Tuesday, June 17, 2008

ಬಂಡಜೆ ಚಾರಣ

ಹಸಿರು ತುಂಬಿದ ಪಶ್ಚಿಮಘಟ್ಟಗಳಲ್ಲಿ ಅಲೆದಾಡುವುದೆಂದರೆ ನನಗೆ ಮಹಾಪ್ರಾಣ ಆದರೆ ನಮ್ಮ ಕಾರ್ಖಾನೆಯ ಸಹೋದ್ಯೋಗಿಗಳಿಗೆ ಚಾರಣವೆಂದರೆ ಅಲ್ಪ ಪ್ರಾಣ. ಚಾರಣಕ್ಕೆ ಬರುವುದಿರಲಿ ಚಾರಣ ಎಂದು ಹೇಳುವುದೇ ತಡ ಅಂದಿನಿಂದಲೆ ನನ್ನನ್ನು ಕಂಡರೆ ದೂರ ಹೋಗಿಬಿಡುತ್ತಾರೆ. ಇದರಿಂದ ಚಾರಣ ನನ್ನ ಪಾಲಿಗೆ ಮರೀಚಿಕೆಯಾಗಿಯೆ ಉಳಿದಿತ್ತು. ಕೊನೆಗೂ ೨೦೦೭ರ ಜನವರಿ ೨೬-೨೮ರಂದು ಇರುವ ರಜಾದಿನಗಳಲ್ಲಿ ಚಾರಣಕ್ಕೆ ಹೋಗುವುದೆಂದು ನಾನು, ವಾಸು ಮತ್ತು ಶ್ರೀಷ್ ನಿರ್ಧರಿಸಿದೆವು. ಪ್ರಯಾಣದ ಸಿದ್ದತೆಗಳು ಪೂರ್ಣಗೊಳ್ಳುವ ಹಂತದಲ್ಲಿ ವಾಸುವಿನ ಸ್ನೇಹಿತರು
ಒಬ್ಬೊಬ್ಬರಾಗೆ ಬರುವ ಇಚ್ಛೆವ್ಯಕ್ತಪಡಿಸತೊಡಗಿದರು. ಸರಿ ಎಲ್ಲರನ್ನು ಒಳಗೊಂಡ ೧೪ ಜನರ ಗುಂಪು ( ಗುಂಪು ಸೂಕ್ತ ಪದ ಏಕೆಂದರೆ ಚಾರಣಕ್ಕೆ ೩-೪ ಜನರಿಗಿಂತ ಹೆಚ್ಚಾದಷ್ಟು ತೊಂದರೆಯೂ ಹೆಚ್ಚಾಗುತ್ತದೆ) ಗುರುವಾರ ರಾತ್ರಿ ಬಂಡಜೆಗೆ ಹೋಗುವುದೆಂದು ನಿರ್ಧರಿಸಿ ಹಿಂದಿನ ದಿನವೇ ವಾಹನ, ಢೇರೆ, ೧೪ ಜನಗಳಿಗೆ ೨ ದಿನಕ್ಕೆ ಬೇಕಾಗುವಷ್ಟು ಚಪಾತಿ ಮತ್ತು ಕೆಲವು ಚಾರಣ ಪರಿಕರಗಳನ್ನು ಸಿದ್ದಪಡಿಸಿಕೊಂಡೆವು.
ಬಂಡಜೆ ಬಗ್ಗೆ ಅಂತರ್ಜಾಲ ತಾಣಗಳನ್ನು ಜಾಲಾಡಿ ಸಂಗ್ರಹಿಸಿದ ಮಾಹಿತಿಯಂತೆ ಪ್ರಖ್ಯಾತ ಶೈವ ಪುಣ್ಯಕ್ಷೇತ್ರ ಧರ್ಮಸ್ಥಳದ ಸಮೀಪವಿರುವ ಉಜಿರೆಯಿಂದ ಸುಮಾರು ೧೩ ಕಿ.ಮೀ ದೂರದಲ್ಲಿರುವ ಬಂಡಜೆ ಮಲೆನಾಡಿನ ಒಂದು ಪುಟ್ಟ ಹಳ್ಳಿ. ಪುಟ್ಟ ಹಳ್ಳಿಯೆಂದರೆ ಇರುವ ನಾಲ್ಕೈದು ಮನೆಗಳು ೧-೨ ಕಿ.ಮೀ ದೂರದಲ್ಲಿರುತ್ತವೆ. ಇನ್ನು ಹೆಚ್ಚು ಮಾಹಿತಿಗಿಗಾಗಿ ಅಂತರ್ಜಾಲದಲ್ಲೆ ಸ್ನೇಹಿತರಾದ ಪಶ್ಚಿಮ ಘಟ್ಟಗಳ ಮಾಹಿತಿ ಕಣಜ ರಾಜೇಶ್ ನಾಯಕ್ ರನ್ನು ಸಂಪರ್ಕಿಸಿ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿದೆ.
ನಾನು ಆಸಕ್ತಿಯಿಂದ ಕಾಯುತ್ತಿದ್ದ ಆ ಗುರುವಾರ ಬಂದೇ ಬಿಟ್ಟಿತು, ಆದರೆ ರಾತ್ರಿ ೮.೩೦ ಕ್ಕೆ ಹೊರಡಬೇಕಾದ ನಾವು ಪ್ರಯಾಣ ಆರಂಭಿಸಿದಾಗ ರಾತ್ರಿ ೧೧ ಘಂಟೆ. ನನಗೋ ರಾತ್ರಿ ಪ್ರಯಾಣ ನರಕ ಸದೃಶ. ಇಲ್ಲಿ ನಮ್ಮ ತಂಡವನ್ನು ಪರಿಚಯಿಸುತ್ತೇನೆ. ನಾನು (ಪ್ರಸನ್ನ), ಶ್ರೀಷ್ ದೇಶಪಾಂಡೆ  ವಾಸು (ನಮ್ಮ ಬಡಾವಣೆಯ ಸ್ನೇಹಿತ) ನವೀನ್, ಶೇಷ, ಸುರೇಶ, ಬಾಲು, ಅಶೋಕ, ಆನಂದ, ರಘು, ಚಂದ್ರು, ವಿನಯ್ ಮತ್ತು ಉಮೇಶ್ (ಭದ್ರಾವತಿಯಿಂದ ಬಂದು ಹಾಸನದಲ್ಲಿ ನಮ್ಮ ತಂಡಕ್ಕೆ ಸೇರಿಕೊಂಡಾತ) ಚಾರ್ಮಡಿ ಘಟ್ಟದ ತಪ್ಪಲಿನಲ್ಲಿರುವ ಕೊಟ್ಟಿಗೆಹಾರದಲ್ಲಿ ಮಲೆನಾಡಿನ ವಿಶೇಷ ನೀರ್ ದೋಸೆಯನ್ನು ಬೆಳ್ಳಂ ಬೆಳಿಗ್ಗೆ ೪ ಘಂಟೆಗೆ ಗುಳುಂ ಎನ್ನಿಸಿ (ನೀರ್ ದೋಸೆಗೆ ಗುಳುಂ ಪದವೇ ಸೂಕ್ತ) ಉಜಿರೆ ತಲುಪಿದಾಗ ಬೆಳಿಗ್ಗೆ ೮ ಘಂಟೆ. ಸಮಯದ ಪರಿವೆ ಇಲ್ಲದ ನಮ್ಮ ಚಾರಣಿಗರು ಅಡಿಗೆಗೆ ಬೇಕಾಗುವ ಎಲ್ಲ ವಸ್ತುಗಳನ್ನು ಕೊಂಡು ತಂದು ಬಂಡಜೆ ತಲುಪಿದಾಗ ೧೦ ಘಂಟೆ.
ನಾರಾಯಣ ಗೌಡರ ಮನೆಯಿಂದ ನಮ್ಮ ಚಾರಣದ ಶುಭಾರಂಭ, ಕಣ್ಣಿಗೆ ಹಬ್ಬವೆನಿಸುವಷ್ಟು ಹಸಿರು ತುಂಬಿ ನಿಂತಿರುವ ಬೆಟ್ಟಗಳು ಕೈಬೀಸಿ ಚಾರಣಕ್ಕೆ ಕರೆಯುವಂತಿತ್ತು. ಕರೆಯುತ್ತಿರುವ ಕೈ ಹಿಡಿದು ಹೊರಟ ತಕ್ಷಣ ಎದುರಾದದ್ದೊಂದು ತೊಡಕು, ನಮ್ಮ ಊಟದ ಕೆಲವು ಬುತ್ತಿಗಳನ್ನು ವಾಹನದಲ್ಲೆ ಬಿಟ್ಟು ಬಂದಿದ್ದೆವು. ನಮ್ಮನ್ನು ಇಳಿಸಿ ಹಿಂದಿರುಗುತ್ತಿದ್ದ ನಮ್ಮ ವಾಹನ ಆಗಲೆ ಉಜಿರೆ ತಲುಪಿತ್ತು ನಮ್ಮ ವಾಹನದ ಚಾಲಕನನ್ನು ಸಂಪರ್ಕಿಸುವ ನಮ್ಮ ಪ್ರಯತ್ನಕ್ಕೆ ತಣ್ಣೀರೆರಚಿದ್ದು ಸತ್ತುಹೋದ ನಮ್ಮ ಸಂಚಾರಿ ದೂರವಾಣಿಗಳು ಅಲ್ಲೆ ಗೌಡರ ಮನೆಯಿಂದ ಚಾಲಕನನ್ನು ಸಂಪರ್ಕಿಸಿ ನಮ್ಮ ಬುತ್ತಿಗಳು ಪುನಹ ಸಿಕ್ಕಾಗ ಸಮಯ ೧೦.೪೦. ಅತಿಭಾರವಾದ ವಸ್ತುಗಳೊಂದಿಗೆ ನಮ್ಮ ಚಾರಣ ಮತ್ತೆ ಆರಂಭ. ದಾರಿಯೆ ಇಲ್ಲದ ದಾರಿಯಲ್ಲಿ ನಮ್ಮ ನಡಿಗೆ. ಗೌಡರ ತೋಟವನ್ನು ದಾಟಿ ಸಣ್ಣ ಝರಿಗಳನ್ನು ಹಾಯ್ದು ಬೆಟ್ಟ ಹತ್ತಲು ಪ್ರಾರಂಭ. ಮಚ್ಚು ಹಿಡಿದು ನಮ್ಮೆಲ್ಲರ ದಾರಿಗೆ ಅಡ್ಡಲಾಗುವ ಸಣ್ಣ ಗಿಡಗಂಟೆಗಳನ್ನು ಕತ್ತರಿಸುತ್ತಾ ನಮ್ಮ ದಾರಿಯನ್ನು ಸುಗಮಗೊಳಿಸುತ್ತ ಸಾಗಿದ್ದ ನಮ್ಮ ಮಚ್ಚೇಶ್ವರ(ಸೂರಿ) ಮುಂದೆ, ಪ್ರಭಾತ್ ಪೇರಿಯಲ್ಲಿ ಉಪಾಧ್ಯಾಯರನ್ನು ಹಿಂಬಾಲಿಸುವ ಮಕ್ಕಳಂತೆ ನಾವೆಲ್ಲ ಅವನ ಹಿಂದೆ. ಮುಂದೆ ಮುಂದೆ ಸಾಗಿದಂತೆ ಕಾಡು ದಟ್ಟವಾಗುತ್ತ ಹೋಯಿತು. ಚಳಿಗಾಲದಲ್ಲಿ ಮರದ ಎಲೆಗಳು ಉದುರಿ ನಮ್ಮ ನಡಿಗೆ ಕಷ್ಟವಾಗುತ್ತಿತ್ತು. ನಮ್ಮಲ್ಲಿದ ಉತ್ಸಾಹ, ಹಾಡುಗಳು, ಉಮೇಶನ ಸಮಯೋಚಿತ ಮಾತುಗಳು ಮತ್ತು ಹಾಸ್ಯ ಚಟಾಕಿಗಳೇ ನಮ್ಮ ಸ್ಪೂರ್ತಿ. ಸುಮಾರು ಒಂದೂವರೆ ಘಂಟೆಯ ನಡಿಗೆಯ ನಂತರ ಶುರುವಾಯ್ತು ನೋಡಿ ತೊಂದರೆಗಳ ಆಗರ, ಹಿಂದೊಮ್ಮೆ ಇಲ್ಲಿಗೆ ಚಾರಣಕ್ಕೆ ಬಂದು ಅನುಭವವಿದ್ದ ಅಶೋಕ, ಬಾಲು ಮತ್ತು ರಘುವನ್ನು ನಂಬಿ ನಮ್ಮ ನವೀನ (ತಂಡದ ನಾಯಕ) ಗೌಡರ ಮಗನ ಮಾತು ಕೇಳದೆ ಸ್ಥಳೀಯ ಮಾರ್ಗದರ್ಶಕನನ್ನು (ಗೈಡ್) ತೆಗೆದುಕೊಳ್ಳದೆ ಇದ್ದ ಪರಿಣಾಮ ನಾವು ದಾರಿ ತಪ್ಪಿದ್ದೆವು.
