Tuesday, August 16, 2011

ಪ್ರವಾಸ, ಪತ್ರಕರ್ತರ ಮನೆಯಲ್ಲಿ ವಾಸ ಮತ್ತು ಅನಿರೀಕ್ಷಿತ ಜಲಪಾತಗಳ ಸಹವಾಸ

ಶನಿವಾರದ ಉಪಾಕರ್ಮ ಆಚರಣೆ ಮುಗಿಸಿ ಪ್ರವಾಸಕ್ಕೆ ಹೊರಡುವ ನನ್ನ ಉತ್ಸಾಹಕ್ಕೆ ತಣ್ಣೀರೆರೆಚಿದ್ದು ಅಕ್ಕನ ಮಗ ಜಯಂತ. ನಾನೂ ಬರ್ತಿನಿ ಶನಿವಾರ ಸಂಜೆ ಹೊರಡೋಣವೆಂದು ವರಾತ ಹಚ್ಚಿದವನ್ನು ಮನದಲ್ಲೆ ಹಳಿಯುತ್ತ ಜಾಗಗಳನ್ನು ಹುಡುಕಲು ಪ್ರಯತ್ನಿಸಿದೆ.

ಉಹೂಂ ಯಾವ ಜಾಗಗಳು ಸರಿ ಹೊಂದಲಿಲ್ಲ. ನನ್ನ ಚಾರಣದ ಗುರುಗಳಾದ ರಾಜೇಶ್ ಕೂಡ ಸೂಚಿಸಿದ ಜಾಗಗಳು ಮಳೆಗಾಲದಲ್ಲಿ ಭೇಟಿಕೊಡಲು ಪ್ರಶಸ್ತ ತಾಣಗಳಲ್ಲವೆಂದು ಅವರೇ ತಿಳಿಸಿದಾಗ ನನಗೆ ಈ ಪ್ರವಾಸದ ಕತೆ ಅಷ್ಟೆ ಅನಿಸಿತ್ತು.

ಶರಾವತಿ ಟ್ರೆಕ್ಸ್ ನ ಸಂಪತ್ ನೀವು ಭಾನುವಾರ ಬೆಳಿಗ್ಗೆಯೆ ಇಲ್ಲಿ ತಲುಪಿದರೆ ಚಾರಣಕ್ಕೆ ಕರೆದೊಯ್ಯುವುದಾಗಿ ತಿಳಿಸಿದರು. ಆದರೆ ರಾತ್ರಿಯಲ್ಲಿ ವಾಹನ ಚಾಲನೆ ನನಗಾಗದ ವಿಷಯ ಅಪಾಯ ಕೂಡ. ವಿಧಿಯಿಲ್ಲದೆ ಕಳೆದ ಪ್ರವಾಸದಲ್ಲಿ ನೋಡಲಾಗದೆ ಬಿಟ್ಟಿದ್ದ ಒಂದು ಜಲಪಾತಕ್ಕೆ ಹೋಗಿ ಹಿಂತಿರುಗಲು ಯೋಚಿಸಿ ಬೆಳಿಗ್ಗೆ ಬೇಗನೆ ಸಿದ್ದವಾಗಲು ಸೂಚಿಸಿದೆ.

ಭಾನುವಾರ ಬೆಳಿಗ್ಗೆ ೫.೩೦ಕ್ಕೆ ಬೆಂಗಳೂರಿನಿಂದ ಹೊರಟು ನೋಡದೇ ಬಿಟ್ಟಿದ್ದ ಜಲಪಾತದ ಸಮೀಪದ ಊರಿನಲ್ಲಿರುವ ಏಕೈಕ ಸಸ್ಯಾಹಾರಿ ಹೋಟೆಲ್ಲಿನಲ್ಲಿ ಊಟಕ್ಕೆ ಕುಳಿತದ್ದು ನನ್ನ ಇಡೀ ಪ್ರವಾಸಕ್ಕೆ ಹೊಸ ತಿರುವು ಕೊಟ್ಟಿತು.



