Saturday, June 7, 2008

ಆನೆಝರಿ ಮತ್ತು ಭೀಮೇಶ್ವರಿ

ಆನೆಝರಿ ಒಂದು ಪ್ರವಾಸ ಕಥನ

ಕಾಲೇಜ್ ಸ್ನೇಹಿತ ಮಂಜು ಹೇಳಿದಾಗಿನಿಂದ ತಲೆಯಲ್ಲಿ ಕೊರೆಯುತ್ತಿದ್ದದ್ದು ಆನೆಝರಿ ಪ್ರಕೃತಿ ಶಿಬಿರ. ಒಮ್ಮೆ ಹೋಗಿ ಬಾ ನಿಂಗೆ ತುಂಬಾ ಇಷ್ಟಆಗುತ್ತೆ ಎಂಬ ಅವನ ಅನಿಸಿಕೆ, ನನಗೋ ಹೊಸ ಜಾಗ ಅಂದ್ರೆ ಗೊತ್ತಾದಾಗ್ಲೆ ಹಾರಿ ಬಿಡುವ ಮನಸ್ಸು ಆದ್ರೆ ಜವಾಬ್ದಾರಿಗಳು ಕೇಳ್ಬೇಕಲ್ಲ? ಮಗನ ಪರೀಕ್ಷೆಗಳೆಲ್ಲ ಮುಗಿದು ಅವನ ಶಾಲೆಯ ರಜಾ ಘೋಷಣೆಯ ನಂತರವಷ್ಟೆ ನಮ್ಮ ಪ್ರವಾಸದ ಯೋಜನೆಗಳ ಪ್ರಾರಂಭ. ಪ್ರವಾಸದ ಸ್ಥಳಗಳನ್ನು ಯೋಜಿಸುವುದೇ ಅತ್ಯಂತ ತಲೆನೋವಿನ ಕೆಲಸ. ಕಬಿನಿ ಹಿನ್ನೀರಿನ ಜಾಗಗಳನ್ನು ನೋಡುವ ಮನಸ್ಸಿದ್ದರೂ ಜಂಗಲ್ ಲಾಡ್ಜಸ್ ನಮ್ಮಂತ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಕೈಗೆಟುಕದ ಕಾರಣ ನಮ್ಮ ಪ್ರವಾಸ ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನ ಕಡೆಗೆ ಅನ್ನೊ ಹಾಡಿನ ಹಾಗೆ ನನ್ನ ನೆಚ್ಚಿನ ತಾಣವಾದ ಪಶ್ಚಿಮ ಘಟ್ಟಗಳ ಕಡೆಗೆ>>>------------->
ನಮ್ಮ ಪ್ರವಾಸ ಕಾರ್ಯಕ್ರಮಕ್ಕೆ ಒಂದು ರೂಪ ಕೊಡುವುದಕ್ಕೆ ಕೂತವರು ಸಹೋದ್ಯೋಗಿ ಶ್ರೀಧರ, ಶಂಕರ ಮತ್ತು ನಾನು. ನನ್ನ ಹಿಂದಿನ ಪ್ರವಾಸ ಕಥನಗಳಲ್ಲಿನ ಟೀಕೆಯೋ? ಅಥವ ನಾನು ನೋಡಿಬಂದ ಸ್ಥಳಗಳ ಸೌಂದರ್ಯ ಇವರಿಬ್ಬರನ್ನು ನನ್ನೊಡನೆ ಬರಲು ಪ್ರೇರೇಪಿಸಿತೋ? ಗೊತ್ತಿಲ್ಲ ಅಂತು ನನ್ನೊಡನೆ ಬರಲು ಅನ್ನುವುದಕ್ಕಿಂತ ಅವರೆ ನನ್ನನು ಪ್ರವಾಸಕ್ಕೆ ಹೊರಡಿಸಲು ಯಶಸ್ವಿಯಾದರು ಎನ್ನುವುದು ಹೆಚ್ಚು ಸೂಕ್ತವಿರಬೇಕು. ೨೦೦೮ ರ ಏಪ್ರಿಲ್ ೧೨ ರಿಂದ ೧೬ ರವರೆಗೆ ಪ್ರವಾಸದ ದಿನಗಳೆಂದು ನಿರ್ಧರಿಸಿದೆವು.
ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯ ಪ್ರದೇಶ ನನ್ನ ಮೊದಲ ಆಯ್ಕೆ ಆದರೆ ಕಾಡ್ಗಿಚ್ಚಿನ ಸಮಯವೆಂದು ಅಲ್ಲಿನ ಅರಣ್ಯಾಧಿಕಾರಿಗಳು ಅಲ್ಲಿಗೆ ಪ್ರವೇಶ ನಿರಾಕರಿಸಿದರು. ಇದೆಲ್ಲದರ ರಗಳೆಯೆ ಬೇಡವೆಂದು ಸ್ನೇಹಿತ ಮಂಜು ಹೇಳಿದಂತೆ ಪ್ರಸಿದ್ಧ ಯಾತ್ರಾ ಸ್ಥಳ ಕೊಲ್ಲೂರಿನ ಸಮೀಪವಿರುವ "ಆನೆಝರಿ" ಪ್ರಕೃತಿ ಶಿಬಿರಕ್ಕಾಗಿ ಕಾರ್ಕಳ ಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿಯನ್ನು (ಜಯನಾರಾಯಣ) ಸಂಪರ್ಕಿಸಿ ೨ ರಾತ್ರಿಗೆ ೩ ಢೇರೆಗಳನ್ನು ಕಾದಿರಿಸಿದೆವು. ನಂತರದ ೨ ದಿನಗಳಿಗಾಗಿ ಸ್ಥಳ ನಿರ್ಧಾರವನ್ನು ನನ್ನ ತಲೆಗೆ ಕಟ್ಟೀದರು. ಸರಿ ಜೋಗದ ಸಮೀಪವಿರುವ ಪತ್ರಕರ್ತ ಶ್ರೀ ರಾಘವೇಂದ್ರ ಶರ್ಮರನ್ನು ಸಂಪರ್ಕಿಸಿ ಹೊನ್ನೆಮರಡು ಬಗ್ಗೆ ವಿಚಾರಿಸಲಾಗಿ ಮುಂದಿನ ೨ ತಿಂಗಳ ಕಾಲ ಅವಕಾಶವಿಲ್ಲವೆಂದು ತಿಳಿಸಿದರು. ಆದರೆ ಕಾರ್ಗಲ್ ಬಳಿಯಿರುವ "ಮುಪ್ಪಾನೆ ಪ್ರಕೃತಿ ಶಿಬಿರ", ಗೇರುಸೊಪ್ಪ ಬಳಿಯ ಹಿನ್ನೀರಿನ ಸ್ಥಳಗಳನ್ನು ಸೂಚಿಸಿದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯಿರದೆ ಮತ್ತು ಕಾಲಾವಕಾಶವೂ ಕಡಿಮೆಯಿದ್ದುದರಿಂದ ವಸತಿಗಾಗಿ ಒಂದು ಢೇರೆಯನ್ನು ನಂಬಿ ನಮ್ಮ ಪ್ರವಾಸ ಆರಂಭಿಸೋಣವೆಂದು ಹೇಳಿದಾಗ ನನ್ನ ಇಬ್ಬರ ಸಹೋದ್ಯೋಗಿಗಳ ಮುಖದಲ್ಲು ಹುಣಿಸೆಹಣ್ಣು ತಿಂದವರ ಭಾವ ಇಣುಕಿತ್ತು. ನೀನು ಹೇಗೆ ಹೇಳಿದ್ರೆ ಹಾಗೆ ಎನ್ನುವ ಅವರ ಮಾತನ್ನೆ ಆಧಾರವಾಗಿಟ್ಟುಕೊಂಡು ಅವರಿಗೆ ಧೈರ್ಯ ಹೇಳಿದ್ದಾಯ್ತು. ಏನೇ ಆಗಲಿ ನಾನು ಅಲ್ಲಿನ ಸ್ಥಳಗಳ ಮಾಹಿತಿಗಾಗಿ ಪಶ್ಚಿಮಘಟ್ಟಗಳ ಮಾಹಿತಿ ಕಣಜ ರಾಜೇಶ್ ನಾಯಕ್ ಅವರನ್ನು ಸಂಪರ್ಕಿಸಿದೆ. ನಾನು ಹೋಗುವ ಜಾಗಗಳ ಮಾಹಿತಿ ಕೊಟ್ಟಿದ್ದೆ ತಡ ಅವರು ಸೂಚಿಸಿದ ಹೆಸರು "ಭೀಮೇಶ್ವರ". ನಿಮಗೆ ತುಂಬ ಇಷ್ಟ ಆಗುತ್ತೆ ಹೋಗಿಬನ್ನಿ ಎನ್ನುವ ಅವರ ಅನಿಸಿಕೆ ಆದರೆ ಅವರು ಕೊಟ್ಟ ಮಾಹಿತಿಗಳು ನನ್ನ ಸಹೋದ್ಯೋಗಿಗಳ ನಿದ್ದೆ ಕೆಡಿಸಿತ್ತು. ಅದಕ್ಕೂ ಮುಂಚೆ ದಬ್ಬೆಫಾಲ್ಸಿಗೂ ಒಂದು ಭೇಟಿ ಕೊಡಿ ಎಂಬ ರಾಜೇಶರ ಮಾತು ನನಗೆ ಕುಣಿದಾಡುವಷ್ಟು ಸಂತಸ ತಂದಿತು
ನಮ್ಮ ಮೊದಲನೆ ದಿನದ ಪ್ರಯಾಣ ಸುಮಾರು ೪೧೫ ಕಿ.ಮೀ ಗಳನ್ನು ಕ್ರಮಿಸಬೇಕಿರುವುದರಿಂದ ಬೆಳಿಗ್ಗೆ ೪ ಗಂಟೆಗೆ ನಮ್ಮ ಪ್ರಯಾಣ ಆರಂಭಿಸಬೇಕಿತ್ತು. ಶ್ರೀಧರನ ಮಾರುತಿ ವ್ಯಾನ್ ತುಮಕೂರು ರಸ್ತೆಗಿಳಿದಾಗ ಸಮಯ ೫.೩೦. ತರೀಕೆರೆಯ ಬಳಿ ಕೆಟ್ಟು ಹೋದ ರಸ್ತೆಯನ್ನು ಶಪಿಸುತ್ತಾ ನಮ್ಮ ಪಯಣ. ಶಿವಮೊಗ್ಗದಲ್ಲಿ ಊಟ ಮಾಡಿ, ತ್ಯಾವರೆಕೊಪ್ಪ ಹುಲಿಧಾಮ ತಲುಪಿದಾಗ ಸಮಯ ೨.೦೦ ಗಂಟೆ. ಇಲ್ಲಿರುವ ಪುಟ್ಟ ಮೃಗಾಲಯವನ್ನು ಎಲ್ಲರು ಆಸ್ವಾದಿಸುತ್ತಿದ್ದರೆ, ನನಗೆ ಸ್ವಚ್ಛಂದವಾಗಿ ಕಾಡಿನಲ್ಲಿ ಜೀವಿಸುವ ಪ್ರಾಣಿಗಳನ್ನು ಮಾನವರು ತಮ್ಮ ಮೋಜಿಗಾಗಿ ಪಂಜರಗಳಲ್ಲಿ ಕೂಡಿ ಹಾಕಿ ಅವುಗಳನ್ನು ವಿವಿಧ ರೀತಿಯಲ್ಲಿ ಹಿಂಸಿಸುವುದನ್ನು ನೋಡುತ್ತಿದ್ದರೆ ನಿಜಕ್ಕೂ ಮನ ಕಲಕುತ್ತದೆ. ಅವುಗಳು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆಯೋ ಆ ದೇವರೆ ಬಲ್ಲ!! ದೇವರು ಧರ್ಮದ ಹೆಸರಿನಲ್ಲಿ ನಡೆಯುವ ಪ್ರಾಣಿಬಲಿಗಿಂತ ಮಿಗಿಲಾದ ಹೇಯಕರ, ಈ ದೃಶ್ಯಗಳು ಎಂದು ನನ್ನ ವಯಕ್ತಿಕ ಭಾವನೆ. ಇದರಲ್ಲಿ ಬೇರೆ ಯಾರ ಮನ ನೋಯಿಸುವ ಇರಾದೆಯಿಲ್ಲ. ಸ್ವತಂತ್ರವಾಗಿ ಬದುಕುವ ಪ್ರಾಣಿಗಳನ್ನು ಈ ರೀತಿಯಲ್ಲಿ ನೋಡಿ ಖುಷಿ ಪಡುವ ಮಾನವರೆಲ್ಲರನ್ನು ಒಮ್ಮೆ ಈ ಪಂಜರಗಳಲ್ಲಿ ಪ್ರದರ್ಶನಕ್ಕಿಟ್ಟು ಬಂದವರೆಲ್ಲ ಇದೇ ರೀತಿ ಹಿಂಸಿಸಿದರೆ ಬಹುಶಃ ಆ ಪ್ರಾಣಿಗಳ ನೋವು ನಮಗರ್ಥವಾಗಬಹುದೆಂಬ ನನ್ನ ಮನಸ್ಸಿನ ಊಹೆಗೆ ನನ್ನ ಮನದಲ್ಲೆ ಒಂದು ವ್ಯಂಗ್ಯದ ನಗೆಯಷ್ಟೆ ನನಗೆ ಹೊಳೆದದ್ದು. ಬಿರು ಬೇಸಿಗೆಯಲ್ಲೂ ಆಕಸ್ಮಿಕವಾಗಿ ಬಂದ ಮೋಡದ ವಾತಾವರಣ ಪಂಜರದಲ್ಲಿದ್ದ ನವಿಲೊಂದು ಗರಿಬಿಚ್ಚಿ ನರ್ತಿಸುವಂತೆ ಮಾಡಿತು. ಸುಮಾರು ೫-೬ ನಿಮಿಷಗಳ ಕಾಲ ನಡೆದ ಈ ನರ್ತನ ಮನಸ್ಸಿಗೆ ಮುದ ನೀಡಿತು. ವಾಹ್! ಯಾವ ಕಲಾಕಾರನೂ ಆ ಬಣ್ಣಗಳನ್ನು ಅಷ್ಟು ಹಿತವಾಗಿ ನೈಜವಾಗಿ ಬೆರೆಸಿ ಆ ಚಿತ್ರವನ್ನು ಬಿಡಿಸಲಾರ. ನಾನು ಬಾಲ್ಯ ಕಳೆದ ಹಳ್ಳಿಯಲ್ಲಿನ ಹೊಲ ಗದ್ದೆಗಳ ಕೊಯ್ಲಿನ ಸಮಯದಲ್ಲಿ ದಾಳಿಯಿಡುತ್ತಿದ್ದ ನವಿಲುಗಳು ಸಂಜೆಯಾಗುತ್ತಿದ್ದಂತೆ ನಮ್ಮ ತೋಟದ ಸನಿಹ ಕೀಲಿ ಕೊಟ್ಟ ಸಹ ನರ್ತಕಿಯರಂತೆ ಗರಿ ಬಿಚ್ಚಿ ಕುಣಿಯುತ್ತಿದ್ದ ನವಿಲಿನ ಸುತ್ತ ಸುತ್ತುತ್ತಿದ್ದ ನವಿಲುಗಳ ನರ್ತನ ನನ್ನ ಮನಸ್ಸಿನಲ್ಲಿ ತಟ್ಟನೆ ಹಾಯ್ದು ಹೋಯಿತು. ತನ್ನ ನಿಧಾನ ಪ್ರವೃತ್ತಿಯಿಂದ ಇಂತಹ ಒಂದು ದೃಶ್ಯವನ್ನು ಕಳೆದು ಕೊಂಡ ಶ್ರೀಧರ ನಿಜಕ್ಕೂ ನತದೃಷ್ಟ. ನವಿಲಿನ ನರ್ತನ ನೋಡಲು ದಾಳಿಯಿಟ್ಟ ಮುಸ್ಲಿಂ ಸಮುದಾಯದ ೩೦-೪೦ ಜನರ ಗುಂಪಿನ ಗಲಾಟೆಗೆ ಹೆದರಿ ನವಿಲು ಗರಿ ಮುದುರಿ ಕುಳಿತಿತು. ಸ್ವತಂತ್ರವಾಗಿ ಅಲ್ಲದಿದ್ದರು ಪಂಜರದೊಳಗೆ ನರ್ತಿಸಲೂ ಮನುಷ್ಯ್ರನ ಉಪಟಳ ಆ ನವಿಲಿಗೆ.
