Wednesday, June 18, 2008

ಗೊತ್ತುಗುರಿಯಿಲ್ಲದ ಪ್ರವಾಸ

ಶೀರ್ಷಿಕೆ ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ, ೫ ಜನ ಬಿ. ಇ. ಎಲ್ ಸಹೋದ್ಯೋಗಿಗಳು ಪ್ರವಾಸ ಹೊರಡುವುದು, ಅದು ಎಲ್ಲಿಗೆ, ನಮ್ಮ ಗುರಿ ಯಾವುದು ಎಂಬ ಯಾವ ಮಾಹಿತಿ ಇಲ್ಲದೆ. ಕಪ್ಪೆ ತಕ್ಕಡಿಗೆ ಹಾಕಿದಂತ ನನ್ನ ಸಹೋದ್ಯೋಗಿಗಳನ್ನು ಹೊರಡಿಸಿಕೊಂಡು ಹೊರಡುವುದು ಮತ್ತೊಂದು ಸಾಹಸದ ಕೆಲಸವೇ ಸೈ.
೨೪/೦೬/೨೦೦೪ ರಂದು ಪ್ರವಾಸ ಹೋಗೋಣವೆಂದು ಸುಮಾರು ಒಂದು ತಿಂಗಳಿನಿಂದ ವರಾತ ಹಚ್ಚಿದವನಿಗೆ ಫಲ ದೊರೆತದ್ದು ೨೩/೦೬/೨೦೦೪ ರಂದು. ನಾನು ಮೊದಲೆ ಹೇಳಿದಂತೆ ಕಪ್ಪೆ ಬುದ್ದಿಯ ಸುರೇಶ ಮತ್ತು ಮಧುಸೂಧನರನ್ನು ಹೊರಡಿಸುವಷ್ಟರಲ್ಲಿ ಇನ್ನುಳಿದ ನಾನು, ಶ್ರೀಧರ ಮತ್ತು ಶಂಕರ ನಮಗೆ ಗೊತ್ತಿರುವ ಎಲ್ಲ ವಿದ್ಯೆಯನ್ನು ಖರ್ಚು ಮಾಡಬೇಕಾಯಿತು. ಯಾವುದೆ ಸ್ಥಳ, ಕೋಣೆ ಕಾದಿರಿಸುವ ಗೋಜಿಲ್ಲದಿರುವುದು ಮದುವೆಯಾಗಿರುವ ಬ್ರಹ್ಮಚಾರಿಗಳು ಪ್ರವಾಸ ಹೊರಟಾಗ ಮಾತ್ರ. ನಾವೆಲ್ಲ ಕೈಗೆ ಸಿಕ್ಕಿದ ಬಟ್ಟೆ ಬರೆಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಹೊರಡುವುದಕ್ಕೆ ಸಿದ್ದವಾಗಬೇಕಿತ್ತು. ಹೆಂಡತಿಯ ಅರೆ ಮುನಿಸು, ಅರೆ ಕೋಪದ ನೋಟ ಮತ್ತು ಚೂರಿಯಂತೆ ಇರಿಯುವ ಮಾತುಗಳು ನಮ್ಮನ್ನು ಅಧೀರರನ್ನಾಗಿಸಿದರೂ ಛಲದಂಕ ಮಲ್ಲರಂತೆ [ಅವರೆದುರಿಗೆ ಬಿಟ್ಟರೆ ನಮ್ಮ ಆಟ ಇನ್ನೆಲ್ಲು ನಡೆಯುವುದಿಲ್ಲ ;-)) ಎಂಬ ಕಟು ಸತ್ಯದ ಅರಿವು ನಮಗಿದೆ] ಸಿದ್ದರಾದೆವು. ಎಷ್ಟು ಜನ ಮನೆಗೆ ತಿಳಿಸದೆ ಬಂದಿದ್ದರೋ ;-)) ಗೊತ್ತಿಲ್ಲ!!! ಕೊನೆಗೂ ನಮ್ಮ ಪ್ರವಾಸ ಗಜಪ್ರಸವದಂತೆ ಕೈಗೂಡಿದ್ದು ೨೪ ರಂದು.
ಮಧ್ಯಾನ್ಹ ೧.೩೦ ಕ್ಕೆ ಹೊರಡುವುದಾಗಿ ತಿಳಿಸಿದ್ದರೂ ಕಾರ್ಖಾನೆಯ ಕೆಲಸಕ್ಕಷ್ಟೆ ಪ್ರವಾಸ ಹೋಗಿ ಅನುಭವವಿದ್ದ ಸುರೇಶ ಬೆಳಗಿನಿಂದಲೂ ಕಾಣದಿದ್ದಾಗ ನಮ್ಮೆಲ್ಲರ ಮುಖದಲ್ಲಿ ಆತಂಕ ಇವನು ಕೈಕೊಟ್ಟ ಎಂದು ಮನದಲ್ಲೆ ನಿಂದಿಸುತ್ತಿದವರಿಗೆ ಸರಿಯಾಗಿ ಸಾಮಾನ್ಯ ಪಾಳಿಯ ಅರ್ಧ ದಿನಕ್ಕೆ ಕಾರ್ಖಾನೆಯ ಸಮವಸ್ತ್ರ ಧರಿಸಿದ ಸುರೇಶ ಹಾಜರಾದಾಗ ನಮಗೆಲ್ಲ ಆತಂಕ ಮತ್ತು ಆಶ್ಚರ್ಯ. ಏನೋ ಪ್ರವಾಸ ಹೊರಟಿದ್ದೆವೆಲ್ಲ ಎಂದು ಕೇಳಿದವರಿಗೆ, ಹೋಗ್ಲೇಬೇಕಾ? ಎಂದು ಮರು ಪ್ರಶ್ನಿಸಿದ ಸುರೇಶನನ್ನು ಕಂಡು ತಲೆ ಚಚ್ಚಿಕೊಳ್ಳಬೇಕೆನಿಸುತ್ತಿತ್ತು. ಅವನನ್ನು ಮತ್ತೆ ಮನೆಗೆ ಓಡಿಸಿ ಬಟ್ಟೆ ಬರೆಗಳನ್ನು ತರುವಂತೆ ತಿಳಿಸಿ, ಸುರೇಶ ಬರದಿದ್ದರೆ ಬೇಡ ನಾವು ನಾಲ್ಕೆ ಜನವಾದರೂ ಸೈ ಹೊರಡುವ ಎಂದು ಉಳಿದವರನ್ನು ಹುರಿದುಂಬಿಸಿ, ತುಂಬಾ ದಿನ ಚಾಲೂ ಮಾಡದೆ ನಿಂತಿದ್ದ ನನ್ನ ಮಾರುತಿ ಓಮ್ನಿಯನ್ನು ಸಜ್ಜುಗೊಳಿಸಲು ಮನೆ ಕಡೆ ನಡೆದಾಗಲೂ ನನಗೆ ನಾವು ಪ್ರವಾಸ ಹೊರಡುವ ನಂಬಿಕೆಯಿರಲಿಲ್ಲ.
ಓಡಿಸದೆ ನಿಲ್ಲಿಸಿ ಹೆಚ್ಚು ದಿನಗಳಾಗಿದ್ದರಿಂದ ಜಪ್ಪಯ್ಯ ಎಂದರೂ ನನ್ನ ಕಾರು ಆರಂಭಗೊಳ್ಳಲೇ ಇಲ್ಲ. ಕೊನೆಗೆ ತಂತ್ರಙ್ಞನನ್ನೆ ಕರೆಸಿ ಆರಂಭಿಸಿದಾಗ ಸಮಯ ೪ ಘಂಟೆ. ಕೈಗೆ ಸಿಕ್ಕಿದ ಬಟ್ಟೆಗಳನ್ನು ತುಂಬಿಕೊಂಡು ಹೊರಡುವಷ್ಟರಲ್ಲಿ ಸುರೇಶ ತನ್ನ ದ್ವಿಚಕ್ರಧರನಾಗಿ ಕಾಣಿಸಿಕೊಂಡ. ನಮ್ಮ ಮನೆಯಲ್ಲಿ ಅವನ ವಾಹನವನ್ನು ನಿಲ್ಲಿಸಿ ದಾರಿಯಲ್ಲಿ ಶಂಕರ ಮತ್ತು ಮಧುಸೂಧನನ್ನು ಕಾರಿಗೆ ಹತ್ತಿಸಿಕೊಂಡು ಕಾರ್ಖಾನೆ ಬಳಿ ಬಂದು ಶ್ರೀಧರನನ್ನು ಕೂಡಿಸಿಕೊಂಡು ಬಿ.ಇ.ಎಲ್. ವೃತ್ತದಲ್ಲಿ ಬಂದು ನಿಂತಾಗ ಸಮಯ ಸರಿಯಾಗಿ ೫ ಘಂಟೆ.

