Tuesday, March 3, 2009

ದೇವರಿಗೆ ಹಿಪ್ನಾಟಿಸಂ, ಹೀಗೊಂದು ನನ್ನ ಅನುಭವ.


ಮೊನ್ನೆ ಆಪ್ತಮಿತ್ರ ಚಲನಚಿತ್ರ ನೋಡುತ್ತಿದ್ದಾಗ ಕೊನೆಯ ದೃಶ್ಯದಲ್ಲಿ ಯು ಆರ್ ಗಂಗಾ, ಹೌ ಡು ಯು ಫೀಲ್ ಎಂಬ ಸಂಭಾಷಣೆ ಕೇಳಿದವನಿಗೆ ನನ್ನ ಕಾಲೇಜ್ ದಿನಗಳಲ್ಲಿ ನಡೆದ ಒಂದು ಪ್ರಸಂಗವನ್ನು ಬರಹದಲ್ಲಿ ಹಿಡಿದಿಡುವ ಮನಸ್ಸಾಯಿತು ಅದರ ಫಲವೆ ಈ ಲೇಖನ.
ಒಂದು ಬೆಳಿಗ್ಗೆ ನಮ್ಮ ಗುಂಪಿನ ಹುಡುಗರಾದ (ಇದ್ದದ್ದೇ ೩ ಮತ್ತೊಂದು ಜನ ಅದರಲ್ಲಿ ಗುಂಪೇನು ಇರಲಿಲ್ಲ ಆದರೂ ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್ ಗುಂಪುಗಳಿದ್ದದ್ದು ನಿಜ) ಮುರಳಿ,ಮಂಜು, ಸಂಜೀವ್ ಬದಾಮಿ, ಎಲ್ಲರೂ ನಿನ್ನೆ ನಡೆದ ಹಿಪ್ನಾಟಿಸಂ ಬಗ್ಗೆ ಮಾತನಾಡುತ್ತಿದ್ದರು. ಪಕ್ಕದೂರಿನ ಬಸ್ಸಿಳಿದು ಅವರ ಜೊತೆ ಸೇರಿದ ನನಗೆ ಇದು ಹೆಚ್ಚು ಕುತೂಹಲ ಮೂಡಿಸಿತು. ನಮ್ಮ ಪ್ರಾಧ್ಯಾಪಕರ ಸಂಬಂಧಿ ಮತ್ತು ಸ್ನೇಹಿತರಾದ ವೈದ್ಯರೊಬ್ಬರು ( ಇವರ ಮನೆಯಲ್ಲಿದ್ದ ಸುಂದರ ಹುಡುಗಿಯಿಂದ ಇವರು ನಮಗೆಲ್ಲ ಚಿರಪರಿತರು) ನಡೆಸಿದ ಅಥವ ಪ್ರಯೋಗಿಸಿದ ಹಿಪ್ನಾಟಿಸಂಗೆ ಒಳಗಾದ ಮುರಳಿ ತನ್ನ ಅನುಭವವನ್ನು ಬಿಡಿ ಬಿಡಿಯಾಗಿ ಅರುಹಿದ. ನನಗಂತೂ ಕುತೂಹಲ ನೂರ್ಮಡಿಸಿತು. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ’ಅಘೋರಿಗಳ ನಡುವೆ’ ಕಾದಂಬರಿಯನ್ನು ಪ್ರತಿವಾರ ಕಾಯುತ್ತ ಓದಿದ್ದು ನೆನಪಿನಲ್ಲಿತ್ತು ಮತು ಅದೇ ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಲೈಬ್ರರಿಯಿಂದ ತಂದು ೨-೩ ಬಾರಿ ಓದಿದ್ದೆ. ಅಘೋರಿಗಳು ಗಳಿಸಿರುವ ಅಗಾಧ ಮಾನಸಿಕ ಶಕ್ತಿ ಮತ್ತು ಅವರಿಗಿರುವ ಏಕಾಗ್ರತೆಯನ್ನು ಮತ್ತು ಇಡೀ ಕಾದಂಬರಿಯ ಹೂರಣವನ್ನು ಒಂದೇ ಸಾಲಿನಲ್ಲಿ ಹಿಡಿದಿಟ್ಟ ಆ ಪುಸ್ತಕ ನನಗೆ ಅತ್ಯಂತ ಪ್ರಿಯವಾಗಿತ್ತು.
ಮುರಳಿಯ ಕೈಯನ್ನು ಕಭ್ಭಿಣದಂತೆ ಗಟ್ಟಿಯೆಂದು ಆದೇಶವಿತ್ತು. ನಂತರ ಸೂಜಿಯಿಂದ ಆಳಕ್ಕೆ ಚುಚ್ಚಿದ್ದರೂ ಆತನಿಗೆ ನೋವಾಗದಿದ್ದದ್ದು ನನಗೆ ಕುತೂಹಲದ ವಿಷಯ ಆದರೆ ಇದನ್ನೆಲ್ಲಾ ಹೇಳುವಾಗ ಅದರ ನೋವನ್ನುಣ್ಣುತ್ತಿದ್ದ. ಹಿಪ್ನಾಟಿಸಂ ಮುಖಾಂತರ ಕೆಲವು ಮಾನಸಿಕ ಜನ್ಯ ಖಾಯಿಲೆಗಳನ್ನು ಗುಣಪಡಿಸುವ ಸಾಧ್ಯತೆಯ ಬಗ್ಗೆ ಆಗತಾನೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೇರುವ ಪ್ರಯತ್ನದಲ್ಲಿದ್ದ ಆ ವೈದ್ಯರ ಮಾತುಗಳು ನನ್ನನ್ನು ಆ ಕಡೆಗೆ ಬಲವಾಗಿ ಸೆಳೆಯಿತು. ಅಂತೂ ಒಂದು ಶನಿವಾರ ಮತ್ತೊಮ್ಮೆ ಪ್ರಯೋಗ ಮಾಡಿ ತೋರಿಸಲು ಆ ವೈದ್ಯರನ್ನು ಒಪ್ಪಿಸಿ ನಾವೆಲ್ಲ ಆ ಶನಿವಾರಕ್ಕಾಗಿ ಕಾಯುತ್ತಾ ಕುಳಿತೆವು.
ರಾತ್ರಿ ಹತ್ತೂವರೆಯ ಸುಮಾರಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಅವರ ಕ್ಲೀನಿಕ್ ಸೇರಿ ಮುಂದಿನ ಶಟರ್ ಮುಚ್ಚಿದೆವು.. ವೈದ್ಯರು ನಮ್ಮನ್ನೆಲ್ಲ ಮಾತನಾಡಿಸಿ ೧೦-೧೫ ನಿಮಿಷ ಹಿಪ್ನಾಟಿಸಂ ಬಗ್ಗೆ ಸಣ್ಣ ವಿವರಣೆಯೊಂದಿಗೆ ಪ್ರಾರಂಭಿಸಿದರು. ಹಿಪ್ನಾಟಿಸಂ ಗೆ ಒಳಗಾಗುವ ಇಚ್ಚೆಯಿದ್ದವರನ್ನು ಒಂದೆಡೆ ಸಾಲಾಗಿ ನಿಲ್ಲಿಸಿ, ಅವರಿಗೆ ಮಾನಸಿಕ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ಬರೆದುಕೊಂಡರು. ಚಂಚಲತೆ ಮನಸಿನವರು ಮತ್ತು ಹೆಚ್ಚು ಮಾನಸಿಕ ಏಕಾಗ್ರತೆಯಿರುವವರು ಈ ಹಿಪ್ನಾಟಿಸಂಗೆ ಒಳಗಾಗುವುದಿಲ್ಲ ಎಂದು ತಿಳಿಸಿ ಅಂತಹವರನ್ನು ಗುರುತಿಸಿ ತಾನೆ ಹಿಂದಕ್ಕೆ ಕರೆಯುತ್ತೇನೆಂದರು. ಸಾಧಾರಣ ಹಿಪ್ನಾಟಿಸಂ (ವೈದ್ಯ ಭಾಷೆಯಲ್ಲಿ ಏನೋ ಹೇಳಿದ ನೆನಪು ಈಗ ಉಳಿದಿಲ್ಲ) ಪ್ರಯೋಗಕ್ಕೆ ಸಣ್ಣದೊಂದು ಪ್ರಕಾಶಮಾನವಾದ ಕೆಂಪು ದೀಪವನ್ನುರಿಸಿ ಮಿಕ್ಕೆಲ್ಲ ದೀಪಗಳನ್ನು ಆರಿಸಿ ಸಂಪೂರ್ಣ ಕತ್ತಲನ್ನು ಮಾಡಿ ಎಲ್ಲರನ್ನು ಬಲಗೈಯನ್ನು ಭೂಮಿಗೆ ಸಮಾನಾಂತರವಾಗಿ ನೇರವಾಗಿ ಮೇಲೆತ್ತಿ ಹಿಡಿದು ದೀಪವನ್ನೆ ನೋಡುವಂತೆ ಸೂಚಿಸಿದರು. ತದೇಕ ಚಿತ್ತದಿಂದ ಏಕಾಗ್ರತೆಯಿಂದ ಆ ದೀಪವನ್ನೆ ನೋಡುತ್ತಿದ್ದರೆ ಆ ದೀಪವೇ ದೊಡ್ಡದಾಗಿ ಮೇಲೆದ್ದು ಬಂದಂತೆ ನನಗೆ ಭಾಸವಾಗತೊಡಗಿತು. ವೈದ್ಯರ ಧ್ವನಿಯೊಂದನ್ನು ಬಿಟ್ಟು ಬೇರೇನೂ ನನಗೆ ಕೇಳಿಸುತ್ತಿರಲಿಲ್ಲ. ವೈದ್ಯರು ಈಗ ನಾನು ೧ ರಿಂದ ೧೦೦ ರವರೆಗೆ ಅಂಕಿಗಳನ್ನು ಎಣಿಸುತ್ತಾ ಹೋಗುತ್ತೇನೆ ನಾನು ಎಣಿಸುತ್ತಾ ಹೋದಂತೆಲ್ಲ ಕೈಭಾರವಾದಂತೆ ಭಾಸವಾಗುತ್ತಾ ಹೋಗುತ್ತದೆ ಮತ್ತು ನಿದ್ರೆ ಆವರಿಸುತ್ತಾ ಹೋಗುತ್ತದೆ ಆರಾಮವಾಗಿ ನಿದ್ರಿಸಿ ಎಂದು ಆದೇಶವಿತ್ತರು. ಹೌದು ನನಗೂ ೨೫ರವರೆಗೆ ಎಣಿಸುವಷ್ಟರಲ್ಲಿ ಕೈ ಭಾರವಾದಂತೆನೆಸಿ ಕಣ್ಣುಗಳು ಭಾರವಾಗಿ ನಿದ್ರೆ ಬಂದಂತೆ ಭಾಸವಾಗತೊಡಗಿತು (ಬಹುಶಃ ೧೦ ಘಂಟೆಯನಂತರ ಎಚ್ಚರವಿದ್ದು ಅಭ್ಯಾಸವಲ್ಲದಿದ್ದರಿಂದ ಇರಬೇಕೆಂದು ನನ್ನ ಅನಿಸಿಕೆ). ಏಕೋ ನನ್ನ ಮನಸ್ಸು ಇದ್ದಕ್ಕಿದ್ದಂತೆ ಜಾಗೃತವಾಗಿ ನನ್ನನ್ನು ಹತೋಟಿಗೆ ತೆಗೆದುಕೊಂಡಿತು. ಮುಂದೇನು ಎಂಬ ಕುತೂಹಲ ನನ್ನನ್ನು ಆವರಿಸುವಷ್ಟರಲ್ಲಿ ನಮ್ಮ ಪ್ರಾಧ್ಯಾಪಕರು ಬಂದು ನನ್ನು ಮುಟ್ಟಿ ನೀನು ಇತ್ತ ಬಾ ಎನ್ನುವಂತೆ ಸಂಜ್ಙೆ ಮಾಡಿದರು. ನನ್ನಂತೆಯೆ ಮಂಜು ಸತೀಶ ಕೂಡ ಸಾಲಿನಿಂದ ಹೊರಬಂದರು.
ಪ್ರಯೋಗದಲ್ಲಿ ಉಳಿದವರು ೩ ಜನ, ಸಿದ್ದಲಿಂಗದೇವರು, ನಟರಾಜ ಮತ್ತು ಸಂಜೀವ್ ಬದಾಮಿ. ಕ್ಷಣಗಣನೆ ನಿಲ್ಲುವಷ್ಟರಲ್ಲಿ ಈ ಮೂವರು ಗಾಢ ನಿದ್ರೆಯಲ್ಲಿದ್ದರು ನನಗಂತೂ ಯಾವುದೋ ಚಮತ್ಕಾರವನ್ನು ನೋಡಿದಂತೆ ಭಾಸವಾಗುತ್ತಿತ್ತು ಅವರು ನಿದ್ರಿಸುತ್ತಿದ್ದ ಪರಿ.ವೈದ್ಯರು ಆ ೩ ಜನರಲ್ಲಿ ಸಂಜೀವ ಬದಾಮಿ ಮತ್ತು ನಟರಾಜನನ್ನು ಕೋಣೆಗೆ ಕರೆದೊಯ್ದು ನಾನು ಮುಟ್ಟಿ ನಿಮ್ಮನ್ನು ಮಾತನಾಡಿಸುವವರೆಗೂ ನಿದ್ರಿಸುತ್ತಿರಬೇಕೆಂದು ಆದೇಶವಿತ್ತು ಪ್ರಯೋಗ ಕೋಣೆಗೆ ಬಂದರು. ಈಗ ಸಿದ್ದಲಿಂಗ ದೇವರು ನಮ್ಮ ಪ್ರಯೋಗದ ಸಧ್ಯದ ಬಲಿಪಶು. ಅವನನ್ನು ಮಾತನಾಡಿಸಲು ವೈದ್ಯರು ಆರಂಭಿಸಿದರು ಅವನ ಹೆಸರು ತಂದೆ ತಾಯಿ ಊರು ಮನೆಗಳ ಬಗ್ಗೆ ಕೇಳಿ ಖಚಿತಪಡಿಸಿಕೊಂಡರು. ಪ್ರಾದ್ಯಪಕರನ್ನು ಅವನೊಡನೆ ಮಾತನಾಡಲು ಬಿಟ್ಟರು. ನಮ್ಮ ಪ್ರಾಧ್ಯಾಪಕರು ಅವನನ್ನು ಕಾಲೇಜಿನ ಬಗ್ಗೆ ಅಲ್ಲಿ ಅವನಿಗಿರುವ ಸಮಸ್ಯೆಗಳ ಬಗ್ಗೆ ಮತ್ತು ಆತನಿಗೆ ಹೆಚ್ಚು ಆಸಕ್ತಿಕರ ವಿಷಯಗಳು ಮತ್ತು ತೊಡಕಿರುವ ವಿಷಯಗಳನ್ನು ತೊಂದರೆ ಕೊಡುವ ಸಹಪಾಠಿಗಳ ಬಗ್ಗೆ (ಸದ್ಯ ಆತ ನನ್ನ ಹೆಸರು ಹೇಳಲಿಲ್ಲ ಅದೇ ಸಮಾಧಾನ) ಕೇಳಿ ತಿಳಿದುಕೊಂಡರು.
ವೈದ್ಯರು ಈಗ ಆತನನ್ನು ತಮ್ಮ ಕೆಲವು ಪ್ರಯೋಗಕ್ಕೆ ಒಳಪಡಿಸಲು ಮುಂದಾದರು. ಆತನನ್ನು ಸುಮಾರು ೫ ಅಡಿಗಳಷ್ಟು ಮದ್ಯೆ ಜಾಗವಿರುವ ಎರಡು ಮರದ ಖುರ್ಚಿಗಳ ಮೇಲೆ ಮಲಗುವಂತೆ ಹೇಳಿದರು. ಮತ್ತೆ ಆತನಿಗೆ ಆದೇಶ ಕೊಡುತ್ತಾ ಸಾಗಿದರು. ಈಗ ನೀನು ಕಬ್ಬಿಣದ ತೊಲೆ. ನಿನ್ನ ದೇಹದ ಮೇಲೆ ಭಾರ ಹೇರಲಾಗುತ್ತೆ ಎಂದು ತಿಳಿಸಿದರು. ತಕ್ಷಣವೇ ಆತ ಜೋರಾಗಿ ಉಸಿರೆಳೆದು ಕೊಳ್ಳುತ್ತಾ ತನ್ನ ದೇಹವನ್ನು ಸೆಟೆಸಿಕೊಂಡ, ನಮ್ಮಲ್ಲಿ ೩ ಜನರನ್ನು ಆತನ ಮೇಲೆ ಹೇರಿಕೊಂಡೆವು ಆತ ಏನೂ ಆಗದವನಂತಿದ್ದ. ಮತ್ತೂ ಸ್ವಲ್ಪ ಜನ ಒಬ್ಬ ಸಾಮಾನ್ಯ ಮನುಷ್ಯ ತಡೆದು ಕೊಳ್ಳಲಾಗದಷ್ಟು ಭಾರ ಆತನ ಮೇಲೆ ಹೇರಿದೆವು ಆಗಲೂ ಆತ ಜಗ್ಗಲಿಲ್ಲ. ಇನ್ನೂ ಸ್ವಲ್ಪ ಜನ ಕೂರುವ ಅನಿಸಿಕೆಗೆ ವೈದ್ಯರು ತಡೆ ಹಿಡಿದರು. ಅದಕ್ಕೆ ಕಾರಣ ಮಾನಸಿಕ ಶಕ್ತಿ ದೈಹ ಬಲದ ಸಂಪೂರ್ಣ ಪ್ರಯೋಜನ ಪಡೆದರೂ, ದೈಹಿಕ ಶಕ್ತಿಯನ್ನು ಮೀರಿದರೆ ಮಾನಸಿಕ ಬಲ ಆತನಿಗೆ ನೋವು ತರದಿದ್ದರೂ ದೇಹ ತಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. ಉದಾಹರಣೆಗೆ ವಶೀಕರಣಕ್ಕೊಳಪಟ್ಟ ವ್ಯಕ್ತಿಯನ್ನು ನೀನೊಂದು ಕಲ್ಲುಬಂಡೆ ಎಂದು ಜಡಗೊಳಿಸಿ ರಸ್ತೆ ಮದ್ಯೆ ಮಲಗಿಸಿ ಭಾರವಾದ ವಾಹನವೊಂದನ್ನು ಆತನ ಮೇಲೆ ಹರಿಸಿದರೆ ಆತನಿಗೆ ನೋವು ಗೊತ್ತಾಗದಿರಬಹುದು ಆದರೆ ದೇಹ ಅಪ್ಪಚ್ಚಿಯಾಗಿ ಆತ ಸತ್ತು ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.
ಸರಿ ನಮ್ಮ ಮುಂದಿನ ಪ್ರಯೋಗ ನಾಯಿ ಪರೀಕ್ಷೆ! ಗಾಭರಿಯಾಗಬೇಡಿ. (ಸಿದ್ದಲಿಂಗ) ದೇವರನ್ನು ಈಗ ವೈದ್ಯರು ನೀನೀಗ ನಾಯಿ ಹಾಗಾಗಿ ಇಲ್ಲೊಂದು ಕೈಗಡಿಯಾರ ಕಾಣೆಯಾಗಿದೆ ಅದರ ವಾಸನೆ ಹಿಡಿದು ಕೈಗಡಿಯಾರವನ್ನು ಪತ್ತೆ ಹಚ್ಚ ಬೇಕೆಂದರು. ನಮ್ಮ ಪ್ರಾಧ್ಯಾಪಕರು ತಮ್ಮ ಕೈಗಡಿಯಾರವನ್ನು ಬಿಚ್ಚಿ ನನಗೆ ಕೊಟ್ಟು ಮುಚ್ಚಿಡುವಂತೆ ತಿಳಿಸಿದರು. ನಾನು ಅದನ್ನು ಸ್ವಲ್ಪ ಸಮಯ ನನ್ನ ಕೈಗೆ ಕಟ್ಟಿಕೊಂಡೆ ನಂತರ ಅದನ್ನು ಅಲ್ಲೆ ಇದ್ದ ಮೇಜಿನ ಒಳಗೆ ಮುಚ್ಚಿರಿಸಿದೆ. ದೇವರು ಈಗ ನಿಜವಾದ ನಾಯಿಯಂತೆ ಮುಸ ಮುಸ ಮೂಸಿರಿಯಲು ಪ್ರಾರಂಭಿಸಿದ. ನಮ್ಮ ಪ್ರಾಧ್ಯಾಪಕರ ಕೈಯಿನ ವಾಸನೆಯನ್ನು ಅವನಿಗೆ ತೋರಿಸಲಾಯಿತು. ನಿಜದ ನಾಯಿಯಂತೆ ಅವರ ವಾಸನೆಯನ್ನು ಧೀರ್ಘವಾಗಿ ಎಳೆದು ಕೊಂಡ ನಂತರ ಅಲ್ಲೆಲ್ಲ ಹುಡುಕತೊಡಗಿದ (ಸದ್ಯ ಬೊಗಳಲಿಲ್ಲ). ೨ ನಿಮಿಷದ ನಂತರ ನಾನು ಗಡಿಯಾರ ಕಟ್ಟಿದ್ದ ನನ್ನ ಕರವನ್ನೂ ಹುಡುಕಿಕೊಂಡು ಬಂದ ಸ್ವಲ್ಪ ಸಮಯ ನನ್ನ ಕರವನ್ನೆ ಮೂಸಿರಿದು ಬಿಟ್ಟು ಬಿಟ್ಟ. ೪-೫ ನಿಮಿಷದ ನಂತರ ಮೇಜಿನ ಬಳಿ ಬಂದು ನಿಂತ ವೈದ್ಯರನ್ನು ಒಮ್ಮೆ ನೋಡಿದ. ತನ್ನ ಕೈಯನ್ನು ನಾಯಿಯ ಮುಂಭಾಗದ ಕಾಲಿನಂತೆ ಎತ್ತಿ ಆ ಮೇಜಿನ ಖಾನೆಯನ್ನು ಪರಪರನೆ ಕೆರೆದು ನಿಂತ. ನನಗಂತೂ ಇದು ನಾಟಕೀಯವಾಗಿ ತೋರುತ್ತಿತ್ತು ಆದರೂ ನಂಬಲೇ ಬೇಕಾಯಿತು.
ನಮ್ಮ ಮುಂದಿನ ಪ್ರಯೋಗಕ್ಕೆ ಆತನನ್ನು ಕುಳಿತುಕೊಳ್ಳಲು ಹೇಳಿ ಮನಸ್ಸನ್ನು ಮಾತ್ರ ಹೊರಗೆ ಕಳುಹಿಸಿ ನೋಡುವ ಎಂದು ವೈದ್ಯರು ಸಲಹೆಯಿತ್ತರು. ಪ್ರಾರಂಭವಾಯಿತು ಪ್ರಯೋಗ. ಆತನಿಗೆ ಸಲಹೆ ಸೂಚನೆಗಳಿತ್ತ ವೈದ್ಯರು ಆತನನ್ನು ಖುರ್ಚಿಯ ಮೇಲೆ ಕುಳ್ಳಿರಿಸಿದರು. ಈಗ ನಿನ್ನ ಮನಸ್ಸು ನಮ್ಮ ಕೋಣೆಯನ್ನು ದಾಟಿ ಹೊರ ಹೋಗಲಿ ಎಂದರು. ಆತ ತಲೆಯಲ್ಲಾಡಿಸಿದ. ಹೊರಗೆ ಇರುವ ಪಕ್ಕದ ಅಂಗಡಿಯ ಹೆಸರು ಕೇಳಿದರು ಆತ ನಿಖರವಾಗಿ ಅಲ್ಲಿದ್ದ ಅಂಗಡಿಯ ಹೆಸರು ಹೇಳಿದ. ಹಾಗೆಯೆ ಮುಂದೆ ಹೋಗಲು ಸೂಚನೆಯಿತ್ತರು. ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕೇಳಿದಾಗ ಆತ ಅಲ್ಲಿ ನಾಲ್ಕೈದು ಜನ ನಿಂತಿರುವುದಾಗಿ ತಿಳಿಸಿದ. ತಕ್ಷಣ ನಾನು ವೈದ್ಯರಿಗೆ ತಿಳಿಸಿ ಇನ್ನೂ ಮುಂದೆ ಹೋಗಿ ವಾಹನ ನಿಲ್ದಾಣದ ಬಳಿಯಿರುವ ಆಟೋಗಳ ಮಾಹಿತಿ ತಿಳಿಸುವಂತೆ ಕೇಳಿದೆ. ೪ ಆಟೋಗಳು ನಿಂತಿರುವುದಾಗಿ ತಿಳಿಸಿದ. ಆದರೂ ಪರೀಕ್ಷಿಸಬೇಕಿತ್ತು. ಸರಿ ಸತೀಶ್ ಮತ್ತು ಅಶೋಕ್ ಕುಲಕರ್ಣಿ (ನಮ್ಮ ಮತ್ತೊಬ್ಬ ಪ್ರಾಧ್ಯಾಪಕರು) ಶಟರ್ ಜೋರಾಗಿ ಎಳೆದು ತೆಗೆದು ಹೊರಗೆ ಓಡಿದರು ಅವರಿಗೆ ಅಲ್ಲಿನ ಆಟೋಗಳ ನೊಂದಣಿ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುವಂತೆ ತಿಳಿಸಿದೆವು. ಇಲ್ಲಿ ವೈದ್ಯರು ಅಲ್ಲಿನ ಆಟೋಗಳ ಸಂಖ್ಯೆಗಳನ್ನು ಕೇಳುತ್ತಿದ್ದರು. ಅದನ್ನು ನಾವು ಒಂದು ಕಡೆ ಬರೆದಿಟ್ಟುಕೊಂಡೆವು. ಈಗ ದೇವರನ್ನು ಸತೀಶ್ ಮತ್ತು ಅಶೋಕ್ ಯಾವ ಭಾಗದಲ್ಲಿ ಬರುತ್ತಿದ್ದಾರೆಂದು ಕೇಳಿದಾಗ ಶಿಲ್ಪ ಬಾರ್ ಮುಂಭಾಗದಲ್ಲಿ ನಡೆದು ಬರುತ್ತಿದ್ದಾರೆಂದು ತಿಳಿಸಿದ. ಈ ಸಮಯದಲ್ಲಿ ಯಾವುದಾದರೂ ಆಟೋ ಆ ಸ್ಥಳದಿಂದ ಹೊರಟರೆ ಅದರ ಸಂಖ್ಯೆಯನ್ನು ತಿಳಿಸು ಎಂದಾಗ ೨-೩ ನಿಮಿಷಗಳ ನಂತರ ಒಂದು ಆಟೋ ಸಂಖ್ಯೆಯನ್ನು ಹೇಳಿ ಅದರಲ್ಲಿ ಇಬ್ಬರು ಪ್ರಯಾಣಿಕರಿದ್ದಾರೆಂದು ತಿಳಿಸಿದ. ಆತನನ್ನು ಕೆಲವು ವಯಕ್ತಿಕ ಪ್ರಶ್ನೆಗಳನ್ನು ಕೇಳಲು ಮುಂದಾದ ನನ್ನ ಸ್ನೇಹಿತರಿಗೆ ಡಾಕ್ಟರ್ ಆಸ್ಪದವೀಯಲಿಲ್ಲ.
ಹಿಂತಿರುಗಿ ಬರುವಂತೆ ಅವನಿಗೆ ಆದೇಶಿಸಿದ ವೈದ್ಯರು ಅವನನ್ನು ಒಳಗಿನ ಕೋಣೆಗೆ ಕರೆದು ಕೊಂಡು ಹೋದರು. ಹೊರಗೆ ಹೋಗಿದ್ದ ಸತೀಶ್ ಮತ್ತು ಅಶೋಕ್ ತಂದ ಆಟೋ ಸಂಖ್ಯೆಗಳನ್ನು ಕಂಡು ನಾವು ನಿಬ್ಬೆರಗಾಗಿದ್ದೆವು. ಇದ್ದ ನಾಲ್ಕು ಆಟೋ ಸಂಖ್ಯೆಗಳು ನಿಖರವಾಗಿ ಈತ ಹೇಳಿದ್ದ ಸಂಖ್ಯೆಗಳೇ. ಮತ್ತು ಅಲ್ಲಿಂದ ಹೊರಟಿತೆಂದು ಆತ ಹೇಳಿದ ಸಂಖ್ಯೆಯೂ ಸರಿಯಾಗಿತ್ತು ಮತ್ತು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕೂಡ. ನಾನಂತೂ ಮಾನವನ ಮಾನಸಿಕ ಶಕ್ತಿಗೆ ಬೆರಗಾಗಿ ಹೋಗಿದ್ದೆ.
ಅವನನ್ನು ಒಳಗಿನ ಕೋಣೆಗೆ ಕರೆದುಕೊಂಡ ಹೋದ ವೈದ್ಯರು ಆತನಿಗೆ ಇದ್ದ ಒಂದು ಮಾನಸಿಕ ಸಮಸ್ಯೆಗೆ ಪರಿಹಾರ ಸೂಚಿಸಿದರು. ಪ್ರತಿರಾತ್ರಿ ಅವನಿಗೆ ನಿದ್ದೆಯಲ್ಲಿ ಒಬ್ಬ ವ್ಯಕ್ತಿ ದೇವರಂತೆ ಕಾಣಿಸಿಕೊಂಡು ಏನೋ ಹೇಳಿದಂತೆ ಭಾಸವಾಗುತ್ತಿತ್ತು. ಆ ಕ್ಷಣದಲ್ಲಿ ಆತ ತಾನು ಮಲಗಿದ್ದ ಕೋಣೆಯಲ್ಲೆಲ್ಲ ಒದ್ದಾಡಿ ವಸ್ತುಗಳನ್ನೆಲ್ಲ ಕಾಲಲ್ಲಿ ಒದೆದು ಬಿಡುತ್ತಿದ್ದ ಇದರ ಬಗ್ಗೆ ಆತನ ರೂಮಿನಲ್ಲಿದ್ದವರು ನಮಗೆ ತಿಳಿಸಿದ್ದರು. ಅದನ್ನು ವೈದ್ಯರು ಇನ್ನು ನಿನಗೆ ಆ ವ್ಯಕ್ತಿ ಇಂದಿನಿಂದ ಕಾಣಿಸಿಕೊಳ್ಳುವುದಿಲ್ಲ ಎಂದು ಆಣತಿಯಿತ್ತರು. ಸಖೇದಾಶ್ಚರ್ಯವೆಂದರೆ ಇದುವರೆಗೂ ಆ ಸಮಸ್ಯೆ ಅವನಿಗೆ ಮರುಕಳಿಸಿಲ್ಲ.
ಈ ಮಧ್ಯೆ ಸತೀಶ ಮತ್ತು ಅಶೋಕ್ ಹೊರ ಹೋಗಲು ಎಳೆದ ಶಟರ್‍ನ ಜೋರಾದ ಶಬ್ದ ವಶೀಕರಣಕ್ಕೊಳಗಾಗಿದ್ದ ಸಂಜೀವನನ್ನು ಎಚ್ಚರಿಸಿತು ಆತ ಹುಚ್ಚು ಹಿಡಿದವನಂತೆ ನಡೆದುಕೊಳ್ಳತೊಡಗಿದ. ವೈದ್ಯರು ಈಗ ನಿಜಕ್ಕೂ ಗಾಭರಿಯಾಗಿದ್ದರು. ಅವರ ಹಣೆಯಲ್ಲಿ ಬೆವರಿನ ಹನಿಗಳು ಕಾಣಿಸಿಕೊಳ್ಳತೊಡಗಿತು. ಅವನನ್ನು ಮತ್ತೆ ಮರು ಹಿಪ್ನಾಟಿಸಂಗೆ ಒಳಪಡಿಸಿ ನಂತರ ಹಿಪ್ನಾಟಿಸಂ ಸ್ಥಿತಿಯಿಂದ ಹೊರತಂದರು. ನಂತರ ಮಲಗಿದ್ದ ನಟರಾಜನನ್ನು ಹೊರತರಲು ಪ್ರಾರಂಭಿಸಿದರು. ಇಲ್ಲೊಂದು ಸಮಸ್ಯೆ ಶುರುವಾಯಿತು. ಎಷ್ಟೆ ಪ್ರಯತ್ನಿಸಿದರೂ ನಟರಾಜ ತನ್ನ ಮೊದಲ ಸ್ಥಿತಿಗೆ ಬರುತ್ತಿರಲಿಲ್ಲ. ಈಗಂತೂ ಡಾಕ್ಟರ್ ದೇಹದಿಂದ ಬೆವರಿ ಹೆದರಿದ್ದದ್ದು ಸ್ಪಷ್ಟವಾಗಿ ಎಲ್ಲರಿಗೂ ಗೋಚರವಾಗುತ್ತಿತ್ತು. ಸುಮಾರು ಅರ್ಧ ಗಂಟೆಯ ಪ್ರಯತ್ನದ ನಂತರ ಅವನನ್ನು ಯಶಸ್ವಿಯಾಗಿ ಹಿಂತಿರುಗಿ ಸಾಮಾನ್ಯ ಸ್ಥಿತಿಗೆ ಕರೆತಂದು ನಾವೆಲ್ಲರೂ ಮನೆಗೆ ನಡೆದಾಗ ರಾತ್ರಿ ಸುಮಾರು ೨ ಗಂಟೆಯಿರಬಹುದು.
ಇನೊಬ್ಬ ಸ್ನೇಹಿತ ಮುರಳಿ ನಿದ್ದೆಯಲ್ಲಿ ನಡೆದಾಡುತ್ತಿದ್ದ. ಅಕ್ಕನ ಮನೆಯಲ್ಲಿದ್ದವನಿಗೆ ಈ ಸಮಸ್ಯೆಯಿಂದ ಸರಿರಾತ್ರಿಯಲ್ಲಿ ಬೀಗ ತೆಗೆದು ಹೊರಗೆ ಹೋಗುತ್ತಿದ್ದದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಮನೆಯವರು ಅದನ್ನು ತಪ್ಪಿಸಲು ಬಕೆಟ್ ಒಂದರಲ್ಲಿ ನೀರು ತುಂಬಿ ಅದರಲ್ಲಿ ಬೀಗದ ಕೈಗಳನ್ನು ಮುಳುಗಿಸಿಡುತ್ತಿದ್ದರು. ನೀರು ತಾಗಿ ಅವನಿಗೆ ಎಚ್ಚರವಾಗುತ್ತಿತ್ತು ಮತ್ತೆ ಹೋಗಿ ಮಲಗುತ್ತಿದ್ದ. ಈ ಹಿಪ್ನಾಟಿಸಂ ಪ್ರಯೋಗದ ನಂತರ ಮುರಳಿ ನಿದ್ದೆಯಲ್ಲಿ ನಡೆದಾಡುವುದನ್ನು ನಿಲ್ಲಿಸಿದ್ದ. ಹಿಪ್ನಾಟಿಸಂ ವಿಷಯ ಗೊತ್ತಿರದ ಆತನ ಅಕ್ಕ ನಮಗೆಲ್ಲ, ನಮ್ಮ ಮುರಳಿ ಈಗ ನಿದ್ದೆಯಲ್ಲಿ ಎದ್ದು ಓಡಾಡುತ್ತಿಲ್ಲ ಎಂದರೆ ನಾವೆಲ್ಲ ಒಬ್ಬರನ್ನೊಬ್ಬರು ನೋಡಿಕೊಂಡು ಮುಸಿ ಮುಸಿ ನಗುತ್ತಿದ್ದೆವು.ಪ್ರತಿಯೊಂದು ಸಣ್ಣ ವಿಷಯಕ್ಕೂ ಗಾಭರಿಯಾಗುತ್ತಿದ್ದ ತನ್ನ ಸಮಸ್ಯೆ ಪರಿಹರಿಸಿಕೊಳ್ಳಲು ನಟರಾಜನಿಗೆ ಅವಕಾಶ ಸಿಗಲೇ ಇಲ್ಲ.