ಕೊನೆ ಪಕ್ಷ ಹುಲಿಧಾಮದಲ್ಲಿರುವ ಹುಲಿ ಮತ್ತು ಇರುವ ಎರಡು ಸಿಂಹಗಳೆ ಇದ್ದುದರಲ್ಲಿ ಸ್ವತಂತ್ರವಾಗಿವೆಯಾದರೂ ಆಹಾರಕ್ಕಾಗಿ ಜನರನ್ನೆ ನಂಬಿರುವ ಇವು ಮೃಗಾಲಯಗಳಲ್ಲಿರುವ ಪ್ರಾಣಿಗಳಿಗಿಂತ ಎಷ್ಟೋ ಮೇಲು ಎನ್ನುವ ಬಾವನೆ ಮನಸ್ಸಿಗೆ ಕೊಂಚ ನಿರಾಳತೆಯನ್ನು ತರುತ್ತದೆ. ಮನುಷ್ಯರನ್ನು ನೋಡಿ ನೋಡೀ ಅವಕ್ಕು ಬೇಸರ ಬಂದಿರಬೇಕು ಇವರಿಗೇನಪ್ಪ ನಮ್ಮನ್ನು ನೋಡೋದು ಬಿಟ್ಟು ಬೇರೆ ಕೆಲಸನೆ ಇಲ್ವ? ಅಂತ ಇವು ಮಾತಾಡಿಕೊಳ್ಳುತ್ತಿವೆಯೆನೋ ಎನ್ನುವ ಭಾವನೆ ಬರುವ ಹಾಗೆ ನಮ್ಮನ್ನು ನೋಡಿ ಆಕಳಿಸುತ್ತಿರುತ್ತವೆ. ಜಿಂಕೆ, ಕಡವೆ ಕೃಷ್ಣಮೃಗ ಸಾಂಬಾರ್ ಮತ್ತು ಆಗಾಗ ಕಾಣಿಸಿಕೊಳ್ಳುವ ನವಿಲುಗಳು ಇಲ್ಲಿವೆ.
೩.೩೦ಕ್ಕೆ ಹುಲಿ/ಸಿಂಹಧಾಮದಿಂದ ಹೊರಟು ಆಯನೂರು, ರಿಪ್ಪನ್ ಪೇಟೆ ಮಾರ್ಗವಾಗಿ ಹೊಸನಗರ ತಲುಪಿ ನಮ್ಮ ಚೈತನ್ಯರಥಗಳ ಸಾರಥಿಗಳಾದ ಶ್ರೀಧರ, ಶಂಕರನಿಗೆ ವಿಶ್ರಾಮ ದೊರಕುವ ಸಲುವಾಗಿ ಚಹಾ ಕುಡಿದು ನಗರ ಮಾರ್ಗದಲ್ಲಿ ಶಿಥಿಲಗೊಂಡಿರುವ ಸೇತುವೆಯ ಬಳಿ ಸ್ವಲ್ಪ ದಾರಿ ತಪ್ಪಿ ಮತ್ತೆ ಸರಿಯಾದ ದಾರಿಯಲ್ಲಿ ನಿಟ್ಟೂರು ಮಾರ್ಗವಾಗಿ ಘಟ್ಟದ ರಸ್ತೆಗಳಲ್ಲಿ ಹಾಯ್ದು ಕೊಲ್ಲೂರು ತಲುಪಿದಾಗ ಸಂಜೆ ರವಿ ಆಗಲೆ ತನ್ನ ಮನೆ ಸೇರಿಕೊಂಡಿದ್ದ. ಅರಣ್ಯ ಇಲಾಖೆಯ ಜಯನಾರಾಯಣರನ್ನು ದೂರವಾಣಿ ಮುಖೇನ ಸಂಪರ್ಕಿಸಿ, ಕೊಲ್ಲೂರಿನ ಅರಣ್ಯ ಇಲಾಖೆಯ ಕಛೇರಿಗೆ ನಾವು ಬಂದ ಉದ್ದೇಶಗಳನ್ನು ಮತ್ತು ನಾವು ತಂಗಬೇಕಾಗಿರುವ ಜಾಗವನ್ನು ತಿಳಿಸಿದೆವು. ಅರಣ್ಯ ಇಲಾಖೆಯ ಪತ್ರ ಆಗಲೆ ಇಲ್ಲಿಗೆ ತಲುಪಿರುವ ಬಗ್ಗೆ ನಮಗೆ ಮಾಹಿತಿ ದೊರೆಯಿತು. ಕೊಲ್ಲೂರು ಭಟ್ಕಳ ರಸ್ತೆಯಲ್ಲಿ ೩ ಕಿ ಮಿ ಕ್ರಮಿಸಿದ ನಂತರ ಬಲಭಾಗದಲ್ಲಿರುವ ಫಲಕವೇ ನಮಗೆ ಆನೆಝರಿಗೆ ಹೋಗಲು ಮಾರ್ಗದರ್ಶಕ ಎನ್ನುವ ಮಾಹಿತಿ ಅರಣ್ಯ ಇಲಾಖೆಯ ನೌಕರನಿಂದ ಸಿಕ್ಕಿತು. ಈ ಹೊತ್ತಿಗಾಗಲೆ ಸಂಪೂರ್ಣ ಕತ್ತಲು ಆವರಿಸಿತು. ೩ ಕಿ.ಮಿ ನಂತರ ಮುಖ್ಯರಸ್ತೆಯಲ್ಲಿರುವ ಫಲಕವನ್ನೆ ಆಧರಿಸಿ ಸಿಗುವ ಕಚ್ಛಾರಸ್ತೆಯಲ್ಲಿ ದಟ್ಟ ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಿ ಪ್ರಕೃತಿ ಶಿಬಿರ ತಲುಪಿದಾಗ ಆಗಲೆ ಅಲ್ಲಿ ಸುಮಾರು ಜನರಿರುವ ಕುರುಹಾಗಿ ನಿಂತಿದ್ದ ೨-೩ ವಾಹನಗಳು ನಮಗೆ ಸ್ವಾಗತ ಕೋರಿದವು. ಶಿಬಿರದ ಮೇಲ್ವಿಚಾರಕ ಮಹಾಬಲ ನಮಗಾಗಿ ಕಾದಿರಿಸಿದ್ದ ಢೇರೆಗಳನ್ನು ತೋರಿಸಿ ಇವತ್ತಿನ ಮಟ್ಟಿಗೆ (ಇಲಾಖೆಯ ಅಧಿಕಾರಿಗಳು ಯಾವುದೇ ಪೂರ್ವ ಮಾಹಿತಿಯಿಲ್ಲದೆ ಹಾಜರಾದ್ದರಿಂದ) ನಮಗೆ ಊಟ ದೊರಕುವುದಿಲ್ಲವೆಂದು ತಿಳಿಸಿದರು. ಸರಿ ನಾವೆಲ್ಲ ಢೇರೆಯೊಳಗೆ ನಮ್ಮ ಹೊರೆಗಳನ್ನೆಲ್ಲಾ ಇಳಿಸಿದೆವು. ಮಲೆಯಾಳಿಗಳೇ ತುಂಬಿ ಹೋಗಿರುವ ಕೊಲ್ಲೂರಿಗೆ ಬಂದು ಗಂಟಲಲ್ಲಿ ಇಳಿಯಲು ಹರತಾಳ ಹೂಡುತ್ತಿದ್ದ ಊಟವೆಂದು ಕೊಟ್ಟ ಪದಾರ್ಥವನ್ನು ತಿನ್ನಲಾಗದೆ ಹೊಟ್ಟೆಗೆ ತುರುಕಿ ಹಿಂತಿರುಗಿ ಬಂದು ಹಾಸಿಗೆ ಮೇಲೆ ಬಿದ್ದಾಗ ನಿದ್ರಾದೇವಿ ಯಾವಾಗ ಆವರಿಸಿಕೊಂಡಳೋ? ಗೊತ್ತಿಲ್ಲ.
ಗಡಿಯಾರ ಅರಚಿಕೊಳ್ಳಲು ಆರಂಭಿಸಿದಾಗಲೆ ಎಚ್ಚರವಾದದ್ದು. ಹೊತ್ತಿಗಾಗಲೆ ತನ್ನಿಬ್ಬರು ಮಕ್ಕಳೊಂದಿಗೆ ಶಿಬಿರದ ಪಕ್ಕದಲ್ಲೆ ಮಂದಗಮನೆಯಾಗಿ ಹರಿಯುತ್ತಿದ್ದ ಸೌಪರ್ಣಿಕೆಯ ದಡದಲ್ಲಿ ಕುಳಿತು ಬೆಳಗಿನ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ಶಂಕರ ಸ್ವಾಗತಿಸಿದ. ಮಂದ ಬೆಳಕಿನಲ್ಲಿ ಮರಗಳ ಹಸಿರು ಬಣ್ಣವನ್ನೆ ಹಚ್ಚಿ ಕೊಂಡಿದ್ದ ಸೌಪರ್ಣಿಕ ನದಿಯ ನೀರು ಹಸಿರಾಗಿ ಕಾಣಿಸುತ್ತಿತ್ತು. ಆಗ ತಾನೆ ಉದಯಿಸುತ್ತಿದ್ದ ಸೂರ್ಯ ಕಿರಣಗಳು ನೀರಿನಲ್ಲಿ ಪ್ರತಿಫಲಿಸಿ ಎಲೆಗಳೊಡನೆ ಚಿನ್ನಾಟವಾಡುವುದನ್ನೆ ಮೈಮರೆತು ನೋಡುತ್ತಾ ನಿಂತಿದ್ದ ಶಂಕರನ್ನು ಢೇರೆಗೆ ಕರೆ ತಂದು ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗುವಂತೆ ತಿಳಿಸಿದೆ. ಢೇರೆಯ ಬಳಿ ಬಂದರೆ ಮಗ ಅಮಿತ್ ಒಂದೇ ಉಸಿರಿನಲ್ಲಿ ತಾನು ನೋಡಿದ ಕೆಂಪು ಮಲಬಾರ್ ಅಳಿಲಿನ ಬಗ್ಗೆ ಹೇಳಲು ತವಕಿಸುತ್ತಿದ್ದ.
ಆನೆಝರಿ ಪ್ರಕೃತಿ ಶಿಬಿರ ದಟ್ಟ ಕಾಡಿನ ಮಧ್ಯೆ ಇರುವ ೫ ಢೇರೆಗಳಿರುವ ಒಂದು ತಾಣ. ಆದರೂ ಕುದುರೆ ಮುಖದ ಭಗವತಿ ಪ್ರಕೃತಿ ಶಿಬಿರಕ್ಕೂ ತುಂಬ ವ್ಯತ್ಯಾಸವಿದೆ ಕಾಡಿನ ಪಕ್ಕದಲ್ಲಿ ಹರಿಯುವ ಭದ್ರಾ ಹೊಳೆಯ ದಡದಲ್ಲಿ ಬೆಟ್ಟಗಳಿಂದ ಸುತ್ತುವರೆದಿರುವ ಬಯಲಲ್ಲಿ ನಿರ್ಮಿತವಾಗಿರುವ ಭಗವತಿ ಒಂದು ಸ್ವರ್ಗವನ್ನು ಸೃಷ್ಟಿಸಿದರೆ, ಸೂರ್ಯನ ಕಿರಣಗಳು ಭೇದಿಸಲು ಕಷ್ಟಪಡುವ ದಟ್ಟ ಅರಣ್ಯದ ಮಧ್ಯೆ ಹರಿಯುವ ಸೌಪರ್ಣಿಕ ನದಿಯದಡದಲ್ಲಿ ಹೊರ ಪ್ರಪಂಚದಿಂದ ದೂರ ಉಳಿದಿರುವಂತೆ ತೋರುವ ಆನೆಝರಿಗೂ ತನ್ನದೇ ಆದ ವೈಶಿಷ್ಟ್ಯವಿದೆ.
ನಮ್ಮೊಡನೆ ಬಂದಿದ್ದ ಸ್ಟೀವ್ ಇರ್ವಿನ್ (ಶ್ರೀಧರ) ರಾತ್ರಿ ಹಾದು ಹೋಗಿರಬಹುದಾದ ಹೆಬ್ಬಾವಿನ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದ. ಅಲ್ಲೆ ಮರದ ಮೇಲೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮಲಬಾರ್ ಅಳಿಲನ್ನು ತೋರಿಸಿ ಅದರ ಚಿತ್ರೀಕರಣ ಮಾಡುವಂತೆ ಆದೇಶಿಸಿದ. ಸರಿ ಅವನ ಅಣತಿಯಂತೆ ನನ್ನ ಕಣ್ಣಿನಿಂದ ಅದು ಮರೆಯಾಗುವಾವರೆಗೂ ಚಿತ್ರೀಕರಿಸಿ ಢೇರೆಗೆ ಹಿಂತಿರುಗಿ ಸ್ನಾನ ಮಾಡಿ ಕೊಲ್ಲೂರಿನಲ್ಲಿ ದೋಸೆ ತಿಂದು ಮುಗಿಸಿ ಹೊರ ಬಂದಾಗ ಆಗಲೇ ಸಮಯ ೧೦.೦೦. ಇವತ್ತಿನ ನಮ್ಮ ಕಾರ್ಯಕ್ರಮ ಕೊಡಚಾದ್ರಿ ಶಿಖರ. ಸರಿ ಅಲ್ಲೆ ಇದ್ದ ಜೀಪ್ ಗೆ ೧೨೦೦ ರೂಗಳ ಬಾಡಿಗೆ ಮಾತನಾಡಿ ಜೀಪ್ ಹತ್ತಿ ಕುಳಿತೆವು. ೩ ಬಾರಿ ಕೊಲ್ಲೂರಿಗೆ ಬಂದಿದ್ದರೂ ಕೊಡಚಾದ್ರಿಗೆ ಹೋಗಲಾಗಿರಲಿಲ್ಲ. ಹೋದ ಬಾರಿ ಕೊಲ್ಲೂರಿಗೆ ಬಂದಾಗ ಕೊಡಚಾದ್ರಿ ತಪ್ಪಲಿನಲ್ಲಿರುವ ಹಿಡ್ಲುಮನೆ ಜಲಪಾತಕ್ಕೆ ಭೇಟಿ ನೀಡಲು ಸಾಧ್ಯವಾಗಿತ್ತೆ ವಿನಃ ಕೊಡಚಾದ್ರಿಗೆ ಅದರ ರಸ್ತೆಯಿಂದಾಗಿ ತಪ್ಪಿ ಹೋಗಿತ್ತು. ಕೊಡಚಾದ್ರಿ ಪರ್ವತದ ತಪ್ಪಲಿನವರೆಗಷ್ಟೆ ನಮ್ಮ ವಾಹನಗಳು ಹೋಗಲು ಸಾಧ್ಯ. ಅಲ್ಲಿಂದ ಮೇಲಕ್ಕೆ ಅಂದರೆ ಸುಮಾರು ೧೦-೧೨ ಕಿ.ಮೀ ಗಳಷ್ಟು ಜೀಪ್ ಮಾತ್ರ ಹತ್ತಲು ಸಾಧ್ಯ. ಅಬ್ಬ ಅದೇನು ಜೀಪೋ ರೋಬಟ್ಟೋ ಗೊತ್ತಿಲ್ಲ ರಸ್ತೆಯೇ ಇಲ್ಲದ ಬಂಡೆಗಳ ಮೇಲೆ ನಾನು ನೋಡಿದ್ದರಲ್ಲೆ ಅತ್ಯಂತ ಕಡಿದಾದ ದಿಬ್ಬಗಳಲ್ಲಿ ನಿರಾಯಾಸವಾಗಿ ವಾಹನವನ್ನು ಚಲಾಯಿಸುವ ಚಾಲಕನ ಚಾಲಾಕಿತನಕ್ಕೆ ಒಮ್ಮೆ ನಮಸ್ಕಾರ ಹೇಳಲೇಬೇಕು. ಇಂತಹ ದುರ್ಗಮ ದಾರಿಯಲ್ಲು ಎದುರಿಂದ ಇಳಿದು ಬರುತ್ತಿರುವ ಜೀಪ್ ಗಳಿಗೆ ಜಾಗ ಬಿಡುತ್ತ (ಅದು ಯಾವ ಬದಿಯಲ್ಲಾದರು ಸರಿಯೆ) ಸಾಗುವ ಪರಿ ಅಧ್ಭುತ!!