ಗೊರಗುಂಟೆ ಪಾಳ್ಯವನ್ನು ದಾಟಿ ನೆಲಮಂಗಲದ ಹಾದಿ ಹಿಡಿದಾಗ ನಾವು ಜೋಗದ ಜಲಪಾತದೆಡೆ ಪ್ರಯಾಣಿಸುವುದೆಂದು ನಿರ್ಧರಿಸಿದೆವು. ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು ದಾಟಿದಾಗ ಸುರೇಶ ಮತ್ತು ಶಂಕರನ ಹಾಸ್ಯ ಚಟಾಕಿಗಳನ್ನು ಮತ್ತು ಕ್ರೈಂ ಸ್ಟೋರಿಯ ಕಾಕತ್ಕರ್ ಅವರ ಧಾಟಿಯಲ್ಲಿ ಅಣಕಿಸುವುದನ್ನು ಆನಂದಿಸುತ್ತಾ ವಾಹನ ಚಾಲನೆ ಮಾಡುತ್ತಿದ್ದ ನಾನು ಮುಂದೆ ಹೋಗುತ್ತಿದ್ದ ಮಾರುತಿ ಓಮ್ನಿಯನ್ನು ಗಮನಿಸಿರಲಿಲ್ಲ. ನನ್ನ ವೇಗಕ್ಕೆ ಸರಿಹೊಂದುವ ವಾಹನವೊಂದು ಮುಂದೆ ಹೋಗುತ್ತಿದ್ದರೆ ಅದನ್ನು ಸುರಕ್ಷಿತ ಅಂತರದಲ್ಲಿ ಹಿಂಬಾಲಿಸಿಕೊಂಡು ಹೋಗುವುದು ನನ್ನ ಅಭ್ಯಾಸಗಳಲ್ಲೊಂದು ಯಾವುದೆ ಒತ್ತಡವಿಲ್ಲದೆ ಹೆದ್ದಾರಿಗಳಲ್ಲಿ ಸುಲಭವಾಗಿ ವಾಹನ ಓಡಿಸುವುದಕ್ಕೆ ಒಂದು ಅನೂಕೂಲಕರ ಮಾರ್ಗವೆಂದು ನನ್ನ ನಂಬಿಕೆ. ನಮ್ಮ ಮುಂದಿನ ವಾಹನದ ಹಿಂದಿನ ಆಸನಗಳಲ್ಲಿ ಕುಳಿತಿದ್ದ ಲಲನೆಯರು ನಾವು ಅವರನ್ನು ಹಿಂಬಾಲಿಸುತ್ತಿದ್ದೇವೆಂದು ತಪ್ಪಾಗಿ ಅರ್ಥೈಸಿಕೊಂಡು ಪರದಾಡುತ್ತಿದ್ದದ್ದು ನಮ್ಮ ಗಮನಕ್ಕೆ ಬಂತು!! ಅವರ ಸಂಕಟ ನೋಡಲಾರದೆ, ಅವರನ್ನು ಮುಂದೆ ಹೋಗಲು ಬಿಟ್ಟ ನಾವು ಹಿಂದೆಯೆ ಉಳಿಯುವುದಕ್ಕಾಗಿ ವಾಹನ ನಿಲ್ಲಿಸಿ ಕೆಳಗಿಳಿದರೆ ಆಗಲೆ ಸಂಜೆಯ ರವಿ ಪಡುವಣದಲ್ಲಿ ಮನೆ ಸೇರುವ ತವಕದಲ್ಲಿ ವೇಗವಾಗಿ ಧಾವಿಸುತ್ತಿದ್ದ. ಕತ್ತಲಾದಾಗ ಶ್ರೀಧರನ ಉದ್ಗಾರ "ಅಯ್ಯೊ ಬೆಂಗಳೂರಿನಲ್ಲಿ ಇಷ್ಟೋಂದು ನಕ್ಷತ್ರಗಳೆ ಇರಲ್ಲ" ಇಲ್ಲಿ ಮಾತ್ರ ಹೇಗಿದೆ ಎನ್ನುವ ಅವನ ಪ್ರಶ್ನೆಗೆ ನಕ್ಕು ವಾಹನವೇರಿ ಶಿವಮೊಗ್ಗ ತಲುಪಿದಾಗ ಸರಿಯಾಗಿ ರಾತ್ರಿ ೧೦ ಘಂಟೆ.
ಶಿವಮೊಗ್ಗದ ಪ್ರಾರಂಭದಲ್ಲೆ ತುಂಗೆಗೆ ಅಡ್ಡಲಾಗಿರುವ ಸೇತುವೆಯ ನಂತರ ಇರುವ ವಸತಿಗೃಹವೊಂದರಲ್ಲಿ ಕೋಣೆಯಂದನ್ನು ಪಡೆದು ಪಕ್ಕದಲ್ಲಿದ್ದ ಉಪಹಾರಗೃಹದಲ್ಲಿ ಊಟ ಮುಗಿಸಿ ವಾಹನ ಚಾಲನೆಯಿಂದ ಆಯಾಸಗೊಂಡಿದ್ದ ನಾನು ಮಲಗಲು ಹೊರಟೆ. ಉಳಿದವರು ಅದ್ಯಾವಾಗ ಮಲಗಿದರೊ? ನಾನರಿಯೆ.
25 ರಂದು ಬೆಳಿಗ್ಗೆ ಎಚ್ಚರವಾದಾಗಲೆ ನನ್ನ ಅರಿವಿಗೆ ಬಂದದ್ದು ಇವರೆಲ್ಲ ರಾತ್ರಿ ತುಂಬ ತಡವಾಗಿ ಮಲಗಿದ್ದರು ಎಂಬ ಸಂಗತಿ. ಪಕ್ಕದ ಉಪಹಾರಗೃಹದಲ್ಲಿ ಉಪಹಾರ ಮುಗಿಸಿ ನಮ್ಮ ಪ್ರಯಾಣ ತುಂಗ ಮತ್ತು ಭದ್ರೆಯರ ಸಂಗಮದ ಕಡೆಗೆ. ಶಿವಮೊಗ್ಗದಿಂದ ಸುಮಾರು ೧೫ ಕಿ,ಮೀ ದೂರದಲ್ಲಿರುವ ಪುಟ್ಟ ಊರು ಕೂಡಲಿ(ಕೂಡ್ಲಿ). ಇಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯ ಸ್ಥಾಪಿತ ಶಾರದಾ ಪೀಠವಿದೆ. ಮಳೆಗಾಲವಾದ್ದರಿಂದ ತುಂಬಿ ಹರಿಯುತ್ತಿರುವ ಎರಡೂ ನದಿಗಳ ಸಂಗಮಕ್ಕೆ ಬೆಟ್ಟದ ಹಿನ್ನೆಲೆಯಲ್ಲಿರುವ ತೆಂಗಿನ ತೋಟಗಳು ಹಚ್ಚ ಹಸಿರಿನ ಹೊಲಗದ್ದೆಗಳು ಮೆರಗನ್ನು ನೀಡುತ್ತವೆ. ಭದ್ರಾವತಿಯ ಕೈಗಾರಿಕೆಗಳಿಂದ ಭದ್ರಾ ಹೊಳೆ ಹೆಚ್ಚು ಮಲಿನಗೊಂಡಿದ್ದರೂ, ಮಳೆಗಾಲದ ಉತ್ತಮ ಮಳೆಯಿಂದ ಎಲ್ಲವೂ ಕೊಚ್ಚಿ ಹೋಗಿದ್ದರಿಂದ
ಸ್ವಲ್ಪ ನೀರಿನ ಮಲಿನತೆ ಕಡಿಮೆಯಾಗಿತ್ತು. ಮಲೆನಾಡಿನ ತಪ್ಪಲಿನ ಬಯಲು ಸೀಮೆಯ ಹಳ್ಳಿಯ ವಾತಾವರಣ, ಬೆಳಗಿನ ಪ್ರಶಾಂತತೆ ಮತ್ತು ಚುಮುಗುಡಿಸುವ ಎಳೆಯ ಬಿಸಿಲನ್ನು ಆಸ್ವಾದಿಸುತ್ತ ಕುಳಿತವರಿಗೆ ಸಮಯ ಸರಿದದ್ದೆ ಅರಿವಿಲ್ಲ. ಶಿವಮೊಗ್ಗಕ್ಕೆ ಹಿಂತಿರುಗಿ ಸಾಗರದ ಕಡೆ ನಮ್ಮ ಪಯಣ. ದಾರಿಯಲ್ಲಿ ಸಿಕ್ಕ ತ್ಯಾವರೆಕೊಪ್ಪ ಹುಲಿ/ಸಿಂಹಧಾಮಕ್ಕೊಂದು ಭೇಟಿ. ಇಡೀ ಪ್ರವಾಸಕ್ಕೆ ನಮಗೆಲ್ಲ ಮಧುಸೂಧನ ಮಹಾಶಯನ ಸಂಚಾರಿ ದೂರವಾಣಿಯೊಂದೆ (ಮೊಬೈಲ್) ನಮಗೆ ಸಂಪರ್ಕ ಸೇತುವೆ. ಘಳಿಗೆಗೊಮ್ಮೆ ಅದರಲ್ಲಿ ಸಿಗ್ನಲ್ ಇದೆಯೊ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದ ಅವನನ್ನು ನಾವೆಲ್ಲ ಕಾಡಿದರೂ ಅವನ ದೂರವಾಣಿಯಿಂದ ನಮಗಾದ ಉಪಕಾರ ಅಷ್ಟಿಷ್ಟಲ್ಲ.
ಇಲ್ಲಿಂದ ಜೋಗದ ದಾರಿಗಿಳಿಯಿತು ನನ್ನ ವಾಹನ ಆಯನೂರು, ಆನಂದಪುರ ಮುಖೇನ ಸಾಗರ ತಲುಪಿ ಅಲ್ಲಿನ ಉಡುಪಿ ಹೋಟೆಲ್ಲೊಂದರಲ್ಲಿ ಬಾಳೆ ಎಲೆಯ ಊಟ ಮಾಡಿ ನೇರವಾಗಿ ಜೋಗದ ಕಡೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗದ್ದೆಗಳು ಕಣ್ಣಿಗೆ ತಂಪನ್ನೆರೆಯುವುದರಲ್ಲಿ ಯಾವುದೆ ಅನುಮಾನವಿಲ್ಲ. ಸಿಕ್ಕ ಕಡೆಯಲ್ಲೆಲ್ಲ ಫೋಟೊ ಕ್ಲಿಕ್ಕಿಸುತ್ತ ಜೋಗ ತಲುಪಿದಾಗ ಸಮಯ ೨ ಘಂಟೆಯಿರಬಹುದು. ಜಿಟಿ ಜಿಟಿ ಜಿನುಗುತಿದ್ದ ಮಳೆರಾಯ. ಜಲಪಾತದ ವೀಕ್ಷಣೆಗೆ ಅಡ್ಡಿಯುಂಟುಮಾಡುತ್ತಿದ್ದ. ಜಲಪಾತ ತಳಭಾಗಕ್ಕೆ ಇಳಿಯಲು ಇರುವ ದಾರಿ ಬಿಟ್ಟು ಬೇರೊಂದು ದಾರಿಯಲ್ಲಿ ಹೋಗಿ ಎಂದು ತೋರಿಸಿದ ಕುಡುಕನ ಮಾತಿಗೆ ಬೆಲೆ ಕೊಡದೆ ಮೆಟ್ಟಿಲುಗಳನ್ನು ಇಳಿಯಲು ಆರಂಭಿಸಿದೆವು. ಇಲ್ಲಿ ಮಧು ತಾನು ಕೆಳಗೆ ಬರುವುದಿಲ್ಲವೆಂದು ತರಲೆ ಆರಂಭಿಸಿದ. ಅವನನ್ನು ಬಿಟ್ಟು ಇಳಿಯಲು ನಾವೆಲ್ಲರೂ ಹೊರಟಾಗ ಕೆಳಗಿನಿಂದ ಬಂದ ಹೆಂಗಳೆಯರ ಗುಂಪನ್ನು ನೋಡಿದ ಮಧು ಅದೇಕೊ ತಾನು ಬರುವುದಾಗಿ ಪ್ರಕಟಿಸಿ ಇಳಿಯಲು ಸಹಾಯಕ್ಕಾಗಿ ಕೋಲೊಂದನ್ನು ಹಿಡಿದು ಹೊರಟೆ ಬಿಟ್ಟ. ತಲೆ ಹರಟೆ ಹರಟುತ್ತಾ ಇಳಿದೇ ಇಳಿದೆವು ಅಲ್ಲಲ್ಲಿ ಸಿಗುವ ಸಣ್ಣ ಅಂಗಡಿಗಳಲ್ಲಿ ನಿಂಬೆ ಪಾನಕ ಕುಡಿಯುತ್ತ ಕೊನೆಯ ಅಂಗಡಿ ತಲುಪಿ ಅಲ್ಲೆ ನಮ್ಮ ಕೆಲವು ಹೊರೆಗಳನ್ನು ಇಳಿಸಿ ಜಲಪಾತ ಸೃಷ್ಟಿಸಿರುವ ಹೊಂಡದಲ್ಲಿ ಈಜಲು ಇಳಿಯಲು ನಾನು ಹೊರಟಾಗ, ನಮ್ಮ ಮಧು ತನ್ನ ಕ್ಯಾಮೆರವನ್ನು ಅನಾಮತ್ತಾಗಿ ನೀರಿನಲ್ಲಿ ಬೀಳಿಸಿ ಬಿಟ್ಟ ಯಾಕೊ ಕ್ಯಾಮೆರ ನೀರಿಗೆ ಹಾಕಿದೆ ಎನ್ನುವ ಎಲ್ಲರ ಪ್ರಶ್ನೆಗೆ ಸ್ಟುಡಿಯೋದಲ್ಲಿ ತೊಳೆಸುವ ಬದಲು ಇಲ್ಲೆ ತೊಳೆದು ಬಿಟ್ಟೆ ಎಂದ ಮುಗ್ದನಂತೆ.

