Friday, November 29, 2013

ಅವಾಚ್ಯ ಶಬ್ಧ ಪ್ರಯೋಗ, ಹೀಗೊಂದು ಅನುಭವ.





ಮಡಿವಂತರುಗಳು ದಯವಿಟ್ಟು ಈ ಬರಹವನ್ನು ಓದಲು ಹೋಗಬೇಡಿ.....

ಹಳ್ಳಿಯಲ್ಲಿ  ಬೆಳೆದವರಿಗೆ ಅವಾಚ್ಯ ಶಬ್ಧಗಳು ಹೊಸದೇನಲ್ಲ. ಪಟ್ಟಣಿಗರು ಅವನ್ನೇ ಅಪರೋಕ್ಷವಾಗಿ ಆಡುವುದೂ ಹೊಸದೇನಲ್ಲ. ಆದರೆ ಕೆಲವು ಹೇಡಿಗಳು ಶಬ್ಧ ಉಪಯೋಗಿಸಿ ಹಾಗಂತ ಬಯ್ದ್ನಾ? ಎಂದು ಕೇಳುವ ಅತಿಬುದ್ದಿವಂತಿಕೆಯ ಪರೋಕ್ಷ ಬೈಗುಳ ಪ್ರದರ್ಶಿಸುತ್ತಾರೆ. ಇದು ಸಾಮಾಜಿಕ ತಾಣಗಳನ್ನೂ ಬಿಟ್ಟಿಲ್ಲ. ಸಂಪದ.ನೆಟ್ ಅಲ್ಲಿ ಒಮ್ಮೆ ಮಹಾನ್ ಜಾತಿ ವಿರೋಧಿ ಸಾಫ್ಟ್ವೇರ್ ಇಂಜಿನಿಯರ್ ಅಮೇರಿಕಾದ ರವಿ ಅವರು, ನನಗೆ ಅವಾಚ್ಯ ಶಬ್ದ ಬಳಸಿ ಪರೋಕ್ಷ ಬೈಗುಳದ ಮೂಲಕ ಬಾಯಿ ಮುಚ್ಚಿಸಲು ನೋಡಿದ್ದಾಗ ಬರೆದ ಒಂದು ಸಣ್ಣ ಅನುಭವ ಬರಹ.

ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಸೇರಿದ ಹೊಸತು ಅಲ್ಲಿ ಇಲ್ಲಿ ಅಡ್ಡಾಡಿ ಹೊಸಕೆರೆಹಳ್ಳಿಯಲ್ಲಿ ರೂಮೊಂದನ್ನು ಹಿಡಿದಿದ್ದೆ. ನಂಜುಂಡೇಶ್ವರ ಸ್ಟೋರ್ಸ್ ನಿಲ್ದಾಣದಲ್ಲಿಳಿದು ಕೋಣೆಯವರೆಗೂ ನಡೆದು ಹೋಗಬೇಕಾಗಿತ್ತು. ಆಗಿನ ಮುಖ್ಯರಸ್ತೆ ಈಗಿನ ರಿಂಗ್ ರಸ್ತೆಯಾಗಿದೆ. ಅಲ್ಲಿ ಕೆಲವು ಟೀ ಅಂಗಡಿಗಳನ್ನು ಹೊಸಕೆರೆ ಹಳ್ಳಿಯವರು ತೆರೆದು ಜೀವನ ನಿರ್ವಹಣೆ ಮಾಡುತ್ತಿದ್ದರು. ಟೀ ಅಂಗಡಿಗಳಲ್ಲಿ ನಾನು ಸಮಯ ಕಳೆಯುತ್ತಿದ್ದಾಗ ನಡೆದ ಒಂದು ಪ್ರಸಂಗ.
ರಸ್ತೆಯಲ್ಲಿ ಸಂಜೆ ಸುಮಾರಿಗೆ ಒಂದು ಬೈಕ್ ಬಂತು. ನೋಡುವುದಕ್ಕೆ ರೌಡಿಯಂತಿರದಿದ್ದರೂ ಸ್ವಲ್ಪ ಘಾಟಿ ಮನುಷ್ಯನಂತೆ ಕಾಣುತ್ತಿದ್ದವನೊಬ್ಬ  ಬೈಕ್ ನಿಲ್ಲಿಸಿ ಟೀ ಕುಡಿದು ಬೇರೆ ಏನನ್ನೊ ತಿಂದಿರಬೇಕು. ಹಣ ಕೊಡದೇ ಹೊರಟಾಗ ಟೀ ಅಂಗಡಿಯವ ಅಣ್ಣಾ ಕಾಸು ಎಂದ. ಬೈಕ್ ಸವಾರ ಏಯ್ ಏನ್ಲಾ ನಿನ್ ಇಲ್ಲಿ ಅಂಗಡಿ ಇಟ್ಟಿರಕ್ಕೆ ಬಿಟ್ಟಿರೋದು ಹೆಚ್ಚು ಇನ್ನೂ ಕಾಸ್ ಬೇರೆ ಕೊಡ್ಬೇಕೇನ್ಲಾ ಎಂದು ಜೋರು ಮಾಡಿದಕ್ಕೆ ಜಗಳ ಶುರು ಆಯ್ತು. ಸ್ವಲ್ಪ ಜನ ಸೇರಿದರು. ಆತ ಸೋಲುವಂತೆ ಕಾಣುತ್ತಿರಲಿಲ್ಲ. ಜಗಳ ವಿಕೋಪಕ್ಕೆ ತಿರುಗಿ ಅಮ್ಮ ಅಕ್ಕನವರೆಗೂ ಬಂದು ಅವಾಚ್ಯ ಶಬ್ದಗಳ ಸುರಿಮಳೆ ಆರಂಭವಾಯ್ತು. ಅಲ್ಲಿಯೇ ಇದ್ದ ಕೆಲವರು ಇವನಿಗೆ ಬುದ್ದಿ ಕಲಿಸ್ಬೇಕಲ್ಲ ಎಂದು ಮಾತನಾಡಿಕೊಂಡು ಏನ್ಮಾಡಣ ಎಂದು ಎಲ್ಲರ ಮುಖ ನೋಡ ತೊಡಗಿದರು. ಸರಿ ನಾ ಹೇಳ್ದೆ ಹೀಗೆ ಮಾಡಿ ಎಂದು. ಅವರೆಲ್ಲರೂ ನಗುತ್ತಾ ಇರೀ ಅದೊಂದು ಪ್ರಯೋಗ ಮಾಡಿಯೇ ಬಿಡೋಣ ಎಂದು ಹೊರಟರು.  ಅಲ್ಲಿ ಕುಳಿತು ಸೀಬೆಹಣ್ಣು ಮಾರುತ್ತಿದ್ದ ಹಣ್ಣು ಹಣ್ಣು ಮುದುಕಿಯೊಂದನ್ನು ಕರೆತಂದು ಆತನ ಮುಂದೆ ನಿಲ್ಲಿಸಿ ಅದೇನೋ ಮಾಡ್ತಿನಿ ಅಂದ್ಯಲ್ಲೊ ಇವ್ಳೆ ನಮ್ಮವ್ವ ಬಾರ್ಲ ಅದೇನ್ ಮಾಡ್ತಿಯ ಮಾಡು ಎಂದವರನ್ನು ನೋಡಿದ ಅವ ಕಕ್ಕಾಬಿಕ್ಕಿಯಾಗಿ ಬಿಟ್ಟ. ಅವನಿಗೆ ಮುಂದೇನು ಹೇಳಬೇಕೆಂದು ತೋಚಲಿಲ್ಲ. ಹಣಕೊಟ್ಟವನೇ ನೆರೆದಿದ್ದ ಜನ ಧರ್ಮದೇಟು ಹಾಕಲು ಶುರುಮಾಡುತ್ತಿದ್ದಂತೆ ಬೈಕ್ ಹತ್ತಿ ಓಡಿ ಬಿಟ್ಟ. ನನ್ನ ಈ ತಂತ್ರಕ್ಕೆ ಸ್ಪೂರ್ತಿ ಸಿಕ್ಕಿದ್ದು ಹೀಗೆ.....
 

