗೊಡಲು ನಿಂತಿದ್ದಾರಲ್ಲ ಇವರೇಕೆ ಹೀಗೆ?

ಸ'ಮಜಾ'ವಾದಿ ಬುದ್ದಿಜೀವಿಗಳೆ ಈಗ ಹೇಳಿ ನೀವು ದೇಶದ್ರೋಹಿಗಳಲ್ಲವೆ? ಅಂದು ಪಾಕಿಸ್ತಾನ ನಿರ್ದೋಷಿ ಎಂದು ಪರಿಪರಿಯಾಗಿ ಅಂಗಲಾಚಿದ ತಾವು ಇಂದು ಪಾಕಿಸ್ತಾನದ ಸ್ವತಃ ಅಧ್ಯಕ್ಷನೆ ನಿಮ್ಮ ಬೆಂಬಲಕ್ಕೆ ನಿಲ್ಲದ ಕಾಲದಲ್ಲಿ ತಮ್ಮ ಸಮರ್ಥನೆಗೆ ಏನನ್ನು ಬಳಸುತ್ತೀರಿ? (ಪಾಕಿಸ್ತಾನದ ಚರಿತ್ರೆಯೆ ಅಂತಹದು ಅದು ಯಾರ ನಂಬಿಕೆಗೂ ಅರ್ಹವಲ್ಲ ಎಂಬುದು ಇಡಿ ವಿಶ್ವಕ್ಕೆ ಗೊತ್ತಿದೆ) ರಾಷ್ಟ್ರೀಯತೆ, ಬಿಜೆಪಿ, ಆರ್ಎಸ್ ಎಸ್ ಮತ್ತು ಹಿಂದೂಗಳನ್ನು ವಿರೋಧಿಸಿ ತಮ್ಮ ತೆವಲು ತೀರಿಸಿಕೊಳ್ಳುವ ಭರದಲ್ಲಿ ಶತ್ರುವಿನ ಶತ್ರು ಮಿತ್ರ ಎನ್ನುವ ಸಮಯೋಚಿತ ಸೂತ್ರಕ್ಕೆ ಶರಣಾಗಿ ಅಂದು ಪಾಕಿಸ್ತಾನವನ್ನು ಸಮರ್ಥಿಸಲು ನಿಂತವರನ್ನು ದೇಶದ್ರೋಹಿಗಳೆನ್ನಲು ಬಹುಷಃ ಇದಕ್ಕಿಂತ ಹೆಚ್ಚಿನ ಸಾಕ್ಷ್ಯದ ಅವಶ್ಯಕತೆಯಿದೆಯೆ?

ಸ್ವತಃ ಪಾಕೀಸ್ತಾನದ ಅಧ್ಯಕ್ಷನೆ ಉಗ್ರರನ್ನು ಬೆಳೆಸಿರುವುದು ನಾವೇ ಎಂದು ಒಪ್ಪಿಕೊಂಡರೂ ನೀವು ಅದನ್ನು ಒಪ್ಪಲಾರಿರಿ ಅಲ್ಲವೆ? ಅಥವಾ ನಾನು ಹೇಳಿದ್ದು ಹಾಗಲ್ಲ ಹೀಗೆ ಎಂದು ತಿಪ್ಪೆ ಸಾರಿಸಲು ಮುಂದಾಗುತ್ತೀರಿ.ಈಗಲೂ ಪಾಕಿಸ್ತಾನ ಸರ್ಕಾರಕ್ಕೂ ಭಯೋತ್ಪಾದಕರಿಗೂ ಸಂಬಂಧವಿಲ್ಲ ನಾನು ಹೇಳಿದ್ದೇ ಬೇರೆ ಅದನ್ನು ತಿರುಚಲಾಗಿದೆ ಎಂಬ ನಿಮ್ಮ ಸಮಯಸಾಧಕತನದ ಮಾತನ್ನು ಇಲ್ಲಿ ಉದ್ಗರಿಸಿ ಮತ್ತೊಮ್ಮೆ ನಗೆಪಾಟಲಿಗೀಡಾಗಬೇಡಿ.

ಬೆಂಕಿಯನ್ನು ಮಡಿಲಲ್ಲಿಟ್ಟುಕೊಂಡು ಸಾಕಿದ ಪಾಕಿಗಳಿಗೆ,ಬಿಸಿ ತಟ್ಟಿ ಅವರೇ ಒಪ್ಪಿಕೊಂಡಿದ್ದಾರೆ, Succes dosen't happen in Isolation ಅನ್ನುವ ಸತ್ಯದ ಅರಿವು ಬಹುಶಃ ಪಾಕಿಗಳಿಗೆ ಅರ್ಥವಾಗಬಹುದಾದರೆ ನಿಮಗೆಂದು ಜ್ಙಾನೋದಯವಾಗುತ್ತದೆ? ಹಸಿ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ನಿಮ್ಮಂತ ಬುದ್ದಿವಂತರಿಗೆ ಈ ವರದಿಗಳು ಅರ್ಥವಾಗುವುದಿಲ್ಲವೇ? ಅಥವಾ ಧೃತರಾಷ್ಟ್ರ ಪ್ರೇಮವೆ?

ಬುದ್ದಿಜೀವಿಗಳೆಂದು ಸ್ವಯಂ ಹಣೆಪಟ್ಟಿ (ಕ್ಷಮಿಸಿ, ಹಣೆಪಟ್ಟಿಯಲ್ಲ ಕಣ್ಕಾಪು) ಕಟ್ಟಿಕೊಂಡು ನಂಬಿಕೆಗೆ ಅರ್ಹವಲ್ಲದವರನ್ನು ಸಮರ್ಥಿಸಿ ಓದುಗರ ದಿಕ್ಕು ತಪ್ಪಿಸುವ ಕೆಲಸವನ್ನು ಇನ್ನೂ ಎಷ್ಟು ದಿನ ಮಾಡುತ್ತೀರಿ? ಭಯೋತ್ಪಾದಕರು ಹೊರಗಿನ ಶತ್ರುಗಳಾದರೆ ಅವರನ್ನು ಎದುರಿಸಬಹುದು ಆದರೆ ಇಂತಹ ಅಕ್ಷರ ಭಯೋತ್ಪಾದಕರು ಒಳಗಿನಿಂದಲೆ ಗೆದ್ದಲು ಹಿಡಿಸಿ ದೇಶವನ್ನೆ ಕೃಶವಾಗಿಸುವ ಕ್ಯಾನ್ಸರ್ ಮಾರಿಯಾಗುವ ನೀವುಗಳು ಇದೆಲ್ಲದರ ಬದಲಾಗಿ ಬದಲು ಕಟು ಸತ್ಯವನ್ನೇಕೆ ನುಡಿಯಬಾರದು? ನಿಮ್ಮ ಸುಳ್ಳಿನ ಬುನಾದಿಯನ್ನು ನಂಬಿಕೊಂಡು ಭಾರತವೂ, ಮತಾಂಧತೆಯಿಂದಲೆ ಜನಿಸಿದ ನಿಮ್ಮ ಪ್ರೇಮಿ ರಾಷ್ಟ್ರದಂತೆ ಮತ್ತೊಂದು ವಿಫಲ ರಾಷ್ಟ್ರವಾಗುವುದು ಬೇಡ. ನಿಮಗೆ ಸಮಾಜವನ್ನು ಸುಧಾರಿಸುವ ಕಳಕಳಿಯಿದ್ದರೆ ವಾಸ್ತವ ಮತ್ತು ಸತ್ಯವನ್ನಾಧರಿಸಿದ ಲೇಖನಗಳ ಮೂಲಕ ಅದನ್ನು ಸಾಕಾರಗೊಳಿಸಿ. ಹಿಂದೂ ಮೂಲಭೂತವಾದಿಗಳನ್ನು ವಿರೋಧಿಸುವ ಭರದಲ್ಲಿ ದೇಶದ್ರೋಹಿ ಸಂಘಟನೆಗಳಿಗೆ, ದೇಶದ ಶತ್ರುಗಳಿಗೆ, ದರೋಡೆಗಿಳಿದಿರುವ ನಕ್ಸಲರಿಗೆ, ಜೀವ ತೆಗೆಯುವ ಭಯೋತ್ಪಾದಕರಿಗೆ ನಿಮ್ಮ ಬೆಂಬಲವನ್ನು ಸೀಮಿತಗೊಳಿಸದೆ ನೈಜ ರಾಷ್ಟ್ರಪ್ರೇಮಿಗಳಿಗೆ ಮೀಸಲಿಡಿ ಅವರು ಬಿಜೇಪಿಯವರಾಗಲಿ ಕಾಂಗ್ರೆಸ್ಸಿನವರಾಗಲಿ. ಇಲ್ಲದಿದ್ದರೆ ಹೀಗೆ ನಿರಂತರವಾಗಿ ಓದುಗರ ಮುಂದೆ ನಿಮ್ಮ ಅಸಲು ಬಣ್ಣ ಬಯಲಾಗುತ್ತಾ ಹೋಗುತ್ತದೆ.

ಮತಾಂಧತೆಯನ್ನು ವಿರೋಧಿಸುವ ಬುದ್ದಿಜೀವಿಗಳು ಮತಾಂಧತೆಯಿಂದಲೆ ಜನ್ಮ ತಳೆದ, ಮತಾಂಧತೆಯಿಂದಲೆ ಬದುಕಿರುವ, ಮತಾಂಧತೆಯಿಂದಲೆ ಭಾರತದ ಮೇಲೆ ಆಕ್ರಮಣ ನಡೆಸುವ, ಕೊನೆಗೆ ಅದರಲ್ಲೆ ನಶಿಸಿಹೋಗುವ ದೇಶವೊಂದರ ಬೆಂಬಲಕ್ಕೆ ನಿಲ್ಲುವುದು ಸರ್ವತಾ ಸಮ್ಮತವಲ್ಲ.

ಬುದ್ದಿ ಜೀವಿಗಳೇ, ನಿಮ್ಮಿಂದ ಸಮಾಜ ಮಾರ್ಗದರ್ಶನ ಖಂಡಿತ ಬಯಸುತ್ತದೆ ಆದರೆ ಅದು ದೇಶಕ್ಕೆ ಮಾರಕವಾಗದಿರಲಿ. ಲೇಖಕರಿಗಿರಬೇಕಾದ ಮುಂದಾಲೋಚನೆಯನ್ನು ಮೈಗೂಡಿಸಿಕೊಳ್ಳಿ. ಬಿಜೇಪಿಯನ್ನು ವಿರೋಧಿಸುವ ಒಂದಂಶದ ಕಾರ್ಯಕ್ರಮಕ್ಕೆ ತಕ್ಕಂತೆ ಲೇಖನಗಳನ್ನು ಬರೆದು ದೇಶದ್ರೋಹಿಗಳನ್ನು ಬೆಂಬಲಿಸಿ ತನ್ಮೂಲಕ ದೇಶದ್ರೋಹಿಗಳಾಗಬೇಡಿ ಎಂದು ನನ್ನ ಕಳಕಳಿಯ ಮನವಿ.

ನಿಜಕ್ಕೂ ಸ್ವವಿಮರ್ಶೆಗೆ ತನ್ನನ್ನು ತಾನು ಒಪ್ಪಿಕೊಳ್ಳುವ ಆ ಮೂಲಕ ತನ್ನನ್ನು ತಿದ್ದಿಕೊಳ್ಳುವ ಹಂತಕ್ಕೆ ಆ ದೇಶ ಬಂದು ನಿಂತಿದ್ದರೆ ಭಾರತವೇ ಕುಸಿಯುತ್ತಿರುವ ಆ ದೇಶಕ್ಕೆ ಆಸರೆಯಾಗಿ ನಿಂತು ಮೇಲೆತ್ತಲಿ. ಇಷ್ಟಕ್ಕೂ "ಸರ್ವೆ ಜನ ಸುಖಿನೋ ಭವಂತು" "ವಸುಧೈವ ಕುಟುಂಬಕಂ" "ದಯೆಯೆ ಧರ್ಮದ ಮೂಲ" ಎಂದು ಜಗತ್ತಿಗೆ ಸಾರಿದ್ದೆ ಭಾರತ. "ಕ್ಷಮಾಯಾ ಧರಿತ್ರಿ" ನೀತಿಯನ್ನು ಅಕ್ಷರಸಹ ಪಾಲಿಸಿ ನಮ್ಮ ಶತ್ರು ರಾಷ್ಟ್ರವಾಗಿದ್ದರೂ ಮನಃಪರಿವರ್ತನೆ ನಮಗೆ ಕಾಣಿಸಿದರೆ ನಮ್ಮೊಡನೆ ಕರೆದೊಯ್ಯೊಣ.
ಹಾಂ!!! ಬುದ್ದಿಜೀವಿಗಳು ನಮಗೆ ಅವಕಾಶ ಕೊಟ್ಟರೆ ಮಾತ್ರ!

ಬುದ್ದಿಜೀವಿಗಳೆ ಇನ್ನಾದರೂ ಎಚ್ಚೆತ್ತುಕೊಳ್ಳಿ. ನಂಬಿಕೆಗೆ ಅನರ್ಹವಾದ ದೇಶವೊಂದನ್ನು ಬೆಂಬಲಿಸಿ ಹೀಗೆಯೆ ಆಗೊಮ್ಮೆ ಈಗೊಮ್ಮೆ ಅದರ ಬಟ್ಟೆ ಕಳಚಿ ಬಿದ್ದಾಗ ಎಲ್ಲರೆದುರಿಗೆ ಬೆತ್ತಲಾಗಬೇಡಿ.

Tuesday, July 7, 2009

ಸಾರ್ ಬೆಳಿಗ್ಗೆ ೫ ಗಂಟೆಗೆ ಹೊರಡೋಣ ಇಲ್ಲಾಂದ್ರೆ ಒಂದೆ ದಿನದಲ್ಲಿ ಹತ್ತಿ ಇಳಿಯುವುದು ಕಷ್ಟ ಆಗುತ್ತೆ ಎಂದ ಪಾಂಡೆ ಮಾತಿಗೆ ತಲೆದೂಗಿದೆವು. ಎತ್ತರಕ್ಕೆ ಹೋದಹಾಗೆ ಆಮ್ಲಜನಕದ ಕೊರತೆಯಾಗುತ್ತೆ ಎಂದು ಆಮ್ಲಜನಕದ ಸಿಲಿಂಡರ್ಗಳನ್ನು ಕೊಂಡೆವು. ಬೆಳಿಗ್ಗೆ ೫ ಗಂಟೆಗೆ ಪಾಂಡೆಯನ್ನು ಎಚ್ಚರಗೊಳಿಸಿ ವಾಹನದಲ್ಲಿ ಹೊರಟೆವು. ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಇಂದು ಕೇದಾರನಾಥದ ಬಾಗಿಲು ತೆರೆದ ೨ನೆ ದಿನ. ೬ ತಿಂಗಳು ಹಿಮದಿಂದ ಮುಚ್ಚಿ ಹೋಗಿರುವ ದೇವಸ್ತಾನವನ್ನು ಈ ಬಾರಿ ಏಪ್ರಿಲ್ ೨೯ರಂದು ತೆರೆಯುತ್ತಾರೆಂದು ತಿಳಿಸಲಾಗಿತ್ತು. ಆದರೆ ಅದನ್ನು ಮೇ ೧ ರಂದು ತೆರೆಯಲಾಗಿತ್ತು. ಆದ್ದರಿಂದಲೇ ಏನೋ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗೌರಿ ಕುಂಡ ತಲುಪುವಷ್ಟರಲ್ಲಿ ೬.೩೦ ಆಗಿತ್ತು. ದಾರಿಯಲ್ಲಿ ನನ್ನ ಗಮನವನ್ನು ಒಂದು ಮಾರುತಿ ಕಾರು ಸೆಳೆಯಿತು. ಎಲ್ಲರಿಗೂ ಅದನ್ನೆ ತೋರಿಸಿದೆ. ಹೌದು ಹಿಂದೆ ಕಾರ್ತೀಕ್ ಪುನೀತ್ ಎಂಬ ಕನ್ನಡ ಲಿಪಿ ನನ್ನ ಗಮನ ಸೆಳೆದಿತ್ತು. KA-17 ನೊಂದಣಿ ಸಂಖ್ಯೆ ಆಶ್ಚರ್ಯ ಉಂಟು ಮಾಡಿತ್ತು. ಯಾರೋ ದೆಹಲಿಯಲ್ಲೊ ಅಥವ ಹರಿದ್ವಾರದಲ್ಲಿ ನೆಲೆಸಿರುವ ಕನ್ನಡಿಗರಿರಬೇಕು ಎಂದು ಯೋಚನೆ ಮಾಡುತ್ತಾ ಗೌರಿಕುಂಡ ಎಂಬ ಬಿಸಿ ನೀರಿನ ಕುಂಡದ ಕಡೆಗೆ ಪಯಣಿಸಿದೆವು. ಕುಂಡವೆನ್ನುವ ಆ ಒಂದು ದೊಡ್ಡದಾದ ತೊಟ್ಟಿಯಂತಹ ಜಾಗದಲ್ಲಿ ಈಗಾಗಲೆ ೧೫-೨೦ ಜನ ಸ್ನಾನ ಮಾಡುತ್ತಿದ್ದರು. ಸಣ್ಣದಾದ ನಲ್ಲಿಯಿಂದ ಬೀಳುತ್ತಿದ್ದ ನೀರಿನಂತೆ ಒಂದೆ ಸಮನೆ ಸುರಿಯುತ್ತದ್ದ ನೀರನ್ನು ಸಂಗ್ರಹಿಸಿ ಅದನ್ನೆ ಸ್ನಾನ ಕುಂಡವಾಗಿ ಪರಿವರ್ತಿಸಿದ ಅಲ್ಲಿ ಸ್ನಾನ ಮಾಡಲು ಯಾರಿಗೂ ಮನಸ್ಸಾಗಲಿಲ್ಲ. ಆದರೂ ಸ್ನಾನ ಮಾಡದೆ ದೇವಸ್ತಾನಕ್ಕೆ ಹೋಗುವುದು ಸಲ್ಲ. ಸರಿ ಒಮ್ಮೆ ಅಲ್ಲಿ ಬೀಳುತ್ತಿದ್ದ ನೀರನ್ನು ತಲೆಯ ಮೇಲೆ ಸುರಿದುಕೊಂಡು ಪಕ್ಕದಲ್ಲೆ ಇದ್ದ ಖಾಸಗಿ ಸ್ನಾನದ ಮನೆಗಳಲ್ಲಿ ಸ್ನಾನ ಮಾಡಿ ಹೊರಟೆವು. ೬೫೦ ರೂಗಳಿಗೆ ಒಂದರಂತೆ ಕಚ್ಚರ್ ಅನ್ನು ತೆಗೆದುಕೊಂಡೆವು.

ಸುಮಾರು ೮.೩೦ಕ್ಕೆ ನಮ್ಮ ೧೪ ಕಿ.ಮೀ ಗಳ ಕಚ್ಚರ್ ಪ್ರಯಾಣ ಪ್ರಾರಂಭವಾಯಿತು.ಶ್ರೀಕಾಂತ ಅಧಿಕೃತ ಚೀಟಿ ತರದೆ ಹತ್ತಿದುದರಿಂದ ಅವನಿಗೆ ನಡೆಯಲು ಆಗದಂತಹ ಒಂದು ಕಚ್ಚರ್ ಸಿಕ್ಕಿ ಅವನು ತುಂಬ ಹಿಂದೆ ಉಳಿಯತೊಡಗಿದ. ಕೆಲವು ಶಕ್ತಿಯುತವಾದ ಪ್ರಾಣಿಗಳು ಮಾತ್ರ ಬೇಗನೆ ಬೇಗನೆ ಹತ್ತಿ ಹೋಗುತ್ತವೆ. ಆದರೆ ಕೆಲವು ಪ್ರಯಾಣಿಕರನ್ನು ಬೀಳಿಸಿದ ಪ್ರಸಂಗಗಳೂ ಇವೆ. ನಿಧಾನವಗಿ ತೆರೆಯುತ್ತಾ ಹೋಗುವ ಕಣ್ವೆ ಆಳವಾಗುತ್ತ ಹಿಂದೆ ಬಂದ ಕಣಿವೆಗಳು ಮರೆಯಾಗುತ್ತ ಹೋಗುತ್ತವೆ. ಬಹುಶಃ ಮಳೆ ಬಿದ್ದರೆ ಜಾರಬಹುದೆಂಬ ಕಾರಣಕ್ಕೆ ಸಿಮೆಂಟ್ ಕಲ್ಲು ರಸ್ತ್ರೆಗಳು ಈ ಪ್ರಾಣಿಗಳಿಗೆ ನಡೆಯಲು ತುಂಬಾ ಕಷ್ಟ ಕೊಡುತ್ತವೆ. ಸ್ವತಃ ಪ್ರಾಣಿಪ್ರಿಯನಾದ ನಾನು ಈ ಪ್ರಾಣಿಗಳ ಮೇಲೆ ಕೂತು ಹೋಗಲು ನನ್ನ ಮನಸ್ಸೇಕೊ ಒಪ್ಪುತ್ತಿರಲಿಲ್ಲ.ನಡೆಯಲು ನಾಣು ಸಿದ್ದನಿದ್ದೆ ಆದರೆ ಸ್ನೇಹಿತರೊಡನೆ ಬಂದಾಗ ನನ್ನಿಂದ ಅವರಿಗೆ ತೊಂದರೆಯಾಗಬಾರದೆಂದು ಅನಿವಾರ್ಯವಾಗಿ ನಾನು ಅವರೊಡನೆ ಹೋಗಲೇ ಬೇಕಿತ್ತು. ನಮ್ಮ ಹೊಟ್ಟೆಹೊರೆಯುವುದಕ್ಕೆ ಪ್ರಾಣಿಗಳನ್ನು ಬಳಸಿಕೊಳ್ಳುವುದಕ್ಕೆ ನನ್ನ ಮನಸ್ಸು ಸಹಕರಿಸುತ್ತಿರಲಿಲ್ಲ. ಅದು ದೇವಸ್ತಾನವೇ ಆಗಿರಲಿ ಬೆಂಗಳೂರಿನ ಒಂಟೆತ್ತಿನ ಗಾಡಿಗಳೇ ಆಗಿರಲಿ ಅಥವ ಟನ್ ಗಟ್ಟಲೇ ಭಾರ ಹೇರುವ ನಮ್ಮ ರೈತರಾಗಲಿ ಎಲ್ಲರೂ ಒಂದೆ ಎನ್ನುವುದು ನನ್ನ ಮನದಾಳದ ಅಭಿಪ್ರಾಯ. ಆದರೆ ವ್ಯವಸ್ಥೆಯ ಮುಂದೆ ನಾನೊಂದು ಹುಲುಕಡ್ಡಿ ಎಂಬ ವಾಸ್ತವದ ಅರಿವೂ ನನಗಿರಲೇಬೆಕಲ್ಲ.

ಶ್ರೀಕಾಂತನ ಕಚ್ಚರ್ಗೆ ಬಹುಶಃ ಅದರ ಮಾಲೀಕ ಅದಕ್ಕೇನು ತಿನ್ನಿಸಿರಲಿಲ್ಲವೊ ಅಥವ ವಯಸ್ಸು ಮೀರಿದ್ದ ಪ್ರಾಣಿಯೋ ತುಂಬ ಕಡೆ ನಡೆಯಲಾರದೆ ನಿಂತು ಬಿಡುತ್ತಿತ್ತು. ಕೆಲವೊಮ್ಮೆ ಆಯ ತಪ್ಪಿ ಬಿದ್ದದ್ದು ಇದೆ. ತಿಂಡಿಗೆಂದು ದಾರಿಯ ಡಾಬಾವೊಂದರಲ್ಲಿ ಕುಳಿತೆವು. ಈ ಬಾರಿ ಪ್ರಸಾದೆ ಮುಂದೆ ನಡೆದು ಹೋಗಿದ್ದ ಸುಮಾರು ಅರ್ಧ ಗಂಟೆಯ ನಂತರ ನಾವು ಬರದಿದ್ದುರಿಂದ ಹಿಂತಿರುಗಿ ಬಂದು ನಮ್ಮನ್ನು ಸೇರಿಕೊಂಡ ಆ ಹೊತ್ತಿಗೆ ನಡೆಯಲಾರದೆ ನಡೆದು ಬಂದ ಶ್ರೀಕಾಂತನ ಕಚ್ಚರ್ ಏನೂ ತಿನ್ನಲು ನಿರಾಕರಿಸಿತು. ಆ ಮಾಲೀಕನನ್ನು ಸಿಗಿದು ಬಿಡುವಷ್ಟು ಕೋಪ ನನಗೆ ಬರುತ್ತಿತ್ತು.

ಕೇದಾರನಾಥಕ್ಕೆ ತುಂಬ ಕನ್ನಡಿಗರು ಬರುತ್ತಿರುವುದು ನನಗೆ ಸಂತೋಷ ಮತ್ತು ಆಶ್ಚರ್ಯ ಎರಡೂ ತರಿಸಿತ್ತು. ಡೋಲಿಗಳಲ್ಲಿ ಬುಟ್ಟಿಗಳಲ್ಲಿ ಕಚ್ಚರ್ಗಳಲ್ಲಿ ಕನ್ನಡಿಗರು ನಮಗೆ ಎದುರಾದರು. ಅವರೆಲ್ಲ ಬೇರೆ ಬೇರೆ ಟ್ರಾವೆಲ್ಸ್ ಗಳು ನಡೆಸುವ ಪ್ರವಾಸ ಕಾರ್ಯಕ್ರಮದಲ್ಲಿ ಜೊತೆಯಾಗಿ ಬಂದವರು. ಮೊದಲನೇ ದಿನವೇ ಭೇಟಿಯಿತ್ತು ಹಿಂತಿರುಗುತ್ತಿದ್ದ ಹಿಂದುತ್ವದ ಬಾಂಬ್ ಎಂದು ಪ್ರಸಿದ್ದವಾದ ಉಮಾಭಾರತಿಯ ಫೋಟೋ ತೆಗೆಯಲು ಹೋದವನನ್ನು ಅವರ ಅಂಗರಕ್ಷಕರು ತಡೆದರು.

ಹಿಮದ ಬೆಟ್ಟಗಳಿಂದ ಇಳಿದುಬರುವ ನದಿಯನ್ನು ಯಾರೋ ಮಂದಾಕಿನಿಯೆಂದು ತಿಳಿಸಿದರು. ಸುಮಾರು ೨ ಕಿ.ಮೀ ಗಳ ನಂತರ ಕಣಿವೆಯಲ್ಲಿ ಹಸಿರುಮರಗಳು ಕಾಣಿಸತೊಡಗಿದವು. ಇಲ್ಲವರೆಗೂ ಒಣಗಿದ್ದ ಕಂದು ಬಣ್ಣದ ಹುಲ್ಲು ಮತ್ತು ಮರಗಳು ಕಣಿವೆಗೆ ಕಂದು ಬಣ್ಣ ಬಳಿದಿದ್ದರೆ ಈಗ ತಿಳಿಹಸಿರು ಎಲ್ಲೆಲ್ಲೂ ಗೋಚರವಾಗತೊಡಗಿತು. ಕಣಿವೆಗಳ ನಂತರ ಮತ್ತೊಂದು ಮಗದೊಂದು ದಾಟಿ ಸುಮಾರು ೧.೨೦ಕ್ಕೆ ಹಿಮಾವೃತ ಪರ್ವತಗಳಿಂದ ಸುತ್ತುವರೆದಿರುವ ದೇವಸ್ತಾನದ ಸಮೀಪ ಬಂದು ಕಚ್ಚರ್ಗಳಿಂದ ಇಳಿದೆವು.
ಗುಪ್ತಕಾಶಿಯಿಂದ ತಪ್ಪಿಸಿಕೊಂಡ ತಪೋನಿರತ ಶಿವನನ್ನು ಹುಡುಕುತ್ತಾ ಪಾಂಡವರು ಇಲ್ಲಿಗೆ ಬಂದಾಗ ಇಲ್ಲ್ಯೂ ಆತ ದರ್ಶನ ಕೊಡದೆ ತಪ್ಪಿಸಿಕೊಳ್ಳಲು ನಂದಿ ವೇಷ ಧರಿಸಿ ಅಲ್ಲೆ ಇದ್ದ ಹಸುಗಳೊಂದಿಗೆ ಸೇರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಧರ್ಮರಾಯನ ಉಪಾಯದಂತೆ ಭೀಮ ತನ್ನ ಕಾಲುಗಳ ಕೆಳಗೆ ಹಸುಗಳು ಹಾಯ್ದು ಹೋಗುವಂತೆ ನಿಂತಾಗ ಅವನ ಕಾಲ ಕೆಳಗೆ ನುಸುಳದೆ ಶಿವ ದರ್ಶನವಾಗುತ್ತದೆ ಎಂದು ಧರ್ಮರಾಯನ ಉಪಾಯ. ಹಾಗಾದಾಗ ವಿಧಿಯಿಲ್ಲದೆ ಅಲ್ಲೆ ಭೂಗರ್ಭ ಪ್ರವೇಶಿಸಿದ ಶಿವನ ಭುಜವೇ ಈ ಕೇದಾರನಾಥ ಎಂದು ಅಲ್ಲಿನ ಕಥೆ.