ನನ್ನ ಈ ಬಾರಿಯ ಪ್ರವಾಸಕ್ಕೆ ಅಚ್ಚರಿಯ ತಿರುವು ಕೊಟ್ಟ ಹೋಟೆಲ್ ಇದು. ಇದರ ಮಾಲಿಕ ಮನೋಹರ್ ಕೊಟ್ಟ ಮಾಹಿತಿ, ಒಂದೇ ಒಂದು ಜಲಪಾತ ನೋಡಲು ಬಂದ ನಮಗೆ ಮತ್ತೆ ೪ ಜಲಪಾತಗಳ ಅದರಲ್ಲೂ ಜನರಿಗೆ ಅತ್ಯಂತ ಕಡಿಮೆ ಪರಿಚಯವಿರುವ ಜಲಪಾತಗಳ ದರ್ಶನಕ್ಕೆ ಕಾರಣವಾಯ್ತು. ಅಂತರ್ಜಾಲದಲ್ಲೂ ಕೂಡ ಈ ಜಲಪಾತಗಳ ಬಗ್ಗೆ ಮಾಹಿತಿಯಿಲ್ಲ ಒಂದು ಜಲಪಾತದ ಬಗ್ಗೆ ಮಾತ್ರ ಒಂದೇ ಒಂದು ಮಾಹಿತಿಯಿದೆ. ಕೆಲವು ಸ್ಥಳೀಯ ಪತ್ರಿಕೆಗಳಲ್ಲಿ ಹಾಗೂ ಉದಯವಾಣಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದರೂ ಜನ ಸಂಪರ್ಕದಿಂದ ದೂರವೇ ಇರುವ ಜಲಪಾತಗಳ ದರ್ಶನ ತಂದ ಸಂತೋಷ ಅವರ್ಣನೀಯ. ಉಳಿಯಲು ಜಾಗ ಕೊಟ್ಟು ತಿಂಡಿ ಊಟ ಕೊಟ್ಟು ಸಲಹಿದ ಮಹೇಶ್ವರ ಭಟ್ಟರಿಗೂ ಅವರ ಪತ್ನಿ ಸಹನಾ ಅವರಿಗೂ ಧನ್ಯವಾದಗಳು. ಅವರ ಸಹಾಯ ಸ್ಮರಣೀಯ. ಪ್ರವಾಸ ಹೊರಟಾಗ ಸುಂದರ ಪ್ರವಾಸ ಇದಾಗುತ್ತದೆ ಎಂಬ ನಂಬಿಕೆಯಿರಲಿಲ್ಲ. ಮನೋಹರ ಆದರೆ ಅನಿರೀಕ್ಷಿತವಾಗಿ ಸಿಕ್ಕ ಈ ಜಲಪಾತಗಳ ಮಾಹಿತಿ, ಇಡೀ ಪ್ರವಾಸ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.



ಇದು ಜೀಪಿನಲ್ಲಿ ನಮ್ಮನ್ನು ಕರೆದೊಯ್ದ ಮೋಹನನ ಮನೆಯ ಬಳಿಯಿರುವ ಪುಟ್ಟ ಆದರೆ ಮನಮೋಹಕ ಜಲಪಾತ.
ಇಲ್ಲಿನ ಪ್ರತಿ ಮನೆಯಲ್ಲೂ ತಾವೆ ತಯಾರಿಸಿದ ವಿದ್ಯುತ್ ಬಳಸುವುದು ವಿಶೇಷ




ಕಣ್ಮನ ಸೋಲುವಷ್ಟು ಹಸಿರು, ನದಿ ಕಾಡು ಜಲಪಾತ ಈ ಪ್ರವಾಸದ ವಿಶೇಷ




ದಾರಿಯುದ್ದಕ್ಕೂ ಈ ನದಿ ಕಲ್ಲು ಬಂಡೆಗಳ ಮಧ್ಯೆ ಹರಿಯುತ್ತ ಇಂತಹ ಮನೋಹರ ದೃಶ್ಯಗಳ ಸರಣಿಯನ್ನೆ ಸೃಷ್ಟಿಸಿದೆ.




ದೂರದಿಂದ ಜಲಪಾತದ ಮೊದಲ ನೋಟ




ನಮ್ಮ ಆತಿಥೇಯರ ತೋಟದಲ್ಲಿರುವ ಸುಂದರ ಬೆಡಗಿ, ಚಿಕ್ಕದಾದರೂ ಸುಂದರ ಜಲಪಾತ.
ದಾರಿಯುದ್ದಕ್ಕೂ ಆನೆಲದ್ದಿಯ ದರ್ಶನ ವಿಶೇಷ. ಜಯಂತನಂತೂ ಓಡಲು ಸಿದ್ದವಾಗಿಯೇ ನಡೆಯುತ್ತಿದ್ದ.