ನನ್ನೂರು ತುಂಬಾ ಹಿಂದುಳಿದ ಹಳ್ಳಿ. ಘಟನೆ ನಡೆದದ್ದು ನಾನು ಸುಮಾರು -೬ ರ ತರಗತಿಯಲ್ಲಿದ್ದಾಗ. ಹಿನ್ನೆಲೆ ಹೀಗಿದೆ. ಜಯರಾಮ ೧೦ನೇ ತರಗತಿಯಲ್ಲಿ ಬಾರಿ  ದಂಡಯಾತ್ರೆ ಮಾಡಿ ಜಮೀನನಲ್ಲಿ ದುಡಿಯಲು ಮೈ ಬಗ್ಗದೆ ದಿನಸಿ ಪೆಟ್ಟಿಗೆ ಅಂಗಡಿಯೊಂದನ್ನು ತೆರೆದಿದ್ದ. ಈಗಾಗಲೇ ಇದ್ದ ಅಂಗಡಿಯ ಕೃಷ್ಣೇಗೌಡನಿಗೆ ಇದರಿಂದ ವ್ಯಾಪಾರ  ಕಡಿಮೆಯಾಗಿತ್ತು. ಕೋಪ ಆಗಾಗ  ಜಗಳದ ರೂಪದಲ್ಲಿ ಹೊರಹೊಮ್ಮುತ್ತಿತ್ತಾದರೂ ಅತಿರೇಕಕ್ಕೆ ಹೋಗಿರಲಿಲ್ಲ. ಒಂದು ದಿನ ಬೆಳ್ಳಂಬೆಳಗ್ಗೆ ಊರಿನ ಬಸ್ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಯಾರೋ ಬೊಬ್ಬೆ ಹೊಡೆದಿದ್ದು ಕೇಳಿಸಿತು. ಆಗಿನ್ನೂ ಬೆಳಕು ಹರಿಯುತ್ತಿತ್ತು. ಅಂಗಳದಲ್ಲಿ ಮಲಗಿದ್ದ ನಾನೂ ಓಡಿದೆ.
ಕೃಷ್ನೇಗೌಡ
 ಜಯರಾಮನನ್ನು ಕೆಳಕ್ಕೆ ಕೆಡವಿ ನಾಲ್ಕು ತದುಕಿದ್ದ, ಮೂಗು ಒಡೆದು ರಕ್ತ ಸುರಿಯುತ್ತಿತ್ತು. ವಿಷಯ  ಊರಿಗೆಲ್ಲ ಹರಡಿತು. ಎರಡೂ ಸರಿಸಮನಾದ ಕುಳಗಳೇ, ತೋಟಕ್ಕೆ ಹೋಗಿದ್ದ  ಜಯರಾಮನ  ಅಣ್ಣ ಪುಟ್ಟೇಗೌಡ  ವ್ಯವಸಾಯ ಮಾಡಿಕೊಂಡು ಕಟ್ಟುಮಸ್ತಾಗಿದ್ದ ಆಳು. ವಿಷಯ ತಿಳಿದು ತೋಟಕ್ಕೆ ಹೋಗಿದ್ದವ ಬಂದವನೇ ನೇರವಾಗಿ ಎಲ್ಲರ ಎದುರಿಗೇ ತನ್ನ ವರಸೆ ಶುರುವಿಟ್ಟು ಕೊಂಡ ಅವರ....ನ್ ಎಂಬ ಪದಗಳಿಂದ ಶುರುವಾಗಿ ಪುಂಖಾನುಪುಂಖವಾಗಿ ಪದಪ್ರಯೋಗಗಳು ಹರಿಯತೊಡಗಿದವು ಪರಿಸ್ಥಿತಿ ಗಂಭೀರವಾಗುತ್ತಿತ್ತು, ಎರಡೂ ಕಡೆಯವರು ಸಮಾಧಾನ ಮಾಡುವ ಪ್ರಯತ್ನಗಳು ನಡೆದರೂ ಆಗೊಮ್ಮೆ ಈಗೊಮ್ಮೆ ಪುಟ್ಟೇಗೌಡನ  ಶಬ್ದ ಪ್ರಯೋಗ ಮುಂದುವರೆಯುತ್ತಲೇ ಇತ್ತು.
ಆಗ ಬಂತು ನೋಡಿ ಒಂದು ಹೊಸ ತಿರುವು.
ಯಾವನ್ಲಾ ಅವ್ನು ಬಯ್ದವ್ನು ಬಾರ್ಲಾ ಈಕಡಿಕ್ಕೆ ನೋಡವ ನಿನ್ ಮುಖವ, ಅದೇನ್ ಐತೆ ನಿಂತವ (ಇದು ಹಳ್ಳಿ ಹೆಂಗಸರ ಸಾಮಾನ್ಯ ಉತ್ತರ) ಎಲ್ಲರ ಗಮನ ಕಡೆಗೆ ತಿರುಗಿತು. ಬಯ್ಯುತ್ತಿದ್ದಾಕೆ ಕೃಷ್ಣೇಗೌಡನ ದೊಡ್ಡಮ್ಮ. ಯಾವೋನ್ಲಾ ಅವ್ನು, ಬಾರ್ಲಾ ಅದೇನ್ ಕಿಸಿತಿಯೋ ಕಿಸ್ಯೋ ನೋಡೇ ಬಿಡ್ತಿನಿ  ಬಾರ್ಲಾ ಎಂದವಳೇ ತನ್ನ ಸೆರಗನ್ನು ಕಿತ್ತೊಗೆದು ಎಲ್ಲರ ಮುಂದೆ ನಿಂತೇ ಬಿಟ್ಟ ಆಕೆಯನ್ನು ನೋಡಿ  ಒಮ್ಮೆಲೆ ಇಡೀ ಜನಸ್ತೋಮ ಹುಸಿನಗೆಯಲ್ಲಿ ಮುಳುಗಿತು. ೭೦ ವಯಸ್ಸು ದಾಟಿದ್ದ ಆ ಮುದುಕಿಯ ಬಾಯಿಂದ   ಮಾತುಗಳನ್ನು ಕೇಳಿದ ಪುಟ್ಟೇಗೌಡ  ಮನೆಯ ಕಡೆ ಓಡಿದ್ದ. ಜಯರಾಮನನ್ನು ಸಮಾಧಾನ ಪಡಿಸಿದ ಜನ ಸಂಜೆ  ಪಂಚಾಯಿತಿ ಸೇರಲು ನಿರ್ಧರಿಸಿದ ಜನ ಸಮೂಹ  ಕರಗಿ ಹೋಯಿತು.