ಅಲ್ಲಲ್ಲಿ ದಾರಿಯುದ್ದಕ್ಕೂ ಬಿದ್ದಿದ್ದ ಹಿಮವಿದ್ದರೂ ಚಳಿಯಂತೂ ನಮಗೆ ಕಾಣಿಸಲಿಲ್ಲ. ಬೆಳ್ಳಿಬೆಟ್ಟಗಳ ಹಿನ್ನೆಲೆ ಪ್ರಕೃತಿಯ ಪ್ರಿಯರಿಗೆ ಕುಣಿದಾಡುವಂತೆ ಮಾಡುತ್ತದೆ. ಇಲ್ಲಿಂದ ಮುಂದಕ್ಕೂ ಕೆಲ ಹವ್ಯಾಸಿ ಸಾಹಸಿಗಳು ಚಾರಣ ನಡೆಸುತ್ತಾರೆಂದು ಕೆಲವರು ತಿಳಿಸಿದರು. ಭೈರಪ್ಪನವರ "ನಿರಾಕರಣ" ಕಾದಂಬರಿಯಲ್ಲಿ ಬರುವ ಸುಮೇರು ಪರ್ವತ ಯಾವುದೆಂದು ಹುಡುಕಲು ಪ್ರಯತ್ನಿಸಿದವನಿಗೆ ಅಲ್ಲಿ ಯಾವುದೇ ಸ್ಪಂದನ ಸಿಗಲಿಲ್ಲ. ಯಾರೂ ಹೇಳಲೂ ಇಲ್ಲ. ಕೆಲವು ಹವ್ಯಾಸಿ ಚಾರಣಿಗರು ಆ ಬೆಟ್ಟದ ಹಿಂದೆ ಎಂದು ಕೈ ತೋರಿಸಿ ಸುಮ್ಮನೆ ನಡೆದರು. ಕೇದಾರನಾಥನ ದರ್ಶನ ಪಡೆದು ಹೊರಬಂದು ದೇವಸ್ತಾನದ ಆವರಣದಲ್ಲಿ ಕುಳಿತೆವು. ಈಗ ಚಳಿ ಸ್ವಲ್ಪ ಸ್ವಲ್ಪವೆ ಕಾಣಿಸತೊಡಗಿತು. ದ್ವಾದಶ ಜ್ಯೋತಿರ್ಲಿಂಗಗಳ ಬಗ್ಗೆ ಸಂಪದದಲ್ಲಿ ಲೇಖನಮಾಲೆ ಪ್ರಕಟಿಸಿದ್ದ ಅನಿಲ್ ರಮೇಶ್ ಗೆ ಫೋನಾಯಿಸಿ ಮಾತನಾಡಿಸಿ ಅವರಿಗೆ ನಾವಿಲ್ಲಿರುವ ವಿಷಯ ತಿಳಿಸಿದೆ. ದೂದ್ ಗಂಗಾ ನದಿ ಹೆಸರಿಗೆ ತಕ್ಕಂತೆ ಹಾಲಿನನಂತೆ ಬಿಳುಪಾಗಿ ಬೆಟ್ಟದಿಂದ ಇಳ್ಯುತ್ತಿದ್ದದ್ದು ಮನೋಹರ. ಇಲ್ಲೆ ಒಂದು ದಿನ ಉಳಿದರೆ ಅದೆಲ್ಲವನ್ನು ಹತ್ತಿರದಿಂದ ನೋಡಬಹುದೆಂಬ ಆಸೆ ಮನದಲ್ಲಿ ಸುಳಿದು ಹೋಯ್ತು.

ದೇವಸ್ತಾನದ ಆವರಣದಲ್ಲಿ ನಾವು ಕುಳಿತಿದ್ದ ಜಾಗಕ್ಕೆ ನಾವು ದಕ್ಷಿಣ ಭಾರತೀಯರೆಂದು ತಿಳಿದ ತಮಿಳುನಾಡಿನ ಅಯ್ಯರ್ ದಂಪತಿಗಳು ನಮ್ಮೊಡನೆ ಕುಳಿತರು. ವಯೋವೃದ್ದರನ್ನು ರುದ್ರ ಹೇಳುವಂತೆ ಕೇಳಿದೆ. ಪ್ರಾಸಬದ್ದವಾಗಿ ಅವರು ಪಠಿಸಿದ ರುದ್ರಪ್ರಶ್ನೆ ಆ ವಾತಾವರಣಕ್ಕೆ ಕಳೆಗಟ್ಟಿ ನಮ್ಮನ್ನೆಲ್ಲ ಒಂದು ಕ್ಷಣ ಅಲೌಕಿಕ ಲೋಕಕ್ಕೆ ಕರೆದೊಯ್ಯಿತು. ಅವರಿಗೊಂದು ನಮಸ್ಕಾರ ಹೇಳಿ ಅಲ್ಲಿಂದ ಇಳಿಯಲು ಪ್ರಾರಂಭಿಸಿದಾಗ ಸಮಯ ೩.೩೦ ಇರಬೇಕು. ೨ ಕಿ.ಮೀ ನಡೆಯುವಷ್ಟರಲ್ಲಿ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ನಡೆದುಬರುತ್ತಿದ್ದದ್ದು ಆಶ್ಚರ್ಯ. ಮುಗುಳ್ನಗುತ್ತ ಕೈಮುಗಿಯುತ್ತ ನಮ್ಮಡೆಗೆ ಕೈಬೀಸಿ ನಡೆದ ಅಂಬಾನಿಯ ಫೋಟೊ ತೆಗೆಯಬೇಕೆನಿಸಿತು. ಆದರೆ ಅವನ ಅಂಗರಕ್ಷಕರು ಅದಕ್ಕೆ ಅವಕಾಶವೀಯಲಿಲ್ಲ. ನಮ್ಮ ಚಾಲಕ ಪಾಂಡೆ ನಮಗಿಂತ ೧ ಗಂಟೆ ತಡವಾಗಿ ಹೊರಟವ ನಮ್ಮೊಡನೆ ದೇವಸ್ತಾನ ಸಮೀಪಿಸಿದಾಗ ಅವನ ನಡಿಗೆಯ ಚಾಕಚಕ್ಯತೆಗೆ ತಲೆದೂಗಲೇಬೇಕಾಯಿತು.

೩ ಕಿ.ಮೀ ವರೆಗೆ ನಮ್ಮೊಡನೆ ನಡೆದು ಬರುತ್ತಿದ್ದ ಶ್ರೀಕಾಂತ ಮತ್ತು ಪ್ರಸಾದ್ ಕುಟುಂಬಗಳು ನಮ್ಮ ವೇಗಕ್ಕೆ ಸಮನಾಗಿ ಬರದೆ ಹಿಂದುಳಿಯತೊಡಗಿದ್ದರು. ನಿಧಾನವಾಗಿ ನಡೆಯಲು ನನಗೆ ಸಾಧ್ಯವಿಲ್ಲದ್ದರಿಂದ ನಾನು ಶ್ರೀಕಾಂತನ ಮಗಳು ಸುಷ್ಮಿತ ನನ್ನ ಮಗ ಅಮಿತ್ ಮತ್ತು ನನ್ನ ಪತ್ನಿಯೊಂದಿಗೆ ನನ್ನದೇ ಆದ ವೇಗದಲ್ಲಿ ಹಿಂತಿರುಗತೊಡಗಿದೆ. ರಾತ್ರಿ ಎಂಟುಗಂಟೆಯ ಒಳಗೆ ನಾವು ಗೌರಿಕುಂಡದಿಂದ ಹೊರಡಬೇಕೆಂದು ನಮ್ಮ ಚಾಲಕ ಹೇಳಿದ್ದು ನನಗೆ ನೆನಪಿತ್ತು. ಇದು ಹರಟೆ ಹೊಡೆಯುತ್ತಾ ನಡೆಯುವ ಚಾರಣವಲ್ಲವೆಂದು ನನಗೆ ತಿಳಿದಿತ್ತು. ದಾರಿ ಉದ್ದಕ್ಕೂ ಸಿಕ್ಕ ಕನ್ನಡಿಗರೊಡನೆ ಕೆಲವು ಕ್ಷಣಗಳು ಕಳೆಯುತ್ತಾ ಅವರ ಕುಶಲೋಪರಿ ವಿಚಾರಿಸುತ್ತಾ ಆಗಾಗ ಕ್ಯಾಮೆರಾಗಳ ಕಣ್ಣು ಮಿಟುಕಿಸುತ್ತಾ ಇಳಿಯುತ್ತಿದ್ದೆವು. ಪ್ರತಿ ೨೦ ನಿಮಿಷಕ್ಕೊಮ್ಮೆ ಕುಳಿತು ದಣಿವಾರಿಸಿಕೊಳ್ಳುತ್ತಾ ಕಣಿವೆಗಳನ್ನು ಹಿಂದಕ್ಕಿಕ್ಕಿ ಮತ್ತೊಂದು ಕಣಿವೆ ಕಡೆಗೆ ಇಳಿಯುತ್ತಿದ್ದೆವು. ಹಾಲ್ನೊರೆಯಂತೆ ಝರಿಗಳು ಕಣಿವೆಯುದ್ದಕ್ಕೂ ನಮ್ಮೊಡನೆ ಆಕಾಶದಿಂದ ಇಳಿದುಬಂದಂತೆ ಭಾಗೀರಥಿ ನಮ್ಮೊಡನೆ ಇಳಿದು ಬರುತ್ತಾಳೆ. ನಮ್ಮೆದುರಿಗೆ ೨ ಕಚ್ಚರ್ ಗಳು ಒಂದಕ್ಕೊಂದು ಜಗಳವಾಡುತ್ತಾ ಕುಳಿತಿದ್ದವರನ್ನು ಬೀಳಿಸಿದ್ದು ನೋಡಿ ಅಲ್ಲಿದ್ದ ಎಲ್ಲರೂ ಗಾಭರಿಯಾದರು. ಬೆಳಿಗ್ಗೆ ತಿಂಡಿತಿಂದ ಡಾಬಾದಲ್ಲೆ ಈಗಲೂ ಇದ್ದುದರಲ್ಲಿ ತಿನ್ನಲಾಗುವಂತಹ ತಿನಿಸನ್ನು ತೆಗೆದುಕೊಂಡೆವು.

ಕನ್ನಡ ಭಾಷೆಯಲ್ಲಿ ಸಂಭಾಷಿಸುತ್ತಾ ಇಳಿಯುತ್ತಿದ್ದ ತಾಯಿ ಮತ್ತೆ ಮಗನನ್ನು ಮಾತನಾಡಿಸಿದೆವು ಕುಶಲೋಪರಿ ವಿಚಾರಣೆಯ ನಂತ ಎಲ್ಲಿ ಯಾವೂರು ಹೇಗೆ ಬಂದ್ರಿ ಎಂದವರಿಗೆ ದಾವಣಗೆರೆ ಸಾರ್ ಕಾರ್ನಲ್ಲಿ ಬಂದಿದಿವಿ ಎಂದವರನನ್ನು ನಾನು ತಕ್ಷಣ ಕೇಳಿದ ಪ್ರಶ್ನೆ ಕಾರ್ತೀಕ್ ಪುನೀತ್ ಮಾರುತಿ ಕಾರು ನಿಮ್ದೆನ? ಎಂದು ನಗುತ್ತಾ ತಲೆಯಾಡಿಸಿದವರಿಗೆ ಮತ್ತೊಂದು ಕುತೂಹಲದ ಪ್ರಶ್ನೆ ಎಲ್ಲಿ ಕೆಲ್ಸ ಮಾಡ್ತೀರ ಹರಿದ್ವಾರದಲ್ಲ ಅಥವ ದೆಹಲಿನ? ಎಂದವರಿಗೆ ಇಲ್ಲ ದಾವಣಗೆರೆಯಲ್ಲಿ ಎಲೈಸಿ ಏಜೆಂಟ್ ಅಲ್ಲಿಂದಾನೆ ಕಾರಲ್ಲಿ ಬಂದ್ವಿ ಎಂದವರನ್ನು ನೋಡಿ ಗಾಭರಿಯಾಗುವ ಸರದಿ ನಮ್ಮದಾಗಿತ್ತು. ಅದೂ ಮಾರುತಿ ಕಾರಿನಲ್ಲಿ ಹೇಗೆ ಬಂದ್ರಿ ಎಂದವರಿಗೆ ನಾವು ಊರುಬಿಟ್ಟು ೧ ತಿಂಗಳಾಯ್ತು ಎಂದು ಹೇಳಿದರು ಎಲ್ಲೆಲ್ಲಿ ಹೋಗಿದ್ರಿ ಎಂದವರಿಗೆ ಸಾರ್ ಜಮ್ಮು ಕಾಶ್ಮೀರ ಕುಲ್ಮಾರ್ ಸೋನ್ಮಾರ್ಗ್ ಪಹಲ್ಗಾಂ ಎಂದಾಗ ಮತ್ತೊಮ್ಮೆ ಆಶ್ಚರ್ಯ ಚಕಿತರಾಗುವ ಅವಕಾಶ. ಅದೂ ನಮ್ತಂದೆ ಒಬ್ರೆ ಡ್ರೈವ್ ಮಾಡ್ತಾ ಇರೋದು ಎಂದು ಆತ ಹೇಳಿದಾಗ ತಲೆ ತಿರುಗುವುದೊಂದು ಬಾಕಿ. ಇಬ್ಬರಿಗೂ ಕೈಯೆತ್ತಿ ಮುಗಿದು ಅವರ ಸಾಹಸಕ್ಕೆ ದೊಡ್ಡದೊಂದು ನಮಸ್ಕಾರ ಹಾಕಿ ಅವರೊಂದಿಗೆ ಸ್ವಲ್ಪ ದೂರ ಇಳಿದೆವು. ನಂತರ ಅವರು ಹಿಂದುಳಿದರು. ಈ ಬಾರಿ ದಾರಿಯಲ್ಲಿ ಎದುರಾದದ್ದು ನಮ್ಮ ರಾಜ್ಯದ ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್. ಡೋಲಿಯಲ್ಲಿ ಹೋಗುತ್ತಿದ್ದವರನ್ನು ನೋಡಿ ಮುಗುಳ್ನಕ್ಕಾಗ ಆತ್ಮೀಯರಂತೆ ಏನ್ರೀ ಚೆನ್ನಾಗಿದಿರಾ ಎಂದು ಕನ್ನಡದಲ್ಲಿ ಕೇಳಿದಾಗ ನನಗೆ ಆಶ್ಚರ್ಯ. ಇವರಿಗೆ ಹೇಗೆ ಗೊತ್ತಾಯಿತು ನಾನು ಕನ್ನಡಿಗ ಅಂತ!

೬.೩೦ ಕ್ಕೆ ಗೌರಿಕುಂಡದ ಬಳಿ ಅಂಗಡಿಯೊಂದರಲ್ಲಿ ನಮ್ಮ ಕೆಲವು ಹೊರೆಗಳನ್ನು ಇಟ್ಟಿದ್ದ ಅಂಗಡಿಗೆ ಹೋಗಿ ಕುಳಿತೆವು. ಬಿಸಿನೀರಿನ ತೊಟ್ಟಿಯಿಂದ ನೀರೆಲ್ಲ ಹೊರಗೆ ಬಿಟ್ಟಿದ್ದರು. ಸ್ವಚ್ಚವಾಗಿ ಬೀಳುತ್ತಿದ್ದ ನೀರಿನಲ್ಲಿ ಒಮ್ಮೆ ಸ್ನಾನ ಮಾಡಿದಾಗ ಮೈಮನಸ್ಸುಗಳು ಹಗುರಾದೆಂತೆನಿಸಿತು. ಬೆಂಗಳೂರಿನಿಂದ ಬಂದಿದ್ದ ಮಧ್ಯ ವಯಸ್ಕರ ದೊಡ್ಡ ಗುಂಪಿನೊಡನೆ ಸ್ವಲ್ಪ ಸಮಯ ಹರಟೆ ಹೊಡೆದೆ. ಗಂಟೆ ೭.೩೦ ಆದರೂ ಶ್ರೀಕಾಂತ ಮತ್ತು ಪ್ರಸಾದಿಯ ಸುಳಿವೇ ಇರಲಿಲ್ಲ. ಚಾಲಕ ಪಾಂಡೆ ಬಂದು ಸಾರ್ ಗೇಟ್ ಹಾಕ್ಬಿಡ್ತರೆ ಬೇಗ ಬನ್ನಿ ಎಂದ ಆದರೆ ಇವರಿಬ್ಬರ ಮೊಬೈಲ್ಗಳು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದವು.
ಅನ್ನಪೂರ್ಣದಲ್ಲಿ ಮೊಸರು ಸಿಗದಿರುವುದರಿಂದ ಇಲ್ಲೆ ಮೊಸರು ಖರೀದಿಸಿದೆ. ೮.೧೫ಕ್ಕೆಲ್ಲ ಶ್ರೀಕಾಂತ ಮತ್ತು ಪ್ರಸಾದಿ ನನ್ನ ಮೇಲೆ ಕೆಂಗಣ್ಣು ಬಿಡುತ್ತಾ (ಜೊತೆಯಲ್ಲಿ ಬರದಿದ್ದಕ್ಕೆ) ಮೆಲ್ಲಗೆ ಇಳಿಯಲಾರದೆ ಇಳಿದು ಬಂದರು. ಸಾರ್ ಗೇಟ್ ಹಾಕ್ಭಿಟ್ಟಿರುತ್ತೆ ಇನ್ನು ಇಲ್ಲೆ ಉಳಿಯಬೇಕು ಎಂದು ಪಾಂಡೆ ವರಾತ ಹಚ್ಚಿದವನಿಗೆ ನೀನು ನಡಿ ಮಹರಾಯ ಎಂದವನನ್ನು ಹೊರಡಿಸಿಕೊಂಡು ಹೊರಟೆ. ನಮ್ಮ ಪುಣ್ಯಕ್ಕೆ ಬಾಗಿಲು ಮುಚ್ಚಿರಲಿಲ್ಲ. ಆದರೆ ಆ ೫-೬ ಕಿ.ಮೀ ಗಳು ಪಾಂಡೆ ಆ ಕಣೀವೆಯಲ್ಲಿ ಕಾರು ಓಡಿಸಿದ ಪರಿ ಸ್ವತಃ ಚಾಲಕನೂ ಆದ ನನಗೆ ಗಾಭರಿ ಹುಟ್ಟಿಸಿತು. ಅನ್ನಪೂರ್ಣದಲ್ಲಿ ಇದ್ದುದರಲ್ಲಿ ರುಚಿಯಾದ ಕೆಲವು ತಿನಿಸುಗಳನ್ನು ಸೇವಿಸಿ ಮಲಗಿದೆವು.

ಬೆಳಿಗ್ಗೆ ೪ ಗಂಟೆಗೆ ಎದ್ದು ಬಿಸಿನೀರಿಗಾಗಿ ಹೊಟೆಲ್ನವನ ಮುಂದೆ ಬಕೆಟ್ ಹಿಡಿದು ನಿಂತೆ ಈ ಸಮಯಕ್ಕಾಗಲೆ ೩-೪ ಬಕೆಟ್ಗಳು ಇದ್ದವು ಒಂದು ಬಕೆಟ್ ಬಿಸಿನೀರಿಗೆ ೨೦ ರೂ ತೆತ್ತು ಎಲ್ಲರೂ ಸ್ನಾನ ಮಾಡಿ ಹೊರಟಾಗ ಸುಮಾರು ೬ ಗಂಟೆಯಿರಬೇಕು. ೮ ಗಂಟೆ ಸಮಯಕ್ಕೆ ರಂಭಾಪುರಿ ಮಠಕ್ಕೆ ಕರೆದೊಯ್ದ ವಾಹನದಿಂದ ನಾನು ಅವೋಮಿನ್ ಪ್ರಭಾವದಿಂದ ಕೆಳಗಿಳಿಯಲಿಲ್ಲ. ಹೊಟ್ಟೆ ಚುರುಗುಡತೊಡಗಿತು. ತಿನ್ನಲೂ ಏನೂ ಸಿಗುತ್ತಿರಲಿಲ್ಲ. ಈ ಪಾಂಡೆ ಡಾಬಾದಲ್ಲಿ ನಿಲಿಸಲು ಹಿಂದೆ ಮುಂದೆ ನೋಡುತ್ತಿದ್ದದ್ದು ನನ್ನನ್ನು ಕೆರಳಿಸಿತು. ಕೊನೆಗೆ ದಾರಿಯಲ್ಲಿ ಸಿಕ್ಕ ಗೂಡಂಗಡಿಯಲ್ಲಿ ೧೩ ಪ್ಯಾಕ್ ಬಿಸ್ಕತ್ತುಗಳನ್ನು ಮತ್ತು ಸೌತೇಕಾಯಿಯನ್ನು ತೆಗೆದುಕೊಂಡು ಎಲ್ಲವೂ ಖಾಲಿಯಾದಗಲೆ ನನಗೆ ಹೊರಪ್ರಪಂಚದ ಅರಿವಾದದ್ದು. ತನ್ನ ಹಠಬಿಡದೆ ಪಾಂಡೆ ನಮ್ಮನ್ನು ಮಿನಿ ಸ್ವಿಟ್ಸರ್ಲ್ಯಾಂಡ್ಗೆ ಕರೆದೊಯ್ದ ಅಲ್ಲಿನ ಹೋಟೆಲ್ನಲ್ಲಿ ಎಲ್ಲರೂ ತಿಂಡಿತಿಂದರು ನನಗೆ ಮತ್ತದೆ ಶುಚಿತ್ವದ ಸಮಸ್ಯೆ. ಬ್ರೆಡ್ ಮತ್ತು ಜ್ಯಾಂ ನನ್ನ ಆಹಾರವಾಯಿತು. ಬಹುಶಃ ಹಿಮಾವೃತವಾಗಿದ್ದಾಗ ಸುಂದರವಾಗಿರಬಹುದಾದ ಮಿನಿ ಸ್ವಿಟ್ಸರ್ಲ್ಯಾಂದ್ ನಮ್ಯಾರನ್ನು ಸೆಳೆಯಲಿಲ್ಲ. ನೇರವಾಗಿ ಜೋಷಿಮಠಕ್ಕೆ ತೆರಳಲು ಪ್ರಾರಂಭಿಸಿದೆವು. ಕಣಿವೆಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಮಣ್ಣುಕುಸಿತ ಗೋಚರವಾಗುತ್ತಿತ್ತು. ಅತಿ ಆಳವಾದ ಕಣಿವೆಗಳ ದಡಕ್ಕೆ ವಾಹನ ಬಂದಾಗ ಹೃದಯ ಬಾಯಿಗೆ ಬಂದ ಅನುಭವವಾಗುತ್ತದೆ. ಕಣಿವೆಯಲ್ಲಿ ಮೇಲಿಂದ ಬೀಳುತ್ತಿದ್ದ ಕಲ್ಲುಗಳು ಇನ್ನೊಂದು ಕಲ್ಲ್ನ ಮೇಲೆ ಬಿದ್ದಾಗ ಉಂಟಾಗುವ ಕಿಡಿ ಬೆಂಕಿಯಾಗಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿರುವುದು ಅಲ್ಲಲ್ಲಿ ಗೋಚರಿಸುತ್ತಿತ್ತು. ಇದೇ ಹೊಗೆ ಇಡೀ ಕಣಿವೆಯನ್ನು ಆವರಿಸುತ್ತಿತ್ತು.
ಜೋಷಿಮಠದ ಹೋಟೆಲ್ಲೊಂದರಲ್ಲಿ ಊಟಮಾಡಿದೆವು. ಈ ಸಮಯಕಾಗಲೆ ನಮಗೆಲ್ಲ ಊಟವೆಂದರೆ ಯಾಕೋ ಓಡಿಹೋಗುವಂತೆ ಅನಿಸುತ್ತಿತ್ತು. ನನ್ನ ಮಗನಂತೂ ಸಂಪೂರ್ಣವಾಗಿ ಹಣ್ಣುಗಳಲ್ಲೆ ಕಾಲ ಹಾಕಲಾರಂಭಿಸಿದ. ನಮಗೂ ಯಾರಾದರೂ ದಕ್ಷಿಣಭಾರತೀಯ ಅನ್ನ ತಿಳಿಸಾರು ಕೊಟ್ಟರೆ ಸಾಕೆನಿಸುತ್ತಿತ್ತು. ಎಲ್ಲರೂ ಅಕ್ಕಿರೊಟ್ಟಿ ತೆಂಗಿನಕಾಯಿಯ ಚಟ್ನಿಯನ್ನು ನೆನಪಿಸಿಕೊಂಡು ಬಾಯಲ್ಲಿ ನೀರೂರಿಸುತ್ತಿದ್ದರು. ನಮ್ಮಲ್ಲಾ ತಿಂಡಿಗಳು ಕಣ್ಣ ಮುಂದೆ ಹಾದು ಹೋದವು. ಶ್ರೀಕಾಂತ ಅನಂತಮಠಕ್ಕೆ ಫೋನಾಯಿಸಿ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವೇ ಎಂದು ವಿಚಾರಿಸಿದ. ಅವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದಾಗ ನಮ್ಮ ಅನ್ನ ತಿಳಿಸಾರಿನ ಆಸೆ ಮತ್ತೊಮ್ಮೆ ಗರಿಗೆದರಿತು.