ಜಿನುಗುತ್ತಿದ್ದ ಮಳೆಯಲ್ಲಿ ಕೊರೆಯುವ ಛಳಿಯಲ್ಲಿ ಮಂಜಿನಂತೆ ಕೊರೆಯುವ ನೀರಿನಲ್ಲಿ ಈಜುತ್ತಿದ್ದರೆ, ನಮಗರಿವಿಲ್ಲದಂತೆ ನಮ್ಮ ಹಲ್ಲುಗಳು ಕಟ ಕಟ ಶಬ್ಧ ಮಾಡುತ್ತಿದ್ದವು. ಒಂದು ಘಂಟೆಯ ನೀರಾಟದ ನಂತರ ಮೇಲೆ ಹತ್ತಲು ಪ್ರಾರಂಭಿಸಿದೆವು. ಕಡಿದಾದ ಬೆಟ್ಟವನ್ನು ಹತ್ತಿ ಅಭ್ಯಾಸವಿಲ್ಲದ ಎಲ್ಲರೂ ಮತ್ತು ದೇಹ ದಣಿಯೆ ಈಜಿದ್ದ ನಾನು ಮತ್ತು ಮಧು ಹೆಜ್ಜೆಗೊಮ್ಮೆ ಕುಳಿತು ದಣಿವಾರಿಸಿಕೊಳ್ಳಬೇಕಾದ ಪರಿಸ್ಥಿತಿ. ದಾರಿಯುದ್ದಕ್ಕೂ ತಮ್ಮ ಹಾಸ್ಯ ಚಟಾಕಿಗಳಿಂದ ಚಾರಣವನ್ನು ಅವಿಸ್ಮರಣೀಯಗೊಳಿಸಿದ ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳು. ದಣಿವಿನ ಮಹಿಮೆಯೋ ಅಥವ ಅತ್ಯಂತ ಉಲ್ಲಸಿತ ಮನಸ್ಸಿನ ಪ್ರಭಾವವೋ ದಾರಿಯಲ್ಲಿ ಸಿಗುವ ಪ್ರತಿ ಗೂಡಂಗಡಿಯಲ್ಲು ಸಿಗುವ ಅನಾನಸ್ ಮತ್ತು ನಿಂಬೆ ಪಾನಕ ಅಮೃತದಂತೆ ಭಾಸವಾಗುತ್ತಿತ್ತು. ಬಹುಶಃ ನಾನು ಆಸ್ವಾದಿಸಿದ ಅತ್ಯಂತ ರುಚಿಕರ ಅನಾನಸ್ ಇವೆಂದು ಹೇಳುವುದು ಖಂಡಿತ ಉತ್ಪ್ರೇಕ್ಷೆಯಲ್ಲ.
ಮನಸ್ಸಿಗೆ ಬಂದಾಗೊಮ್ಮೆ ಹೆಜ್ಜೆ ಹಾಕುತ್ತ ಯಾವುದೆ ಸಮಯದ ಪರಿವೆಯಿರದೆ ನಡೆದವರು ಕೊನೆಗೊಮ್ಮೆ ಮೇಲೇರಿ ಬಂದು ಜೋಗದಿಂದ ಕಾಣುವ ಅತಿಥಿಗೃಹಕ್ಕೆ ಹೋರಟೆವು. ಇಲ್ಲಿಂದ ಜೋಗ ಜಲಪಾತ ವಿಭಿನ್ನವಾಗಿ ಕಾಣಿಸುತ್ತದೆ. ಇದೆ ಈಗ ಮುಂಗಾರು ಮಳೆ ಸ್ಪಾಟ್ ಎಂದು ಹೆಸರುವಾಸಿಯಾಗಿದೆ. ಅಲ್ಲಿ ಮುಂಗಾರು ಮಳೆ ಚಿತ್ರೀಕರಣಗೊಳ್ಳುವುದಕ್ಕೆ ೨ ವರ್ಷ ಮುನ್ನವೆ ಆ ಜಾಗಗಳಲ್ಲಿ ಜಲಪಾತವನ್ನು, ಅದು ಬೀಳುವ ಜಾಗದಲ್ಲಿ ನಿಂತು ಇಣುಕಿ ನೋಡುವ ಸಾಹಸ ಮಾಡಿದ್ದ ಯಲ್ಲಾಪುರದ ಕಮಲಾಕ್ಷಿಯಿಂದ ಕೇಳಿ ತಿಳಿದಿದ್ದ ನಾನು ಕೂಡ ಅದನ್ನು ನೋಡೆಬಿಡುವ ಎಂದು ಬಂದು ಬಿಟ್ಟೆ. ಜಿಟಿಗುಟ್ಟುತ್ತಿರುವ ಮಳೆ ಬಂಡೆಗಳಲ್ಲಿ ಪಾಚಿ ಕಟ್ಟಿ ಜಾರುವಂತೆ ಮಾಡಿದ್ದರೂ ಜಲಪಾತ ತುದಿಗೆ ಹೊರಟಾಗ ಹಿಂದೆ ನಿಂತು ಗಾಭರಿಯಿಂದ ಬೇಡಾ ಪ್ಲೀಸ್ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ ಸುರೇಶ. ಅವನ ಚೀತ್ಕಾರ ಹೇಗಿತ್ತೆಂದರೆ ಚಲನ ಚೀತ್ರಗಳಲ್ಲಿನ ಬಲಾತ್ಕಾರ ದೃಶ್ಯಗಳಲ್ಲಿ ಕೇಳಿಬರುವ ಚೀತ್ಕಾರದಂತಿತ್ತು. ಏನಾಯಿತು ಎಂದು ಅವನಲ್ಲಿಗೆ ಬಂದು ಕೇಳಿದವರಿಗೆ ನಾವು ಅಲ್ಲಿಗೆ ಹೋಗುವುದೆ ಬೇಡವೆಂದು ಪರಿಪರಿಯಾಗಿ ನಮಗೆ ಬೇಡುತ್ತಿದ್ದ. ನೀನು ಇಲ್ಲೆ ಇರು ಬರಬೇಡವೆಂದು ಅವನನ್ನು ಸಮಾಧಾನಿಸಿ ನಿಧಾನವಾಗಿ ಜಲಪಾತ ಉಂಟಾಗುತ್ತಿದ್ದ ಜಾಗಕ್ಕೆ ಬಂದು ಕೆಳಗೆ ಬಗ್ಗಿ ನೋಡಿದವರಿಗೆ ಹೃದಯದ ಬಡಿತ ಒಮ್ಮೆಲೆ ನಿಂತು ಹೋಗುವ ಅನುಭವ. ಅಬ್ಬ ರುದ್ರರಮಣೀಯ ಕೆಳಗೆ ನಾವು ಈಜಿದ ಹೊಂಡ ಅತ್ಯಂತ ಚಿಕ್ಕದಾಗಿ ಕಾಣಿಸುತ್ತಿತ್ತು. ಅಲ್ಲಿರುವ ಜನಗಳು ಲಿಲ್ಲಿಪುಟ್ ಗಳಂತೆ ತೋರುತ್ತಿದ್ದರು. ಹೆಚ್ಚು ಹೊತ್ತು ನಿಂತರೆ ತಲೆ ದಿಮ್ಮೆಂದು ತಿರುಗುವ ಅನುಭವವಾಗುತ್ತದೆ. ಕೆಲವರು ಅಂಗಾತ ಬಂಡೆಗಳ ಮೇಲೆ ಮಲಗಿ ತಮ್ಮ ಶಿರವನ್ನು ಮಾತ್ರ ಹೊರಚಾಚಿ ಅಲ್ಲಿನ ದೃಶ್ಯವನ್ನು ವೀಕ್ಷಿಸಲು ಪ್ರಯತ್ನಿಸಿ ಸಫಲರೂ ಆದರು. ನಮ್ಮ ಸುರೇಶನ ಚೀತ್ಕಾರ ಮಾತ್ರ ಇನ್ನು ನಿಂತಿರಲಿಲ್ಲ ಅವನು ಅಳುವುದೊಂದೆ ಬಾಕಿ ಉಳಿದದ್ದು. ಅತಿಥಿ ಗೃಹದ ಕಡೆಯಿಂದ ಹೊರಟರೆ ಸಿಗುವ ಮೊದಲೆರಡು ಜಲಪಾತಗಳಲ್ಲು ಇದೆ ಅನುಭವವನ್ನು ಹೊತ್ತು ಹಿಂತಿರುಗಿ ಬಂದು ಕಾರಿನಲ್ಲಿ ಸಾಗರಕ್ಕೆ ಬಂದು ವರದಶ್ರೀ ವಸತಿಗೃಹದಲ್ಲಿ ೪ ಹಾಸಿಗೆಯ ಕೋಣೆಯೊಂದನ್ನು ಹಿಡಿದು ಹಾಸಿಗೆಗೆ ಬಿದ್ದಾಗ ಉಸ್ಸಪ್ಪ ಎನ್ನುವ ಸಾರ್ಥಕ್ಯ ನಿಟ್ಟುಸಿರು.
ನನಗೆ ಅವಶ್ಯವಾಗಿ ಬೇಕಿದ್ದ (ಏಕೆಂದರೆ ಇಡೀ ತಂಡದಲ್ಲಿ ವಾಹನ ಚಾಲನೆ ಗೊತ್ತಿದ್ದವನು ನಾನೊಬ್ಬನೆ) ಒಂದೆರಡು ಘಂಟೆಯ ವಿಶ್ರಾಂತಿಯ ನಂತರ ಸಂಜೆಯ ಫಲಹಾರಕ್ಕಾಗಿ ವರದಶ್ರೀಯ ಉಪಹಾರ ಗೃಹಕ್ಕೆ ಬಂದಾಗಲೆ ನಮಗೆ ಅರಿವಾದದ್ದು ವಸತಿಗೃಹದ ಸೌಂದರ್ಯ. ಬೆಂಗಳೂರು ಹೊನ್ನಾವರ ರಾಜ್ಯ ಹೆದ್ದಾರಿಗೆ ಅಂಟಿಕೊಂಡಂತೆ ಇರುವ ಸಾಗರದ ಕೆರೆಯ ಪಕ್ಕದಲ್ಲಿ ನಿರ್ಮಿತವಾಗಿರುವ ವಸತಿಗೃಹ ಯಾವ ಪಂಚತಾರ ವಸತಿಗೃಹಕ್ಕೂ ಕಡಿಮೆಯಿಲ್ಲ. ಉಪಹಾರಗೃಹದಿಂದ ಕಾಣುವ ಸರೋವರವಂತೂ ಮನಮೋಹಕ. ಬೆಳ್ಳಕ್ಕಿ ನೀರಕ್ಕಿಗಳ ಚೆಲ್ಲಾಟ, ನೈದಿಲೆಯ ಹೂವುಗಳು ಆ ಬದಿಯಲ್ಲಿರುವ ತೆಂಗಿನ ತೋಟ ಸರೋವರದ ಅಂದವನ್ನು ಹೆಚ್ಚಿಸಿವೆ. ಬೆಂಗಳೂರಿನಲ್ಲಿದ್ದರೆ ಇದೆ ಒಂದು ಪ್ರವಾಸಿ ತಾಣವಾಗುತ್ತಿದ್ದಿರಬಹುದು.
ರುಚಿ ಶುಚಿ ಉಪಹಾರದ ನಂತರ ನಮ್ಮ ಮುಂದಿನ ಕಾರ್ಯಕ್ರಮಕ್ಕೊಂದು ರೂಪ ಕೊಡಬೇಕಿತ್ತು ಅದಕ್ಕಾಗಿ ಸಾಗರದಲ್ಲಿರುವ ನನ್ನ ಭಾವ ಫ್ರೌಡಶಾಲೆಯ ಶಿಕ್ಷಕರಾದ ಪ್ರಸನ್ನರನ್ನು ಭೇಟಿಯಾಗಿ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಾಗರದಲ್ಲೆ ಒಂದು ಸುತ್ತು ಹೊಡೆದು ಬಂದು ಮಧುವಿನ ಮೊಬೈಲ್ ಬ್ಯಾಟರಿಯನ್ನು ಜೀವ ನೀಡಲು ಹರಸಾಹಸ ಮಾಡಿ ಕೊನೆಗೆ ಅದಕ್ಕೆ ಹೊಂದುವ ಅಡಾಪ್ಟರ್ ಸಿಗದಿದ್ದಾಗ ನೇರವಾಗಿ ಫ್ಯಾನ್ ಗಾಗಿ ಬಿಟ್ಟಿದ್ದ ವೈರನ್ನೆ ಕತ್ತರಿಸಿ ಇದಕ್ಕೆ ಸುತ್ತಿ ಅವನ ಮೊಬೈಲ್ ಬ್ಯಾಟರಿಗೆ ಜೀವ ತುಂಬಿದೆವು ಏಕೆಂದರೆ ಅವನೊಬ್ಬನ ಬಳಿಯಷ್ಟೆ ಆಗ ಮೊಬೈಲ್ ಇದ್ದದ್ದು. ಇದಕ್ಕೆಲ್ಲ ತನ್ನ ತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿದ ಸುರೇಶ ಅಭಿನಂದನಾರ್ಹ.