ಆದರೂ, ಎನೋ ಆಶಾಭಾವನೆಯೊಂದಿಗೆ ನಮ್ಮ ಚಾರಣ, ಅರ್ಧ ಘಂಟೆಯ ನಡಿಗೆಯ ನಂತರ ನಮ್ಮ ಮುಂದಿದ್ದ ದಾರಿ ಸಂಪೂರ್ಣವಾಗಿ ಕಾಣದಾದಾಗ ಎಲ್ಲರ ಮುಖದಲ್ಲಿ ಆತಂಕ ನಿರಾಸೆ.ಚುರುಗುಡುತ್ತಿದ್ದ ಹೊಟ್ಟೆ ಊಟದ ಸಮಯವನ್ನು ನೆನಪಿಸುತ್ತಿದ್ದರೂ ಸಹ ನಮ್ಮ ಗುರಿಯಾದ ನಾಗಮೂಲ ಸಿಗುವ ಯಾವ ಲಕ್ಷಣಗಳು ಗೋಚರಿಸಲಿಲ್ಲ. ಈ ಸಮಯಕ್ಕೆ ಆಗಲೆ ಅಡಿಗೆಗಾಗಿ ತಂದಿದ್ದ ತರಕಾರಿಗಳು ನಮ್ಮೆಲ್ಲರ ಹೊಟ್ಟೆ ಸೇರತೊಡಗಿದವು. ಮುಂದೆ ಕಾಡು ಇನ್ನೂ ಹೆಚ್ಚು ದಟ್ಟವಾಗುತ್ತ ಕಡಿದಾಗುತ್ತ ಹೋದಾಗ ನಾವು ದಾರಿ ತಪ್ಪಿದ್ದು ಸುಸ್ಪಷ್ಟವಾಯಿತು. ಈಗ ನಮ್ಮ ಮುಂದೆ ಇರುವ ಅವಕಾಶವೆಂದರೆ ಗೌಡರ ಮನೆಯವರನ್ನು ಸಂಪರ್ಕಿಸಿ ದಾರಿಯನ್ನು ಅಥವ ಮಾರ್ಗದರ್ಶಕರನ್ನು ಕೇಳುವುದು. ಇವೆರಡಕ್ಕು ನಮ್ಮ ಬಳಿ ಗೌಡರ ಮನೆಯ ದೂರವಾಣಿ ಸಂಖ್ಯೆ ಇರಲಿಲ್ಲ. ಅದು ನಮ್ಮ ಚಾಲಕನ ಬಳಿ ಇತ್ತು ಆದರೆ ಆತ ತನ್ನ ದೂರವಾಣಿಯನ್ನು ನಿಷ್ಕ್ರಿಯಗೊಳಿಸಿದ್ದ. ತತ್ಕ್ಷಣ ಹೊಳೆದದ್ದು ಆಪಧ್ಭಾಂದವ ರಾಜೇಶ್ ನಾಯಕ್ !!!
ಅಬ್ಬ !!! ಇಲ್ಲಿ ಎಲ್ಲರ ದೂರವಾಣಿಗಳು ಜೀವಂತವಾಗಿದ್ದವು. ರಾಜೇಶ್ ನಾಯಕ್ ಅವರಿಗೆ ನಾವಿರುವ ಪರಿಸ್ಥಿತಿಯನ್ನು ವಿವರಿಸಿ ಸಹಾಯ ಕೋರಿದೆ, ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡುವುದಾಗಿ ತಿಳಿಸಿದರು. ಈ ಸಮಯದಲ್ಲಿ ರಾಜೇಶ್ ಬಗ್ಗೆ ಹೇಳಲೇ ಬೇಕು. ಇವರನ್ನು ನಾನೂ ಸಹ ಮುಖತಃ ಭೇಟಿಯಾಗಿಲ್ಲ ಆದರೂ ಅವರು ಮಾಡುವ ಸಹಾಯ ನಿಜಕ್ಕೂ ಹೊಗಳಿಕೆ ಅರ್ಹವಾದದ್ದು. ಪಕ್ಕದ ಮನೆಯವರಿಗೆ ಸಹಾಯ ಮಾಡಲು ಹಿಂಜರಿಯುವ ನಮಗೆ(ಬೆಂಗಳೂರಿಗರಿಗೆ) ಅವರ ಸಮಯೋಚಿತ ಸಹಾಯವನ್ನು ಏನೆಂದು ಹೊಗಳುವುದು. ನನ್ನ ಆಲೋಚನೆಯನ್ನು ತುಂಡರಿಸಿದ್ದು ರಾಜೇಶ್ ಅವರ ದೂರವಾಣಿ ಕರೆ. ಅವರಿಂದ ಸ್ಪಷ್ಟೋಕ್ತಿ ನಾವು ಪ್ರಾರಂಭದಲ್ಲೆ ದಾರಿ ತಪ್ಪಿರುವ ಬಗ್ಗೆ ತಿಳಿಸಿದ ರಾಜೇಶ್ ಅಲ್ಲಿಂದಲೆ ನಮ್ಮ ಗುರಿಯಾದ ನಾಗಮೂಲಕ್ಕೆ ಹೋಗಲು ನಮ್ಮ ನಡಿಗೆಯನ್ನು ಬಲಗಡೆ ಕಾಣುತ್ತಿರುವ ಬೋಳುಗುಡ್ಡದ ಜಾಡು ಹಿಡಿದು ಮುಂದುವರೆಸಲು