Thursday, January 22, 2009

'ಮತಾಂತರ ಸತ್ಯದ ಮೇಲೆ ಹಲ್ಲೆ' ಭೈರಪ್ಪ ಮತ್ತು ಗಣೇಶ್

ಮತಾಂತರ ಸತ್ಯದ ಮೇಲೆ ಹಲ್ಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ ಎಲ್ ಭೈರಪ್ಪನವರ ಮಾತಿನ ಧ್ವನಿ ಮುದ್ರಿಕೆಗಾಗಿ http://www.sendspace.com/file/m2127l
ಮತ್ತು
ಶತಾವಧಾನಿ ಗಣೇಶ್ ಅವರ ಮಾತಿಗಾಗಿ
http://www.sendspace.com/file/ketknr

ಹೀಗೊಂದು ಅನುಭವ

ಎಂದಿನಂತೆ ಕಛೇರಿಯಿಂದ ಬಂದವನೆ ಮುಖ ತೊಳೆದು, ಆಡಲು ಹೊರಡುವ ಮುನ್ನ ಮಗನಿಗೆ ಆಟದಿಂದ ಬೇಗ ಬರುವಂತೆ ಸೂಚಿಸಿ ಅಮ್ಮ ಕೊಟ್ಟ ತಿಂಡಿಯನ್ನು ಮುಗಿಸಿ ಬೈಕೇರಿ ಹೊರಟೆ. ಇಂದೇಕೊ ಹೊಸ ಹುಮ್ಮಸ್ಸು ಕಾರಣ ನಿನ್ನೆ ಒಂದೂ ಆಟವನ್ನು ಗೆದ್ದಿರಲಿಲ್ಲ ನನ್ನೊಡನೆ ಜೊತೆಯಾಗಲು ಯಾರೂ ಇಷ್ಟಪಡುತ್ತಿರದಿದ್ದುದು ಕಾರಣವಿರಬಹುದು. ಸ್ವಲ್ಪ ವೇಗವಾಗಿಯೇ ಗಾಡಿ ಓಡಿಸುತ್ತಿದ್ದೆನೆನೋ? ಆಗ ಕಣ್ಣಿಗೆ ಬಿದ್ದದ್ದು ಕಾರ್ಖಾನೆಯ ಆಟದ ಮೈದಾನಕ್ಕೆ ಹೋಗುವ ದಾರಿಯಲ್ಲಿರುವ ದೊಡ್ಡ ಪ್ರದೇಶದಲ್ಲಿರುವ ಏಕಾಂಗಿ ಮರದ ಬಳಿ ಸುಮಾರು ೪-೫ ಜನ ಏನೋ ಚಟುವಟಿಕೆ ನಡೆಸುತ್ತಿದ್ದರು ಕುತೂಹಲದಿಂದ ಹತ್ತಿರ ಹೋದವನಿಗೆ ಕಂಡದ್ದು ಅವರು ಯಾವುದೋ ಹಕ್ಕಿ ಹಿಡಿಯಲು ಅಥವ ಅಳಿಲಿಗೆ ಬಹುಶಃ ಬಲೆ ಒಡ್ಡುತ್ತಿರಬಹುದೆಂದು ಊಹಿಸಿದ್ದೆ.
ಕೆಲವು ತಿಂಗಳ ಹಿಂದಷ್ಟೆ ವೃತ್ತ ಪತ್ರಿಕೆಗಳಲ್ಲಿ ಅಳಿಲು ಹಿಡಿಯುವವರ ಬಗ್ಗೆ ಎಚ್ಚರಿಸಿವ ಲೇಖನಗಳು ಪ್ರಕಟಗೊಂಡಿದ್ದವು. ನನ್ನೊಳಗಿನ ಪ್ರಾಣಿಪ್ರಿಯ (ಮಾಂಸಾಹಾರವಲ್ಲ) ಎಚ್ಚರಗೊಂಡು ನನ್ನ ಕೈಲಾದ ಅಳಿಲು ಸೇವೆ ಮಾಡಲು ಹಾತೊರೆದಿದ್ದ. ಅವರನ್ನು ಕರೆದು ಏನ್ಮಾಡ್ತ ಇದೀರ ಎಂದು ಪ್ರಶ್ನಿಸಿದ ನನ್ನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಕೆಲವರು ಸುಮ್ಮನೆ ನಿಂತರು ಇನ್ನು ಕೆಲವರು ನನ್ನನ್ನು ಗಮನಿಸದವರಂತೆ ಮರದ ಕೊಂಬೆಗಳ ಮೇಲೆನಿಂದ ಪ್ಲಾಸ್ಟಿಕ್ನ ಸಣ್ಣ ದಾರಗಳನ್ನಿ ಇಳಿಬಿಟ್ಟು ಬಲೆಯಂತೆ ಹರಡಲು ಅಣಿಯಾಗುತ್ತಿದ್ದರು. ನಾನು ಅವರನ್ನು ಎಚ್ಚರಿಸಿದೆ ಸ್ವಲ್ಪ ಸಣ್ಣ ದನಿಯಲ್ಲೆ ಅವರಲ್ಲೊಬ್ಬ ಬಂದವನು ಏನಿಲ್ಲ ಸಾರ್ ನೀವು ಹೋಗಿ ಅಂದ. ಇಲ್ಲಪ್ಪ ಏನ್ ಮಾಡ್ತ ಇದೀರ ಹೇಳೀ ನಿಮ್ಮನ್ನು ನೋಡಿದ್ರೆ ಯಾವ್ದೋ ಅಳಿಲಿಗೋ ಮೊಲಕ್ಕೊ ಅಥವ ಹಕ್ಕಿಗೋ ಬಲೆ ಬಿಡ್ತಾ ಇದೀರ ಎಂದು ದಬಾಯಿಸಿದೆ. ಅದರಲ್ಲೊಬ್ಬ ನಿಮ್ಗ್ಯಾಕ್ರಿ ನಿಮ್ ಕೆಲ್ಸ ನೋಡ್ಕೋ ಹೋಗಿ ಎಂದ. ನಾನು ಅದನ್ನೆ ಮಾಡ್ತಾ ಇರೋದು ಎಂದು ಎಚ್ಚರಿಸಿ ನನ್ನ ಮೊಬೈಲಿಂದ ಕಾರ್ಖಾನೆಯ ಸೆಕ್ಯುರಿಟಿಯವರಿಗೆ ಮತ್ತು ಪೋಲೀಸ್ನವರಿಗೆ ಫೋನಾಯಿಸುತ್ತೆನೆಂದು ಹೆದರಿಸಿದೆ. ಈ ಸಮಯಕ್ಕೆ ಅವರು ಹರಡುತ್ತಿದ್ದ ಬಲೆಯನ್ನು ಬಿಚ್ಚಿದರು. ಅಷ್ಟರಲ್ಲಿ ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಬಂದು ನಾವು ಇದೆ ಏರಿಯಾದವ್ರು ನಮ್ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ ಎಂದ. ಸರಿ ಕುಡುಕನ ಬಡಬಡಿಕೆಗೆ ನಾನೇಕೆ ಬೆಲೆ ಕೊಡಬೇಕೆಂದು ತೀರ್ಮಾನಿಸಿದೆ. ನಡೆದು ಹೋಗುತ್ತಿದ್ದ ಕೆಲವರು ಸ್ವಲ್ಪ ಹೊತ್ತು ನಿಂತು ತಮ್ಮ ಪಾಡಿಗೆ ಹೋಗುತ್ತಿದ್ದರು. ಅಷ್ಟರಲ್ಲಿ ಒಬ್ಬ ಸಣಕಲ ಸ್ವಲ್ಪ ವಯಸ್ಸಾದ ವ್ಯಕ್ತಿ ತೊಡರುತ್ತ ತನ್ನ ಕಾಲುಗಳನ್ನು ಎಳೆದು ಹಾಕುತ್ತಾ ಬಂದ. ಅವನನ್ನು ನೋಡಿದರೆ ಲಕ್ವ ಹೊಡೆದ ವ್ಯಕ್ತಿಯೆಂದು ನನಗೆ ಗೊತ್ತಾಯಿತು. ಬಂದವನೆ ಏಯ್ ನಿಂಗೇನೊ ಮುಚ್ಕೊಂದು ಹೋಗು ನಾನ್ಯಾರು ಅಂತ ನಿಂಗೆ ಗೊತ್ತಿಲ್ಲ ಎಂದು ಉಸಿರು ಬಿಡಲಾಗದಿದ್ದರೂ ಅಬ್ಬರಿಸುವವನಂತೆ ನಟಿಸಿದ. ನಾನೂ ಕೂಡ ಅವನೊಡನೆ ವಾಗ್ವಾದಕ್ಕಿಳಿದೆ. ಈ ಸಮಯಕ್ಕೆ ಸರಿಯಾಗಿ ಕುಡಿದು ತೂರಾಡುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೋಡು ನಮ್ಮ ತಂಟೆಗೆ ಬಂದ್ರೆ ನಿಂಗೆ ಒಳ್ಳೆದಾಗಲ್ಲ ನೋಡು, ಆಮೇಲೆ ಸುಮ್ನೆ ನಮ್ಮನ್ನ ಬಯ್ದ ಅಂಥ ಪೋಲೀಸ್ಗೆ ದೂರು ಕೊಡ್ತಿವಿ ಅಂತ ಜೇಬಿನಿಂದ ಒಂದು ವಿಸಿಟಿಂಗ್ ಕಾರ್ಡ್ ತೆಗೆದ, ಏನಪ್ಪ ಅದು ಅಂದ್ರೆ ನೋಡು ನಾವು ಇದರವ್ರು ಆಮೇಲೆ ನಿಂಗೆ ಅಶ್ಟೆ ಎಂಬ ಎಚ್ಚರಿಕೆ ಮತ್ತೊಮ್ಮೆ ಬಂತು ಏನೆಂದು ಕಾರ್ಡ್ ತೆಗೆದು ನೋಡಿದರೆ ಅಂಬೇಡ್ಕರ್ ಫೋಟೊ ಇರುವ ದಲಿತ ಸಂಘರ್ಷ ಸಮಿತಿಯ ಪ್ರಾದೇಶಿಕ ಸಮಿತಿಯ ಅಧ್ಯಕ್ಷರ ವಿಸಿಟಿಂಗ್ ಕಾರ್ಡ್. ನನಗೆ ಏನು ಮಾಡ್ಬೇಕೆಂದು ಒಮ್ಮೆಗೆ ಹೊಳೆಯಲಿಲ್ಲ. ನಮ್ಮನ್ನ ಸುಮ್ಸುಮ್ನೆ ಬಯ್ದ ಹೊಡೆದ ಅಂತ ನಾವೇ ಹೇಳ್ತಿವಿ ಎಂದು ಮೆಲ್ಲಗೆ ಉಸುರಿದ. ಅದರಲ್ಲೊಬ್ಬ ಸಾರ್ ನಾವು ಇಲ್ಲಿ ಬಾವಲಿ ಹಿಡಿತಾ ಇದಿವಿ ರಾತ್ರಿ ಊಟಕ್ಕೆ ಎಂದ.
ನನಗೆ ಈಗಾಗಲೆ ಇಂತಹ ಪ್ರಸಂಗಗಳಲ್ಲಿ ಕಾನೂನು ನನ್ನ ನೆರವಿಗೆ ಬರುವುದಿಲ್ಲವೆಂಬ ಅರಿವಿತ್ತು. ಎನಾದರಾಗಲಿ ಎಂದು, ಸರಿ ನಡಿಯಪ್ಪ ಅವರಿಗೆ ಫೋನ್ ಮಾಡೋಣ ನಾನು ಅದರ ಸದಸ್ಯನೆ ಎಂದು ಭಂಡ ಧೈರ್ಯದಿಂದ ಸ್ವಲ್ಪ ಏರಿದ ದನಿಯಲ್ಲೆ ಹೇಳಿದೆ. ಎಲ್ಲರೂ ತಮ್ಮ ತಮ್ಮ ಮುಖಗಳನ್ನು ನೋಡಿ ಕೊಂಡು ಅಲ್ಲಿಂದ ಹೋಗಿ ಬಿಟ್ಟರು. ಸರಿ ಇಷ್ಟಕ್ಕೆ ಮುಗೀತಲ್ಲ ಎಂದು ಕೊಳ್ಳುತ್ತಾ ಆಟದ ಮೈದಾನದ ಕಡೆ ಹೊರಟೆ. ಇಂದು ಭರ್ಜರಿಯಾಗಿ ಆಡುತ್ತಾ ೩ ಆಟಗಳನ್ನು ಗೆದ್ದಿದ್ದೆ.
೪ನೇ ಆಟಕ್ಕೆ ಸುಸ್ತಾಗಿ ಬೇರೆಯವನಿಗೆ ಆಡಲು ಬಿಟ್ಟು ಅಲ್ಲೆ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ತುಂಬಾ ಹೊತ್ತಿನಿಂದ ಅಲ್ಲಿ ಆಟೋವೊಂದು ನಿಂತಿತ್ತು. ಅದರಿಂದ ಇಳಿದ ಚಾಲಕ ನೋಡುವುದಕ್ಕೆ ಒರಟನಂತಿದ್ದವನು ನನ್ನ ಬಳಿ ಬಂದು ನಿಮ್ಮನ್ನ ರಾಜಣ್ಣ ಕರೀತಾ ಇದನೆ ಎಂದ ನನಗೆ ಅಲ್ಲವೆಂದು ನಾನು ಸುಮ್ಮನೆ ಕುಳಿತಿದ್ದೆ. ಏಕೆಂದರೆ ನಾನಾಗಲೆ ಆಟದ ಹುಮ್ಮಸ್ಸಿನಲ್ಲಿ ಈ ಘಟನೆಯನ್ನು ಮರೆತಿದ್ದೆ. ಮತ್ತೊಮ್ಮೆ ಆತ ನನ್ನನ್ನು ಕುರಿತು ನಿಮ್ಗೆ ಸಾರ್ ಬನ್ನಿ ಎಂದ ನನಗೆ ಅರ್ಥವಾಗಲಿಲ್ಲ ಯಾವ ರಾಜಣ್ಣನಪ್ಪ ನಾನ್ಯಾಕೆ ಎಲ್ಲಿಗೆ ಬರ್ಬೇಕು ಎಂದೆ. ಅದೇ ಸಾರ್ ಡಿ ಎಸ್ ಎಸ್ ಅಧ್ಯಕ್ಷರ ಭಾಮೈದ ರಾಜಣ್ಣ ಅಂದ ನಾನ್ಯಾಕಪ್ಪ ಬರ್ಬೇಕು ಎಂದು ಕೇಳುತ್ತಿದ್ದವನಿಗೆ ಕಾಣಿಸಿದ್ದು. ಬಡಕಲಾದ ಲಕ್ವ ಪೀಡಿತ ವ್ಯಕ್ತಿ ಆಕ್ರೋಶದಿಂದ ಇಳಿದು ತನ್ನೆಲ್ಲ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾ ನನ್ನೆಡೆಗೆ ಬಂದ ಅವನ ಅವತಾರ ನನಗೆ ನಗು ತರಿಸುತ್ತಿತ್ತು ಸರಿಯಾಗಿ ಮಾತನಾಡಲೂ ಆಗದವ ನನನ್ನು ಕೊಂದು ಬಿಡುವವನಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ. ಅವನ ಆರೋಪವಿಷ್ಟೆ, ನೀನು ನನಗೆ ಬಲೆ ಹರಡಲು ತಡೆದೆ, ನನಗೆ ಎದುರು ಮಾತನಾಡಿದೆ, ನನ್ನನ್ನು ಬಯ್ದೆ ನಾನು ದ ಸಂ ಸ ಯ ಅಧ್ಯಕ್ಷನ ಭಾಮೈದ ಎಂದು ಕಷ್ಟಪಟ್ಟು ಕಿರುಚಿದ. ಜಾಗ ನಿಂದಲ್ಲ ಕಾರ್ಖಾನೆದು ನಾವು ಸ್ಥಳೀಯರು ಏನ್ಬೇಕಾದ್ರು ಮಾಡ್ಕೋತಿವಿ ಎಂದು ಒಂದೆ ಸಮನೆ ಒದರಲಾರಂಭಿಸಿದ. ನಾನು ಆತನಿಗೆ ಯಾವುದೇ ಅವಾಚ್ಯ ಶಬ್ದ ಬಳಸದಿದ್ದನ್ನು ಅವನಿಗೂ ಅವನ ಸ್ನೇಹಿತರಿಗೂ ತಿಳಿಸಿ ಅವನ ಜೊತೆಯಿದ್ದ ಇನ್ನೂ ಕೆಲವರು ಅಲ್ಲಿ ನಡೆದ ಘಟನೆಗೆ ಸಾಕ್ಷಿಯಿದ್ದ ಅವನ ಜೊತೆಯವರಿಗೆ ತಿಳಿ ಹೇಳಿದಾಗ ಆತನಿಗೆ ಸುಮ್ಮನಾಗದೆ ಬೇರೆ ದಾರಿಯಿರಲಿಲ್ಲ. ಅಷ್ಟರಲ್ಲಿ ನನ್ನ ಜೊತೆ ಆಡುತ್ತಿದ್ದ ನನ್ನ ಸ್ನೇಹಿತರೆಲ್ಲ ಸಂದರ್ಭದ ಗಂಭೀರತೆ ಅರಿತು ಅವನಿಗೆ ಬಯ್ದು ನೀವೂ ಅಲ್ಲಿ ಹಕ್ಕಿ ಪ್ರಾಣಿ ಏನೂ ಹಿಡಿಯುವಂತಿಲ್ಲ ಎಂದು ದಬಾಯಿಸಿ ಕಳಿಸಿದರು. ನನ್ನೊಡನೆ ಆಡುತ್ತಿದ್ದವರಲ್ಲಿ ಆ ಊರಿನ ಭಾರಿ ಕುಳಗಳಿದ್ದುದರಿಂದಲೋ ಎನೋ ಆತ ಗೊಣಗುತ್ತಾ ಆಟೋ ಕಡೆಗೆ ನಡೆದು ಹೋದ. ಆಟೋದಲ್ಲಿ ಕೂರುವ ಮುನ್ನ ಇದೇ ದಾರಿಯಲ್ಲಿ ಬರ್ತಿಯ ನೋಡ್ಕೋತಿನಿ ಎಂದು ಬಡಬಡಿಸುತ್ತಾ ಹೋದ.