ಕೊಲ್ಲೂರಿನಿಂದ ೪೦ ಕಿ.ಮೀ ದೂರದಲ್ಲಿರುವ ಕೊಡಚಾದ್ರಿಯಲ್ಲಿ ಭಟ್ಟರ ಮನೆಯವರೆಗೂ ಜೀಪ್ನಲ್ಲಿ ಹೋಗಿ ಅಲ್ಲಿಂದ ಸರ್ವಙ್ಞ ಪೀಠಕ್ಕೆ ನಡೆದೇ ಹೋಗಬೇಕೆಂದು ಮತ್ತೆ ಅದಕ್ಕಾಗಿ ನಮಗೆ ಆತ ದಯಪಾಲಿಸಿದ ಸಮಯ ೨ ಗಂಟೆಗಳು ಮಾತ್ರ ಅದಕ್ಕಿಂತ ಹೆಚ್ಚಾದಲ್ಲಿ ಗಂಟೆಗೆ ನೂರು ರೂಗಳನ್ನು ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆಂದು ಎಚ್ಚರಿಸಿದ ನಮ್ಮ ಮಲೆಯಾಳಿ/ಕನ್ನಡ ಚಾಲಕ. ೧೨ ಗಂಟೆಗೆ ದೇವಸ್ಥಾನದ ಬದಿಯಲ್ಲಿ ಬಿಟ್ಟು ೨.೦೦ ಗಂಟೆಗೆ ಸರಿಯಾಗಿ ಹಿಂತಿರುಗುವಂತೆ ನಮಗೆ ತಿಳಿಸಿ ಅವನ ಸ್ನೇಹಿತರ ಜೊತೆ ಮಾಯವಾದ. ದೇವಸ್ಥಾನದ ಅರ್ಚಕರಿಗೆ ನಮಗೆಲ್ಲ ಊಟಕ್ಕೆ ವ್ಯವಸ್ಥೆ ಮಾದುವಂತೆ ವಿನಂತಿಸಿ. ಸರ್ವಙ್ಞ ಪೀಠದ ಕಡೆ ನಮ್ಮ ದಾಪುಗಾಲು. ಕಾಲುದಾರಿಯಲ್ಲಿ ಕಾಡಿನ ಮಧ್ಯೆ ನಮ್ಮ ನಡಿಗೆ ಸುಮಾರು ಅರ್ಧ ಗಂಟೆ ನಡಿಗೆಯ ನಂತರ ಸಣ್ಣದೊಂದು ಗುಹೆಯ ಒಳಗೆ ಪ್ರತಿಷ್ಠಾಪಿಸಲಾಗಿರುವ ಗಣೇಶನಿಗೆ ಕೈ ಮುಗಿದು ಇನ್ನೂ ಕ್ಲಿಷ್ಟಕರವಾದ ಬೆಟ್ಟವನ್ನು ಹತ್ತಲು ಆರಂಭಿಸಿದರೆ. ಅತ್ಯಂತ ಕಡಿದಾದ ಬೆಟ್ಟ ಹತ್ತುವುದು ಪ್ರಯಾಸಕರ. ಹೃದಯ ಬಡಿದು ಕೊಳ್ಳುವ ಶಬ್ಧ ತಮಟೆ ಹೊಡೆದಂತೆ ಕೇಳಿಸಲು ಆರಂಭವಾದಗಲೆಲ್ಲ ನಿಂತು ವಿಶ್ರಮಿಸಿ ಮತ್ತೆ ನಡಿಗೆ ಮತ್ತದೆ ಪುನರಾವರ್ತನೆ. ಸಧ್ಯ ದಟ್ಟವಾದ ಕಾಡಿನ ಮಧ್ಯೆ ಬಿಸಿಲಿನ ಝಳವಿಲ್ಲದೆ ನಮ್ಮ ನಡಿಗೆಗೆ ಸೂರ್ಯ ಸ್ವಲ್ಪ ಸಹಾಯ ಮಾಡಿದ್ದ. ದಾರಿಯುದ್ದಕ್ಕೂ ಸಿಗುವ ಮಲೆಯಾಳಿಗಳು ಪ್ಲಾಸ್ಟಿಕ್ ಮತ್ತು ಗುಟ್ಕಾ ಪಳೆಯುಳಿಕೆಗಳು ಮುಜುಗರ ತರಿಸುತ್ತವೆ. ಈಗಲೂ ಸಹ ದಟ್ಟ ಅರಣ್ಯದ ಮಧ್ಯೆಯಿರುವಲ್ಲಿಗೆ ಆ ಪುಣ್ಯಾತ್ಮ ಆದಿ ಶಂಕರರು ಅದು ಹೇಗೆ ನಡೆದು ಬಂದರೋ ಆ ಪರಮಾತ್ಮನೇ ಬಲ್ಲ. ಅದೂ ಇಲ್ಲಿ ಬಂದು ಪೀಠ ಸ್ಥಾಪಿಸಿವುದು ಊಹಿಸಲೂ ಆಗದ ವಿಷಯ. ಕಿರಿಯ ವಯಸ್ಸಿನ ಅರ್ಚಕನ ಪ್ರಕಾರ ಬೆಳಗಿನ ಸಮಯದಲ್ಲಿ ಕಾಡು ಕೋಣಗಳ ಹಿಂಡು ಸಿಗುವ ಅವಕಾಶಗಳಿವೆ. ಬಹುಶಃ ಕಚ್ಛಾ ರಸ್ತೆಯಿರುವುದರಿಂದಲೋ ಏನೋ ಅತಿ ಹೆಚ್ಚಿನ ಚಾರಣಿಗರನ್ನು ಆಕರ್ಷಿಸುವ ಈ ಪರ್ವತ ಈಗಾಗಲೆ ತನ್ನ ಪ್ರಾಕೃತಿಕ ಸೊಬಗನ್ನು ಕಳೆದುಕೊಳ್ಳುವತ್ತ ಸಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರ ನಡೆಸಬೇಕೆಂದಿದ್ದ ಗಣಿಗಾರಿಕೆಯನ್ನು ಇಲ್ಲಿನ ಜನತೆ ಯಶಸ್ವಿಯಾಗಿ ತಡೆಹಿಡಿದಿರುವುದು ಸಮಾಧಾನಕರ ಸಂಗತಿ. ಸುತ್ತಲೂ ಇರುವ ಪ್ರಕೃತಿ ಸೌಂದರ್ಯವನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದೆವು. ಆಗಾಗ ಬದಲಾಗುವ ವಾತಾವರಣ ಮನಸ್ಸಿಗೆ ಮುದ ತುಂಬುತ್ತದೆ. ನಾವಿದ್ದಷ್ಟು ಸಮಯ ಸೂರ್ಯ ದರ್ಶನವಾಗಲೇ ಇಲ್ಲ. ಮೋಡಗಳು ಅವಕಾಶ ಕೊಟ್ಟಾಗ ಚಿತ್ರಗಳನ್ನು ತೆಗೆದು ಕೊಳ್ಳುತ್ತಾ ಅಲ್ಲೆ ಇರುವ ಪುಟ್ಟ ಅಂಗಡಿಯೊಂದರಲ್ಲಿ ನಿಂಬೆ ಪಾನಕ ಕುಡಿದು ಹಿಂತಿರುಗಲು ಆರಂಭ. ದಾರಿಯುದ್ದಕ್ಕು ಬಿಟ್ಟಿದ ಪಾದರಕ್ಷೆಗಳನ್ನು ಹುಡುಕಿ ಕಾಲಿಗೇರಿಸಿಕೊಂಡು ಕೆಳಗೆ ಬರುವಾಗ ಸಮಯ ೧.೫೦. ಚಾಲಕನಿಗೆ ಕಾಯಲು ಹೇಳಿ ಮತ್ತೆ ನಿಧಾನವಾಗಿ ಇಳಿದು ಬಂದ ಶ್ರಿಧರನೊಡಗೂಡಿ ಭಟ್ಟರ ಮನೆಯ ಊಟಕ್ಕೆ ತೆರಳಿದೆವು. ಬಾಯಿ ಚಪ್ಪರಿಸುವ ಉಪ್ಪಿನಕಾಯಿ, ಹಲಸಿನ ಹಪ್ಪಳ ಸೊಪ್ಪಿನಹುಳಿ ಮತ್ತು ತಿಳಿಸಾರಿನ ಭಟ್ಟರ ಮನೆಯ ಊಟ ವಾಹ್! ಲೊಟ್ಟೆ ಹೊಡೆಯುತ್ತ ಹೊಟ್ಟೆ ಬಿರಿಯುವಷ್ಟು ಊಟ ಮಾಡಿದ್ದಾಯ್ತು. ಇಷ್ಟು ರುಚಿಯಿರುವ ಅಕ್ಕಿ(ಅನ್ನ) ನಮ್ಮ ಬೆಂಗಳೂರಿನಲ್ಲಿ ಯಾಕೆ ಸಿಗುವುದಿಲ್ಲ? ನೀವು ಏನೇ ಹೇಳಿ "ಬಡವರ ಮನೆಯ ಊಟ ಚೆನ್ನ ಸಿರಿವಂತರ ಮನೆಯ ನೋಟ ಚೆನ್ನ" ಅನ್ನುವ ಗಾದೆಯನ್ನು ನಾನು ಈ ರೀತಿ ಬದಲಿಸಿದ್ದೇನೆ. "ಹವ್ಯಕರ ಮನೆ ಊಟ ಚೆನ್ನ. ಮಲೆನಾಡಿನ ನೋಟ ಚೆನ್ನ". ನೋಟ ಅನ್ನುವುದನ್ನು ನೀವು ನೋಟ, ಕಾಡು, ಪರಿಸರ, ಅಲ್ಲಿನ ಹಸಿರು, ಮುಗ್ಧ ಜನ, ಅವರ ಔದಾರ್ಯ ಏನೆಂದು ಓದಿಕೊಂಡರೂ ನಡೆಯುತ್ತದೆ. ಅವರ ಔದಾರ್ಯದ ಇನ್ನು ಒಂದು ಉದಾಹರಣೆ ಮುಂದೆ ನಿಮಗೆ ಪರಿಚಯಿಸುತ್ತೇನೆ.
೩ ಗಂಟೆಗೆ ಅಲ್ಲಿಂದ ಹೊರಟ ನಮ್ಮ ವಾಹನ ಅಲ್ಲಲ್ಲಿ ಛಾಯಾಚಿತ್ರಗಳಿಗಾಗಿ ನಿಲ್ಲುತ್ತ ಸಾಗಿತ್ತು. ಸ್ವಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತಕ್ಕೆ ಹೆಸರಾದ ಮಲೆಯಾಳಿಗಳ ಒಗ್ಗಟ್ಟಿಗೆ ನಿದರ್ಶನವಾಗಿ ನಡೆದ ಈ ಘಟನೆ ಸಾಕ್ಷಿಯಾಯಿತು. ನಮ್ಮ ಮುಂದೆ ಹೋಗುತ್ತಿದ್ದ ಜೀಪ್ ಒಂದು ಕೆಟ್ಟು ನಿಂತಿತು. ಹಿಂದೆ ಬರುತ್ತಿದ್ದ ಎಲ್ಲ ಜೀಪುಗಳು ಅವನ ಸಹಾಯಕ್ಕೆ ನಿಂತವು. ಅಷ್ಟರಲ್ಲಾಗಲೆ ಒಬ್ಬ ಚಾಲಕ ಕೊಲ್ಲೂರಿಗೆ ಸುದ್ದಿ ಮುಟ್ಟಿಸಿ ಬೇರೆ ವಾಹನಕ್ಕೆ ವ್ಯವಸ್ಥೆ ಮಾಡಿದ್ದ. ನಾನು ನಮ್ಮ ಚಾಲಕನನ್ನು ಗೋಳು ಹುಯ್ದುಕೊಳ್ಳಲಾರಂಭಿಸಿದೆ. ನಾವು ತಡ ಮಾಡಿದರೆ waiting charge ಕೇಳುವ ನೀವು ಈಗ ನಮ್ಮದಲ್ಲದ ತಪ್ಪಿಗೆ ನಮ್ಮನ್ನೇಕೆ ಕಾಯಿಸುತ್ತಿದ್ದೀರಿ ಮತ್ತು ನಮಗೆ ತಡವಾದರೆ ನಮಗೆ ಹೇಳಿರುವ ಹಾಗೆ ನಿನಗೂ ಸಹ ಗಂಟೆಗೆ ೧೦೦ ರೂ ಕಡಿತಗೊಳಿಸುತ್ತೇನೆ ಎಂದು. ಅದ್ಯಾವುದು ಅವನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಕೊನೆಗೆ ಆ ಜೀಪ್ ದುರಸ್ಥಿಯಾಗುವ ಯಾವುದೇ ಲಕ್ಷಣಗಳು ಕಾಣದಿದ್ದಾಗ ನಮ್ಮ ಚಾಲಕ ತನ್ನ ವಾಹನ ಪ್ರಾರಂಭಿಸಿದ. ಇಷ್ಟರಲ್ಲಾಗಲೇ ಸುತ್ತಲಿದ್ದ ಹಸಿರುರಾಶಿಯನ್ನು ನಮ್ಮ ಬೆಳಕಿನ ಬೋನಿನಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿ ಬಂದೆವು. ಢೇರೆಗೆ ಹಿಂತಿರುಗಿ ಮಹಾಬಲ ಕೊಟ್ಟ ಚಹಾ ಕುಡಿದು ಸೌಪರ್ಣಿಕ ಹೊಳೆಗೆ ಇಳಿದಾಗ ಸಂಜೆ ೬ ಗಂಟೆ. ಮನದಣಿಯೆ ಜಲಕ್ರೀಡೆ ಮೈಮನಸ್ಸಿನ ಆಯಾಸವನ್ನೆಲ್ಲ ಪರಿಹರಿಸಿತು. ಮಕ್ಕಳಂತು ನೀರಿನಿಂದ ಹೊರಗೆ ಬರಲು ಸಿದ್ದರಿರಲಿಲ್ಲ. ಒತ್ತಾಯಪೂರ್ವಕವಾಗಿ ಅವರನ್ನು ಹೊರತಂದೆವು. ಕೊಲ್ಲೂರಿನಿಂದ ತಂದಿದ್ದ ಹಾಲು ಸಕ್ಕರೆ ಚಹಾಪುಡಿಯಿಂದ ನಾವೆ ಈಗ ಚಹಾ ಮಾಡಲು ಕುಳಿತೆವು. ಶ್ರೀಮತಿ ಶಂಕರ್ ನೆರವಿನಿಂದ ನಮ್ಮ ಚಹಾ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ೮ ಗಂಟೆಗೆ ಮಹಾಬಲ, ಊಟಕ್ಕೆಂದೆ ನಿರ್ಮಿಸಿರುವ ಒಂದು ಹೆಂಚಿನ ಷಟ್ಕೋನದ ಚಪ್ಪರದಲ್ಲಿ ನಿಮ್ಮ ಊಟ ಸಿದ್ದವಿದೆ ಎಂದು ತಿಳಿಸಿದರು. ಶ್ಯಾವಿಗೆಪಾಯಸ, ಚಪಾತಿ, ಪಲ್ಯ ಗಟ್ಟಿ ಮೊಸರಿನಿಂದ ಕೂಡಿದ ಪುಷ್ಕಳ ಭೋಜನ ೧೦ ಗಂಟೆಗೆ ಮುಗಿಯಿತು.