ಸಂಜೆ ೫ ಗಂಟೆಯವರೆಗೆ ರಸ್ತೆ ಮುಚ್ಚಿರುವುದರಿಂದ ನಾವಿಲ್ಲಿ ಹೆಚ್ಚು ಸಮಯ ಕಳೆಯಲು ಅನುಕೂಲವಾಯ್ತು. ರಸ್ತೆ ಮುಚ್ಚುವ ಪ್ರಕ್ರಿಯೆ ಕಣಿವೆ ರಸ್ತೆಗಳಲ್ಲಿ ಒಮ್ಮುಖ ಸಂಚಾರಕ್ಕೆ ಮಾಡಿಕೊಂಡ ವ್ಯವಸ್ತೆ. ಪ್ರತಿ ೨ ಗಂಟೆಗಳಿಗೊಮ್ಮೆ ಒಂದು ದಿಕ್ಕಿನಿಂದ ವಾಹನಗಳಿಗೆ ಅನುವು ಮಾಡಿ ಕೊಡಲಾಗುತ್ತದೆ. ೫ ಗಂಟೆ ತೆಗೆಯುವ ಬಾಗಿಲಿಗೆ ಕಾಯುತ್ತ ನಿಂತೆವು. ಜೋಷಿಮಠದಿಂದ ಕಣಿವೆ ರುದ್ರ ಭಯಂಕರವಾಗಿದೆ. ಮಂಜಿನಿಂದಾವೃತವಾದ ಕಣಿವೆಗಳು ಅಲ್ಲಲ್ಲಿ ಕುಸಿತದಿಂದಾದ ತೊಂದರೆಗಳು ರಸ್ತೆಯನ್ನು ಹದೆಗೆಡಿಸಿವೆ. ಎಚ್ಚರಿಕೆಯಿಲ್ಲದಿದ್ದರೆ ಕ್ಷಣಮಾತ್ರದಲ್ಲಿ ಅಪಘಾತ ಖಂಡಿತ. ಎಲ್ಲೆಲ್ಲೂ ಬೆಳ್ಳಿಯಂತೆ ಮಿಂಚುವ ಬೆಟ್ಟಗಳು. ಕಣಿವೆಯ ತಳಭಾಗದಿಂದ ಬೆಟದ ಮಧ್ಯಭಾಗಕ್ಕೆ ಬಂದು ಅಲ್ಲಿಂದ ಮತ್ತೊಂದು ಬೆಟ್ಟದ ತಳಭಾಗಕ್ಕೆ ಹೀಗೆ ಸಾಗುತ್ತಾ ಹೋಗುವ ದಾರಿಯಲ್ಲಿ ಬಲು ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಿದ್ದ ಪಾಂಡೆ ಬೇರೆ ವಿಧಿ ಇಲ್ಲ ಏಕೆಂದರೆ ರಸ್ತೆ ಅಷ್ಟು ಹದಗೆಟ್ಟಿದೆ ಎನ್ನುವುದಕ್ಕಿಂತ ಅಲ್ಲಿನ ರಸ್ತೆಯನ್ನು ಉತ್ತಮವಾಗಿ ನಿರ್ವಹಿಸಿಸಲು ಸಾಧ್ಯವೂ ಇಲ್ಲವೆಂದೆನಿಸುತ್ತದೆ. ಕೊನೆಗೊಮ್ಮೆ ಬದರಿನಾಥಕ್ಕೆ ಬಂದಿಳಿದೆವು. ಅರ್ಧ ಗಂಟೆ ಅಲ್ಲಿ ಇಲ್ಲಿ ಕೇಳಿ ಓಡಾಡಿ ಉಡುಪಿಯ ಪೇಜಾವರ ಮಠದ ಅನಂತಮಠಕ್ಕೆ ಬಂದಿಳಿದು ಕನ್ನಡದ ಅಕ್ಷರಗಳನ್ನು ಕಂಡಾಗ ಅದೇನೋ ಖುಷಿ.
ಸಾರ್ ಬೆಳಿಗ್ಗೆ ಬೇಗ ಹೊರಟರೆ ಮಾತ್ರ ಹರಿದ್ವಾರ ತಲುಪಲು ಸಾಧ್ಯ ಎಂದು ಪಾಂಡೆ ಎಚ್ಚರಿಸಿದ. ದೇವಸ್ತಾನಕ್ಕೆ ಹೋಗಿ ಬದರಿ ನಾರಾಯಣನ ದರ್ಶನ ಮಾಡಿಕೊಂಡು ಬನ್ನಿ ಎಂದರು ಅಲ್ಲಿನ ಆಡಳಿತ ನೋಡಿಕೊಳ್ಳುವ ಶೇಷಾಚಾರ್. ಅವರು ಹೇಳಿದಂತೆ ದೇವಸ್ತಾನದ ಕಡೆ ಹೊರಟೆವು. ಇಲ್ಲಿ ಬಿಸಿನೀರಿನ ಕುಂಡದಲ್ಲಿ ಮನದಣಿಯೆ ಸ್ನಾನ ಮಾಡಿದೆವು. ನಮ್ಮಲ್ಲಿದ್ದ ಪ್ರಯಾಣದ ಆಯಾಸವೆಲ್ಲ ಪರಿಹಾರವಾಯಿತು. ಕೊರೆಯುವ ಛಳಿಯಲ್ಲೂ ಅದು ಹೇಗೆ ಅಷ್ಟು ಬಿಸಿನೀರು ಬರುತ್ತದೆಯೋ ಗೊತ್ತಿಲ್ಲ. ಹರಿದು ನದಿಗೆ ಸೇರುವವರೆಗೂ ಅದೆ ಬಿಸಿ ಉಳಿದು ಕೊಳ್ಳುವುದು ಆಶ್ಚರ್ಯ. ಸಾಲಿನಲ್ಲಿದ್ದವರೆಲ್ಲ ಬಹುತೇಕರು ಕನ್ನಡಿಗರೆ. ಅದರಲ್ಲೂ ಕೆಲವರು ಕೇದಾರನಾಥದಲ್ಲಿ ಭೇಟಿಯಾಗಿದ್ದವರು. ನೂಕುನುಗ್ಗಲಿನಲ್ಲಿ ನಿಂತು ಬದರೀನಾರಾಯಣನ ದರ್ಶನ ಪಡೆದೆವು. ಫೋಟೋಗಳನ್ನು ತೆಗೆದುಕೊಂಡ ನಂತರ ನಿಧಾನವಾಗಿ ದೇವಸ್ತಾನದಿಂದ ಇಳಿದು ಬಂದೆವು. ದಾರಿಯುದ್ದಕ್ಕೂ ಖರೀದಿ ಮಾಡುತ್ತಾ ಹೊರಟವರಿಗೆ ಮಾರುಕಟ್ಟೆಯ ಕೊನೆಯಲ್ಲಿ ಇಬ್ಬರು ಹೆಂಗಸರು ನಿಂತು ಕನ್ನಡದಲ್ಲಿ ಮಾತನಾಡಿಕೊಳ್ಳಿತ್ತಿದ್ದದ್ದು ಮತ್ತು ಅವರು ಗುಂಪಿನಿಂದ ಬೇರೆಯಾಗಿ ಅವರ ವಾಸ್ತವ್ಯದ ಸ್ಥಳ ಸಿಗದೆ ಪರದಾಡುತ್ತಿದ್ದದ್ದು ಗಮನಕ್ಕೆ ಬಂತು. ನಮ್ಮಲ್ಲಿದ್ದ ದೂರವಾಣಿಗಳಿಂದ ಅವರ ಗುಂಪಿನ ನಾಯಕರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ಆ ಪುಣ್ಯಾತ್ಮ ದೂರವಾಣಿಯನ್ನು ನಿಷ್ಕ್ರಿಯಗೊಳಿಸಿದ್ದರಿಂದ ಸಾಧ್ಯವಾಗಲಿಲ್ಲ. ಅವರು ಕೊಟ್ಟ ಇನ್ನೊಂದು ಸಂಖ್ಯೆ ಧಾರವಾಡೆಯದ್ದಾಗಿತ್ತು. ಕೊನೆಗೆ ನಾನು ಶ್ರೀಕಾಂತ ಅವರಿಬ್ಬರನ್ನು ಅವರ ಗಮ್ಯಕ್ಕೆ ಸೇರಿಸಿ ಬರುವುದಾಗಿ ತಿಳಿಸಿ ಮಿಕ್ಕವರನ್ನು ಕಳಿಸಿದೆವು ಇಲ್ಲದಿದ್ದರೆ ಊಟ ಸಿಗದಿರಬಹುದು ಎಂಬ ಭಯ. ಸರಿ ಅರ್ಧ ಗಂಟೆಯ ಪ್ರಯತ್ನದ ನಂತರ ಅವರ ವಾಸ್ತವ್ಯದ ಸ್ಥಳವನ್ನು ಕಂಡು ಹಿಡಿದು ಅವರನ್ನು ಕೋಣೆಗೆ ತಲುಪಿಸಿ ಹಿಂತಿರುಗಿ ಬಂದು ಊಟಕ್ಕೆ ಕೂತವರಿಗೆ ಹೊಗೆಯಾಡುತ್ತಿದ್ದ ಅನ್ನ ತಿಳಿಸಾರು ನೋಡಿದವರಿಗೆ ಹಸಿವು ಇಮ್ಮಡಿಸಿತು. ತಟ್ಟೆಯಾಕಾರದ ಎಲೆಯ ತಳಭಾಗ ಕಿತ್ತು ಬರುವವರೆಗೂ ಅನ್ನ ಚಟ್ನಿ ತಿಳಿಸಾರು ಅದೆಷ್ಟು ಬರಗೆಟ್ಟು ತಿಂದೆವೆಂದರೆ ಒಂದು ಬಕೆಟ್ ಅನ್ನ ನಿಮಿಶಾರ್ಧದಲ್ಲಿ ಖಾಲಿಯಾಗಿತ್ತು. ನಗುನಗುತ್ತಲೆ ನಮಗೆಲ್ಲ ಉಣಬಡಿಸಿದ ಅನಂತಮಠಕ್ಕೆ ಅದರ ಸಿಬ್ಬಂದಿವರ್ಗಕ್ಕೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ಹೊಟ್ಟೆಗೆ ಬಿದ್ದ ಮೇಲೆ ಛಳಿ ತನ್ನ ಪ್ರತಾಪ ತೋರಿಸಲು ಪ್ರಾರಂಭಿಸಿತು. ಬರಿಗಾಲಿನಲ್ಲಿ ಕಾಲಿಡಲೂ ಆಗದಷ್ಟು ನೆಲ ಕೊರೆಯುತ್ತಿತ್ತು. ಶೇಷಾಚಾರ್ ಒಡನೆ ಸ್ವಲ್ಪ ಸಮಯ ಹರಟಿ ಅವರಿಗೆ ನಮಸ್ಕರಿಸಿ ಕೋಣೆ ಸೇರಿದೆವು.

ಬೆಳಿಗೆ ೬ ಗಂಟೆಗೆ ಮುಚ್ಚಿರುವ ರಸ್ತೆ ತೆಗೆಯುವ ಸಮಯಕ್ಕೆ ಹೊರಡಬೇಕಿತ್ತು. ೪.೩೦ಕ್ಕೆದ್ದು ಸಿದ್ದರಾದೆವು. ೫ ಗಂಟೆಗೆಲ್ಲ ನಿಚ್ಚಳವಾಗಿ ಬೆಳಕು ಹರಿದಿತ್ತು. ನಿನ್ನೆ ಸಂಜೆಗಿಂತ ಇಂದು ಬದರೀನಾಥ ಸುಂದರವಾಗಿ ಕಾಣಿಸುತ್ತಿತ್ತು. ಸುತ್ತಲೂ ಆವರಿಸಿರುವ ಹಿಮ ಪರ್ವತಗಳು ಕೊರೆಯುವ ಛಳಿ ಓಹ್ ಇಲ್ಲೆ ಇದ್ದು ಬಿಡೋಣವೆನಿಸುತ್ತದೆ. ವರ್ಷದಲ್ಲಿ ೬ ತಿಂಗಳು ಸಂಪೂರ್ಣವಾಗಿ ಮುಚ್ಚಿ ಹೋಗುವ ಈ ಪ್ರದೇಶಗಳು ಮಿಕ್ಕ ೬ ತಿಂಗಳು ಮಾತ್ರ ಪ್ರವಾಸಿಗರಿಗೆ ಲಭ್ಯ. ೬ ತಿಂಗಳು ಕಾಲ ಸಂಪೂರ್ಣ ಸೈನಿಕರ ಹಿಡೀತದಲ್ಲಿರುತ್ತದೆ ಈ ಪ್ರದೇಶಗಳು ಎಂದು ಶೇಷಾಚಾರ್ ತಿಳಿಸಿದರು. ೬ ತಿಂಗಳು ಇಲ್ಲಿನ ಎಲ್ಲ ಕಟ್ಟಡಗಳು ಹಿಮದಿಂದ ಮುಚ್ಚಿಹೋಗಿರುತ್ತದಂತೆ. ಇಲ್ಲಿ ಭೇಟಿಕೊಡುವ ಇನ್ನೂ ಕೆಲವು ಸ್ಥಳಗಳಿದ್ದವೆಂದು ಕೆಲವರು ತಿಳಿಸಿದರೂ ನಮಗೆ ಸಮಯಾವಕಾಶವಿಲ್ಲದ್ದರಿಂದ ನಾವು ಹೀತಿರುಗಬೇಕಾಯಿತು.
೬.೩೦ ಸುಮಾರಿಗೆ ರಸ್ತೆ ತೆಗೆದ ತಕ್ಷಣವೆ ನಮ್ಮ ವಾಹನ ಹೊರಟಿತು. ಸುಮಾರು ೩೫೦ ಕಿ.ಮೀಗಳಷ್ಟು ದೂರ ಅದೂ ಬೆಟ್ಟಗುಡ್ಡಗಳ ರಸ್ತೆಯಲ್ಲಿ ಕ್ರಮಿಸಬೇಕಿರುವುದರಿಂದ ಬೇಗನೆ ಹೊರಡುವುದು ಸೂಕ್ತವೆನ್ನುವುದು ನಮ್ಮ ಪಾಂಡೆಯ ಅಭಿಪ್ರಾಯ.

ಸಂಜೆ ಸುಮಾರು ೪ ಗಂಟೆಗೆ ಋಷಿಕೇಶಕ್ಕೆ ಬಂದಿಳಿದೆವು. ದಾರಿಯಲ್ಲಿ ಗಂಗೆಯಲ್ಲಿ ರಾಫ್ಟಿಂಗ್ ಮಾಡುವವರ ನೂರಾರು ತಂಡಗಳು ನದಿ ದಂಡೆಯಲ್ಲಿ ಬಿಡಾರ ಹೂಡಿರುವುದು ವಿಶೇಷ. ಲಕ್ಶ್ಮಣಜೂಲ ರಾಮ್ ಜೂಲ ಭೇಟಿಕೊಟ್ಟು ಹರಿದ್ವಾರಕೆ ಬಂದು ವ್ಯಾಸಾಶ್ರಮದಲ್ಲಿ ಕೋಣೆಗಳನ್ನು ಪಡೆದು ಉಳಿದು ಕೊಂಡೆವು . ಕೇದಾರನಾಥ ಮತ್ತು ಬದರೀನಾಥ ಪ್ರವಾಸಕ್ಕೆ ಕನಿಷ್ಠ ೫ ದಿನಗಳ ಬಾಡಿಗೆ ಕೊಡಲೇಬೇಕೆಂದು ಹಠ ಹಿಡಿದ ಪ್ರವಾಸಿ ಏಜೆಂಟ್ ಗೆ ಅದೆಲ್ಲ ಸಾಧ್ಯವಿಲ್ಲವೆಂದು ತಿಳಿಸಿ ೪ ದಿನದ ಬಾಡಿಗೆಯನ್ನು ಕೊಟ್ಟು ಪಾಂಡೆಯನ್ನು ನಾಳೆ ಸಂಜೆ ನಮ್ಮನ್ನು ರೈಲ್ವೆ ನಿಲ್ದಾಣಕ್ಕೆ ನಮ್ಮನ್ನು ತಲುಪಿಸುವಂತೆ ಕೇಳಿಕೊಂಡೆವು. ಅತ್ಯಂತ ಆತ್ಮೀಯನಾಗಿದ್ದ ಪಾಂಡೆ ಸಂತೋಷದಿಂದ ಒಪ್ಪಿಕೊಂಡ.

ಹರ್ಕಿಪೌಡಿಯಲ್ಲಿನ ಮಾರುಕಟ್ಟೆಯಲ್ಲಿ ೩-೪ ಗಂಟೆಗಳ ಕಾಲ ಸುತ್ತಾಡಿ, ಮಾನಸ ದೇವಿ ಮಂದಿರ ಮತ್ತಿತರ ಸ್ಥಳಗಳಿಗೆ ಭೇಟಿಯಿತ್ತು. ಆಶ್ರಮಕ್ಕೆ ಹಿಂತಿರುಗಿ ಉರಿಬಿಸಿಲಿನಲ್ಲಿ ಆಶ್ರಮದ ಪಕ್ಕದಲ್ಲಿ ತಣ್ಣಗೆ ಹರಿಯುತ್ತಿದ್ದ ಗಂಗೆಯಲ್ಲಿ ನೀರಿಗಿಳಿದಾಗ ಧನ್ಯೋಸ್ಮಿ ಎಂಬ ಭಾವ. ೧ ಗಂತೆ ಕಳೆದದ್ದೆ ಗೊತ್ತಾಗಲಿಲ್ಲ. ಆಶ್ರಮದಲ್ಲಿ ಊಟಮಾಡಿ ಮತ್ತೆ ಹರ್ಕಿಪೌಡಿ ಮಾರುಕಟ್ಟೆ ನಂತರ ಗಂಗೆಯ ಆರತಿ ಮುಗಿಸಿಕೊಂಡು ಆಶ್ರಮಕ್ಕೆ ಹಿಂತಿರುಗಿದೆವು. ಗಂಗೆಯ ಆರತಿ ನೋಡಲು ಸಾವಿರಾರು ಜನರು ಸೇರುವುದು ವಿಶೇಷ.
ರಾತ್ರಿ ೧೨.೪೦ ನಿಮಿಷಕ್ಕೆ ಇದ್ದ ರೈಲಿಗೆ ನಮ್ಮನ್ನು ಕಳುಹಿಸಲು ಪಾಂಡೆ ೧೦.೦೦ಕ್ಕೆ ಹಾಜರಾದಾಗ ಮಳೆ ಜಿನುಗತೊಡಗಿತ್ತು. ನಮ್ಮನ್ನು ನಿಲ್ದಾಣಕ್ಕೆ ಬಿಟ್ಟು ಪಾಂಡೆ ಹಿಂತಿರುಗಿದಾಗ ಸಮಯ ೧೦.೪೫. ಜನರಿಂದ ತುಂಬಿ ಹೋಗಿದ್ದ ರೈಲ್ವೆ ನಿಲ್ದಾಣದಲ್ಲಿ ನಮ್ಮ ಹೊರೆಗಳನ್ನೆಲ್ಲಾ ಒಂದೆಡೆ ಇರಿಸಿ ಸುತ್ತಲೂ ಕುಳಿತು ಎಲ್ಲರೂ ತೂಕಡಿಸಲು ಪ್ರಾರಂಬಿಸಿದರು. ಪ್ರಸಾದಿ ಮತ್ತು ಗೀತ ಒಳ್ಳೆಯ ನಿದ್ದೆಯನ್ನೆ ತೆಗೆದರು. ನಾನು, ನನ್ನ ಪತ್ನಿ ಮತ್ತು ಶ್ರೀಕಾಂತ ಹೊರೆಗಳನ್ನೆಲ್ಲಾ ಕಾಯುತ್ತ ಕೂರಬೇಕಾಯಿತು.
ಸಮಯಕ್ಕೆ ಸರಿಯಾಗಿ ಬಂದ ರೈಲಿಗೆ ನಿದ್ದೆ ಮಾಡುತ್ತಿದ್ದ ಎಲ್ಲರನ್ನೂ ಎಚ್ಚರಗೊಳಿಸಿ ನಮ್ಮ ಸ್ಥಳಗಳನ್ನು ಹುಡುಕಿಕೊಂಡು ನಿದ್ರಿಸಿದೆವು. ಅಬ್ಬ ನಿಜಕ್ಕೂ ನಮಗೆ ಈ ವಿಶ್ರಾಂತಿ ಅತ್ಯಗತ್ಯವಾಗಿತ್ತು. ೬ ಗಂಟೆಗೆ ದೆಹಲಿ ತಲುಪಿದ ರೈಲಿನಿಂದಿಳಿದು ನೇರವಾಗಿ ತೀನ್ಮೂರ್ತಿಮಾರ್ಗ್ ಸೇರಿದೆವು. ಸ್ನಾನಾದಿಗಳನಂತರ ಮೆಟ್ರೊ ಹತ್ತಿ ಕರೋಲ್ಭಾಗ್ ಗೆ ಬಂದು ಕೆಲವು ಅಗತ್ಯ ವಸ್ತುಗಳ ಖರೀದಿಯ ನಂತರ ಅಲ್ಲಿಂದಲೆ ಅಕ್ಷರಧಾಮಕ್ಕೆ ತೆರಳಿದೆವು. ಭವ್ಯವಾಗಿ ನಿಂತ ಅಕ್ಷರಧಾಮ ಸ್ವಾಮಿ ನಾರಾಯಣ ಮಂದಿರ ಮನಸೆಳೆಯಿತು. ಸಾವಿರಾರು ಜನರು ಭೇಟಿಯಿತ್ತರೂ ಅತ್ಯಂತ ಸ್ವಚ್ಚವಾಗಿ ಮತ್ತು ಬಿಗಿ ಭದ್ರತೆಯನ್ನೂ ಕೂಡ ಖಾಸಗಿಯವರಿಂದಲೆ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆಯೆಂದರೆ ನಮಗದು ಆಶ್ಚರ್ಯಕರವೆ.

ಶಿಲ್ಪಕಲೆಯ ಉತ್ಕೃಷ್ಠತೆ ಇಲ್ಲಿ ಅನಾವರಣಗೊಂಡಿದೆಯೆನ್ನಬೇಕು ಅದೂ ಇತ್ತೀಚಿನ ದಿನಗಳಲ್ಲಿ ನಿರ್ಮಿಸಲ್ಪಟ್ಟಿದೆಯೆಂಬುದು ಹೆಮ್ಮೆಯ ಸಂಗತಿ. ಸಂಜೆ ೭ ಗಂಟೆ ಸುಮಾರಿಗೆ ಕೋಣೆಗೆ ಹಿಂತಿರುಗಿ ಮೈಸೂರು ಕೆಫೆಯಲ್ಲಿ ಊಟಮಾಡಿ ಮಲಗಿದವರಿಗೆ ತಿಗಣೆಗಳು ಸೊಳ್ಳೆಗಳು ಕಾಡಲಾರಂಭಿಸಿದವು ನಾನಂತೂ ಒಂದು ನಿಮಿಷವೂ ನಿದ್ದೆ ಮಾಡಲಿಲ್ಲ. ನನ್ನ ಮಗನಿಗೆ ಎಲ್ಲ ಕಡೆ ಕಚ್ಚಿದ್ದರಿಂದ ಮೈ ಪೂರ್ತಿ ಗುಳ್ಳೆಗಳಾದವು.
ಬೆಳಿಗ್ಗೆ ೬ ಗಂಟೆಗೆ ನಾನು ಮತ್ತು ಪ್ರಸಾದ್, ಆಗ್ರ ಮತ್ತು ಮಥುರಾ ಪ್ರವಾಸಕ್ಕಾಗಿ ಹೊರಟೆವು. ಶ್ರೀಕಾಂತ ಮಗಳ ಅನಾರೋಗ್ಯದಿಂದ ನಮ್ಮೊಡನೆ ಬರಲಾಗಲಿಲ್ಲ. ೯ ಗಂಟೆಯ ಸಮಯಕ್ಕೆ ತಿಂಡಿಗೆಂದು ನಿಂತ ಹೋಟೆಲ್ನಲ್ಲಿ ಒಟ್ಟು ನಾಲ್ಕು ಜನ ೧೬ ಕೆಟ್ಟ ರುಚಿಯ ಇಡ್ಲಿಗೆ ೩೦೦ ರೂ ತೆತ್ತು ಅವನನ್ನು ಶಪಿಸುತ್ತಾ ಬಸ್ ಹತ್ತಿದೆವು. ದಾರಿಯಲ್ಲಿ ಚುನಾವಣಾ ಜನಜಂಗುಳಿಯಿಂದ ಸುಮಾರು ೩-೪ ಗಂಟೆಗಳ ವಾಹನ ದಟ್ಟಣೆಯಿಂದ ಬಸ್ ನಿಂತಾಗ ಅದೇನು ನೋಡೋಣವೆಂದು ಹೊರಬಂದವನಿಗೆ ಬಿಸಿಲಿನ ಬೇಗೆಗೆ ತಲೆ ತಿರುಗಿ ಬಂದು ಓಡಿಹೋಗಿ ಮತ್ತೆ ಓಡಿ ಹೋಗಿ ಬಸ್ಸಿನಲ್ಲಿ ಕುಳಿತೆ. ೨ ಗಂಟೆಗೆ ಆಗ್ರಾದಲ್ಲಿ ಇಳಿದು ಕೆಂಪುಕೋಟೆ ನೋಡಿ ಕೊಂಡು ತಾಜ್ ಮಹಲ್ ಬಳಿಬಂದಾಗ ೩೦ ವರ್ಷಗಳ ಹಿಂದೆ ಇದೇ ದಿನ ಇಲ್ಲಿ ಬಂದದ್ದು ಅಂದು ದೆಹಲಿಗೆ ಹಿಂತಿರುಗುವಾಗ ನಮ್ಮ ಅಜ್ಜ ಕಳೆದು ಹೋದದ್ದು ಅವರನ್ನು ಹುಡುಕುವಾಗ ನಮ್ಮಪ್ಪನ ರಬ್ಬರ್ ಚಪ್ಪಲಿ ಜಿನುಗುತ್ತಿದ್ದದ್ದು ನನ್ನ ಮನದಲ್ಲಿ ಹಾಯ್ದು ಹೋಯ್ತು. ಆ ಹೊತ್ತಿಗೆ ದೂರವಾಣಿಯಲ್ಲಿ ಅಮ್ಮ ಹುಶಾರು ಕಣೋ ಇದೇ ನರಸಿಂಹ ಜಯಂತಿಯ ಹಿಂದಿನ ದಿನ ತಾತ ಕಳೆದು ಹೋಗಿದ್ರು ಅಮಿತ್ ನ ಹುಶಾರಾಗಿ ನೋಡ್ಕೋ ಎಂದು ನನಗೆ ಎಚ್ಚರಿಕೆಯಿತ್ತರು. ತಾಜ್ ಮಹಲ್ನಂತರ ಮಥುರಾದಲ್ಲಿ ಕೃಷ್ನ ಜನ್ಮಸ್ಥಾನ ಬೃಂದಾವನ ನೋಡಿಕೊಂಡು ರಾತ್ರಿ ೨.೩೦ಕ್ಕೆ ದೆಹಲಿಗೆ ಹಿಂತಿರುಗಿ ಬಂದೆವು. ಈ ಬಾರಿ ತಿಗಣೆಯಿರದ ಕೋಣೆಯಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಅಂಟಿಕೊಂಡು ಮಲಗಬೇಕಾಯಿತು.
೭ ರಂದು ಬೆಳಿಗ್ಗೆ ಚುನಾವಣೆಯಿದ್ದುದ್ದರಿಂದ ಯಾವುದೆ ಮಾರುಕಟ್ಟೆಗಳು ತೆಗೆದಿಲ್ಲವಾದ್ದರಿಂದ ಬಿರ್ಲಾ ಮಂದಿರಕ್ಕೆ ಭೇಟಿಕೊಟ್ಟಿ ಕಮಲ ಮಹಲ್ ನೋಡಲಾಗದಿದ್ದುದಕ್ಕೆ ವಿಷಾದಿಸುತ್ತಾ ಟ್ಯಾಕ್ಸಿ ಹತ್ತಿ ವಿಮಾನ ನಿಲ್ದಾಣಕ್ಕೆ ಬಂದು ಸಮಯಕ್ಕೆ ಸರಿಯಾಗಿ ಹೊರಟ ವಿಮಾನದಲ್ಲಿ ಬೆಂಗಳೂರಿಗೆ ಬಂದವನೆ ಅಮ್ಮನಿಗೆ ಕರೆ ಮಾಡಿ ಅಕ್ಕಿರೊಟ್ಟಿ ಕಾಯಿ ಚಟ್ನಿ ಅನ್ನ ತಿಳಿಸಾರು ಮಾಡು ಎಂದು ಫೋನಾಯಿಸಿದೆ. ಮನೆಗೆ ಬಂದು ಅಮ್ಮ ಕೊಟ್ಟ ಅಕ್ಕಿ ರೊಟ್ಟಿ ಕೈಯಲ್ಲಿ ಹಿಡಿದಾಗ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸಿ. ಅತ್ಯಂತ ಧೀರ್ಘವಾದ ಈ ಪ್ರವಾಸ ಕಥನ ಬೇಗ ಮುಗಿಸಬೇಕೆಂಬ ತವಕ ನನಗೂ ಇತ್ತು. ನಿಮ್ಮ ತಲೆತಿಂದಿದ್ದಕ್ಕೆ ಕ್ಷಮೆಯಿರಲಿ. ನೀವೂ ಹೋಗಿಬನ್ನಿ. ಪ್ರವಾಸಕ್ಕೆ ಸಹಕರಿಸಿದ ಅದರಲ್ಲೂ ಕುಲ್ದೀಪ್ ಮತ್ತು ದಿಲೀಪ್ ಅವರ ಕುಟುಂಬಕ್ಕೆ ಧನ್ಯವಾದ ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ. ಧನ್ಯವಾದಗಳು.

Friday, July 3, 2009

ಕಾಶ್ಮೀರ ಮತ್ತು ಉತ್ತರಭಾರತ ಪ್ರವಾಸ-2

ಕಾಟ್ರಾದಿಂದ ಧರ್ಮಶಾಲಕ್ಕೆ ಇರುವ ಬಸ್ ಜಮ್ಮುವಿಗೆ ಬಂದಾಗ ಬೆಳಿಗ್ಗೆ ೮.೩೦. ನಮ್ಮೆಲ್ಲ ಹೊರೆಗಳನ್ನು ಹೊತ್ತ ಕೂಲಿಯವ ನಡೆಯುವುದು ನೋಡಿ ನನಗೆ ಗಾಭರಿಯಾಯ್ತು. ಸುಮಾರು ೧೦ ದೊಡ್ಡ ದೊಡ್ಡ ಚೀಲಗಳನ್ನು ಅನಾಯಾಸವಾಗಿ ತನ್ನಲ್ಲಿದ್ದ ಒಂದೇ ಒಂದು ಹಗ್ಗದ ಸಹಾಯದಿಂದ ಹೊತ್ತುಕೊಂಡು ನಡದೇ ಬಿಟ್ಟ. ಹೊರೆಗಳನ್ನೆಲ್ಲ ಬಸ್ಸಿನ ಮೇಲ್ಭಾಗಕ್ಕೆ ತುಂಬಿ ಬಸ್ ಹೊರಟ ಸ್ವಲ್ಪ ಸಮಯಕ್ಕೆ ಪ್ರಸಾದಿಯ ಚಮತ್ಕಾರ ಶುರುವಾಯ್ತು, ನನ್ನ ಅಂಗೈ ನೋಡುತ್ತ ಭವಿಷ್ಯ ಹೇಳುವಂತೆ ನಟಿಸುತ್ತಿದ್ದವನನ್ನನ್ನು ಹಿಂದೆ ಕುಳಿತಿದ್ದ ನಡುವಯಸ್ಸು ದಾಟಿದ ಹಳ್ಳಿಯವನೊಬ್ಬ ತನಗೂ ಹೇಳುವಂತೆ ಪೀಡಿಸಲು ಪ್ರಾರಂಭಿಸಿದ. ಹಿಂದಿ ಬರದ ಪ್ರಸಾದಿ ತನ್ನ ಹರಕು ಮುರಕು ಭಾಷೆಯಲ್ಲಿ ಹೆಳಿದ್ದಕ್ಕೆಲ್ಲ ಅವನು ತಲೆಯಾಡಿಸುತ್ತಿದ್ದದ್ದು ನಗು ತರಿಸುತ್ತಿತ್ತು. ಅವನ ಕಾಟ ಸಹಿಸಲಾರದ ಪ್ರಸಾದಿ ಕೊನೆಗೆ ನಾನು ಕನ್ನಡಕ ತಂದಿಲ್ಲವೆಂದು ಹೇಳಿ ತಪ್ಪಿಸಿಕೊಂಡ. ಗುರುದಾಸ್ಪುರ, ಪಠಾಣ್ ಕೋಟ್ ಮಾರ್ಗವಾಗಿ ಧರ್ಮಶಾಲಕ್ಕೆ ನಾವು ತಲುಪಿದಾಗ ಸೂರ್ಯ ನೆತ್ತಿಬಿಟ್ಟು ಕೆಳಗಿಳಿಯಲು ಆರಂಭಿಸಿದ್ದ. ಬಸ್ ನಿಲ್ದಾಣದಿಂದ ನೇರವಾಗಿ ಮಂಜುನಾಥರ ಮನೆಗೆ ಟ್ಯಾಕ್ಸಿಯಲ್ಲಿ ಬಂದಿಳಿದೆವು. ಶ್ರೀ ಮಂಜುನಾಥ ಮತ್ತು ಮನೆಯವರ ಆತ್ಮೀಯತೆ ಸ್ಮರಣೀಯ. ಉತ್ತರ ಭಾರತದ ತಿನಿಸುಗಳನ್ನು ತಿಂದು ಜಡ್ಡುಗಟ್ಟಿದ್ದ ನಾಲಿಗೆಗೆ ಒಳ್ಳೆಯ ಅವಲಕ್ಕಿಒಗ್ಗರಣೆ, ಉಪ್ಪಿನಕಾಯಿ ಮತ್ತು ಕಾಫಿ ಅಮೃತದಂತಿತ್ತು.

ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗಾಗಿರುವ ಬಡಾವಣೆಯಲ್ಲಿ ನಮ್ಮ ವಾಸ್ತವ್ಯ ತುಂಬಾ ಖುಷಿ ತಂತು. ಬೆಟ್ಟದ ಬುಡದಲ್ಲಿರುವ ಬಡಾವಣೆ, ಒಂದು ಸಾಲಿನ ಬೆಟ್ಟದ ನಂತರದ ಶ್ರೇಣಿಗಳಲ್ಲಿ ಮಂಜು ಆವೃತವಾಗಿರುವುದು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿದೆ. ಆದರೂ ಛಳಿ ಮಾತ್ರ ಸ್ವಲ್ಪವೂ ಇರಲಿಲ್ಲ. ರಾತ್ರಿ ಬಿಸಿಬೇಳೆಬಾತ್, ಅನ್ನ, ತಿಳಿಸಾರನ್ನು ಭರ್ಜರಿಬೇಟೆಯಾಡಿದೆವು. ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಪರಮವೀರಚಕ್ರ ಪುರಸ್ಕೃತರ ಬಗ್ಗೆ ಇರುವ ಫಲಕಗಳು ನಮ್ಮ ಕಣ್ಣಂಚನ್ನು ತೇವಗೊಳಿಸದೆ ಬಿಡುವುದಿಲ್ಲ. ಇದೆ ರಕ್ಷ್ಣಣಾ ಬಡಾವಣೆಯ ಮುಂದಿರುವ ಟ್ಯಾಂಕ್ ಗಳು ೧೯೭೧ ರ ಯುದ್ದದಲ್ಲಿ ವಶಪಡಿಸಿಕೊಂಡವು ಎಂದು ಮಂಜುನಾಥ್ ತಿಳಿಸಿದರು. ರಕ್ಷಣಾವಲಯವಾದ್ದರಿಂದ ಚಿತ್ರಗಳನ್ನು ತೆಗೆದುಕೊಳ್ಳುವ ದುಃಸಾಹಸಕ್ಕೆ ಕೈಯಿಡಲಿಲ್ಲ. ಬೆಳಿಗ್ಗೆ ವಾಹನವೊಂದರಲ್ಲಿ ಮಾಡಿಕೊಂಡು ಮಂಜುನಾಥರ ಸಂಸಾರದೊಂದಿಗೆ ’ಜ್ವಾಲಾಜಿ’ಯತ್ತ ನಮ್ಮ ಪಯಣ. ಇಲ್ಲಿನ ಕಾಡುಗಳ ವಿಶೇಷತೆಯೆಂದರೆ ಕರಿಬೇವಿನ ಮರಗಳು ತುಂಬಿರುವುದು ದಾರಿಯುದ್ದಕ್ಕು ಇರುವ ಕುರುಚಲು ಕಾಡಿನಲ್ಲಿ ಕರಿಬೇವಿನ ಮರ ಹೇರಳವಾಗಿ ಬೆಳೆದಿದೆ. ಆದರೆ ಇಲ್ಲಿನ ಜನಕ್ಕೆ ಅದರ ಉಪಯೋಗ ಗೊತ್ತಿಲ್ಲ ಎಂಬುದು ಶ್ರೀಮತಿ ಮಂಜುನಾಥರ ಮಾಹಿತಿ. ಶ್ರೀಮತಿ ಗ್ತಾ ಅವರಂತು ಬೆಂಗಳೂರಿನಲ್ಲಿ ಕರಿಬೇವಿನ ಸೊಪ್ಪು ಸಿಗುವುದಿಲ್ಲವೆಂಬಂತೆ ಅದನ್ನು ಶೇಖರಿಸತೊಡಗಿದ್ದು ನನಗೆ ಅತ್ಯಂತ ಕುತೂಹಲಭರಿತ ತಮಾಷೆಯಾಗಿ ಕಾಣಿಸಿತು.

ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ನಾವು ಜ್ವಾಲಾಜಿ ದೇವಸ್ತಾನದ ಸಮೀಪಕ್ಕೆ ಬಂದು ನಿಂತಿದ್ದೆವು. ತನ್ನಿಂತಾನೆ ಉರಿಯುವ ಅಗ್ನಿ ಯೆ ಇಲ್ಲಿನ ದೇವರು ತಲೆಯ ಮೇಲೆ ಸುಡುವ ಸೂರ್ಯದೇವ. ಪಾರ್ವತಿಯೆಂದು ಆರಾಧಿಸುವ ಜನರು. ಔರಂಗಜೇಬ ಅದನ್ನು ತಟ್ಟೆಯಿಂದ ಮುಚ್ಚಿ ಆರಿಸಲು ನೋಡಿದ ಕುರುಹಾಗಿ ಬೆಂಕಿಯ ಬಿಸಿಗೆ ಕರಗಿ ತೂತಾಗಿರುವ ತಟ್ಟೆ ಈಗಲೂ ಪ್ರದರ್ಶನಕ್ಕಿದೆ. ಸುಮಾರು ೭ ಎಂಟು ಕಡೆ ಈ ತೆರನಾದ ಬೆಂಕಿ ನಿರಂತರವಾಗಿ ನಮ್ಮ ಗ್ಯಾಸ್ ಒಲೆಗಳಂತೆ ಉರಿಯುತ್ತಿರುತ್ತದೆ. ಕೆಲವು ನೀರಿನ ದಡದಲ್ಲೂ ಸಹ. ತನ್ನ ತಂದೆ ದಕ್ಷನಿಂದ ಅವಮಾನಿತಳಾಗಿ ಗತಿಸಿದ ಹೆಂಡತಿಯ ಶವವನ್ನು ಹೊತು ತಿರುಗುತ್ತಿದ್ದ ಶಿವನನ್ನು ಅದರಿಂದ ಹೊರ ತರಲು ತನ್ನ ಚಕ್ರದಿಂದ ಕಳೇಬರವನ್ನು ಚೂರಾಗಿಸಿದಾಗ ಕಳೇಬರದ ಭಾಗವೊಂದು ಇಲ್ಲಿ ಬಿದ್ದಿತ್ತೆಂದು ಇಲ್ಲಿ ಕಥೆ ಹೇಳುತ್ತಾರೆ. ಮತ್ತೊಮ್ಮೆ ಇಲ್ಲಿನ ಜನರ ಭಕ್ತಿಯ ಪರಾಕಾಷ್ಠತೆಯ ಪರಿಚಯ ಇಲ್ಲಿ ನನಗಾಯಿತು. ಸಿಖ್ಖರು ಕೂಡಾ ಇಲ್ಲಿನ ಮಾತೆಯ ದೇಗುಲಕ್ಕೆ ಭಕ್ತಿಯಿಂದ ನಡೆದುಕೊಳ್ಳುವುದು ವಿಶೇಷತೆ. ಸುಮಾರು ೨ ಗಂಟೆಗಳ ಸರತಿಸಾಲಿನಲ್ಲಿ ಉರಿಯುವ ಬಿಸಿಲಲ್ಲಿ ನಿಂತು ಎಲ್ಲ ಉರಿಯುತ್ತಿರುವ ಬೆಂಕಿಯ ದರ್ಶನಂಗೈದು ಹೊರಬಂದಾಗ ಸಮಯವಾಗಲೆ ೨ ಗಂಟೆ ದಾಟಿತ್ತು.

ಮನೆಯಿಂದಲೇ ತಯಾರಿಸಿ ತಂದಿದ್ದ ಪುಳಿಯೊಗರೆ ಮತ್ತು ಮೊಸರನ್ನವನ್ನು ತಿಂದು ಧರ್ಮಶಾಲದ ಸಮೀಪವಿರುವ ಮತ್ತೊಂದು ದೇಗುಲಕ್ಕೆ ಭೇಟಿಯಿತ್ತು ಮನೆಗೆ ತಲುಪಿದಾಗ ೭.೩೦. ಶ್ರೀ ಮಂಜುನಾಥ್ ಪರಮವೀರಚಕ್ರ ವಿಜೇತರ ಬಗ್ಗೆ ಮಾಹಿತಿ ನೀಡುತ್ತೇನೆಂದು ಭರವಸೆಯಿತ್ತರು. ಅವರಿಗೂ ಸಂಪದವನ್ನು ಪರಿಚಯಿಸಿದೆ. ಸದಸ್ಯರಾಗಿದ್ದಾರೆಯೆ? ಗೊತ್ತಿಲ್ಲ.
ನೇರವಾಗಿ ಚಿಂತಮಯಿ ದೇವಸ್ತಾನಕ್ಕೆ ಬಂದೆವು. ಸೂರ್ಯ ಈ ಹೊತ್ತಿಗಾಗಲೆ ನಾನಿನ್ನು ನಿಮ್ಮನ್ನು ಸುಡಲಾರೆ ಎಂದು ಬಸವಳಿದು ಮನೆಯತ್ತ ಓಡುತ್ತಿದ್ದ. ಚೂರಾದ ಶಿವನ ಪತ್ನಿಯ ದೇಹದ ಮತ್ತೊಂದು ಭಾಗ ಇಲ್ಲಿ ಬಿದ್ದಿತ್ತೆಂಬುದು ನಂಬಿಕೆ.

ಬೆಳಿಗ್ಗೆ ೭ ಗಂಟೆಗೆ ಮತ್ತೆ ನಮ್ಮ ಪ್ರಯಾಣ ಈ ಬಾರಿ ಅಮೃತಸರದ ಕಡೆಗೆ. ನಮ್ಮ ಪೂರ್ವನಿಗಧಿತ ಯೋಜನೆಯಂತೆ ಕುಲು-ಮನಾಲಿಗೆ ತೆರಳಬೇಕಿತ್ತು. ಆದರೆ ಗುಲ್ಮಾರ್ಗ್ ಮತ್ತು ಕಾಶ್ಮೀರಗಳನ್ನು ನೋಡಿದ ಮೇಲೆ ಅದರ ಅವಶ್ಯಕತೆಯಿಲ್ಲವೆಂದು ಶ್ರೀಕಾಂತ್ ಮತ್ತು ಪ್ರಸಾದಿಯ ಸಲಹೆಗೆ ನನಗೆ ಮನಸ್ಸಿಲ್ಲದಿದ್ದರೂ ಒಪ್ಪಲೇಬೇಕಾಯಿತು. ಸರಿ ಅದರಂತೆ ಹೊರಟಾಗ ದಾರಿಯುದ್ದಕ್ಕೂ ಕಣಿವೆಗಳು ಆಳದಲ್ಲಿ ಹರಿದು ಬರುತ್ತಿರುವ ನದಿ. ಬಿಸಿಲಿನ ಝಳ ನಮ್ಮನ್ನು ನೀರಿಗಿಳಿಯುವಂತೆ ಮಾಡಿತು. ಸಾರ್ ವಾಘಾ ಗಡಿ ತಲುಪುವುದು ಕಷ್ಟ ಆಗುತ್ತೆ ಎಂದು ಅಲವತ್ತುಕೊಂಡ ಚಾಲಕನ ಮಾತನ್ನು ಗಮನಿಸದೆ ೧ ಗಂಟೆಗಳ ಕಾಲ ನೀರಲ್ಲಿ ಕಳೆದೆವು. ಹಿಮಾಚಲ ಪ್ರದೇಶವನ್ನು ದಾಟಿ ಪಂಜಾಬ್ ಪ್ರಾಂತ್ಯವನ್ನು ಪ್ರವೇಶಿಸಿದಾಗಲೆ ಉತ್ತರಭಾರತದ ಕಡು ಕೆಟ್ಟ ಬಿಸಿಯ ಅನುಭವವಾದದ್ದು. ಬೆಂಗಳೂರಿನಿಂದ ರೈಲಿನಲ್ಲಿ ಬರಬೇಕಾದರೆ ಮಧ್ಯಪ್ರದೇಶ ದಾಟಿದ ಮೇಲೆ ಬಿಸಿಯ ಅನುಭವವಾದರೂ ೨ನೆ ದರ್ಜೆಯ ಹವಾನಿಯಂತ್ರಿತ ದಬ್ಬಿಯಲ್ಲಿದ್ದದರಿಂದ ಈ ತೆರನಾದ ಬಿಸಿಲಿನ ಝಳದ ಅನುಭವವಾಗಿರಲಿಲ್ಲ. ೧೯೭೯ರಲ್ಲಿ ನಮ್ಮ ತಂದೆಯ ರಬ್ಬರ್ ಚಪ್ಪಲಿ ಆಗ್ರಾದಲ್ಲಿನ ಬಿಸಿಲಿನ ಬಿಸಿಗೆ ಜಿನುಗುವುದನ್ನು ನಾನು ಕಂಡಿದ್ದೆ ಆದರೆ ಅದೆಲ್ಲ ೩೦ ವರ್ಷಗಳ ಹಿಂದಿನ ನೆನಪು ಮಾತ್ರ ಇತ್ತು. ನೀರು ಸಿಕ್ಕ ಕಡೆಯಲ್ಲೆಲ್ಲ ತಲೆಗೆ ಸುರಿದು ಕೊಳ್ಳುತ್ತ ಒದ್ದೆ ಬಟ್ಟೆಗಳನ್ನು ವಾಹನದ ಕಿಟಕಿಗೆ ಅಡ್ಡ ಹಿಡಿದು ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳುವ ನಮ್ಮ ಯಾವ ಪ್ರಯತ್ನಗಳು ಹೆಚ್ಚು ಫಲ ಕೊಡಲಿಲ್ಲ. ಮಧ್ಯಾಹ್ನ ಶ್ರೀಮತಿಮಂಜುನಾಥ್ ತಯಾರಿಸಿಕೊಟ್ಟಿದ್ದ ಚಪಾತಿಯನ್ನು ಜಲಂಧರ್ ಸಮೀಪದಲ್ಲಿದ್ದ ಪಂಜಾಬ್ ರಾಜ್ಯ ಡೈರಿಯ ಮುಂದೆ ಇರುವ ಉದ್ಯಾನವನದಲ್ಲಿ ತಿಂದು ಮುಗಿಸಿದೆವು. ಲಸ್ಸಿ ಕುಡಿದು ಮತ್ತೊಮ್ಮೆ ನೀರು ತುಂಬಿಕೊಂಡು ಹೊರಟೆವು.

ಅತ್ಯಂತ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಚಾಲಕ ಕುಲ್ದೀಪ್ ಸಂಜೆ ೫ ರ ಸುಮಾರಿಗೆ ವಾಘಾ ಗಡಿಗೆ ನಮ್ಮನ್ನು ತಲುಪಿಸಿದ. ಅರ್ಧ ಮೈಲಿಯಷ್ಟು ನಡೆದು ಭಾರತ ಪಾಕೀಸ್ತಾನ ಗಡಿಯನ್ನು ತಲುಪಿದೆವು. ಸಂಜೆ ಕತಲಾಗುವುದಕ್ಕೆ ಮುನ್ನ ರಾಷ್ಟ್ರಧ್ವಜವನ್ನು ಇಳಿಸಿ ಗಡಿ ಮುಚ್ಚುವ ಪ್ರಕ್ರಿಯೆಯಲ್ಲಿ ನಡೆಯುವ ಕೆಲವು ಪೆರೇಡ್ ಗಳು ಆಕರ್ಷಣೀಯ. ಆ ಪ್ರಕ್ರಿಯೆಗೂ ಮುನ್ನ ಅಲ್ಲಿ ರಾಷ್ಟ್ರಭಕ್ತಿ ಗೀತೆಗಳನ್ನು ಮೊಳಗಿಸಿ ಬಂದಿದ್ದ ತರುಣಿಯರು, ಹೆಂಗಸರು ಮತ್ತು ಮಕ್ಕಳು ಮಾಡಿದ ನೃತ್ಯ ಸೊಗಸಾಗಿತ್ತು. ಪಂಜಾಬಿನ ತರುಣಿಯರಿಗೆ ನೃತ್ಯ ಬಹುಶಃ ಜನ್ಮದಲ್ಲೆ ಬಂದ ಕಲೆಯಿರಬೇಕು. ಬೋಲೋ ಭಾರತ್ ಮಾತಾಕಿ ಜೈ ಎಂಬ ಶಬ್ದವನ್ನು ಗಡಿಯಾಚೆಗೂ ಅನುರಣಿಸುವಂತೆ ಮಾಡಿದ ಶ್ರೀಕಾಂತ ಅಭಿನಂದನೀಯ. ರಾಷ್ಟ್ರಧ್ವಜವನ್ನು ಹಿಡಿದು ಗಡಿವರೆಗೂ ಓಡಿಹೋದ ಚಿತ್ರಾ ಮತ್ತು ಗೀತಾರ ಮುಖದಲ್ಲಿ ಅದೇನೋ ಗೆದ್ದ ಮನೋಭಾವ. ೭ ಗಂಟೆಗೆ ಸುಮಾರಿಗೆ ಅಲ್ಲಿಂದ ಹೊರಟು ೮ ಗಂಟೆ ಸುಮಾರಿಗೆ ಅಮೃತಸರಕ್ಕೆ ಹಿಂತಿರುಗಿ ಗುರುದ್ವಾರದ ಧರ್ಮಶಾಲೆಯೊಂದರಲ್ಲಿ ಹವಾನಿಯಂತ್ರಿತ ಕೊಠಡಿಯೊಂದನ್ನು ಪಡೆದು ನಮ್ಮ ಹೊರೆಗಳನ್ನೆಲ್ಲ ಕೋಣೆಗೆ ತುಂಬಿದೆವು. ಗುರುದ್ವಾರದ ಹೊರಗೆ ಹಗಲಿರುಳು ನಡೆಯುವ ಧರ್ಮದೂಟವೆಂದು ಕೊಟ್ಟ ರೊಟ್ಟಿ ತಿಂದು ಸ್ವರ್ಣಮಂದಿರಕ್ಕೆ ತೆರಳಿದೆವು. ಹೊರಗೆ ಬಿಸಿ ಹಬೆಯಿದ್ದರೂ ಮಂದಿರದ ಭಾಗದಲ್ಲಿ ಮಾತ್ರ ಹವೆ ತಂಪಾಗಿದ್ದದ್ದು ನಮ್ಮನ್ನು ಅಲ್ಲೆ ಹೆಚ್ಚು ಸಮಯ ಕಳೆಯುವಂತೆ ಮಾಡಿತು. ಇಲ್ಲಿನ ಸ್ವರ್ಣಮಂದಿರ ಸ್ವಚ್ಚತೆ ಮಾತ್ರ ಅತ್ಯಂತ ಪ್ರಶಂಸನೀಯ. ಎಲ್ಲವೂ ಸ್ವಯಂ ಸೇವಕರಿಂದ ಅಚ್ಚುಕಟ್ಟಾಗಿ ನಿರ್ವಹಿಸಲ್ಪಡುತ್ತಿರುವ ಸ್ವರ್ಣಮಂದಿರ ಮನಸೆಳೆಯುತ್ತದೆ. ಸ್ವರ್ಣ ಮಂದಿರವನ್ನು ಸಂದರ್ಶಿಸಿ ಬಂದು ಕೋಣೆಗೆ ಬಿದ್ದದ್ದಾಯ್ತು. ಬೆಳಿಗ್ಗೆ ಅಮೃತಸರದಲ್ಲಿದ್ದ ಬೇರೆ ಬೇರೆ ಮಂದಿರಗಳ ದರ್ಶನದ ನಂತರ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ಬಂದು ತಲುಪಿದೆವು. ಗುಂಡಿನ ದಾಳಿ ತಪ್ಪಿಸಿಕೊಳ್ಳಲು ಜನ ಬಿದ್ದ ಬಾವಿ, ಗೋಡೆಗೆ ತಗುಲಿದ ಗುಂಡೇಟುಗಳು ಅಂದು ನಡೆದ ದುರಂತಕ್ಕೆ ಸಾಕ್ಷೀಭೂತವಾಗಿ ನಿಂತಿವೆ.

ಸೈಕಲ್ ರಿಕ್ಷಾಗಳು ಇಷ್ಟು ಕಡಿಮೆ ದರದಲ್ಲಿ ನಿಮಗೆ ಸಿಗುತ್ತವೆಂದರೆ ನಂಬಲೂ ಸಾಧ್ಯವಿಲ್ಲ. ೩-೪ ಕಿ.ಮೀ ಗಳಿಗೆ ಕೇವಲ ೪-೫ ರೂಗಳಿಗೆ ದುಂಬಾಲು ಬೀಳುತ್ತಾರೆ ಅತ್ಯಂತ ಶ್ರಮಜೀವಿ ಪಂಜಾಬಿಗಳು ಇಲ್ಲಿ ನಮಗೆ ಭಿಕ್ಷುಕರೇ ಕಾಣ ಸಿಗಲಿಲ್ಲ. ನೀರೆತ್ತುವ ಅಥವ ವಿದ್ಯುತ್ ಶಕ್ತಿ ಉತ್ಪಾದನೆಗಾಗಿ ನಾವು ಬಳಸುವ ಡೀಸೆಲ್ ಜನರೇಟರ್ ಗಳನ್ನೆ ಬಳಸಿ ೪ ಚಕ್ರದ ವಾಹನ ಮಾಡಿಕೊಂಡು ಓಡಿಸುವ ಇವರು ಬುದ್ದಿವಂತರೂ ಕೂಡ. ಮತ್ತೊಮ್ಮೆ ರಾತ್ರಿ ಸ್ವರ್ಣಮಂದಿರಕ್ಕೆ ಭೇಟಿ ನೀಡಿದೆವು. ಸೈಕಲ್ ರಿಕ್ಷಾಗಳಲ್ಲಿ ನಮ್ಮ ಹೊರೆಗಳನ್ನೆಲ್ಲ ತುಂಬಿಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದು ಅಮೃತಸರದಿಂದ ಚಂಡೀಗಡ ತಲುಪಲು ಅಂಬಾಲ ದಂಡಿನವರೆಗೆ ಕಾದಿರಿಸಿದ್ದ ರೈಲಿನಲ್ಲಿ ಪ್ರಯಾಣಿಸಿ ಬೆಳಗಿನ ಜಾವ ೪ ಗಂಟೆಗೆ ೫೦ ಕಿ.ಮೀ ದೂರವಿದ್ದ ಚಂಡೀಗಡವನ್ನು ಮತ್ತೊಂದು ರೈಲಿನಲ್ಲಿ ತಲುಪಿದಾಗ ಬೆಳಿಗೆ ೬.೦೦ ಗಂಟೆ. ಈಗಾಗಲೇ ಚಂಡೀಗಡಕ್ಕೆ ಬಂದು ಅನುಭವವಿದ್ದ ಶ್ರೀಕಾಂತ ಹೇಳಿದಂತೆ ರಾಕ್ ಗಾರ್ಡನ್ ಮತ್ತು ಒಂದು ಸರೋವರವನ್ನು ನೋಡಿದೆವು. ಸುಡು ಬಿಸಿಲು ಬೆಂದುಹೋಗುವಷ್ಟು ಪ್ರಖರವಾಗಿತ್ತು. ಯಾರ ಮುಖದಲ್ಲೂ ಕಳೆಯಿರಲಿಲ್ಲ. ಬರೀ ಉಪಯೋಗಿಸಿ ಬಿಸಾಡಿದ ವಸ್ತುಗಳಿಂದಲೆ ನಿರ್ಮಿಸಿರುವ ರಾಕ್ ಗಾರ್ಡನ್ ಆಗಲಿ ಸುಂದರ ಸರೋವರವಾಗಲಿ ನಮ್ಮ ಮನಸೆಳೆಯಲಿಲ್ಲ ಬಹುಶಃ ಬಿಸಿಲಿನಿಂದ ಬಸವಳಿದು ಹೋಗಿದ್ದೆವು. ಅದು ಫೋಟೋಗಳಲ್ಲಿ ಕೂಡ ಪ್ರತಿಫಲಿತವಾಗಿದೆ. ಮಧ್ಯಾಹ್ನ ೨ ಗಂಟೆಗಿದ್ದ ರೈಲನ್ನು ಹಿಡಿದು ೩ನೇ ದರ್ಜೆ ಎಸಿಯಲ್ಲಿ ಮಲಗಿದವರಿಗೆ ಎಚ್ಚರವಾಗಿದ್ದು ೬ಕ್ಕೆ. ಎಲ್ಲರಿಗೂ ನವ ಚೈತನ್ಯವನ್ನು ತಂದುಕೊಟ್ಟ ಈ ರೈಲಿನ ಪ್ರಯಾಣ ನೆಮ್ಮದಿ ತಂತು. ಏಕೆಂದರೆ ಚಂಡಿಗಡದ ರಣ ಬಿಸಿಲು ನಮ್ಮೆಲ್ಲರನ್ನೂ ಹೈರಾಣವಾಗಿಸಿತ್ತು. ಸಂಜೆ ೬.೩೦ರ ಸುಮಾರಿಗೆ ಹರಿದ್ವಾರಕ್ಕೆ ಬಂದಿಳಿದೆವು.

ಬೆಂಗಳೂರಿನಿಂದಲೆ ಸ್ನೇಹಿತ ರಾಜೀವ್ ಅವರ ದಾಯಾದಿ ಶ್ರವಣ್ ಅವರಿಂದ ನಮಗಾಗಿ ಕಾದಿರಿಸಿದ ವಾಹನದಲ್ಲಿ ನಮಗಾಗಿ ಮೀಸಲಾಗಿದ್ದ ಬಿ.ಹೆಚ್.ಇ.ಎಲ್ ಅತಿಥಿಗೃಹಕ್ಕೆ ತಲುಪಿ ಅವರು ಕೊಟ್ಟ ಊಟವನ್ನು ಮಾಡಿ ಇನ್ನು ಮುಂದಿನ ದಿನಕ್ಕೆ ನಮ್ಮ ಸಾರಥಿಯಾಗಿ ಬಂದಿದ್ದ ಸುಶೀಲ್ ಪಾಂಡೆಯನ್ನು ಬೆಳಿಗ್ಗೆ ಬೇಗನೆ ಬರುವಂತೆ ತಿಳಿಸಿದೆವು.

೨೪ರ ಹರೆಯದ ಯುವಕ ಪಾಂಡೆ ಒಳ್ಳೆಯ ಮಾತುಗಾರ. ಮದುವೆಗೆ ಹುಡುಗಿಯ ಹುಡುಕಾಟದಲ್ಲಿದ್ದ ಅವನನ್ನು ಛೇಡಿಸುತ್ತಾ ಸಾಗುತ್ತಿದ್ದದ್ದು ಅವನಿಗೂ ಖುಷಿಕೊಟ್ಟಿತು. ನಮ್ಮ ಇಂದಿನ ಪ್ರಯಾಣದ ಗುರಿ ಗೌರಿಕುಂಡ. ಋಷಿಕೇಶದ ನಂತರ ಬರೀ ಕಣಿವೆಗಳಲ್ಲಿ ಸಾಗುವ ರಸ್ತೆ. ಎಲ್ಲೆಲ್ಲೂ ಉರಿಬಿಸಿಲು ಪ್ರಯಾಣವನ್ನು ಪ್ರಯಾಸವನ್ನಾಗಿಸುತ್ತಿತ್ತು. ಇದರ ಮಧ್ಯೆ ಒಳ್ಳೆಯ ಹೋಟೆಲ್ಗಳು ಸಿಗದೆ ಹಣ್ಣುಗಳು ಸಿಗದೆ ಹಸಿವು ಕಾಡುತ್ತಿದ್ದರು ಬೇರೆ ವಿಧಿಯಿರಲಿಲ್ಲ. ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ಯಾವುದೋ ಒಂದು ಡಾಭಾದ ಮುಂದೆ ನಿಲ್ಲಿಸಿ ನಿಟ್ಟುಸಿರು ಬಿಟ್ಟ ಪಾಂಡೆ. ಮತ್ತೊಮ್ಮೆ ಅದೆ ರುಚಿಯಿಲ್ಲದ ಸಾಸಿವೆ ಎಣ್ಣೆಯ ಅಡುಗೆ ವಾಕರಿಕೆ ತರಿಸುತ್ತಿತ್ತು. ಹೇಗೋ ಸಂಭಾಳಿಸಿಕೊಂಡು ಸೇರಿದಷ್ಟು ನುಂಗುತ್ತಾ ಸಂಭಾಳಿಸಿಕೊಳ್ಳುತ್ತಿದ್ದೆವು. ದಾರಿಯು ಕಣಿವೆಯುದ್ದಕ್ಕೂ ಹೊಗೆ ತುಂಬಿದ್ದು ನನಗೆ ಆಶ್ಚರ್ಯ ತರಿಸುತ್ತಿತ್ತು ಬಹುಶಃ ಬಿಸಿಲಿನ ಝಳಕ್ಕೆ ಹಾಗೆ ಕಾಣಿಸುತ್ತಿದ್ದಿರಬೇಕು. ರಸ್ತೆಯ ಮಧ್ಯೆ ವಾಹನ ನಿಲ್ಲಿಸಿ ದೇಖೋ ಸಾಬ್ ಎ ರುದ್ರಪ್ರಯಾಗ್ ದೇವ ಪ್ರಯಾಗ್ ಹೈ ಎಂದು ಹೇಳುತ್ತಿದ್ದ ಪಾಂಡೆ. ಒಂದು ಕಣಿವೆಯಿಂದ ಹಸಿರು ಮಿಶ್ರಿತ ನೀರು ಮತ್ತೊಂದು ಕಣಿವೆಯಿಂದ ಹರಿದು ಬರುತ್ತಿದ್ದ ಮಣ್ಣುಮಿಶ್ರಿತ ನೀರು ಸೇರುವ ಸಂಗಮಗಳು ಅಲ್ಲೊಂದು ದೇವಸ್ತಾನ. ೩-೪ ಪ್ರಯಾಗಗಳ ನಂತರ ಸಂಜೆ ಚಹಾ ಸೇವನೆಯ ನಂತರ ಗುಪ್ತಕಾಶಿಯಲ್ಲಿ ವಾಹನ ನಿಲ್ಲಿಸಿದ ಪಾಂಡೆ ಇಲ್ಲಿರುವ ಕಾಶಿವಿಶ್ವೇಶ್ವರ ದೇವಸ್ತಾನಕ್ಕೆ ಭೇಟಿಯಿತ್ತೆವು. ಇದರ ಮುಖ್ಯ ಅರ್ಚಕರು ದಾವಣಗೆರೆಯ ಕನ್ನಡಿಗರು.