Monday, December 29, 2008

ನಿಮ್ಮದು ಸ್ನೇಹವೋ? ಸಂಭಂದವೊ?

ಹೌದಲ್ಲ! ಮನುಷ್ಯನಿಗೆ ಒಂಟಿಯಾಗಿ ಬದುಕೋದಿಕ್ಕೆ ಸಾಧ್ಯವೇ ಇಲ್ಲ. ಸಹಜವಾಗಿಯೇ ಆತ ಇನ್ನೊಂದು ಜೀವಿಯೊಂದಿಗೆ ಸ್ನೇಹ ಹಸ್ತವನ್ನು ಚಾಚುತ್ತಾನೆ. ಕೆಲವೊಮ್ಮೆ ವ್ಯಾವಹಾರಿಕವಾಗಿಯೇ ಶುರುವಾಗುವ ಸಂವಹನ ನಂತರದ ದಿನಗಳಲ್ಲಿ ಪರಿಚಯ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಆತ್ಮೀಯತೆಯ ಬಳ್ಳಿಯೊಂದು ಟಿಸಿಲೊಡೆದು ಇಬ್ಬರ ನಡುವೆ ಹಬ್ಬಲು ಪ್ರಾರಂಭಿಸುತ್ತದೆ.
ಆರಂಭದಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಸ್ನೇಹ ಕ್ರಮೇಣ ಮನದ ಭಾವನೆಗಳನ್ನು ಕೇಳುವ ಸಂಗಾತಿಯೊಬ್ಬನಿಗಾಗಿ ಅಥವಾ ಒಲುಮೆಯನ್ನು ಹಂಚಿಕೊಳ್ಳುವ ಆಪ್ತ ಮನಸ್ಸಿಗಾಗಿ ಚಡಪಡಿಸತೊಡಗಿತ್ತದೆ. ಅದೆಲ್ಲಿಂದಲೋ ಭಾವನೆಗಳು ಉಕ್ಕಿ ಉಕ್ಕಿ ಬರಲು ಪ್ರಾರಂಭಿಸಿ ಅವನ್ನೆಲ್ಲಾ ಹೇಳಿಕೊಳ್ಳುತ್ತಾ ತನ್ನೊಡಲ ಸಂತಸ ದುಗುಡ-ದುಮ್ಮಾನಗಳನ್ನು ಬರಿದು ಮಾಡಿಕೊಳ್ಳುತ್ತಾನೆ. ಎದುರಿನ ವ್ಯಕ್ತಿಗೂ ಸ್ಪಂದಿಸುವ ಮನಸ್ಥಿತಿ ಇದ್ದರೆ ಸ್ನೇಹದ ಬಳ್ಳಿಗೆ ಆಗ ವಸಂತಕಾಲ.
ನಾವು ಸಾಕಷ್ಟು ಕಾಲ ಇನ್ನೊಬ್ಬ ವ್ಯಕ್ತಿಯೆಡೆಗೆ ಆಕರ್ಷಿತರಾಗುತ್ತೇವೆ. ಪರಸ್ಪರರು ಭಾವನೆಗಳನ್ನು ಹಂಚಿಕೊಳ್ಳುವುದು. ಒಟ್ಟಿಗೆ ಅಡ್ಡಾಡುವುದು, ಕೆಲ ಸಮಯ ಕಾಣದಿದ್ದರೆ ಜೀವ ಚಡಪಡಿಕೆಯಿಂದ ತಲ್ಲಣಿಸಿ ಹೋಗುವುದು. ಇಬ್ಬರ ಉಡುಗೊರೆ ವಿನಿಮಯ ಇವೆಲ್ಲಾ ನಡೆಯುತ್ತ ಸ್ನೇಹದ ಬಳ್ಳಿಯಲ್ಲಿ ಆತ್ಮೀಯತೆ, ಪ್ರೀತಿಯ ಕಾಯಿ ಬಿಟ್ಟು ತನ್ನಷ್ಟಕ್ಕೆ ಬಲಿಯತೊಡಗುತ್ತದೆ.
ಸ್ನೇಹವೆನ್ನುವುದು ಸಮಾನ ಮನಸ್ಕರ ನಡುವೆ ಕುಡಿಯೊಡೆಯುವ ಸಂದರ್ಭದಲ್ಲಿಯೇ ಅಲ್ಲಿ ಲಿಂಗಭೇದ ಮೆಲ್ಲನೆ ತಲೆ ಹಾಕುತ್ತದೆ. ಈ ಸ್ನೇಹ ವಿಶ್ವಾಸಗಳು ಗಂಡು ಹೆಣ್ಣಿನ ನಡುವೆ ಮುಂದುವರಿಯುತ್ತಿದ್ದಂತೆ ಅದೆಲ್ಲಿಂದಲೋ ಸ್ನೇಹದ ನಡುವೆ ಧುತ್ತನೆ ಆಗಮನವಾಗಿ ಬಿಡುವ ಒಂದು "ಭಾವನೆ"ಯಿದೆಯಲ್ಲ ಅದು ಸ್ನೇಹವನ್ನು ಉಳಿಸಲೂ ಬಹುದು ಇಲ್ಲವೆ ಇಬ್ಬರ ನಡುವೆ ದುರಭಿಪ್ರಾಯಗಳು ಬಂದಂತಾಗಿ ಸ್ನೇಹದ ಬಳ್ಳಿ ಸೊರಗಲೂ ಬಹುದು. ಕೆಲವು ಸಂದರ್ಭಗಳಲ್ಲಿ ಗಂಡು ಹೆಣ್ಣಿನ ಆತ್ಮೀಯತೆ ನಡುವೆ ಕಾಣಿಸಿಕೊಳ್ಳುವ ಈ ಒಂದು ಮನಸ್ಥಿತಿಗೆ ಗೆಳೆತನ ಸಿಲುಕಿಕೊಂಡಾಗ ಆ ಸ್ನೇಹ ಮುರಿದು ಬಿಡುವುದುಂಟು.
ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಸುಮತಿಯ ಪ್ರಕಾರ, "ಗಂಡು ಹೆಣ್ಣಿನ ನಡುವೆ ಬರೀ ಸ್ನೇಹ ನಿರಂತರವಾಗಿರಲು ಸಾಧ್ಯವೇ ಇಲ್ಲ. ಅಲ್ಲಿ ಕಾಲಕ್ರಮದಲ್ಲಿ 'ಸಂಬಂಧ' ಮೈದಳೆಯಲೇ ಬೇಕು." ಇದು ಸುಮತಿಯೊಬ್ಬಳ ಅನಿಸಿಕೆಯಲ್ಲ. ಹಲವರ ಅಭಿಪ್ರಾಯವೂ ಇದೇ ಆಗಿದೆ. ಯಾಕೆಂದರೆ ಪರಸ್ಪರ ವಿರುದ್ಧ ಲಿಂಗಿಗಳ ಆಕರ್ಷಣೆ ನಿನ್ನೆ ಮೊನ್ನೆಯದಲ್ಲ. ಈ ಭೂಮಿಯ ಮೇಲೆ ಜೀವ ಸಂಕುಲ ಆರಂಭವಾದಂದಿನಿಂದಲೇ ಅದರ ವಾಸನೆಯಿದೆ.
ಒಂದು ಒಳ್ಳೆಯ ಪರಿಚಯದಿಂದ ಚಿಗುರುವ ಸ್ನೇಹ, ಪ್ರೇಮ ತದನಂತರದಲ್ಲಿ ದೈಹಿಕ ಸಂಪರ್ಕವನ್ನು ಬಯಸುವ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚು. "ಅದರಲ್ಲಿ ಮುಜುಗರ ಪಡುವಂಥದ್ದೇನಿಲ್ಲ" ಎನ್ನುವುದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ದಿನೇಶ್ ಅಭಿಪ್ರಾಯ. ಸ್ನೇಹದ ನಡುವೆ ಪ್ರೀತಿಯು ಮೊಳಕೆಯೊಡೆದು ಅದು ಪ್ರೀತಿಯಾಗಿ-ಕಾಮವಾಗಿ ಪರಿವರ್ತನೆಯಾಗುವುದು ಸೃಷ್ಟಿಯ ಸಹಜ ಕ್ರಿಯೆ ಎನ್ನುತ್ತಾರೆ ಅವರು.
"ಪ್ರೀತಿಯ ನಡುವೆ ಸ್ನೇಹವಿರಲೇ ಬೇಕು, ಆದರೆ ಸ್ನೇಹದ ನಡುವೆ ಪ್ರೀತಿ ಇದ್ದೇ ಇರುತ್ತದೆನ್ನುವ ಸಂಭವ ತೀರಾ ಕಡಿಮೆ" ಎಂಬುದು ಹಲವರ ಅನಿಸಿಕೆ. ಸಹಜವಾಗಿ ಸಹೋದ್ಯೋಗಿಗಳ ನಡುವೆ ಪರಿಚಯ, ಸ್ನೇಹ ಉಂಟಾಗುತ್ತದೆ. ಸ್ನೇಹ ಸಲುಗೆಯತ್ತ ವಾಲುತ್ತದೆ. ಇಬ್ಬರ ಮನಸ್ಥಿತಿ ಒಂದೆ ಹದ ದಲ್ಲಿದ್ದರೆ (ಅಥವಾ ಆ ಹಂತಕ್ಕೆ ಬರುತ್ತದೆ) ಅಲ್ಲಿ ಪ್ರೀತಿ ಬರಲು ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ.
ಮನಃಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅನಘಾ ಹೇಳುವ ಪ್ರಕಾರ, "ನನಗೆ ಮಹಿಳೆಯರೊಂದಿಗೆ ಸ್ನೇಹ ಬೆಳೆಸುವುದಕ್ಕಿಂತ ಪುರುಷರೊಂದಿಗೆ ಗೆಳೆತನ ಮಾಡುವುದು ಅತ್ಯಂತ ಸಹಜವಾಗಿ ಖುಷಿ ಅನ್ನಿಸುತ್ತದೆ. ಯಾಕೆಂದರೆ ಪುರುಷ ಹೆಚ್ಚು ವಾದ ಮಾಡದೇ ನಾವು ಹೇಗಿರುತ್ತೇವೆಯೋ ಹಾಗೇ ಒಪ್ಪಿಕೊಳ್ಳುತ್ತಾನೆ ಎನ್ನುವುದು ನನ್ನ ಅನುಭವ." ಅನ್ನುತ್ತಾರೆ.
ನಿತೀಶ್ ಹೇಳುವುದು ಹೀಗೆ: "ಪುರುಷ ಮತ್ತು ಸ್ತ್ರೀ ಕೇವಲ 'ಬೇಸಿಕ್ ಇನ್ಸ್ಟಿಂಕ್ಟ್'ಗೋಸ್ಕರವೇ ಸ್ನೇಹಿತರಾಗುತ್ತಾರೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ಹಾಗಂತ ನನಗೆ ಮಹಿಳೆಯರೇ ಪುರುಷ ಸ್ನೇಹಿತರಿಗಿಂತ ಹೆಚ್ಚು ಕ್ಲೋಸ್ ಆಗಿರೋದು. ಪುರುಷನೊಬ್ಬ ತನ್ನ ಸ್ನೇಹಿತನೊಂದಿಗೆ ಹಂಚಿಕೊಳ್ಳಲಾಗದ ಭಾವನೆಗಳನ್ನು ತನ್ನ ಗೆಳತಿಯೊಂದಿಗೆ ಇನ್ನೂ ಚೆನ್ನಾಗಿ ಹಂಚಿಕೊಳ್ಳಬಲ್ಲ."
ದೆಹಲಿ ವಿಶ್ವವಿದ್ಯಾಲಯದ ಮನಃಶಾಸ್ತ್ರದ ಪ್ರೊಪೆಸರೊಬ್ಬರ ಪ್ರಕಾರ, "ಗಂಡು ಹೆಣ್ಣಿನ ನಡುವಿನ ಸ್ನೇಹ ಸಹಜವಾದದ್ದು. ನೀವು ಒಬ್ಬರನ್ನು ಇಷ್ಟಪಡುತ್ತೀರಿ. ಅದರಿಂದಾಗಿ ಅವರೊಂದಿಗೆ ನಿಮ್ಮ ಮನದ ಭಾವನೆಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತೀರಿ. ಇದು ಕೊನೆಗೆ ಇಬರ ನಡುವೆ ಮದುವೆ ಹಂತಕ್ಕೆ ಬಂದರೆ ಸರಿ. ಆದರೆ ಪರಸ್ಪರರ ಉತ್ತಮ ಸ್ನೇಹದ ನಡುವೆ ಹುಟ್ಟಿಕೊಳ್ಳುವ 'ಪ್ರೀತಿ'-'ಸಂಬಂಧವಾಗಿ ಮಾರ್ಪಟ್ಟರೆ ಸಮಾಜದಲ್ಲಿ ಒಂದು ಸಮಸ್ಯೆಯನ್ನೆ ತಂದಿಡಬಲ್ಲುದು. ಆಗ ಇಬ್ಬರೂ ಸಾಕಷ್ಟು ದ್ವಂದ್ವದಲ್ಲಿ ಸಿಲುಕಿ ಗೊಂದಲಕ್ಕೆ ಬೀಳುತ್ತಾರೆ. ಆಗ ಸ್ನೇಹ ಮುರಿದು ಬೀಳುತ್ತದೆ. ಜೀವನದ ಉದ್ದೇಶಗಳೇ ವ್ಯರ್ಥವಾಗುತ್ತವೆ" ಎನ್ನುತ್ತಾರೆ.
ಸ್ನೇಹ ಎನ್ನುವುದು ಇಬ್ಬರ ನಡುವಿನ ಹೇಳಲಾಗದ ಒಂದು ಕೆಮಿಸ್ಟ್ರಿಯೇ ಸೈ!
ಇದು ದಿನಕಳೆದಂತೆ ಮೊದಲಿನ ಚಾರ್ಮ್ ಕಳೆದುಕೊಳ್ಳುತ್ತ ಅಥವಾ ಸ್ನೇಹ ಹಳಸಲಾಗುತ್ತ ಸಾಗುವುದೂ ಸಾಕಷ್ಟು ಸಲ. ಹಾಗೇ ಸ್ನೇಹ 'ಸಂಬಂಧ'ದ ರೂಪು ಪಡೆದು 'ಕಾಮನಬಿಲ್ಲಾಗುವ' ಸಾಧ್ಯತೆಯೂ ಇದೆ. ಇದಕ್ಕೆ ವ್ಯಕ್ತಿಗಳು ಸಾಕಷ್ಟು ಪಕ್ವ ಹಾಗೂ ಜವಾಬ್ದಾರಿಯುತವಾದರೆ, ಸ್ನೇಹವೊಂದು 'ಸಂಬಂಧ'ವಾಗ ಬೇಕೆ ಅಥವಾ ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ನಡುವೆ ಒಂದು ಗೆರೆ ಎಳೆದುಕೊಳ್ಳಬೇಕೆ ಎಂಬುದನ್ನು ಅವರವರೇ ನಿರ್ಧರಿಸಬಹುದು.
ಲೇಖಕ: ರಾಮಕೃಷ್ಣ.
ಕನ್ನಡದ ಮಾಸಿಕ ಅಕ್ಟೋಬರ್ ಮಯೂರದಲ್ಲಿ ಪ್ರಕಟಗೊಂಡ ಲೇಖನವಿದು.

Monday, November 17, 2008

ಕಾಡುವ ಆಕೆಯ ಕಂಗಳ ನೆನಪು

ನನಗಿನ್ನೂ ಚೆನ್ನಾಗಿ ನೆನೆಪಿದೆ ಆ ದಿನ. ಬಹುಶಃ ಆ ಮುಖ ನಾನು ಮರೆತಿರಬಹುದು. ಆದರೆ ಘಟನೆಯನ್ನಲ್ಲ. ಆಗಿನ್ನೂ  ತರಭೇತಿ ಮುಗಿಸಿ ಅಲ್ಲಿಯೇ ಕೆಲಸಕ್ಕೆ ಸೇರಿ ಸ್ವಲ್ಪ ದಿನಗಳಾಗಿತ್ತು. ಜೊತೆಯಲ್ಲಿದ್ದ ಅಕ್ಕನ ಮದುವೆಯಿಂದ ಉಂಟಾದ ಶೂನ್ಯದ ಖಿನ್ನತೆ ಇನ್ನೂ ಕಾಡುತ್ತಿತ್ತು. ಅದರಿಂದ ಹೊರ ಬರಲು ಅರ್ಧ ದಿನ ರಜೆ ಹಾಕಿ ವೃತ್ತದಲ್ಲಿ ಬಸ್ ಗಾಗಿ ಕಾಯುತ್ತ ನಿಂತಿದ್ದೆ. ಆಗಿನ್ನೂ ವರ್ತುಲ ರಸ್ತೆಯಾಗಿರಲಿಲ್ಲ. ಹಾಗಾಗಿ ಎರಡೂ ಕಡೆಯ ಬಸ್ ಗಳನ್ನು ನಿರೀಕ್ಷಿಸುತ್ತ ನನ್ನಂತೆ ಇನ್ನೂ ೮-೧೦ ಜನರಿದ್ದರು. ೧ ಘಂಟೆಯ ಸಮಯವಿರ ಬೇಕು ಏಕೆಂದರೆ ಈಗಿನ್ನೂ ಊಟ ಮುಗಿಸಿ ಹೊರ ಬಂದಿದ್ದೆ. ಹಳ್ಳಿಯ ಕಡೆಯಿಂದ ಬಂದ ಬಸ್ಸೊಂದರಿಂದ ಒಬ್ಬ ಯುವತಿಯನ್ನು ಒಬ್ಬ ಹೆಂಗಸು ಕೆಳಗೆಳೆದು ತಂದರು. ಸ್ವಲ್ಪ ದೂರದಲ್ಲಿದ್ದರಿಂದ ಅವರ ಸಂವಾದಗಳು ಅಲ್ಲಿದ್ದವರಿಗೆ ಕೇಳಿಸುತ್ತಿರಲಿಲ್ಲ, ಆದರೂ ಅದು ಅಸಹಜವಾಗಿದ್ದದ್ದು ಎಲ್ಲರಿಗೂ ತಿಳಿಯುವಂತಿತ್ತು. ಅವರಿಬ್ಬರನ್ನು ಆಟೋದಲ್ಲಿ ಬಂದ ಮಧ್ಯ ವಯಸ್ಕನೊಬ್ಬ ಕೂಡಿಕೊಂಡಾಗ ಆ ಯುವತಿ ಜೋರಾಗಿ ಕಿರಿಚಾಡಲು ಪ್ರಾರಂಭಿಸಿದಳು. ಅವರ ಸಂಭಾಷಣೆ ಈಗ ಎಲ್ಲರಿಗೂ ಕೇಳಿಸುತ್ತಿತ್ತು. ಮಧ್ಯಾನ್ಹವಾದ್ದರಿಂದ ಹೆಚ್ಚೇನು ಜನರಿರಲಿಲ್ಲ. ಆಕೆಯ ಮಾತುಗಳಿಂದ ನಮಗನ್ನಿಸಿದ್ದು ಆ ಯುವತಿ ಮನೆಗೆ ಹಿಂದಿರುಗಲು ನಿರಾಕರಿಸುತ್ತಿದ್ದಾಳೆ ಆಕೆಯ ತಾಯಿ ಅವಳನ್ನು ಕರೆದೊಯ್ಯುವ ವಿಫಲ ಯತ್ನ ಮಾಡುತ್ತಿದ್ದಾರೆ ಎಂಬುದು.
ಸ್ವಲ್ಪ ಸಮಯ ವಾಗ್ವಾದವನ್ನು ನಾವೆಲ್ಲ (ಅಲ್ಲಿದ್ದ ಜನರು) ಗಮನಿಸುತ್ತಿದ್ದೇವೆಂದು ಆಕೆಯ ತಾಯಿ (ನಮ್ಮ ಊಹೆ) ನೋಡಮ್ಮ ನಾನು ನಿನ್ನ ತಾಯಿ ಹಾಗೆಲ್ಲ ಹಠ ಮಾಡ್ಬಾರ್ದು ಅಂತ ಹೇಳಿದಾಕ್ಷಣ ಆ ಯುವತಿ ನೀನ್ಯಾವ ಸೀಮೆ ತಾಯಿನೆ? ಎಂದು ಅಬ್ಬರಿಸಿದಳು. ಮೆಲ್ಲಗೆ ಜನರ ಗುಂಪು ಅವರ ಸುತ್ತ ನೆರೆಯಿತು. ಒಬ್ಬೊಬರೂ ಒಂದೊಂದು ವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಯಾಕೊ ಆ ಯುವತಿ ಕಂಗಾಲಾಗಿದ್ದಾಳೆಂದು ನನಗನಿಸುತ್ತಿತ್ತು. ಆಕೆಯ ಕಣ್ಣಿನಲ್ಲಿದ್ದ ಭಯ ಆತಂಕ ನನಗಿನ್ನೂ ನೆನಪಿದೆ. ಈಗ ಸುತ್ತಲಿದ್ದ ಜನ ಸಂಧಾನಕ್ಕಿಳಿದರು ಯಾಕಮ್ಮಾ ಹೀಗ್ಮಾಡ್ತಿಯ? ಹೋಗು ಮನೆಗೆ ಎಂದು ಬುದ್ದಿವಾದ ಹೇಳಿದವರಿಗೆ ನನ್ ಮನೆಗೆ ಹೋಗ್ತಿನಿ ಬಿಡಿ ಅಂತ ಹೇಳಿ ಎಂದು ಆಕೆ ದಬಾಯಿಸಿದಳು. ಅದಕ್ಕೆ ಆಕೆಯ ತಾಯಿ ಎಂದು ಕರೆದು ಕೊಂಡ ಹೆಂಗಸು ನೋಡೀ ಸಾರ್ ಬಿಟ್ರೆ ಮನೆ ಬಿಟ್ಟು ಓಡಿ ಹೋಗ್ತಳೆ ಮದುವೆ ನಿಶ್ಚಯ ಆಗಿದೆ ಎಂದು ಗೋಗರೆದಳು. ಅಲ್ಲಿ ನೆರೆದವರಿಗೆಲ್ಲಾ ಪೀಕಲಾಟ ಯಾರು ಸರಿ ಯಾರು ತಪ್ಪು ಎಂಬ ಜಿಜ್ಞಾಸೆ. ಆಕೆ ಕೊನೆಗೊಮ್ಮೆ ನೀವು ನನ್ನ ಏನ್ಮಾಡ್ತೀರ ಅಂತ ಗೊತ್ತು ನನ್ನ ಬಿಡಿ ನಾನು ಮನೆಗೆ ಹೋಗ್ತಿನಿ ಎಂದು ಕೊಸರಿಕೊಂಡು ಆಟೋದ ಬಳಿಗೆ ಓಡಿದವಳನ್ನು ಆಕೆಯ ಜೊತೆಯಲ್ಲಿದ್ದವನ ಜೊತೆ ಇನ್ನಿಬ್ಬರು ದಾರಿ ಹೋಕರು ಮತ್ತೆ ಹಿಡಿದಿಟ್ಟುಕೊಂಡರು. ನನಗೆ ಫೋನ್ ಮಾಡಕ್ಕಾದ್ರು ಅವಕಾಶ ಕೊಡೀ ಅಂತ ಆಕೆ ಗೋಗರೆದಳು.
ನನ್ನ ಪೋಲೀಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಎಂದಾಗ ತಾಯಿಯೆಂದು ಹೇಳಿಕೊಳ್ಳುತ್ತಿದ್ದವಳ ಮುಖ ಕಪ್ಪಿಟ್ಟಿತು. ಸಾರ್ ಪೋಲಿಸ್ ಸ್ಟೇಶನ್ನಿಗೆ ಕರೆದು ಕೊಂಡು ಹೋಗಿ ಸಾರ್ ಎಂದು ನಾನು ಮತ್ತು ಇನ್ನಿಬ್ಬರು ಹೇಳೀದಾಗ ಸುಮ್ನೆ ಕೂತ್ಕೊಳ್ರೀ ನೀವಿನ್ನು ಪಡ್ಡೆ ಹುಡುಗರು ನಿಮ್ಗೇನ್ ಗೊತ್ತು ಪ್ರಪಂಚ ಎಂದು ದಬಾಯಿಸಿದರು ನಾವೂ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟೆವು. ಕೊನೆಗೊಮ್ಮೆ ಅಲ್ಲಿದ್ದ ಜನಗಳಲ್ಲ ಸೇರಿ ಚಾಲಕನ ಜೊತೆಯಲ್ಲಿ ಆಕೆಯನ್ನು ಒಂದು ಆಟೋದಲ್ಲಿ ಕೂರಿಸಿಕೊಂಡರು ಆಗ ಆಕೆ ಅಯ್ಯೊ ಬಿಡ್ರೀ ನನ್ನ ಇವ್ರೆಲ್ಲ ಸೇರ್ಕೊಂದು ನನ್ನ ಮಾರಿ ಬಿಡ್ತರೆ ಸೂ..... ಮಾಡ್ತಾರೆ ಎಂದು ಜೋರಾಗಿ ಅಳುತ್ತಲೆ ಆಟೋದೊಳಗೆ ಬಲವಂತವಾಗಿ ಕುಳಿತಳು. ಅಲ್ಲಿದ್ದವರೆಲ್ಲ ನಿಸ್ಸಹಾಯಕಾರಾಗಿ ಆ ದೃಶ್ಯವನ್ನೆ ನೋಡುತ್ತಿದ್ದರು. ಆಟೋ ಮುಂದೋಡಿದಂತೆ ಆಕೆಯ ಅಳು ಜೋರಾಗಿ ಮತ್ತೆ ಆಟೋ ಶಬ್ಧದಲ್ಲಿ ಕರಗಿಹೋಯಿತು.
ಈ ಘಟನೆ ನಡೆದು ಸುಮಾರು ೧೫ ವರ್ಷಗಳಾದರೂ ನಾನು ಪ್ರತಿ ಬಾರಿ ಆ ಜಾಗಕ್ಕೆ ಬಂದಾಗಲೆಲ್ಲ ಭಯ ಮಿಶ್ರಿತ ಕಂಗಾಲಾಗಿದ್ದ ಆಕೆಯ ಮುಖ ಕಣ್ಣೆದುರಿಗೆ ಬರುತ್ತದೆ. ಆಕೆ ನಿಜಕ್ಕೂ ವೇಶ್ಯಾವಾಟಿಕೆ ಸೇರಿದಳೆ ಅಥವ ತಂದೆ ತಾಯಿಯ ಮನೆ ಸೇರಿದಳೆ ಗೊತ್ತಿಲ್ಲ. ಒಂದು ಹೆಣ್ಣಿಗಾಗುತ್ತಿದ್ದ ಅನ್ಯಾಯವನ್ನು ಸ್ವಲ್ಪ ಸಮಯಪ್ರಜ್ಙೆ ಮೆರೆದಿದ್ದರೆ ತಪ್ಪಿಸ ಬಹುದಿತ್ತಲ್ಲ ಆದರೂ ನಾವು ಅಸಹಾಯಕರಾಗಿ ನಿಂತೆವಲ್ಲ ಎನ್ನುವ ನೋವು ಇನ್ನೂ ಕಾಡುತ್ತದೆ. ಈ ಘಟನೆ ನೆನಪಾದಗಲೆಲ್ಲ ಖಿನ್ನತೆ ಆವರಿಸಿ ಬಿಡುತ್ತದೆ.