೧೫ರಂದು ಬೆಳಿಗ್ಗೆ ೭ ಗಂಟೆಗೆ ಎದ್ದು ಮಗನೊಂದಿಗೆ ನಿನ್ನೆ ಸಂಜೆಗಿಂತ ವಿಭಿನ್ನವಾದ ಮತ್ತು ಸುಂದರವಾದ ಜಾಗ ಹುಡುಕಿ ೧ ಗಂಟೆ ಸ್ನಾನ ಮಾಡಿ ಶಿಬಿರಕ್ಕೆ ಹಿಂತಿರುಗಿ ಮಹಾಬಲ ಕೊಟ್ಟ ಉಪಹಾರ ಮುಗಿಸಿ ಅವರಿಂದ ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೊಂದು ನಮಸ್ಕಾರ ತಿಳಿಸಿ ಅಲ್ಲಿಂದ ಬೀಳ್ಕೊಂಡೆವು. ಕೊಲ್ಲೂರಿಗೆ ಬಂದು ದೇವಿಯ ದರ್ಶನ ಮಾಡಿ ರಾಜೇಶ್ ನಾಯಕ್ ರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ನಮ್ಮ ಮುಂದಿನ ತಾಣವಾದ ಭೀಮೇಶ್ವರಕ್ಕೆ ತಲುಪುವ ಬಗ್ಗೆ ಮಾಹಿತಿ ಪಡೆದುಕೊಂಡೆ. ಈಗ ನಾವು ಸುಳ್ಳಳ್ಳಿ ತಲುಪಿ ಅಲ್ಲಿಂದ ಕೋಗಾರು ದಾರಿಯಲ್ಲಿ ಸಾಗಿ ಕೋಗಾರಿಗಿಂತ ಮೊದಲೆ ಸಿಗುವ ಕೂಡು ರಸ್ತೆಯಲ್ಲಿ ಎಡಕ್ಕೆ ತಿರುಗಿ ೩ ಕಿ.ಮೀ ನಂತರ ಸಿಗುತ್ತದೆ ಭೀಮೇಶ್ವರ.. ಅದಕ್ಕೂ ಮುಂಚೆ ನಾವು ದಬ್ಬೆ ಜಲಪಾತಕ್ಕೆ ಭೇಟಿ ಕೊಡಬೇಕಾದರಿಂದ ನಮ್ಮ ಪ್ರಯಾಣ ಕೋಗಾರಿನ ಕಡೆಗೆ. ಅದಕ್ಕಾಗಿ ಕೊಲ್ಲೂರು-ನಿಟ್ಟೂರು ದಾರಿಯಲ್ಲಿ ಸಿಗುವ ಅರಣ್ಯ ಇಲಾಖೆಯ ತಪಾಸಣೆ ಠಾಣೆಯ ತಕ್ಷಣ ಎಡಭಾಗಕ್ಕೆ ಸಿಗುವ ದಾರಿಯಲ್ಲಿ ನಮ್ಮ ವಾಹನಗಳು ಸ್ವಲ್ಪ ವೇಗವಾಗಿ ಮುಂದೋಡತೊಡಗಿದವು. ಬಿರು ಬೇಸಿಗೆಯಿದ್ದರೂ ಅಲ್ಲಲ್ಲಿ ಹರಿಯುವ ಸಣ್ಣ ಸಣ್ಣ ಝರಿಗಳು, ಹಚ್ಚ ಹಸಿರಲ್ಲದಿದ್ದರೂ ಕಣ್ಣಿಗೆ ತಂಪನ್ನೆರೆಯುವ ಹಸಿರು, ಮತ್ತು ಸ್ವಚ್ಛ ಗಾಳಿಯನ್ನು ಆಸ್ವಾದಿಸುತ್ತಿದ್ದವನಿಗೆ ಕಾಣಸಿಕ್ಕಿದ್ದು ಸಣ್ಣ ಹೊಳೆ ಮತ್ತು ಅದು ನಿರ್ಮಿಸಿರುವ ನೈಸರ್ಗಿಕ ಹೊಂಡ ತಕ್ಷಣವೇ ಕಾರಿನಿಂದ ಇಳಿದವರೆ ಅಲ್ಲೆ ಇದ್ದ ಹಳ್ಳಿಗರಿಂದ ಯಾವುದೆ ಅಪಾಯವಿಲ್ಲವೆಂದು ಖಾತರಿಪಡಿಸಿಕೊಂಡು ಎಲ್ಲರೂ ಎಮ್ಮೆಗಳಂತೆ ನೀರಿಗೆ ಬಿದ್ದಿದ್ದೆ. ಮೇಲೆ ಸುಡುವ ಬಿಸಿಲಿದ್ದರೂ ತಣ್ಣನೆ ಮಲೆನಾಡಿನ ಹೊಳೆ. ಓಹ್! ವರ್ಣಿಸಲದಳ ಕ್ರಮೇಣ ಆಳವಾಗುತ್ತಾ ಹೋಗುವ ಈ ಸ್ಥಳ ಒಂದು ಈಜು ಕೊಳವೇ ಸೈ. ಸೇತುವೆಗೆಂದು ನಿರ್ಮಿಸಿರುವ ಕೊಳವೆಗಳಿಂದ ನೀರಿಗೆ ಜಿಗಿದು ಈಜಲು ಒಳ್ಳೆಯ ಜಾಗ. ಮಕ್ಕಳಂತು ಸಮಯದ ಪರಿವೆಇಲ್ಲದೆ ನೀರಾಟವಾಡಿದರು. ಹೊಟ್ಟೆ ತಾಳ ಹಾಕಲು ಪ್ರಾರಂಭಿಸಿದಾಗಲೇ ಅಲ್ಲಿಂದ ಎದ್ದದ್ದು. ಸುಳ್ಳಳ್ಳಿ ತಲುಪಿ ಅತ್ಯಂತ ಚಿಕ್ಕ ಹೋಟೆಲ್ ಒಂದರಲ್ಲಿ ಊಟಮಾಡಿ ಭೀಮೇಶ್ವರದ ದಾರಿಯಲ್ಲಿ ಸಾಗಿದ್ದೆವು. ಈಗ ನಮ್ಮ ಮುಂದೆ ಇದ್ದ ಪ್ರಶ್ನೆ. ನಾವು ತಂಗುವ ಜಾಗದ ಬಗ್ಗೆ. ಮತ್ತು ಅಲ್ಲಿ ಅಂದಿನ ಊಟದ ವ್ಯವಸ್ಥೆಯ ಬಗ್ಗೆ. ಇದಕ್ಕಾಗಿ ಯಾವುದೇ ಸಿದ್ದತೆಯಿಲ್ಲದೆ ನಾವು ಬಂದಿದ್ದೆವು. ಆದರೂ ರಾಜೇಶ್ ನಾಯಕ್ ಅಲ್ಲೆ ವಾಸಿಸುವ ಭೀಮೆಶ್ವರ ದೇವಸ್ಥಾನದ ಅರ್ಚಕರೆ ಅಡುಗೆ ಮಾಡಿ ಕೊಡುತ್ತಾರೆಂದು ಮಾಹಿತಿ ಇತ್ತಿದ್ದರು. ಸರಿ ನಾವೀಗ ಬಿಳಿಗಾರಿಗೆ ಬಂದು ನಿಂತಿದ್ದೆವು. ದಬ್ಬೆ ಜಲಪಾತ ಮತ್ತು ಕನೂರು ಕೋಟೆಗೆ ಇದೇ ಹೆಬ್ಬಾಗಿಲು. ಅಂದ್ರೆ ಇಲ್ಲಿಂದಲೆ ಹೋಗಬೇಕು. ಸರಿ ಇಲ್ಲಿ ದಬ್ಬೆ ಜಲಪಾತಕೆ ಹೋಗಲು ಅಲ್ಲಿ ಮಾಹಿತಿ ಪಡೆಯುತ್ತಿದ್ದಾಗ ನಮಗೆ ತಿಳಿದದ್ದು ನಾವು ಬಂದ ಸಮಯ ಮೀರಿಹೋಗಿದೆ ಎನ್ನುವುದು ಏಕೆಂದರೆ ಈಗಾಗಲೆ ಸಮಯ ೩ ಗಂಟೆ ತೋರಿಸುತ್ತಿತ್ತು. ಸಮಯ ಪರಿಪಾಲನೆ ಮಾಡದಿದ್ದುರ ಪರಿಣಾಮ. ಅಲ್ಲೆ ಇದ್ದ ಅಂಗಡಿಯ ಚಂದ್ರಕಾಂತ್ ಈಗ ಜಲಪಾತಕ್ಕೆ ನೀವು ಹೋಗುವುದು ಅಸಾಧ್ಯ ಬೆಳಿಗ್ಗೆ ಹೋಗುವುದು ಸೂಕ್ತ ಎನ್ನುವ ಸಲಹೆ ನೀಡಿದರು. ಸರಿ ಉಳಿದುಕೊಳ್ಳಲು ಜಾಗ ಭೀಮೆಶ್ವರ ಎನ್ನುವುದು ನನ್ನ ಅಭಿಪ್ರಾಯ. ಯಾವುದೇ ವಸತಿ ಗೃಹ ಇಲ್ಲದ ಈ ಊರಿನಲ್ಲಿ ಹೇಗೆ ಉಳಿಯುವುದು ಎನ್ನುವ ನನ್ನ ಮನಸ್ಸನ್ನು ಓದಿದವರಂತೆ ಕಂಡ ಅಲ್ಲೆ ಇದ್ದ ಶಾಂತರಾಂ ಹೆಗ್ಗಡೆಯವರು ಭೀಮೇಶ್ವರದ ಭಟ್ಟರಿಗೆ ದೂರವಾಣಿ ಮುಖೇನ ಸಂಪರ್ಕಿಸಲು ಪ್ರಯತ್ನ ಪಟ್ಟರಾದರೂ ಆ ಬದಿಯಿಂದ ಯಾವುದೆ ಉತ್ತರ ಬರದಿದ್ದಾಗ ಬಹುಶಃ ದೇವಸ್ಥಾನಕ್ಕೆ ಪೂಜೆಗೆ ಹೋಗಿರುತ್ತಾರೆ ಅಥವ ಅವರ ಸ್ವಂತ ಊರಿಗೂ ಹೋಗಿರಬಹುದಾದ ಅವಕಾಶವಿರುವುದರಿಂದ ಅಲ್ಲಿ ಹೋಗಿ ತಂಗುವ ಬದಲು ನಮ್ಮ ಮನೆಗೆ ಬಂದು ಉಳಿದುಕೊಳ್ಳಿ ಎಂದು ತುಂಬು ಮನಸ್ಸಿನಿಂದ ಆಹ್ವಾನಿಸಿದರು. ಇದನ್ನೆ ನಾನು ಹವ್ಯಕರ ನಿರ್ಮಲ ಮನಸ್ಸಿನ ಔದಾರ್ಯ ತುಂಬಿದ ಆತಿಥ್ಯ ಮನೋಭಾವವೆಂದು ಬಣ್ಣಿಸಿದ್ದು ಅಪರಿಚಿತರನ್ನು ಸಹ ಮನೆಗೆ ಬಂದು ತಂಗಲು ನಾವು (ಬೆಂಗಳೂರಿಗರು) ಯಾರು ತಾನೆ ಆಹ್ವಾನಿಸುತ್ತೇವೆ ನೀವೆ ಹೇಳಿ? ಕಾಡಿನ ಮಧ್ಯೆಯಿರುವ ಭೀಮೇಶ್ವರದಲ್ಲಿ ರಾತ್ರಿ ತಂಗುವ ನನ್ನ ಯೋಜನೆಯಿಂದ ಭಯಗೊಂಡಿದ್ದ ಶ್ರೀಧರ ತಕ್ಷಣವೇ ದೂರದಿಂದ ನಮ್ಮ ಮಾತುಕತೆಯನ್ನು ಗಮನಿಸಿ ಅಲ್ಲಿಂದಲೆ ಒಪ್ಪಿಕೊಳ್ಳುವಂತೆ ನನಗೆ ಕೈಯಾಡಿಸುವ ಮೂಲಕ ಸೂಚನೆ ಕೊಡಲು ಆರಂಭಿಸಿದ. ಆದರೂ ನಯವಾಗಿ ಅವರ ಆಹ್ವಾನವನ್ನು ನಿರಾಕರಿಸಿ ಚಂದ್ರಕಾಂತ್ ಮನೆಯಲ್ಲಿ ರಾತ್ರಿ ಆಡುಗೆಗೆ ಬೇಕಾದ ಕೆಲವು ಪಾತ್ರೆಗಳನ್ನು ಮತ್ತ್ತು ಅವರ ಅಂಗಡಿಯಲ್ಲು ಅಡುಗೆ ಬೇಕಾದ ಪದಾರ್ಥಗಳನ್ನು ಖರೀದಿಸಿ. ಬೆಳಿಗ್ಗೆ ಹಿಂತಿರುಗಿದಾಗ ಅಲ್ಲಿನ ವಿಶೇಷ ಅಕ್ಕಿರೊಟ್ಟಿ ಚಟ್ನಿಯನ್ನು ನಮಗಾಗಿ ಸಿದ್ದ ಪಡಿಸಿರುವುದಾಗಿ ಚಂದ್ರಕಾಂತ್ ತಿಳಿಸಿದರು. ಅಲ್ಲಿಂದ ಭೀಮೇಶ್ವರದ ಕಡೆಗೆ ನಮ್ಮ ವಾಹನಗಳನ್ನು ತಿರುಗಿಸಿದೆವು.