ರಾತ್ರಿಯ ಊಟಕ್ಕಾಗಿ ಉಪಹಾರಗೃಹದತ್ತ ನಡೆದವರಿಗೆ ಸುರೇಶ ಬಾಂಬೊಂದನ್ನು ಸಿಡಿಸಿದ. ತಾನು ತುರ್ತಾಗಿ ಬೆಂಗಳೂರಿಗೆ ಹಿಂದಿರುಗಬೇಕೆಂದು ಎಲ್ಲರನ್ನೂ ಹೌಹಾರಿಸಿಬಿಟ್ಟ. ತಾನು ಮನೆಯಲ್ಲಿ ಹೇಳಿದ್ದು ಒಂದು ದಿನದ ಪ್ರವಾಸವೆಂದೂ ಅದ್ದರಿಂದ ಮನೆಯವರೆಲ್ಲ ಗಾಭರಿಯಾಗುತ್ತಾರೆ ನಾನು ಹಿಂದಿರುಗಲೇಬೇಕೆಂದು ಹಠಹಿಡಿದು ಚಿಕ್ಕ ಮಗುವಿನಂತೆ ಕುಳಿತು ಬಿಟ್ಟ. ಸರಿ ಮಹರಾಯ ನಿಮ್ಮ ಮನೆಯವರಿಗೆ ಫೋನಾಯಿಸಿ ತಿಳಿಸುವ ಎಂದು ಸಮಾಧಾನಿಸಿದವರಿಗೆ ಇನ್ನೊಂದು ಬಾಂಬಿಟ್ಟ. ತಾನು ಉಡುಪುಗಳನ್ನು ತಂದಿಲ್ಲ ಒಂದು ದಿನಕ್ಕಾಗುವಷ್ಟು ಮಾತ್ರ ತಂದಿದ್ದೇನೆಂದು. ಸರಿ ಮತ್ತೆ ಸಾಗರದ ಮಾರುಕಟ್ಟೆಗೆ ಹೋಗಿ ಅವನಿಗೆ ಮಧು ಹೊಸ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟ. ಸುರೇಶನ ಶ್ರೀಮತಿಯನ್ನು ದೂರವಾಣಿ ಮುಖೇನ ಸಂಪರ್ಕಿಸಿ ಇನ್ನು ಎರಡು ದಿನಗಳ ನಂತರ ಬರುವುದಾಗಿ ತಿಳಿಸಿದರೆ ಅಯ್ಯೊ ಒಂದು ವಾರ ಆದಮೇಲೆ ಬನ್ನಿ ಎನ್ನುವ ಅವರ ಉತ್ತರಕ್ಕೆ ಪೆಚ್ಚು ಪೆಚ್ಚಾಗಿ ಸುರೇಶನ ಕಡೆ ನೋಡುತ್ತ ಊಟಕ್ಕೆ ಹೆಜ್ಜೆ ಹಾಕಿದೆವು.
ಬೆಳಿಗ್ಗೆ ಎದ್ದು ಬೆಳಗಿನ ಕರ್ಮಗಳನ್ನು ಮುಗಿಸಿ ವರದಶ್ರೀಯಲ್ಲೆ ಉಪಹಾರ ಮುಗಿಸಿ ವರದಹಳ್ಳಿಯ ಕಡೆ ಪ್ರಯಾಣ ಬೆಳೆಸಿದೆವು ಸಾಗರದ ನಂತರ ಒಂದು ಕಿ.ಮೀ ಮುನ್ನ ನಾವು ಎಡಭಾಗದ ರಸ್ತೆಗೆ ತಿರುಗಬೇಕಿತ್ತು. ಆದರೆ ನಾವು ಆ ದಾರಿಯನ್ನು ಬಿಟ್ಟು ಮುಂದೆ ಹೋದೆವು ಸುಮಾರು ೨-೩ ಕಿ.ಮಿ ಕ್ರಮಿಸಿದ ನಂತರ ಅನುಮಾನಗೊಂಡು ದಾರಿಹೋಕರನ್ನು ಕೇಳಿ ವಾಹನವನ್ನು ಹಿಂತಿರುಗಿಸಿದೆವು. ಮತ್ತೊಮ್ಮೆ ನಾವು ಹೋಗುವ ಸರಿಯಾದ ದಾರಿ ಸಿಗದಿದ್ದಾಗ ಪಕ್ಕದಲ್ಲಿದ್ದ ಚಹಾ ಅಂಗಡಿಯೊಂದಕ್ಕೆ ದಾರಿ ವಿಚಾರಿಸಲು ಹೋದ ಶಂಕರ ಎಷ್ಟು ಸಮಯವಾದರೂ ಬರದಿದ್ದಾಗ ನಾನೆ ವಿಚಾರಿಸಲು ತೆರಳಿದವನಿಗೆ ಕಂಡದ್ದು ಆ ಅಂಗಡಿಯಲ್ಲಿರುವ ಹಳ್ಳಿಯ ಸ್ನಿಗ್ಧ ಸೌಂದರ್ಯದ ಹುಡುಗಿಯೊಬ್ಬಳ ಸೌಂದರ್ಯಕ್ಕೆ ಮಾರುಹೋಗಿ ಅವರೊಡನೆ ಹರಟುತ್ತ ನಿಂತಿದ್ದ ಶಂಕರ. ಅವನನ್ನು ಬಲವಂತವಾಗಿ ತಾಯಿಯಿಂದ ಎಳೆಯ ಕರುವನ್ನು ಒತ್ತಾಯವಾಗಿ ಎಳೆದುಕೊಂಡು ಬರುವಂತೆ ಎಳೆದು ತಂದು ಕಾರಿನಲ್ಲಿ ಕುಳ್ಳಿರಿಸಿ ನಮ್ಮ ಪ್ರಯಾಣ ಮುಂದುವರೆಸಿದೆವು. ಈ ಬಾರಿ ಯಾವುದೆ ಅಡೆ ತಡೆಯಿಲ್ಲದೆ ಶ್ರೀಧರಾಶ್ರಮಕ್ಕೆ ಬಂದು ತಲುಪಿದೆವು. ವಾವ್!! ಎಂತಹ ಹಸಿರು ಗಿರಿಗಳ ನಡುವೆ ಇರುವ ಪ್ರಶಾಂತ ಸುಂದರ ಆಶ್ರಮ ಯಾವುದೇ ಮಠಗಳ ಆಡಳಿತಕ್ಕೂ ಒಳಪಡದೆ ಸ್ವತಂತ್ರವಾಗಿರುವ ಈ ಆಶ್ರಮ ನನ್ನನ್ನು ಬಹುವಾಗಿ ಸೆಳೆಯಿತು. ಶ್ರೀಧರ ಸ್ವಾಮಿಗಳ ತಪೋಭೂಮಿಯ ಜಾಗದಲ್ಲೆ ನಿರ್ಮಿತವಾದ ಆಶ್ರಮ ತನ್ನ ಪ್ರಶಾಂತತೆಯಿಂದ ಎಂತಹವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಅಲ್ಲೆ ಇರುವ ಚಿಕ್ಕಗುಡ್ಡವೊಂದರಲ್ಲಿ ಉಕ್ಕಿಹರಿಯುವ ನೀರಿನ ಚಿಲುಮೆ ಶ್ರೀಧರ ತೀರ್ಥ. ಬೆಟ್ಟ ಹತ್ತಿ ಸಾಗಿದರೆ ಕುರುಚಲು ಕಾಡಿನಂತಹ ಜಾಗದಲ್ಲಿ ಸ್ಥಾಪಿಸಲಾಗಿರುವ ಧ್ವಜವಿದೆ. ಅಲ್ಲಿಂದ ಕಾಣುವ ಸುಂದರ ಮಲೆನಾಡಿನ ಪರಿಸರ ಎತ್ತ ನೋಡಿದರೂ ದೃಷ್ಟಿಹರಿಯುವಷ್ಟೂ ಹಸಿರೆ ಹಸಿರು. ಅಲ್ಲಿನ ನೀರವತೆಯಂತೂ ಓಹ್! ವರ್ಣಿಸಲಸದಳ. ಅದೆ ಕಾಡಿನ ದಾರಿಯಲ್ಲಿ ನಮ್ಮೊಳಗಿನ ಹಾಡುಗಾರ ಸುರೇಶ ಹಾಡಿದ "ನೀ ಮಾಯೆಯೊಳಗೋ" ಹಾಡು ನಮ್ಮನ್ನು ಭಕ್ತಿ ಪರವಶರಾಗುವಂತೆ ಮಾಡಿತು. ಸ್ವಲ್ಪ ಸಮಯ ಅಲ್ಲಿನ ದಿವ್ಯ ಮೌನವನ್ನು ಆಸ್ವಾದಿಸುತ್ತ ಕುಳಿತೆವು. ನಂತರ ಏನಾದರೂ ಹೊಸದನ್ನು ಹುಡುಕುವ ನನ್ಗೆ ಪಕ್ಕದಲ್ಲೆ ಇದ್ದ ಕಾಡಿನೊಳಗೆ ಪ್ರವೇಶಿಸಿ ನೋಡುವ ಬಯಕೆಗೆ ಮೊದಲು ಬೇಡವೆಂದರೂ ನಂತರ
ತಾವಾಗಿಯೆ ನನ್ನನು ಹಿಂಬಾಲಿಸಿ ಬರದೆ ಬೇರೆ ವಿಧಿಯಿರಲಿಲ್ಲ ನನ್ನ ಸಹವರ್ತಿಗಳಿಗೆ. ಆರಂಭದಲ್ಲಿ ಸ್ಪಷ್ಟವಾಗಿರುವ ಕಾಲುದಾರಿ ಕ್ರಮೇಣ ಸಣ್ಣದಾಗಿ ಮಾಯವಾಗುತ್ತ ಹೋಗುತ್ತಿತ್ತು. ೧೦ ನಿಮಿಷಗಳ ನಡಿಗೆಯ ನಂತರ ನಮ್ಮನ್ನು ಹಿಂಬಾಲಿಸದೆ ಉಳಿದ ಮಧುವನ್ನು ಮತ್ತಷ್ಟು ಗಾಭರಿಗೊಳಿಸುವ ಸಲುವಾಗಿ ಕಾಡಿನೊಳಗೆ ಅವಿತು ಅವನನ್ನು ಸ್ವಲ್ಪ ಸಮಯ ಕಾಡಿಸಿ ಕೊನೆಗೆ ಭಯಮಿಶ್ರಿತ ಎಚ್ಚರಿಕೆಯ ಮಾತುಗಳಿಗೆ ಸೋತು ಹಿಂತಿರುಗಬೇಕಾಯಿತು. ಕಾಡಿನೊಳಗೆ ಮರದ ಮೇಲೆ ಕುಳಿತಿದ್ದ ಹಾರ್ನ್ಬಿಲ್ ಹಕ್ಕಿಯನ್ನು ಹರ ಸಾಹಸ ಪಟ್ಟು ಚಿತ್ರೀಕರಿಸಿಕೊಂಡು . ಕಣ್ಣಿಗೆ ಮಾತ್ರ ಕಾಣಿಸುತ್ತ ಕ್ಯಾಮೆರದಲ್ಲಿ ಹಿಡಿಯಲು ಹೋದರೆ ಮರೆಯಾಗುತ್ತಿದ್ದ ಮಲಬಾರ್ ಅಳಿಲನ್ನು ಚಿತ್ರೀಕರಿಸಲಾಗದೆ ನಿರಾಶೆಗೊಂಡು ಹಿಂತಿರುಗಿದೆವು. ಈ ಹೊತ್ತಿಗಾಗಲೆ ನಾವು ಕಾಡಿನಲ್ಲಿ ಸುಮಾರು ೧ ಘಂಟೆಗೂ ಹೆಚ್ಚು ಕಾಲ ಕಳೆದಿದ್ದೆವು. ಧ್ವಜಸ್ಥಂಭವನ್ನು ಬಳಸಿ ಆಶ್ರಮಕ್ಕೆ ಹಿಂತಿರುಗಿ ಅಲ್ಲಿಂದ ನೇರವಾಗಿ ಸಾಗರಕ್ಕೆ ಬಂದು ಇಕ್ಕೇರಿಯ ಕಡೆ ಹೊರಟೆವು.