Monday, October 27, 2008

ಸೀತಾನದಿ

ಪ್ರವಾಸ, ಹವ್ಯಾಸವಾದ ಮೇಲೆ ರಜ ಸಿಕ್ಕಾಗಲೆಲ್ಲ ಕಾರಿಗೆ ಪೆಟ್ರೋಲ್ ತುಂಬಿಸಿ ಹೊರಡುವುದೇ ಕಾಯಕವಾಗಿ ಬಿಟ್ಟಿದೆ. ಮಗನ ಶಾಲೆಯ ರಜಾದಿನಗಳಿಗೆ ಸರಿಯಾಗಿ ನಮಗೂ ಅಕ್ಟೋಬರ್ ನಲ್ಲಿ ರಜೆಯ ಸಾಲು ಆರಂಭವಾಗುತ್ತದೆ. ಉತ್ತರ ಕರ್ನಾಟಕದ ಯಲ್ಲಾಪುರದ ಸುತ್ತಮುತ್ತ್ತ ಪ್ರವಾಸ ಹೋಗೋಣವೆಂದು ವರಾತ ಹಚ್ಚಿದ ಸ್ನೇಹಿತರಿಗೆ ತಾರಮ್ಮಯ್ಯ ಆಡಿಸಿ, ಚಾರ್ಮಾಡಿ ಘಟ್ಟದಲ್ಲಿರುವ ಮಲಯಮಾರುತ ಅತಿಥಿ ಗೃಹದಿಂದ ನನ್ನ ಪ್ರವಾಸವನ್ನು ಆರಂಭಿಸುವ ಇರಾದೆಯಿಂದ ಚಿಕ್ಕಮಗಳೂರಿನ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದವನಿಗೆ ೧ ತಿಂಗಳಾದ ಮೇಲೆ ಕರೆ ಮಾಡಿ ಎನ್ನುವ ಸಿದ್ದ ಉತ್ತರ ಎದುರಾಯ್ತು. ಸರಿ ಸೆಪ್ಟೆಂಬರ್ ತಿಂಗಳ ಮೊದಲವಾರವೇ ಮತ್ತೆ ಪ್ರಯತ್ನಿಸಿದವನಿಗೆ ಮಲಯಮಾರುತ ಅತಿಥಿ ಗೃಹ
ದುರಸ್ಥಿಯಲ್ಲಿರುವುದರಿಂದ ಇನ್ನು ಯಾರಿಗೂ ಕೊಡುವುದಕ್ಕಾಗುವುದಿಲ್ಲ ಎಂಬ ಮಾರುತ್ತರ. ಅಕ್ಟೋಬರ್ ೧ ರಿಂದ ೯ ರವರೆಗೆ ಸುಧೀರ್ಘ ಪ್ರವಾಸದ ಯೋಜನೆಯಲ್ಲಿದ್ದವನಿಗೆ ಇದೇಕೋ ಕಸಿವಿಸಿ. ಈ ಮಧ್ಯೆ ನಿನ್ನೊಡನೆ ನನಗೂ ಪ್ರವಾಸ ಬರುವ ಇಚ್ಚೆ ಇದೆ ಆದರೆ ಮಕ್ಕಳ ಶಾಲೆಗೆ ರಜೆ ೮ ರಿಂದ ಪ್ರಾರಂಭವಾಗುತ್ತದೆ ನಂತರ ಹೋಗೋಣವೆಂದ ಸ್ನೇಹಿತ ಶ್ರೀಕಾಂತನಿಗೆ ಸ್ಪಂದಿಸಿ ಅದರಂತೆ ಅಕ್ಟೋಬರ್ ೮ ರಂದು ಪ್ರವಾಸ ಹೊರಡುವುದೆಂದು ನಿರ್ಧರಿಸಿದೆವು. ಸ್ಥಳಗಳು ಮತ್ತು ಅಲ್ಲಿನ ವಸತಿಗಳಿಗಾಗಿ ಹುಡುಕಾಟ ತಡಕಾಟ ಆರಂಭವಾಯಿತು. ಕೊನೆಗೆ ಸೀತಾನದಿ ಪ್ರಕೃತಿಶಿಬಿರ ಮತ್ತು ಕುದುರೆಮುಖದ ಭಗವತಿ ಪ್ರಕೃತಿ ಶಿಬಿರದಲ್ಲಿ ತಂಗೋಣವೆಂದು ಶ್ರೀಕಾಂತನಿಗೆ ತಿಳಿಸಿ ಅದರಂತೆ ೯ ಮತ್ತು ೧೦ ರ ರಾತ್ರಿ ಸೀತಾನದಿ ಪ್ರಕೃತಿ ಶಿಬಿರದಲ್ಲೂ ೧೧ ಮತ್ತು ೧೨ ರ ರಾತ್ರಿ ಭಗವತಿಯಲ್ಲೂ ಕಾರ್ಕಳ ಅರಣ್ಯ ಇಲಾಖೆಯಲ್ಲಿನ ಜಯನಾರಾಯಣರನ್ನು ಸಂಪರ್ಕಿಸಿ ಸ್ಥಳಗಳನ್ನು ಕಾದಿರಿಸಿದೆ. ಈ ಮಧ್ಯೆ ಪಾಂಡಿಚೆರಿಗೆ ಹೊರಡುವುದಾಗಿ ತಿಳಿಸಿದ್ದ ಶ್ರೀಧರ ತನಗೂ ನಾವು ಹೋಗುವ ಜಾಗಗಳಲ್ಲಿ ವಸತಿ ಬಗ್ಗೆ ವಿಚಾರಿಸಿದವನಿಗೆ ಜಯನಾರಾಯಣ ಸಂಪರ್ಕ ಸಂಖ್ಯೆಯನ್ನಿತ್ತೆ.
ಆಯುಧ ಪೂಜೆ ಮುಗಿಸಿ ೮ ರಂದು ಬೆಳಿಗ್ಗೆ ೮ ಗಂಟೆಗೆ ನಮ್ಮ ವಾಹನ ನೆಲಮಂಗಲದ ದಾರಿಯಲ್ಲಿತ್ತು. ವಾಹನದಟ್ಟಣೆಯೂ ಹೆಚ್ಚಿರಲಿಲ್ಲ. ಕುಣಿಗಲ್ ದಾರಿಯಲ್ಲಿ ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಅದೇ ಆವರಣದಲ್ಲಿ ತಿಂಡಿ ಮೆಲ್ಲುತ್ತಿದ್ದ ಶ್ರೀಧರನಿಗೊಂದು ನಗೆಬೀರಿ ನಮ್ಮ
ಪ್ರಯಾಣ ಮುಂದುವರೆಯಿತು. ಹಾಸನದಲೊಮ್ಮೆ ಚಹಾ ವಿರಾಮ ಚಿಕ್ಕಮಗಳೂರಿನಲ್ಲಿ ಊಟದ ನಂತರ ನಾವು ನೇರವಾಗಿ ಶೃಂಗೇರಿಯ ಬಳಿಯಿರುವ ಹರಿಹರಪುರ ತಲುಪಿದೆವು.ತುಂಗೆಯ ದಂಡೆಯ ಮೇಲಿರುವ ಸುಂದರ ಪುಟ್ಟ ಊರು ಹರಿಹರಪುರ. ಶಂಕರಮಠದ ಆವರಣದಲ್ಲಿರುವ ಶಾರಾದಾಂಬೆಯ ದರ್ಶನ ನಂತರ ಸ್ವಾಮೀಜಿಗಳ ಸಂದರ್ಶನ ಮುಗಿಸಿ, ಹೊಸದಾಗಿ ನಿರ್ಮಿಸಿರುವ ದೇವಸ್ಥಾನಗಳ ದರ್ಶನಕ್ಕಾಗಿ ಶಕಟಪುರದತ್ತ. ಭವ್ಯವಾಗಿ ನಿರ್ಮಿಸಿರುವ ನಿರ್ಜನ ದೇವಸ್ಥಾನದಲ್ಲೊಂದು ಸುತ್ತು ಹಾಕಿ ಅಲ್ಲಿಂದ ನೇರವಾಗಿ ಶೃಂಗೇರಿ ತಲುಪಿದಾಗ ಅರಿವಿಗೆ ಬಂದಿದ್ದು ಇಡೀ ಕರ್ನಾಟಕವೇ ಅಲ್ಲಿದೆಯೇನೋ ಎಂಬಂತ ಜನಜಂಗುಳಿ. ವಸತಿ ಸಿಗುವುದಂತೂ ಕನಸಿನ ಮಾತು. ಈಗಾಗಲೇ ನಿರ್ಧರಿಸಿದಂತೆ ಸ್ನೇಹಿತ ಸಹೋದ್ಯೋಗಿ ಶೃಂಗೇರಿಯವರೇ ಆದ ವಸಂತರ ಮಗಳ ಮನೆಯಲ್ಲಿ ನಮ್ಮ ವಸತಿ. ಮಠದಲ್ಲಿ ಊಟ ಮುಗಿಸಿ ಮೆಣಸೆಯ ಬಳಿಯಿರುವ ಸುಚೇಂದ್ರರ ಮನೆಗೆ ಬಂದು ಮಲಗಿದಾಗ ರಾತ್ರಿ ೧೦ ಗಂಟೆ. ಸುಚೇಂದ್ರ ಮತ್ತು ಅವರ ಮನೆಯವರ ಆತ್ಮೀಯತೆ ಸ್ಮರಣೀಯ. ಬೆಳಿಗ್ಗೆ ಎದ್ದು ನೇರವಾಗಿ ಕಿಗ್ಗದಲ್ಲಿರುವ ಋಷ್ಯಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ೧೫ ಕಿ.ಮಿ ದೂರದಲ್ಲಿರುವ ಉತ್ತಮವಾಗಿದ್ದರೂ ಕಡಿದಾದ ರಸ್ತೆಯಲ್ಲಿ ಸಿರಿಮನೆ ಜಲಪಾತಕ್ಕೆ ಬಂದಿಳಿದೆವು. ೫-೬ ವರ್ಷಗಳ ಹಿಂದೆ ಆಕಸ್ಮಿಕವಾಗಿ ಈ ಜಲಪಾತಕ್ಕೆ ಬಂದಾಗ ಇದ್ದದ್ದಕ್ಕೂ ಈಗಲೂ ತುಂಬವೇ ವ್ಯತ್ಯಾಸ ಕಂಡು ಬಂತು. ಜಲಪಾತಕ್ಕೆ ಇಳಿಯಲು ಮೆಟ್ಟಿಲುಗಳು ನಾಗರೀಕತೆಯ ಕುರುಹಾದ ಪ್ಲಾಸ್ಟಿಕ್ ಗುಟ್ಕಾ ಮದ್ಯದ ಪಳೆಯುಳಿಕೆಗಳು ಚಹಾ ಅಂಗಡಿ ಕೂಡಾ ಆಶ್ಚರ್ಯ ತರಿಸಿತು. ಹಿಂದೊಮ್ಮೆ ಜಲಪಾತಕ್ಕೆ ಬಂದಾಗ ಶೃಂಗೇರಿಯಲ್ಲಿ ಕಾರಿನ ಕೆಳಗೆ ಚಪ್ಪಲಿ ಬಿಟ್ಟು ಜಲಪಾತದ ಹತ್ತಿರ ಕಾರು ನಿಂತಾಗ ಕಾರಿನ ಕೆಳಗೆ ಇಣುಕಿ ಚಪ್ಪಲಿ ಹುಡುಕುತ್ತಿದ್ದ ಸುರೇಶನ ಮುಖ ನೆನಪಾಗಿ ಸಣ್ಣ ನಗೆಯೊಂದು ಹಾಯ್ದು ಹೋಯ್ತು.
ಅರಣ್ಯ ಇಲಾಖೆ ಪ್ರವೇಶ ಶುಲ್ಕ ಭರಿಸುವಶ್ಟರಲ್ಲಿ ಜಲಪಾತದ ಬಳಿ ಇದ್ದವರ ಉಲ್ಲಾಸದ ಕೇಕೆಗಳು ಮೊದಲ ಬಾರಿ ಬಂದಿದ್ದಾಗ ಇದ್ದ ನೀರವತೆಯ ಮೌನವನ್ನು ಅಣಕಿಸುತ್ತಿತ್ತು. ಅದರೂ ಶೃಂಗೇರಿಯ ಜನಜಂಗುಳಿಯೆಲ್ಲ ಇಲ್ಲೆ ಇದೆಯೆಂದು ಭಾವಿಸಿದ್ದವನಿಗೆ ಅದು ಸುಳ್ಳೆಂದು ತಕ್ಷಣವೆ ಅರಿವಾಯಿತು. ನಿರಾಯಾಸವಾಗಿ ನೀರಿಗಿಳಿದು ಜಲಪಾತದ ಕೆಳಗೆ ಕುಳಿತೆವು. ಮಕ್ಕಳಂತೂ ಅತ್ಯಂತ ಆನಂದದಿಂದ ನೀರಿನಲ್ಲಿ ಕಳೆದು ಹೋಗಿದ್ದರು.
ದಬದಬನೆ ಸುರಿಯುವ ನೀರಿಗೆ ಬೆನ್ನೊಡ್ಡಿದರೆ ಪುಗಸಟ್ಟೆ ಮಸಾಜ್. ಜಡ ಹಿಡಿದ ಬೆಂಗಳೂರಿನ ಮೈ ಮನಸ್ಸಿಗೆ ಆಹ್ಲಾದಕರ ಅನುಭವ ಇದಕ್ಕಾಗಿಯೆ ಪ್ರವಾಸಗಳೆಂದರೆ ನನಗೆ ಅಚ್ಚುಮೆಚ್ಚು. ೧ ಗಂಟೆಗೂ ಹೆಚ್ಚು ನೀರಿನಲ್ಲೆ ಕೆಳೆದು ಹಿಂತಿರುಗಿ ಚಹಾ ಅಂಗಡಿಯಲ್ಲಿ ಚಹಾ ಸೇವಿಸಿ ಶೃಂಗೇರಿಯ ಮಠದಲ್ಲಿ ಊಟ ಮುಗಿಸಿ ನಮ್ಮ ಪ್ರಯಾಣ ಸೀತಾನದಿ ಪ್ರಕೃತಿ ಶಿಬಿರದೆಡೆಗೆ. ಆಗುಂಬೆಯ ಘಟ್ಟ ಇಳಿದ ತಕ್ಷಣವೆ ಸಿಗುವ ಊರು ಸೋಮೇಶ್ವರದಲ್ಲಿ ಚಹಾ ಸೇವಿಸಿ ಹೆಬ್ರಿ ಕಡೆಗೆ ನಮ್ಮ ಪ್ರಯಾಣ. ಒಂದೇ ವಾಹನ ಚಲಿಸುವಷ್ಟು ಚಿಕ್ಕ ರಸ್ತೆಯಲ್ಲಿ ಎಚ್ಚರಿಕೆಯಿಂದ ಚಲಿಸುತ್ತಾ ಎದುರಿಗೆ ಬರುತ್ತಿರುವ ವಾಹನಗಳಿಗೆ ದಾರಿ ಬಿಡುತ್ತಾ (ಇದೇ ಸ್ಥಳಕ್ಕೆ ಕಳೆದ ಬಾರಿ ಬಂದಾಗ ಆದ ಕೆಟ್ಟ ಅನುಭವ ಕಲಿಸಿದ ಪಾಠ) ಸೀತಾನದಿ ಪ್ರಕೃತಿಶಿಬಿರ ತಲುಪಿದಾಗ ಕುಡಿದು ಕಿರುಚಾಡುತ್ತಿದ್ದ ಗುಂಪಿನ ಕೇಕೆಗಳು ನಮ್ಮನ್ನು ಸ್ವಾಗತಿಸಿದವು. ಮದ್ಯಪಾನ ಧೂಮಪಾನ ನಿಷೇಧಿಸಲಾಗಿದೆ ಎಂಬ ಫಲಕ ನಮ್ಮನ್ನು ಅಣಕಿಸುತ್ತಿತ್ತು.
ದಟ್ಟ ಕಾಡಿನ ಮಧ್ಯೆ ಆನೆಝರಿ ಪ್ರಕೃತಿ ಶಿಬಿರವನ್ನು ಹೋಲುವ ಸೀತಾನದಿಯ ದಡದಲ್ಲಿ ನಿರ್ಮಿಸಿರುವ ಢೇರೆಗಳು, ಅಡುಗೆಮನೆ, ಕುಠೀರ ನಿರ್ವಹಣೆಯಲ್ಲಿ ಹಿಂದೆ ಬಿದ್ದಿವೆ. ಅಲ್ಲಿನ ನೌಕರ ಪ್ರಕಾಶನನ್ನು ಸಂಪರ್ಕಿಸಿ
ಸ್ವಲ್ಪ ಹೆಚ್ಚೆನಿಸುವಷ್ಟೆ ಹಣವನ್ನು ನಮ್ಮಿಂದ ಪೀಕಿದ ನಂತರವೆ ಆತ ನಮಗೆ ಢೇರೆಗಳನ್ನು ಅನುವು ಮಾಡಿಕೊಟ್ಟದ್ದು. ನಮ್ಮ ಹೊರೆಗಳನ್ನೆಲ್ಲಾ ಅಲ್ಲಿಗೆ ವರ್ಗಾಯಿಸಿ ನದಿ ದಡಕ್ಕೆ ಹೋಗೋಣವೆಂದವನಿಗೆ ನೀರಿಗಿಳಿಯ ಬೇಡಿ ಅಪಾಯವಿದೆ ಎಂದ ಪ್ರಕಾಶ. ಸಸ್ಯಾಹಾರವಾದರೆ ಹೆಬ್ರಿಗೆ ಹೋಗಿ ಬಿಡಿ ಸಾರ್ ಎಂದು ಅಲವತ್ತು ಕೊಂಡವನಿಗೆ ಚಹಾವನ್ನಾದರೂ ಕಳುಹಿಸು ಮಹರಾಯ ಎಂದು ಹೇಳಿ ನದಿ ಕಡೆ ನಡೆದೆವು. ದಂಡೆಯಲ್ಲೆಲ್ಲಾ ಮರಳು ಆವರಿಸಿ ನೀರಿಗಿಳಿಯುವುದು ಪ್ರಕಾಶ ಹೇಳಿದಂತೆ ಅಪಾಯವೇ ಸರಿಯೆನಿಸಿತು. ವೀಕ್ಷಣ ಸ್ಥಳವಿದೆ ಹೋಗಿ ಬನ್ನಿ ಎಂದವನ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನದಿಯ ದಂಡೆಯಲ್ಲೆ ಅಲ್ಲಿನ ಪ್ರಶಾಂತತೆ (ಕುಡುಕರ ಗುಂಪು ತಮ್ಮ ಆಟಾಟೋಪವನ್ನು ನಿಲ್ಲಿಸಿದ್ದರಿಂದ) ಆಸ್ವಾದಿಸುತ್ತ ನಿಂತೆವು. ಮಳೆಗಾಲದಲ್ಲಿ ನಡೆಯುವ ರಾಪ್ಟಿಂಗ್ ಗೆ ಇಲ್ಲಿ ಸುಗ್ಗಿ. ಆದರೂ ನೀರಿಗಿಳಿಯಲು ಆಗದಿದ್ದುದು ಬೇಸರ ತರಿಸಿತ್ತು ಮಕ್ಕಳಿಗಂತೂ ಮೃಷ್ಟಾನ್ನ ಭೋಜನ ಮುಂದಿಟ್ಟು ಕೈಕಟ್ಟಿ ಕೂರಲು ಹೇಳಿದಂತೆ ಭಾಸವಾಗಿದ್ದಿರಬೇಕು. ಅವರ ಆಸೆಗಳನ್ನು ಹತ್ತಿಕ್ಕುತ್ತಾ ನಾಳೆ ನೀರಿಗಿಳಿಯುವಂತಹ ಸ್ಥಳಗಳಿಗೆ ಕರೆದು ಕೊಂಡು ಹೋಗುವುದಾಗಿ ಹೇಳಿ ಬಲವಂತವಾಗಿ ಅವರನ್ನು ದಂಡೆಯಿಂದ ಕರೆತಂದಿದ್ದಾಯ್ತು. ಆಗಾಗ ಸುರಿದ ಮಳೆಯಿಂದಾಗಿ ಜಿಗಣೆಗಳು ಈಗಾಗಲೆ ಸುಪ್ರಿಯಳ ರಕ್ತದ ರುಚಿ ನೋಡಿದ್ದವು. ಢೇರೆಯಿಂದ ನಾಲ್ಕೈದು ಹೆಜ್ಜೆ ಮುಂದಿಟ್ಟರೆ ಜಿಗಣೆಗಳು ಧಾಂಗುಡಿಯಿಡುತ್ತಿದ್ದವು. ಒಂದು ಜಿಗಣೆ ಹಿಡಿದು ಅದರ ಮೇಲೆ ಪುಡಿ ಉಪ್ಪನ್ನು ಉದುರಿಸಿ ಅದರಿಂದಾಗುವ ಪರಿಣಾಮವನ್ನು ಅಳೆಯಲು ಕುಳಿತೆವು. ನಿಜಕ್ಕೂ ಉಪ್ಪು ಜಿಗಣೆಗಳಿಗೆ ಪರಿಣಾಮಕಾರಿ ತಗುಲಿದ ತಕ್ಷಣವೆ ಅಲ್ಲಿಂದ ಉದುರಿ ಹೋಗಿ ಮುರುಟಿಕೊಳ್ಳುವ ಪರಿ ಮಾತ್ರ ಪ್ರಾಣಿ ಹಿಂಸೆಯೇನೊ ಎಂಬ ಭಾವನೆ.
ಪ್ರಕಾಶ ಕೊಟ್ಟ ಚಹಾ ಹೀರಿ ಹೆಬ್ರಿ ಕಡೆಗೆ ಹೊರೆಟೆವು. ಪುಟ್ಟ ಊರಾದರೂ ಶುಭ್ರವಾಗಿರುವ ಸ್ಥಳ ಹೆಬ್ರಿ. ರಾತ್ರಿ ವಿದ್ಯುತ್ ಇಲ್ಲದ ಪರಿಸ್ಥಿತಿಗೆ ಮೇಣದ ಬತ್ತಿಗಳನ್ನು ಖರೀದಿಸಿ. ಬಡ್ಕಿಲ್ಲಾಯ (ಭೋಜನಾಲಯ) ದಲ್ಲಿ ಊಟ ಮುಗಿಸಿ ಶಿಬಿರಕ್ಕೆ ಹಿಂದಿರುಗಿದಾಗ ಸ್ನೇಹಿತ, ಸಹೋದ್ಯೋಗಿ ಶ್ರೀಧರ ಪ್ರತ್ಯಕ್ಷನಾಗಿದ್ದ. ಅಬ್ಬ!! ವಿದ್ಯುತ್ ದೀಪಗಳು ಬೆಳಗಲು ಆರಂಭಿಸಿದ್ದವು. ಮೊಬೈಲ್ಗಳನ್ನು ಛಾರ್ಜ್ ಮಾಡಲು ಹಚ್ಚಿ ಮಲಗೋಣವೆಂದು ಹೇಳಿದ ಸ್ವಲ್ಪ ಸಮಯಕ್ಕೆ ಮಳೆ ಧೋ ಎಂದು ಸುರಿಯಲು ಆರಂಭಿಸಿತು. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಬೇಸಿಗೆಯಂತಿದ್ದ ಶೆಕೆ ಮಾತ್ರ ತಣ್ಣಗಾಗಿರಲಿಲ್ಲ. ಅದ್ಯಾವಾಗ ನಿದ್ರಾದೇವಿ ಆವರಿಸಿದಳೊ ಗೊತ್ತಿಲ್ಲ.