ಭೀಮೇಶ್ವರದಲ್ಲಿ ರಾಮನವಮಿ
ಯಾವುದೇ ತೊಂದರೆಯಿಲ್ಲದೆ ಮುಖ್ಯರಸ್ತೆಯಲ್ಲಿನ ಭೀಮೇಶ್ವರ ಫಲಕವಿರುವ ಸ್ಥಳ ಸಿಕ್ಕಿತು. ಅಲ್ಲಿಂದ ೩ ಕಿ,ಮೀ ದೂರ ಕಚ್ಛಾ ರಸ್ತೆಯಲ್ಲಿ ಕ್ರಮಿಸ ಬೇಕಿತ್ತು. ೧ ಕಿ.ಮೀ ನಷ್ಟು ನಿರಾಯಾಸವಾಗಿ ಓಡಿದ ನಮ್ಮ ವಾಹನಗಳಿಗೆ ಕಡಿದಾದ ಮತ್ತು ಕಲ್ಲುಗಳಿಂದ ತುಂಬಿದ ರಸ್ತೆ ಎದುರಾಯಿತು. ವಾಹನ ಬರಿ ಇಳಿಜಾರಾದ ರಸ್ತೆಯಲ್ಲೆನೊ ಇಳಿಯುತ್ತಿತ್ತು ಇದೇ ಇಳಿಜಾರುಗಳು ಹಿಂತಿರುಗುವಾಗ ನಮ್ಮ ವಾಹನಗಳು ಹತ್ತುವ ಬಗ್ಗೆ ನನ್ನ ಅನುಮಾನ ಕಾಡತೊಡಗಿತು. ಸರಿ ದೇವರ ಮೇಲೆ ಭಾರ ಹಾಕಿ ಮುಂದೆ ಹೋಗಿದ್ದಾಯ್ತು. ೨ ಕಡೆ ಸಣ್ಣಗೆ ಹರಿಯುತ್ತಿದ್ದ ಹಳ್ಳದಲ್ಲಿ ಅತಿ ನಿಧಾನವಾಗಿ ವಾಹನಗಳನ್ನು ನಡೆಸಿಕೊಂಡು ದಟ್ಟ ಕಾಡಿನ ಮಧ್ಯೆ ಅಲ್ಲಲ್ಲಿ ವಾಹನದಿಂದಿಳಿದು ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾ ನಮ್ಮ ಗುರಿಯಾದ ಭಟ್ಟರ ಮನೆ ತಲುಪಿದಾಗ ಸಮಯ ಸಂಜೆ ೫.೩೦. ತಕ್ಷಣವೆ ರಾತ್ರಿಗೆ ಬೇಕಾಗುವ ಸೌದೆಯನ್ನು ಎಲ್ಲರೂ ಕೂಡಿ ಒಂದು ಕಡೆ ಪೇರಿಸಿ, ಭಟ್ಟರ ಮನೆಯ ಒಲೆಯಲ್ಲಿ ಆಡುಗೆ ಮಾಡಲು ಪ್ರಾರಂಭ. ಅಡುಗೆ ಒಲೆ ಎಂದರೇನೆಂಬುದೆ ತಿಳಿಯದ ಶ್ರೀಮತಿ ಶ್ರಿಧರ ಅವರ ಪರದಾಟ ನನಗೆ ನಗು ತರಿಸುತ್ತಿತ್ತು. ಕಟ್ಟಿಗೆ ಒಗ್ಗೂಡಿಸಲು ಸಹಾಯ ಮಾಡದೆ ತನ್ನ ಮಗನೊಡನೆ ಆನಂದವಾಗಿ ಕಾಲ ಕಳೆಯುತ್ತಿದ್ದ ಶ್ರೀಧರನ್ನು ಎಳೆದು ತಂದು ಇನ್ನಷ್ಟು ಕಟ್ಟಿಗೆ ತರಲು ಬಲವಂತ ಮಾಡಿ ಅವನಿಂದ ಸ್ವಲ್ಪ ಕೆಲಸ ತೆಗೆಯುವಲ್ಲಿ ನನ್ನ ಕೌಶಲ್ಯವನ್ನೆಲ್ಲ ಖರ್ಚು ಮಾಡಬೇಕಾಯಿತು. ಕತ್ತಲೆ ಆವರಿಸುತ್ತಿದ್ದಂತೆ ಆಡುಗೆ ಕೆಲಸದಲ್ಲಿ ಹೆಂಗಸರೆಲ್ಲ ನಿರತರಾದರೆ ನಮ್ಮ ಶ್ರೀಧರನಿಗೆ ಕಾಡು ಪ್ರಾಣಿಗಳ ಮತ್ತು ಸಮಾಜ ಘಾತುಕಶಕ್ತಿಗಳ ಭಯ ಆವರಿಸಲಾರಂಭಿಸಿತು. ಬೀಗ ಹಾಕಿದ್ದ ಭಟ್ಟರ ಕೊಠಡಿಯ ಬೀಗ ತೆಗೆಯುವಂತೆ ನನಗೆ ವರಾತ ಹಚ್ಚಲು ಆರಂಭಿಸಿದ. ಭಟ್ಟರು ಬರುವುದಕ್ಕೆ ಇನ್ನು ಸಮಯವಿದ್ದುದರಿಂದ ಅವನಿಗೆ ಸ್ವಲ್ಪ ಸಮಯ ಕಾಯಲು ಹೇಳಿ ಮನೆಯ ಅಂಗಳದ ಹೊರಗೆ ಬೆಂಕಿ ಹಚ್ಚಲು ಅಣಿಮಾಡತೊಡಗಿದೆ. ಇಷ್ಟರಲ್ಲಾಗಲೆ ಶ್ರೀಧರ ತನ್ನ ಭಯವೆಂಬ ಬೆಂಕಿಯನ್ನು ಶಂಕರನಿಗೂ ಸಹ ವರ್ಗಾಯಿಸಿದ್ದ. ವಿದ್ಯುತ್ ತಂತಿಗಳು ಇಲ್ಲಿಯವರೆಗೂ ಬಂದಿವೆಯಾದರೂ ಅದರಲ್ಲಿ ವಿದ್ಯುತ್ ಹರಿಯುತ್ತಿರುವ ಯಾವ ಲಕ್ಷಣಗಳು ಕಾಣಿಸಲಿಲ್ಲ. ಬೆಳಕಿಗಾಗಿ ನಾವು ತಂದಿದ್ದ ಅಡುಗೆ ಎಣ್ಣೆಯನ್ನೆ ಉರುವಲಾಗಿಸಿ ದೀಪ ಹಚ್ಚಿ ನಮ್ಮಂತವರಿಗಾಗಿಯೆ ಭಟ್ಟರು ಬಿಟ್ಟಿದ್ದ ಸೀಮೆಎಣ್ಣೆಯ ಬುಡ್ಡಿಯನ್ನು ಬಳಸಿಕೊಂಡು ಕತ್ತಲನ್ನು ಓಡಿಸುವ ನಮ್ಮ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಯಿತು. ಗವ್ವೆನ್ನುವ ಕಾರ್ಗತ್ತಲು, ದೂರದಲ್ಲಿ ನಿಂತ ನಮ್ಮ ಬಿಳಿ ಬಣ್ಣದ ವಾಹನಗಳೂ ಸಹ ಕಣ್ಣಿಗೆ ಬೀಳದಷ್ಟು ಕತ್ತಲು ಒಮ್ಮೆಲೆ ಆವರಿಸಿತು. ಬೆಳದಿಂಗಳಿನ ದಿನಗಳಾದರೂ ನಮ್ಮ ದುರಾದೃಷ್ಟಕ್ಕೆ ಮೋಡಗಳು ಚಂದ್ರನನ್ನು ಮರೆ ಮಾಡಿದ್ದವು. ಬೆಟ್ಟದ ಮೇಲಿನಿಂದ ಕೊಳವೆಯ ನೀರು ಸದಾಕಾಲ ಬಚ್ಚಲಿನ ನಂತಹ ಜಾಗಕ್ಕೆ ಬಂದು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ ಕಟ್ಟಿಗೆಯ ಒಲೆಯಲ್ಲಿ ಭಟ್ಟರು ಇರಿಸಿದ್ದ ಪಾತ್ರೆಯನ್ನು ಉಪಯೋಗಿಸಿ ಚಿತ್ರಾನ್ನ ಮತ್ತು ಹುರುಳಿಕಾಯಿ ಪಲ್ಯ ಮಾಡುವ ಯೋಜನೆ ಸಿದ್ದವಾಯಿತು. ಇದ್ದುದರಲ್ಲೆ ಸಣ್ಣದಾದ ಕಟ್ಟಿಗೆಗಳಿಂದ ಒಲೆಹಚ್ಚಿ ಅನ್ನ ಮಾಡಲು ಸಿದ್ದ. ಎಷ್ಟು ದಿನವಾಗಿತ್ತೋ? ಸೌದೆ ಒಲೆಯಲ್ಲಿ ಮಾಡಿದ ಅಡುಗೆ ಊಟಮಾಡಿ! ಆ ಭಾಗ್ಯ ಈ ಮುಖೇನ ಒದಗಿ ಬಂದಿತ್ತು. ನಿನ್ನೆ ರಾಮನವಮಿಯಾದ್ದರಿಂದ ಅಡುಗೆಗಾಗಿ ಸ್ವಲ್ಪ ಹೆಚ್ಚೆನಿಸುವಷ್ಟು ತಂದಿದ್ದ ನಿಂಬೆಹಣ್ಣಿನ ಪಾನಕ ಮತ್ತು ಸೌತೆಕಾಯಿಯ ಕೋಸಂಬರಿಗೆ ಚಿತ್ರ ಮತ್ತು ಸವಿತ ಸಿದ್ದತೆ ನಡೆಸುತ್ತಿದ್ದರು. ಇಷ್ಟರಲ್ಲಾಗಲೆ ಭಯದಿಂದ ಮುದುಡಿಹೋಗಿದ್ದ ಶ್ರೀಧರ ಮಲಗಲು ಸಾಧ್ಯವಿಲ್ಲವೆಂದು ನನ್ನೊಡನೆ ಚರ್ಚಿಸಲು ಪ್ರಾರಂಭಿಸಿದ. ಭಯ ಎನ್ನುವುದು ಸಾಂಕ್ರಾಮಿಕದಂತೆ ಹಬ್ಬುವ ಗುಣವಾದ್ದರಿಂದ ನನ್ನೊಳಗೂ ನುಸುಳಲು ಪ್ರಾರಂಭವಾದ ಭಯವನ್ನು ಹೋಗಲಾಡಿಸಲು ಸ್ವಲ್ಪ ದೂರ ನಡೆದು ಹೋಗಿ ಬಂದೆ. ಅವನೊಡನೆ ಹೆಚ್ಚು ಮಾತನಾಡದೆ ಅವನಿಗೆ ಧೈರ್ಯ ಹೇಳಿ ಅಂಗಳದ ಹೊರಗೆ ಉರಿಯುತ್ತಿದ್ದ ಬೆಂಕಿಗೆ ಕಟ್ಟಿಗೆ ಹಾಕುವ ನೆಪವೊಡ್ಡಿ ಅವನಿಂದ ತಪ್ಪಿಸಿಕೊಳ್ಳಲು ಆರಂಭಿಸಿದೆ. ಅದಕ್ಕೂ ಶ್ರೀಧರನಿಂದ ಅಡ್ಡಿ, ಕಟ್ಟಿಗೆ ಮುಗಿದು ಹೋಗುವ ಭಯ ಅವನಿಗೆ, ಇಲ್ಲ ಪುಣ್ಯಾತ್ಮ ೨ ದಿನಕ್ಕೆ ಆಗುವಷ್ಟು ಸೌದೆ ಇದೆ ಎಂದು ಹೇಳಿದರೂ ಅವನು ಕೇಳಿಸಿ ಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ೮ ಗಂಟೆಯ ಸುಮಾರಿಗೆ ನಿಂಬೆಹಣ್ಣಿನ ಪಾನಕ ಕುಡಿದು ಸೌತೆಕಾಯಿಯ ಕೋಸಂಬರಿಯನ್ನು ಕತ್ತಲೆಯಲ್ಲಿ ಕುಳಿತು ರಾಮನವಮಿಯ ಪ್ರಯುಕ್ತ ನಿಧಾನವಾಗಿ ಮೆಲ್ಲತೊಡಗಿದೆವು.
೯ ಗಂಟೆ ಸಮಯಕ್ಕೆ ಸರಿಯಾಗಿ ಅಡುಗೆ ಸಿದ್ದವಾಯಿತು. ಕತ್ತಲೆಯಲ್ಲಿ ಮಾಡಿದ ಚಿತ್ರಾನ್ನ ಹುರುಳಿಕಾಯಿ ಪಲ್ಯ ಚಟ್ನಿಪುಡಿಯನ್ನು ಅಲ್ಲೆ ಇದ್ದ ಬಾಳೆ ಎಲೆಗಿಂತ ದೊಡ್ಡದಾದ ಕೆಸುವಿನ ದಂಟಿನ ಎಲೆಯ ಮೇಲಿನ ಊಟ ಮೃಷ್ಟಾನ್ನ ಭೋಜನ ಮೆದ್ದಂತಹ ಅನುಭವ. ಈಗ ಮಲಗುವ ಕಾರ್ಯಕ್ರಮಕ್ಕೆ ಅಣಿಯಾಗಬೇಕಿತ್ತು. ತನ್ನ ಭಯವನ್ನು ಹೆಚ್ಚಿಸಿಕೊಂಡಿದ್ದ ಶ್ರೀಧರನನ್ನು ಸಂತೈಸಲು ಭಟ್ಟರ ಕೊಠಡಿಯ ಬೀಗವನ್ನು ಕಟ್ಟಿಗೆಯಿಂದ ಮೀಟಿ ತೆಗೆದು ಹೆಂಗಸರು ಮಕ್ಕಳನ್ನೆಲ್ಲ ಕೊಠಡಿಯ ಒಳಗೆ ಮಲಗಿಕೊಳ್ಳಲು ವ್ಯವಸ್ಥೆ ಮಾಡಿದಾಗ ಶ್ರೀಧರನ ಮುಖ ಸ್ವಲ್ಪ ಶಾಂತವಾದದ್ದು. ಈ ಮಧ್ಯೆ ದ್ವಿಚಕ್ರ ವಾಹನದ ಸದ್ದೊಂದು ನಮ್ಮೆಲ್ಲರ ಗಮನ ಸೆಳೆಯಿತು. ತಕ್ಷಣವೇ ಶ್ರೀಧರ ಯುದ್ದಕ್ಕಾಗಿ ಅಲ್ಲೆ ಇದ್ದುದರಲ್ಲಿ ಗಟ್ಟಿಯಾದ ಕಟ್ಟಿಗೆಯೊಂದನ್ನು ಆಯ್ದು ಕೊಂಡ. (ಕೊನೆಗೆ ಅದನ್ನು ನಾವು ಮಲಗುವ ಜಾಗದಲ್ಲಿ ತಂದು ಇರಿಸಿಕೊಂಡ) ಮುಖ್ಯ ರಸ್ತೆ ಇಲ್ಲಿಂದ ಕೇವಲ ೩ ಕಿ.ಮೀ ಗಳಷ್ಟೆ ದೂರವಿರುವುದರಿಂದ ಅಲ್ಲಿ ಓಡಾಡುವ ವಾಹನಗಳ ಶಬ್ಧ ಕೇಳಿಸುವುದು ಸಹಜ. ಅಥವ ನನ್ನ ಮನಸ್ಸಿಗೆ ಬಂದದ್ದು ೩೨ ಕರೆಗಳು ಬಂದರೂ ಯಾರು ಸ್ವೀಕರಿಸದೆ ಇದ್ದುದರಿಂದ ಬಿಳಿಗಾರಿನ ಚಂದ್ರಕಾಂತ ನಮ್ಮನ್ನು ಸ್ಥಿತಿ ತಿಳಿಯಲು ಬರಬಹುದು ಎನ್ನುವುದು ನನ್ನ ಅನುಮಾನ ಆದರೆ ಮತ್ತೆ ಶ್ರೀಧರ ಇಲ್ಲ ಚಂದ್ರಕಾಂತ ಅಥವ ನಾವು ಬಂದ ವಿಷಯ ಗೊತ್ತಿರುವ ಯಾರಾದರೂ ನಮ್ಮನ್ನು ಆಕ್ರಮಿಸಲು ಜನ ಕರ್ಕೊಂಡು ಬರ್ತಾ ಇರ್ಬೇಕು ಎನ್ನುವ ವಾದ. ಕೊನೆಗೆ ಆ ಶಬ್ಧ ಕ್ರಮೇಣ ದೂರವಾಯಿತು. ನಮಗೂ ನಿರಾಳತೆ.