Friday, April 26, 2013

ನಾನು ಮೊದಲ ಬಾರಿ ನೂರು ರೂ ನೋಟು ನೋಡಿದ ಪ್ರಸಂಗ.



ನನ್ನದು ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಸಹಪಾಠಿ ದಯಾನಂದ ನಮ್ಮೂರ ಪಟೇಲರ ಮೊಮ್ಮಗ. ಆಗ ಕಾಂಗ್ರೆಸ್ ಮತ್ತು  ಜನತಾ ಪಕ್ಷ ಎರಡೇ ಪಕ್ಷಗಳಿದ್ದಂತೆ ತೋರುತ್ತದೆ. ಯಾವ ಚುನಾವಣೆ ಎಂಬುದು ನೆನಪಿಲ್ಲ. ಕಾಂಗ್ರೆಸ್ಸಿನ ಚಿಹ್ನೆ ಹಸು ಮತ್ತು ಕರುವಿನದ್ದು. ತಗಡಿನ ಬಿಲ್ಲೆಯ ಮೇಲೆ ಮುದ್ರಿತಗೊಂಡಿದ್ದ ಆ ಬಿಲ್ಲೆ ನಮಗೆ ಅಚ್ಚುಮೆಚ್ಚು, ಕಾರಣ ಎರಡು ತೂತ ಹಾಕಿ ದಾರ ಕಟ್ಟಿ ಜುಯ್ ಎಂದೆಳೆಯುವ ಮೋಜಿನ ಬಿಲ್ಲೆಗೆ ಅದು ಅತ್ಯಂತ ಸೂಕ್ತವಾಗಿತ್ತು. ಆಗ ಜನತಾ ಪಕ್ಷದವರು ಸಂಘರ್ಷ ಚಿತ್ರದ "ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೆ ಸೋಲು ನಿನಗೆ" ಹಾಡಿನ ರೀಮಿಕ್ಸ್ ಮಾಡಿ, ಓ ಇಂದಿರಾ ಸೋಲು ನಿನಗೆ ಎಂಬ ಹಾಡನ್ನು ಎಲ್ಲೆಡೆ ಬಿತ್ತರಿಸುತ್ತಿದ್ದ ನೆನಪು ಇದೇ ಚುನಾವಣೆಯ ಅಥವ ನಂತರದ್ದ ನೆನಪಿಲ್ಲ.