ಸೂಚನೆ. ಮತ್ತೆ ನಮ್ಮ ದಾರಿ ಹುಡುಕಾಟ ಪ್ರಾರಂಭ. ಯಾವ ದಾರಿಯೂ ಸಿಗಲಿಲ್ಲ. ಇದೆ ಸಮಯದಲ್ಲಿ ಸಾಹಸ ಪ್ರಿಯರಾದ ವಾಸು ಮತ್ತೆ ರಘು ಎಡಕ್ಕೂ ಅಂದರೆ ಪೂರ್ವ ದಿಕ್ಕಿಗೂ, ಅಶೋಕ ಮತ್ತು ಚಂದ್ರು ಬಲಭಾಗಕ್ಕೂ ದಾರಿ ಹುಡುಕಲು ವಾನರ ಸೈನ್ಯದಂತೆ ಮುನ್ನುಗ್ಗಿದರು. ವಾಸು ಮತ್ತು ರಘು ನಿರಾಸೆಯಿಂದ ಹಿಂದಿರುಗಿದರೆ, ಅಶೊಕ ಮತು ಚಂದ್ರು ಕಡಿದಾದ ಗುಡ್ಡವನ್ನು ಏರುವ ಸಾಹಸ ಬೇಡವೆಂದು ಮತ್ತು ಅಲ್ಲೆ ಕಾಣಸಿಗುತ್ತಿದ್ದ ಪ್ರಾಣಿಗಳ ಹೆಜ್ಜೆಗಳು ಇವು ನಮ್ಮ ದಾರಿಯಲ್ಲವೆಂದು ತಿಳಿಸಿಹೇಳುತ್ತಿದೆಯೆಂದರು. ಈಗ ನಮ್ಗೆ ಉಳಿದದ್ದು ಒಂದೆ ದಾರಿ, ಅದು ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆ ಮಾತು.
ಇಲ್ಲಿಂದ ನಮ್ಮ ಇಳಿಕೆ ಪ್ರಾರಂಭ ಇಲ್ಲಿಯೂ ನಮಗೆ ಅಚ್ಚರಿ ಬಂದ ದಾರಿಯೆ ಗೊತ್ತಾಗುತ್ತಿಲ್ಲ ನಾವು ಬಂದ ದಾರಿಗೆ ಯಾವುದೆ ಗುರುತು ಸಹ ಉಳಿಸಿಲ್ಲ. ಅದು ಹೇಗೋ ಗಿಡಮರಗಳನ್ನು ಬಳಸಿ ಸೂರ್ಯನ ದಿಕ್ಕನ್ನೆ ಸೂಚಿಯಾಗಿಟ್ಟುಕೊಂಡು ಮೈಕೈ ತರಚಿಕೊಂದು ಬಟ್ಟೆಗಳೆಲ್ಲ ಹರಿದು ಹೋಗುತ್ತಿದ್ದರೂ ಲೆಕ್ಕಿಸದೆ ಇಳಿದೇ ಇಳಿದೆವು. ಕೊನೆಗೆ ಮನುಷ್ಯ ನಿರ್ಮಿತ ಕಲ್ಲಿನ ಸಣ್ಣ ಗೋಡೆಯೊಂದು ಗೋಚರಿಸಿತು. ಅಂದರೆ ನಮ್ಮ ದಾರಿ ಸರಿಯಿರಬಹುದೆಂಬ ಊಹೆ, ಅದನ್ನೆ ಗುರಿಯಾಗಿಟ್ಟುಕೊಂಡು ಕೆಳಗಿಳಿದೆವು.
ಬಿಸಿಲಿನ ಝಳಕ್ಕೆ ಮೈ ಮನಸ್ಸು ತಲೆ ಕಾದ ಕಬ್ಬಿಣದಂತೆ ಸುಡುತ್ತಿತ್ತು. ಅಲ್ಲೆ ಹರಿಯುತ್ತಿದ್ದ ಸಣ್ಣ ಝರಿಯೊಂದಕ್ಕೆ ಬೇಸಿಗೆಯಲ್ಲಿ ಎಮ್ಮೆಗಳು ನೀರಿಗೆ ಬೀಳುವಂತೆ ಬಿದ್ದಾಗ ಪ್ರಪಂಚವೇ ಮರೆತು ಹೋಗುವಷ್ಟು ಸುಖವೆನಿಸುತ್ತಿತ್ತು. ಒಂದು ಘಂಟೆಗು ಹೆಚ್ಚು ನೀರಿನಲ್ಲಿದ್ದರೂ ನಮ್ಮ ದಣಿವು ಮಾತ್ರ ಆರಿರಲೇ ಇಲ್ಲ. ಮಾನವ ಧ್ವನಿ ನಮ್ಮನ್ನು ಇಹ ಲೋಕಕ್ಕೆ ಎಳೆದು ತಂದವು. ಅಲೆ ಇದ್ದ ಅಜ್ಜಿ ಮನೆಯವರ ಮಾತುಗಳೆ ಇರಬೇಕು. ನೀರಿನಿಂದೆದ್ದು ಚಪಾತಿಯ ಬುತ್ತಿಗೆ ಕೈ ೧೪ ಜನಕ್ಕೆ ೨ ದಿನಕ್ಕೆ ಅಂತ ತಂದಿದ್ದ ಚಪಾತಿ ಒಂದೆ ಹೊತ್ತಿಗೆ ಖಾಲಿ! ಸುಮಾರು ೪.೩೦ರ ಸಮಯಕ್ಕೆ ಸ್ಥಳೀಯರ ಗುಂಪೊಂದು ನಾಗಮೂಲದ ದಾರಿ ತೋರಿಸುವ ಭರವಸೆ ಕತ್ತಲಿನಲ್ಲಿನ ಆಶಾಕಿರಣದಂತಿತ್ತು. ಇಲ್ಲದಿದ್ದರೆ ನಮಗೆ ಹಿಂತಿರುಗುವ ದಾರಿಯಷ್ಟೆ ಗಟ್ಟಿಯಾಗುತ್ತಿತ್ತು. ದಿನ ಪೂರ ಚಾರಣದಿಂದ ಅತಿ ಹೆಚ್ಚು ದಣಿದಿದ್ದ ಉಮೇಶ ಇಲ್ಲಿಂದ ಚಾರಣ ಮುಂದುವರೆಸಲು ಇಷ್ಟ ಪಡದೆ ಉಜಿರೆಗೆ ಹೋಗಿ ತಂಗಿರುವುದಾಗಿ ತಿಳಿಸಿ ನಮ್ಮಿಂದ ಬೀಳ್ಕೊಂಡರು.