ಬೆಂಗಳೂರಿಂತೆ ಯಾವುದೆ ಆತುರವಿಲ್ಲದ್ದರಿಂದ ೭.೩೦ ಗೆ ಹಾಸಿಗೆಯಿಂದೆದ್ದು ಬೆಳಗಿನ ಮೌನವನ್ನು ಅಸ್ವಾದಿಸುತ್ತ ನದಿಯ ದಂಡೆಯಲ್ಲೊಮ್ಮೆ ನಿಂತು ಢೇರೆಯ ಪಕ್ಕದಲ್ಲೆ ಇದ್ದ ಕಾಡಿನ ದಾರಿಯಲ್ಲಿ ಸ್ವಲ್ಪ ದೂರ ನಡೆದು ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಮಕ್ಕಳಾಗಲೆ ತಮ್ಮ ಆಟಕ್ಕೆ ಶುರುವಿಟ್ಟುಕೊಂಡಿದ್ದರು. ಶ್ರೀಕಾಂತ ಮನವಿಯಂತೆ ಪ್ರಕಾಶ ಕಳಿಸಿದ ಚಹಾ ಸೇವನೆಯ ನಂತರ ಸ್ನಾನಾದಿಗಳನ್ನು ಮುಗಿಸಿ ಹೆಬ್ರಿಯಲ್ಲಿ ಮಲೆನಾಡು ಮತ್ತೆ ಕರಾವಳಿಯ ತಿನಿಸುಗಳಾದ ಕೊಟ್ಟೆ ಕಡುಬು, ಬನ್ಸ್, ಶ್ಯಾವಿಗೆ ಎಲ್ಲವುದರಗಳ ರುಚಿ ನೋಡಿ, ಬೇರೆ ಯಾವುದೇ ಕಾರ್ಯಕ್ರಮವಿಲ್ಲದ್ದರಿಂದ ಯಾವುದಾದರೂ ನೀರಿಗಿಳಿಯುವ ಸ್ಥಳ ಸಿಗಬಹುದೆಂಬ ನೀರೀಕ್ಷೆಯಲ್ಲಿ ವಾಹನವನ್ನು ನಿಧಾನವಾಗಿ ಓಡಿಸತೊಡಗಿದ ಶ್ರೀಕಾಂತ. ಹಿಂದಿನ ದಿನವೆ ಕ್ರಮಿಸಿದ್ದ ದಾರಿಯಾದ್ದರಿಂದ ನಿನ್ನೆ ಗಮನಿಸಿದ್ದ ಕೆಲವು ಜಾಗಗಳು ೪-೫ ಕಿ.ಮೀ ನಂತರ ಸಿಕ್ಕವು ದೇವಸ್ಥಾನದ ಪಕ್ಕದಲ್ಲಿದ್ದ ಸ್ಥಳ ಪ್ರಶಸ್ಥವಾಗಿದ್ದರೂ ಈಗಾಗಲೆ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಇನ್ನು ಸ್ವಲ್ಪ ಮುಂದೆ ಸಿಕ್ಕ ಚಿಕ್ಕ ಊರಿನಲ್ಲಿ ನಮ್ಮ ನೀರೀಕ್ಷಣೆ ಮತ್ತು ಅಪೇಕ್ಷೆಗೆ ತಕ್ಕುದಾದ ಒಂದು ಸ್ಥಳ ದೊರಕಿದ ತಕ್ಷಣ ಅದೇ ಹಳ್ಳಿಯ ಜನಗಳಿಂದ ಅಪಾಯವಿಲ್ಲವೆಂದು ಖಾತರಿಪಡಿಸಿಕೊಂಡು ಸ್ವಚ್ಚವಾಗಿ ಸ್ವಚ್ಚಂದವಾಗಿ ಹರಿಯುತ್ತಿದ್ದ ನೀರಿಗೆ ಮಕ್ಕಳು ದಡದಡನೆ ಇಳಿದೇ ಬಿಟ್ಟರು.
ಮನದಣಿಯೆ ಈಜಿ, ಪರಸ್ಪರ ನೀರೆರೆಚಿಕೊಳ್ಳುತ್ತಾ, ದಣಿವಾರಿಸಿಕೊಳ್ಳುತ್ತಾ ನೀರನ್ನು ಮೊದಲಬಾರಿಗೆ ನೋಡಿದವರಂತೆ ನಾವೆಲ್ಲಾ ಆಡಿಯೇ ಆಡಿದೆವು. ಮೇಲೆ ಸೂರ್ಯ ತನ್ನ ಪ್ರತಾಪವನ್ನು ತೋರಿಸುತ್ತಿದ್ದರೂ ತಣ್ಣಗಿನ ನೀರಿನಲ್ಲಿ ನಮಗದು ಅರಿವಿಗೆ ಬರುತ್ತಿರಲಿಲ್ಲ. ನೀರಿನಿಂದ ಹೊರ ಬಂದ ತಕ್ಷಣ ಬಟ್ಟೆಯಿಲ್ಲದ ಮೈ ಚುರುಗುಟ್ಟಿದಾಗ ಮತ್ತೆ ನೀರಿಗೆ ಜಿಗಿಯುವುದೆ ಮಜಾ.
ನಮಗೂ ಸ್ವಲ್ಪ ಜಾಗ ಬಿಡಿ ಎಂಬಂತೆ ಬಂದ ಬಹುಶಃ ನಮ್ಮಂತೆ ಪ್ರವಾಸಿಗರ ೫-೬ ಹುಡುಗರ ಗುಂಪೊಂದು ನಮ್ಮನ್ನು ನೋಡಿ ದೂರದಲ್ಲೆ ಕುಳಿತಿತು. ಬಹುಶಃ ಸಭ್ಯತೆಗಾಗಿ ದೂರದಲ್ಲೆ ಕುಳಿತು ನಾವು ಜಾಗ ಖಾಲಿ ಮಾಡುವವರೆಗೆ ಕಾಯುತ್ತಿದ್ದದ್ದು ನಮ್ಮ ಅರಿವಿಗೆ ಬಂದಾಗ ಸಮಯ ಮಧ್ಯಾನ್ಹ ೧ ಗಂಟೆಯಿರಬೇಕು.
ಮನದಣಿಯೆ ನೀರಾಟದಿಂದ ದಣಿದಿದ್ದ ಮನಗಳಿಗೆ ರಸ್ತೆಯ ಪಕ್ಕದಲ್ಲಿ ಸಿಕ್ಕ ಚಹಾ ಅತ್ಯಂತ ರುಚಿಕರವೆನಿಸಿದ್ದು ಸಹಜವೆ. ನೇರವಾಗಿ ಹೆಬ್ರಿಗೆ ಬಂದು ಊಟಮುಗಿಸಿ ಸುಡುತ್ತಿದ್ದ ಬಿಸಿಲಿನಲ್ಲಿ ಬಂದು ಢೇರೆಯೊಳಗೆ ಬಿದ್ದೆವು. ಸಣ್ಣದೊಂದು ನಿದ್ದೆ ತೆಗೆದು ಕಾರು ಹತ್ತಿ ಕೋಡ್ಲುತೀರ್ಥಕ್ಕೆ ಹೋಗುವ ದಾರಿಯಲ್ಲಿ ಸಿಗುವ ನದಿಯಲ್ಲಿ ಇಳಿಯುವ ಮನಸ್ಸಿನಿಂದ ಆ ದಾರಿಯಲ್ಲಿ ಹೊರಟೆ, ಹೆಬ್ರಿಯಿಂದ ಸೋಮೇಶ್ವರಕ್ಕೆ ಹೋಗುವ ರಸ್ತೆಯಲ್ಲಿ ಬಲಭಾಗದಲ್ಲಿ ಸಿಗುವ ಕಮಾನಿನಲ್ಲಿ ಬಲಗಡೆಗೆ ತಿರುಗಿ ಅಲ್ಲಿಂದ ಮುಂದೆ ಸುಮಾರು ೨೦ ನಿಮಿಷ ಕ್ರಮಿಸಿದ ನಂತರ ಸೇತುವೆಯೊಂದನ್ನು ದಾಟುವಾಗ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯೊಂದು ನನ್ನ ಗಮನ ಸೆಳೆಯಿತು. ಅಲ್ಲೆ ವಾಹನವನ್ನು ನಿಲ್ಲಿಸಿ ೨ ಹೊಳೆಗಳು
ಸೇರುವ ಜಾಗ ನೀರಿಗಿಳಿಯುವಂತೆ ನನ್ನ ಪ್ರೆರೇಪಿಸಿದರೂ ಆಗುಂಬೆಯ ಸೂರ್ಯಾಸ್ತಮಾನ ವೀಕ್ಷಿಸಲು ಹೋಗಲು ಸಮಯದ ಅಭಾವವಿದ್ದುದರಿಂದ ಆ ಯೋಜನೆಯನ್ನು ಅಲ್ಲೆ ಕೈಬಿಟ್ಟು ಕೋಡ್ಲು ತೀರ್ಥದ ಕಡೆ ವಾಹನ ಚಲಾಯಿಸಿದೆ. ಕೋಡ್ಲುತೀರ್ಥ ನನ್ನ ಗುರಿಯಲ್ಲವಾದರೂ ದಾರಿಯಲ್ಲಿ ಸಿಗುವ ಹೊಳೆ ನಾಳಿನ ಯೋಜನೆಗೆ ನನ್ನ ಗಮನದಲ್ಲಿತ್ತು. ಈ ರಸ್ತೆ ಮಳೆಯಿಂದ ಹಾಳಾಗಿತ್ತು. ಸುಮಾರು ಅರ್ಧಗಂಟೆಯ ನಂತರ ಸಿಕ್ಕ ನದಿ ಎಲ್ಲರಿಗೂ ಇಷ್ಟವಾಯಿತು.
ಅಲ್ಲಿಂದ ನೇರವಾಗಿ ಆಗುಂಬೆ ಕಡೆ ಹೊರೆಟೆವು. ಕರಾವಳಿ ಮುಗಿದು ಘಟ್ಟ ಪ್ರದೇಶ ಆರಂಭವಾಗುವ ಕುರುಹಾಗಿರುವ ಆಗುಂಬೆ ಘಟ್ಟ ಅತ್ಯಂತ ಕಡಿದಾದ ಬೆಟ್ಟಗಳ ತಿರು ತಿರುವಿನ ರಸ್ತೆಯಲ್ಲಿ ವಾಹನ ಚಲಾಯಿಸುವುದು ಒಂದು ಸಾಹಸ. ಸೂರ್ಯಾಸ್ತಮಾನ ವೀಕ್ಷಿಸಿ ಮತ್ತೆ ಘಟ್ಟವನ್ನಿಳಿದು ಹೆಬ್ರಿಯ ಬಡ್ಕಿಲ್ಲಾಯದಲ್ಲಿ ಊಟ ಮುಗಿಸಿ ಶಿಬಿರಕ್ಕೆ ಬಂದು ಮಲಗಿದೆವು.
ಬೆಳಿಗ್ಗೆ ಬೇಗನೆದ್ದು ಬಡ್ಕಿಲ್ಲಾಯದಲ್ಲಿ ಉಪಹಾರ ಮುಗಿಸಿ ನಿನ್ನೆ ಸಿಕ್ಕಿದ್ದ ಸಂಗಮದಲ್ಲಿ ಬಂದಿಳಿದೆವು ಒಂದು ಕಡೆಯಿಂದ ಬೆಟ್ಟದಿಂದ ಇಳಿದು ರಭಸವಾಗಿ ಹರಿಯುವ ಹೊಳೆ ಇನ್ನೊಂದು ಕಡೆಯಿಂದ ಪ್ರಶಾಂತವಾಗಿ ನಿಂತ ನೀರಿನಂತೆ ಭಾಸವಾಗುವ ಹೊಳೆಗಳ ಸಂಗಮ ಮನಸ್ಸಿಗೆ ಮುದ ನೀಡುವುದು ಖಚಿತ ಇದೆಲ್ಲಕ್ಕೆ ಹೆಚ್ಚಾಗಿ ಅಲ್ಲಿನ ನಿರ್ಜನತೆ, ನೀರವ ಮೌನ, ಹಕ್ಕಿಗಳ ಕಲರವ ಬಂಡೆ ಮತ್ತು ಕಲ್ಲುಗಳ ಮೇಲೆ ಹರಿದು ಬರುವ ಶುಭ್ರವಾದ ನೀರಿನ ಜುಳು ಜುಳು ಶಬ್ಧ ಬಿಟ್ಟರೆ ಬೇರೇನೂ ಕೇಳಿಸುವುದಿಲ್ಲ. ರಸ್ತೆಯಿಂದ ೨೫ ಅಡಿಗಳ ಅಂತರದಲ್ಲಿ ಇರುವ ಈ ಜಾಗ ತಲುಪುವಷ್ತರಲ್ಲಿ ೩-೪ ಜಿಗಣೆಗಳು ಕಾಲಿಗಂಟಿದ್ದವು. ಉಪ್ಪಿನ ಸಹಾಯದಿಂದ ಜಿಗಣೆಗಳನ್ನು ಬಿಡಿಸಿ ನೀರಿಗಿಳಿಯಲು ಸಿದ್ದ. ಯಾವುದೇ ಅಪಾಯದ ಜಾಗವಲ್ಲವೆಂದು ಎಲ್ಲೂ ಹೆಚ್ಚು ಆಳವಾಗಲಿ ನೀರಿನ ಸೆಳೆತವಾಗಲಿ ಇಲ್ಲವೆಂದು ಖಾತರಿಪಡಿಸಿಕೊಂಡು ನೀರಿಗಿಳಿದೆವು. ಮತ್ತದೆ ಕಾರ್ಯಕ್ರಮ ನೀರಿನ ಬರ ಮುಗಿದುಹೋಗುವಂತೆ ದೇಶಕಾಲಗಳನ್ನು ಮರೆತು ಹೋಗುವಂತೆ ಆಡುತ್ತಿದ್ದವರನ್ನು ಎಚ್ಚರಿಸಿದ್ದು ೩ ಲಲನೆಯೊರಡನೆ ದಡದಡನೆ ಇಳಿದು ಬಂದ ಯುವಕ. ನಮ್ಮಿರುವನ್ನು ಗಮನಿಸದೆ ನಾವಿದ್ದ ಜಾಗದ ಪಕ್ಕದಲ್ಲಿ ಕಾಡಿನೊಳಗೆ ನಡೆದು ಹೋದ ಆ ಗುಂಪು ನಮ್ಮನ್ನು ಎಚ್ಚರಿಸಿ ಸಮಯ ಓಡುತ್ತಿರುವುದನ್ನು ಗಮನಿಸುವಂತೆ ಮಾಡಿತು. ಅದೇ ಗುಂಪಿನ ಕೆಲವರು ಅವರನ್ನು ಹುಡುಕುತ್ತ ಬರುವುದೊರಳಗೆ ನಾವು ವಾಹನವನ್ನೇರಲು ಅನುವಾಗುತ್ತಿದ್ದೆವು.
ನೇರವಾಗಿ ಮುದ್ರಾಡಿಯ ಮುಖೇನ ಕಾರ್ಕಳ ತಲುಪಬೇಕಿತ್ತು. ಮುದ್ರಾಡಿಯಲ್ಲಿ ಚಹಾ ಸೇವಿಸಿ ಕಾರ್ಕಳದಲ್ಲಿ ಜಯನಾರಾಯಣರ ಸಲಹೆಯಂತೆ ಸಾಗರ್ ನಲ್ಲಿ ಊಟ ಮುಗಿಸಿ ಬಿಸಿಲಿನ ಝಳವನ್ನು ಶಪಿಸುತ್ತಾ ಕುದುರೆಮುಖದ ಕಡೆ ಹೊರೆಟೆವು. ದಾರಿಯುದ್ದಕ್ಕೂ ಸಿಗುವ ವಾಹನಗಳಿಗೆ ದಾರಿಬಿಡುತ್ತಾ ಘಟ್ಟವನ್ನು ಹತ್ತುತ್ತಾ ಯಾವುದಾದರೂ ಪ್ರಾಣಿಗಳು ಕಾಣಸಿಗಬಹುದೆಂಬ ಕುತೂಹಲದಿಂದ ಇಣುಕಿನೋಡುತ್ತಾ ಮಾಲಿನ್ಯರಹಿತ ಗಾಳಿಯನ್ನು ಸೇವಿಸುತ್ತಾ ದಾರಿ ಕಳೆದೆವು. ಪ್ಲಾಸ್ತಿಕ್ ವಸ್ತುಗಳನ್ನು ಎಸೆಯಬೇಡಿ ಎಂಬ ಅರಣ್ಯ ಇಲಾಖೆಯವರ ಮನವಿ ಫಲಕಗಳು ಯಾರ ಮೇಲೂ ಪರಿಣಾಮ ಬೀರಿದಂತೆ ಗೋಚರಿಸಲಿಲ್ಲ. ದಾರಿಯಲ್ಲಿ ಸಿಗುವ ಕಣಿವೆ ಪ್ರದೇಶಗಳಲ್ಲಿ ನಿಂತು ಛಾಯಾಚಿತ್ರ ತೆಗೆಯುತ್ತಾ ಸೂತನಬ್ಬಿ ಜಲಪಾತಕ್ಕೆ ಬಂದಿಳಿದೆವು. ಸುಸಜ್ಜಿತ ಮೆಟ್ಟಿಲುಗಳಿರುವ ಜಲಪಾತ ಹತ್ತುವಾಗ ಕಷ್ಟವೆನಿಸಿದರೂ ಸರಿ ಶೃಂಗೇರಿಯಿಂದ ಹೊರನಾಡಿಗೆ ಬರುವ ಎಲ್ಲ ಯಾತ್ರಿಗಳು ನೋಡದೆ ಹೋಗಲಾರರು. ಅಲ್ಲಿ ನಮ್ಮ ಕ್ಯಾಮೆರ ಕಣ್ಣು ಹೊಡೆಸಿ ನೇರವಾಗಿ ಭಗವತಿಗೆ ಬಂದಿಳಿದೆವು. ಬಾಗಿಲಲ್ಲೆ ಚಿನ್ನಯ್ಯ ತನ್ನ ಎಂದಿನ ನಗುಮೊಗದೊಂದಿಗೆ ಭೇಟಿಯಾದ. ಬೆಳಕಿಲ್ಲದ ಢೇರೆಗಳನ್ನು ನಮಗೆ ಕೊಡ ಮಾಡಿದ ರಾಜಣ್ಣನನ್ನು ಶಪಿಸಿಕೊಂಡು ನಮ್ಮ ಹೊರೆಗಳನ್ನೆಲ್ಲಾ ಇಳಿಸಿ ಸ್ಪಟಿಕದಷ್ಟು ತಿಳಿಯಾದ ಶುಭ್ರವಾದ ಭದ್ರಾ ಹೊಳೆಯತ್ತ ಓಡಿದ ಅಮಿತ್ ನನ್ನು ಸುಶ್ಮಿತ ಮತ್ತು ಸುಪ್ರಿಯ ಹಿಂಬಾಲಿಸಿದರು. ಶ್ರೀಕಾಂತನಿಗಂತೂ ಅತ್ಯಂತ ತಿಳಿಯಾದ ನೀರು ಸಂತಸ ತಂದಿರುವುದು ಅವನ ಮುಖದ ಚಹರೆಯೆ ಹೇಳುತ್ತಿತ್ತು. ಆದರೂ ಸೌರ ದೀಪಗಳನ್ನು ನಿರ್ವಹಣೆಯಿಲ್ಲದೆ ಹಾಳುಗೆಡವಿದ್ದು ನಮ್ಮ ವ್ಯವಸ್ಥೆಯ ಅವಸ್ಥೆಗೆ ಧ್ಯೋತಕ. ನಮ್ಮ ಹೊರೆಗಳನ್ನೆಲ್ಲಾ ಢೇರೆಗಳಿಗೆ ಒಗೆದು ಭದ್ರಾ ಹೊಳೆಯಲ್ಲಿ ಇಳಿದೆವು ಕಾರ್ಕಳದ ಬಿಸಿಲಿಗೆ ಬೆವರಿದ್ದ ಮೈಮನ ತಣ್ಣಗಿನ ಹೊಳೆಯ ನೀರಿಗೆ ಮೈಜುಮ್ಮೆನಿಸುವಂತಿತ್ತು.
ಈ ಬಾರಿ ಕುದುರೆಮುಖದ ಪೀಕ್ ಚಾರಣ ಹೋಗಬೇಕೆಂದಿದ್ದ ನನ್ನ ಉತ್ಸಾಹಕ್ಕೆ ರಾಜಣ್ಣ ಮತ್ತು ಚಿನ್ನಯ್ಯ ತಡೆಹಿಡಿದರು. ರಾಜಣ್ಣನೊಡಗೂಡಿ ಮಲ್ಲೇಶ್ವರದಲ್ಲಿ ಅಡುಗೆ ಪದಾರ್ಥಗಳನ್ನು ಖರೀದಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿತ್ತು. ಯಾವುದಾದರೂ ಕಾಡುಪ್ರಾಣಿಗಳು ಕಾಣ ಸಿಗಬಹುದೇನೊ ಎಂಬ ಆಸೆಯೊಡನೆ ಮುಖ್ಯ ರಸ್ತೆಯವರೆಗೂ ಕತ್ತಲಿನಲ್ಲಿಯೇ ನಡೆದು ಬಂದವರಿಗೆ ಏನೂ ಸಿಗದಿದ್ದು ನಿರಾಸೆ ತಂದಿತು. ರಾತ್ರಿ ಕತ್ತಲಿನಲ್ಲಿಯೆ ಊಟದಮನೆಯಲ್ಲಿ ಮೇಣದದೀಪದ ಬೆಳಕಿನಲ್ಲಿ ಊಟ ಮುಗಿಸಿ ಅಗ್ನಿದೇವನ ಮುಂದೆ ಕೂತವರಿಗೆ ಜಿಗಣೆಗಳು ದರ್ಶನವಿತ್ತವು. ೧೦.೩೦ ಯ ಸಮಯಕ್ಕೆ ನಿದ್ರಾದೇವಿ ಕೈಹಿಡಿದು ಎಳೆಯತೊಡಗಿದಳು.