ಒಂದು ದಿನ ದಯಾನಂದ ಮಧ್ಯಾಹ್ನ ಊಟದ ನಂತರ ಬಂದು ನೂರು ರೂಪಾಯಿ ನೋಡಿದ್ಯ? ಅಂತ ಕೇಳ್ದ, ಇಲ್ಲಾ ಅಂತ ತಲೆ ಆಡಿಸಿದೆ. ನೋಡ್ತಿಯ? ಅಂದವನಿಗೆ ಗೋಣು ಹಾಕಿ ಇಚ್ಚೆ ವ್ಯಕ್ತ ಪಡಿಸಿದೆ. ಸರಿ ಬಾ ತೋರಿಸ್ತಿನಿ. ಭಯದಿಂದ ಕೇಳಿದೆ ನಿನ್ ಹತ್ರ ಹೇಗ್ ಬಂತು. ನನ್ ಹತ್ರ ಇಲ್ಲ. ನಮ್ಮನೆಲಿದೆ ತೋರಿಸ್ತಿನಿ ಬಾ.

ಪಟೇಲರು ವಂಶಪಾರಂಪರ್ಯವಾಗಿ ಕಾಂಗ್ರೆಸ್ಸಿನ ಸದಸ್ಯರು. ಅವರ ವಂಶದ ಯಾರೋ ಒಬ್ಬರು ನೆಹರುರೊಡನೆ ಇದ್ದ ಫೋಟೊವೊಂದು ಅವರ ಮನೆಯ ನಡುಮನೆಯ ಮುಂಬಾಗಿಲಿನ ಎದುರು ನೇತಾಡುತ್ತಿತ್ತು.

ಅವ್ವ ಒಳ್ಗೆ ಕೆಲ್ಸ ಮಾಡ್ತವ್ಳೆ ಎಂದ, ಮೆಲ್ಲಗೆ ನಡುಮನೆ ದಾಟಿ ಹಿಂದೆ ಕೋಣೆಯೊಂದಕ್ಕೆ ನನ್ನನ್ನು ಎಳೆದುಕೊಂಡು ಹೋದ. ಕೊಟೆಯೊಳಗೆ ನುಸುಳಿದಂತ ಅನುಭವ ದೊಡ್ಡಮನೆ, ದವಸ ಧಾನ್ಯಗಳ ತುಂಬಿತುಳುಕುತ್ತಿದ್ದ ಕೋಣೆಯ ಮೂಲೆಯೊಂದರಲ್ಲಿ ನಾಲ್ಕಾರು ತೆಳ್ಳನೆ ಗೋಣಿ ಚೀಲದ ಮೂಟೆಯ ಬಳಿಗೆ ಕರೆದೊಯ್ದು ಬೆರಳಿನಿಂದ ಚೀಲದ ದಾರಗಳನ್ನು ಬಿಡಿಸಿ ತೂತಿನಿಂದ ನೋಡು ಎಂದ ಉಹುಂ ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಮೆಲ್ಲಗೆ ಸ್ವಿಚ್ ಹಾಕಿದಾಗ ಮಂದ ಬೆಳಕು ಹರಿಯಿತು. ಯಾರ್ಲಾ ಅದು  ಕೋಣ್ಯಾಗೆ? ಎಂಬ ವಯಸ್ಸಾದ ಹೆಣ್ಣಿನ ಧ್ವನಿ ತೂರಿ ಬಂತು. ನಾನು ನಡುಗಿ ಹೋಗಿದ್ದೆ. ಏ ನಾನೆ ಕಣಜ್ಜಿ ದಯಾ ಎಂದು ರೇಗಿದ. ಅಲ್ಲೇನ್ಲಾ ಕ್ಯಾಮೆ ನಿಂಗೆ ಇಸ್ಕೂಲ್ಗೆ ಓಗಿಲ್ವೆನ್ಲಾ? ಏಯ್ ಓಗಿದಿನಿ, ಪುಸ್ಕ ಮರ್ತೋಗಿದ್ದೆ ತಗೊಂಡೋಯ್ತಿನಿ.