ಸಾಗರದಿಂದ ೪-೫ ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿ ಇಕ್ಕೇರಿ ಇಲ್ಲಿರುವ ಅಘೋರೇಶ್ವ್ರರ ದೇವಸ್ಥಾನ ಮನ ಸೆಳೆಯುತ್ತದೆ. ಭೃಹದಾಕಾರದ ನಂದಿಯ ವಿಗ್ರಹ, ಮುಸ್ಲಿಂ ದಾಳಿಕೋರರಿಗೆ ಆಹಾರವಾದ ಅಘೋರೇಶ್ವರ ವಿಗ್ರಹದ ಪಳೆಯುಳಿಕೆಗಳು ಗಮನ ಸೆಳೆಯುತ್ತವೆ. ಕಂಬಗಳಲ್ಲಿರುವ ಕೆತ್ತನೆ ಆಕರ್ಷಣೀಯ. ಅಲ್ಲಿಂದ ನಮ್ಮ ಪ್ರಯಾಣ ಸಿಗಂದೂರು ಬಾರ್ಜ್ ನತ್ತ. ಶರಾವತಿಯ ಹಿನ್ನೀರಿನಲ್ಲಿ ರಸ್ತೆ ಮುಳುಗಿದ್ದರಿಂದ ಹಡಗಿನಂತ ಯಂತ್ರವೊಂದು ವಾಹನಗಳನ್ನು ಹಿನ್ನೀರಿನ ಆಚೆ ಬದಿಯಲ್ಲಿರುವ ರಸ್ತೆಯಲ್ಲಿ ನಮ್ಮನ್ನು ವಾಹನ ಸಮೇತ ಹೊತ್ತು ಹಾಕುತ್ತದೆ. ಇದಕ್ಕಾಗಿ ಸುಮಾರು ೨-೩ ಘಂಟೆಗಳವರೆಗೆ ಕಾಯ್ದು ಆ ದಾರಿಯಲ್ಲಿ ಬರುವ ೨ ಬಸ್ ಮತ್ತು ೫-೬ ಕಾರುಗಳನ್ನು ತುಂಬಿಕೊಂಡ ನಂತರವಷ್ಟೆ ನಮ್ಮ ಬಾರ್ಜ್ ಪಯಣಕ್ಕೆ ಮುಕ್ತಿ ಸಿಕ್ಕದ್ದು. ಸಿಗಂಧೂರಿನಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿಯಿತ್ತು ನಮ್ಮ ಪಯಣ ಮುಂದುವರೆಸಿದೆವು. ಈ ಹೊತ್ತಿಗಾಗಲೆ ಒಬ್ಬನೆ ವಾಹನ ಚಲಾಯಿಸಿದ್ದ ಆಯಾಸಕ್ಕಾಗಿ ಜ್ವರ ಬಂದಂತೆ ನನಗೆ ಭಾಸವಾಗುತ್ತಿತ್ತು. ಆದರೂ ಬೇರೆ ವಿಧಿಯಿರಲಿಲ್ಲ ನಾನು ಈಗಾಗಲೆ ತಿಳಿಸಿದಂತೆ ನನ್ನ ಸ್ನೇಹಿತರಿಗೆ ಯಾರಿಗೂ ವಾಹನ ಚಾಲನೆ ಬರುತ್ತಿರಲಿಲ್ಲ. ಸುತ್ತಲಿದ್ದ ಹಸಿರು ಗಿರಿಕಣಿವೆಗಳ ಮಧ್ಯೆ ಉತ್ತಮವಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರೆ ಕಾಡುತ್ತಿದ್ದ ಜ್ವರದ ಅರಿವಿಗೆ ಬರುತ್ತಿರಲಿಲ್ಲ. ಅಂತಹ ಪ್ರಕೃತಿಯ ಮಧ್ಯೆ ವಾಹನ ಚಲಾಯಿಸುವುದೆಂದರೆ ನನಗೆ ಅತೀವ ಸಂತೋಷ.
ಈ ಹೊತ್ತಿಗಾಗಲೆ ನಮ್ಮೆಲ್ಲರ ಹೊಟ್ಟೆಗಳು ತಾಳಹಾಕಲು ಆರಂಭಿಸಿದ್ದರೂ ಕಾಡಿನ ನಟ್ಟನಡುವೆ ನಮಗೆ ಯಾವುದೆ ಕುಗ್ರಾಮವೂ ಸಿಗಲಿಲ್ಲ. ನಮ್ಮ ಹಸಿವೆ ತಣಿಸುವ ಮಾರ್ಗವೂ ಸಿಗಲಿಲ್ಲ. ಮಾರ್ಗ ಮಧ್ಯದಲ್ಲಿ ಸಿಗುತ್ತಿದ್ದ ಎಲ್ಲ ಸುಂದರ ಸ್ಥಳಗಳಲ್ಲೂ ನಿಲ್ಲಿಸಿ ಅದನ್ನು ಚಿತ್ರೀಕರಿಸುತ್ತಿದ್ದವನನ್ನು ನೋಡಿ ಮಧು ಗೊಣಗಲು ಪ್ರಾರಂಭಿಸಿದ. ಅದೆನು ಬೆಟ್ಟ ಗುಡ್ಡ ಇಲ್ಲ ಕಣಿವೆ ಕಂಡಾಕ್ಷಣ ಇಳಿದು ಹೋಗ್ತಿಯೋ ಮಹರಾಯ ಎಂಬ ಅವನ ಗೊಣಗಾಟಕ್ಕೆ ಮುಗುಳ್ನಗೆಯೊಂದೆ ನನ್ನ ಉತ್ತರವಾಗುತ್ತಿತ್ತು. ಪಾಪ!! ಅವನ ಗೊಣಗಾಟ ಸಹಜವಾದದ್ದೆ ಬೆಳಗ್ಗೆ ತಿಂದಿದ್ದ ದೋಸೆ ಎಂದೋ ಕರಗಿ ಹೋಗಿತ್ತು ಏನಾದರೂ ತಿನ್ನಲು ಸಿಕ್ಕರೆ ಸಾಕು ಎನ್ನುವ ಹತಾಶೆ ಅವನಾದಗಿತ್ತು.
ಸುಮಾರು ಅರ್ಧ ಘಂಟೆಯ ನಂತರ ಮಣ್ಣಿನ ರಸ್ತೆ ಮುಗಿದು ಡಾಂಬರು ರಸ್ತೆ ಪ್ರಾರಂಭವಾದಾಗ ಯಾವುದಾದರೂ ಹೋಟೆಲ್ ಸಿಗಬಹುದೆಂಬ ನಮ್ಮ ಅನಿಸಿಕೆ ಸುಳ್ಳೆ ಆಯಿತು. ಬಾರ್ಜ್ನಲ್ಲಿ ಕುಳಿತು ಇದ್ದ ಬದ್ದ ಬಿಸ್ಕತ್ ಗಳನ್ನೆಲ್ಲ ಮೆದ್ದಿದ್ದ ನನಗೆ ಹೆಚ್ಚು ಹಸಿವೆ ಕಾಡುತ್ತಿರಲಿಲ್ಲವಾದರೂ ಜ್ವರ ಮಾತ್ರ ಏರುಗತಿಯಲ್ಲೆ ಇತ್ತು. ಇಲ್ಲಿ ನಾವು ಎಲ್ಲಿಗೆ ಹೋಗಬೇಕು ಎನ್ನುವ ಅರಿವಿರಲಿಲ್ಲ. ದಾರಿಯಲ್ಲಿ ಸಿಗುವವರನ್ನು ಕೇಳಿ ಮುಂದೆ ಸಿಗುವ ಊರಿನ ಹೆಸರನ್ನು ತಿಳಿದುಕೊಂಡು ಮುಂದೆ ಹೋಗುವುದಷ್ಟೆ ನಮ್ಮ ಕೆಲಸ. ನಮ್ಮ ಗುರಿ ಯಾವುದು ಎಂದು ನಮಗೆ ಸ್ಪಷ್ಟವಿರಲಿಲ್ಲ. ಕೊನೆಗೊಮ್ಮೆ ಮುಖ್ಯ ರಸ್ತೆಯೊಂದು ಎದುರಾಯಿತು. ಯಾವುದೋ ಹೆದ್ದಾರಿಯಿರಬೇಕೆಂದು ಊಹಿಸುತ್ತಿದ್ದವರಿಗೆ ಎದುರಾದದ್ದು "ಕೊಡಚಾದ್ರಿ"ಗೆ ದಾರಿ ಎನ್ನುವ ತುಕ್ಕು ಹಿಡಿದ ಫಲಕ. ಹಿಂದೆ ಮುಂದೆ ನೋಡದೆ ಆ ದಾರಿಯಲ್ಲಿ ವಾಹನ ತಿರುಗಿಸಿದವನನ್ನು ಎಲ್ಲರೂ ಆಶ್ಚರ್ಯದಿಂದ ನೋಡಿದರು. ಅವರಿಗೆ ಅಲ್ಲಿನ ಸೌಂದರ್ಯದ ಬಗ್ಗೆ ತಿಳಿಸಿ ಅದೆ ದಾರಿಯಲ್ಲಿ ಮುಂದುವರೆದಾಗ ಕಣ್ಣಿಗೆ ರಾಚುವಂತಿದ್ದ ಅಲ್ಲಿನ ಹಸಿರು, ಬಣ್ಣ ಬಳಿದಂತೆ ಕಾಣುತ್ತಿದ್ದ ಹುಲ್ಲುಗಾವಲು ಮತ್ತು ಕಾಡಿನ ಸೊಬಗಿಗೆ ಅವಾರಾಗಲೆ ಮನಸೋತು ಈ ರಸ್ತೆಯ ಕೊನೆಯವರೆಗೂ ಹೋಗೋಣವೆಂದು ಅಪ್ಪಣೆಯಿತ್ತರು. ಡಾಂಬರು ರಸ್ತೆಯ ಕೊನೆಯವರೆಗೂ ಬಂದ ನಮಗೆ ಮುಂದೆ ಹೋಗಲು ದಾರಿಯಿದ್ದರೂ ನನ್ನ ವಾಹನಕ್ಕೆ ಯೋಗ್ಯವಲ್ಲದ ದಾರಿಯೆಂದು ಅರಿವಾಯಿತು. ಅಲ್ಲೆ ಹರಿಯುತ್ತಿದ್ದ ಝರಿಯೊಂದರಲ್ಲಿ ನಮ್ಮ ದಾಹ ತೀರಿಸಲು ಇಳಿದೆವು. ನೇರವಾಗಿ ನೀರಿಗಿಳಿದ ಸುರೇಶನನ್ನು ಕಾರಿನೊಳಗಿಂದಲೆ ಹೆದರಿಸಿದವನು ಶಂಕರ. ಆರಾಮವಾಗಿ ನೀರು ಕುಡಿಯುತ್ತಿದ್ದವನಿಗೆ