ಜಲಪಾತದೆಡೆಗೆ ನಡೆಯುವಾಗ ಎದುರಾದ ಇಂತಹ ಹಲವಾರು ಸ್ಥಳಗಳು ಎದುರಾದವು




ನಮ್ಮ ಈ ಪ್ರವಾಸದಲ್ಲಿ ಸಿಕ್ಕ ಅತ್ಯಂತ ಸುಂದರ ಜಲಪಾತವಿದು. ಪ್ರವಾಸ ಹೊರಟು ಈ ಸ್ಥಳದ ಸಮೀಪವಿರುವ ಪ್ರಮುಖ ಊರಿಗೆ ಬಂದಾಗಲೂ ಇಂತದ್ದೊಂದು ಜಲಪಾತವಿದೆಯೆಂದು ನನಗೆ ತಿಳಿದಿರಲಿಲ್ಲ. ಗೂಗಲ್ ನಲ್ಲೂ ಕೂಡ ಕನ್ನಡ ಲಿಪಿಯೊಂದಿಗೆ ಹುಡುಕಿದಾಗ ಈ ಜಲಪಾತದ ಒಂದೇ ಒಂದು ಕೊಂಡಿ ಸಿಗುತ್ತದೆ. ಅದೂ ಕೂಡ ನಮ್ಮ ಆತಿಥೇಯರೇ ಬರೆದ ಲಖನ



ನಮ್ಮ ಪ್ರವಾಸಕ್ಕೆ ನೆರವಾದ ಮಹೇಶ್ವರ ಭಟ್ಟರೊಂದಿಗೆ



ಭಟ್ಟರ ಮನೆಯಲ್ಲಿ ಕೊಕೊ ಹಣ್ಣುಗಳ ರಾಶಿ




ಮಹೇಶ್ವರ ಭಟ್ಟರೊಂದಿಗೆ ಹೊಳೆದಾಟಲು ಕಾಲುಸಂಕದ ಮೇಲೆ





ಅನಿರೀಕ್ಷಿತವಾಗಿ ಸಿಕ್ಕ ಜಲಪಾತದಲ್ಲಿ ಅಮಿತ್, ಚಿತ್ರ ಮತ್ತು ಜಯಂತ್. ಈ ಜಲಪಾತದ ಬಗ್ಗೆ ಹೋಟೆಲ್ಲಿನ ಮನೋಹರ ಕೂಡ ಹೇಳಿರಲಿಲ್ಲ. ಸಹನಾ ಅವರ ಉದಯವಾಣಿಯಲ್ಲಿನ ಬರಹ ನನ್ನು ಸೆಳೆಯಿತು. ಹೌದಲ್ಲ ಇದನ್ನೂ ನೋಡಿ. ಈಗ ತುಂಬಾ ನೀರುಂಟು ಎಂದಿದ್ದು ಮಹೇಶ್ವರ ಭಟ್ಟರು. ಅವರ ಮನೆಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿರುವ ಜಲಪಾತವಿದು.




ಜಲಪಾತದೆಡೆಗೆ ಪುಟ್ಟ ಚಾರಣ




ಇದು ಈ ಜಲಪಾತದ ೨ನೇ ಹಂತವಂತೆ. ಈ ಜಲಪಾತಕ್ಕೆ ಬರುವವರನ್ನು ಅಲ್ಲಿರುವ ಪ್ರಭಾಕರಭಟ್ಟರ ಮನೆಯವರು ಪ್ರೋತ್ಸಾಹಿಸುವುದಿಲ್ಲ. ಅದಕ್ಕೆ ಅವರು ಕೊಡುವ ಕಾರಣ ಸಕಾರಣವೇ. ನಮಗೂ ಅವರು ಪೂರ್ವಾನುಮತಿಯಿತ್ತದ್ದು ಪ್ರಕಾಶ್ ಹೋಟೆಲ್ನ ಮನೋಹರನ ಮತ್ತು ಪತ್ರಕರ್ತೆ ಸಹನಾ ಅವರ ವಿನಂತಿಯ ಮೇರೆಗೆ.




ನೀರಿನಲ್ಲಿ ಮೋಜು




೧೫ ದಿನದ ಹಿಂದೆಯಷ್ಟೆ ಇಲ್ಲಿಗೆ ಭೇಟಿಯಿತ್ತಿದ್ದೆವು. ಇದರ ಪೂರ್ಣ ದೃಶ್ಯದ ದರ್ಶನವಾಗುವುದು ರಾಜ್ಯ ಹೆದ್ದಾರಿಯಲ್ಲಿಯೆ.