೧೧ ಗಂಟೆಯವರೆಗೂ ಹರಟೆ ಹೊಡೆದು ಮಲಗಲು ಅಣಿಯಾದರೆ ಶ್ರೀಧರ ತಾನು ಮಲಗುವುದಿಲ್ಲವೆಂದು ಘೋಷಿಸಿ ಬಿಟ್ಟ ಸರದಿಯಲ್ಲಿ ಇಬ್ಬರು ಕಾವಲು ಕಾಯೋಣ ಎನ್ನುವುದ ಅವನ ವಾದ. ಬೇಕಿಲ್ಲ ಶ್ರೀಧರ ಇಲ್ಲಿ ಯಾವುದೇ ಕಾಡು ಪ್ರಾಣಿಯಾಗಲಿ ಅಥವ ಮನುಷ್ಯರಾಗಲಿ ಬರುವುದಿಲ್ಲ ಎನ್ನುವ ಮಾತನ್ನು ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಾನು, ಶ್ರೀಧರ ಮತ್ತು ಶಂಕರನನ್ನು ಬಿಟ್ಟು ಮಿಕ್ಕವರನ್ನೆಲ್ಲಾ ಮಲಗಿಸಿ ಹೊರಗೆ ಅಂಗಳದಲ್ಲಿ ನಾವು ಮಲಗಲು ಸಿದ್ದತೆ ಮಾಡಿಕೊಂಡರೂ ಶ್ರೀಧರ ಬಿಡಲೊಲ್ಲ. ಇಷ್ಟರಲ್ಲಾಗಲೆ ಎಲ್ಲರೂ ಮಲಗಿದ್ದ ಕೊಠಡಿಯ ಬಾಗಿಲಿಗೆ ಶ್ರೀಧರ ಉದ್ದವಾದ ಕಟ್ಟಿಗೆಗಳನ್ನು ಅಡ್ಡ ಇರಿಸಿ ಭದ್ರತೆಯನ್ನು ಧೃಡೀಕರಿಸಿದ್ದೇನೆಂದು ಭಾವಿಸಿದ್ದ. ಬರುವ ಕಾಡು ಪ್ರಾಣಿಗಳಿಗೆ ಇದ್ಯಾವ ಲೆಖ್ಖ ಎನ್ನುವುದು ಅವನಿಗೆ ಅರಿವೇ ಇರಲಿಲ್ಲ. ನನ್ನನ್ನು ಮಲಗಲು ಬಿಡದ ಇದೇ ಶ್ರೀಧರನೆನಾ ಯಾವಾಗಲೂ ತನ್ನ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಿದ್ದವನು ಎನ್ನುವಷ್ಟು ಬದಲಾಗಿದ್ದವನಿಂದ ಇಂದು ಒಂದೂ ಚಟಾಕಿಗಳು ಸಿಡಿಯಲಿಲ್ಲ. ನನಗೋ ನಿದ್ದೆ ಕೆಟ್ಟರೆ ಬೆಳಿಗ್ಗೆ ಹುಚ್ಚನಾಗುವುದು ಖಂಡಿತ ಆದರೂ ಈ ಶ್ರೀಧರ ನನ್ನನ್ನು ಬಿಡಲೊಲ್ಲ. ಇದ್ದ ಬದ್ದ ರಾಜಕೀಯ, ಕ್ರೀಡೆ, ನಮ್ಮ ಹಳೆಯ ಅನುಭವಗಳು, ನಮ್ಮ ಕಾರ್ಖಾನೆ, ನಮ್ಮ ಸಹೋದ್ಯೋಗಿಗಳು ಎಲ್ಲವನ್ನು ಚರ್ಚಿಸಿದರೂ ಸಮಯ ೧೨.೩೦. ಶಂಕರ ತಾನು ಮಲಗುವುದಾಗಿ ಹೇಳಿ ಹೋದ. ನಾನು ಶ್ರೀಧರ ಮಾತ್ರ ಉಳಿದೆವು. ಇನ್ನಷ್ಟು ಸಮಯ ಅದೆ ವಿಚಾರಗಳನ್ನು ಮಾತನಾಡಿದರೂ ಸಮಯ ಮುಂದೆ ಹೋಗುತ್ತಿರಲಿಲ್ಲ. ಬಲವಂತವಾಗಿ ನಿದ್ದೆಯನ್ನು ತಡೆದಿದ್ದರೂ ತೂಕಡಿಕೆ ನನಗರಿವಿಲ್ಲದಂತೆ ನನ್ನನು ಆವರಿಸಲು ಆರಂಭಿಸಿತು. ಕೊನೆಗೆ ೧.೩೦ ಕ್ಕೆ ಶ್ರೀಧರನಿಗೆ ನಿನೇನಾದ್ರು ಮಾಡಿಕೊ ಮಹರಾಯ ನಾನು ಮಲಗುತ್ತೇನೆ ಎಂದು ಹೇಳಿ ಬಂದು ಅಂಗಳದಲ್ಲಿ ಶಂಕರನ ಪಕ್ಕ ಮಲಗಿದೆ. ತಕ್ಷಣವೆ ನಿದ್ರೆ ಆವರಿಸಿತು. ಇದ್ದಕ್ಕಿದ್ದಂತೆ ಯಾರೋ ನನ್ನನ್ನು ತಿವಿದು ಎಚ್ಚರಿಸಲು ಪ್ರಯತ್ನಿಸುತ್ತಿರುವುದು ಅರಿವಾಯಿತು ಅದು ಶಂಕರನ ಕೆಲಸ. ಏನ್ ಮಹರಾಯ ನಿನ್ನ ಗೋಳು ಈಗ ಎಂದು ಬಿಡಲಾರದೆ ಕಣ್ಣು ಬಿಡಲು ಪ್ರಯತ್ನಿಸುತ್ತಿದ್ದರೆ ಅವನು ನನ್ನ ಕಿವಿಯ ಬಳಿ ಪ್ರಸನ್ನ ಯಾವುದೋ ಪ್ರಾಣಿ ಬಂದು ಬಕೆಟ್ಟಲ್ಲಿ ನೀರು ಕುಡಿಯುತ್ತಿದೆ ಎಂದು ಪಿಸುಗುಟ್ಟಿದ. ಶ್ರೀಧರ ಎದ್ದು ಕುಳಿತು ನಿಜವಾಗ್ಲು ಪ್ರಸನ್ನ ಎಂದು ಕೋರಸ್ ಹಾಡಿದ. ನನಗೆ ನಿದ್ದೆಯಿಲ್ಲದ್ದಕ್ಕೆ ಅಳಬೇಕೋ ಇವರುಗಳ ಫಜೀತಿ ನೋಡಿ ನಗಬೇಕೊ ತಿಳಿಯಲಿಲ್ಲ. ಇಲ್ಲಪ್ಪ ಯಾವುದೆ ಪ್ರಾಣಿ ಮನುಷ್ಯರಿರುವ ಕಡೆ ಬರಲ್ಲ ಕಣ್ರೋ ಅಂದ್ರು ಇಲ್ಲ ನೋಡೋಣ ಬಾ ಎನ್ನುವ ಅವರ ಒಂದೆ ಹಟಕ್ಕೆ ಮಣಿದು ಕಣ್ಣುಜ್ಜಿಕೊಂಡು ಎದ್ದುಕುಳಿತೆ. ನೋಡು ಪ್ರಸನ್ನ, ಹೊರಗೆ ಉರಿಯುತ್ತಿರುವ ಬೆಂಕಿ ಕಡಿಮೆಯಾದ ತಕ್ಷಣ ಇಲ್ಲಿ ನೀರು ಜೋರಾಗಿ ಪಾತ್ರೆಯಿಂದ ತುಂಬಿ ಹೊರಗೆ ಬೀಳುತ್ತಿದೆ. ಹಾಗಾಗಿ ಅದು ಕತ್ತಲಲ್ಲಿ ಯಾವುದೋ ಕಾಡು ಪ್ರಾಣಿ ನೀರು ಕುಡಿಯಲು ಬಂದಿದೆ ಎನ್ನುವುದು ಇವರ ವಾದ ಸರಣಿ. ಇವರು ಹೆದರುತ್ತಿದ್ದ ನೀರು ಬೀಳುತ್ತಿದ್ದ ಜಾಗಕ್ಕೆ ಬಂದು ಅಲ್ಲೆಲ್ಲ ಬೆಳಕು ಬಿಟ್ಟು ಇವರಿಗೆಲ್ಲ ಅಲ್ಲೇನು ಬಂದಿಲ್ಲ ಎನ್ನುವುದನ್ನು ಖಾತರಿ ಪಡಿಸಿ
ಅಂಗಳದಲ್ಲಿ ಉರಿಯುತ್ತಿದ್ದ ಬೆಂಕಿಗೆ ಇನ್ನಷ್ಟು ಉರುವಲು ತುರುಕಿ ಅದು ಹೆಚ್ಚಾಗಿ ಉರಿಯಲು ಆರಂಭಿಸಿದಾಗಲೂ ಅದೇ ನೀರು ಬೀಳುವ ಶಬ್ಧವಿದೆ ಎಂದು ಅವರಿಗೆ ಮನದಟ್ಟು ಮಾಡಿಸಿ ಹಿಂತಿರುಗಿ ಬಂದು ಮಲಗಿದೆ. ಬಾಗಿ ಬಂದಿದ್ದ ಕೊಳವೆಯಲ್ಲಿ ಸಂಗ್ರಹವಾಗುವಾವವರೆಗೂ ಸಣ್ಣಗೆ ಸುರಿಯುತ್ತಿದ್ದ ನೀರು ಕೊಳವೆ ಭರ್ತಿಯಾದ ಕೂಡಲೆ ಒಮ್ಮೆಲೆ ಸುರಿಯುತ್ತಿದ್ದದ್ದು ಇವರ ಗಾಭರಿಗೆ ಕಾರಣವಾಗಿತ್ತು. ಇದನ್ನು ನಾನು ಇಲ್ಲಿಗೆ ಬಂದಾಗಲೆ ಗಮನಿಸಿದ್ದುದ್ದರಿಂದ ಅವರ ಮಾತಿಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ಹಿಂತಿರುಗಿ ಬಂದು ಮಲಗಿದೆ. ಸ್ವಲ್ಪ ಸಮಯಕ್ಕೆ ಶಂಕರ ಮುಸುಕಿನ ಒಳಗಿನಿಂದಲೆ ನಗಲು ಪ್ರಾರಂಭಿಸಿದಾಗ ನನ್ನ ಕೋಪ ತಾಳ್ಮೆ ಮೀರಿತು. ಏನೆಂದು ವಿಚಾರಿಸಲು ಅವನು ನಗುತ್ತಾ ಅದೆ ನೀರು ಬೀಳುತ್ತಿದ್ದ ಜಾಗದ ಕಡೆ ಬೆರಳು ತೋರಿಸಿದ. ಎಷ್ಟೆಲ್ಲ ಇವರಿಗೆ ಹೇಳಿದರೂ ಶ್ರೀಧರ ಎಲ್ಲೆಲ್ಲಿ ಒಳಬರುವ ಅವಕಾಶಗಳಿದ್ದವೊ ಅವನ್ನೆಲ್ಲ ಉರುವಲಿಗಾಗಿ ತಂದಿದ್ದ ದೊದ್ದ ಕಡ್ಡಿಗಳಿಂದ ಅದನ್ನೆಲ್ಲ ಅಡ್ಡ ಹಾಕಿ ಮುಚ್ಚಲು ಪ್ರಯತ್ನಿಸುತ್ತಿದ್ದ. ನಗು ತಡೆಯಲಾರದೆ ಮುಸುಕಿನೊಳಗೆ ನಕ್ಕು ಮತ್ತೆ ಮಲಗಿದೆ. ಅರ್ಧ ಗಂಟೆಯಷ್ಟೆ ಕಣ್ಣು ಮುಚ್ಚಲು ಸಾಧ್ಯವಾಗಿದ್ದರಿಂದಲೋ ಏನೋ ನನಗೆ ಏಳಲು ಆಗುತ್ತಿರಲಿಲ್ಲ.ಎಲ್ಲೋ ದೂರದಲ್ಲಿ ಯಾವುದೋ ಮಗು ಅಳುತ್ತಿರುವಂತೆ ಭಾಸವಾಗ ತೊಡಗಿತು. ಬಹುಶಃ ಕನಸಿರಬೇಕು ಎಂದು ಮಗ್ಗಲು ಹೊರಳಲು ಪ್ರಯತ್ನಿಸಿದರೆ ಶ್ರೀಧರನ ಪತ್ನಿಯ ಧ್ವನಿ ಕೇಳಿಸಿತು. ಸರಿ ಇದು ಕನಸಲ್ಲ ಶ್ರೀಧರನ ಮಗ ಸುಮಂತ್ ಜ್ವರದಿಂದ ಅಳುತ್ತಿದ್ದ. ಸುಳ್ಳಳ್ಳಿಯ ಸಮೀಪ ಎಷ್ಟು ಬೇಡವೆಂದರೂ ಕೇಳದೆ ಅವನನ್ನು ನೀರಿನಲ್ಲಿ ಆಡಿಸಿದ್ದರ ಪರಿಣಾಮ ಜ್ವರ ಮೈಸುಡುತ್ತಿತ್ತು.ಮಾತ್ರೆಯೊಂದನ್ನು ಪುಡಿ ಮಾಡಿ ಸರಿರಾತ್ರಿಯಲ್ಲಿ ಸಕ್ಕರೆಯೊಂದಿಗೆ ಬೆರೆಸಿ ತಿನ್ನಿಸಿ, ಹರಸಾಹಸ ಮಾಡಿ ಎಚ್ಚರವಾಗೇ ಕುಳಿತಿದ್ದ ಶ್ರೀಧರನಿಗೊಂದು ನಮಸ್ಕಾರ ಹೇಳಿ ಇನ್ನು ಸಾಧ್ಯವೆ ಇಲ್ಲ ಎನ್ನುವಷ್ಟು ಬರುತ್ತಿದ್ದ ನಿದ್ರಾದೇವಿಯನ್ನು ಕಾಯಿಸದೆ ಮಲಗಿದಾಗ ಸಮಯ ೨.೩೦.