೬ ಗಂಟೆಗೆ ಎದ್ದು ಶ್ರೀಕಾಂತನೊಡನೆ ಶಿಬಿರವನ್ನೆಲ್ಲಾ ಕಾಡು ಪ್ರಾಣಿ ಹುಡುಕಲು ಒಂದು ಸುತ್ತು ಹಾಕಿ ನಿರಾಶರಾಗಿ ಹಿಂತಿರುಗಿ ಬಂದು ಮತ್ತೊಂದು ಸುತ್ತು ನಿದ್ದೆ ತೆಗೆದು, ೮ ಗಂಟೆಗೆಲ್ಲ ತಿಂಡಿ ತಿಂದು ಮತ್ತೊಂದು ಸುತ್ತು ಮುಖ್ಯರಸ್ತೆಯವರೆಗೂ ನಡೆದು ಹೋದೆವು ಈ ಬಾರಿ ಸಂಸಾರ ಸಮೇತ. ಶುದ್ದ ಸ್ಪಟಿಕದಂತ ಭದ್ರಾ ಹೊಳೆಯಲ್ಲಿ ಮತ್ತೊಮ್ಮೆ ಮನದಣಿಯೆ ಈಜಿದೆವು. ಇಲ್ಲಿನ ನೀರು ಅದೆಷ್ಟು ತಿಳಿಯಾಗಿದೆಯೆಂದರೆ ೫-೬ ಅಡಿ ತಳದಲ್ಲಿರುವ ಕಲ್ಲುಗಳು ಕಾಣಿಸುತ್ತಿರುತ್ತವೆ ನೀವೆನಾದರೂ ಆಳವನ್ನು ತಿಳಿಯದೆ ನೀರಿಗಿಳಿದರೆ ಹುಂಬರಾಗುವುದು ಖಚಿತ.
ಮಧ್ಯಾನ್ಹ ರಾಜಣ್ಣ ಕೊಟ್ಟ ಊಟಮಾಡಿ ಗಂಗಡಿಕಲ್ಲು ಶಿಖರದ ಕಡೆ ಚಾರಣ ಹೊರೆಟೆವು ಈಗಾಗಲೆ ಮಳೆ ಸುರಿಯುವ ಲಕ್ಷಣಗಳು ಗೋಚರಿಸುತ್ತಿದ್ದವು. ೨-೩ ಕಿ.ಮೀ ಕಾರಿನಲ್ಲಿ ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಕಬ್ಬಿಣದ ಗೇಟ್ ದಾಟಿ ಶೋಲಾ ಕಾಡನ್ನು ದಾಟುತ್ತಿದ್ದಾಗ ಜಿಗಣೆಗಳ ದಂಡು ದಾಳಿಯಿಡುತ್ತಿದ್ದದ್ದು ನನ್ನ ಗಮನಕ್ಕೆ ಬಂದರೂ ಮಕ್ಕಳು ಗಾಭರಿಯಾಗುತ್ತಾರೆಂದು ತಿಳಿಸದೆ ಮುಂದೆ ನಡೆದೆ. ಶ್ರೀಕಾಂತ ಮತ್ತು ಶ್ರೀಮತಿಯವರು ಹಿಂದೆಯೇ ಉಳಿದರು. ಸುಮಾರು ೧ ಕಿ.ಮೀ ನಡೆದ ನಂತರ ಮಳೆ ಬರುವ ಲಕ್ಷಣಗಳು ದಟ್ಟವಾಗತೊಡಗಿದವು ಅದಕ್ಕೆ ಪೂರಕವಾಗಿ ಜಿಗಣೆಗಳು ಎಲ್ಲರ ಕಾಲಿಗೂ ಮೆತ್ತಿಕೊಳ್ಳತೊಡಗಿದವು. ಮತ್ತೊಮ್ಮೆ ಉಪ್ಪಿನ ಸಹಾಯದಿಂದ ಎಲ್ಲವನ್ನು ತೊಡೆದುಕೊಂಡು ಎದುರಿಗೆ ಕಾಣುತ್ತಿದ್ದ ಕಣಿವೆಯ ದೃಶ್ಯಗಳನ್ನೆ ಕಣ್ಣು ಕ್ಯಾಮೆರದಲ್ಲಿ ತುಂಬಿಕೊಂದು ಹಿಂತಿರುಗಿ ಮಲ್ಲೇಶ್ವರಕ್ಕೆ ಬರುವ ದಾರಿಯಲ್ಲಿ ಲಕ್ಯಾ ಅಣೆಕಟ್ಟಿಗೆ ಭೇಟಿ ಕೊಟ್ಟು ಮಲ್ಲೇಶ್ವರಕ್ಕೆ ಬಂದು ಮಾರುಕಟ್ಟೆಯಲ್ಲಿ ರಾತ್ರಿ ಊಟಕ್ಕೆ ಬೇಕಾದ ಕೆಲವು ಪದಾರ್ಥಗಳನ್ನು ಖರೀದಿಸಿ ಶಿಬಿರಕ್ಕೆ ಹಿಂತಿರುಗಿದೆವು. ನಾಳೆ ಅಂದರೆ ೧೩ ರಂದು ನಾವು ಬೆಂಗಳೂರಿಗೆ ಹಿಂತಿರುಗಬೇಕಿತ್ತು. ೪-೫ ದಿನಗಳು ಹೇಗೆ ಕಳೆದವೆಂಬುದು ತಿಳಿಯುವ ಮುನ್ನವೆ ೧೩ ಓಡಿ ಬಂದಿತ್ತು. ಈ ಬಾರಿ ಕೋಡ್ಲು ತೀರ್ಥದ ಹಾದಿಯಲ್ಲಿ ಸಿಕ್ಕ ೨ ನವಿಲು ಮತ್ತು ಮುಂಗುಸಿ ಬಿಟ್ಟರೆ ಯಾವುದೇ ಪ್ರಾಣಿಗಳು ಕಾಣಸಿಗಲಿಲ್ಲ. ಊಟಕ್ಕೆ ಕುಳಿತವರಿಗೆ ರಾಜಣ್ಣ ಕಾಡೆಮ್ಮೆಗಳ ಬಗ್ಗೆ ಭಾಷಣ ಬಿಗಿದ. ಕಾಡುಕೋಣ ಮತ್ತು ಎಮ್ಮೆಗಳು ಶಿಬಿರದೊಳಗೆ ಸಂಜೆ ೬ ಗಂಟೆಗೆಲ್ಲ ಬಂದು ಬಿಡತ್ವೆ ಸಾರ್ ಜನ ಜಾಸ್ತಿ ಇದ್ರೆ ಬರಲ್ಲ ಸಾರ್ ಎಂದವನಿಗೆ, ಏನ್ ರಾಜಣ್ಣ ನನಗಂತು ಒಂದು ಕಾಣಿಸಲಿಲ್ವಲ್ಲ ಎಂದವನ್ನು ನೋಡಿ ಪೆಕರನಂತೆ ನಗುತ್ತಾ ಹೋದ. ಕಳೆದ ಬಾರಿ ಕೆಲವು ಕಡವೆ ಜಿಂಕೆಗಳಾದರೂ ಗೋಚರಿಸಿದ್ದವು. ಸಾರ್ ಬೆಳಗ್ಗೆನೆ ಮುಖ್ಯರಸ್ತೆಯ ಬದಿಯ ಗೇಟ್ ಹತ್ತಿರ ಹೋಗಿ ಖಂಡಿತ ಸಿಗುತ್ತೆ ಎಂದವನ ಮಾತು ಕೇಳಿ ರಾತ್ರಿ ಮತ್ತು ಬೆಳಿಗ್ಗೆ ಹೋದವನಿಗೆ ಯಾವುದೆ ಪ್ರಾಣಿ ಗೋಚರಿಸಲಿಲ್ಲ.
ಸರಿಯಪ್ಪ ಊಟ ಕೊಡು ಮಹರಾಯ ಎಂದು ಕೇಳಿ ಹರಟೆ ಹೊಡೆಯುತ್ತ ಊಟ ಮಾಡಿ ಮಲಗಿದವನಿಗೆ ಗಾಢ ನಿದ್ರೆ ಆವರಿಸತೊಡಗಿತು. ಕಾಡಿನ ಪ್ರಾಣಿಯೊಂದು ಓಡಿಸಿಕೊಂಡು ಬರುತ್ತಿದ್ದ ಕನಸಿಗೆ ತಟನೆ ಎಚ್ಚರವಾಗಿ ಅಬ್ಬ! ಎನ್ನುವ ನಿಟ್ಟುಸಿರು ಸಧ್ಯ ಕನಸು ಎಂಬ ನಿರಾಳ ಭಾವ ಎಂತ ಸುಖ ಎಂದು ಕೊಳ್ಳುತ್ತಿದ್ದವನಿಗೆ ಜೋರಾಗಿ ಉಸಿರಾಡುವ ಶಬ್ಧ ಅಸ್ಪಷ್ಟವಾಗಿ ಕೇಳಿಸತೊಡಗಿತು. ಹಿಂದಿನ ರಾತ್ರಿ ಪಕ್ಕದ ಢೇರೆಯಲ್ಲಿದ್ದ ಮಹಾನುಭಾವನ ಗೊರಕೆ ಶಬ್ಧವು ಹೀಗೆ ಕೇಳಿಸುತ್ತಿತ್ತು ಆದರೆ ಇದು ಗೊರಕೆ ಶಬ್ಧದ ರೀತಿಯಿರಲಿಲ್ಲ. ಆ ಶಬ್ಧ ಬರುತ್ತಾ ಬರುತ್ತಾ ಹತ್ತಿರದಲ್ಲೆ ಕೇಳಿಸತೊಡಗಿತು. ಈ ಶಬ್ಧದ ಪರಿಚಯ ನನಗಿದೆ. ಆದರೆ ನೆನಪಾಗುತ್ತಿಲ್ಲ. ಹೊರಗೆ ಹೋಗೋಣವೆಂದರೆ ದೀಪವಿಲ್ಲದೆ ಏನೂ ಕಾಣಿಸದಂತ ಕಾರ್ಗತ್ತಲು. ಮನಸ್ಸಿನಲ್ಲಿ ಭಯ ಕುತೂಹಲ. ಗಡಿಯಾರ ಸಮಯ ೩.೩೦ ತೋರಿಸುತ್ತಿತ್ತು. ಸುಮಾರು ಅರ್ಧ ಗಂಟೆ ಆ ಶಬ್ಧವನ್ನೆ ಆಲಿಸುತ್ತಾ ಹಾಗೆ ಮಲಗಿದ್ದವನಿಗೆ ಆ ಜೋರಾಗಿ ಉಸಿರಾಡುವ ಶಬ್ಧ ನಿಚ್ಚಳವಾಗಿ ಅತೀ ಹತ್ತಿರದಲ್ಲೆ ಕೇಳಿಸಲಾರಂಭಿಸಿತು. ಈಗ ನನಗೆ ಆ ಶಬ್ಧ ಸ್ಪಷ್ಟವಾಗಿ ನೆನಪಾಗತೊಡಗಿತು. ಹಳ್ಳಿಯಲ್ಲಿ ನಮ್ಮ ಮನೆಯ ಎಮ್ಮೆ ಕಾಯುತ್ತಿದ್ದ ಶಾಮ್ಲಿಯೊಡನೆ ಹೋದಾಗ ಎಮ್ಮೆಗಳು ಮತ್ತು ಹಸುಗಳು ಹುಲ್ಲು ಮೇಯುವಾಗ ಮೂಸುತ್ತಿದ್ದ ಶಬ್ಧವದು. ತಕ್ಶಣವೆ ಮೈ ರೊಮಾಂಚನ ಗೊಂಡು ಸ್ವಲ್ಪ ಭಯವೂ ಆಯಿತು. ಏಕೆಂದರೆ ಆ ಶಬ್ಧ ಈಗ ಸ್ಪಷ್ಟವಾಗಿ ನಾವಿದ್ದ ಢೇರೆಯ ಪಕ್ಕದಲ್ಲೆ ಅತ್ಯಂತ ಸನಿಹದಲ್ಲೆ ಕೇಳಿಸುತ್ತಿತ್ತು. ಈಗ ನನಗೆ ಸ್ಪಷ್ಟವಾಗಿ ತಿಳಿದು ಹೋಯಿತು ಒಂದೋ ಕಡವೆ ಅಥವಾ ಕಾಡೆಮ್ಮೆ ನಮ್ಮ ಢೇರೆಯ ಪಕ್ಕದಲ್ಲಿದೆ ಆದರೆ ನೋಡುವುದು ಹೇಗೆ? ಕತ್ತಲೆಯಲ್ಲಿಯೆ ಎದ್ದು ನೋಡೇಬಿಡೋಣವೆಂದು ತೀರ್ಮಾನಿಸಿದೆ. ಆದರೆ ರೆಪ್ಪೆ ಪಟ ಪಟ ಬಡಿದರೂ ಏನೂ ಕಾಣದಂತ ಕಾರ್ಗತ್ತಲು ಸಮಯ ಈಗಾಗಲೆ ೪ ದಾಟಿದ್ದಿರಬೇಕು. ಢೇರೆಯ ಝಿಪ್ ತೆರೆದರೆ ಆ ಶಬ್ಧಕೆ ಅದು ಓಡಿಹೋಗುವುದು ಖಚಿತ. ಈ ಸಮಯಕ್ಕೆ ನಾವಿದ್ದ ಢೇರೆಯನ್ನು ನಿಲ್ಲಿಸಲು ನೆಟ್ಟಿದ್ದ ಕಬ್ಬಿಣದ ಕಂಭಕ್ಕೆ ಒಮ್ಮೆ ಆ ಪ್ರಾಣಿಯ ಬಾಲ ತಗುಲಿ ಠಣ್ ಎಂಬ ಶಬ್ಧವಾಯಿತು ಇದರಿಂದ ಆ ಪ್ರಾಣಿ ಎಲ್ಲಿದೆಯೆಂಬ ಸರಿಯಾಗಿ ಊಹೆ ಮಾಡಲು ನೆರವಾಯಿತು. ಸರಿ ಬಾಗಿಲಿನ ತೆರದಲ್ಲಿರುವ ಝಿಪ್ ಕೆಳಭಾಗದಲ್ಲಿ ಹರಿದುಹೋಗಿದ್ದ ಢೇರೆ ನೆನಪಾಯಿತು. ಸ್ವಲ್ಪವೂ ಶಬ್ಧ ಮಾಡದೆ ಮಂಚದಿಂದ ಕೆಳಗಿಳಿದು ತೆವಳಿಕೊಂಡೆ ತಲೆಯನ್ನು ಹೊರಹಾಕಿದವನಿಗೆ ಕಂಡದ್ದು ಬರೀ ಕಾರ್ಗತ್ತಲು ಆದರೆ ಅದೆ ಶಬ್ಧ ಸುಮಾರು ೨-೩
ಅಡಿಗಳ ದೂರದಲ್ಲಿ ಕೇಳಿಸುತ್ತಿದೆ. ಪಕ್ಕಕ್ಕೆ ತಿರುಗಿದವನಿಗೆ ಕಂಡದ್ದು ಶ್ರೀಕಾಂತನ ಢೇರೆಯ ದೀಪ. ಹತ್ತಾರು ಕ್ಷಣಗಳ ನಂತರ ನನ್ನ ಕಣ್ಣು ಆ ಬೆಳಕಿಗೆ ಹೊಂದಿ ಕೊಂಡ ಮೇಲೆ ಪಕ್ಕದಲ್ಲೆ ನಿಂತಿದ್ದ ಕಾಡೆಮ್ಮೆ ನಿರಾತಂಕವಾಗಿ ಮೇಯುತ್ತಿದೆ. ತಕ್ಷಣವೆ ಹೊಳೆದದ್ದು ಫೋಟೊ ತೆಗೆಯಬೇಕೆಂದು. ಮೆಲ್ಲನೆ ತೆವಳಿಕೊಂಡು ಹಿಂತಿರುಗಿ ತಡಕಾಡಿ ಕ್ಯಾಮೆರ ಮತ್ತು ಟಾರ್ಚನ್ನು ಹಿಡಿದು ಸ್ವಲ್ಪವೂ ಶಬ್ಧವಾಗದಂತೆ ಢೇರೆಯಿಂದ ಆಚೆ ತಲೆ ಹಾಕಿ ಕ್ಯಾಮೆರ ಸಜ್ಜುಗೊಳಿಸಿದವನಿಗೆ ಕ್ಯಾಮೆರದ ಬೆಳಕಿನಿಂದ ಕತ್ತಲು ಕವಿದಂತಾಗಿ ಏನೂ ಕಾಣಿಸದಂತಾಯ್ತು. ನನಗೂ ಮತ್ತು ಪ್ರಾಣಿಗೂ ಮಧ್ಯೆ ಒಣಗಿ ಹಾಕಿದ್ದ ನಮ್ಮ ಬಟ್ಟೆಗಳು ಅಡ್ಡ ಇದ್ದವು. ಎದ್ದು ನಿಂತು ಆ ಬಟ್ಟೆಗಳನ್ನು ಪಕ್ಕಕ್ಕೆ ಸರಿಸಲು ಭಯ ಮತ್ತು ಆ ಶಬ್ಧಕ್ಕೆ ಓಡಿ ಹೋದರೆ ಅಥವ ನನ್ನನ್ನು ಆಕ್ರಮಿಸಿದರೆ ಎಂಬ ಆತಂಕ. ಮತ್ತೊಮ್ಮೆ ಸಾವರಿಸಿಕೊಂಡು ಬಾಲ ಅಳ್ಳಾಡಿಸಿಕೊಂಡು ಮೇಯುತಿದ್ದ ಪ್ರಾಣಿಯ ಫೋಟೊ ಹೊಡೆದೇ ಬಿಟ್ಟೆ. ನನ್ನ ಚರ್ಯೆಯನ್ನು ಅದು ಗಮನಿಸದಂತೆ ಕಾಣಿಸಲಿಲ್ಲ. ವಿಡಿಯೊ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಸಾಹಸಕ್ಕೆ ಬೆಳಕು ಸಹಕರಿಸಲಿಲ್ಲ. ಈಗ ಪ್ರಪಂಚದ ಪರಿವೆಯೇ ಇಲ್ಲದೆ ಬೆಂಗಳೂರಿನ ಜಂಜಾಟಗಳಿಂದ ಮುಕ್ತಿ ಪಡೆದಂತೆ ನಿದ್ದೆ ಮಾಡುತ್ತಿದ್ದ ಹೆಂಡತಿಯನ್ನು ಮೆಲ್ಲನೆ ಎಚ್ಚರಗೊಳಿಸಿ ಕಾಡೆಮ್ಮೆಯ ಬಗ್ಗೆ ತಿಳಿಸಿ, ಆಕೆಯೂ ನನ್ನಂತೆ ತೆವಳಿಕೊಂಡು ಹೊರಗೆ ತಲೆ ಚಾಚಿ ನೋಡುವಂತೆ ಹೇಳಿದೆ. ಈ ಹೊತ್ತಿಗಾಗಲೆ ಅದು ೫-೬ ಅಡಿಗಳಷ್ಟು ದೂರ ಹೋಗಿತ್ತು. ಹೆಂಡತಿಗಂತೂ ಖುಷಿಯೋ ಖುಷಿ. ಎಲ್ಲೆಲ್ಲೋ ಹುಡುಕಿದ್ವಿ ಪಕ್ಕದಲ್ಲೆ ಬಂದು ನಿಂತಿದ್ಯಲ್ಲ? ಎನ್ನುತ್ತಾ ಮತ್ತೆ ನಿದ್ದೆಗೆ ಜಾರಿದಳು. ಈಗ ಹ್ಯಾಂಡಿಕ್ಯಾಂ ಸಜ್ಜುಗೊಳಿಸಿ ಅದರ ದೀಪವನ್ನು ಹಾಕಿಕೊಂಡು ಹೊರಬಂದವನಿಗೆ ಕಾಡೆಮ್ಮೆ ನಮ್ಮ ಢೇರೆಯ ಬಳಿಯಲ್ಲಿ ಕಾಣಿಸಲಿಲ್ಲ ಅದೇ ದೀಪದ ಬೆಳಕಿನಲ್ಲಿ ಹುಡುಕುತ್ತಿದ್ದವನಿಗೆ ಹೊಳೆಯುವ ಎರಡು ಬೆಳಕಿನುಂಡೆಗಳು ಕಂಡದ್ದು ಢೇರೆ ಮುಂಭಾಗದಲ್ಲಿ ಸುಮಾರು ೧೫-೨೦ ಅಡಿಗಳ ದೂರದಲ್ಲಿ. ಆದರೆ ಅದನ್ನು ದೃಶ್ಯೀಕರಿಸುವ ನನ್ನ ಪ್ರಯತ್ನ ಈಗಲೂ ಕೈಗೂಡಲಿಲ್ಲ. ಈಗ ಶ್ರೀಕಾಂತನನ್ನು ಎಚ್ಚರಿಸಲು ೨-೩ ಬಾರಿ ಕರೆದರೂ ಅವನಿಂದ ಯಾವ ಪ್ರತಿಕ್ರಿಯೆ ಬಾರದಿದ್ದಾಗ ಸುಮ್ಮನಾದೆ. ಬಹುಶಃ ನಾನು ಶ್ರೀಕಾಂತನನ್ನು ಕರೆದ ಸದ್ದಿಗೆ ಅಲ್ಲಿಂದ ಜಾಗ ಖಾಲಿ ಮಾಡಿತ್ತು. ಸಮ್ಯ ಬೆಳಗಿನ ೪.೩೦ ತೋರಿಸುತ್ತಿತ್ತು.
೫ ಗಂಟೆ ಸುಮಾರಿಗೆ ಶ್ರೀಕಾಂತನನ್ನು ಎಚ್ಚರಗೊಳಿಸಿ ಶಿಬಿರವನ್ನು ಸುತ್ತು ಹಾಕಿದರೂ ಕಾಡೆಮ್ಮೆ ಕಾಣಿಸಲಿಲ್ಲ. ಮತ್ತೊಮ್ಮೆ ಮುಖ್ಯರಸ್ತೆಯ ಬಳಿಗೆ ನಡೆದು ಹೊರಟವನಿಗೂ ಮತ್ತದೆ ನಿರಾಶೆ. ಕಾಡೆಮ್ಮೆಯ ಹೆಜ್ಜೆ ಗುರುತುಗಳು ಮತ್ತು ಅದು ನಡೆದು ಬಂದ ದಾರಿಯಲ್ಲಿ ಹುಲ್ಲು ಅಸ್ತವ್ಯಸ್ತವಾಗಿದ್ದ ಜಾಗಗಳು ನಾವಿದ್ದ ಢೇರೆಗೆ ಅದೆಷ್ಟು ಸಮೀಪವಿತ್ತೆಂದು ಗೊತ್ತಾದಾಗ ಭಯಮಿಶ್ರಿತ ಸಂತೋಷ.
೮ ಗಂಟೆಗೆ ಸರಿಯಾಗಿ ಅಡುಗೆ ಮನೆಗೆ ಬಂದು ರಾಜಣ್ಣ ಕೊಟ್ಟ ಪೂರಿ ಪಲ್ಯ ಮೆದ್ದು ೯ ಗಂಟೆಗೆ ಅಲ್ಲಿಂದ ಹೊರಟು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನಂಗೈದು ನೇರವಾಗಿ ಹೊಂಡಗಳಿಂದಲೇ ಆವೃತವಾದ ಘಟ್ಟದ ರಸ್ತೆಯಲ್ಲಿ ಮೆಲ್ಲನೆ ವಾಹನ ಚಲಾಯಿಸುತ್ತಾ ಕೊಟ್ಟಿಗೆಹಾರದಲ್ಲಿ ಎಳನೀರು ಕುಡಿದು ಬಾಣಾವರದಲ್ಲಿ ಶ್ರೀಕಾಂತನ ಸಂಬಂಧಿಕರ ಮನೆಯಲ್ಲಿ ಊಟಮಾಡಿ ಅರಸೀಕೆರೆ, ತಿಪಟೂರು, ನಿಟ್ಟೂರು ಗುಬ್ಬಿ ತುಮಕೂರು ಮಾರ್ಗವಾಗಿ ಬೆಂಗಳೂರನ್ನು ತಲುಪಿದೆವು.