ರಾಜ್ಯಾಡಾಳಿತ ಮುಗಿಸಿದ ಪಾಂಡವರು ಸ್ವರ್ಗಾರೋಹಣಕ್ಕಾಗಿ ಹಿಮಾಲಯದ ಕಡೆ ನಡೆದು ಬರುತ್ತಿರುವಾಗ ಶಿವ ತಪಸ್ಸು ಮಾಡುತ್ತಿದ್ದ ಈ ಸ್ಥಳಕ್ಕೆ ದರ್ಶನಕ್ಕೆ ಬರುತ್ತಾರೆ. ಅದರ ಸುಳಿವು ತಿಳಿದ ಸೋದರ ಹತ್ಯೆ ಮಾಡಿದ ಪಾಂಡವರಿಗೆ ದರ್ಶನ ಕೊಡಲು ಮನಸ್ಸಿಲ್ಲದೆ ಶಿವ ಇಲ್ಲಿಂದ ಮಾಯವಾಗುತ್ತಾನೆ. ಅವನು ತಪಸ್ಸು ಮಾಡಿದ ಈ ಸ್ಥಳವನ್ನು ಪಾಂಡವರು ಪೂಜಿಸುತ್ತಾರೆ ಅದೆ ಗುಪ್ತಕಾಶಿ. ದೇವಳದ ಮುಂಭಾಗದಲ್ಲಿ ಎರಡೂ ಕಡೆಯೂ ಸಣ್ಣದಾಗಿ ಭೀಳುವ ನೀರನ್ನು ಒಂದು ಕಲ್ಯಾಣಿಯಲ್ಲಿ ಸಂಗ್ರಹಗೊಂಡು ಮುಂದೆ ಹರಿದು ಹೋಗುತ್ತದೆ. ಇದನ್ನು ಯಮುನೆ ಮತ್ತು ಗಂಗಾ ತೀರ್ಥವೆಂದೂ ಕರೆಯುತ್ತಾರೆ ಎನ್ನುವುದು ಅಲ್ಲಿನವರು ತಿಳಿಸಿದ ಸ್ಥಳ ಪುರಾಣ. ಗುಪ್ತಕಾಶಿಯಲ್ಲಿ ಕರ್ನಾಟಕದಿಂದ ಬಂದಿದ್ದ ಪ್ರವಾಸಿಗಳು ನಮಗೆ ಎದುರಾದರು. ಕೆಲವರನ್ನು ಮಾತನಾಡಿಸುತ್ತಾ ಕೆಲವರಿಗೆ ಮುಗುಳ್ನಗೆ ವಿನಿಮಯಿಸುತ್ತಾ ಸಾಗಿದೆವು. ಸಾಬ್ ಜಲ್ದಿ ಆವೋ ಗೇಟ್ ಬಂದ್ ಹೋಜಾತಾ ಹೈ ಎನ್ನುವ ಪಾಂಡೆಯ ಕರೆಗೆ ಓಗೊಟ್ಟು ವಾಹನ ಹತ್ತಿದೆವು. ರಾತ್ರಿ ೮ ಗಂಟೆಯ ಸುಮಾರಿಗೆ ಸರಸ್ವತಿಪುರ ಎಂಬಲ್ಲಿಗೆ ನಮ್ಮನ್ನು ಕರೆದೊಯ್ದ ಪಾಂಡೆ ಸಾರ್ ಗೌರಿಕುಂಡದಲ್ಲಿ ಕೋಣೆಗಳು ಸಿಗುವುದಿಲ್ಲ ಆದ್ದರಿಂದ ಇಲ್ಲೆ ಉಳಿಯೋಣ ಇಲ್ಲಿಂದ ಗೌರಿಕುಂಡ ಕೇವಲ ೫ .ಮೀ ದೂರವಿದೆ ಎಂದು ನಮ್ಮನ್ನು ಪುಸಲಾಯಿಸಿದ ಅವನ ಹುನ್ನಾರ ನನಗೆ ತಿಳಿಯಿತು. ಸರಿ ಅವನೆಂದಂತೆ ಅಲ್ಲೆ ಇದ್ದ ಹೊಟೆಲ್ಲೊಂದರಲ್ಲಿ ಕೋಣೆ ತೆಗೆದುಕೊಂಡು ಅನ್ನಪೂರ್ಣ ಎಂಬ ಹೋಟೇಲ್ನಲ್ಲಿ ಊಟ ಮಾಡಿ ಮಲಗಿದೆವು.
ಮುಂದುವರೆಯುತ್ತದೆ..................

Wednesday, July 1, 2009

ನೇಪಾಳ ಮತ್ತು ಈಶಾನ್ಯಭಾರತ ಪ್ರವಾಸ ಹೋಗಿಬಂದ ಮೇಲೆ ಉತ್ತರಭಾರತ ಪ್ರವಾಸವೆಂದರೆ ಏಕೋ ಒಂದು ರೀತಿಯ ಭಯ ಆವರಿಸುತ್ತಿತ್ತು. ಬಹುಶಃ ನೇಪಾಳದಲ್ಲಿ ನಮಗೆ ಎದುರಾದ ತೊಂದರೆ ಮತ್ತು ಅಲ್ಲಿ ನಾವು ಅನುಭವಿಸಿದ ಮಾನಸಿಕ ಕಷ್ಟಗಳು ಮತ್ತು ಆರ್ಥಿಕ ನಷ್ಟ ನನ್ನನ್ನು ಯೋಚನೆಗೀಡುಮಾಡಿತ್ತು. ಆದರೂ ಭಾರತದಲ್ಲಿರುವಾಗಲೇ ಕಾಶ್ಮೀರವನ್ನೊಮ್ಮೆ ನೋಡಬೇಕೆಂಬ ಹಂಬಲ ನನ್ನಲ್ಲಿ ಬಲವಾಗಿತ್ತು. ಒಮ್ಮೆ ನನ್ನೊಡನೆ ಪ್ರವಾಸಕ್ಕೆ ಬಂದವರು ಮತ್ತೊಮ್ಮೆ ನನ್ನೊಡನೆ ಬರದಿರುವುದು ಒಂದು ಸಮಸ್ಯೆಯೆ. ಬಹುಶಃ ನನ್ನ ನಡವಳಿಕೆಗಳೋ ಅಥವ ಅತಿಯಾದ ಸಮಯ ಪಾಲನೆ ಮಾಡುವ ನನ್ನ ಗುಣವೋ ಇದಕ್ಕೆ ಕಾರಣವಿರಬಹುದು ಗೊತ್ತಿಲ್ಲ. ಅದೇನೆ ಇರಲಿ ಈ ಬಾರಿ ನನ್ನೊಡನೆ ಪ್ರವಾಸಕ್ಕೆ ಬರಲು ಒಪ್ಪಿದವರು ಸಹೋದ್ಯೋಗಿ ಮತ್ತು ಗಾಯತ್ರಿ ಸಹಕಾರ ಸಂಘದ ನಿರ್ದೇಶಕರುಗಳಾದ ಶ್ರೀಕಾಂತ ಮತ್ತು ನರಸಿಂಹ ಪ್ರಸಾದ.

೩ ತಿಂಗಳು ಮೊದಲೆ ಪ್ರವಾಸದ ಬಗ್ಗೆ ಆಗಾಗ ಮಾತನಾಡುತ್ತಿದ್ದ ನಾವು ಏಪ್ರಿಲ್ ೨೦೦೯ ರ ಮಕ್ಕಳ ರಜಾ ಸಮಯದಲ್ಲಿ ಪ್ರವಾಸಕ್ಕೆ ಮಹೂರ್ತ ನಿಗಧಿ ಪಡಿಸಿದೆವು. ಅಂತೆಯೆ ಅದಕ್ಕೊಂದು ಸ್ಪಷ್ಟ ರೂಪು ಕೊಡಲು ಕುಳಿತಾಗ ನಾನು ಕಾಶ್ಮೀರದ ವಿಷಯ ಪ್ರಸ್ತಾಪಿಸಿದೆ, ಅದೇಕೊ ಮೌನ ಮನೆಮಾಡಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ನಾನು ಶ್ರೀಕಾಂತನಿಗೆ ದುಂಬಾಲು ಬಿದ್ದೆ. ಸ್ವತಃ ಧೈರ್ಯಶಾಲಿಯಾದ ಶ್ರೀಕಾಂತ ಬಹುಶಃ ಸಂಸಾರ ಸಮೇತ ಹೋಗಬೇಕಿರುವುದರಿಂದ ಅವನಲ್ಲಿ ಹಿಂಜರಿಕೆ ಕಾಣಿಸುತ್ತಿತ್ತು. ನನ್ನ ಭಂಡ ಧೈರ್ಯವನ್ನೆ ಅವನಲ್ಲೂ ತುಂಬಿ ಅವನನು ಒಪ್ಪಿಸಿದೆ. ಶ್ರೀಕಾಂತನ ಸಹೋದರ ಮಂಜುನಾಥ್ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರು ಕಾಶ್ಮೀರ ಕಾರ್ಯಕ್ರಮ ರದ್ದುಗೊಳಿಸಿ ಎಂದು ನಮ್ಮನ್ನು ಪದೇ ಪದೇ ಎಚ್ಚರಿಸಿದರೂ (ಅವರಿಗೆ ಸಿಗುವ ಮಾಹಿತಿಯಂತೆ ಅದು ಸಹಜವೆ) ನಾನು ಹೋಗೇ ತೀರುವುದಾಗಿ ಹಠ ಹಿಡಿದಾಗ ಅನಿವಾರ್ಯವಾಗಿ ಎಲ್ಲರೂ ಒಪ್ಪಿದರೆನೋ? ಶ್ರೀಕಾಂತನ ಸಹೋದ್ಯೋಗಿ ಕಾಂತರಾಜು ಪ್ರತಿವರ್ಷ ಆಯೋಜಿಸುವ ಪ್ರವಾಸದಲ್ಲೆ ಹೋಗಲು ಕೂಡ ಅವಕಾಶವಿದ್ದರೂ ಪೂರ್ವ ನಿರ್ಧರಿತ ಪ್ರವಾಸಗಳು ನಮಗೆ ಸೂಕ್ತವಲ್ಲ ಎಂದು ಅವನಿಗೆ ತಿಳಿಸಿ ನಮ್ಮ ಪ್ರವಾಸ ಕಾರ್ಯಕ್ರಮಕ್ಕೊಂದು ರೂಪ ಕೊಡಲು ಕುಳಿತೆವು. ಏಪ್ರಿಲ್ ಮೊದಲನೆ ವಾರದಲ್ಲಿ ಉತ್ತರಭಾರತದ ವಾತಾವರಣ ಸಮಂಜಸವಾಗಿದ್ದರೂ ನಮ್ಮ ಗಾಯತ್ರಿ ಸಹಕಾರ ಸಂಘದ ಕೆಲವು ಕಾರ್ಯಕ್ರಮಗಳು ಮತ್ತು ಕೇದಾರನಾಥ ದೇವಸ್ಥಾನದ ಬಾಗಿಲು ತೆಗೆಯುವುದು ಏಪ್ರಿಲ್ ೨೯ರಂದು ಎಂಬ ವಿಷಯ ನಮ್ಮ ಕಾರ್ಯಕ್ರಮವನ್ನು ಏಪ್ರಿಲ್ ೩ನೇ ವಾರಕ್ಕೆ ಮುಂದೂಡುವಂತೆ ಮಾಡಿದ್ದು ನಮ್ಮ ಆತಂಕವನ್ನು ಹೆಚ್ಚಾಗಿಸಿತ್ತು. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿದ ಕೂಡಲೆ ಕೇಂದ್ರ ಚುನಾವಣಾ ಆಯೋಗ, ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿ ನಮ್ಮ ಭಯಕ್ಕೆ ತುಪ್ಪ ಸುರಿದಿತ್ತು. ಅದೃಷ್ಟವಶಾತ್ ಕಾಶ್ಮೀರ ಚುನಾವಣೆಗಳು ನಮ್ಮ ಕಾರ್ಯಕ್ರಮಕ್ಕೆ ತೊಂದರೆ ಉಂಟುಮಾಡದಂತಿದ್ದದ್ದು ಖುಷಿಕೊಡುವ ವಿಚಾರ. ನಮ್ಮ ಕಾರ್ಯಕ್ರಮವನ್ನು ಅಂತಿಮಗೊಳಿಸಿ ಅಂತರ್ಜಾಲದಲ್ಲೆ ರೈಲ್ವೆ ಟಿಕೆಟ್ಗಳನ್ನು ಜಮ್ಮುವರೆಗೆ ಮತ್ತು ದೆಹಲಿಯಿಂದ ಬೆಂಗಳೂರಿಗೆ ಕಾದಿರಿಸಿದೆವು. ನಾನಿರುವ ಬಡಾವಣೆಯಲ್ಲಿರುವ ಸುಮಾರು ೩೦ ಕಾಶ್ಮೀರಿ ಪಂಡಿತರ ಕುಟುಂಬಗಳಲ್ಲಿ ಒಂದಾದ ನನ್ನ ಮನೆಯ ಹಿಂದಿರುವ ಕುಲ್ದೀಪ್ ಪಂಡಿತ್ ಅವರನ್ನು ನಮಗೆ ಸಹಾಯ ಮಾಡುವಂತೆ ಕೇಳಿದಾಗ ಅತ್ಯಂತ ಆತ್ಮೀಯತೆಯಿಂದ ನಮಗೆ ಎಲ್ಲ ಸಹಾಯ ಮಾಡುವುದಾಗಿ ತಿಳಿಸಿದರು. ಅವರ ಮಗನ ಮದುವೆ ಮೇ ೬ ರಂದು ಜಮ್ಮುನಲ್ಲಿರುವುದಾಗಿ ಅದಕ್ಕೂ ಬರಬೇಕೆಂದು ದುಂಬಾಲುಬಿದ್ದರು ಆದರೆ ನಮ್ಮ ಕಾರ್ಯಕ್ರಮದಂತೆ ಅದು ಸಾಧ್ಯವಿಲ್ಲವೆಂದು ಅವರಿಗೆ ತಿಳಿಸಿ ನಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ ಅವರ ಸಹೋದರ ಜಮ್ಮುವಿನಲ್ಲಿ ವಾಸವಾಗಿರುವ ದಿಲೀಪ್ ಅವರನ್ನು ಸಂಪರ್ಕಿಸಿ ನಮಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆಯಿತ್ತರು. ಅವರ ನಿರ್ದೇಶನದಂತೆ ಕಾಶ್ಮೀರದ ನಮ್ಮ ಪ್ರವಾಸ ಕಾರ್ಯಕ್ರವನ್ನು ಅಂತಿಮಗೊಳಿಸಿದೆವು.ನಮ್ಮ ಕಾರ್ಯಕ್ರಮ ಇಂತಿತ್ತು.
೧೭-ಏಪ್ರಿಲ್ ಬೆಂಗಳೂರಿನಿಂದ ರೈಲಿನಲ್ಲಿ ದೆಹಲಿಗೆ ೧೯ರಂದು ಸೇರುವುದು, ಕೆಲವು ಸ್ಥಳಗಳ ವೀಕ್ಷಣೆಗೆ ಅವಕಾಶ.
೧೯ರಂದು ರಾತ್ರಿ ಜಮ್ಮುಗೆ ರೈಲಿನಲ್ಲಿ ಹೊರಟು ೨೦ರಂದು ಜಮ್ಮು ವೀಕ್ಷಣೆಯ ನಂತರ ಕಾಟ್ರಾಗೆ ಪಯಣ ಅಂದಿನ ರಾತ್ರಿ ವೈಷ್ಣೋದೇವಿಯ ದರ್ಶನ
ಮರುದಿನ ಬೆಳಿಗ್ಗೆ ಕಾಟ್ರದಿಂದ ಕಾಶ್ಮೀರದ ಶ್ರೀನಗರಕ್ಕೆ ಪಯಣ, ೩ ದಿನ ಕಾಶ್ಮೀರ ಪ್ರವಾಸ, ೩೫ ರಂದು ಹಿಂತಿರುಗಿ ಜಮ್ಮು, ಮತ್ತು ಅಂದೆ ಶ್ರೀಕಾಂತನ ಅಣ್ಣನ ಮನೆಯಿರುವ ಧರ್ಮಶಾಲ ಗೆ ಪಯಣ.
ಅಲ್ಲಿಂದ ೧ ದಿನದ ನಂತರ ಕುಲು ಮನಾಲಿ ರೋಹ್ತಾಂಗ್ ಪಾಸ್ ೨ ದಿನದ ಕಾರ್ಯಕ್ರಮ ೨ ನೇದಿನದ ರಾತ್ರಿ ಚಂಡೀಗಡಕ್ಕೆ ಪಯಣ ಅಲ್ಲಿಂದ ಹರಿದ್ವಾರಕ್ಕೆ ೧ ದಿನದ ನಂತರ ಕೇದಾರನಾಥ ಮತ್ತು ಬದರಿನಾಥ ದರ್ಶನ ೪ ದಿನಗಳ ಕಾರ್ಯಕ್ರಮ. ಹಿಂತಿರುಗಿ ಬಂದು ಒಂದು ದಿನದ ನಂತರ ದೆಹಲಿಗೆ ಪಯಣ. ಇದಕ್ಕೆ ಅನುಗುಣವಾಗಿ ರಾತ್ರಿ ಪ್ರಯಾಣ ಇರದಂತೆ, ಇದ್ದರೂ ರೈಲು ಸೌಲಭ್ಯವಿರುವ ಕಡೆ ರೈಲು ಪ್ರಯಾಣಕ್ಕೆ ಕಾದಿರಿಸಿದೆವು. ಈ ಮಧ್ಯೆ ಕಾಶ್ಮೀರದ ( ಪಾಕಿಸ್ತಾನದಲ್ಲಿ ತಾಲಿಬಾನ್ಗಳ ಆಕ್ರಮಣ ಮತ್ತು ಅವರಲ್ಲಿ ಕೆಲವರು ಕಾಶ್ಮೀರಕ್ಕೆ ನುಸುಳಿರುವ ಬಗೆ ಪತ್ರಿಕೆಗಳಲ್ಲಿ ಬಂದ) ಕೆಲವು ಸುದ್ದಿಗಳು ನಮ್ಮ ನಿರ್ಧಾರ ಸರಿಯಲ್ಲವೇನೊ ಎಂಬ ಆತಂಕ ತಂದದ್ದೂ ಇದೆ.

ಬಡಾವಣೆಯ ಕಾಶ್ಮೀರಿ ಸ್ನೇಹಿತರು ಅದ್ಯಾವುದು ಸಮಸ್ಯೆ ಪ್ರವಾಸಿಗರನ್ನು ಕಾಡುವುದಿಲ್ಲ ಎಂದು ನನ್ನಲ್ಲಿ ಧೈರ್ಯ ತುಂಬಿದರು. ಏಕೆಂದರೆ ಕಾಶ್ಮೀರದ ಜನರ ಬದುಕು ನಿಂತಿರುವುದೇ ಪ್ರವಾಸಿಗರನ್ನು ಅವಲಂಭಿಸಿ ಎನ್ನುವ ಸತ್ಯ ಅವರಿಗರಿವಾಗಿರುವುದು ಇದಕ್ಕೆ ಕಾರಣ ಅದರಲ್ಲೂ ಯಾವುದೇ ವಿದೇಶಿ ಪ್ರವಾಸಿಗರು ಬರುವುದಿಲ್ಲವಾದರಿಂದ, ಅಲ್ಲಿಗೆ ಭಾರತೀಯ ಪ್ರವಾಸಿಗರಷ್ಟೆ ಗಟ್ಟಿ ಎನ್ನುವ ಕಟು ಸತ್ಯದ ಅರಿವು ಅವರಿಗಿದೆ ಎಂಬ ಧೈರ್ಯ ತುಂಬುವ ಮಾತು ನನ್ನಲ್ಲೇನೊ ಉತ್ಸಾಹ ತುಂಬುತ್ತಿತ್ತು. ಈ ಮಧ್ಯೆ SPICE JET ನ ಅಗ್ಗದ ದರದ ದೆಹಲಿ-ಬೆಂಗಳೂರು ವಿಮಾನದ ಟಿಕೆಟ್ ಲಭ್ಯವಾಗಿದ್ದು ಸಂತಸದ ವಿಚಾರ.

ಈ ಮಧ್ಯೆ ಸಹಕಾರ ಸಂಘದ ಕಾರ್ಯಕ್ರಮಗಳು ಸುಸೂತ್ರವಾಗಿ ಏಪ್ರಿಲ್ ೧೧ ರಂದು ನಡೆಯಿತು. ಏಪ್ರಿಲ್ ೧೭ರಂದು ನಮ್ಮ ಪ್ರಯಾಣದ ದಿನ. ಇದ್ದ ೪-೫ ದಿನದಲ್ಲಿ ನಮ್ಮ ಬಟ್ಟೆ ಬರೆ ಸಾಮಾನುಗಳನ್ನು ಹೊಂದಿಸಿ ಬ್ಯಾಗುಗಳಿಗೆ ತುಂಬುವ ಕೆಲಸ ಅಗತ್ಯವಾಗಿ ಮಾಡಬೇಕಿದ್ದ ಕೆಲಸದ ಬಗ್ಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆವು. ಶ್ರೀಮತಿ ಗೀತಾಪ್ರಸಾದ್, ಶ್ರೀಮತಿ ಪದ್ಮಶ್ರೀಕಾಂತ್ ಮತ್ತು ನನ್ನ ಪತ್ನಿ ಶ್ರೀಮತಿ ಚಿತ್ರ ತಮ್ಮದೇ ಆದ ಶಾಪಿಂಗ್ ಮಾಡಿ ಸುಸ್ತಾಗಿದ್ದರೆ? ಇರಲಿಕ್ಕಿಲ್ಲ ಬಿಡಿ. ರೈಲಿನಲ್ಲಿ ಸಿಗುವ ಊಟ ಬೇಡವೆಂದು ಚಪಾತಿ ಚಟ್ನಿಪುಡಿ ಪಲ್ಯಗಳು ಟಿ ಬ್ಯಾಗ್ ಕಾಫಿ ಮಾಡಲು ಅದಕ್ಕೆ ಬೇಕಾಗುವ ಪರಿಕರಗಳು ಹಣ್ಣುಗಳು ಒಣಹಣ್ಣುಗಳು ಔಷಧಗಳು ಪ್ರತಿಯೊಂದು ಅಣಿಯಾಗುತ್ತಿದ್ದವು.ಆದರೆ ಅದು ದೊಡ್ಡ ಹೊರೆಯಾಗಿ ಹೋಗುತ್ತಿತ್ತು. ಆಗ ಬಂತು ಒಂದು ಸುದ್ದಿ. ಕಾಶ್ಮೀರದಲ್ಲಿ ಸಾಮಾನ್ಯವಾಗಿ ವಸತಿ ಅತ್ಯಂತ ಹೆಚ್ಚು ಖರ್ಚು ತರುವ ಸಮಸ್ಯೆ. ಆದರೆ ನಮ್ಮ ಕುಲ್ದೀಪ್ ಅವರ ಸಹೋದರ ಶ್ರೀನಗರದ ಜೇಷ್ಠಾದೇವಿ ಮಂದಿರದಲ್ಲಿ ನಮಗೆ ವಸತಿ ಕಾದಿರಿಸಿದ ಸುದ್ದಿ ಸಂತಸದಾಯಕ ವಿಚಾರ. ಜಮ್ಮುವಿನಿಂದಲೆ ವಾಹನದ ವ್ಯವಸ್ಥೆ ಮಾಡಿ ಅತ್ಯಂತ ನಂಬುಗೆಯ ಹಿಂದೂ ಚಾಲಕನನ್ನು ವ್ಯವಸ್ಥೆಗೊಳಿಸಿರುವುದಾಗಿ ಅವರು ತಿಳಿಸಿದರು. ಜೇಷ್ಠಾದೇವಿ ಮಂದಿರದಲ್ಲಿ ನಮಗೆ ಅಡುಗೆ ಮಾಡಲು ಎಲ್ಲ ಪರಿಕರಗಳು, ಪಾತ್ರೆ, ಗ್ಯಾಸ್ ಲಭ್ಯವಿದ್ದು, ಅಡುಗೆಗೆ ಬೇಕಾದ ಪದಾರ್ಥಗಳನ್ನು( ಮೆಣಸಿನಪುಡಿ, ಸಾಂಬಾರ್ಪುಡಿ ಮುಂತಾದವು) ತೆಗೆದುಕೊಂಡು ಹೋಗಲು ತಿಳಿಸಿದರು.

ಏಪ್ರಿಲ್ ೧೭ರಂದು ರಾತ್ರಿ ೧೦ ಗಂಟೆ ಸುಮಾರಿಗೆ ಹೊರಡಲಿದ್ದ ಸಂಪರ್ಕಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ನಮ್ಮನ್ನು ಬೀಳ್ಕೊಡಲು ಬಂದ ವಸಂತ ಮತ್ತು ನರಸಿಂಹ ಪ್ರಸಾದನ ಮಕ್ಕಳಾದ ವರುಣ್ ಮತ್ತು ವೈಶಾಖ್ ರಿಗೊಂದು ಧನ್ಯವಾದ ತಿಳಿಸಿ ವಸಂತ್ ಕೊಟ್ಟ ರುಚಿಯಾದ ಉಪ್ಪಿನಕಾಯಿಯೊಡನೆ ಚಪಾತಿಯನ್ನು ತಿಂದು ಮಲಗುವ ಮೂಲಕ ನಮ್ಮ ಪ್ರಯಾಣದ ಶುಭಾರಂಭವಾಯಿತು.

ನಮ್ಮ ತಂಡ

ನಾನು, ನನ್ನ ಪತ್ನಿ ಶ್ರೀಮತಿ ಚಿತ್ರ ನನ್ನ ಪುತ್ರ ಅಮಿತ್ ಭಾರದ್ವಾಜ್
ಶ್ರೀಕಾಂತ್ ಆತನ ಧರ್ಮಪತ್ನಿ ಪದ್ಮಶ್ರೀಕಾಂತ್ ಮಕ್ಕಳಾದ ಸುಷ್ಮಿತ ಮತ್ತು ಸುಪ್ರಿಯ
ನರಸಿಂಹ ಪ್ರಸಾದ್ ಮತ್ತು ಆತನ ಧರ್ಮ ಪತ್ನಿ ಗೀತಾಪ್ರಸಾದ್
೬+೩
ಕಾಡುಹರಟೆ, ತಲೆಕೆಟ್ಟ ತರಲೆ ಮಾತುಗಳು, ಹಾಸ್ಯ, ಕಾಲೆಳೆತ, ಮೌನ, ನಿಟ್ಟುಸಿರು ಎಲ್ಲವುಗಳೊಂದಿಗೆ ನಮ್ಮ ೨ ದಿನದ ಪ್ರಯಾಣ ದೆಹಲಿ ತಲುಪಿಸಿತ್ತು. ಪ್ರಯಾಣದ ಮಧ್ಯೆ ರೈಲಿನಲ್ಲಿ ಅಡುಗೆ ಮನೆಗೆ ಹೋದವನಿಗೆ ಅಲ್ಲಿಯ ಕೊಳಕು ಪ್ರಪಂಚದ ಅರಿವಾಯಿತು. ಹಾಲು ಬಿಸಿಮಾಡಿಸಿಕೊಳ್ಳಲೆಂದು ಹೋದವನಿಗೆ ನಿಂತಲ್ಲೆ ಉಗಿಯುತ್ತ ಅಲ್ಲೆ ತೊಳೆಯುತ್ತ ಉಳಿದಿದ್ದ ನಿನ್ನೆಯ ಅನ್ನವನ್ನು ಎಲ್ಲವನ್ನು ಅಲ್ಲೆ ಬಿಸಾಡುತ್ತಾ ಅದರ ಮೇಲೆಯೆ ನಡೆಯುತ್ತಾ ಇದ್ದ ಆ ಅಡುಗೆಯವನನ್ನು ನೋಡಿ ನಾವು ಇಲ್ಲಿ ಊಟ ಮಾಡದಿದ್ದುದೇ ಒಳ್ಳೆಯದೇನೊ ಅನ್ನಿಸಿದ್ದು ಸುಳ್ಳಲ್ಲ. ಆದರೆ ಎಲ್ಲವೂ ಅಷ್ಟೆ ಅಲ್ಲವೆ ನನಗೆ ಕಾಣಿಸಿದ್ದರಿಂದ ಹೀಗೆ ಅಷ್ಟೆ ಅಲ್ಲವೆ?