 ಬಾ ನೋಡು ಎಂದವನ ಹಿಂದೆ ಮೆಲ್ಲಗೆ ನಡೆದೆ. ವಾಹ್ ಕಡು ನೀಲಿ ಬಣ್ಣದ ಗರಿಗರಿ ನೋಟಿನ ಕಟ್ಟುಗಳು. ಕಾಣಿಸಿದ್ದು ಮೇಲಿನದ್ದು ಮಾತ್ರ. ಕೊನೆಯಲ್ಲಿ ಬಿಳಿ ಪಟ್ಟಿಯಂತಿದ್ದ ನೂರರ ನೋಟಿನ ಕಂತೆಗಳು. "ಈ ಮೂಟೆಯೆಲ್ಲ ಅದೆ" ಎಂದು ಹೆಮ್ಮೆಯಿಂದ ಬೀಗಿದ.

ಆಶ್ಚರ್ಯ ಮತ್ತು ಭಯ ಮಿಶ್ರಿತನಾಗಿ ಇದೆಲ್ಲ ನಿಮ್ದೇನಾ ಎಂಬ ನನ್ನ ಪ್ರಶ್ಬೆಗೆ, ಇಲ್ಲ ಎಲೆಕ್ಸನ್ ಬಂದಯ್ತಲ್ಲ, ಅದಕ್ಕೆ ಹಟ್ಟಿಯೋರ್ಗೆ ಕುಡಿಯಕ್ಕೆ ಮನೆಗಿಷ್ಟು ಅಂತ ಕೊಡಕ್ಕೇಂತ ತಂದು ಮಡಗವ್ರೆ. ಮೆಲ್ಲನೆ ಹೊರ ಬಂದು ಅಂಗಳ ದಾಟುತ್ತಿದ್ದವರಿಗೆ ದಯಾನಂದನ ತಾಯಿಯ ಇಸ್ಕೂಲಿಗೋದ್ ಬುಟ್ಟು ಇಲ್ಲೇನ್ಲ ಮಾಡ್ತಿದಿಯ ಎಂದು ಹಿಡಿದು ಕೊಂಡರು. ಯವ್ವ ಎಕ್ಸೈಸ್ ಮರ್ತೋಗಿದ್ದೆ ತಗಂಡೋಗವಾಂತ ಬಂದೆ, ನೋಡು ಇವ್ನು ಬಂದಿಲ್ವ? ಎಂದು ನನ್ನ ಕಡೆ ತೋರಿಸಿದ. ಸುಳ್ಳು ಹೇಳಿ ತಪ್ಪ್ಸಿಕೊಂಡು ಬಂದು ಶಾಲೆ ಸೇರಿದೆವು.

ಪ್ರತಿ ಬಾರಿಯೂ ಖಾನ್ಗ್ರೆಸ್ಸಿಗರು ಚುನಾವಣೆ ಅಕ್ರಮಗಳ ಬಗ್ಗೆ ಮಾತನಾಡಿದಾಗ ಈ ಪ್ರಸಂಗ ನನ್ನ ನೆನಪಿಗೆ ಬಂದು ಖಾನ್ಗ್ರೆಸ್ಸಿಗರ ನೈತಿಕತೆಯ ಬಗ್ಗೆ ಸಣ್ಣನೆಯ ನಗುವೊಂದು ನನ್ನ ಮುಖದಲ್ಲಿ ಹಾಯ್ದು ಹೋಗುತ್ತದೆ.