ದುರಾದೃಷ್ಠದ ಪ್ರವಾಸ


ಆಗಸ್ಟ್ ೧೫-೧೭ ರವರೆಗೆ ಸಿಗುವ ರಜವನ್ನು ಉಪಯೋಗಿಸಿಕೊಂಡು ಪ್ರವಾಸ ಕಾರ್ಯಕ್ರಮ ಹೋಗುವ ಸಲುವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುತ್ತೋಡಿಯಲ್ಲಿ ಸ್ಥಳ ಕಾದಿರಿಸಲು ಜೂನ್ ೧೫ರಂದು ದೂರವಾಣಿ ಕರೆಮಾಡಿದವನಿಗೆ ೧ ತಿಂಗಳ ನಂತರ ಕರೆ ಮಾಡಿ ಎನ್ನುವ ಉತ್ತರ. ಜುಲೈ ೧೪ರಂದು ಮತ್ತೆ ಕರೆ ಮಾಡಿದವನಿಗೆ ಈ ಬಾರಿ ಧನಾತ್ಮಕ ಉತ್ತರ ಸಿಕ್ಕಿತು. ಕಳೆದ ೩ ವರ್ಷದಿಂದ ಪ್ರಯತ್ನಿಸುತ್ತಿದ್ದವನಿಗೆ ಕೊನೆಗೂ ಯಶಸ್ಸು ಸಿಕ್ಕಿತ್ತು. ಈ ಪ್ರವಾಸದಲ್ಲಿ ಚಾರಣ ಕಾರ್ಯಕ್ರಮವಿರುವುದಿಲ್ಲ ಎಂದು ನಾನೇ ನಿರ್ಧರಿಸಿದ್ದೆ.
ಈಗಾಗಲೆ ನನ್ನ ಪ್ರವಾಸ ಕಾರ್ಯಕ್ರಮಗಳಿಗೆ ಜೊತೆಯಾಗುವ ಹವ್ಯಾಸ ಬೆಳೆಸಿಕೊಂಡ ಸಹೋದ್ಯೋಗಿ ಶ್ರೀಧರ ತಾನೂ ಬರುವುದಾಗಿ ತಿಳಿಸಿದ. ಆದರೆ ಆತ ತಡಮಾಡಿದ್ದು ಕೇವಲ ಘಂಟೆಯ ಕಾಲ ಅದರಿಂದಾಗಿ ಅಲ್ಲಿನ ಕುಟೀರವನ್ನು ಕಾದಿರಿಸುವುದು ಸಾಧ್ಯವಾಗಲಿಲ್ಲ. ಈ ಪ್ರವಾಸದ ಅನುಭವ ಶ್ರೀಧರ ಬರದಿದ್ದುದ್ದು ಒಳ್ಳೆಯದಾಯಿತೆಂದೆ ಭಾವಿಸಬೇಕು. ಹೌದು ಇದೊಂದು ದುರದೃಷ್ಟಕರ ಪ್ರವಾಸ. ಮನೆಯಲ್ಲಿ ಹೇಳದೆ ಕೇಳದೆ ಸ್ಥಳ ಕಾದಿರಿಸಿದ್ದು ತಪ್ಪಾಯಿತೆನೋ ಎಂದು ಕೊನೆ ಕೊನೆಗೆ ನನಗೇ ಸಂಶಯ ಹುಟ್ಟತೊಡಗಿತು. ನಾವು ಹೊರಡಬೇಕಾದ ದಿನವೇ ವರಮಹಾಲಕ್ಷ್ಮಿ ಹಬ್ಬ. ಮಾರನೇ ದಿನ ಉಪಾಕರ್ಮ. ಇದೆಲ್ಲದರ ಮಧ್ಯೆ ಅಂದೇ ರಾತ್ರಿ ಚಂದ್ರಗ್ರಹಣ. ಹೀಗಿದ್ದೂ ಹಬ್ಬಕ್ಕಾದ್ರು ಮನೆಲಿರ್ಬಾರ್ದ? ಎಂದು ಅಮ್ಮ ಗೊಣಗಬಹುದು ಎಂದು ಊಹಿಸಿದ್ದವನಿಗೆ ಅಂತದ್ದೇನು ನಡೆಯದಿದ್ದದ್ದು ಸಮಾಧಾನ ತಂದಿತು. ೧೨ರ ಮಂಗಳವಾರ ಅತ್ತೆ ಸೊಸೆಯ ಬಳಿ ಹೇಳುತ್ತಿದ್ದದ್ದು ಕಿವಿಗೆ ಬಿತ್ತು ಶನಿವಾರ ಗ್ರಹಣ ನನ್ನ ಮಗ ಅಮಿತ್ ರಾಶಿಗೆ ಹಿಡಿಯುತ್ತೆ ತುಂಬಾ ಕ್ರೂರವಾಗಿ ಬೇರೆ ಇದೆಯಂತೆ ತುಂಬಾ ಹುಶಾರಾಗಿ ನೋಡ್ಕೊಳಿ ಮಗೂನ ಎನ್ನುವ ಕಟ್ಟೆಚ್ಛರದ ಮಾತುಗಳು ನನ್ನ ಕಿವಿಗೆ ಬಿದ್ದವು. ಏನೋ ಮನಸ್ಸಿಗೊಂತರ ಕಸಿವಿಸಿ. ಕೊನೆ ಕ್ಷಣದಲ್ಲಿ ಹೋಗುವುದು ಬೇಡ ಎಂದು ಬಿಡೋಣವೆನಿಸುತ್ತಿತ್ತು. ಆದರೂ ಮುತ್ತೋಡಿಗೆ ಹೋಗುವ ಅವಕಾಶಕ್ಕಾಗಿ ೩-೪ ವರ್ಷದಿಂದ ಕಾದಿದ್ದು ನೆನಪಾಗಿ ಏನಾದರಾಗಲಿ ಹೋಗೇ ಬಿಡುವ ಎಂದು ತೀರ್ಮಾನಿಸಿ ಹೊರಟೆ ಬಿಟ್ಟೆ. ಹಿಂದಿನ ದಿನವೆ ಅಮ್ಮ ಗ್ರಹಣ ದೋಷ ಪರಿಹಾರಕ್ಕಾಗಿ ಪಠಿಸುವ ಸ್ತೋತ್ರಗಳನ್ನೆಲ್ಲ ಬರೆದು ಕೊಂಡು ಹೋಗುವಂತೆ ತಾಕೀತು ಮಾಡಿದ್ದರು. ೧೫ರಂದು ಮಗನನ್ನು ೧೦ ಘಂಟೆಗೆ ಶಾಲೆಯಿಂದ ಕರೆತಂದು ಮನೆಯಿಂದ ಹೊರಟಾಗ ಬೆಳಿಗ್ಗೆ ೧೦.೩೦
ನನ್ನ ನೀರೀಕ್ಷೆ ಸುಳ್ಳಾಗಿಸುವಂತೆ ನೆಲಮಂಗಲ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿರಲಿಲ್ಲ. ಸರಾಗವಾಗಿ ವಾಹನ ಓಡಿಸಿಕೊಂಡು ಪ್ರತಿ ಪ್ರವಾಸದ ಹವ್ಯಾಸದಂತೆ ಕರಡಿಗುಚ್ಚಮ್ಮ ದೇವಸ್ಥಾನದ ಆವರಣದ ತ್ರಿಮುಖ ಗಣಪನಿಗೊಂದು ಸಾಷ್ಟಾಂಗ ನಮಸ್ಕಾರ ಹಾಕಿ, ಇನ್ನೇನು ಹಾಸನ ತಲುಪಲು ೧೫ ಕಿ.ಮೀ ದೂರವಿರಬೇಕಾದರೆ ಮುಂದೆ ಹೋಗುತ್ತಿದ್ದ ಬಸ್ಸನ್ನು ಹಿಂದೆ ಹಾಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಬಸ್ ಹತ್ತಿರ ಬಂದೇ ಬಿಟ್ಟಿತು. ವಾಹನವನ್ನು ನಿಧಾನಗೊಳಿಸಿ ಹಿಂದೆ ಉಳಿಯಲು ಈಗಾಗಲೆ ತುಂಬಾ ಮುಂದೆ ಬಂದು ಬಿಟ್ಟಿದ್ದೆ. ಎಡಗಡೆ ಬಸ್ಸಿದೆ. ಎದುರಿಗೆ ಮೃತ್ಯುವಿನಂತೆ ನುಗ್ಗಿ ಬರುತ್ತಿರುವ ಬಸ್. ಆತ ತನ್ನ ವೇಗವನ್ನು ಕಡಿಮೆ ಮಾಡುತ್ತಾನೆಂದು ನಿರೀಕ್ಷಿಸಿದವನಿಗೆ ಅದರ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಪಕ್ಕದಲ್ಲಿದ್ದ ಪತ್ನಿಗೆ ನಾವಿರುವ ಪರಿಸ್ಥಿತಿ ಅರ್ಥವಾಗಿ ಗಾಭರಿಗೊಂಡದ್ದು ಗೋಚರವಾಗುತ್ತಿತ್ತು, ನಮ್ಮೆಲ್ಲರ ಕಥೆ ಮುಗಿಯಿತು ಇವತ್ತಿಗೆ ಎನಿಸಿತು. ಎದುರಿಗೆ ಬಸ್ ಯಮನಂತೆ ನುಗ್ಗಿ ಬರುತ್ತಿತ್ತು . ಸರಿ ಏನಾದರಾಗಲಿ ಎಂದು ಬಲಗಡೆಗೆ ಗಮನಿಸಿದೆ, ತಕ್ಷಣವೇ ನನ್ನ ಕಾರನ್ನು ಬಲಭಾಗಕ್ಕೆ ಎಳೆದೆ, ಅಷ್ಟೆ ರಸ್ತೆ ಪಕ್ಕಕ್ಕೆ ಕಾರು ಧಡಾರನೆ ಇಳಿಯಿತು. ಎದುರಿಗೆ ಬರುತ್ತಿದ್ದ ಬಸ್ ನನ್ನ ಕಾರಿನ ಹಿಂದೆ ರೊಯ್ಯನೆ ನುಗ್ಗಿ ಹೋಯಿತು. ಇಷ್ಟೆಲ್ಲವೂ ಕ್ಷಣ ಮಾತ್ರದಲ್ಲಿ ನಡೆದು ಹೋಯಿತು.
ಏನಾಗುತ್ತಿದೆಯೆಂದು ಅರಿವಿಗೆ ಬರುವಷ್ಟರಲ್ಲಿ ಇಡೀ ಘಟನೆ ನಡೆದು ಹೋಗಿತ್ತು. ಹಳ್ಳಕ್ಕೆ ಇಳಿದ ತಕ್ಷಣ ಕಾರು ನಿಯಂತ್ರಣಕ್ಕೆ ಬರಲಿಲ್ಲ. ಹುಲ್ಲಿನ ಮೇಲೆ ಮಳೆ ನೀರು ನಿಂತಿದ್ದರಿಂದ ಸ್ವಲ್ಪ ಹೆಣಗಾಡಿ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಂಡೆ. ನಗುತ್ತ ಸ್ಟಿಯರಿಂಗ್ ಚಕ್ರವನ್ನು ಹಿಡಿದು ಕೂತಿದ್ದವನಿಗೆ ಕಂಡದ್ದು ಭಯದಿಂದ ಹಣ್ಣಾಗಿದ್ದ ಪತ್ನಿ ಮತ್ತು ಪುತ್ರ. ಯಾರ ಪ್ರಾರ್ಥನೆ ನಮ್ಮನ್ನು ಕಾಪಾಡಿತ್ತೋ? ಗೊತ್ತಿಲ್ಲ. ನಗುತ್ತಿದ್ದವನನ್ನು ಗದರಿದಾಗಲೇ ನನಗೂ ಪರಿಸ್ಥಿತಿಯ ಗಂಭೀರತೆಯ ಅರಿವಾದದ್ದು. ರಸ್ತೆಯಿಂದ ೫-೬ ಅಡಿ ಕೆಳಗೆ ನಿಂತಿತ್ತು ನನ್ನ ವಾಹನ. ವಾಹನಕ್ಕಾಗಲೀ ನಮಗಾಗಲೀ ಯಾವುದೆ ಅಪಾಯವಿರಲಿ ಸಣ್ಣದೊಂದು ತರಚು ಗಾಯವೂ ಆಗಿರಲಿಲ್ಲ. ಆ ಹಳ್ಳಕ್ಕೆ ಇಳಿಯುವಾಗ ಮಾತ್ರ ಕಾರು ನಿಯಂತ್ರಣಕ್ಕೆ ಸಿಗದೆ ಸ್ವಲ್ಪ ಗಾಭರಿಯಾಗಿತ್ತು. ಓಹ್ ಅದನ್ನು ಈಗ ನೆನೆಸಿಕೊಂಡರೆ ಭಯವಾಗುತ್ತದೆ. ಮೃತ್ಯುವನ್ನು ಇಷ್ಟು ಹತ್ತಿರದಿಂದ ನೋಡಿದ ಅನುಭವ ಮೈ ಜುಂ ಎನಿಸುತ್ತದೆ. ಮುಖಾಮುಖಿ ಡಿಕ್ಕಿ ಸ್ವಲ್ಪದರಲ್ಲೆ ತಪ್ಪಿ ಹೋಯಿತು. ಪಕ್ಕದಲ್ಲೆ ಇದ್ದ ಡಾಬಾದಲ್ಲಿನ ಮಂದಿ ಆ ಘಟನೆಯನ್ನೆ ಎವೆಯಿಕ್ಕದೆ ನೋಡುತ್ತಿದ್ದದ್ದು ನನ್ನ ಗಮನಕ್ಕೂ ಬಂತು ಕೆಲವರು ಈ ಕಡೆಗೆ ನಡೆದು ಬರುವಷ್ಟರಲ್ಲಿ ನಾನು ಕಾರನ್ನು ಮತ್ತೆ ರಸ್ತೆಗೆ ತಂದು ಹೊರಟೇ ಬಿಟ್ಟೆ. ಈ ಪ್ರವಾಸದ ಕೆಟ್ಟ ಅನುಭವಗಳು ಇಲ್ಲಿಗೆ ನಿಲ್ಲಲಿಲ್ಲ. ಆ ಕ್ಷಣದಲ್ಲಿ ನನಗೆ ಭಯವಾಗದಿದ್ದರೂ ಈಗ ನೆನಪಿಸ್ಕೊಂಡಾಗ ಎದೆ ನಡುಗುತ್ತದೆ. ಛೇ ಅಲ್ಲಿ ನಿಂತಿದ್ದ ಕಾರಿನ ಫೋಟೋವೊಂದನ್ನು ತೆಗೆಯಬೇಕಿತ್ತು.
ಹಾಸನದಲ್ಲಿ ಊಟ ಮುಗಿಸಿ ಬೇಲೂರು ರಸ್ತೆಯಲ್ಲಿ ಚಿಕ್ಕಮಗಳೂರಿಗೆ ಹೋಗುವಾಗ ಹಳ್ಳಿಯೊಂದರ ಬಳಿ ಜನಗಳನ್ನು ಇಳಿಸಲು ನಿಂತಿದ್ದ ಎದುರಿನಿಂದ ಬಂದ ವಾಹನದಿಂದ ಇಳಿದು ಬಂದ ಹರೆಯದ ಹಳದಿ ಸೀರೆಯುಟ್ಟ ಹೆಣ್ಣೊಬ್ಬಳು ಕತ್ತು ಬಗ್ಗಿಸಿ ಅದ್ಯಾವುದೋ ಕನಸು ಕಾಣುತ್ತಾ ನನ್ನ ವಾಹನದ ಹಾರ್ನ್ ಶಬ್ಧವನ್ನು ಗಮನಿಸದೆ ನಿಂತಿದ್ದ ವಾಹನದ ಹಿಂಭಾಗದಿಂದ ನಡೆದು ಬರುತ್ತಿರಬೇಕಾದರೆ ಇನ್ನೇನು ಕಾರಿಗೆ ಡಿಕ್ಕಿ ಹೊಡೆಯಬೇಕೆನ್ನುವ ಕೊನೆಯ ಕ್ಷಣದಲ್ಲಿ ಏಯ್ ಎನ್ನುವ ನನ್ನ ಉದ್ಗಾರಕ್ಕೆ ಮತ್ತು ಆಕೆಯ ಪಕ್ಕದಲ್ಲಿದ್ದ್ದ ಮತ್ತೊಂದು ಹೆಂಗಸಿನ ಅಯ್ಯೊ ಎನ್ನುವ ಉದ್ಗಾರಕ್ಕೆ ಬೆಚ್ಚಿದ ಆಕೆ ಇಹಲೋಕಕ್ಕೆ ಹಿಂತಿರುಗಿದಾಗ ನನ್ನ ಕಾರು ಸ್ವಲ್ಪದರಲ್ಲಿ ಮುಂದೆ ಹೋಗಿತ್ತು. ಕೊನೆಕ್ಷಣದಲ್ಲಿ ಆಗುತ್ತಿದ್ದ ಅಪಘಾತದಿಂದ ಆಕೆ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಳು. ಆದರೆ ಇದನ್ನು ನಿರೀಕ್ಷಿಸಿದ್ದ ನನಗೆ ಅಷ್ಟೇನೂ ಗಾಭರಿಯಾಗಲಿಲ್ಲ. ಸ್ವಲ್ಪ ದೂರ ಪಯಣಿಸುವಷ್ಟರಲ್ಲಿ ಛಕ್ಕನೆ ಹಾರಿ ಬಂದ ಗುಬ್ಬಚ್ಚಿಯಂತಹ ಪುಟ್ಟಹಕ್ಕಿಯೊಂದು ಕಾರಿಗೆ ಬಡಿಯುವಂತೆ ಹಾರಿ ಬಂತು. ಹಕ್ಕಿಗಳು ಸಾಮಾನ್ಯವಾಗಿ ಕಾರಿಗೆ ಬಡಿಯುವ ಅವಕಾಶವಿರುವುದಿಲ್ಲವೆಂದು ಮುಂದೆ ಬಂದೆವು. ಯಗಚಿ ಜಲಾಶಯಕ್ಕೊಂದು ಭೇಟಿ ನೀಡೋಣವೆಂದು ವಾಹನ ನಿಲ್ಲಿಸಿ ಜಲಾಶಯದ ಬಳಿ ಒಂದೆರಡು ಛಾಯಾಚಿತ್ರ ಕ್ಲಿಕ್ಕಿಸಿದೆವು. ಅದೇಕೊ ಈ ಪ್ರವಾಸದ ತುಂಬಾ ಅಪಶಕುನಗಳು ಗೊಚರಿಸಿದ್ದವು. ವಯಕ್ತಿಕವಾಗಿ ಶಕುನಗಳಲ್ಲಿ ನಂಬಿಕೆಯಿರದ ನನಗೂ ಈ ಘಟನೆಗಳು ಧೃತಿಗೆಡುವಂತೆ ಮಾಡಿದ್ದವು. ಕಾರು ಹತ್ತುವ ಮುನ್ನ ಅದೇಕೊ ಮನಸ್ಸು ತಡೆಯದೆ ಹಳ್ಳಕ್ಕಿಳಿದಾಗ ಕಾರಿನ ಮುಂಭಾಗಕ್ಕೇನಾದರೂ ಹಾನಿಯಾಗಿದೆಯೆಂದು ಪರೀಕ್ಷಿಸಲು ನೋಡಿದವನಿಗೆ ಸಿಕ್ಕದ್ದು ಸತ್ತು ಕಾರಿಗೆ ಸಿಕ್ಕಿ ಹಾಕಿಕೊಂಡಿದ್ದ ಆ ಪುಟ್ಟ ಪಕ್ಷಿ. ಸಾಮಾನ್ಯವಾಗಿ ಹಾರುತ್ತಿರುವ ಯಾವ ಹಕ್ಕಿಗಳೂ ವಾಹನಕ್ಕೆ ಸಿಲುಕುವುದಿಲ್ಲ. ಮನ್ನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಯಾವ ಪುಟ್ಟ ಮರಿಗಳ ತಾಯಿಯೋ? ನನ್ನ ಕಾರಿಗೆ ಸಿಕ್ಕಿ ಜೀವ ಕಳೆದುಕೊಂಡಿತ್ತು. ಆ ಪುಟ್ಟ ಮರಿಗಳು ತಾಯಿಯ ಆಗಮನಕ್ಕಾಗಿ ಎದುರು ನೋಡುತ್ತಿರುವ ದೃಶ್ಯ ನನ್ನ ಕಣ್ಣೆದುರಿಗೆ ಒಮ್ಮೆ ಸುಳಿದು ಹೋಯಿತು. ನನ್ನ ಮನಸ್ಸು ಘಾಸಿ ಗೊಂಡಿತ್ತು. ಸತ್ತು ಹೋಗಿದ್ದ ಪಕ್ಷಿಯನ್ನು ತೆಗೆದು ಬಿಸುಡಿ ಮುಂದೆ ಹೊರಟೆ. ಮನೆಗೆ ಹಿಂತಿರುಗಿ ಹೋಗುವ ಮನಸ್ಸಾದರೂ ಅದೇಕೊ ಪ್ರಯಾಣ ಮುಂದುವರೆಸಿದೆ. ಸಂಜೆ ೬ ಘಂಟೆಯ ಸಮಯಕ್ಕೆ ಮುತ್ತೋಡಿ ತಲುಪಿದ್ದೆ.
ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ವಲ್ಪದರಲ್ಲೆ ಬರುವುದಾಗಿ ಅಲ್ಲಿನವರೆಗೂ ಕಾಯುವಂತೆ ತಿಳಿಸಿದರು ಅಲ್ಲಿದ್ದ ಕೆಲವು ಅರಣ್ಯ ಇಲಾಖಾ ನೌಕರರು. ನಿಮ್ಮ ಯಾವುದೆ ವಿನಂತಿ ಪತ್ರ ನಮಗೆ ತಲುಪಿಲ್ಲ ಎಂದು ಆತ ನನಗೆ ಮತ್ತೊಂದು ಆಘಾತ ಕೊಡಲು ಪ್ರಯತ್ನಿಸಿದ. ೧೦ ನಿಮಿಷ ತಡಕಾಡಿದ ನಂತರ ಪರ್ವಾಗಿಲ್ಲ ಬಿಡಿ ಎಂದು ನಮಗೆ ಕುಟೀರದ ದಾರಿ ತೋರಿಸಿದರು. ರಭಸದಿಂದ ಹರಿಯುತ್ತಿರುವ ಸೋಮವಾಹಿನಿಯ ದಡದಲ್ಲಿ ನಿರ್ಮಿಸಿರುವ ಸ್ವಚ್ಚತೆಯಿಲ್ಲದ ಕುಟೀರಗಳು. ಪರಿಸರ ಸುಂದರ, ಕುಟೀರಗಳು ಮಾತ್ರ ಸ್ವಚ್ಚತೆ ಕಾಣದೆ ಸೊರಗಿವೆ. ಇತ್ತೀಚೆಗೆ ಬೆಳಕಿನ ಹೆಂಚನ್ನು ಜೋಡಿಸಿದ್ದರಿಂದ ಮಳೆಯಲ್ಲಿ ನೀರು ಸೋರಿದ್ದ ಕುರುಹಾಗಿ ಅಲ್ಲಲ್ಲಿ ನೀರು ನಿಂತಿತ್ತು.
ಯಾವುದೆ ತೆರನಾದ ವಿದ್ಯುತ್ ದೀಪಗಳಿಲ್ಲದ ಕುಟೀರಗಳು. ಇಡೀ ಪ್ರದೇಶಕ್ಕೆ ಸೌರ ವಿದ್ಯುತಾಗಲಿ, ಸಾಮಾನ್ಯ ವಿದ್ಯುತಾಗಲಿ ಅಳವಡಿಸದಂತೆ ನ್ಯಾಯಾಲಯ ಸೂಚಿಸಿದೆಯೆಂದು ಅಲ್ಲಿನ ಅಧಿಕಾರಿ ರಾಘವೇಂದ್ರ ಮಾಹಿತಿಯಿತ್ತರು. ಸೀಮೆಯೆಣ್ಣೆಯಿಂದ ಉರಿಯುವ ಲಾಟೀನು ಅಥವ ನಾವು ತೆಗೆದುಕೊಂಡು ಹೋಗಿದ್ದ ಮೇಣದಬತ್ತಿಗಳೆ ನಮಗೆ ಬೆಳಕಿನ ಆಧಾರ. ದಟ್ಟ ಕಾಡಿನ ಆರಂಭದಲ್ಲಿ ನಿರ್ಮಿಸಿರುವ ಪ್ರದೇಶ. ಅರಣ್ಯ ಇಲಾಖಾ ಕಛೇರಿಗಳು ನೌಕರರ ವಸತಿ ಗೃಹಗಳು, ೨ ಕುಟೀರ, ಅಡುಗೆ ಭಟ್ಟರ ಮನೆಯಷ್ಟೆ ಇಲ್ಲಿರುವ ವ್ಯವಸ್ಥೆ. ಹಿಂದೆ ಇದ್ದ ಢೇರೆಗಳನ್ನು ಕಿತ್ತು ಹಾಕಲಾಗಿದೆ. ಮುತ್ತೋಡಿ ಹುಲಿ ಅಭಯಾರಣ್ಯ ಇದರ ಹೆಸರು. ಸುಮಾರು ೩೦ ಹುಲಿಗಳು ವಾಸವಾಗಿದೆಯೆಂದು ಉಲ್ಲಾಸ್ ಕಾರಂತ ಹುಲಿಗಣತಿ ವರದಿಯ ಆಧಾರಿತ ಎನ್ನುವುದು ಅವರ ಅಂಬೋಣ. ಹುಲಿ, ಚಿರತೆ, ಆನೆ, ಜಿಂಕೆ ಕಡೆವೆ ಕಾಡೆಮ್ಮೆ ಇಲ್ಲಿ ಕಾಣಸಿಗುವ ಮುಖ್ಯ ಪ್ರಾಣಿಗಳು (ಅದೃಷ್ಠವಿದ್ದರೆ ಮಾತ್ರ, ನಮಗಂತೂ ಕೆಂದಳಿಲು ಬಿಟ್ಟರೆ ಬೇರೆ ಯಾವ ಪ್ರಾಣಿಗಳೂ ಕಾಣಿಸಿಕೊಳ್ಳಲಿಲ್ಲ) ಏಷ್ಯಾದಲ್ಲೆ ಏಕೈಕ ಜನವಸತಿಯಿರದ ಸುಮಾರು ೪ ಲಕ್ಷ ಹೆಕ್ಟೇರ್ ವಿಸ್ತೀರ್ಣದ ಅತ್ಯಂತ ದಟ್ಟ ಕಾಡಿದು. ಅದಕ್ಕಾಗಿ ಸುಮಾರು ೧೬ ಹಳ್ಳಿಗಳನ್ನು ಈ ವನ್ಯ ಪ್ರದೇಶದಿಂದ ಸ್ಥಳಾಂತರಿಸಿದ್ದಾರೆ ಎನ್ನುವುದು ಅವರು ಕೊಟ್ಟ ಮತ್ತೊಂದು ಮಾಹಿತಿ. ಇಲ್ಲಿಂದ ಮೇಲೆ ೩ ಕಿ.ಮೀ ದೂರದಲ್ಲಿ ಅರಣ್ಯ ಇಲಾಖೆಯ ಶೀಗೆಕಾನ್ ಅತಿಥಿಗೃಹವಿದೆ. ಅದರಲ್ಲಿ ತಂಗಲು ಮಣಿಪಾಲದಿಂದ ಬಂದಿದ್ದ ಸಂಸಾರವೊಂದು ರಾಘವೇಂದ್ರರಿಗೆ ಮಾಹಿತಿಯಿತ್ತು ಅತಿಥಿಗೃಹದ ಕಡೆ