ದೆಹಲಿಯ ನಿಲ್ದಾಣದಲ್ಲಿ ಇಳಿದಾಗ ಸಮಯ ೮ ಗಂಟೆಯಿರಬೇಕು. ಆಟೋದವನೊಡನೆ ಚೌಕಾಸಿ ಮಾಡಿ ಅಲ್ಲಿಂದ ಪ್ರಸಾದಿಯ ಸಂಭಂದಿ ಕಾದಿರಿಸಿದ ಸಂಸತ್ತಿನ ಬಳಿಯ ತೀನ್ ಮೂರ್ತಿ ಮಾರ್ಗ್ ರಸ್ತೆಯಲ್ಲಿರುವ ಎಂಪಿ ಮನೆಯೊಂದರಲ್ಲಿ ವಾಸ್ತವ್ಯ ಒದಗಿಸಿಕೊಟ್ಟ ಪ್ರಸಾದಿಯ ಸಂಭಂದಿ ಅಮರನಾಥ ಪ್ರಸಾದ್ ಗೆ ಒಂದು ಧನ್ಯವಾದ. ಬೆಳಗಿನ ಕಾರ್ಯಕ್ರಮ ಮತ್ತು ಸ್ವಲ್ಪ ವಿಶ್ರಾಂತಿ ಬಳಿಕ ಹತ್ತಿರದ ಮೈಸೂರು ಕೆಫೆಯಲ್ಲಿ ಅದರ ಮಾಲೀಕ ಕನ್ನಡಿಗ ದೀಪಕ್ ಜೊತೆ ಹರಟುತ್ತಾ ತಿಂಡಿ ಮುಗಿಸಿ ಮೆಟ್ರೋ ಹತ್ತಿಳಿದು ಕರೋಲ್ ಭಾಗ್ ಗೆ ಬಂದು ಮುಂದಿನ ಪ್ರಯಾಣಕ್ಕೆ ಬೇಕಾದ ಕೆಲವು ಸಾಮಗ್ರಿಗಳನ್ನು ಸುಡು ಬಿಸಿಲಿನಲ್ಲಿ ಖರೀದಿಸಿ ಅಲ್ಲೆ ಇರುವ ಉಡುಪಿ ಭವನದಲ್ಲಿ ಊಟ ಮಾಡಿ ದಾರಿಯುದ್ದಕ್ಕೂ ಸಿಗುತ್ತಿದ್ದ ತಣ್ಣಗಿನ ಪಾನೀಯಗಳನ್ನು ಕುಡಿಯುತ್ತಾ ಖರೀದಿ ಮುಗಿಸಿದೆವು. ದೆಹಲಿಯಲ್ಲಿ ನನಗೆ ತುಂಬಾ ಇಷ್ಟವಾದದ್ದು ಕರೋಲ್ ಭಾಗ್ ಏಕೆಂದರೆ ಅಲ್ಲಿ ನಡೆಸಬಹುದಾದ ಚೌಕಾಸಿ Eye-wink ಮತ್ತು ಅಗ್ಗದ ದರಕ್ಕೆ ಸಿಗುವ ವಸ್ತುಗಳು ಅದರಲ್ಲು ಕಾರುಗಳ ಅಲಂಕಾರಿಕ ವಸ್ತುಗಳಂತೂ ಅರ್ಧ ಬೆಲೆಗೆ ಸಿಗುತ್ತದೆಯೆನ್ನುವ ನನ್ನ ಸ್ನೇಹಿತರ ಮಾತು ಸತ್ಯ. ಸುಮಾರು ೨೦ ವರ್ಷದ ಸರ್ದಾರ್ಜಿಯೊಬ್ಬನ ವ್ಯಾಪಾರವನ್ನು ಗಮನಿಸುತ್ತಾ ನಿಂತೆ. ದಾರಿಯಲ್ಲಿ ನಮ್ಮ ಮೆಜೆಸ್ಟಿಕ್ನಲ್ಲಿ ಬರುವಂತೆ ಬಂದ ಯುವಕನೊಬ್ಬ ಸಾರ್ ನನ್ನ ಹತ್ತಿರ ಕನ್ನಡಕವಿದೆ ಕಳ್ಳತನದಿಂದ ತಂದದ್ದು ಒಳ್ಳೆಯ ಕಂಪೆನಿಯದ್ದು ತುಂಬಾ ಅಗ್ಗದದರಕ್ಕೆ ಕೊಡ್ತಿನಿ ಸಾರ್ ತಮ್ಮನಿಗೆ ಓದಲಿಕ್ಕೆ ಪೀಸ್ ಕೊಡ್ಬೇಕು ಅದಕ್ಕೆ ಹೀಗೆ ಸಾರ್ ಎನ್ನುತ್ತಾನೆ. ಇದು ಬಹುಶಃ ನಮಗೆಲ್ಲರಿಗೂ ಒಂದಲ್ಲ ಒಂದು ಬಾರಿ ಅನುಭವಕ್ಕೆ ಬಂದಿರುತ್ತದೆ. ಅದೇ ರೀತಿ ಈ ಸರ್ದಾರ್ಜಿಯ ಮತ್ತವನ ಸ್ನೇಹಿತರ ಜೊತೆ ಆತ ಮಾತಿಗೆ ನಿಂತ ನಾನೂ ಗಮನಿಸುತ್ತಾ ನಿಂತೆ. ೯೫೦ ಬೆಲೆ ಹೇಳಿದ ಆ ಕನ್ನಡಕವನ್ನು ಆತ ೭೫೦ ರೂಗೆ ಖರೀದಿಸಿದ. ಸರಿ ನನಗೂ ಆ ಕನ್ನಡಕ ಹಿಡಿಸಿತು. ಸ್ವಲ್ಪ ಮುಂದೆ ಹೋದೆ ಅಲ್ಲಿ ಪಾದಚಾರಿ ರಸ್ತೆಯಲ್ಲಿ ಗೂಡಂಗಡಿ ಇಟ್ಟುಕೊಂಡಿದ್ದವನ ಬಳಿ ಇನೊಬ್ಬ ಅದೆ ತೆರನಾದ ಕನ್ನಡಕ ವ್ಯಾಪಾರ ಮಾಡುತ್ತಿದ್ದ. ನಾನು ಅಲ್ಲಿಗೆ ಸಮೀಪಿಸುವಷ್ಟರಲ್ಲಿ ಆಗಲೆ ಚೌಕಾಸಿ ಪ್ರಾರಂಭವಾಗಿತ್ತು. ಆ ಗಿರಾಕಿ ಅದನ್ನು ೯೦ ರೂಗೆ ಕೇಳಿದ ಅವನು ಕೊಡುವುದಿಲ್ಲವೆಂದು ಕಳಿಸಿಬಿಟ್ಟ. ಆ ವ್ಯಕ್ತಿ ಸ್ವಲ್ಪ ಮುಂದೆ ಚಲಿಸಿದ ತಕ್ಷಣ ನಾನು ಅವನನ್ನು ಮಾತನಾಡಿಸಿದೆ ಅಷ್ಟು ಕಡಿಮೆಗೆ ಸಿಗುತ್ತದೆಯೆ ಎಂದು, ಅಶ್ಟೆ ಅದರ ಬೆಲೆಯೆಂದು ತಿಳಿಸಿ ಆ ಆಸಾಮಿ ಹೋಗಿಬಿಟ್ಟ. ೨ ರಸ್ತೆ ದಾಟುವಷ್ಟರಲ್ಲಿ ಆ ತೆರನಾದ ಯುವಕ ನನ್ನ ಬಳಿ ಬಂದ ಮತ್ತದೆ ರಾಗ. ನನ್ನ ದರ ತಿಳಿಸುತ್ತೇನೆಂದೆ ಸರಿ ಎಂದ ೫೦ ರೂ ಎಂದೆ ಆಶ್ಚರ್ಯ ವ್ಯಕ್ತ ಪಡಿಸುತಾ ನನ್ನ ಕಡೆ ನೋಡಿದವನು ಸ್ವಲ್ಪ ದೂರ ಹೊರಟು ಹೋದ ಮತ್ತೆ ಹಿಂತಿರುಗಿ ಬಂದು ನನ್ನನ್ನು ಬಯ್ದ. ಸರಿ ಬಿಡಪ್ಪ ಎಂದವನಿಗೆ ಕನ್ನಡಕಕೊಟ್ಟು ೫೦ ರೂ ತೆಗೆದು ಕೊಂಡು ಹೋದ. ಫೋಟೋಗಾಗಿಯಷ್ಟೆ ಈ ಕನ್ನಡಕಗಳು Eye-wink. ಈ ಮಧ್ಯೆ ಜಮ್ಮುವಿನಿಂದ ದಿಲೀಪ್ ೨ ಬಾರಿ ದೂರವಾಣಿ ಕರೆ ಮಾಡಿ ನಮ್ಮ ಕಾರ್ಯಕ್ರಮ ಮತ್ತು ನಾವು ತಲುಪುವ ಸಮಯ ಮತ್ತೆ ನಮ್ಮ ರೈಲಿನ ಬಗ್ಗೆ ವಿಚಾರಿಸಿದರು. ಅವರ ಈ ಸಹಾಯ ಮನೋಭಾವ ನನ್ನನ್ನು ತುಂಬಾ ಕಾಡಿತು. ನಾವ್ಯಾರೊ? ಅವರ್ಯಾರೊ? ಆದರೂ ಈ ಮಟ್ಟಿನ ಸಹಾಯ!!! ಮತ್ತೆ ಕೋಣೆಗೆ ಹಿಂತಿರುಗಿ ಅಲ್ಲಿಂದ ಆಟೋವೊಂದನ್ನು ಹಿಡಿದು ರೈಲು ನಿಲ್ದಾಣ ತಲುಪಿ ತುಂಬಿ ತುಳುಕುತ್ತಿದ್ದ ಜಮ್ಮು ರೈಲಿನಲ್ಲಿ ನಮ್ಮ ನಮ್ಮ ಆಸನಗಳನ್ನು ಹುಡುಕಿ ಮಲಗಿದೆವು. ಬೆಳಗಿನ ಸಮಯ ೫.೩೦ಕ್ಕೆ ದೂರವಾಣಿ ರಿಂಗಣಿಸತೊಡಗಿತು. ಆ ಕಡೆಯಿಂದ ದಿಲೀಪ್ ಕರೆ ಮಾಡುತ್ತಿದ್ದರು. ಈಗಾಗಲೆ ಜಮ್ಮು ರೈಲ್ವೆ ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿರುವುದಾಗಿ ತಿಳಿಸಿದ ದಿಲೀಪ್ ತಾನು ತೊಟ್ಟಿರುವ ಬಟ್ಟೆಯ ಬಗ್ಗೆ ಮತ್ತು ನಾವು ಅವರನ್ನು ಗುರುತಿಸುವ ಬಗ್ಗೆ ತಿಳಿಸಿದರು. ಜಮ್ಮುಕಾಶ್ಮೀರ ರಾಜ್ಯದ ವ್ಯಾಪ್ತಿಯಲ್ಲಿ ಯಾವುದೇ ಪ್ರೀಪೇಡ್ ದೂರವಾಣಿಗಳು ಕೆಲಸ ಮಾಡುವುದಿಲ್ಲ.

ನಿಗದಿತ ಸಮಯಕ್ಕಿಂತ ೧ ಗಂಟೆ ತದವಾಗಿ ರೈಲು ಜಮ್ಮು ತಲುಪಿತು. ಕುಲ್ದೀಪ್ ಪಡಿಯಚ್ಚಿನಂತಿದ್ದ ದಿಲೀಪ್ ಗುರುತಿಸಲು ಹೆಚ್ಚು ಕಷ್ಟವಾಗಲಿಲ್ಲ. ಪರಿಚಯದ ನಂತರ ನಮ್ಮ ಕಾರ್ಯಕ್ರಮ ಮತ್ತು ನಾವು ಅಗತ್ಯವಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿ ನಾವು ತೆಗೆದುಕೊಳ್ಳಬಹುದಾದ ಎಚ್ಚರದ ಬಗ್ಗೆ ನಮಗೆ ಮಾಹಿತಿಯಿತ್ತರು. ಅದರಂತೆ ಇಂದು ನಾವು ನಮ್ಮ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ವೈಷ್ಣೋದೇವಿಗೆ ಹೋಗುವ ಬದಲು ನೇರವಾಗಿ ಕಾಶ್ಮೀರಕ್ಕೆ ಹೋಗಬೇಕಾಗಿ ಬಂತು ಕಾರಣ ವೈಷ್ಣೋದೇವಿಯಲ್ಲಿದ್ದ ಜನಜಂಗುಳಿ. ರಲ್ವೇ ನಿಲ್ದಾಣದ ಸಮೀಪಕ್ಕೆ ಹೊರಗಿನ ವಾಹನಗಳನ್ನು ಬಿಡುವುದಿಲ್ಲವಾದ್ದರಿಂದ ಸ್ವಲ್ಪದೂರದಲ್ಲಿ ನಮಗಾಗಿ ಕಾದಿರಿಸಿದ್ದ ವಾಹನವೇರಲು ದಿಲೀಪ್ ಅವರ ಮಾರುತಿ ಓಮ್ನಿಯಲ್ಲಿ ನಮ್ಮ ೧೩ ದೊಡ್ಡ ದೊಡ್ಡ ಬ್ಯಾಗ್ ಗಳನ್ನು ತುಂಬಿಕೊಂಡು ನಾವು ೯ ಮತ್ತು ದಿಲೀಪ್ ನಮ್ಮ ವಾಹನದ ಬಳಿ ಬಂದೆವು. ನಮ್ಮ ವಾಹನಕ್ಕೆ ಇನ್ನೇನು ನಮ್ಮ ಹೊರೆಗಳನ್ನು ತುಂಬಬೇಕೆನ್ನುವಷ್ಟರಲ್ಲಿ ಪ್ರತ್ಯಕ್ಷನಾದ ಅನಾಮಿಕನೊಬ್ಬ ನಮ್ಮ ಚಾಲಕ ಮತ್ತು ದಿಲೀಪ್ ಜೊತೆ ಮಾತುಕತೆಯಾಡಲು ಪ್ರಾರಂಭಿಸಿ ಜಗಳವಾಡಲು ಶುರುವಿಟ್ಟುಕೊಂಡ. ನಮಗೆ ಏನೆಂದು ಅರ್ಥವಾಗಲಿಲ್ಲ. ಸ್ಥಳೀಯ ವಾಹನಗಳನ್ನು ಬಿಟ್ಟು ಬೇರೆ ವಾಹನಗಳನ್ನು ನಾವು ತೆಗೆದುಕೊಳ್ಳುವಂತಿಲ್ಲ ಅದು ಅಲ್ಲಿನ ಅಲಿಖಿತ ನಿಯಮ. ದಿಲೀಪ್ ಆ ವ್ಯಕ್ತಿಗೆ ಹೇಳಿ ಇಂದು ಇವರು ಪಯಣಿಸುವುದಿಲ್ಲವೆಂದೂ ನಾಳೆ ಕಳುಹಿಸುತ್ತೇನೆಂದು ತಿಳಿಸಿ ಮತ್ತೊಮ್ಮೆ ನಮ್ಮೆಲ್ಲರನ್ನೂ ನಮ್ಮ ಹೊರೆಗಳನ್ನೂ ಅವರ ಓಮ್ನಿಗೆ ತುಂಬಿ ಗಾಡಿ ಓಡಿಸಿದರು. ಮುಂದಿನ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ಕಾಯುತ್ತಿರುವಂತೆ ನಮ್ಮ ವಾಹನದ ಚಾಲಕನಿಗೆ ತಿಳಿಸಿದರು ಇನ್ನೇನು ಆ ಸ್ಥಳ ಬರುವಷ್ಟರಲ್ಲಿ ನಾವಿದ್ದ ದಿಲೀಪ್ ವಾಹನ ಬಹುಶಃ ನಮ್ಮಲ್ಲೆರ ಭಾರ ಹೊರಲಾರದೆ ಮುಂದಿನ ಎಡಚಕ್ರ ಠುಸ್ಸೆಂದು ಶಬ್ದ ಮಾಡುತ್ತ ಅಲುಗಾಡುತ್ತ ನಿಂತು ಹೋಯಿತು. ಇಳಿದು ಚಕ್ರ ಬದಲಾಯಿಸಿದೆವು. ಅಲ್ಲೆ ಇದ್ದ ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದ ನಮ್ಮ ವಾಹನವನ್ನೇರಿ ದಿಲೀಪ್ಗೊಂದು ಧನ್ಯವಾದ ತಿಳಿಸಿ ಅಲ್ಲಿಂದ ಹೊರಟೆವು.

ನಮ್ಮ ಚಾಲಕ ಕೆಂಪು ಮಿಶ್ರಿತ ಬಿಳಿ ಬಣ್ಣದ, ನಗುಮೊಗದ ರಾಕೇಶ್ ಮಿತಭಾಷಿ. ಎಚ್ಚರಿಕೆಯಿಂದ ಕಣಿವೆರಸ್ತೆಯಲ್ಲಿ ಅಗತ್ಯವಿದ್ದಷ್ಟೆ ಮಾತನಾಡುತ್ತ ನಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಾ ವಾಹನ ಚಲಾಯಿಸುತ್ತಿದ್ದ ರಾಕೇಶ್ ಸಧ್ಯಕ್ಕೆ ನಮ್ಮ ಆಧಾರ. ಆತನ ಹಿಂದಿ ನಮಗೆ ಅರ್ಥವಾಗಲು ಸ್ವಲ್ಪ ಸಮಯ ಹಿಡಿಯಿತು. ೧೦.೩೦ ಕ್ಕೆ ಹಸಿವಿನಿಂದ ಬಳಲಿ ಹೋದಮೇಲೆ ತಿಂಡಿಗೆ ನಿಲ್ಲಿಸಿದ ಅವನ ಮೇಲೆ ನನಗಂತೂ ಕೋಪ ತಡೆಯಲಾರದಷ್ಟು ಬರುತ್ತಿತ್ತು. ಕೊನೆಗೊಮ್ಮೆ ಹಿಂದೂ ವೈಷ್ಣೋ ಪಂಜಾಬಿ ಡಾಭಾವೊಂದರಲ್ಲಿ ವಾಹನ ನಿಲ್ಲಿಸಿದ ರಾಕೇಶ್. ಆ ಡಾಭಾ ಮಾಲೀಕ ತಿಂಡಿ ಕೊಡಲು ಮತ್ತೊಂದು ಗಂಟೆ ತೆಗೆದುಕೊಂಡ. ಇಶ್ಟರಲ್ಲಾಗಲೆ ಒಂದು ಸುತ್ತು ಮಳೆ ಬಂದು ನಿಂತಿತು. ಇಲ್ಲಿಂದ ನಮ್ಮ ಆಹಾರದ ಬವಣೆ ಪ್ರಾರಂಭವಾಯಿತು ಉಪ್ಪಿಲ್ಲದೆ ಮಾಡಿದ ರೋಟಿ, ಪಲ್ಯವೆಂದು ಕೊಡುವ ಆಲೂ ನಮ್ಮ ನಿತ್ಯ ಆಹಾರವಾಗಿ ಒಗ್ಗಿಸಿ ಕೊಳ್ಳಬೇಕಿತ್ತು. ಜಮ್ಮುಕಾಶ್ಮೀರದಲ್ಲಿ ಅನ್ನ ಸಿಗುತ್ತದೆ ಆದರೆ ಅದರ ಜೊತೆಗೆ ಬರೀ ಸಾಸಿವೆ ಎಣ್ಣೆಯಲ್ಲಿ ಮಾಡಿದ ಆಲೂಗಡ್ಡೆ ಪಲ್ಯಗಳೆ ನಮಗೆ ಗತಿ.
ಬೇಸಿಗೆಯಾದ್ದರಿಂದ ಕಣಿವೆಯಲ್ಲಿನ ಹಸಿರು ಮಾಯವಾಗಿತ್ತು ಎಲ್ಲಿಯೂ ದಟ್ಟಕಾಡು ಕಂಡು ಬರಲೇ ಇಲ್ಲ. ತಾವಿ ನದಿ ನಮ್ಮ ದಾರಿಯುದ್ದಕ್ಕೂ ನಾವು ಹೋಗುತ್ತಿರುವ ವಿರುದ್ದ ದಿಕ್ಕಿನಲ್ಲಿ ರಭಸವಾಗಿ ಹರಿದು ಬರುತ್ತ ಮೋಹಕವಾಗಿ ಕಾಣಿಸುತ್ತಿತ್ತು. ಅಲ್ಲಲ್ಲಿ ಕಣಿವೆಯ ರಾಷ್ಟ್ರೀಯ ಹೆದ್ದಾರಿ ಭೂಕುಸಿತವಾಗಿದ್ದ ಕುರುಹುಗಳು ಭಯ ಹುಟ್ಟಿಸುತ್ತಿತ್ತು. ದಾರಿಯುದ್ದಕ್ಕೂ ೫-೧೦ ಕಿ.ಮೀ ಗಳಿಗೊಮ್ಮೆ ಭಾರತೀಯ ಅರೆಮಿಲಿಟರಿ ಪಡೆಯ ಯೋಧರು ಪಹರೆ ಕಾಯುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ೨ ಗಂಟೆ ಸುಮಾರಿಗೆ ಮತ್ತೊಂದು ವೈಷ್ಣೋ ಪಂಜಾಬಿ ಡಾಭಾದಲ್ಲಿ ಊಟಕ್ಕೆ ನಿಂತಾಗ ಮತ್ತದೆ ಬೇಸರ. ೪ ಗಂಟೆಯ ಸುಮಾರಿಗೆ ಕಣಿವೆಗಳು ಮರೆಯಾಗಿ ಬಯಲು ಪ್ರದೇಶ ತೆರೆದುಕೊಳ್ಳುವ ಜಾಗದಲ್ಲಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ೨೭೦೦ ಮೀಟರ್ ಉದ್ದವಿರುವ ಸುರಂಗದ ಮುಖಾಂತರ ಹಾದು ಅಲ್ಲಲ್ಲಿ ಕಾಶ್ಮೀರ ಫೋಲೀಸರಿಗೆ ಲಂಚ ತಿನ್ನಿಸುತ್ತಾ ಶ್ರೀನಗರ ಸಮೀಪಿಸಿದವರಿಗೆ ನಿಜಕ್ಕೂ ಅಲ್ಲಿನ ಸೌಂದರ್ಯ ಅಚ್ಚರಿ ತಂದಿತು. ರಸ್ತೆಯುದ್ದಕ್ಕೂ ಚಿಗುರೆಲೆಗಳಿಂದ ಕೂಡಿದ ಸಾಲಾಗಿ ನಿಂತ ಹಸಿರು ಮರಗಳು ಹಿಂಭಾಗದಲ್ಲಿ ಸೂರ್ಯ ಮರೆಯಾಗುತ್ತಿರುವ ಕೇಸರಿ ಬಣ್ಣ ಇಡೀ ವಾತಾವರಣಕ್ಕೆ ಮೆರಗು ತಂದು ನಾವು ಆನಂದಿಸುತ್ತಿದ್ದರೆ ನಮ್ಮ ಚಾಲಕನಿಗೆ ಕತ್ತಲಾಗುವುದರೊಳಗೆ ಶ್ರೀನಗರದ ಗೂಡು ಸೇರಿಕೊಳ್ಳುವ ತವಕ. ಏಕೆಂದರೆ ಉಗ್ರಗಾಮಿಗಳ ಹಾವಳಿಯ ಭಯ. ಕೊನೆಗೊಮ್ಮೆ ಶ್ರೀನಗರ ಸಿಕ್ಕಾಗ ನಮ್ಮೆಲ್ಲರಲ್ಲೂ ನಿಟ್ಟುಸಿರು. ಇಲ್ಲಂತೂ ಅರ್ಧ ಮೈಲಿ ದೂರಕ್ಕಿಬ್ಬರು ಯೋಧರು ಪಹರೆ ಕಾಯುತ್ತಿರುವುದು ಅಲ್ಲಿನ ಪರಿಸ್ಥಿತಿಯ ಅರಿವು ನಮ್ಮಲ್ಲಿ ಮೂಡಿಸಿತು. ಬಂದು ತಪ್ಪು ಮಾಡಿದೇವೆನೋ ಎಂಬ ಭಾವನೆ ನನ್ನ ಮನದಲ್ಲೂ ಸುಳಿದದ್ದಿದೆ. ದಾರಿಯಲ್ಲಿ ಜೇಷ್ಠಾದೇವಿ ಮಂದಿರದ ದಾರಿ ವಿಚಾರಿಸಲು ರಾಕೇಶ್ ಅತ್ಯಂತ ಹೆಚ್ಚು ಕಾಳಜಿಯಿಂದ ಅತ್ಯಂತ ಸುರಕ್ಷಿತ ಜಾಗಗಳಲ್ಲೆ ತನ್ನ ವಾಹನ ನಿಲ್ಲಿಸುತ್ತಿದ್ದದ್ದು ನನ್ನ ಗಮನಕ್ಕೆ ಬಾರದೇ ಹೋಗಲಿಲ್ಲ. ಅರ್ಧ ಗಂಟೆಯ ಹುಡುಕಾಟದ ನಂತರ ದಾಲ್ ಸರೋವರವನ್ನು ಬಳಸಿ ನಿಷಾದ್ ಉದ್ಯಾವನದ ದಾರಿಯಲ್ಲಿ ಸಾಗಿ ರಾಜಭವನದ ಸಮೀಪ ಬಲ ತಿರುವು ತೆಗೆದುಕೊಳ್ಳುವಂತೆ ಯೋಧನೊಬ್ಬ ತಿಳಿಸಿದ್ದು ಸರಿಯಿತ್ತು. ಜೇಷ್ಠಾದೇವಿ ಮಂದಿರಕ್ಕೆ ಬಂದಿಳಿದಾಗ ಸೂರ್ಯ ತನ್ನ ಕೆಲಸ ಮುಗಿಸಿ ಮರೆಯಾಗುತ್ತಿದ್ದ.

ವಾವ್!! ಅದೆಷ್ಟು ಪ್ರಶಾಂತ ಮತ್ತು ಸುಂದರ ಸ್ಥಳವೆಂದರೆ ಪದಗಳಿಗೆ ನಿಲುಕದ್ದು. ಬರೀ ಹಸಿರು ಗಿಡಮರಗಳಿಂದ ಆವೃತವಾಗಿದ್ದ ಬೆಟ್ಟದ ಹಿನ್ನೆಲೆಯಲ್ಲಿರುವ ಪ್ರದೇಶ. ಎದುರಿಗೆ ಕಾಣುವ ದಾಲ್ ಸರೋವರ. ಜೇಷ್ಠಾದೇವಿ ಮಂದಿರದಲ್ಲೆ ನೀವು ೧ ದಿನ ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾ ಕಳೆಯಬಹುದೆಂದು ಕುಲ್ದೀಪ್ ಹೇಳಿದ್ದು ಸುಳ್ಳಲ್ಲ. ಸುತ್ತಲೂ ಬೆಟ್ಟಗುಡ್ಡ ಎದುರಿಗೆ ಮಾತ್ರ ದಾಲ್ ಸರೋವರ, ಎಲ್ಲೋ ಕಾಡಿನೊಳಗೆ ಇದ್ದ ಅನುಭವ. ಬರೀ ಹಕ್ಕಿ ಪಕ್ಷಿಗಳ ಕಲರವ ಬಿಟ್ಟರೆ ಬೇರೇನೂ ಕೇಳಿಸದ ಆದರೆ ಅಷ್ಟೆ ಸುರಕ್ಷಿತವಾದ ಜಾಗದಲ್ಲಿದ್ದದ್ದು ಊಹ್! ನೆಮ್ಮದಿಯ ನಿಟ್ಟುಸಿರು ಬಿಡುವಷ್ಟು ನಿರಾಳತೆ ತಂದಿದ್ದು ಸುಳ್ಳಲ್ಲ. ೩ ಕೊಠಡಿಗಳನ್ನು ನಮಗೆ ಕೊಟ್ಟು ಜೇಷ್ಠಾದೇವಿ ಧರ್ಮಸ್ಥ ಮಂಡಳಿಯ ಮೇಲ್ವಿಚಾರಕರೂ, ವ್ಯವಸ್ಥಾಪಕರೂ ಚೌಧರಿಯವರು ಅಡುಗೆಗೆ ಬೇಕಾಗುವ ಎಲ್ಲ ಪದಾರ್ಥಗಳು ಲಭ್ಯವಿದೆ ಎಂದು ತಿಳಿಸಿದರು. ಅನ್ನ ಮತ್ತು ತಿಳಿಸಾರು ಮಾಡಿ ಊಟಮಾಡಿ ಮಲಗಿದೆವು.