ಏ ಸುರೇಶ ಮೊಸಳೆ ಕಣೋ ಎನ್ನುವ ಚೀತ್ಕಾರಕ್ಕೆ ಹೆದರಿ ದಡಕ್ಕೆ ಓಡಿ ಬಂದ ಪರಿ ಇಂದಿಗೂ ನನ್ನ ಕಣ್ಣು ಕಟ್ಟಿದಂತಿದೆ. ಅವನ ಆ ಚರ್ಯೆಗೆ ನಗುತ್ತ ನಿಂತಿದ್ದ ನಮಗೆ ಅವನಿಂದ ನಮಗೆಲ್ಲ ನಿಂದನೆಯ ಪೂಜೆ. ಇಲ್ಲ ಪುಟ್ಟ!! ಇಂತಹ ಜಾಗದಲ್ಲಿ ಮೊಸಳೆಗಳು ಬರವುದಿಲ್ಲವೆಂದು ಮನದಟ್ಟು ಮಾಡಿಕೊಟ್ಟರೂ ಅವನು ಮತ್ತೆ ನೀರಿಗಿಳಿದಿದ್ದರೆ ಕೇಳಿ! ರಸ್ತೆಯಲ್ಲೆ ಮಲಗಿ ಇಲ್ಲೆ ಇದ್ದು ಬಿಡೋಣವೆಂದು ಪುಸಲಾಯಿಸಲು ತೊಡಗಿದವ ಇದೆ ಸುರೇಶನೇನ? ಬೆಂಗಳೂರಿಗೆ ಹಿಂದಿರುಗಲು ವರಾತ ಹಚ್ಚಿದವನು ಎಂದು ನೆನಪಿಸಿಕೊಂಡರೆ ನಗು ಬರುತ್ತದೆ. ಕೊನೆಗೊಮ್ಮೆ ಖಾಲಿಯಾಗಿದ್ದ ನೀರಿನ ಶೀಷೆಗಳನ್ನೆಲ್ಲ ತುಂಬಿಕೊಂಡು ಮನಸ್ಸಿಲ್ಲದ ಮನಸ್ಸಿನಿಂದ ಹಿಂತಿರುಗಲು ಆರಂಭಿಸಿದವರಿಗೆ ಎದುರಾದದ್ದು ಮಳೆನಾಡಿನ ಮಳೆಯ ಆರ್ಭಟ. ಅಬ್ಬ ನಿನ್ನ ಪರಿಯೆ ಎಡಬಿಡದೆ ಬೋರೆಂದು ಸುರಿಯುವ ವರ್ಷಧಾರೆ ಬಯಲುಸೀಮೆಯವರಾದ ನಮಗೆ ಬಲು ಅಪರೂಪ. ಮಳೆಹನಿಯ ಜೊತೆ ಸ್ಪರ್ಧೆಗಿಳಿದ ಕಾರಿನ ವೈಪರ್ ಸೋತುಹೋಗುವುದರಲ್ಲಿ ಸಂಶಯವಿಲ್ಲ. ಈ ಹೊತ್ತಿಗಾಗಲೆ ಜ್ವರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಮುಖ್ಯ ರಸ್ತೆಗೆ ಹಿಂತಿರುಗಿ ಬಲಭಾಗಕ್ಕೆ ತಿರುಗಿ ರಸ್ತೆಯಲ್ಲಿ ಸಾಗತೊಡಗಿದೆವು. ಸ್ವಲ್ಪ ಹೊತ್ತಿನಲ್ಲೆ ನಿಟ್ಟೂರು ಎದುರಾಯಿತು ಆದರೆ ಅಲ್ಲಿ ಯಾವುದೆ ಹೋಟೇಲ್ ಸಿಗಲಿಲ್ಲ ಈ ಹೊತ್ತಿಗಾಗಲೆ ಮಧು ತನ್ನ ಅಸಹನೆ ಪ್ರದರ್ಶಿಸಲಾರಂಭಿಸಿದ. ಅರ್ಧ ಮುಕ್ಕಾಲು ಘಂಟೆ ರಸ್ತೆ ಸವೆಸಿದ ನಂತರ ಸಿಕ್ಕದ್ದು ನಗರ. ಅಬ್ಬ ಇಲ್ಲಿ ಸಿಕ್ಕ ಹೊಟೆಲ್ ಒಂದಕ್ಕೆ ದಾಳಿಯಿಟ್ಟೆವು, ದಾಂಗುಡಿಯಿಟ್ಟೆವು. ಆಕ್ರಮಿಸಿದೆವು ಎಂದೆ ಹೇಳಬೇಕು. ಬಿಸಿಯಾಗಿ ಏನಿದೆ ಎಂದು ಕೇಳಿದವರಿಗೆ ಅವನು ತಂದಿಟ್ಟದ್ದು ಖಾಲಿದೋಸೆ. ಎಷ್ಟು ಖಾಲಿ ಮಾಡಿದೆವು ಅರಿವಿಲ್ಲ. ಆಗ ಸಮಯ ಸುಮಾರು ೪ ಘಂಟೆಯಿರಬೇಕು. ಎಲ್ಲರ ಹೊಟ್ಟೆಯ ಬೆಂಕಿ ಆರಿ ತಣ್ಣಗಾಗಿತ್ತು. ಈಗ ನನ್ನ ಜ್ವರದ ಕಡೆಗೆ ಗಮನ ಹರಿಯಿತು. ಅಲ್ಲೆ ಇದ್ದ ಔಷಧದ ಅಂಗಡಿಯೊಂದರಲ್ಲಿ ಮಾತ್ರೆಯನ್ನು ತಂದು ಕೊಟ್ಟ ಶಂಕರನಿಗೊಂದು ಧನ್ಯವಾದ. ಈ ಹೊತ್ತಿಗೆ ನನ್ನ ಕಾರಿನ ಮುಖ್ಯ ದೀಪವನ್ನು ಬದಲಾಯಿಸಿದ್ದೆ. ಈಗಾಗಲೆ ಕತ್ತಲು ಆವರಿಸುವುದಕ್ಕೆ ಮುಂದಾಗಿತ್ತು. ಈಗ ನಮ್ಮ ಗುರಿ ತೀರ್ಥಹಳ್ಳಿಯೆಂದು ಅಲ್ಲಿಂದ ಮುಂದೆ ಶೃಂಗೇರಿಯನ್ನು ತಲುಪುವುದೆಂದು ತೀರ್ಮಾನಿಸಿ ನಮ್ಮ ಪಯಣ ಶುರು. ಸ್ವಲ್ಪ ದೂರ ಸಾಗಿ ಪುಟ್ಟ ಹಳ್ಳಿಯ ಪ್ರವೇಶಕ್ಕೆ ಮುನ್ನವೆ ತಟ್ಟನೆ ನಾನು ವಾಹನವನ್ನು ಗಕ್ಕನೆ ನಿಲ್ಲಿಸಿದಾಗ ಎಲ್ಲರಿಗೂ ಅಚ್ಚರಿ. ಯಾವುದೆ ಬೆಟ್ಟಗುಡ್ಡ ಇಲ್ಲದಿದ್ದರೂ ಯಾಕೆ ನಿಲ್ಲಿಸಿದೆಯೊ ಎಂದು ಕೇಳುತ್ತಿದ್ದವರಿಗೆ ನಾನು ಮುಂದೆ ರಸ್ತೆಯನ್ನು ನೋಡಲು ಸೂಚಿಸಿದಾಗ ಅವರ ಮುಖದಲ್ಲಿ ಆತಂಕಕ್ಕೆ ಕಾರಣವಾದದ್ದು ರಸ್ತೆಯಲ್ಲಿ ಸರಿದು ಹೋಗುತ್ತಿದ್ದ ದೊಡ್ಡದಾದ ಒಂದು ಹಾವು!! ಅದೆ ಸಮಯಕ್ಕೆ ಬಂದ ಹಳ್ಳಿ ಹುಡುಗರಿಬ್ಬರು ನಿಮಗೆ ಒಳ್ಳೆಯ ಶಕುನ ಆದರೆ ಇನ್ನು ಸ್ವಲ್ಪ ಹೊತ್ತು ನಿಂತು ಹೋಗಿ ಎನ್ನುವ ಅವರ ಅಪ್ಪಣೆಯನ್ನು ಶಿರಸಾವಹಿಸಿ ವಾಹನ ನಿಂತಿದ್ದರೂ ಯಾರು ವಾಹನದಿಂದ ಇಳಿಯಲಿಲ್ಲ.ಕಾರಣ ಹಾವಿನ ಭಯ. ಇಲ್ಲಿಂದ ಮುಂದೆ ತೀರ್ಥಹಳ್ಳಿಯವರೆಗೂ ತಮ್ಮ ನೈಸರ್ಗಿಕ ಕರೆಗೂ ಓಗೊಡದೆ ಕಾರಿನಿಂದ ಇಳಿಯದೆ ಕುಳಿತಿದ್ದರು ಎಂದರೆ ಅವರು ಹಾವಿಗೆ ಹೆದರಿದ್ದ ಪರಿ ನಿಮಗೆ ಆಶ್ಚರ್ಯ ತರಿಸಬಹುದು;-)).
ಸಮಯ ಸರಿದು ಹೋಗುತ್ತಿತ್ತು. ಕತ್ತಲು ಆವರಿಸುತ್ತಿತ್ತು. ಕಾರ್ಗತ್ತಲಿನಲ್ಲಿ ಹಾವಿನಂತ ಅಂಕುಡೊಂಕು ಘಟ್ಟದ ರಸ್ತೆಯಲ್ಲಿ ವಾಹನ ಛಲಾಯಿಸುವುದು ಮಜಾ ಕೊಡುತ್ತದೆ. ಗವ್ವೆನ್ನುವ ಕಡು ಕತ್ತಲೆಗೆ ಎಲ್ಲರು ಮಾತನಾಡುವುದನ್ನೂ ಕೂಡ ನಿಲ್ಲಿಸಿದ್ದರು. ಪಕ್ಕದಲ್ಲಿ ಕುಳಿತಿದ್ದ ಮಧುವಿಗೆ ನನ್ನ ವಾಹನಕ್ಕೂ ದಾರಿಕೊಡದೆ ತಾನೂ ಮುಂದೆ ಹೋಗದೆ ಇದ್ದ ಜೀಪಿನ ಸಂಖ್ಯೆಯನ್ನು ಬರೆದುಕೊಳ್ಳುವಂತೆ ಸೂಚಿಸಿದೆ. ಅದು ಒಂದು ಎಚ್ಚರಿಕೆಯ ಮತ್ತು ನನ್ನ ಪ್ರತಿ ಪ್ರಯಾಣದ ಅಭ್ಯಾಸ. ಮತ್ತೆ ಗಾಭರಿಯಾದ ಮಧುವಿಗೆ ಹೆದರುವ ಅಗತ್ಯವಿಲ್ಲ ಅದೊಂದು ಎಚ್ಚರಿಕೆಯ ಹೆಜ್ಜೆ ಅಷ್ಟೆ ಎಂದು ತಿಳಿಸಿದಾಗಲೆ ಅವನ ಮುಖದಲ್ಲಿದ್ದ ಆತಂಕದ ಗೆರೆಗಳು ಕಡಿಮೆಯಾದದ್ದು. ಜೀಪನ್ನು ಹಿಂದೆ ಹಾಕಿ ನಾವು ಮುಂದೆ ಹೋದಾಗಲೆ ನನ್ನ ಸ್ನೇಹಿತರ ಮುಖದಲ್ಲಿ ಒತ್ತಡದ ಚಿನ್ಹೆಗಳು ಬದಲಾದದ್ದು. ತೀರ್ಥಹಳ್ಳಿ ತಲುಪಿ ಶೃಂಗೇರಿಗೆ ಹೋಗುವ ರಸ್ತೆ ವಿಚಾರಿಸುತ್ತಿದ್ದವರಿಗೆ ಕೇಳಿಬಂದದ್ದು ಎಚ್ಚರಿಕೆಯ ಮಾತು. ನಕ್ಸಲೈಟ್ಗಳ ಹಾವಳಿಯಿರುವುದರಿಂದ ಇಲ್ಲೆ ಉಳಿದು ಬೆಳಿಗ್ಗೆ ಹೋಗಿ ಎಂಬ ಸಲಹೆ. ಅದು ನನಗೂ ಸರಿಯೆನಿಸಿತು ಜ್ವರದಿಂದ ಬಳಲಿದ್ದವ್ನಿಗೆ ರಾತ್ರಿ ಪ್ರಯಾಣ ಹೆಚ್ಚು ಪ್ರಯಾಸಕರ. ಸರಿ ತೀರ್ಥಹಳ್ಳಿಯಲ್ಲಿ ಜಗ್ಗೇಶನ ಚಿತ್ರೀಕರಣವಿದ್ದುದರಿಂದ ಯಾವುದೆ ವಸತಿಗೃಹವೂ ಸಿಗಲಿಲ್ಲ. ಕೊನೆಗೆ ಅಲ್ಲೆ ಇದ್ದ ಸರ್ಕಾರಿ ವಸತಿ ಗೃಹವೊಂದರಲ್ಲಿ ಕೋಣೆಗಳು ಸಿಕ್ಕಾಗ ರಾತ್ರಿ ೧೦ ಘಂಟೆ. ಇದ್ದುದರಲ್ಲೆ ಉತ್ತಮವಾದ ಉಪಹಾರಗೃಹವೊಂದರಲ್ಲಿ ಊಟಮುಗಿಸಿ ನಾಳೆ ಬೆಂಗಳೂರಿಗೆ ಹಿಂತಿರುಗಬೇಕಾಗಿರುವುದರಿಂದ ಮುಂಜಾನೆ ಬೇಗನೆ ಸಿದ್ದವಾಗಲು ಎಲ್ಲರಿಗೂ ಸೂಚಿಸಿ ನಿದ್ದೆಗೆ ಜಾರಿದವನಿಗೆ ಸಮಯದ ನೆನಪಿಲ್ಲ.