ಉಳಿದ ೧೩ ಜನ ಮಾರ್ಗ ದರ್ಶಕನ ಸಹಾಯದಿಂದ ಮತ್ತೆ ಚಾರಣವನ್ನು ಪುನರಾರಂಭಿಸಿದೆವು. ಹೌದು!! ಈ ಬಾರಿ ಯಾವುದೇ ಅಡೆ ತಡೆಯಿಲ್ಲದೆ ನಾಗಮೂಲಕ್ಕೆ ನಮ್ಮ ಪ್ರಯಾಣ. ಕಡಿದಾದ ಬೆಟ್ಟವನ್ನು ಹತ್ತುವುದು ಓಹ್!! ಏದುಸಿರು ಬಂದಂತಹ ಅನುಭವ. ಅರ್ಧ ದಾರಿ ಕ್ರಮಿಸುವಷ್ಟರಲ್ಲಿ ಅಶೋಕನನ್ನು ನಾಗಮೂಲ ತಲುಪಿಸಿ ನಮ್ಮ ಮಾರ್ಗದರ್ಶಕ ಆಗಲೇ ಹಿಂದಿರುಗುತ್ತಿದ್ದ ಅವನಿಗೆ ಅವನ ಬೆಟ್ಟ ಹತ್ತುವ ನೈಪುಣ್ಯತೆಗೆ ಒಂದು ನಮಸ್ಕಾರ ಹೇಳಿ ನಾವೆಲ್ಲ ಮುಂದುವರೆದೆವು. ನನ್ನ ಮೈಭಾರವನ್ನೆ ನಾನು ಹೊರಲಾರದೆ ಒದ್ದಾಡುತ್ತಿದ್ದರು ಇನ್ನಷ್ಟು ಭಾರವನ್ನು ನನ್ನ ಮೇಲೆ ಹೇರಿ ನನಗಾದ ತೊಂದರೆಯನ್ನೆ ನೋಡುತ್ತ ರಾಕ್ಷಸಾನಂದ ಪಡುತ್ತಿದ್ದ ವಾಸುವನ್ನು ಶಪಿಸುತ್ತ ಅಂದಿನ ಗುರಿ ನಾಗಮೂಲವನ್ನು ತಲುಪಿದಾಗ ಸಂಜೆ ೬.೩೦
ಜುಳು ಜುಳು ಹರಿಯುವ ನೀರಿನ ದಂಡೆಯಲ್ಲಿ ಡೇರೆ ಹಾಕಲು ಪ್ರಶಸ್ತವಾದ ಸ್ಥಳ. ೧೩ ಜನಕ್ಕೆ ಸಾಕಾಗುವುದಿಲ್ಲವಾದರೂ ಬೇರೆ ವಿಧಿಯೆ ಇರಲಿಲ್ಲ. ಅಡಿಗೆ ಮಾಡ್ಬೇಕೆನ್ನುವ ನವೀನನ ಉತ್ಸಾಹಕ್ಕೆ ಯಾರು ಸ್ಪಂದಿಸಲಿಲ್ಲ. ಅದು ನಮ್ಮ ನಿತ್ರಾಣಕ್ಕೆ ಹಿಡಿದ ಕನ್ನಡಿ. ಒಣಗಿದ ಮರದ ಕೊಂಬೆಗಳನ್ನೆಲ್ಲ ಒಟ್ಟಾಗಿಸಿ ಬೆಂಕಿ ಹಚ್ಚಿದಾಗ ಚಾರಣದ ಸಾರ್ಥಕ ಅನುಭವ. ಕಾಡಿನಲ್ಲಿ ಮಲಗುವುದೆ ಒಂದು ಅಧ್ಬುತವಾದ ಅನುಭವ. ಬೆಳದಿಂಗಳ ರಾತ್ರಿಯಾದರೂ ಮರಗಳ ಎಲೆಗಳನ್ನು ಸೀಳಿಕೊಂಡು ಕತ್ತಲನ್ನು ಓಡಿಸುವ ತೀಕ್ಷ್ಣತೆ
ಬೆಳದಿಂಗಳಿಗಿರಲಿಲ್ಲ ನೀರವ ಮೌನದಲ್ಲಿ ಹುಳುಹುಪ್ಪಟೆಗಳ ಶಬ್ದ ಒಂದು ಬಗೆಯ ಸಂಗೀತದಂತೆ ಭಾಸವಾಗುತ್ತದೆ. ಆಗಾಗ ಎಲ್ಲೋ ಆಕ್ರಮಣಕ್ಕೆ ಒಳಗಾದ ಸಣ್ಣಪುಟ್ಟ ಪ್ರಾಣಿಗಳ ಅಥವ ಪಕ್ಷಿಗಳ ಚೀತ್ಕಾರ ಮೈ ಜುಮ್ಮೆನಿಸುತ್ತದೆ. ನಮ್ಮ ಜಾಗದ ಪಕ್ಕದಲ್ಲೆ ಇದ್ದ ಮರಗಳಲ್ಲಿನ ಜೀರುಂಬೆಗಳು ಆಗಾಗ ಹೊರಡಿಸುತ್ತಿದ್ದ ಜಿರ್ ಎನ್ನುವ ಶಬ್ದ ಎಲ್ಲರನ್ನು ಆಶ್ಚರ್ಯಗೊಳಿಸುತ್ತಿತ್ತು.