ಬೆಳಿಗ್ಗೆ ಕೃಷ್ಣ ವೈಷ್ಣೋ ಪಂಜಾಬಿ ಡಾಬಾದಲ್ಲಿ ತಿಂಡಿ ಮುಗಿಸಿ ನಮ್ಮ ಪ್ರಯಾಣ ಗುಲ್ಮಾರ್ಗ್ ಕಡೆ. ದಾರಿಯುದ್ದಕ್ಕೂ ಹೂಬಿಟ್ಟಿರುವ ಸೇಬಿನ ಮರಗಳು, ಬಂದೂಕು ಹಿಡಿದಿರುವ ಭಾರತೀಯ ಯೋಧರು ಮತ್ತ್ತು ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಗುಂಪುಗುಂಪಾಗಿ ಮಾತನಾಡುತ್ತಾ ನಿಂತಿರುವ ಜನಗಳು ನನಗಂತೂ ಇಲ್ಲಿನ ಜನರು ಅತ್ಯಂತ ಸೋಮಾರಿಗಳಿರಬಹುದೆಂದು ಅನಿಸಿತು. ೮೫ ಕಿ.ಮೀ ದೂರದ ಗುಲ್ಮಾರ್ಗ್ ತಲುಪಲು ನಮ್ಮ ಚಾಲಕ ತೆಗೆದುಕೊಂಡ ಸಮಯ ಬರೊಬ್ಬರಿ ೩ ಗಂಟೆಗಳು. ದೂರದಿಂದಲೆ ಮಂಜು ಆವರಿಸಿರುವ ಬೆಟ್ಟಗಳ ದೃಶ್ಯ ಮನಸೆಳೆಯುತ್ತದೆ. ಪ್ರಾರಂಭದಲ್ಲಿ ಅಲ್ಲಲ್ಲಿ ಬೆಳ್ಳಗಿನ ಹತ್ತಿ ಬಿದ್ದಂತೆ ಗೋಚರಿಸುವ ಬೆಟ್ಟಗಳು ಮುಂದೆ ಬಂದಂತೆ ಇಡೀ ಪರ್ವತಗಳೆ ಮಂಜಿನ ಆವೃತವಾಗಿರುವುದು ಗಮನಕ್ಕೆ ಬರುತ್ತದೆ. ದಾರಿಯುದ್ದಕ್ಕೂ ಇದ್ದ ಯೋಧರೊಡನೆ ಫೋಟೊ ತೆಗೆಸಿಕೊಳ್ಳಬೇಕೆಂಬ ಹಂಬಲದೊಡನೆ ಕಣಿವೆಯ ಒಂದು ಕಡೆ ನಮ್ಮ ವಾಹನ ನಿಂತ ಕ್ಷಣಾರ್ಧದಲ್ಲಿ ಅಲ್ಲಿದ್ದ ಸೈನಿಕರ ಗುಂಪು ತಮ್ಮ ಕೈಲಿದ್ದ ಅತ್ಯಾಧುನಿಕ ಬಂದೂಕಗಳನ್ನು ತೆಗೆದು ಸಜ್ಜಾಗಿದ್ದು ನಮ್ಮೆಲ್ಲರನ್ನು ದಿಗ್ಮೂಡರನ್ನಾಗಿಸಿತು. ಅವರೊಡನೆ ಮಾತನಾಡಿ ಅವರ ಅನುಮತಿಯನ್ನು ಕೋರಿ ಅವರನ್ನು ಒಪ್ಪಿಸಿ ಒಂದೆರಡು ಫೋಟೋ ಕ್ಲಿಕಿಸಿದೆವು. ದಾರಿಯುದ್ದಕ್ಕೂ ಇಂತಹ ಚಿತ್ರಗಳನ್ನು ತೆಗೆಯಲೆಂದೆ ನಿರ್ಮಿಸದ ಸ್ಥಳಗಳಲ್ಲಿ ನಿಂತು ಚಿತ್ರ ತೆಗೆಯುತ್ತಾ ಶ್ರೀಮತಿ ಗೀತಾ ಅವರಂತೂ ಶೀನಗರಕ್ಕೆ ಬರುವ ದಾರಿಯಲ್ಲಿ ಕಾಣ ಸಿಗುವ ಮಂಜಿನ ಬೆಟ್ಟಕ್ಕೆ ಹೋಗಲು ತಯಾರಿದ್ದರೂ ಅನಿವಾರ್ಯವಾಗಿ ಇಲ್ಲಿಯವರೆಗೆ ಕಾಯಬೇಕಾಗಿ ಬಂತು. ಗುಲ್ಮಾರ್ಗ್ ಬಂದಿಳಿದ ತಕ್ಷಣವೆ ಅಲ್ಲಿನ ಕುದುರೆ ಮಾಲೀಕರಿಂದ ಕಿರಿಕಿರಿ ಪ್ರಾರಂಭವಾಗುತ್ತದೆ. ನಮ್ಮನ್ನು ವಾಹನದಿಂದ ಇಳಿಯಲು ಬಿಡುವುದೇ ಇಲ್ಲ. ಬೆಟ್ಟದ ದಾರಿಯಲ್ಲಿ ನನಗೆ ತಲೆತಿರುಗುವಿಕೆ ಬಂದು ವಾಂತಿಯ ಅನುಭವವಾಗುವುದರಿಂದ ಅವೋಮಿನ್ ಮಾತ್ರೆ ತಿಂದು ತೂಕಡಿಸುತ್ತಾ ಅಲ್ಲಲ್ಲಿ ಏಳುತ್ತಾ ಇದ್ದವನನ್ನು ೧ ಬಾಡಿಗೆ ಕುದುರೆ ೮೦೦ ಹೇಳ್ತಾ ಇದನೆ ಏನ್ಮಾಡೋಣ ಎಂದು ಕರೆದ ಶ್ರೀಕಾಂತನ ಧ್ವನಿ ಎಚ್ಚರಿಸಿರಬೇಕು. ನಡೆದು ಹೋಗೋಣ ಎಂದವನಿಗೆ ಶ್ರೀಕಾಂತ ಸಾಧ್ಯವಿಲ್ಲ ನನ್ನ ಮಕ್ಕಳು ನಡೆಯುವುದಿಲ್ಲ ಎಂದು ಘೋಷಿಸಿಬಿಟ್ಟ. ಅನಿವಾರ್ಯವಾಗಿ ಒಂದು ಕುದುರೆಗೆ ೭೦೦ ರೂಗಳಂತೆ( ಸರಿಯಾಗಿ ಮೋಸ ಹೋಗಿದ್ದು ನಂತರ ಅರಿವಿಗೆ ಬಂತು) ಮಾತನಾಡಿದೆವು. ಅದೂ ಅವರು ಹೇಳುವ ೭ ಕಿ.ಮೀಗಳೆಂದು ತಿಳಿದು.( ಆದರೆ ಅದು ಕೇವಲ ೨ ಕಿ.ಮೀ ಗಳಿಗಿಂತಲೂ ಕಡಿಮೆ ದೂರಕ್ಕೆ) ೭ ಸ್ಥಳಗಳನ್ನು ವೀಕ್ಷಿಸಬಹುದು ಎನ್ನುವ ಅವರ ಮಾತು ಹಸೀ ಸುಳ್ಳು. ಸುತ್ತಿ ಬಳಸಿ ೧.೫ ಕಿ.ಮೀ ದೂರದಲ್ಲಿರುವ ನೇರವಾಗಿ ನಡೆದು ಬಂದರೆ ಕೇವಲ ೧.ಕೀಮೀ ಇರುವ ಖಿಲಾನ್ ಮಾರ್ಗ್ ಗೆ ಬಂದೆವು. ಇದೊಂದೆ ಗುಲ್ಮಾರ್ಗದಲ್ಲಿರುವ ಸುಂದರ ಸ್ಥಳ. ಮತ್ತು ಇದರ ಜೊತೆಗೆ ರೋಪ್ ವೇ ಮಾತ್ರ. ಕುದುರೆಗಳ ಹೆಜ್ಜೆಯಿಂದಾದ ಕೊಚ್ಚೆಯ ಮೇಲಿಳಿದು ಮಂಜಿನ ಬೆಟ್ಟವೇರಲು ಪ್ರಾರಂಭಿಸಿದೆವು. ಒಂದು ಜರ್ಕಿನ್ ಮತ್ತು ಒಂದು ಜೊತೆ ರಬ್ಬರ್ ಬೂಟಿಗೆ (ಛಳಿ ತಡೆಯಲು) ೧೫೦ ರೂಗಳನ್ನು ತೆತ್ತಿದ್ದೆವು.

ಸುಮಾರು ಒಂದೂವರೆ ಗಂಟೆಗಳ ಕಾಲ ಮಂಜಿನ ಆಟವಾಡಿದೆವು ಸುಮಾರು ೧ ಕಿ.ಮೀ ದೂರ ದೇವದಾರು ವೃಕ್ಷಗಳಿಂದಾವೃತವಾಗಿರುವ ಬೆಟ್ಟ ಹತ್ತಿ ಮೇಲೆ ಸಿಕ್ಕ ಮನೆಯಂತಹ ಜಾಗದಲ್ಲಿ ಮಂಜಿನಲ್ಲಿ ಜಾರುತ್ತಾ ಬೀಳುತ್ತಾ ಅಲ್ಲಲ್ಲಿ ಫೋಟೋಗಳನ್ನು ತೆಗೆಯುತ್ತಾ ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಇಳಿದು ಕುದುರೆ ಹತ್ತಿ ದಾರಿಯಲ್ಲಿ ಸಿಗುವ ಕೆಲವು ಸ್ಥಳಗಳನ್ನು ದೂರದಿಂದಲೆ ತೋರಿಸುತ್ತಾ ಎ ಏಕ್ ಪಾಯಿಂಟ್ ಹೈ ಸಾಬ್ ಎನ್ನುತ್ತಾ ನಮಗೆ ಹೊಟ್ಟೆ ಉರಿಸುತ್ತಾ ಇದ್ದ ಕುದುರೆಯ ಮಾಲೀಕನನ್ನು ಒದ್ದು ಬಿಡಬೇಕೆನ್ನುವಷ್ಟು ಕೋಪ ಉಕ್ಕಿಬರುತ್ತಿತ್ತು. ಅವರು ಪ್ರವಾಸಿಗರಿಗೆ ಮಾಡುವ ಮೋಸಕ್ಕೆ. ಹಿಂತಿರುಗಿ ನಮ್ಮ ವಾಹನವಿರುವ ಸ್ಥಳಕ್ಕೆ ಬಂದಾಗ ೨ ಗಂಟೆಯಿರಬೇಕು. ತೊಟ್ಟಿದ್ದ ಬಾಡಿಗೆ ಬಟ್ಟೆಗಳನ್ನು ಹಿಂತಿರುಗಿಸಿ ಟೀ ಕುಡಿಯುವಷ್ಟರಲ್ಲಿ ಅಲ್ಲಿನ ವ್ಯಾಪಾರಿಗಳು ಇಲ್ಲಿಂದ ಓಡಿ ಹೋಗಬೇಕೆನಿವಷ್ಟು ಬೇಸರ ತರಿಸುತ್ತಾರೆ. ತಕ್ಷಣವೆ ಮಳೆ ಸುರಿಯಲು ಪ್ರಾರಂಭಿಸಿತು ೫ ನಿಮಿಶ ಸುರಿದ ನಂತರ ಮಳೆ ನಿಂತಿತು ನಂತರ ೫ ನಿಮಿಶದಲ್ಲಿ ಮಂಜು ಬೀಳಲಾರಂಬಿಸಿತು. ಕಡಲೆಕಾಳು ಗಾತ್ರದ ಹತ್ತಿ ಬೀಳುತ್ತಿದೆಯೇನೋ ಎಂಬಂತೆ ಸಣ್ಣಗೆ ಪ್ರಾರಂಭವಾದ ಇದು ನಮಗಂತೂ ಪ್ರಥಮ ಅನುಭವ. ಕೈಲಿ ಹಿಡಿದರೆ ಹತ್ತಿ ಮುಟ್ಟಿದಷ್ಟೆ ಮೃದು. ಮಂಜಿನ ಮಳೆ ೨-೩ ನಿಮಿಷಗಳ ನಂತರ ನಿಂತು ಹೋಯಿತು. ಅಲ್ಲಿಂದ ಹೊರಟು ದಾರಿಯಲ್ಲಿ ಸಿಕ್ಕ ಡಾಬಾವೊಂದರಲ್ಲಿ ರುಚಿಯಾದ ಫ್ರೈಡ್ ರೈಸ್ ಮತ್ತು ಪಲಾವ್ ಊಟಮಾಡಿ ಶ್ರೀನಗರ ತಲುಪಿದೆವು. ದಾರಿಯಲ್ಲಿ ಸಂತೆ ನಡೆಯುತ್ತಿದ್ದ ಪ್ರದೇಶವೊಂದರಲ್ಲಿ ಕಲ್ಲಂಗಡಿ ಹಣ್ಣು ತೆಗೆದುಕೊಳ್ಳಬೇಕೆಂಬ ನನ್ನ ಮಾತಿಗೆ ರಾಕೇಶ್ ಬೆಲೆ ಕೊಡದೆ ವಾಹನ ನಿಲ್ಲಿಸು ಎಂದು ಕೇಳಿದರೂ ಏನೂ ಮಾತನಾಡದೆ ಬಂದು ಸ್ವಲ್ಪ ದೂರ ಬಂದ ನಂತರ ಆತ ಹೇಳಿದ ಮಾತು ನಮ್ಮೆಲ್ಲರನ್ನೂ ಅಧೀರರನ್ನಾಗಿಸಿತು. ಅದು ಶ್ರೀನಗರದ ಲಾಲ್ ಚೌಕ್ ಭಯೋತ್ಪಾದಕ ಚಟುವಟಿಕೆಗಳಿಗೆ ಅತ್ಯಂತ ಕುಖ್ಯಾತಿ ಪಡೆದ ಪ್ರದೇಶ ಅಲ್ಲಿ ಯಾವ ಪ್ರಾವಾಸಿಗಳು ನಿಲ್ಲುವುದಿಲ್ಲ ನಿಂತರೆ ಅದೂ ಜಮ್ಮುವಿನ ವಾಹನವೆಂದು ತಿಳಿದ ಮರುಕ್ಷಣವೇ ಗ್ರೆನೇಡ್ ಬಂದು ಬೀಳುವುದರಲ್ಲಿ ಸಂಶವೇ ಇಲ್ಲವೆಂದು ಆತ ತಿಳಿಸಿದಾಗ ನಾವೆಲ್ಲಾ ಸಣ್ಣಗೆ ಆ ಛಳಿಯಲ್ಲೂ ಬೆವರಿದ್ದೆವೆ??
ಇಡೀ ಶ್ರೀನಗರ ಭಾರತೀಯ ಯೋಧರಿಂದ ತುಂಬಿ ಹೋಗಿದೆಯೆಂದೆ ಹೇಳಬೇಕು ಇಲ್ಲದಿದ್ದರೆ ಅಲ್ಲಿ ದಿನಕ್ಕೊಂದು ರಕ್ತಪಾತ ಕಟ್ಟಿಟ್ಟ ಬುತ್ತಿ. ಕಾಶ್ಮೀರದ ಬಗ್ಗೆ ಕೇಳಿದ್ದೆವು ಆದರೆ ಹತ್ತಿರದಿಂದ ನೋಡಿ ನಿಜಕ್ಕೂ ಭಯ ನನ್ನನ್ನು ಕಾಡಿತು. ಯಾವಾಗಲೂ ಬೆಂಕಿಯ ಮೇಲೆ ಕುಳಿತಂತೆ ಭಾಸವಾಗುತ್ತಿರುತ್ತದೆ. ಭಯೋತ್ಪಾದಕರು ಪ್ರವಾಸಿಗರ ತಂಟೆಗೆ ಇತ್ತೀಚೆಗೆ ಬರುತ್ತಿಲ್ಲವಾದರೂ ಇತ್ತೀಚೆಗೆ ನುಸುಳಿದ ತಾಲಿಬಾನಿಗಳಿಗೆ ಅವೆಲ್ಲ ಲೆಕ್ಕವಿಲ್ಲ ಎಂಬ ಮಾತುಗಳು ನಮ್ಮ ಮನದಲ್ಲಿ ರಿಂಗಣಿಸುತ್ತವೆ. ಯೋಧರು ಮತ್ತು ಭಯೋತ್ಪಾದಕರ ನಡುವೆ ನಡೆಯುವ ಗುಂಡಿನ ಚಕಮಕಿಗೆ ಆಗಾಗ ಪ್ರವಾಸಿಗಳು ಬಲಿಯಾಗುವುದಿದೆ. ಇಷ್ಟಾದರೂ ಇಲ್ಲಿನ ಸ್ಥಳೀಯ ಸರ್ಕಾರ ಯೋಧರ ನಿಯೋಜನೆಯನ್ನು ವಿರೋಧಿಸುತ್ತದೆ.

ಸೋದರರಂತೆ ಬದುಕುತ್ತಿದ್ದ ಅಮಾಯಕ ಹಿಂದೂ ಪಂಡಿತರನ್ನು ನಿರ್ದಾಕ್ಷಿಣ್ಯವಾಗಿ ಭಯೋತ್ಪಾದಕರೊಡಗೂಡಿ ಅವರ ಆಸ್ತಿ ಪಾಸ್ತಿಗಳನ್ನು ಕಬಳಿಸಿ ಹೆಣ್ಣು ಮಕ್ಕಳನ್ನು ಬಲಾತ್ಕರಿಸಿ, ಮತಾಂತರಿಸಿ ಕದ್ದೊಯ್ದು ಅಲ್ಲಿಂದ ಒದ್ದೋಡಿಸಿ ಇಂದು ಭಾರತೀಯ ಪ್ರವಾಸಿಗಳ ಪೈಸೆಯನ್ನೆ ನೆಚ್ಚಿಕೊಂಡು ಕೂತಿರುವುದು ವಿಪರ್ಯಾಸವೇ ಸೈ. ಸ್ವರ್ಗ ಸದೃಶವಾಗಿರಬೇಕಾದ ಪ್ರಶಾಂತತೆಯಿಂದಿರಬೇಕಾದ ಸುಂದರ ನಾಡೊಂದನ್ನು ರಕ್ತಮಯವನ್ನಾಗಿಸಲು ದಾರಿಮಾಡಿಕೊಟ್ಟ ಎಲ್ಲ ನಾಯಕಮಣಿಗಳು ಇಂದು ಪೂಜನೀಯರಾಗಿರುವುದು ನಮ್ಮ ದೇಶದ ದುರಾದೃಷ್ಟವೇ ಸೈ IT HAPPENS ONLY IN INDIA.

ಕಾಶ್ಮೀರದ ಬಗ್ಗೆ ಬೆಂಗಳೂರಿನ ಹವಾನಿಯಂತ್ರಿತ ಕೊಣೆಗಳಲ್ಲಿ ಕುಳಿತು ಮಾರುದ್ದ ಲೇಖನ ಬರೆಯುವ ಡೋಂಗಿ ಜಾತ್ಯಾತೀತವಾದದ ಸ’ಮಜಾ’ವಾದಿ ಬುದ್ದಿಜೀವಿಗಳು ಒಮ್ಮೆ ಇಲ್ಲಿ ಬಂದು ಪರಿಸ್ಥಿತಿಯನ್ನು ಅವಲೋಕಿಸಿದರೆ!!! ಅದಕ್ಕೆಲ್ಲ ಅವರಿಗೆ ಸಮಯ ಮತ್ತು ಸಂಯಮವೆಲ್ಲಿದೆ ಬಿಡಿ ಅವರ ತೆವಲಿನೇದ್ದರೂ ಲೇಖನ ಗೀಚಿ ಬಿಸಾಡಿ ರಾಡಿ ಎರಚಿ ಓಡಿ ಹೋಗುವುದಷ್ಟೆ ಕಾಯಕ. ಈಗೀಗ ಮತಾಂಧತೆಯನ್ನು ಅಪ್ಪಿಕೊಂಡ ಇಲ್ಲಿನ ಸ್ಥಳೀಯರಿಗೂ ತಾವು ಮಾಡಿರುವ ತಪ್ಪಿನ ಅರಿವಾಗಿರುವುದು ಅವರ ಮಾತಿನಿಂದಲೆ ಕೇಳಿ ತಿಳಿದವನಿಗೆ ಎಲ್ಲೊ ಒಂದು ಸಣ್ಣ ಆಶಾಕಿರಣ ಕಂಡಿದ್ದು ಸುಳ್ಳೇನಲ್ಲ. ಇಡೀ ಕಾಶ್ಮೀರ ಕಣಿವೆಯನ್ನು ಭಾರತೀಯ ಸೇನೆ ತನ್ನ ಹತೋಟಿಯಲ್ಲಿಟ್ಟುಕೊಂಡಿರುವುದು ಸ್ಥಳೀಯ ಆಡಳಿತಕ್ಕೆ ಕಣ್ಣು ಕೆಂಪಾಗಾಗಿಸಿರುವುದು ಸಹಜವೇ. ಇಂದು ನಾವೇನಾದರೂ ಯಾವುದೇ ಅಹಿತಕರ ಘಟನೆಯಿಲ್ಲದೆ ಹಿಂತಿರುಗಿ ಬಂದಿದ್ದೇವೆಂದರೆ ಅಲ್ಲಿ ಹಗಲಿರುಳೆನ್ನದೆ, ಮಳೆ, ಅಲ್ಲಿನ ಮೂಳೆ ಕೊರೆಯುವ ಛಳಿಯನ್ನು ಲೆಕ್ಕಿಸದೆ ದಾರಿಯುದ್ದಕ್ಕೂ ಕಣ್ಣಿಗೆ ಎಣ್ಣೆಬಿಟ್ಟು ಕೊಂಡು ಕಾಯುತ್ತಿರುವ ಯೋಧರು ಕಾರಣ. ಭಾರತೀಯ ಯೋಧರೆ ನಿಮಗಿದೋ ನನ್ನ ಕೃತಜ್ಙತಾಪೂರ್ವಕ ನಮನ. ನೀವು ನಮ್ಮ ದೇಶದ ಹೆಮ್ಮೆ ಮತ್ತು ಗರ್ವ.

ರಾತ್ರಿ ಹಿಂತಿರುಗಿ ಬಂದವರಿಗೆ ಶ್ರೀಮತಿ ಗೀತಾ ಪದ್ಮ ಮತ್ತು ಚಿತ್ರಾರವರು ಅಡುಗೆ ಮಾಡಲು ಕೆಲ ಸಾಮಗ್ರಿಗಳ ಪಟ್ಟಿ ನೀಡಿ ತರುವಂತೆ ಆಜ್ಙಾಪಿಸಿದರು. ರಾಕೇಶ್ ಒಲ್ಲದ ಮನಸ್ಸಿನಿಂದಲೆ ನಮ್ಮೊಡನೆ ಬರಲು ಒಪ್ಪಿದ ಆದರೆ ಆತನ ಎಚ್ಚರಿಕೆಯ ಮಾತುಗಳು ನಮ್ಮನ್ನು ಬಿಡದೇ ಕಾಡಿದ್ದುಂಟು. ರಾತ್ರ್ರಿ ೭.೩೦ರ ನಂತರ ಇರುವ ಜಾಗದಿಂದ ಹೊರಬರಬೇಡಿರೆಂದು ದಿಲೀಪ್ ಸಹ ಜಮ್ಮುವಿನಲ್ಲಿ ನಮಗೆ ಎಚ್ಚರಿಕೆ ನೀಡಿದ್ದರೂ ಜೇಷ್ಠಾದೇವಿ ಮಂದಿರದಲ್ಲಿನ ಅಂಗಡಿಯಲ್ಲಿ ಬಹುತೇಕ ಅಡುಗೆ ಪದಾರ್ಥಗಳು ಲಭ್ಯವಿದ್ದರೂ ಕೆಲವು ಅತ್ಯಗತ್ಯ ಪದಾರ್ಥಗಳು ಅಲ್ಲಿ ಸಿಗದ ಕಾರಣ ನಾವು ಶ್ರೀನಗರ ಮಾರುಕಟ್ಟೆಗೆ ಹೋಗಬೇಕಾಗಿ ಬಂತು ಅಂತೂ ಧೈರ್ಯಮಾಡಿ ರಾಕೇಶ್ ನಮ್ಮೊಡನೆ ಬರಲು ಒಪ್ಪಿದ. ನಾಣು ಮತ್ತೆ ಪ್ರಸಾದ್ ತರಕಾರಿ ತರಲು ಇಳಿದರೆ ಹಣ್ಣುಗಳನ್ನು ಇನ್ನೂ ಸ್ವಲ್ಪ ಮುಂದೆ ಹೋಗಿ ಬಂದ ಶ್ರೀಕಾಂತನನ್ನು ಕರೆದುಕೊಂಡ ಹೋದ ರಾಕೇಶ್ ಅಲ್ಲಿನ ಜನಜಂಗುಳಿ ನೋಡಿ ಗಾಭರಿಯಿಂದ ಅವನು ಕೇಳಿದಷ್ಟು ಹಣ ಪಾವತಿಸಿ ಹಣ್ಣೆತ್ತಿಕೊಂಡು ವಾಹನ ಸೇರಿದ್ದು ನಡೆಯಿತು. ಇಂದಂತೂ ಶ್ರೀನಗರದಲ್ಲಿ ವಿಪರೀತ ಛಳಿಯಿತ್ತು. ಬೆಚ್ಚಗಿನ ಬಟ್ಟೆಯಿಲ್ಲದೆ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಚಪ್ಪಲಿಯಿಲ್ಲದೆ ನೆಲದ ಮೇಲಿಟ್ಟ ಕಾಲು ಅಲ್ಲೆ ಮರಗಟ್ಟುವಂತೆ ಭಾಸವಾಗುತ್ತಿತ್ತು. ವೀಪರೀತ ಛಳಿಯಿಂದ ಇಂದು ಬೇಗನೆ ಮಲಗಿದೆವು.

ಬೆಳಿಗ್ಗೆ ೭ ಗಂಟೆಗೆ ಹೊರಡಬೇಕಿದ್ದವರು ಜೇಷ್ಠಾದೇವಿ ಮಂದಿರದಿಂದ ಹೊರಟಾಗ ೮.೩೦. ನೇರವಾಗಿ ಆದಿ ಶಂಕರರಿಂದ ಪೂಜಿಸಲ್ಪಟ್ಟ ಶಿವ ದೇವಸ್ಥಾನದ ಕಡೆಗೆ ನಮ್ಮ ಪ್ರಯಾಣ. ಶ್ರೀನಗರದ ಸಂಪೂರ್ಣ ಪಕ್ಷಿನೋಟ ಇಲ್ಲಿಂದ ಲಭ್ಯ. ೩ ಕಡೆಯಿಂದಲೂ ಬೆಟ್ಟಗಳಿಂದ ಸುತ್ತುವರೆದ ಮಧ್ಯೆ ಸರೋವರನ್ನೊಳಗೊಂಡ ಅತ್ಯಂತ ಸುಂದರ ನಗರ ಶ್ರೀನಗರ. ಪ್ರಸಾದಿಯಂತೂ ಕಸಗುಡಿಸುವ ಹೆಣ್ಣನ್ನೂ ಸಹ ಅವಳಿರುವ ಬಣ್ಣಕ್ಕೆ ಬೆರಗುಗಣ್ಣಿನಿಂದ ನೋಡುತ್ತಿದ್ದ. ಚಿವುಟಿದರೆ ರಕ್ತ ಚಿಮ್ಮುವ ವರ್ಣದ ಕಾಶ್ಮೀರ ಹೆಣ್ಣುಗಳು ಮನಮೋಹಕರೆಂಬುದರಲ್ಲಿ ಸಂಶವೇ ಇಲ್ಲ. ದಾರಿಯುದ್ದಕ್ಕೂ ಸಾಲಾಗಿ ಬರುತ್ತಿದ್ದ ಪುಟ್ಟ ಶಾಲಾ ಮಕ್ಕಳ ಛಾಯಾಚಿತ್ರ ತೆಗೆಯುವುದರಲ್ಲಿ ಪ್ರಸಾದಿ ಮತ್ತು ನಾನು ನಿರತರಾಗಿದ್ದೆವು.

ಒಂದು ಕಿಮೀಗಳಿಗಿಂತ ಮುನ್ನವೆ ನಮ್ಮ ಕ್ಯಾಮೆರಾಗಳನ್ನೆಲ್ಲ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಸಿಬ್ಬಂದಿ ಕಿತ್ತುಕೊಂಡು ಬಿಡುತ್ತಾರೆ. ಕೊನೆಯ ಅರ್ಧ ಮೈಲಿಯನ್ನು ಕಾಲ್ನಡಿಗೆಯಲ್ಲಿ ಹತ್ತುವುದು ತುಸು ತ್ರಾಸದಾಯಕವಾದರೂ ಅಲ್ಲಿಂದ ಕಾಣಸಿಗುವ ಶ್ರೀನಗರದ ರಮ್ಯನೋಟ ದೇಹಶ್ರಮದ ಕಡೆ ಗಮನ ಹರಿಸಲು ಅವಕಾಶ ಕೊಡುವುದಿಲ್ಲ. ವಸಂತ ಋತುವಿನ ಮಹಿಮೆಯಿಂದ ಶಂಕರಾಚಾರ್ಯ ಮಂದಿರದ ಬೆಟ್ಟದಲ್ಲಿ ಹೂಗಳು ಅರಳಿ ನಿಂತ ಬೆಟ್ಟದ ಸೌಂದರ್ಯವನ್ನು ಹೆಚ್ಚಿಸಿದ್ದವು.

೩೨ ವರ್ಷಕ್ಕೆ ದೇಹತ್ಯಾಗ ಮಾಡಿದ ಆ ಮಹಾನುಭಾವ ಅದು ಹೇಗೆ ದಕ್ಷಿಣ ಭಾರತದಿಂದ ಇಲ್ಲಿಗೆ ನಡೆದು ಬಂದರೆಂಬುದೆ ವಿಸ್ಮಯ. ಅದು ಆ ಕಾಲದಲ್ಲಿ ರಸ್ತೆಗಳೇ ಇರದ ಘನ ಘೋರ ಕಾಡು ಮೇಡುಗಳಲ್ಲಿ ಆ ಪುಣ್ಯಾತ್ಮ ಅದು ಹೇಗೆ ಭಾರತದ ಉದ್ದಗಲಕ್ಕೂ ಸಂಚರಿಸಿ ನಶಿಸಿಹೋಗುತ್ತಿದ್ದ ಸನಾತನ ಧರ್ಮವನ್ನು ಮತ್ತೆ ಪುನರುಜ್ಜೀವನಗೊಳಿಸಿದರೋ ಆ ದೇವರೆ(ಇದ್ದರೆ?) ಬಲ್ಲ. ದಕ್ಷಿಣದ ಕಾಲಾಡಿಯಲ್ಲಿ ಹುಟ್ಟಿ ಉತ್ತರದ ತುತ್ತತುದಿಯವರೆಗೂ ಸಂಚರಿಸಿ ಹಿಮಾಲಯಗಳಲ್ಲಿ ಆಲೆದು ನಾಲ್ಕೂ ದಿಕ್ಕಿನಲ್ಲಿ ಪೀಠಗಳನ್ನು ಸ್ಥಾಪಿಸಿ ಧರ್ಮ ಮರುಸ್ಥಾಪನೆ ಮಾಡಿದ ಆದಿ ಗುರು ಶ್ರೀಶಂಕರ ಭಗವತ್ಪಾದರು ಇಲ್ಲಿಯ ಶಂಕರಾಚಾರ್ಯ ಬೆಟ್ಟದಲ್ಲಿ ತಪಸ್ಸುಗೈದ ಗುಹೆ ಈಗಲೂ ದರ್ಶನಕ್ಕೆ ಲಭ್ಯವಿದೆ, ಇನ್ನೆಷ್ಟು ದಿನ ಇರುತ್ತೆ ಗೊತ್ತಿಲ್ಲ? ಏಕೆಂದರೆ ಇದನ್ನು ಕಾಶ್ಮೀರ ಸರ್ಕಾರ ಶಂಕರಾಚಾರ್ಯ ದೇವಸ್ತಾನದ ಬೆಟ್ಟವನ್ನು ಮೊದಲ ಹೆಜ್ಜೆಯಾಗಿ ತಕೌತ್-ಎ-ಸುಲೇಮಾನ್ ಎಂದು ಹೆಸರು ಬದಲಿಸಿದೆ.

ಇಲ್ಲಿ ನಮಗೆ ಬೆಳಗಾವಿಯಿಂದ ಬಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಕನ್ನಡಿಗರೊಡನೆ ಉಭಯಕುಶಲೋಪರಿ ವಿನಿಮಯ ಕೂಡ ನಡೆಯಿತು. ಕರ್ನಾಟಕದಿಂದ ದೂರವಿದ್ದಾಗ ಕನ್ನಡಿಗರು ಸಿಕ್ಕು ಮಾತನಾಡಿಸಿದರೆ ಅದು ಅತ್ಯಂತ ಸಂತೋಷದಾಯಕ. ಅದರಲ್ಲಿ ಕಾಶ್ಮೀರದಿಂದ ವಲಸೆ ಹೋಗಿ ಬೆಳಗಾವಿಯಲ್ಲಿ ನೆಲೆಸಿರುವ ಕಾಶ್ಮೀರ ಪಂಡಿತರ ಕುಟುಂಬವೊಂದು ಅಪ್ಪಟ ಕನ್ನಡಿಗರಾಗಿರುವುದು ಅಚ್ಚರಿ ತರಿಸಿತು. ನಮ್ಮ ಕುಲ್ದೀಪ್ ಪಂಡಿತ್ ಹೇಳುವ ಮಾತು ಇಲ್ಲಿ ನೆನಪು ಮಾಡಿಕೊಳ್ಳಲೇ ಬೇಕು. ನಾನು ಕಾಶ್ಮೀರಿ ಆದರೆ ನನ್ನ ಎರಡೆನೆ ಮಾತೃ ಭಾಷೆ ಕನ್ನಡ ೨ನೆ ತವರು ಕನ್ನಡನಾಡು ಎನ್ನುವ ಕುಲ್ದೀಪ್ ಸಾಧ್ಯವಿದ್ದಷ್ಟು ಕನ್ನಡದಲ್ಲೆ ಮಾತನಾಡುತ್ತಾರೆ ಮತ್ತು ತಮ್ಮ ವ್ಯವಹಾರದಲ್ಲಿ ಕೆಲಸ ಕೊಟ್ಟಿರುವ ಎಲ್ಲರೂ ಕನ್ನಡಿಗರು ಎನ್ನುವುದು ಅವರ ಹೆಮ್ಮೆ. ಕನ್ನಡಿಗರನ್ನೂ ಆಂಗ್ಲಭಾಷೆಯಲ್ಲೆ ಮಾತನಾಡಿಸುವ ಒಂದು ವರ್ಗದ ಕನ್ನಡಿಗರು ಇಲ್ಲಿ ಮಾತ್ರ ಕನ್ನಡದಲ್ಲೆ ಮಾತನಾಡಿಸುತ್ತಿದ್ದದ್ದು ಸಂತಸದ ವಿಚಾರ.

ಸುಮಾರು ೧ ಗಂಟೆಯ ನಂತರ ನಿಧಾನವಾಗಿಳಿದು ಬಂದು ವಾಹನ ಸೇರಿಕೊಂಡೆವು. ಇಲ್ಲಿಂದ ನೇರವಾಗಿ ನಾವು ಭೇಟಿ ಕೊಟ್ಟದ್ದು ಉದ್ಯಾನವನಗಳಿಗೆ ಶ್ರೀನಗರದಲ್ಲಿ ಸುಮಾರು ೬ ಉದ್ಯಾನವನಗಳಿವೆ ಒಂದಕ್ಕಿಂತ ಒಂದು ಸುಂದರ ಹೂದೋಟಗಳು. ನಿಷಾತ್, ಚೆಷ್ಮಶಾಹಿ, ಪರಿ ಮಹಲ್ ನಾವು ಈ ೩ ಉದ್ಯಾನವನಗಳನ್ನು ನೋಡಲು ಸಾಧ್ಯವಾಯಿತು. ೪ ಗಂಟೆಯ ಸಮಯಕ್ಕೆ ದಾಲ್ ಸರೋವರಕ್ಕೆ ಭೇಟಿಯಿತ್ತೆವು. ಚೆಷ್ಮಶಾಹಿಯಲ್ಲಿನ ನೀರು ಅತ್ಯಂತ ಪ್ರಸಿದ್ದ ಮತ್ತು ಅತ್ಯಂತ ಶುದ್ದ ಮತ್ತು ರುಚಿಗೆ ಹೆಸರುವಾಸಿ. ಪ್ರಥಮ ಪ್ರಧಾನಮಂತ್ರಿ ಕಾಶ್ಮೀರಿಯೇ ಆದ ನೆಹರೂಗೆ ಕುಡಿಯುವ ನೀರು ದಿನಂಪ್ರತಿ ಇಲ್ಲಿಂದಲೆ ವಿಮಾನದಲ್ಲಿ ತೆಗೆದುಕೊಂಡುಕೊಂಡು ಹೋಗಲಾಗುತ್ತಿತ್ತೆಂದು ಅಲ್ಲಿನ ಕೆಲವರ ವರದಿ. ಪುಟ್ಟ ಶಾಲಾ ಮಕ್ಕಳನ್ನು ಇಲ್ಲಿನ ಅದ್ಯಾನವನದಲ್ಲಿ ಆಡುತ್ತಿದ್ದದ್ದು ಆ ಉದ್ಯಾನವನಕ್ಕೆ ಚಿಟ್ಟೆಗಳ ದಂಡು ಲಗ್ಗೆ ಇಟ್ಟಿದಿಯೆಂಬ ಭಾವನೆ ತರಿಸಿದ್ದು ಸಹಜವೆ. ಹಾಲು ಬಿಳಿಯ ಚರ್ಮದ ಕದಪುಗಳಿಗೆ ಗುಲಾಭಿ ರಂಗು ಬಳಿದಂತಿರುವ ಪುಟ್ಟ ಮಕ್ಕಳು ಗಾಢ ಕೆಂಪು ಹಳದಿ ಹಸಿರು ಬಣ್ಣದ ಬಟ್ಟೆ ತೊಟ್ಟು ನೂರಾರು ಮಕ್ಕಳು ನಲಿದಾಡುತ್ತಿದ್ದರೆ ಅದು ಕಣ್ಣಿಗೆ ಹಬ್ಬ. ಫೋಟೊಗಳಿಗೆ ಒಲ್ಲೆಯೆನ್ನುವವರನ್ನು ಬಲವಂತವಾಗಿ ಫೋಟೊ ತೆಗೆಸಿದೆವು. ಇಲ್ಲಿನ ಉದ್ಯಾನವನಗಳಲ್ಲಿ ಕಾಣ ಸಿಗುವ ಕಡು ಬಣ್ಣದ ಹೂಗಳು ಇಲ್ಲಿನ ವಾತಾವರಣಕ್ಕೆ ಬಣ್ಣ ಹಚ್ಚುತ್ತದೆ. ಒಂದೊಂದು ಹೂಗಳು ಒಂದೊಂದು ವಿಶೇಷ ರೀತಿಯಲ್ಲಿ ಬಣ್ಣದಲ್ಲಿ ತನ್ನದೇ ಆದ ಸೌಂದರ್ಯವನ್ನು ತಂದಿದೆ. ಟುಲಿಪ್ ಕೂಡ ಇಲ್ಲಿ ಲಭ್ಯ.

ಛಳಿಗಾಲದಲ್ಲಿ ಸಂಪೂರ್ಣವಾಗಿ ನೀರಿನ ಮೇಲ್ಪದರ ಹಿಮವಾಗುವ ಈ ಸರೋವರ ಪ್ರಪಂಚದಲ್ಲೆ ಅತ್ಯಂತ ಸುಂದರ ಸರೋವರವೆಂದು ಅಲ್ಲಿಯವರ ಅಂಬೋಣ. ಇಲ್ಲಿನ ದೋಣಿಮನೆಗಳು ಪ್ರಸಿದ್ದ. ಒಂದು ದಿನಕ್ಕೆ ಸುಮಾರು ೧೫೦೦ ದಿಂದ ೬೦೦೦ ರೂ ವರೆಗಿನ ಬೋಟ್ ಹೌಸ್ ಗಳು ಲಭ್ಯ. ಸರೋವರದ ಮಧ್ಯೆಯೆ ಮಾರುಕಟ್ಟೆಯಿರುವುದು ಮತ್ತೆ ಸರೋವರದ ಮಧ್ಯೆಯೆ ಜನ ಜೀವಿಸುವುದು ಅಲ್ಲಿಯೆ ಒಂದು ಅಂಚೆ ಕಛೇರಿ, ಸರ್ಕಾರಿ ಕಛೇರಿ ಇರುವುದು ಇಲ್ಲಿನ ವಿಶೇಷತೆ ಒಬ್ಬೊಬ್ಬರೆ ಹೆಣ್ಣುಗಳು ಇಲ್ಲಿನ ದೋಣಿ ಹುಟ್ಟು ಹಾಕುತ್ತಾ ಹೋಗುವುದು ನಡೆದಾಡಿದಷ್ಟೆ ಸಲೀಸು. ನಮ್ಮ ಚಾಲಕ ಮುನ್ನೆಚ್ಚರಿಕೆಯ ಮಾತುಗಳು ನಮ್ಮನ್ನು ಅಲ್ಲಿನ ಮಾರುಕಟ್ಟೆಯಲ್ಲಿ ಏನನ್ನು ಖರೀದಿಸಲು ಬಿಡಲಿಲ್ಲ. ಸರೋವರವೆನೋ ಸುಂದರ ಆದರೆ ದೋಣಿವಿಹಾರಕ್ಕೆ ಹೊರಟಾಕ್ಷಣ ದೋಣಿಯಲ್ಲೆ ಹಿಂಬಾಲಿಸುವ ಸಣ್ಣ ಪುಟ್ಟ ವ್ಯಾಪಾರಿಗಳು ತಲೆ ತಿನ್ನುತಾರೆ. ಕಾಶ್ಮೀರದ ಮುತ್ತುಗಳ ಬಳೆ ಓಲೆ ಸರ ಮುಂತಾದ ಆಭರಣಗಳನ್ನು ದೋಣಿಯಲ್ಲೆ ಕುಳಿತು ಮಾರುತ್ತಾರೆ. ಕೇಸರಿ ಮತ್ತು ಒಣಹಣ್ಣುಗಳನ್ನೂ ಸಹ, ಅದೂ ಅತಿಯೆನಿಸುವಷ್ಟು ಪ್ರವಾಸಿಗಳಿಗೆ ಕಿರಿಕಿರಿ ಉಂಟು ಮಾಡುವುದರಲ್ಲಿ ಸಿದ್ದಹಸ್ತರು. ಶ್ರೀಮತಿ ಗೀತಾಪ್ರಸಾದ್ ಅವರ ಬಳೇ ಓಲೆ ಮುಂತಾದ ಆಭರಣಗಳ ಖರೀದಿ ನಡೆದೇ ಇತ್ತು. ೩೫೦ ರೂ ಪ್ರತಿ ಗ್ರಾಂ ಗೆ ಇರುವ ಕೇಸರಿಯನ್ನು ೪೦ ರೂಗೆ ಕೊಟ್ಟು ಹೋಗುತ್ತಾನೆಂದರೆ ಅದೆಂತ ಗುಣಮಟ್ಟದ್ದಿರಬೇಕು ಯೋಚಿಸಿ. ಈ ಮಾರಾಟಗಾರರ ಜಾಲ ಎಷ್ಟು ಬಲವಾಗಿದೆಯೆಂದರೆ ನಾವು ದೋಣಿಯಿಂದ ಇಳಿದು ಆ ಮಾರುಕಟ್ಟೆಯಲ್ಲಿ ಅವನ ನಿಷ್ಠರಾದ ಒಂದು ಅಂಗಡಿಗೆ ಭೇಟಿಕೊಡುವಂತೆ ಬೆದರಿಕೆ ಕೂಡಾ ಹಾಕುತ್ತಾನೆ. ನಾನಂತೂ ಇಂತದಕ್ಕೆಲ್ಲಾ ಜಗ್ಗುವವನೆ ಅಲ್ಲ. ನನ್ನ ಮೊಂಡಾಟ ಅವನಿಗೆ ಕಿರಿಕಿರಿ ಉಂಟಾಗಿ ನಮ್ಮನ್ನು ವಿಧಿಯಿಲ್ಲದೆ ಹಿಂತಿರುಗಿ ಕರೆದುಕೊಂಡು ಹೊರಟ. ಆ ಬಟ್ಟೆ ಅಂಗಡಿಗೆ ಹೋಗದಿದ್ದರೆ ವಾಪಸ್ ಕರೆದುಕೊಂಡು ಹೋಗುವುದಿಲ್ಲ ಎಂದು ಬೆದರಿಸಿದ ಪ್ರಸಂಗಗಳಿವೆಯೆಂದು ನನ್ನ ಸಹೋದ್ಯೋಗಿ ನಿರ್ಮಲ ಈ ಲೇಖನ ಬರೆಯುವ ಸಂದರ್ಭದಲ್ಲಿ ತಿಳಿಸಿದರು.

ನೇರವಾಗಿ ಮಂದಿರಕ್ಕೆ ಹಿಂತಿರುಗಿದೆವು.

ಮರುದಿನ ನಮ್ಮ ಪ್ರಯಾಣ ನೇರವಾಗಿ ಪಹಲ್ಗಾಂ ಕಡೆಗಿರಬೇಕಿತ್ತು ಆದರೆ ಪಹಲ್ಗಾಂ ನೋಡದಿದ್ದರೂ ಪರವಾಗಿಲ್ಲ ಸಾರ್ ಪಟ್ನಿಟಾಪ್ ಅದೇ ರೀತಿಯಿದೆ ಅಲ್ಲೆ ಇಂದು ಉಳಿದು ನಾಳೆ ಹೋಗೋಣ ಎಂದ ನಮ್ಮ ಚಾಲಕ ಬಹುಶಃ ಅಲ್ಲಿನ ವಸತಿ ಗೃಹಗಳಲ್ಲಿ ಸಿಗುವ ಕಮೀಶನ್ ಹಣದ ಆಸೆಗಿರಬೇಕು ಆಯ್ತು ಹಾಗೇ ಮಾಡೋಣ ಎಂದು ತಿಳಿಸಿ ಪಟ್ನಿಟಾಫ್ ಅಂದರೆ ಜಮ್ಮುವಿನ ಕಡೆಗೆ ಹೊರಟೆವು. ೮.೩೦ ಕ್ಕೆ ಮುನ್ನ ಸುರಂಗದ ಬಾಗಿಲು ತೆಗೆಯುವುದಿಲ್ಲವಾದ್ದರಿಂದ ಶ್ರೀನಗರದಿಂದ ಒಂದು ಗಂಟೆಯ ಪ್ರಯಾಣದ ನಂತರ ಪಂಜಾಬಿ ಡಾಬಾವೊಂದರಲ್ಲಿ ದೋಸೆಯೆನ್ನುವ ಹುಳಿಮಡುಗಟ್ಟಿದ್ದ ದೋಸೆಯನ್ನು ತಿಂದು ಹೊರಟೆವು. ಕ್ರಿಕೆಟ್ ಬ್ಯಾಟ್ಗಳು ಅತೀ ಅಗ್ಗದ ದರದಲ್ಲಿ ಸಿಗುತ್ತವೆ. ಬ್ಯಾಟ್ ತಯಾರಿಸಲು ಬಳಸುವ ಮರ ಇಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಅಕ್ರೂಟನ್ನು ನಾವು ಶ್ರೀನಗರದಲ್ಲಿ ಖರೀದಿಸಿ ಮೋಸ ಹೋಗಿದ್ದೇವೆಂದು ಇಲ್ಲಿ ತಿಳಿಯಿತು.

೧ ಗಂಟೆಯ ಪ್ರಯಾಣ ನಮ್ಮನ್ನು ಸುರಂಗ ಮಾರ್ಗಕ್ಕೆ ತಂದು ನಿಲ್ಲಿಸಿತು. ಇಲ್ಲಿ ನಮ್ಮ ಚಾಲಕ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟ. ಏಕೆಂದು ವಿಚಾರಿಸಿದವನಿಗೆ ಇಲ್ಲಿಂದ ಮುಂದೆ ಉಗ್ರಗಾಮಿಗಳ ಯಾವುದೇ ಉಪಟಳದ ಭಯವಿಲ್ಲ ಎಂದ. ಹೌದು ಅವನು ಹೇಳಿದ್ದು ನಿಜ ನಾವೆಂತ ಭೀತಿ ತುಂಬಿದ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆವೆಂದರೆ, ಹಿಂದಿನ ದಿನ ನಾವು ಗುಲ್ಮಾರ್ಗ್ ಗೆ ಹೋಗುವ ದಾರಿಯಲ್ಲಿ ಒಂದು ಹಳ್ಳಿಯಲ್ಲಿ ಉಗ್ರಗಾಮಿಗಳ ಅಡಗುತಾಣದ ಬಳಿ ಸೈನಿಕರು ನಡೆಸಿದ ದಾಳಿಗೆ ೫ ಜನ ಬಲಿಯಾಗಿದ್ದನ್ನು ಚೌಧರಿ ನನಗೆ ತಿಳಿಸಿದ್ದರು ನಾನು ದಯಮಾಡಿ ನಮ್ಮ ಗುಂಪಿನ ಯಾರಿಗೂ ಇದನ್ನು ತಿಳಿಸಬೇಡಿರೆಂದು ಮನವಿಮಾಡಿದೆ. ನಾನೀ ವಿಷಯ ಬಹಿರಂಗಗೊಳಿಸಿದ್ದು ಧರ್ಮಶಾಲದಲ್ಲಿ. ನಾವು ಕಾಶ್ಮೀರದಲ್ಲಿದ್ದ ೩ ದಿನದಲ್ಲಿ ಉಗ್ರಗಾಮಿಗಳು ಮತ್ತು ಸೈನಿಕರ ನಡುವಿನ ಚಕಮಕಿಯ ಘಟನೆಗಳು ನಡೆದದ್ದು ೪ ಸತ್ತದ್ದು ೭ ಜನ. ಚುನಾವಣೆ ವಿಫಲಗೊಳಿಸುವುದು ಅವರ ಗುರಿ. ಅದಕ್ಕೆ ಕೆಲವು ಸ್ಥಳೀಯರ ಕುಮ್ಮಕ್ಕೂ ಕೂಡಾ ಇದೆ ಸಹಜ ಅಲ್ವೆ? ಪಾಕೀಸ್ತಾನ ಮಾಡಿದ್ದೆಲ್ಲ ಸರಿಯೆನ್ನುವ ಭಾರತೀಯ ಬುದ್ದಿಜೀವಿಗಳಿರಬೇಕಾದರೆ ಇದೇನು ಅಂಥಹ ಅಪರಾಧವಲ್ಲ ಬಿಡಿ.
ಪಟ್ನಿ ಟಾಪ್ ನಮ್ಮ ಕೆಮ್ಮಣ್ಣುಗುಂಡಿಯಶ್ಟೆ ಸುಂದರ ೧ ಗಂಟೆಯ ಕಾಲ ಇಲ್ಲಿದ್ದು ಚಾಲಕನಿಗೆ ನೇರವಾಗಿ ಕಾಟ್ರಕ್ಕೆ ತೆರಳುವುಂತೆ ಹೇಳಿದೆವು ಒಲ್ಲದ ಮನಸ್ಸಿನಿಂದ ಆತ ಗಾಡಿ ಚಲಾಯಿಸಿದ. ಕಾಟ್ರಾದಲ್ಲಿಳಿದಾಗ ಸಂಜೆ ೫ ಗಂಟೆ. ಇಲ್ಲಿಂದ ೧೪ ಕಿ.ಮೀ ದೂರದಲ್ಲಿರುವ ಗುಹಾ ದೇವಾಲಯ ವೈಷ್ಣೋದೇವಿಗೆ ನಡದೆ ಹೋಗಬೇಕು ಇಲ್ಲವೆ ಕಚ್ಚರ್ ಎನ್ನುವ ಕುದುರೆ ಮತ್ತು ಕತ್ತೆಯ ಸಂಗಮದ ಪ್ರಾಣಿಯ ಮೇಲೆ ಸವಾರಿ ಮತ್ತು ೩ನೆ ಯ ಆಯ್ಕೆ ಡೋಲಿ. ನಡೆದೆ ಹತ್ತುವ ತೀರ್ಮಾನ ತೆಗೆದು ಕೊಂಡು ನಡೆಯಲು ಆರಂಭಿಸಿದೆವು. ದಾರಿಯುದ್ದಕ್ಕೂ ದೀಪಗಳು ಮತ್ತು ೨೪ ಗಂಟೆ ಕಾರ್ಯ ನಿರ್ವಹಿಸುವ ಅಂಗಡಿಗಳು ನಮ್ಮ ನಡಿಗೆಯನ್ನು ಸ್ವಲ್ಪ ಆರಾಮಗೊಳಿಸುತ್ತವೆ. ಅಬ್ಬ ಇಲ್ಲಿನ ಜನರ ಈ ದೇವಿಯ ಮೇಲಿನ ಭಕ್ತಿಗೆ ಮೇರೆಯೇ ಇಲ್ಲ. ಕುಂಟರು ಕುರುಡರು ವಯಸ್ಸಾದವರು ಎಲ್ಲ ರೀತಿಯ ಜನ ಅಷ್ಟೂ ದೂರ ಬರೀ ಕಾಲ್ನಡಿಗೆಯಲ್ಲೆ ಕ್ರಮಿಸುತ್ತಾರೆ. ಒಬ್ಬನಂತೂ ನನ್ನ ಗಮನಕ್ಕೆ ಬಂದ ಪೋಲಿಯೋ ಪೀಡಿತ ಯುವಕ. ರಭಸವಾಗಿ ಆತ ಹತ್ತಿ ಹೋಗುತ್ತಿದ್ದದ್ದು ನನಗೆ ಅತ್ಯಾಶ್ಚರ್ಯ ಉಂಟು ಮಾಡಿತ್ತು. ಇನ್ನೊಬ್ಬ ಯುವಕ ಹೆಜ್ಜೆ ನಮಸ್ಕಾರ ಹಾಕುತ್ತಿದ್ದದ್ದು ಅದಕ್ಕಿಂತ ಆಶ್ಚರ್ಯ. ಆತ ದೇವಸ್ತಾನ ತಲುಪಲು ಕನಿಷ್ಠ ೩ ದಿನಗಳಾದರೂ ಬೇಕು. ೫ ಗಂಟೆಗಳಲ್ಲಿ ಸುಮಾರು ೧೨.೩೦ನಿಮಿಷಕ್ಕೆ ದೇವಸ್ತಾನ ತಲುಪಿದೆವು. ಭೈರವ ಬಾಬಾನ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಗುಹೆಯನ್ನು ಹೊಕ್ಕ ಪಾರ್ವತಿಯ ಮಂದಿರ ವೈಷ್ನೋದೇವಿ ಎಂದು ಇಲ್ಲಿನ ಜನರ ನಂಬಿಕೆ. ಇಲ್ಲಿಂದ ಮೇಲೆ ಅದೇ ಭೈರೂ ಬಾಬಾನ ಮಂದಿರವಿದೆ ಅಲ್ಲಿಗೆ ಹೋಗಲು ನಮಗ್ಯಾರಿಗೂ ಮನಸ್ಸಿರಲಿಲ್ಲ ನಮ್ಮಲ್ಲಿ ತ್ರಾಣವೂ ಉಳಿದಿರಲಿಲ್ಲ. ದೇವಿಯ ದರ್ಶನದ ನಂತರ ಕಾಲ್ನಡಿಗೆಯಲ್ಲಿ ಇಳಿಯಲು ಸಾಧ್ಯವಿಲ್ಲವೆಂದು ತಿಳಿಸಿ ಶ್ರಿಕಾಂತ ಮತ್ತು ಪ್ರಸಾದ್ ಕಚ್ಚರ್ ಹತ್ತಿದರು ವಿಧಿಯಿಲ್ಲದೆ ನಾನೂ ಕೂಡ ಅವರನ್ನೆ ಹಿಂಬಾಲಿಸಬೇಕಾಯಿತು. ಬೆಳಗಿನ ಜಾವ ೨.೩೦ಕ್ಕೆ ಹೊರಟು ೭ ಗಂಟೆ ಸುಮಾರಿಗೆ ಕಾಟ್ರ ತಲುಪಿ ಕೋಣೆಯಲ್ಲಿ ಹಾಸಿಗೆಯ ಮೇಲೆ ಬಿದ್ದವರಿಗೆ ಎಚ್ಚರವಾದದ್ದು ೧೧ ಗಂಟೆಗೆ. ಅಲ್ಲಿಂದ ಹೊರಟು ಮಧ್ಯಾನ್ಹ ೧ ಗಂಟೆ ಸುಮಾರಿಗೆ ಜಮ್ಮು ತಲುಪಿದೆವು. ಕೋಣೆಗಳನ್ನು ತೆಗೆದುಕೊಂಡು ನಮ್ಮ ಹೊರೆಗಳನ್ನೆಲ್ಲಾ ಇಳಿಸಿ, ದೇವಸ್ತಾನಗಳ ನಗರ ಜಮ್ಮು ವೀಕ್ಷಣೆಗೆ ಹೊರಟೆವು. ಮೊದಲಿಗೆ ಜಾಮ್ನು ಗುಫಾ, ಬಹುಕೋಟೆ ಕಾಳಿ ಮಂದಿರಕ್ಕೆ ಭೇಟಿಯಿತ್ತೆವು. ನಂತರ ನಮ್ಮ ಚಾಲಕ ನಮ್ಮಿಂದ ಬೀಳ್ಕೊಂಡ. ಅವನಿಗೆ ಸಲ್ಲಬೇಕಾದಷ್ಟು ಹಣ ಪಾವತಿಸಿ ಅವನಿಗೆ ಟಾಟಾ ಮಾಡಿದೆವು. ಸಂಜೆ ೭ ರ ಸುಮಾರಿಗೆ ಹೊರಬಂದು ನಾನು ಮತ್ತು ಶ್ರೀಕಾಂತ ಧರ್ಮಶಾಲಕ್ಕೆ ಇರುವ ಬಸ್ ವಿಚಾರಿಸಿ ಮುಂಗಡ ಟಿಕೆಟ್ ಸಾಧ್ಯವಿಲ್ಲದ್ದರಿಂದ ಅದು ಬರುವ ಸಮಯ ಮತ್ತು ಸ್ಥಳ ವಿಚಾರಿಸಿದೆವು. ಅಶ್ಟರಲ್ಲಿ ಸಜ್ಜಾಗಿದ್ದ ಉಳಿದವರೊಡನೆ ರಘುನಾಥ ಮಂದಿರಕ್ಕೆ ಭೇಟಿಯಿತ್ತೆವು. ಎರಡು ಬಾರಿ ಉಗ್ರರ ದಾಳಿಗೆ ಸಿಕ್ಕು ಬದುಕುಳಿದಿರುವ ರಘುನಾಥ ಮಂದಿರದ ಪ್ರಶಾಂತತೆ ನನಗಿಷ್ಟವಾಯಿತು. ನಾವು ಅಲ್ಲಿಗೆ ಬರುವ ಸಮಯಕ್ಕೆ ಸರಿಯಾಗಿ ಮಂಗಳಾರತಿ ನಡೆಯುತ್ತಿತ್ತು. ಇಲ್ಲಿರುವ ಸ್ಫಟಿಕದ ಶಿವಲಿಂಗ ಅತ್ಯಂತ ಆಕರ್ಷಣೀಯ. ದೇವಸ್ತಾನದಿಂದ ಹೊರಬಂದು ಲಘು ಉಪಹಾರ ಬಾಳೆಹಣ್ಣು ಮತ್ತು ಲಸ್ಸಿ (ಎಲ್ಲವೂ ಸೇರಿ ಊಟದಂತೆ) ಸೇವಿಸಿ ಮಲಗಿದೆವು. ಇಲ್ಲಿಗೆ ನಮ್ಮ ಜಮ್ಮುಕಾಶ್ಮೀರ ಪ್ರವಾಸ ಮುಗಿದಿತ್ತು. ಪ್ರವಾಸಕ್ಕೆ ನೆರವಾದ ಕುಲ್ದೀಪ್ ಪಂಡಿತ್ ಮತ್ತು ದಿಲೀಪ್ ಪಂಡಿತ್ ಮತ್ತು ಅವರ ಕುಟುಂಬ ವರ್ಗಕ್ಕೆ ನಾವೆಲ್ಲರೂ ಚಿರಋಣಿಗಳು. ನಾವು ಕಾಶ್ಮೀರಕ್ಕೆ ಹೋಗ್ತಿವಿ ಎಂದು ತಿಳಿದ ಎಲ್ಲ ಸ್ನೇಹಿತರು ಅಲ್ಲಿನ ಅಪಾಯದ ಬಗ್ಗೆ ಎಚ್ಚರಿಸಿದರೂ ನನ್ನ ಭಂಡ ಧೈರ್ಯ ಇಲ್ಲಿಗೆ ಎಳೆದು ತಂದಿತ್ತು.

ಯಾವುದೆ ಅಹಿತಕರ ಘಟನೆಯಿರದೆ ಸುರಕ್ಷಿತವಾಗಿ ಇಲ್ಲಿಂದ ಹೊರಬಂದದ್ದು ನನಗಂತೂ ಅತೀವ ಸಂತಸಕ್ಕೆ ಕಾರಣವಾಯಿತು. ನಮ್ಮ ಸುರಕ್ಷತೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು. ನನಗಿಂತ ಧೈರ್ಯ ಮಾಡಿ ಇಲ್ಲಿಗೆ ದಾವಣಗೆರೆಯಿಂದ ತಮ್ಮ ಸ್ವಂತ ಮಾರುತಿ ಕಾರಿನಲ್ಲಿ ಇಲ್ಲಿಗೆ ಬಂದು ಹೋದ ಆ ಕುಟುಂಬ ಅತ್ಯಂತ ಧೈರ್ಯಶಾಲಿ, ಅದರ ಬಗ್ಗೆ ಮುಂದೆ ಬರೆಯಲಿದ್ದೇನೆ.