೫ ಘಂಟೆಗೆ ಎದ್ದು ಸುಖನಿದ್ದೆ ಸವಿಯುತ್ತಿದ್ದವರನ್ನು ಹೊಡೆದು ಎಚ್ಚರಗೊಳಿಸಿ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ ಶೃಂಗೇರಿಯ ದಾರಿ ಹಿಡಿದೆವು.ಜ್ವರ ಹೇಳದಂತೆ ಮಾಯವಾಗಿತ್ತು. ೩೦ ನಿಮಿಷದ ನಂತರ ಸಿಗುವ ಕುವೆಂಪು ಕವಿ ಶೈಲಕ್ಕೆ ಭೇಟಿಕೊಡುವ ಮನಸ್ಸಿದ್ದರೂ ಇನ್ನೂ ಬೆಳಕು ಹರಿಯದ್ದರಿಂದ ಅದು ಸಾಧ್ಯವಾಗಲಿಲ್ಲ ಎನ್ನುವ ಬೇಸರ ಇನ್ನು ನನ್ನನ್ನು ಕಾಡುತ್ತಿದೆ. ಆಗುಂಬೆಯ ಮುಖೇನ ಶೃಂಗೇರಿ ತಲುಪಿ ನದಿ ದಂಡೆಯಲ್ಲಿ ವಾಹನ ನಿಲ್ಲಿಸಿ ನೇರವಾಗಿ ನದಿಗೆ ಸ್ನಾನ ಮಾಡಲು ನಾನು ಮತ್ತು ಮಧು ತೆರಳಿದೆವು. ತನ್ನ ವಿಚಿತ್ರ ನಡತೆಯಿಂದ ಎಲ್ಲರನ್ನು ನಗಿಸುವ ಒಮ್ಮೊಮ್ಮೆ ಗಾಭರಿಗೊಳಿಸುವ ಸುರೇಶ ನದಿಗೆ ಬರದೆ ಅಲ್ಲೆ ಇದ್ದ ಸ್ನಾನಗೃಹವೊಂದರಲ್ಲಿ ಬಕೆಟ್ಟಿಗೇ ಶಾಂಪೂ ಸುರಿದು ಅದೆ ನೀರನ್ನು ಮೈಮೇಲೆ ಸುರಿದು ಕೊಂಡು ಹೊರಗೆ ಬಂದ ಪರಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯ. ಅವನ ನಂತರ ಸ್ನಾನ ಮಾಡಲು ಹೋದ ವ್ಯಕ್ತಿ ಕೋಣೆಯ ತುಂಬಾ ತುಂಬಿದ್ದ ನೊರೆಯನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದ. ಮನಸ್ಸಿಗೆ ಮುದ ನೀಡದ ಸ್ನಾನ ಸುರೇಶನನ್ನು ನದಿಗೆ ಕರೆತಂದಿತ್ತು. ತುಂಗಾ ನದಿಯಲ್ಲಿ ಈಜಿ ಹೊರಬಂದಾಗ ಸುರೇಶ ತನ್ನ ಒದ್ದೆಯಾದ ಉಡುಪನ್ನು ನನ್ನ ಕಾರಿನ ಮೇಲ್ಭಾಗದಲ್ಲಿ ಒಣಗಿಹಾಕಿದ. ನಂತರ ಶಾರದೆಯ ದರ್ಶನ ಪಡೆದು ಋಷ್ಯಶೃಂಗಗಿರಿಗೆ (ಕಿಗ್ಗ) ಹೊರಟು ದೇವಸ್ಥಾನಕ್ಕೆ ಭೇಟಿ ಕೊಟ್ಟು. ಅಲ್ಲಿಂದ ಸುಮಾರು ೧೦-೧೫ ಕಿ.ಮೀ ದೂರದಲ್ಲಿರುವ ಸಿರಿಮನೆ ಜಲಪಾತಕ್ಕೆ ತೆರಳಿದೆವು. ಮಳೆ ಬಂದದ್ದರಿಂದ ಮಣ್ಣಿನ ದಾರಿ ನನ್ನ ವಾಹನವನ್ನು ಕಣಿವೆಯ ಕಡೆಗೆ ಎಳೆಯುತ್ತಿದ್ದರೆ ಎಲ್ಲರ ಮುಖದಲ್ಲೂ ಆತಂಕದ ಛಾಯೆ. ಸಾವಕಾಶವಾಗಿ ಕಡಿದಾದ ಕಣಿವೆಗಳಲ್ಲಿ ಇಳಿದು ಬೆಟ್ಟವನ್ನು ಹತ್ತಿ ಜಲಪಾತದ ಹತ್ತಿರ ವಾಹನ ನಿಂತ ತಕ್ಷಣವೆ ಇಳಿದ ಸುರೇಶ ಕಾರಿನ ಕೆಳಗೂ ಮತ್ತು ಮೇಲೂ ಹುಡುಕತೊಡಗಿದಾಗ ನಮಗೆಲ್ಲ ಆಶ್ಚರ್ಯ. ಎನೋ ಹಾವಿನ ಭಯವೆ ಎನ್ನುವ ನಮ್ಮ ಪ್ರಶ್ನೆಗೆ ತಲೆಯಲ್ಲಾಡಿಸುತ್ತ. ಇಲ್ಲ ಮೇಲ್ಗಡೆ ನನ್ನ ಒದ್ದೆ ಬಟ್ಟೆ ಮತ್ತು ಕೆಳಗೆ ನನ್ನ ಚಪ್ಪಲಿ ಕಾಣಿಸುತ್ತಿಲ್ಲ ಎಂದು ಅಲವತ್ತುಕೊಂಡ. ಶೃಂಗೇರಿಯಲ್ಲಿ ಕಾರಿನ ಮೇಲೆ ಒಣಗಿಹಾಕಿದ್ದ ಮತ್ತು ಕಾರಿನ ಕೆಳಗೆ ಬಿಟ್ಟಿದ್ದ ಚಪ್ಪಲಿಯನ್ನು ನಮ್ಮ ಮಹಾಶಯ ೨೦ ಕಿ.ಮೀ ಬಂದ ನಂತರ ಹುಡುಕುತ್ತಿದ್ದನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಜಲಪಾತದೆಡೆಗೆ ತೆರಳಿದೆವು. ಹೆಸರೇ ಹೇಳುವಂತೆ ಸುಂದರ ಸಿರಿಮನೆ ಜಲಪಾತದಲ್ಲಿ ಮೊದಲು ನೀರಿಗಿಳಿಯಲು ಹೆದರಿದವರಿಗೆ ದಡದಲ್ಲಿ ಅಂಟಿದ ಜಿಗಣೆಗಳು ಸ್ವಾಗತಿಸಿದವು. ನೇರವಾಗಿ ಜಲಪಾತದ ಕೆಳಗೆ ನಿಂತು ನೈಸರ್ಗಿಕವಾಗಿ ದೇಹವನ್ನು ಮಸಾಜ್ ಮಾಡಿಸಿಕೊಳ್ಳುತ್ತಿದ್ದವನನ್ನು ನೋಡಿ ಒಬ್ಬೊಬ್ಬರೆ ನೀರಿಗಿಳಿಯಲು ಆರಂಭಿಸಿದರು. ಇಲ್ಲಿಂದಲೆ ಶೃಂಗೇರಿ ಮಠಕ್ಕೆ ಸ್ವಲ್ಪ ಪ್ರಮಾಣದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಜಲಪಾತದಲ್ಲೆ ಸುಮಾರು ೨ ಘಂಟೆಗಳನ್ನು ಕಳೆದು ಅಲ್ಲಿಂದ ನೇರವಾಗಿ ಬಾಳೆಹೊನ್ನೂರಿಗೆ ಬಂದು ಊಟಕ್ಕಾಗಿ ಹತ್ತಿರದಲ್ಲಿದ್ದ ಊಟದ ಮೆಸ್ ಒಂದನ್ನು ಹುಡುಕಿ ಚಪಾತಿ ತಯಾರಿಸಲು ಅರ್ಧ ಘಂಟೆಯ ಸಮಯ ಕೇಳಿದವನಿಗೆ ಮನಸ್ಸಿನಲ್ಲೆ ವಂದಿಸಿ ಕಾರಿನಲ್ಲೆ ಮಲಗಿದವನಿಗೆ ಎಚ್ಚರವಾದದ್ದು ಶಂಕರ ಕರೆದಾಗಲೆ. ಚಪಾತಿಯಷ್ಟೆ ನನಗೆ ರುಚಿಸಿದ್ದು. ಚಿಕ್ಕಮಗಳೂರು, ಬೇಲೂರು, ಹಾಸನ ಕುಣಿಗಲ್ ಮುಖಾಂತರ ಬೆಂಗಳೂರಿಗೆ ಬಂದು ತಲುಪಿದಾಗ ರಾತ್ರಿಯಾಗಿತ್ತು.
೪ ವರ್ಷಗಳ ತರುವಾಯ ಎಲ್ಲ ಘಟನೆಗಳನ್ನು ನೆನಪಿಸಿಕೊಂಡು ಬರಹದಲ್ಲಿ ಹಿಡಿದಿಡುವುದು ಕಷ್ಟಕರ ನೆನಪಿಗೆ ಬಂದಷ್ಟು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಪ್ರವಾಸ ಹೋಗಿಬಂದು ೪ ವರ್ಷಗಳ ನಂತರ ಪ್ರವಾಸ ಕಥನ ಬರೆಯಲು ಕುಳಿತಾಗ ನನ್ನ ಕಣ್ಣ ಮುಂದೆ ಹಾದು ಹೋದ ಪ್ರವಾಸದ ಪ್ರತಿಯೊಂದು ದೃಶ್ಯಗಳು ಮತ್ತು ಬಿಡುವಿನ ಸಮಯದಲ್ಲಿ ನಾವೆಲ್ಲಾ ಮೆಲುಕು ಹಾಕುವ ಆ ಕ್ಷಣಗಳು ನೆನಪಿನ ಕಚಗುಳಿಯಿಡುತ್ತವೆ. ನಾನು ಹೆಚ್ಚು ಸಂತೋಷ ಪಟ್ಟ ಪ್ರವಾಸಗಳಲ್ಲಿ ಇದು ಮೊದಲನೆಯದಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲ.