ವಾಹನ ತಿರುಗಿಸಿತು. ಈಗಾಗಲೆ ಅಲ್ಲಿಗೆ ತನ್ನ ಮಾರುತಿ ವಿಟಾರದಲ್ಲಿ ತೆರಳಿದ್ದ ಆ ಸಂಸಾರದ ನಾವಿಕನನ್ನು ಅಲ್ಲಿನ್ ಅಬಗ್ಗೆ ವಿಚಾರಿಸಿದೆ. ನಿಮ್ಮ ವಾಹನ ಅಲ್ಲಿಯವರೆಗೆ ಬರುವುದು ಅನುಮಾನ ಎಂಬ ಶಂಕೆ ವ್ಯಕ್ತಪಡಿಸಿದರು. ಶುದ್ದ ಬೆಂಗಳೂರು ಕನ್ನಡಿಗರ ಸ್ವಭಾವದಂತೆ ಮೊದಲು ಆಂಗ್ಲ ಭಾಷೆಯಲ್ಲಿ ಸಂಭಾಷಿಸಲು ಅವರು ಪ್ರಾರಂಭಿಸುತ್ತಿದ್ದಂತೆ ನಾನು ಕನ್ನಡದಲ್ಲೆ ಮಾತನಾಡಲು ಆರಂಭಿಸಿದೆ. ಅಚ್ಚ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದರೂ ಆಂಗ್ಲ ಭಾಷೆಯೇ ಹೆಮ್ಮೆಯ ಸಂಗತಿ ಅಥವ ತಮ್ಮ ಆಂಗ್ಲ ಭಾಷೆಯೆ ಜ್ಙಾನದ ಸಂಕೇತ ಎಂದು ಕನ್ನಡಿಗರು ಅದೇಕೆ ಭಾವಿಸಿದ್ದಾರೆಯೋ ನಾನರಿಯೆ? ಅಲ್ಲಿಗೆ ಹೋಗಲು ನಡೆದೇ ಹೋಗಬೇಕು ಇಲ್ಲವೆ ಜೀಪ್ ನಂತಹ ಸ್ವಲ್ಪ ಎತ್ತರವಿರುವ ವಾಹನವಾದರೂ ಆಗಲೇ ಬೇಕೆಂಬುದು ಅವರ ಅಭಿಮತ. ನಡೆದು ಹೋಗಲು ಆನೆಗಳ ಹಾವಳಿ!! ಏನಿದ್ರು ನಾಳೆಯ ಕಾರ್ಯಕ್ರಮಕ್ಕೆ ಈಗಲೇ ತಲೆಕೆಡಿಸಿಕೊಳ್ಳುವುದು ಬೇಡವೆಂದು ತೀರ್ಮಾನಿಸಿದೆ.
ನಮ್ಮ ವಿನಂತಿಯಂತೆ ಬೆಳ್ಳುಳ್ಳಿ ಇರದ ಮಾಡಿದ ಅಡುಗೆ ಹಸಿದಿದ್ದ ಹೊಟ್ಟೆಗೆ ರುಚಿಯೆನಿಸಿತು. ರಾತ್ರಿ ೮.೩೦ಕ್ಕೆಲ್ಲಾ ಪ್ರಯಾಣದ ದಣಿವು ನಮ್ಮನ್ನು ಮಲಗುವಂತೆ ಪ್ರೇರೆಪಿಸಿತ್ತು. ದೀಪದ ವ್ಯವಸ್ಥೆಯಿಲ್ಲದ್ದು ಇದಕ್ಕೆ ಪೂರಕ. ಬೆಳಗ್ಗೆ ೬ ಘಂಟೆಗೆ ಸಫಾರಿಗೆ ಹೋಗಲು ಸಿದ್ದರಾಗಿ ಬರ್ತೇವೆ ಎಂದವರಿಗೆ, ಕ್ಷಮಿಸಿ ಮೊನ್ನೆ ಬಿದ್ದ ಮಳೆಗೆ ಸೇತುವೆ ಮುರಿದು ಹೋಗಿ ಸಫಾರಿಗೆ ಹೋಗಲು ಸಾಧ್ಯವಿಲ್ಲವೆಂದು ತಿಳಿಸಿದರು. ಅಲ್ಲಿಗೆ ನಮ್ಮ ಈ ಪ್ರವಾಸ ಪೂರ್ತಿ ವ್ಯರ್ಥವಾಯಿತೆಂದೆ ಭಾವಿಸಿ, ಕುಟೀರದ ಕಡೆ ಲಾಟೀನು ಹಿಡಿದು ಹೊರಟೆವು. ಗವ್ವೆನ್ನುವ ಕತ್ತಲೆಯನ್ನು ಓಡಿಸಲು ಕೈಲ್ಲಿ ಹಿಡಿದಿದ್ದ ಲಾಟೀನಿಗೆ ಸಾಧ್ಯವಾಗುತ್ತಿರಲಿಲ್ಲ. ನಿಧಾನವಾಗಿ ನಡೆದು ಕುಟೀರ ಸೇರಿಕೊಂಡು ನಿದ್ದೆಗೆ ಜಾರಿದೆವು.
ಬೆಳಿಗ್ಗೆ ೭ ಘಂಟೆಗೆ ಎದ್ದು ಸ್ನಾನಾದಿಗಳನ್ನು ಮುಗಿಸಿ, ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟನ್ನು ಒಲ್ಲದ ಮನಸ್ಸಿನಿಂದ ಮುಕ್ಕಿ, ರಾಘವೇಂದ್ರರನ್ನು ನಮ್ಮನ್ನು ಶೀಗೇಕಾನ್ ಅತಿಥಿಗೃಹದ ಬಳಿ (ಅರಣ್ಯ ಇಲಾಖೆಯ ವಾಹನದಲ್ಲಿ) ಕರೆದು ಕೊಂಡು ಹೋಗುವಂತೆ ವಿನಂತಿಸಿದೆ. ಆತ ಅದರಿಂದ ತಪ್ಪಿಸಿಕೊಳ್ಳಲು, ನಾವು ಮುರಿದು ಬಿದ್ದಿರುವ ಸೇತುವೆಯ ಬಳಿ ಹೋಗಬೇಕಿದೆ ಎಂದು ಹೇಳಿ ತಪ್ಪಿಸಿಕೊಳ್ಳಲು ನೋಡಿದರು. ಇಂತದೊಂದು ಉತ್ತರವನ್ನು ಮೊದಲೇ ನಿರೀಕ್ಷಿಸಿದ್ದ ನಾನು ತಕ್ಷಣವೆ ನಮ್ಮನ್ನೂ ಅಲ್ಲಿಯವರೆಗೆ ಕರೆದು ಕೊಂಡು ಹೋಗಿ ಎಂದು ದುಂಬಾಲು ಬಿದ್ದೆ. ಈಗ ಆತ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿಬಿದ್ದರು. ಆಯ್ತು ಜೀಪ್ ಚಾಲಕ ಬರುವುದು ಅರ್ಧ ಘಂಟೆ ಆಗುತ್ತೆ ಅಲ್ಲಿಯವರೆಗೆ ಕಾಯುವುದಕ್ಕೆ ತಿಳಿಸಿ ಒಳಗೆ ಸೇರಿಬಿಟ್ಟರು. ಅರ್ಧ ಘಂಟೆಯ ನಂತರ ಜೀಪ್ ದುರಸ್ತಿಗಾಗಿ ಮಲ್ಲಂದೂರಿಗೆ ಹೋಗಬೇಕಿದೆ ಎಂದು ಮತ್ತೆ ತಪ್ಪಿಸಿಕೊಂಡರು. ಅವರ ನಿರ್ದೇಶನದಂತೆ ನನ್ನ ವಾಹನದಲ್ಲೆ ಶೀಗೆಕಾನ್ ಕಡೆ ಹೊರಟೆ. ಮುತ್ತೋಡಿಯಿಂದ ಚಿಕ್ಕಮಗಳೂರಿನ ದಾರಿಯಲ್ಲಿ ೧ ಕಿಮೀ ನಂತರ ಇರುವ ಫಲಕದ ಮಾಹಿತಿಯನ್ನು ಆಧರಿಸಿ ಕಚ್ಚಾರಸ್ತೆಯಲ್ಲಿ ವಾಹನವನ್ನು ನಿಧಾನವಾಗಿ ಚಲಿಸಿ ಅತಿಥಿಗೃಹ ತಲುಪಿದೆ, ದಾರಿಯುದ್ದಕ್ಕೂ ಆನೆಗಳ ಲದ್ದಿ ಅಲ್ಲಲ್ಲಿ ಕಾಣಿಸುತ್ತಿತ್ತು.
ಅತಿಥಿಗೃಹದ ಪಕ್ಕದಲ್ಲಿ ಕಾಲುದಾರಿಯೊಂದು ಕಾಣಿಸಿತು. ಕುತೂಹಲ ತಡೆಯಲಾರದೆ ಅಲ್ಲಿದ್ದ ನೌಕರರನ್ನು ಅದೇನೆಂದು ಕೇಳಿದೆ ಬೆಟ್ಟದ ಮೇಲ್ಗಡೆದೆ ಹೋಗುವ ದಾರಿ ಸಾರ್ ಎಂದ. ಹೋಗ್ಬಹುದಾ? ಎಂದು ನನ್ನ ಮುಂದಿನ ಪ್ರಶ್ನೆ. ಹೋಗಿ ಆದ್ರೆ ಆನೆಗಳ ಕಾಟ ಎನ್ನುವುದು ಅವನ ಎಚ್ಚರಿಕೆ. ನೀವು ಬನ್ನಿ ನಮ್ಮ ಜೊತೆಗೆ ಎಂದವನಿಗೆ ಮೇಲೆ ನೀರಿನ ಕೊಳವೆ ಒಡೆದು ಹೋಗಿದೆ ಅದನ್ನು ದುರಸ್ಥಿ ಮಾಡಲಿಕ್ಕೆ ಹೋಗುವುದಿದೆ. ಕೆಳಗಿಂದ ನಮ್ಮ ಜೊತೆಯವರು ಬರುತ್ತಾರೆ ಅವರು ಬಂದ ಮೇಲೆ ಹೋಗುವ ಎಂದ ಆತ. ಸರಿ ಅಷ್ಟು ಸಮಯ ಅತಿಥಿಗೃಹದ ಮೇಲ್ಭಾಗದಲ್ಲಿ ಕಳೆಯೋಣವೆಂದು ಅಲ್ಲಿಗೆ ನಡೆದೆವು. ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಇಲ್ಲಿಂದ ಅದ್ಭುತವಾಗಿ ಗೋಚರಿಸುತ್ತದೆ ಮತ್ತು ಹೆಬ್ಬೆ ಜಲಪಾತ ಸಣ್ಣದೊಂದು ಗೆರೆಯಂತೆ ಕಾಣುತ್ತದೆ ಅದೂ ಮಂಜಿಲ್ಲದ ಸಮಯದಲ್ಲಿ ಮಾತ್ರ. ಆಗಾಗ ಮುಸುಕುತ್ತಿದ್ದ ಮಂಜು, ಸುರಿಯುತ್ತಿದ್ದ ಮಳೆ ಚುಮುಚುಮು ಚಳಿ, ಹಚ್ಚ ಹಸಿರಿನ ದಟ್ಟ ಕಾಡು. ಇವೆಲ್ಲದರ ಮಧ್ಯೆ ಉತ್ತಮ ಸೌಲಭ್ಯಗಳನ್ನು ಹೊಂದಿದ ಅತಿಥಿಗೃಹ. ನಿಜಕ್ಕೂ ಸುಂದರ ಪರಿಸರ. ಛೇ! ಶೀಗೇಕಾನ್ ಅತಿಥಿಗೃಹ ಖಾಲಿಯಿದೆ ಕಾದಿರಿಸಲೇ? ಎಂದು ಕೇಳಿದವರಿಗೆ ಬೇಡವೆಂದು ಹೇಳಿ ತಪ್ಪು ಮಾಡಿದೆನೆಂದು ಈಗ ತಿಳಿಯಿತು. ಹುಡುಕಿದರೆ ಎಂತೆಂಥ ಜಾಗಗಳಿವೆ ಕರ್ನಾಟಕದಲ್ಲಿ ಎಂದು ಅರಿವಿಗೆ ಬರುತ್ತದೆ. ಮತ್ತೊಮ್ಮೆ ಇಲ್ಲಿಗೆ ಬಂದೇ ಬರುತ್ತೇನೆಂದು ಮನಸ್ಸಿನಲ್ಲೆ ತೀರ್ಮಾನಿಸಿದೆ.
ಮಾತಿನಂತೆ ಅರ್ಧ ಘಂಟೆಯ ನಂತರ ಆತ ಬಂದು ಹೋಗೋಣವೆಂದು ತಿಳಿಸಿದ. ಮೇಲೇನಿದೆ ಎಂದು ಕೇಳಿದವನಿಗೆ ಸಿಕ್ಕ ಉತ್ತರ ಏನಿಲ್ಲ ಇಲ್ಲಿಗೆ ನೀರು ಸರಬಾರಜು ಮಾಡುವ ಜಾಗವಷ್ತೆ. ಎಂದು ಅರ್ಧ ದಾರಿಗೆ ಬಂದ ಮೇಲೆ ಆತ ಈ ಉತ್ತರವನ್ನಿತ್ತ. ಈ ಹೊತ್ತಿಗಾಗಲೆ ನಮ್ಮ ಕಾಲುಗಳಿಗೆ ಅಂಟಿದ್ದ ಜಿಗಣೆ/ಇಂಬಳ/ಉಂಬಳ ಗಾಭರಿ ಬರಿಸುವಷ್ಟು ಸಂಖ್ಯೆಯಲ್ಲಿದ್ದವು. ಆದರೂ ನಡೆದೇ ನಡೆದೆವು. ಒಂದು ಅಡಿಗೂ ಕಡಿಮೆ ಅಗಲವಿರುವ ದಾರಿಯಲ್ಲಿ ಹೊಸ ಕೊಳವೆ ಅಳವಡಿಸಲು ಹಳ್ಳ ತೋಡಿದ್ದರಿಂದ ಅರ್ಧ ಆಡಿಯಷ್ಟೆ ಜಾಗದಲ್ಲಷ್ಟೆ ನಡೆಯಬೇಕಿತ್ತು. ಅಲ್ಲಲ್ಲಿ ಜಾರಿ ಬಿದ್ದು ಮೈಕೈಯೆಲ್ಲ ಕೆಸರು. ಬಟ್ಟೆಯೆಲ್ಲ ಕೆಸರುಮಯವಾಗಿತ್ತು. ಹಿಂದಿನ ದಿನ ರಾತ್ರಿ ಮತ್ತು ಈಗಲೂ
ಬೀಳುತ್ತಿದ್ದ ಮಳೆ ಮಣ್ಣನ್ನು ಸಡಿಲಗೊಳಿಸಿತ್ತು. ಕಾಲಿಟ್ಟರೆ ಅಡಿಗಳಷ್ಟು ಕೆಳಗೆ ಹೋಗುತ್ತಿತ್ತು. ನಾವು ೩ ಜನ ನಡೆಯಲು ಒದ್ದಾಡುತ್ತಿದ್ದರೆ ಅವರೀರ್ವರೂ ಚಕಚಕನೆ ಹತ್ತಿ ಹೋಗುತ್ತಿದ್ದರು. ಬಿದಿರಿನ ಕಾಡು ಪ್ರಾರಂಭವಾದೊಡನೆ ಅವರಲ್ಲೊಬ ನಮ್ಮನ್ನು ಅಲ್ಲೇ ನಿಲ್ಲಲು ಹೇಳಿ ಆನೆ ಎಲ್ಲಾದರು ಇದೆಯೆ ಎಂದು ಪರೀಕ್ಷಿಸಿ ಮುಂದೆ ಹೋಗುತ್ತಿದ್ದ. ಕಾಲುಗಳಿಗಂತು ಜಿಗಣೆಯೆಂಬ ರಕ್ತಬೀಜಾಸುರರು ದಾಳಿ ನಡೆಸುತ್ತಲೆ ಇದ್ದರು. ಈ ಮಧ್ಯೆ ಮತ್ತೆ ಮಳೆ ಬೀಳಲು ಪ್ರಾರಂಭಿಸಿ ನಮ್ಮ ಪರಿಸ್ಥಿತಿ ಗಂಭೀರವಾಗುತ್ತ ಹೋಯಿತು. ಕಾಲಿಟ್ಟೆಡೆಯೆಲ್ಲ ಜಿಗಣೆಗಳು. ಮಗನಂತು ಅಳಲು ಪ್ರಾರಂಭಿಸಿದ. ನಿಂತಲ್ಲೆ ಕುಣಿದಾಡಲು ಪ್ರಾರಂಭಿಸಿದ. ಅವನ ಕಾಲಿಗೆ ಹತ್ತಿದ್ದ ಜಿಗಣೆಗಳು ಕಿರಿಬೆರಳಿನ ಗಾತ್ರಕ್ಕೆ ಉಬ್ಬಿಕೊಂಡಿದ್ದವು. ಕಿತ್ತ್ತಾಕ್ಷಣ ರಕ್ತ ಸುರಿದು ಅವನ ಚಪ್ಪಲಿಯೆಲ್ಲ ಕೆಂಪು ಬಣ್ಣಕ್ಕೆ ತಿರುಗಿತು. ಇದಕ್ಕೆಲ್ಲಾ ಕಾರಣ ನಾವು ಚಾರಣ ಹೋಗಲು ಸಿದ್ದರಾಗದೆ ಬಂದಿದ್ದೆವು. ನನ್ನ ಚಪ್ಪಲಿ ದಾರಿಯಲ್ಲೆ ಕಿತ್ತು ಹೋಯಿತು. ಜಿಗಣೆಗಳಮ್ಟು ನಮ್ಮ ರಕ್ತ ಸಂಭಂಧಿಯಾಗಿ ಬಿಟ್ಟವು. ನನ್ನ ಪತ್ನಿ ೧ ಕಿ.ಮೀ ಮುಂಚೆಯೆ ಚಪ್ಪಲಿಯನ್ನು ದಾರಿಯಲ್ಲಿ ಬಿಟ್ಟು ಬರಿಗಾಲಿನಲ್ಲಿ ನಡೆಯುತ್ತಿದ್ದದ್ದು ನನ್ನ ಗಮನಕ್ಕೆ ಬಂತು. ಸಣ್ಣ ಕಲ್ಲುಗಳು ಕಾಲಿಗೆ ಚುಚ್ಚಿ ಹಿಂಸೆಯಾಗುತ್ತಿತ್ತು. ಆದರೂ ನಡೆಯದೆ ವಿಧಿಯಿರಲಿಲ್ಲ. ಈ ಸಮಯಕ್ಕೆ ನಮ್ಮೊಡನೆ ಬಂದ ಅವರಿಬ್ಬರು ಬಹುದೂರ ಹೋಗಿದ್ದರು. ಮಳೆ ಬಿರುಸಾಗತೊಡಗಿತು ಜಿಗಣೆಗಳು ತಡೆಯಲಾರದಷ್ಟು ವಿಪರೀತವಾಗ ತೊಡಗಿದಾದ ಇನ್ನು ಮುಂದೆ ಹೋಗುವುದು ಸರಿಯಲ್ಲವೆಂದು ಹಿಂತಿರುಗ ತೊಡಗಿದೆವು. ಜಿಗಣೆಗಳು ಅವುಗಳಿಗೆ ಬೇಕಾದಷ್ಟು ರಕ್ತ ಹೀರಿ ಹಣ್ಣಾಗಿ ಅವಾಗಿಯೇ ಬಿದ್ದು ಹೋಗುತ್ತಿದ್ದವು. ಕಾಲಿನಲ್ಲಿ ರಕ್ತ ಜಿನುಗುತ್ತಿದ್ದದ್ದು ಮಾತ್ರ ಕಾಣುತ್ತಿತ್ತು. ಅಕ್ಕ ಪಕ್ಕದ ಮರಗಳ ಮೇಲಿದ್ದ ಜಿಗಣೆಗಳು ಮೈಮೇಲೆ ಅಂಟಿಕೊಳ್ಳುತ್ತಿದ್ದವು. ಈ ಪರಿಯ ಜಿಗಣೆಗಳ ಕಾಟ ಅನುಭವಿಸಿದ್ದು ಇದೇ ಮೊದಲು. ವೇಗವಾಗಿ ಇಳಿಯಲು ದಾರಿ ಸರಿಯಿರಲಿಲ್ಲ. ಜಿಗಣೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಇಳಿದೇ ಇಳಿದೆವು. ಅರ್ಧ ದಾರಿಗೆ ಬರುವಷ್ಟರಲ್ಲಿ ನೀರಿನ ಕೊಳವೆಯನ್ನು ಸರಿಪಡಿಸಿದ ಹುಡುಗರಿಬ್ಬರು ಹಿಂತಿರುಗಿ ನಮ್ಮನ್ನು ದಾಟಿಕೊಂಡು ಮುನ್ನಡೆಯತೊಡಗಿದರು. ನೀರು ಕೊಳವೆಯಲ್ಲಿ ಹರಿಯುವಾಗ ಉದ್ಭವಿಸುತ್ತಿದ್ದ ಶಬ್ಧ ಯಾವುದೋ ಪ್ರಾಣಿಯ ಅಥವಾ ಸರೀಸೃಪವೋ ಹರಿದಾಡಿದ ಸದ್ದನ್ಥೋ ಹೋಲುತಿದ್ದದ್ದು ನಮಗೆ ಗಾಭರಿ ತರಿಸುತ್ತಿತ್ತು. ಕೊನೆಗೊಮ್ಮೆ ನಮ್ಮ ಗುರಿ ಅತಿಥಿಗೃಹ ಕಾಣಿಸಿ ನಿಟ್ಟುಸಿರು ಬಿಟ್ಟು ಕಾಲಿಗೆ ಅಂಟಿದ್ದ ಜಿಗಣೆಗಳನ್ನೆಲ್ಲ ಕಿತ್ತು ಹಾಕಿ, ಅಡುಗೆ ಮನೆಯ ಹಿಂಭಾಗದ ನಳದಲ್ಲಿ ಕಾಲಿಗೆ ಮೆತ್ತಿದ್ದ ಕೆಸರನ್ನೆಲ್ಲ ತೊಳೆದು ಅವರು ಕೊಟ್ಟ ಕಪ್ಪು ಚಹಾವನ್ನು ಚಪ್ಪರಿಸಿದೆವು.
ಕಾರನ್ನು ಹತ್ತಿ ೩೦ ಮೀಟರ್ ಸಹಾ ಮುಂದೆ ಹೋಗುವ ಮುನ್ನವೆ ಸರಿಯಾಗಿ ಅತಿಥಿಗೃಹದ ಎದುರಿಗೆ ಹಳ್ಳವನ್ನು ತಪ್ಪಿಸುವ ಭರದಲ್ಲಿ ನೀರು ಹರಿಯಲು ಮಾಡಿದ್ದ ಕಾಲುವೆಗೆ ಕಾರಿನ ಮುಂಭಾಗದ ಚಕ್ರ ಇಳಿದು ಸಿಕ್ಕಿ ಹಾಕಿಕೊಂಡಿತು. ಅತಿಥಿಗೃಹದ ಗೋಡೆಗೂ ನನ್ನ ಕಾರಿಗೂ ಕೇವಲ ೩ ಇಂಚಿನ ವ್ಯತ್ಯಾಸವಿತ್ತು. ೨-೩ ಪ್ರಯತ್ನಗಳ ನಂತರ ನಿಧಾನವಾಗಿ ಕಾರನ್ನು ಹಿಂದಕ್ಕೆ ತೆಗೆದು ಕೊಂಡೆ. ಈಗ ಎಚ್ಚರಿಕೆಯಿಂದ ವಾಹನವನ್ನು ಚಲಾಯಿಸುತ್ತಿದ್ದೆ. ಅಲ್ಲಲ್ಲಿ ಬಿದ್ದಿದ್ದ ಹೊಂಡಗಳಲ್ಲಿ ವಾಹನ ಇಳಿದಾಗ ಕಾರಿನ ತಳಭಾಗಕ್ಕೆ ಕೆಲವೊಮ್ಮೆ ತಗಲುವ ಶಬ್ದ ನನಗೆ ಕಸಿವಿಸಿ ಉಂಟು ಮಾಡುತ್ತಿತ್ತು. ಹಳ್ಳವೊಂದನ್ನು ತಪ್ಪಿಸುವ ಭರದಲ್ಲಿ ಮತ್ತೊಮ್ಮೆ ಕಾರು ಪಕ್ಕಕ್ಕೆ ಸರಿದಾಗ ಉಸುಕಿನಲ್ಲಿ ಸಿಕ್ಕಿಹಾಕಿ ಕೊಂಡಿತ್ತು. ಈ ಬಾರಿ ಪರಿಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿತ್ತು. ಕಾರಿನ ಚಕ್ರ ಕೆಸರಿನಲ್ಲಿ ಸಂಪೂರ್ಣ ಹೂತುಹೋಗಿತ್ತು. ಪ್ರಯತ್ನ ಪಟ್ಟಷ್ಟು ಕಾರಿನ ಚಕ್ರ ಒಳಗಿಳಿಯುತ್ತಿತ್ತು. ಮುತ್ತೋಡಿಯ ನೌಕರರ ಸಾರ್ ಅಲ್ಲಿ ಆನೆಗಳ ಕಾಟ ಹುಷಾರು ಎಂಬ ಎಚ್ಚರಿಕೆಯ ಮಾತು ಕಿವಿಯೊಳಗೆ ರಿಂಗಣಿಸುತ್ತಿತ್ತು. ಕಾರಿನಿಂದಿಳಿದು ಮೇಲೆತ್ತಲು ಪ್ರಯತ್ನಿಸಿದರೆ ಉಹೂಂ ಕಾರು ಅಲ್ಲಾಡಿಸಲೂ ಆಗುತ್ತಿಲ್ಲ ಸುಮಾರು ೧೦ ಅಡಿಗಳಷ್ಟು ದೂರ ಇದೇ ರೀತಿಯ ಉಸುಕಿನಿಂದ ತುಂಬಿದ ಕೆಸರಿತ್ತು. ಮುತ್ತೋಡಿಯಿಂದ ಅರಣ್ಯ ಇಲಾಖೆಯ ಜೀಪ್ ತಂದು ಎಳೆಸುವ ಪ್ರಯತ್ನ ಮಾಡೋಣವೆಂದು ಹೆಂಡತಿ ಮಗನನ್ನು ಪ್ರಯತ್ನಿಸಿ ಎಂದು ಅವರನ್ನು ಕಳುಹಿಸಿದೆ. ಆದರೆ ಅವರನ್ನು ಯಾವುದಾದರು ಕಾಡುಪ್ರಾಣಿಗಳು ಆಕ್ರಮಿಸಿದರೆ ಎನ್ನುವ ಭಯ ಪ್ರಾರಂಭವಾಯಿತು. ಮತ್ತೊಮ್ಮೆ ಪ್ರಯತ್ನ ಮಾಡುವ ಎಂದು ತೀರ್ಮಾನಿಸಿ ಕಾರು ಹತ್ತಿ ಕುಳಿತ್ತು ಸ್ಟಿಯರಿಂಗನ್ನು ಎರಡೂ ಬದಿಗೂ ಬಲವಂತದಿಮ್ದ ತಿರುಗಿಸಿ ಜಾಗ ಮಾಡಿಕೊಂಡೆ ಹಿಂದಕ್ಕೂ ಮುಂದಕ್ಕೂ ಚಕ್ರವನ್ನು ಗುಂಜಿಸಿ ಕಾರನ್ನು ಓಡಿಸುವ ನನ್ನ ಪ್ರಯತ್ನಕ್ಕೆ ೪-೫ ಸಲ ಪ್ರಯತ್ನಿಸಿದ ನಂತರ ಯಶ ಸಿಕ್ಕಿತು. ಬದುಕಿದೆಯಾ ಬಡಜೀವವೆ ಎಂದು ಕೊಳ್ಳುತ್ತಾ ಜೋರಾಗಿ ಹಾರ್ನ್ ಮಾಡಿ ಹೆಂಡತಿ ಮಗನಿಗೆ ಸುದ್ದಿ ಮುಟ್ಟಿಸಿದೆ. ಅವರು ಖುಷಿಯಿಂದ ನನ್ನ ಬರುವಿಕೆಯನ್ನು ಕಾಯುತ್ತಿದ್ದರು. ನೇರವಾಗಿ ಶಿಬಿರಕ್ಕೆ ಹಿಂತಿರುಗಿ ಮುಳ್ಳಯನಗಿರಿ ರಸ್ತೆಯಲ್ಲಿ ಒಂದಷ್ಟು ದೂರ ಕಾರಿನಲ್ಲಿ ಹೋಗಿ ಅಲ್ಲಿನ ಕಾಡನ್ನೆ ಆಸ್ವಾದಿಸುತ್ತ ಓಡಾಡಿದೆವು. ಕತ್ತಲಾಗುತ್ತಿದ್ದಂತೆ ಹಿಂತಿರುಗಿದೆವು. ಸಫಾರಿಗೆ ಹೋಗಬೇಕೆನ್ನುವ ಆಸೆ ಹಾಗೆಯೇ ಉಳಿಯಿತು. ರಾತ್ರಿ ಊಟ ಮಾಡಿ ಚಂದ್ರಗ್ರಹಣದ ರಾತ್ರಿ ಮುಗಿಸಿ ಬೆಳಿಗ್ಗೆ ಮಗನಿಗಾಗಿ ಬಿಸಿನೀರನ್ನು ತಂದು ಸ್ನಾನ ಮಾಡಿಸಿ ಚಿಕ್ಕಮಗಳೂರಿಗೆ ಬಂದು ಬೋಳ ರಾಮೇಶ್ವರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಹೋಟೆಲ್ ಒಂದರಲ್ಲಿ ಉಪಹಾರ ಮುಗಿಸಿ ಕಳಸಾಪುರದ ನಮ್ಮ ತಂದೆಯ ಸೋದರತ್ತೆಯ ಮನೆಯಲ್ಲಿ ಊಟ ಮಾಡಿ ಹಾಸನಕ್ಕೆ ಬಂದಾಗ ೨.೦೦ ಘಂಟೆ. ತ್ರಿಮುಖ ಗಣಪನಿಗೊಂದು ನಮಸ್ಕಾರ ಹಾಕಿ ಮನೆಗೆ ತಲುಪಿದಾಗ ಸಮಯ ೫.೧೦. ಈ ಪ್ರವಾಸದ ತುಂಬ
ದುರಾದೃಷ್ಠ ನನ್ನ ಬೆನ್ನು ಹತ್ತಿತ್ತೇನೊ ಎನ್ನುವ ಭಾವನೆ ಈಗಲೂ ನನ್ನನ್ನು ಕಾಡುತ್ತಿದೆ.