ದೂರದಲ್ಲೆಲ್ಲೊ ಹಕ್ಕಿಯೊಂದು ಇಂಪಾಗಿ ರಾಗವಾಗಿ ಹಾಡುವ ಧ್ವನಿ ನನ್ನನ್ನು ಎಚ್ಚರಿಸಿತು ಆಗ ಸಮಯ ೪.೩೦. ಶ್ರೀಧರ ಈಗಲೂ ಎಚ್ಚರವಾಗಿದ್ದ ಕುರುಹುಗಳು ಗೋಚರಿಸಿತು. ಸರಿ ಮತ್ತೊಮ್ಮೆ ಮಲಗಿದವನಿಗೆ ಎಚ್ಚರಿಸಿದ್ದು ಅದೆ ಹಕ್ಕಿಗಳ ಚಿಲಿಪಿಲಿ. ವಾಹ್ ಎಂತಹ ಅನುಭೂತಿ ಸ್ವಾಮಿ ದಟ್ಟ ಕಾಡಿನ ನಡುವಿನ ಬೆಳಗು. ಹಕ್ಕಿಗಳ ಚಿಲಿಪಿಲಿ. ಹಳ್ಳಿಯಲ್ಲಿ ಬೆಳೆದಂತ ನನ್ನಂತವನಿಗೆ ಸರ್ವೆ ಸಾಮಾನ್ಯವಾದರೂ, ಇಷ್ಟೊಂದು ಲಯ ತಾಳಬದ್ದ ಮತ್ತು ನಿರಂತರವಾಗಿರುತ್ತದೆ ಎನ್ನುವ ಅರಿವು ನನಗಿರಲಿಲ್ಲ. ಇದು ನಿಜಕ್ಕೂ ಹೊಸ ಅನುಭವ. ಈಗ ಶ್ರೀಧರ ಹೆಂಡತಿ ಮಗ ಮಲಗಿದ್ದ ಕೋಣೆಯೊಳಗೆ ಮೆಲ್ಲಗೆ ನುಸುಳಿ ನಿದ್ರೆಗೆ ಶರಣಾದ. ಸಮಯ ಬೆಳಗಿನ ೫.೩೦ ಇರಬೇಕು. ಮತ್ತೆ ೮ ಗಂಟೆಗೆ ಎಚ್ಚರಗೊಂಡ ಶ್ರೀಧರ ಬೆಳಗಿನ ಕಾರ್ಯಕ್ರಮಗಳೆಲ್ಲವನ್ನೂ ಮುಗಿಸಿ ಬೀಗ ಒಡೆದಿದ್ದಕ್ಕೆ ಭಟ್ಟರಿಗೊಂದು ತಪ್ಪೊಪ್ಪಿಗೆ ಪತ್ರ ಮತ್ತು ಅದಕ್ಕಾದ ನಷ್ಟ ಪರಿಹಾರವಾಗಿ ಸ್ವಲ್ಪ ಹಣವನ್ನು ಇಟ್ಟು ನಮ್ಮ ದೂರವಾಣಿ ಸಂಖೆಯನ್ನು ಬರೆದಿಟ್ಟು ಅಲ್ಲಿಂದ ಹೊರಟಾಗ ೯.೩೦. ಎರಡೂ ವಾಹನಗಳು ಎಲ್ಲಿಯು ತೊಂದರೆ ಕೊಡದೆ ಬೆಟ್ಟ ಹತ್ತಿ ಬಂದದ್ದು ಒಂದು ನೆಮ್ಮದಿಯ ಸಂಗತಿ . ೧೦ ಗಂಟೆಗೆ ಕೋಗಾರಿನ ಮುಖಾಂತರ ಬಿಳಿಗಾರು ತಲುಪಿದಾಗ ೧೦ ಗಂಟೆ. ನಮಗಾಗಿ ಕಾಯ್ದು ತಣ್ಣಗಾಗಿ ಹೋಗಿದ್ದ ಮಲೆನಾಡಿನ ಅಕ್ಕಿರೊಟ್ಟಿಯನ್ನು ತೆಂಗಿನಕಾಯಿ ಚಟ್ನಿ, ಬದನೆಕಾಯಿ ಚಟ್ನಿ ಮತ್ತು ಜೋನಿಬೆಲ್ಲದೊಂದಿಗೆ ಹೆಚ್ಚಿನಿಸುವಷ್ಟು ಎಲ್ಲರೂ ಹೊಟ್ಟೆತುಂಬಿಸಿಕೊಂಡರು. ಮಕ್ಕಳು ಮತ್ತು ಹೆಂಗಸರಿಂದ ದಬ್ಬೆ ಜಲಪಾತಕ್ಕೆ ಇಳಿಯಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯ ಮಾತು ಅಲ್ಲಿರುವ ಎಲ್ಲರ ಒಕ್ಕೊರಲು.
ಚಂದ್ರಕಾಂತರಿಂದ ದಬ್ಬೆ ಜಲಪಾತಕ್ಕೆ ಹೋಗುವ ದಾರಿಯನ್ನು ಕೇಳಿ ತಿಳಿದುಕೊಂಡು ಬಿಳಿಗಾರು-ಕಾರ್ಗಲ್ ರಸ್ತೆಯಲ್ಲಿ ೩ ಕಿ.ಮೀ ಕ್ರಮಿಸಿದ ನಂತರ ಎಡಕ್ಕೆ ಸಿಗುವ ಏಕೈಕ ರಸ್ತೆಯಲ್ಲಿ ಸುಮಾರು ೪ ಕಿ.ಮೀ ಕ್ರಮಿಸಿದ ನಂತರ ಸಿಗುವ ಎರಡನೆ ಹೊಳೆಯ ನಂತರ ಎಡಕ್ಕೆ ತಿರುಗುವ ಬದಲು ಬಲ ಭಾಗದ ರಸ್ತೆಯಲ್ಲಿ ಮುಂದೆ ಹೋಗಿ ಸ್ವಲ್ಪ ಸಮಯದ ನಂತರ ಬಂದ ದ್ವಿಚಕ್ರಿಯೊಬ್ಬನಿಂದ ಸರಿಯಾದ ದಾರಿ ತಿಳಿದು ಮತ್ತೆ ಹಿಂತಿರುಗಿ ಸರಿಯಾದ ದಾರಿಗೆ ಬಂದು ರಸ್ತೆಯ ಕೊನೆಯನ್ನು ತಲುಪಿದಾಗ ಸಿಕ್ಕದ್ದು ನಾಡಹೆಂಚಿನ ಮನೆ. ದಬ್ಬೆ ಫಾಲ್ಸಿಗೆ ಎಲ್ಲರೂ ಇಳಿಯುವುದು ಅಸಾಧ್ಯ ಎನ್ನುವ ಅವರ ಮಾತಿಗೆ ಬೆಲೆ ಕೊಡದೆ. ದಾರಿ ತೋರಿಸುವಂತೆ ಅವರಿಗೆ ವಿನಂತಿಸಿಕೊಂಡೆ. ಒಬ್ಬರಿಗೆ ೫ ರೂನಂತೆ ಅಕ್ರಮವಾಗಿ ಆತ ಹಣ ವಸೂಲಿ ಮಾಡಿದ್ದು ಮಲೆನಾಡಿಗರಲ್ಲೂ ಸ್ವಾರ್ಥಿಗಳಿದ್ದಾರೆ ಎನ್ನುವುದು ಮುಖಕ್ಕೆ ರಾಚುವಂತಿತ್ತು. ಸರಿ ಬಂಡೆ ಇಳಿಯುವುದಕ್ಕೆ ಹಗ್ಗ ತೆಗೆದು ಕೊಳ್ಳುವಂತೆ ಆತ ಸೂಚಿಸಿದ. ಅದಕ್ಕೆ ೧೫ ರೂ ಸಹ ನಮ್ಮಿಂದ ಮತ್ತೆ ವಸೂಲಿ. ಕೊನೆಗೆ ಯಾರೂ ದಬ್ಬೆ ಜಲಪಾತಕ್ಕೆ ಇಳಿಯುವ ಸಾಹಸಕ್ಕೆ ಕೈ ಹಾಕಲಿಲ್ಲ ಏಕೆಂದರೆ, ಮನೆಯಿರುವ ಜಾಗದಿಂದ ಅಲ್ಲಿ ಅಂತದ್ದೊಂದು ಜಲಪಾತವಿದೆಯೆಂದು ಊಹಿಸುವುದು ಸಾಧ್ಯವಿಲ್ಲ ಅಂತಹ ಜಾಗದಲ್ಲಿ ಒಮ್ಮೆಲೆ ಉದ್ಭವವಾಗುವ ಕಣಿವೆಗೆ ಮರದ ಬಳ್ಳಿಗಳಂತೆ ಹೊರಟಿರುವ ಬೇರುಗಳನ್ನು ಹಿಡಿಸು ಹವ್ಯಾಸಿ ಗೋಡೆ ಹತ್ತುವವರಂತೆ ಕಣಿವೆ ಇಳಿಯುವ ಸಾಹಸ ಸಾಧ್ಯವಿಲ್ಲವೆಂದು ಎಲ್ಲರೂ ಹಿಂತಿರುಗಿದರೂ ನನ್ನ ಮಗನಾದ ಅಮಿತ್ ಅಪ್ಪ ಹೋಗೋಣ ಎಂದು ೨-೩ ಮರಗಳ ಬೊಡ್ಡೆ ಹಿಡಿದು ಇಳಿದೇ ಬಿಟ್ಟ ಅವನನ್ನು ಹಿಡಿದುಕೊಳ್ಳಲು ನನ್ನ ಪತ್ನಿ. ಕೊನೆಗೆ ಅವರಿಬ್ಬರನ್ನು ಉಪಾಯವಾಗಿ ಹಿಂದೆ ಕಳುಹಿಸಿದೆ ಈ ಸಮಯಕ್ಕಾಗಲೆ ನಮಗೆ ದಾರಿ ತೋರಿಸಲು ಬಂದಿದ್ದವ ಹುಷಾರು ಎಂದು ಹೇಳಿ ನನಗೆ ಸಮಯವಿಲ್ಲ ಎಂದು ತಿಳಿಸಿ ಹಿಂದೆ ಹೋಗಿ ಬಿಟ್ಟಿದ್ದ. ಎನಾದರೂ ಆಗಲಿ ಎಂದು ಕೊಂಡು ಇಳಿಯಲು ಆರಂಭಿಸಿದೆ. ಜಾರಿಕೆಯಿಲ್ಲದಿದ್ದರೂ ಬಂಡೆಗಳ ಮಧ್ಯೆ ಬೇರು ಬಿಟ್ಟಿರುವ ಮರಗಳ ಬೇರು ಹಿಡಿದು ಇಳಿಯುವುದು ಓಹ್ ನಿಜಕ್ಕೂ ರೋಮಾಂಚನ ಕೈತಪ್ಪಿ ಜಾರಿದರೆ ಯಾವುದೋ ಬಂಡೆಗಳ ಮಧ್ಯೆ ಅಥವ ಮರದ ಬೇರಿಗೆ ಸಿಕ್ಕಿ ಹಾಕಿಕೊಳ್ಳುವುದು ಖಚಿತ. ಯಾವುದೆ ಜೀವಿಗಳೂ ಕಾಣ ಸಿಗದ ದಟ್ಟಕಾಡಿನ ಮಧ್ಯೆ ನಾನೊಬ್ಬನೆ ಇಳಿಯುತ್ತಿದ್ದರೆ ಒಂದೆಡೆ ಭಯ ಒಂದೆಡೆ ಮೈ ಜುಮ್ಮೆನಿಸುವಂತಹ ಅನುಭವ ತರುವ ಕಣಿವೆಯ ಆಳ. ಬಂಡೆ ಕೊರಕಲುಗಳ ಮಧ್ಯೆ ಇಳಿಯುತ್ತಾ ಹೋದೆ. ಸುಮಾರು ೨೦ ನಿಮಿಷ ಇಳಿದಮೇಲೆ ಸಿಕ್ಕದ್ದು ಅಡ್ಡಬಿದ್ದ ದೊಡ್ಡಮರ ಅದರ ಅಗಾಧತೆಯನ್ನು ಊಹಿಸುವುದು ಕಷ್ಟ ಅಂತಹ ದೊಡ್ಡ ಮರವನ್ನು ಬಹುಶಃ ನಾನು ನೋಡಿದ್ದು ಇದೇ ಮೊದಲು. ದುರಾದೃಷ್ಟವಶಾತ್ ಡಿಜಿಟಲ್ ಕ್ಯಾಮೆರ ತರುವುದನ್ನು ಮರೆತಿದ್ದೆ. ಪರವಾಗಿಲ್ಲ ಏಕೆಂದರೆ ಹ್ಯಾಂಡಿ ಕ್ಯಾಂ ಇದೆಯಲ್ಲ. ಕೊನೆಗೊಮ್ಮೆ ದೊಡ್ಡ ಬಂಡೆಯೊಂದು ಕಣಿವೆಗೆ ಲಂಭವಾಗಿ ಚಾಚಿಕೊಂಡು ನಿಂತಿದ್ದ ಜಾಗಕ್ಕೆ ಬಂದು ನಿಂತಿದ್ದೆ. ಇಲ್ಲಿಂದ ಜಲಪಾತದ ಮೊದಲ ದರ್ಶನವಾಗುತ್ತದೆ. ಇಲ್ಲಿಯವರೆಗೂ ಬರಿ ಜಲಪಾತದ ಶಬ್ಧ ಮಾತ್ರ ಕೇಳಿಸುತ್ತಿರುತ್ತದೆ. ತುಂಬ ಜನ ಇಲ್ಲಿಂದಲೆ ಹಿಂತಿರುಗುತ್ತಾರೆ ಎಂದು ಆ ನಮ್ಮ ಮಾರ್ಗದರ್ಶಕ ನನಗೆ ತಿಳಿಸಿದ್ದ.