6 comments:

Srik said...

ವೊವ್! ಎಂತಹಾ ಅದ್ಭ್ಹುತ ಅನುಭವ! ನಿಮ್ಮ ಪ್ರಯಾಣದ ಅನುಭವವನ್ನು ಓದಿದರೆ ನೀವೊಬ್ಬ ಅಲೆಮಾರಿಯೆಂದು ಯಾರಿಗೂ ಅನುಮಾನವೇ ಇರುವುದಿಲ್ಲ ಬಿಡಿ.

ನಾನು ಸಿರಿಮನೆ ಜಲಪಾತವನ್ನು ನೋಡಲು ಹೋದಾಗ ನನಗೆ ಆದ ರೋಮಾಂಚನವನ್ನು ಪದಗಳಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ - ನೋಡಿ.
http://srikslib.blogspot.com/2007/06/mind-boggling-sirimane-falls.html

ನಿಮ್ಮ blog ಓದಿ ಬಹಳ ಸಂತೋಷವಾಯಿತು.

ಹೀಗೇ ಬರೆಯುತ್ತಿರಿ.

Unknown said...

prasana

neevu tejasvi taraha writer agteera anta anuamana nanage

ರಾಜೇಶ್ ನಾಯ್ಕ said...

ಪ್ರಸನ್ನ,
ಗೊತ್ತುಗುರಿಯಿಲ್ಲದ ಪ್ರವಾಸದ ರೂವಾರಿಯಾಗಿ ಚೆನಾಗಿಯೇ ಕಾರ್ಯನಿರ್ವಹಣೆ ಮಾಡಿದ್ದೀರಾ. ಎಲ್ಲೆಲ್ಲೋ ಹೋಗಿ ಎಂಜಾಯ್ ಮಾಡಿದ್ದು ಓದುವಾಗ ಖುಷಿಯಾಗುತ್ತೆ.

prasca said...

ಶರ್ಮ ಸಾರ್,
ನಿಮ್ಮ ಮಾತಿನಲ್ಲಿರುವ ಒಳ ಅರ್ಥ ಗೊತ್ತಾಗಲಿಲ್ಲ. ದಯವಿಟ್ಟು ತಿಳಿಸಿ.

prasca said...

ರಾಜೇಶ್ ಸಾರ್,
ನಿಮ್ಮ ಓಡಾಟದ ಕೆಲವು ದಾರಿಗಳಲ್ಲಿಯಾದರೂ ಒಡಾಡಿದರೆ ಅದೆ ಸಾರ್ಥಕತೆ ಅನ್ಸುತ್ತೆ. ಅದು ಅಗುತ್ತ? ಗೊತ್ತಿಲ್ಲ

Unknown said...

tumba chennagi baryoke shuru madiddira anta artha.