ಅತಿಯಾದ ಆಯಾಸಕ್ಕೆ ಊಟವೂ ಸೇರದಂತಹ ಸ್ಥಿತಿ ಸೇರಿದಷ್ಟು ಹೊಟ್ಟೆಗೆ ಸೇರಿಸಿ (ಇಲ್ಲದಿದ್ದರೆ ನಾಳೆ ಮತ್ತೆ ನಡೆಯಲಾಗುವುದಿಲ್ಲವೆಂಬ ಭಯ) ನಾನು, ವಾಸು, ರಘು, ದೇಶಪಾಂಡೆ ಮತ್ತು ಚಂದ್ರು ಡೇರೆಯೊಳಗೆ ನುಸುಳಿದಾಗ ರಾತ್ರಿ ೧೧.೩೦. ಚಳಿಯಿರಬಹುದೆಂಬ ನಮ್ಮ ಊಹೆ ಸುಳ್ಳು. ಅದಕ್ಕಾಗಿ ತಂದಿದ್ದ ಚಾದರಗಳೆಲ್ಲ ಹೊರೆಯಾಯಿತಷ್ಟೆ. ಸುಮಾರು ೨ ಘಂಟೆಯಿರಬಹುದು ಹೊರಗೆ ಮಲಗಿದ್ದ ಎಲ್ಲರಿಗೂ (ಯಾವಾಗ ಮಲಗಿದರೋ ಗೊತ್ತಿಲ್ಲ) ಚಳಿಯಾಗತೊಡಗಿದಾಗ ನವೀನ ಮತ್ತು ಸೂರಿ ಎಲ್ಲರನ್ನು ಎಚ್ಚರಗೊಳಿಸಿ ನಮ್ಮ ನಿದ್ರೆಯನ್ನು ಹಾಳುಗೆಡವಲು ನೋಡಿದರಾದರೂ ಕುಂಭಕರ್ಣರನ್ನು ಎಚ್ಚರಗೊಳಿಸುವ ಅವರ ಸಾಹಸ ವಿಫಲವಾಯಿತು. ರಾತ್ರಿ ೨ ಘಂಟೆಯಲ್ಲಿ ಮತ್ತೆ ಬೆಂಕಿ ಹಚ್ಚಿ ನಮ್ಮನ್ನು ನಿದ್ದೆ ಮಾಡಲು ಅನುವುಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು ನವೀನ್! ;-)
ಕಾಡಿನಲ್ಲಿ ಬೆಳಕು ಹರಿಯುವುದನ್ನು ನೋಡುವುದೆ ಒಂದು ಹೊಸ ಅನುಭವ ಗೂಡು ಬಿಟ್ಟು ಹೊರಡುವ ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ಹಾರುತ್ತಿದ್ದರೆ, ಅದನ್ನು ಹರಿಯುತ್ತಿರು ನೀರಿನಲ್ಲಿ ಕಾಲಿಟ್ಟುಕೊಂಡು ನೋಡುತ್ತಾ ಕೂತರೆ ಪ್ರಪಂಚವೆ ಮರೆತುಹೋಗುತ್ತೆ. ಪ್ರಾತಃ ವಿಧಿಗಳನ್ನು ಪೂರೈಸಿ, ಬೆಳಗಿನ ಉಪಹಾರ ಸಿದ್ದಪಡಿಸಲು ಅಡಿಗೆ ಭಟ್ಟರ ಪೋಷಾಕಿನಲ್ಲಿ ಶೇಷ ಸಿದ್ದರಾದರು. ರಾತ್ರಿಯಿಂದಲೂ ಉರಿಯುತ್ತಿದ್ದ ಬೆಂಕಿಯಿಂದಲೆ ಒಲೆಯೊಂದನ್ನು ಸಿದ್ದಪಡಿಸಿಕೊಂಡು ನೀರು ಕುದಿಸಿ, ನಿನ್ನೆ ಬಕಾಸುರರ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡಿದ್ದ ಕೆಲವು ತರಕಾರಿಗಳನ್ನು ಬೇಯಿಸಿ ಮಾಡಿದ ಮ್ಯಾಗಿ ಶ್ಯಾವಿಗೆ (೨ ಬಾರಿ) ಒಲೆಯಿಂದ ಇಳಿಸುವ ಕ್ಷಣಾರ್ಧದಲ್ಲೆ ಮಂಗ ಮಾಯ!! ಅಷ್ಟಿತ್ತು ನಮ್ಮ ಹಸಿವಿನ ಆರ್ಭಟ.
೮.೩೦ರ ಸುಮಾರಿಗೆ ನಮ್ಮ ಭಾರವನ್ನೆಲ್ಲ ಬಂಡೆಯ ಕೆಳಗೆ ಜೋಡಿಸಿ ಢೇರೆಗಳನ್ನು ಅದರ ಮೇಲೆ ಮುಚ್ಚಿ ಜಲಪಾತದೆಡೆಗೆ ನಮ್ಮ ನಡಿಗೆ. ಇಂದೆನೋ ಚಾರಣದ ವೇಗ ಸ್ವಲ್ಪ ಹೆಚ್ಚಿದಂತೆ ಭಾಸವಾಗುತ್ತಿತ್ತು. ವಿಶೇಷವೇನು ಇಲ್ಲದೆ ಕಡಿದಾಗಿರುವ ಬೆಟ್ಟವನ್ನು ಹತ್ತುತ್ತ ಈಗಾಗಲೆ ತಮ್ಮ ಚಾರಣವನ್ನು ಮುಗಿಸಿ ಹೊರಟ ಬೇರೆ ತಂಡಗಳೊಡನೆ ಮಾತುಕತೆಯಾಡುವ ನೆಪದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತ ಬೆಟ್ಟವನ್ನು ಹತ್ತುತ್ತಿದ್ದರೆ. ಶೇಷ ತಯಾರಿಸಿಕೊಟ್ಟ ಮ್ಯಾಗಿ ಎಲ್ಲಿ ಹೋಯಿತೊ ಗೊತ್ತೆ ಆಗಲಿಲ್ಲ. ೧೦ ಘಂಟೆಯ ಸಮಯಕ್ಕೆ ಸಮತಟ್ಟಾದ ಬಂಡೆಯಿರುವ ಜಾಗಕ್ಕೆ ಬಂದು ತಲುಪಿದೆವು. ಪಕ್ಕದಲ್ಲೆ ಹರಿಯುತ್ತಿದ್ದ ಸಣ್ಣ ನೀರಿನ ಹರಿವು ಸುತ್ತಲೂ ಮರ ಗಿಡಗಳ ರಕ್ಷಣೆ. ಈ ಜಾಗ ರಾತ್ರಿ ಢೇರೆ ಹಾಕಿ ತಂಗುವುದಕ್ಕೆ ಪ್ರಶಸ್ತವಾದ ಸ್ಥಳ. ಮುಂದೆ ಮತ್ತೆ ದಾರಿಯದೆ ತೊಂದರೆ ಇಲ್ಲಿಂದ ಮುಂದಕ್ಕೆ ಮತ್ತೆ ದಾರಿ ಕಾಣದಾಯಿತು. ಕೊನೆಗೆ ನಮ್ಮನ್ನು ಈ ಮುಂಚೆ ಭೇಟಿಯಾದ ತಂಡಗಳ ಸಲಹೆ ಮತ್ತು ನಮ್ಮ ರಘು, ಅಶೋಕ, ವಾಸುರವರ ಸಾಹಸ ಪ್ರಿಯತೆ ನಮ್ಗೆ ಸರಿಯಾದ ದಾರಿಯನ್ನು ಹುಡುಕಿ ಅದರಲ್ಲಿ ಮುಂದುವರೆಯಲು ಸಹಾಯ ಮಾಡಿತು. ಮತ್ತೆ ಸುಮಾರು ೧ ಘಂಟೆ ಬೆಟ್ಟವನ್ನು ಹತ್ತಲಾಗದೆ ಹತ್ತುತ್ತ ಅಲ್ಲಲ್ಲಿ ಜಾರುತ್ತ ಬೀಳುತ್ತ ನಡೆಯುತ್ತಿದ್ದರೂ ಜಲಪಾತದ ಕುರುಹೂ ಕೂಡ ಸಿಗುತ್ತಿಲ್ಲ ಶಬ್ದವೂ ಸಹ ಇಲ್ಲ. ಕೊನೆಗೊಮ್ಮೆ ನಮ್ಮ ಕಷ್ಟವನ್ನು ನೋಡಲಾರದೆ ಒಮ್ಮೆಲೆ ಜಲಪಾತವೇ ನಮ್ಮ ಬಳಿ ಬಂತೆನೋ ಅನಿಸುವಷ್ಟು ಹತ್ತಿರದಲ್ಲೆ ನೀರು ಧುಮ್ಮಿಕ್ಕುವ ಶಬ್ದ ಕಿವಿಗೆ ಬಿತ್ತು. ಬಂಡೆಗಳ ಮದ್ಯೆ ಹಾಯ್ದು ಕೆಲವನ್ನು ಏರಿ ಉಹ್! ಜಲಪಾತ ತಲುಪುವಷ್ಟರಲ್ಲಿ ಮುಂದೆ ಒಂದೂ ಹೆಜ್ಜೆ ಎತ್ತಿಡಲಾಗದಷ್ಟು ಆಯಾಸ. ನಮ್ಮೆಲ್ಲ ಆಯಾಸಕ್ಕೆ ಪರಿಹಾರ ಜಲಪಾತದ ತಣ್ಣನೆಯ ನೀರಿನ ಸಿಂಚನ. ಸುಮಾರು ೩೦೦ ಅಡಿಗಳಿಂದ ಹಂತ ಹಂತವಾಗಿ ಧುಮುಕುವ ನೀರ ಧಾರೆ ದಣಿದ ಮೈಮನಸ್ಸುಗಳಿಗೆ ಅಮೃತವೆನ್ನುವಂತಿತ್ತು. ಎಡಬಿಡದೆ ೨ ಘಂಟೆಗಳ ಜಲಕ್ರೀಡೆ ನಮ್ಮಲ್ಲಿ ಮತ್ತೆ ಚೈತನ್ಯ ತುಂಬಿತು.
ನಾಗರೀಕ ಜನರ ಅನಾಗರೀಕ ಕುರುಹುಗಳಾದ ಮದ್ಯದಶೀಷೆಗಳು, ಪ್ಲಾಸ್ಟಿಕ್ಚ್ ಚೀಲಗಳು ಮತ್ತು ಗುಟ್ಕಾಪಳೆಯುಳಿಕೆಗಳನ್ನು ಸ್ವಚ್ಛಗೊಳಿಸಿ, ನಾವು ತಂಗಿದ್ದ ಜಾಗಕ್ಕೆ ಹಿಂದಿರುಗಿ ಮತ್ತೊಮ್ಮೆ ಒಲೆ ಹಚ್ಚುವ ನವೀನನ ಉತ್ಸಾಹಕ್ಕೆ ತಡೆಹಿಡಿದು, ಅವಲಕ್ಕಿಯನ್ನು ನೆನೆಸಿ ತೆಂಗಿನಕಾಯಿ ಬೆಲ್ಲದೊಂದಿಗೆ ಬೆರೆಸಿ ಚಪ್ಪರಿಸಿಕೊಂಡು ತಿಂದು ಗೌಡರ ಮನೆಯತ್ತ ಹೊರಟೆವು. ಒಂದೂವರೆಯ ಘಂಟೆಯ ನಡಿಗೆ ನಮ್ಮನ್ನು ಬೆಟ್ಟದ ತಳಭಾಗಕ್ಕೆ ತಂದು ನಿಲ್ಲಿಸಿತ್ತು. ಹಿಂದಿನ ದಿನ ಸ್ನಾನ ಮಾಡಿದ ಜಾಗದಲ್ಲೆ ಇಂದು ಮತ್ತೊಮ್ಮೆ ಸ್ನಾನ ಮಾಡಿ ಪಕ್ಕದಲ್ಲೆ ಇದ್ದ ಅಜ್ಜಿಯ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ೨ನೇ ಮನೆಯಲ್ಲಿ ಮದುವೆ ನಿಶ್ಚಿತಾರ್ಥದ ಪ್ರಯುಕ್ತ ನಡೆದ ಸತ್ಯನಾರಾಯಣ ಪೂಜೆಯ ಪ್ರಸಾದ
ಸ್ವೀಕರಿಸಿ ಗೌಡರ ಮನೆಯ ಬಳಿ ಬೆನ್ನ ಮೇಲಿನ ಹೊರೆಯನ್ನು ಆಗಲೆ ಬಂದು ನಿಂತಿದ್ದ ನಮ್ಮ ವಾಹನಕ್ಕೆ ವರ್ಗಾಯಿಸಿ ಗೌಡರ ಮಗನೊಡನೆ ಸ್ವಲ್ಪ ಸಮಯ ಸ್ಥಳೀಯ ಸಮಸ್ಯೆ, ವಿಶೇಷತೆಗಳು ಅಲ್ಲಿರುವ ಪ್ರಾಣಿ ಸಂಕುಲಗಳು ಇಲ್ಲಿನ ಜನರ ಜೀವನ ಶೈಲಿಯ ಬಗ್ಗೆ ಚರ್ಚಿಸಿ ಅವರ ಆತಿಥ್ಯ ಮನೋಭಾವಕ್ಕೆ ಅಚ್ಚರಿಗೊಂದು ನಮಗಾಗಿ ಕಾಯುತ್ತಿದ್ದ ಉಮೇಶನೋಂದಿಗೆ ವಾಹನವನ್ನೇರಿ ವಾಸು ಮತ್ತು ರಘುವಿನ ಆಸೆಯಂತೆ (ಊಟಕ್ಕೆ ಮಾತ್ರ) ಧರ್ಮಸ್ಥಳದ ಮಂಜುನಾಥನ ದರ್ಶನಂಗೈದು ಪುಷ್ಕಳವಾಗಿ (ಮತ್ತೆ ರಘು ಮತ್ತು ವಾಸು) ಭೋಜನ ಮುಗಿಸಿ ೧೦ ಘಂಟೆಗೆ ಧರ್ಮಸ್ಥಳವನ್ನು ಬಿಟ್ಟು, ೧.೦೦ ಘಂಟೆಗೆ ಹಾಸನದಲ್ಲಿ ಸೂರಿ ವಿನಯ್ ಮತ್ತು ಆನಂದರನ್ನು ಬೀಳ್ಕೊಟ್ಟು ಚೆನ್ನರಾಯಪಟ್ಟಣದಲ್ಲಿ ಉಮೇಶನನ್ನು ಭದ್ರಾವತಿಗೆ ಸಾಗಹಾಕಿ ಮನೆ ತಲುಪಿದಾಗ ಬೆಳಗಿನ ೪.೪೫
೪-೫ ಬಾರಿ ಚಾರಣ ಕೈಗೊಂಡಿದ್ದರೂ ಮೊದಲನೆ ಬಾರಿ ಬರಹದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಸಾಹಿತ್ಯ ನನ್ನ ಕ್ಷೇತ್ರವಲ್ಲ ತಪ್ಪುಗಳಿದ್ದರೆ ಕ್ಷಮಿಸಿ ನನ್ನನ್ನು ತಿದ್ದಲು ನಿಮ್ಮ ಅನಿಸಿಕೆಗಳನ್ನು ತಿಳಿಸಿ
prasannakannadiga@yahoo.co.in
prasannakannadiga@gmail.com

7 comments:

Unknown said...

super article prasanna

Srik said...

sooper! Met Rajesh Naik in Udupi when myself and Prashanth took on that West coast odyssey on our bikes. What a pleasant meet that was! Really he deserves all the words you have spoken about him.

Haagee barali nimma anubhavagala saramale.

prasca said...

thanx srik

ಮನು said...

heege innu hechhu anubhava baritiri...haage ee jagada innu photogala link idre haaki sir.nodi khushi padona...stala bhala channagide

Unknown said...

ಸರ್ ಅಲ್ಲಿಗೆ ಹೋಗೋಕೆ ಎನಾದ್ರು ಪರ್ಮಿಶನ್ ತಗೋಬೆಕಾ ಹೆಂಗೆ.

prasca said...

ಪರ್ಮಿಷನ್ ಎಂಬ ರಗಳೆ ಆಗ ಇರಲಿಲ್ಲ. ಈಗ ಅದೊಂದು ವಸೂಲಿ ದಂಧೆಯಾಗಿದೆ

bhargava said...

ಚನ್ನಾಗಿದೆ. ಕಂಡ್ರಿ