ಇಲ್ಲಿಂದ ಕೆಳಗಿಳಿಯಲು ಹಗ್ಗದ ಸಹಾಯ ಬೇಕೇಬೇಕು. ಇಲ್ಲೂ ಸಹ ನಮ್ಮ ಅನಾಗರೀಕ ಕುರುಹುಗಳಾದ ಗುಟ್ಕಾ ಮತ್ತು ಬೇರೆ ಬೇರೆ ಪ್ಲಾಸ್ಟಿಕ್ ಪದಾರ್ಥಗಳು ನಮ್ಮ ನಾಗಿರೀಕ ಜನ ಎಸೆದು ಹೋಗಿರುವುದು ವಿಷಾದನೀಯ. ಅಲ್ಲೆ ಇದ್ದ ಸಣ್ಣ ಮರದ ಬೊಡ್ಡೆಗೆ ನಾನು ತಂದಿದ್ದ ಹಗ್ಗವನ್ನು ಕಟ್ಟಿ ಇಳಿಯುವ ಸಾಹಸಕ್ಕೆ ಕೈ ಹಾಕೋಣವೆನಿವಷ್ಟರಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ನಾನು ಇಳಿಯಬೇಕಾಗಿದ್ದ ಮಾರ್ಗದಲ್ಲಿ ಹಾರಾಡುತ್ತಿದ್ದ ಅಂಗೈ ಅಗಲದ ಬಣ್ಣದ ಚಿಟ್ಟೆ. ಎಷ್ಟೆ ಪ್ರಯತ್ನಿಸಿದರೂ ಅದನ್ನು ನನ್ನ ಕ್ಯಾಮೆರಾದಲ್ಲಿ ಹಿಡಿಯಲು ಆಗಲೆ ಇಲ್ಲ. ಸರಿ ಕಟ್ಟಿದ್ದ ಹಗ್ಗ ಎಲ್ಲವೂ ಸರಿಯಿದೆಯೆಂದು ಪರೀಕ್ಷಿಸಿ ಮೆಲ್ಲಗೆ ಬಂಡೆ ಇಳಿಯಲು ಆರಂಭಿಸಿದೆ ೫ ಹೆಜ್ಜೆ ಕೆಳಗಿಳಿಯುವಷ್ಟರಲ್ಲಿ ನಾನು ಹಿಡಿದಿದ್ದ ಹಗ್ಗ ಸರ್ರನೆ ಜಾರಿತು. ಅಷ್ಟೆ ನನ್ನ ಕತೆ ಇವತ್ತಿಗೆ ಮುಗಿಯಿತು ಎಂದು ಕೊಂಡೆ. ಸದ್ಯ ಅಂತದ್ದೇನೂ ಆಗಲಿಲ್ಲ ನಾನು ಕಟ್ಟಿದ್ದ ಹಗ್ಗ ಸರಿಯಾಗೆ ಇತ್ತು. ಆದರೆ ಇಳಿಯಬೇಕಾದರೆ ಬಂಡೆಯನ್ನು ಬಳಸಿ ಬಂದದ್ದರಿಂದ ನನ್ನ ಭಾರಕ್ಕೆ ಅದು ಬಂಡೆಯಿಂದ ತಪ್ಪಿಸಿ ಸ್ವಲ್ಪ ಕೆಳಗೆ ೩-೪ ಅಡಿಗಳಷ್ಟು ಜಾರಿತು. ಹೃದಯವೇ ಬಾಯಿಗೆ ಬಂದಂತಹ ಅನುಭವ. ಇದರ ಜೊತೆಗೆ ನೆತ್ತಿ ಸುಡುವ ಸೂರ್ಯ ದೇವ. ಬಂಡೆ ಇಳಿದು ಮತ್ತೆರಡು ಬಂಡೆಗಳನ್ನು ದಾಟಿ ಒಂದು ಇಳಿಜಾರಿನಲ್ಲಿ ನಿಧಾನವಾಗಿ ಇಳಿದರೆ ನಾನು ಕಣಿವೆ ತಳಭಾಗದಲ್ಲಿದ್ದೆ. ಈಗ ಬಂಡೆಗಳನ್ನು ದಾಟುತ್ತಾ ಇಳಿಯುವ ಅಥವ ಹತ್ತುವ ಗೋಜಿಲ್ಲದೆ ನೇರವಾಗಿ ನಡೆಯುತ್ತಾ ಎದುರಿಗೆ ಧುಮುಕುತ್ತಿರುವ ಜಲಪಾತದ ಕಡೆ ನಡೆಯಲು ತೊಡಗಿದೆ. ಸುತ್ತಲೂ ಒಮ್ಮೆ ಅವಲೋಕಿಸಿದರೆ ಭಯ ಮನಸ್ಸಿಗೆ ಹತ್ತಲು ಆರಂಭಿಸಿತು ಇಡೀ ಕಣಿವೆಯಲ್ಲಿ ನಾನೊಬ್ಬನೆ!!! ಯಾವುದಾದರು ಕಾಡು ಪ್ರಾಣಿಗಳು ಆಕ್ರಮಿಸಿಬಿಟ್ಟರೆ ಎನ್ನುವ ಭಯ ಕಾಡಲು ಪ್ರಾರಂಭಿಸಿತು. ಅದರಲ್ಲು ಚಂದ್ರಕಾಂತ್ ಮತ್ತವರ ತಂಡ ಹೇಳಿದ ಮಾತು ನೆನೆಪಿಗೆ ಬಂದು ಹೋಯ್ತು. ಸಾರ್ ಆನೆ ಮತ್ತು ಸಿಂಹ ಎರಡನ್ನು ಬಿಟ್ಟು ಇನ್ನು
ಎಲ್ಲ ತೆರನಾದ ಪ್ರಾಣಿಗಳು ನಮ್ಮ ಕಾಡಿನಲ್ಲಿವೆ ಸಾರ್ ಎನ್ನುವ ಮಾತು. ತಲೆಯನ್ನೊಮ್ಮೆ ಕೊಡವಿಕೊಂಡು ಕ್ಯಾಮೆರದಲ್ಲಿ ಜಲಪಾತವನ್ನು ಚಿತ್ರೀಕರಿಸುತ್ತಾ ಮತ್ತೆ ಜಲಪಾತದೆಡೆ ಹೆಜ್ಜೆ ಹಾಕಿದೆ. ಜಲಪಾತದ ಹತ್ತಿರ ಬರುವಷ್ಟರಲ್ಲಿ ತಲೆ ಮತ್ತು ಮೈ ಬಿಸಿಲಿಗೆ ಕಾಯ್ದು ಕಾವಲಿಯಂತೆ ಸುಡಲು ಆರಂಭಿಸಿತು. ಜಲಪಾತದ ಬುಡಕ್ಕೆ ಬಂದು ಜಲಪಾತದ ನೀರು ಹರಿದು ನಿರ್ಮಾಣವಾಗಿದ್ದ ಸಣ್ಣ ಹೊಂಡವೊಂದರಲ್ಲಿ ಮುಳುಗಿ ನನ್ನ ಶರೀರದ ತಾಪ ಆರಿಸಿಕೊಂಡು ಮನದಣಿಯೆ ಜಲಪಾತವನ್ನು ವೀಕ್ಷಿಸಿ. ಅಲ್ಲಿನ ನಿಶ್ಯಬ್ಧತೆಯನ್ನು ಆನಂದಿಸುತ್ತ ಸ್ವಲ್ಪ ಸಮಯ ಕಳೆದು ೧.೦೦ ಗಂಟೆಗೆ ಸರಿಯಾಗಿ ಅಲ್ಲಿಂದ ಹಿಂತಿರುಗತೊಡಗಿದೆ ಮತ್ತೆ ಹಗ್ಗದ ಸಹಾಯದಿಂದ ಬಂಡೆಯನ್ನು ಹತ್ತಿ. ಏದುಸಿರು ಬಿಡುತ್ತಾ ನನಗೇ ಕೇಳುತ್ತಿದ್ದ ನನ್ನ ಹೃದಯದ ಬಡಿತವನ್ನು ಆಲಿಸುತ್ತಾ ೩-೪ ಹೆಜ್ಜೆಗೊಮ್ಮೆ ದಣಿವಾರಿಸಿಕೊಳ್ಳುತ್ತಾ ಕಣಿವೆಯನ್ನು ಏರಲು ತೊಡಗಿದೆ. ೧.೪೦ ಕ್ಕೆ ಸರಿಯಾಗಿ ನಮ್ಮ ತಂಡದವರನ್ನು ಸೇರಿಕೊಂಡೆ. ಅಷ್ಟರಲ್ಲಾಗಲೇ ಅವನನ್ನು ಬಿಟ್ಟು ಹೋಗಿದ್ದಕ್ಕಾಗಿ ಅಳುತ್ತ ಕುಳಿತಿದ್ದ ಮಗನನ್ನು ಸಮಾಧಾನ ಮಾಡಿ, ಮನೆಯ ಪಕ್ಕದಲ್ಲಿ ಸುರಿಯುತ್ತಿದ್ದ ಸಣ್ಣ ಜಲಪಾತದಂತಹ ನೀರಿಗೆ ತಲೆಯೊಡ್ಡಿದ್ದರೆ ಚುರ್ ಎಂದ ಭಾವ. ಕಾರು ಹಿಂದೆ ತೆಗೆದು ಕೊಳ್ಳುವ ಭರದಲ್ಲಿ ಅಲ್ಲಿನ ಮನೆಯವರ ಚಪ್ಪಡಿ ಕಲ್ಲೊಂದರ ಅಂಚು ಒಡೆದು ಹೋಗಿದ್ದರಿಂದ ಮತ್ತದೆ ದುರಾಸೆಯ ಜನರಿಗೆ ೧೫೦ ರೂ ದಂಡ ತೆತ್ತು ೨.೦೦ ಗಂಟೆಗೆ ಅಲ್ಲಿಂದ ಹೊರಟು ಉತ್ತಮವಾದ ರಸ್ತೆಯಲ್ಲಿ ಕಾರ್ಗಲ್ ಸೇರಿ ಅಲ್ಲಿನ ಹೋಟೆಲೊಂದರಲ್ಲಿ ಊಟ ಮಾಡಿ ಮುಪ್ಪಾನೆ ಪ್ರಕೃತಿ ಶಿಬಿರಕ್ಕೆ ಹೋಗಲು ಪಟ್ಟ ಪ್ರಯತ್ನ ವ್ಯರ್ಥವಾಯಿತು. ಗೇರುಸೊಪ್ಪದ ಹಿನ್ನೀರಿಗೆ ಭೇಟಿ ಕೊಡುವ ನಮ್ಮ ಪೂರ್ವ ಯೋಜನೆ ನಮ್ಮ ಮಂದಗತಿಯ ಸಹೋದ್ಯೋಗಿಯಿಂದ ಸಾಧ್ಯವಾಗಲಿಲ್ಲ. ಸಮಯ ಸರಿಯಾಗಿ ಪಾಲಿಸದೆ ಇದ್ದುದರ ಪರಿಣಾಮ ನಾವು ಖಚಿತವಾಗಿ ೩ ಸುಂದರ ಸ್ಥಳಗಳನ್ನು ತಪ್ಪಿಸಿಕೊಂಡೆವು ಎಂದು ಹೇಳಲು ಮನ ನೋಯುತ್ತದೆ. ಲಿಂಗನಮಕ್ಕಿ ಅಣೆಕಟ್ಟು ವೀಕ್ಶಿಸಲು ಅನುಮತಿ ಸಿಗದ ಕಾರಣ ನಿರಾಸೆಯಿಂದ ಹಿಂತಿರುಗಿ ಜೋಗದ ಕಡೆ ಪಯಣಿಸಿದೆವು.
ಮೈದುಂಬಿ ಧುಮುಕುತ್ತಿದ್ದ ಜೋಗವನ್ನು ನೋಡಿದವನಿಗೆ ಒಣಗಿ ನಿಂತಿರುವ ಜೋಗದ ಗುಂಡಿಯನ್ನು ನೋಡಲು ಮನಸ್ಸಿಲ್ಲದೆ ಕಾರಿನಲ್ಲಿ ಮಲಗಿ ದಬ್ಬೆಗೆ ಹೋಗಿಬಂದಿದ್ದ ಆಯಾಸವನ್ನು ಪರಿಹರಿಸಿಕೊಳ್ಳಲು ನಿರ್ಧರಿಸಿದೆ. ಸುಮಾರು ೪೫ ನಿಮಿಷಗಳು ಒಳ್ಳೆಯ ನಿದ್ದೆ ತೆಗೆದೆ. ಜೋಗದಿಂದ ನೇರವಾಗಿ ತಾಳಗುಪ್ಪ ಮಾರ್ಗವಾಗಿ ಸಾಗರ ತಲುಪಿ ಚಹಾ ಸೇವಿಸುತ್ತಿರುವಾಗ ಭೀಮೇಶ್ವರದ ಭಟ್ಟರಿಂದ ದೂರವಾಣಿ ಕರೆ ಬಂತು. ಬಹುಶಃ ಕೋಪಿಸಿಕೊಂಡು ನಿಂದಿಸಬಹುದಎಂಬ ನನ್ನ ಊಹೆ ೨೦೦% ಸುಳ್ಳಾಯಿತು ನಮ್ಮ ತಪ್ಪೊಪ್ಪಿಗೆ ಪತ್ರ ಕೆಲಸ ಮಾಡಿತ್ತು. ನಮ್ಮನು ಕ್ಷಮಿಸಿ ಸಾಗರದಿಂದ ಮತ್ತೆ ಭೀಮೇಶ್ವರಕ್ಕೆ ಬಂದು ಅಲ್ಲಿ ತಂಗುವಂತೆಯೂ ಇಂದು ಅವರೆ ಅಡುಗೆ ಮಾಡುವುದಾಗಿಯೂ ಮತ್ತೆ ನಮಗಾಗಿ ದೇವರಿಗೆ ವಿಶೇಷ ಅಭಿಷೇಕ ಮಾಡಿ ನಂತರ ತೆರಳುವುಂತೆ ಕೇಳಿದ್ದು ಅವರ ದೊಡ್ಡ ಗುಣವೇ ಅಲ್ಲವೆ. ನಾವು ಮಾಡುವ ತಪ್ಪನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೆ ಎಷ್ಟೋ ಸಮಸ್ಯೆಗಳು ಬಗೆ ಹರಿಯುತ್ತವೆ ಎನ್ನುವ ಪಾಠವನ್ನು ಕಲಿತಂತಾಯ್ತು.
ನಾನು ಮತ್ತು ಶಂಕರ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಭೇಟಿ ಕೊಟ್ಟ ನಂತರ ಶಿವಮೊಗ್ಗಕ್ಕೆ ಬರುವುದಾಗಿ ತಿಳಿಸಿ ಅಂತೆಯೆ ವರದಹಳ್ಳಿಯ ಕಡೆ ಹೊರಟು ಪ್ರಶಾಂತವಾದ
ವರದಹಳ್ಳಿಯಲ್ಲಿ ಸ್ವಲ್ಪ ಸಮಯ ಕೆಳೆದು. ಶಿವಮೊಗ್ಗಕ್ಕೆ ಬಂದು ಹೋಟೆಲ್ಲೊಂದರಲ್ಲಿ ಊಟ ಮಾಡಿ ಶ್ರೀಧರ ಕಾದಿರಿಸಿದ್ದ ವಸತಿ ಗೃಹವೊಂದರಲ್ಲಿ ತಂಗಿದ್ದು ಬೆಳಿಗ್ಗೆ ಎದ್ದು ತರೀಕೆರೆಯ ಬಳಿಯಿರುವ ಅಮೃತಾಪುರದ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬೀರೂರು ಅರಸಿಕೆರೆ ತಿಪಟೂರು ನಿಟ್ಟೂರು ಮತ್ತು ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಿದಾಗ ಸಂಜೆ ೬ ಗಂಟೆ.
ಪ್ರವಾಸ ಇಲ್ಲಿಗೆ ಮುಗಿಸುತ್ತಿದ್ದೇನೆ. ಪ್ರವಾಸಕ್ಕೆ ಸಹಕರಿಸಿದ ಕಾರ್ಕಳ ಅರಣ್ಯ ವಿಭಾಗದ ಜಯನಾರಾಯಣರಿಗು ತಮ್ಮಲ್ಲಿರುವ ಮಾಹಿತಿಯನ್ನಿತ್ತು ಎಲ್ಲ ರೀತಿಯಲ್ಲು ಎಂತಹುದೇ ಸಮಯದಲ್ಲು ಸಹಾಯಕ್ಕೆ ನಿಲ್ಲುವ ರಾಜೇಶ್ ನಾಯಕ್ ರಿಗು ಮತ್ತು ದಟ್ಸ್ ಕನ್ನಡ ಮೂಲಕ ಪರಿಚಯವಾದ ತಳವಾಟದ ಪತ್ರಕರ್ತ ಶ್ರೀ ರಾಘವೇಂದ್ರ ಶರ್ಮರಿಗೂ ಮನದಲ್ಲೆ ವಂದಿಸಿ ಮನೆ ಸೇರಿದೆ. ಸಹನೆಯಿಂದ ಈ ಪ್ರವಾಸ ಕಥನ ಓದಿದ ತಮಗೆ ಧನ್ಯವಾದ. ನಿಮ್ಮ ಅನಿಸಿಕೆ ತಿಳಿಸಲು ಮರೆಯಬೇಡಿ

ವಂದನೆಗಳೊಂದಿಗೆ
ಪ್ರಸನ್ನ
prasannakannadiga@yahoo.co.in
ಚಿತ್ರಗಳು

No comments: